ಇಲ್ಲಿಯ ತನಕ ತ್ರಿಗುಣಗಳ ಬಗ್ಗೆ
ಮತ್ತು ತ್ರಿಗುಣಾತೀತರ ಸ್ವಭಾವದ ಬಗ್ಗೆ ವಿವರಿಸಿದ ಕೃಷ್ಣ, ಕೊನೆಯ ಎರಡು ಶ್ಲೋಕದಲ್ಲಿ ನಾವು ತ್ರಿಗುಣಾತೀತರಾಗುವ
ಬಗೆ ಹೇಗೆ ಎನ್ನುವುದನ್ನು ವಿವರಿಸುತ್ತಾನೆ. ನಮ್ಮ ಎಲ್ಲ ಪ್ರವೃತ್ತಿಯೂ ಈ ಮೂರು ಗುಣಗಳ ಪರಿಮಿತಿಯಲ್ಲಿ
ಇರುವಾಗ ತ್ರಿಗುಣವನ್ನು ಮೀರಿ ನಿಲ್ಲುವುದು ನಮಗೆ ಕಲ್ಪನಾತೀತ. ಹಾಗಾಗಿ ಇಲ್ಲಿ ಕೃಷ್ಣ ನಮಗೆ ತ್ರಿಗುಣಾತೀತರಾಗಲು
ಇರುವ ಏಕಮಾತ್ರ ಮಾರ್ಗವನ್ನು ವಿವರಿಸುತ್ತಾನೆ.
ಮಾಂ ಚ ಯೋSವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।
ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ ॥೨೬॥
ಮಾಮ್ ಚ ಯಃ ಅವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।
ಸಃ ಗುಣಾನ್ ಸಮತೀತ್ಯ ಏತಾನ್ ಬ್ರಹ್ಮಭೂಯಾಯ ಕಲ್ಪತೇ – ನನ್ನನ್ನು ಎಡೆಬಿಡದೆ ಭಕ್ತಿಯಿಂದ ಆರಾಧಿಸುವವನು
ಈ ಗುಣಗಳ ಕಟ್ಟನ್ನು ಹರಿದು, ಚೇತನ ಪ್ರಕೃತಿಯಂತೆ ಭಗವಂತನ ಭಕ್ತಿಗೆ ಪಾತ್ರನಾಗುತ್ತಾನೆ.[ಚೇತನ ಪ್ರಕೃತಿಯನ್ನು
ಸೇರುತ್ತಾನೆ].
ನಾವು ನಾವಾಗಿ ತ್ರಿಗುಣಾತೀತರಾಗಬೇಕು
ಎಂದು ಪ್ರಯತ್ನಿಸಿದರೆ ಆ ಪ್ರಯತ್ನದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಏಕೆಂದರೆ ನಮ್ಮ
ಎಲ್ಲ ಯೋಚನೆ ತ್ರಿಗುಣದಲ್ಲೇ ಸುತ್ತುತ್ತಿರುತ್ತದೆ. ಇದೊಂದು ಚಕ್ರಭ್ರಮಣ. ಈ ಚಕ್ರ ಭ್ರಮಣದಿಂದ
ಪಾರು ಮಾಡಲು ಆ ಚಕ್ರಧಾರಿಯೇ ಬರಬೇಕು. ದ್ವಾದಶಸ್ತೋತ್ರದಲ್ಲಿ ಹೇಳುವಂತೆ: “ತ್ರಿಗುಣಾತೀತ
ವಿಧಾರಕ ಪರಿತೋ ದೇಹಿ ಸುಭಕ್ತಿಮ್”. ತ್ರಿಗುಣಾತೀತರನ್ನು ಧಾರಣೆ ಮಾಡುವವ ಆ ಭಗವಂತ. ಆದ್ದರಿಂದ ತ್ರಿಗುಣಾತೀತರಾಗಲು
ಇರುವ ಮಾರ್ಗ ಒಂದೆ-ಆ ಭಗವಂತನಲ್ಲಿ ಶರಣಾಗುವುದು. ಲಕ್ಷ್ಮೀಸಮೇತನಾದ ಆ ಭಗವಂತನಲ್ಲಿ ಏಕನಿಷ್ಠೆಯಿಂದ
ಅನನ್ಯ ಭಕ್ತಿ ಮಾಡುವುದರಿಂದ – ಲಕ್ಷ್ಮಿಯಿಂದ ಹದಿನೈದು ಬಂಧನದ ಬೇಲಿಯನ್ನು ಧರಿಸಿ ಪ್ರಪಂಚಕ್ಕೆ ಬಂದ
ನಾವು, ಈ ಎಲ್ಲಾ ಬಂಧವನ್ನು ಕಳಚಿಕೊಂಡು ಮರಳಿ ತಾಯಿಯ ಮಡಿಲನ್ನು ಸೇರಬಹುದು.
ಬ್ರಹ್ಮಣೋ ಹಿ ಪ್ರತಿಷ್ಠಾSಹಮಮೃತಸ್ಯಾವ್ಯಯಸ್ಯ ಚ ।
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ ॥೨೭॥
ಬ್ರಹ್ಮಣಃ ಹಿ ಪ್ರತಿಷ್ಠಾ ಅಹಮ್ ಅಮೃತಸ್ಯ ಅವ್ಯಯಸ್ಯ ಚ ।
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯ ಐಕಾಂತಿಕಸ್ಯ ಚ –ಅಳಿವಿರದ ಬದಲಾಗದ ಚಿತ್ ಪ್ರಕೃತಿಗೂ
ನಾನೆ ಆಸರೆ-ನೆಲೆ. ಸನಾತನ ಧರ್ಮಕ್ಕೆ ಮತ್ತು ಕೇವಲ ಸುಖಮಯವಾದ ಮೋಕ್ಷಕ್ಕೆ ಕೂಡ.
ಮೂರು ಗುಣಗಳನ್ನು ಮೀರಿ ನಿಂತಾಗ ಜೀವದ
ಸಹಜ-ಶಾಶ್ವತ ಧರ್ಮ ಅಭಿವ್ಯಕ್ತವಾಗುತ್ತದೆ. ಈ ಸ್ಥಿತಿಯಲ್ಲಿ ಬ್ರಹ್ಮತತ್ವವಾದ ಚಿತ್ ಪ್ರಕೃತಿ(ಶ್ರೀಲಕ್ಷ್ಮಿ)ಗೂ ಆಸರೆಯಾದ
ಆ ಭಗವಂತವಂತನನ್ನು ಮೋಕ್ಷದಲ್ಲಿ ಸೇರಬಹುದು.
No comments:
Post a Comment