Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, November 27, 2011

Bhagavad GitA in Kannada Chapter-15 Shloka-01-02


ಅಧ್ಯಾಯ ಹದಿನೈದು

ಈ ಅಧ್ಯಾಯ ಗೀತೆಯಲ್ಲೇ ಅತ್ಯಂತ ಚಿಕ್ಕ ಅಧ್ಯಾಯ. ಇಲ್ಲಿ ಫಲಶ್ರುತಿಯ ಎರಡು ಶ್ಲೋಕಗಳನ್ನು ಬಿಟ್ಟರೆ, ಪ್ರಮೇಯ ಭಾಗವನ್ನು ಹೇಳುವ ಹದಿನೆಂಟು ಶ್ಲೋಕಗಳಿವೆ. ಈ ಹದಿನೆಂಟು ಶ್ಲೋಕದಲ್ಲಿ ಕೃಷ್ಣ ಇಡೀ ವಿಶ್ವದ ರಹಸ್ಯವನ್ನು ತೆರೆದಿಟ್ಟಿದ್ದಾನೆ. ಮಹಾಭಾರತ ಭಾರತೀಯ ತತ್ವಶಾಸ್ತ್ರದ ಸಾರವಾದರೆ, ಭಗವದ್ಗೀತೆ ಮಹಾಭಾರತದ ಸಾರ. ಇಂಥಹ ಭಗವದ್ಗೀತೆಯ ಸಾರ ಈ ಹದಿನೈದನೇ ಅಧ್ಯಾಯ. ಈ ಅಧ್ಯಾಯವನ್ನು ಅರ್ಥ ಮಾಡಿಕೊಂಡರೆ ಇಡೀ ಗೀತೆಯನ್ನಷ್ಟೇ ಅಲ್ಲ, ಇಡೀ ಭಾರತೀಯ ತತ್ವಶಾಸ್ತ್ರವನ್ನು ಅರ್ಥ ಮಾಡಿಕೊಂಡಂತೆ. ಶಂಕರಾಚಾರ್ಯರು ಈ  ಅಧ್ಯಾಯಕ್ಕೆ ವ್ಯಾಖ್ಯಾನ ಬರೆಯುತ್ತಾ ಹೇಳುತ್ತಾರೆ: “ನ ಕೇವಲ೦ ಗೀತಾರ್ಥಃ , ಕಿಂತು ಸರ್ವೋಪಿ ಶಾಸ್ತ್ರಾರ್ಥಃ ಅತ್ರ ಪರ್ಯವಸಿತಃ" ಎಂದು.  “ಇದು ಕೇವಲ ಗೀತೆಯ ಸಾರ ಅಲ್ಲ. ಎಲ್ಲ ಶಾಸ್ತ್ರಗಳು ಏನನ್ನು ಹೇಳುತ್ತವೆಯೋ ಅದೆಲ್ಲವೂ ಈ ಅಧ್ಯಾಯದಲ್ಲಡಗಿದೆ”.  The quintessence of entaire  Indian Philosophy is 15th Chapter of Bhagavad Gita. ಮಧ್ವಾಚಾರ್ಯರು ತಮ್ಮ ಹೆಚ್ಚಿನ ಗ್ರಂಥಗಳಲ್ಲಿ ಈ ಅಧ್ಯಾಯದ ಮೂರು ಶ್ಲೋಕಗಳನ್ನು(೧೬,೧೭,೧೮) ಉಲ್ಲೇಖ ಮಾಡುತ್ತಾರೆ. ಏಕೆಂದರೆ ಈ ಶ್ಲೋಕಗಳಲ್ಲೇ ಆಚಾರ್ಯರ ಎಲ್ಲ ಸಿದ್ಧಾಂತದ ಸಾರ ಅಡಗಿದೆ.
ಹಿಂದಿನ ಕಾಲದಲ್ಲಿ ಒಂದು ಸಂಪ್ರದಾಯವಿತ್ತು. ಊಟಕ್ಕೆ ಕುಳಿತಾಗ, ಊಟ ಪ್ರಾರಂಭಿಸುವ ಪೂರ್ವದಲ್ಲಿ ಈ ಅಧ್ಯಾಯದ ಶ್ಲೋಕವನ್ನು ಹೇಳಿ ಆಮೇಲೆ ಊಟ ಮಾಡುವುದು.  ‘ಊಟದ ಎಲೆಯ ಮುಂದೆ ಇಡೀ ಶಾಸ್ತ್ರದ ಸಾರವನ್ನು ನಾವು ಅನುಸಂಧಾನ ಮಾಡಿದಂತಾಯಿತು’ ಅನ್ನುವುದು ಈ ಸಂಪ್ರದಾಯದ ಹಿಂದಿನ ಕಾರಣ.
ಹದಿಮೂರನೇ ಅಧ್ಯಾಯದಲ್ಲಿ ಕ್ಷೇತ್ರ ಮತ್ತು ಕ್ಷೇತ್ರಜ್ಞರ ಬಗ್ಗೆ ಕೃಷ್ಣ ವಿವರಿಸಿದ್ದ. ವಿಶ್ವ ಮತ್ತು ವಿಶ್ವದ ನಿಯಾಮಕ ಭಗವಂತನ ವಿಷಯವನ್ನೇ ಇನ್ನೂ ಸ್ಪಷ್ಟವಾಗಿ, ಇನ್ನೊಂದು ಮುಖದೊಂದಿಗೆ ಈ ಅಧ್ಯಾಯದಲ್ಲಿ ಕೃಷ್ಣ ವಿವರಿಸುತ್ತಾನೆ. ಪ್ರಕೃತಿ ಮತ್ತು ಪ್ರಾಕೃತ ವಿಶ್ವ, ಆ ವಿಶ್ವವನ್ನು ದಾಟುವ ಬಗೆ ಮತ್ತು ಕೊನೆಯದಾಗಿ ಇಡೀ ತತ್ವಜ್ಞಾನದ ಸಂಗ್ರಹ ಈ ಅಧ್ಯಾಯದಲ್ಲಿದೆ. ನಾವು ತಿಳಿದುಕೊಳ್ಳಬೇಕಾದ ವಿಶಿಷ್ಟವಾದ ಅರಿವಿನ ಸಂದೇಶವನ್ನು ಕೃಷ್ಣ ಈ ಅಧ್ಯಾಯದ ಮೂಲಕ ಕೊಟ್ಟಿದ್ದಾನೆ.
ಚೇತನಾಚೇತನ ವಿಶ್ವ ‘ಕ್ಷರ’. ಅದರಿಂದಾಚೆಗೆ ಇರುವ ಚಿತ್ಪ್ರಕೃತಿ-ಅಕ್ಷರಳು. ಅದರಿಂದಾಚೆಗಿರುವ ಸರ್ವ ನಿಯಾಮಕ ಭಗವಂತ-ಪುರುಷೋತ್ತಮ. ಹನ್ನೆರಡನೆ ಅಧ್ಯಾಯದ ಪ್ರಾರಂಭದಲ್ಲಿ ವಿವರಿಸಿದಂತೆ- ಹದಿನೈದು ಬೇಲಿಗಳಿಂದ ಆವೃತವಾಗಿರುವ ಹದಿನಾರನೆಯವ ಜೀವ.  ಈ ಹದಿನೈದನ್ನು ಹದಿನಾರರ  ಸುತ್ತ ಬಿಗಿದವಳು ಹದಿನೇಳನೆಯವಳಾದ ಶ್ರೀಲಕ್ಷ್ಮಿ. ಈ ಬೇಲಿಯಿಂದ  ಬಿಡಿಸಿ ನಮಗೆ ಮೋಕ್ಷ ಕೊಡತಕ್ಕವನು ಹದಿನೆಂಟನೆಯವನಾದ ಪುರುಷೋತ್ತಮ. [ಈ ಹದಿನೈದು ಬೇಲಿಗಳ ಬಗ್ಗೆ ವಿವರವಾಗಿ ತಿಳಿಯಲು ಪ್ರಶ್ನೋಪನಿಷತ್ತಿನ ಆರನೇ ಪ್ರಶ್ನೆಯನ್ನು ನೋಡಿ. ಶ್ರದ್ಧಾಂ ಖಂ ವಾಯುಃ ಜ್ಯೋತಿಃ ಆಪಃ ಪೃಥಿವಿ ಇಂದ್ರಿಯಂ ಮನಃ  | ಅನ್ನಮನ್ನಾದಿ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾಃ  ಲೋಕೇಷು ಚ ನಾಮ ಚ || ೬-೪|| ಇವೇ ಆ ಹದಿನೈದು ಬೇಲಿಗಳು].

‘ಹದಿನೆಂಟು’ ತತ್ವಶಾಸ್ತ್ರದ ಸಮಷ್ಠಿಯನ್ನು ನಮ್ಮ ಮುಂದಿಡತಕ್ಕಂತಹ ಒಂದು ಸಂಖ್ಯೆ. ಈ ಅಧ್ಯಾಯದಲ್ಲಿ ಹದಿನೆಂಟು ಶ್ಲೋಕಗಳ ಮೂಲಕ ಕೃಷ್ಣ ಸಮಸ್ತ ಶಾಸ್ತ್ರದ ಸಾರವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾನೆ. ಬನ್ನಿ ಈ ಅಪೂರ್ವ ಅಧ್ಯಾಯವನ್ನು ಕೃಷ್ಣನಿಂದ ಕೇಳಿ ತಿಳಿಯೋಣ.

ಭಗವಾನುವಾಚ
ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್     
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್                 

ಭಗವಾನ್ ಉವಾಚ-ಭಗವಂತ ಹೇಳಿದನು:
ಊರ್ಧ್ವಮೂಲಮ್ ಅಧಃ ಶಾಖಮ್ ಅಶ್ವತ್ಥಮ್ ಪ್ರಾಹುಃ ಅವ್ಯಯಮ್ 
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ –ಮೇಲಿರುವ ಭಗವಂತ ಮತ್ತು ಪ್ರಕೃತಿ ವಿಶ್ವದ ಬುಡಕಟ್ಟು. ಕೆಳಗಿನ ಜೀವ-ಜಡಗಳು ಇದರ ಟೊಂಗೆ-ಟಿಸಿಲು. ಇದು ಎಂದೆಂದೂ ಇರುವ,[ಅ+ಶ್ವಃ+ತ್ಥ= ಇಂದು ಇದ್ದಂತೆ ನಾಳೆ ಇರದ],[ಅಶ್ವ+ತ್ಥ=ಕುದುರೆಯಂತೆ ನಿರಂತರ ಚಲನಶೀಲವಾದ] ಅರಳಿಯ ಮರ. ವೇದಗಳು ಇದರ ಎಲೆಗಳು. ಇದನ್ನು ಬಲ್ಲವನು ವೇದಗಳನ್ನು ಬಲ್ಲವನು.

ಉಪನಿಷತ್ತಿನ ಸಾರವೇ ಭಗವದ್ಗೀತೆ ಎನ್ನುವುದಕ್ಕೆ ಈ ಶ್ಲೋಕವೇ ಸಾಕ್ಷಿ.   ಕಠೋಪನಿಷತ್ತಿನಲ್ಲಿ ಹೀಗೆ ಹೇಳಿದ್ದಾರೆ: “ಊರ್ಧ್ವಮೂಲೋ ಅವಾಕ್ ಶಾಖಃ ಏಷೋ ಅಶ್ವತ್ಥಃ ಸನಾತನಃ” ಎಂದು. ಇಲ್ಲಿ ಅದನ್ನು “ಊರ್ಧ್ವಮೂಲಮ್ ಅಧಃ ಶಾಖಮ್ ಅಶ್ವತ್ಥಮ್ ಪ್ರಾಹುಃ ಅವ್ಯಯಮ್” ಎಂದು ಹೇಳಿದ್ದಾರೆ. ಇದು ವಿಷಯ ಗರ್ಭಿತವಾದ ಸಾಲು. ಇಲ್ಲಿರುವ ಒಂದೊಂದು ಪದದಲ್ಲೂ ತತ್ವಶಾಸ್ತ್ರದ ಅನೇಕ ವಿಷಯಗಳು ಅಡಗಿವೆ.
ನೇರವಾಗಿ ಈ ಸಾಲನ್ನು ಕನ್ನಡಕ್ಕೆ ಭಾಷಾಂತರಿಸಿದರೆ “ಈ ವಿಶ್ವವೇ ಒಂದು ಅರಳಿ ಮರ. ಇದರ ಬುಡ ಇರುವುದು ಮೇಲೆ, ಟೊಂಗೆ-ಟಿಸಿಲುಗಳಿರುವುದು ಕೆಳಗೆ” ಎಂದಾಗುತ್ತದೆ. ಮೇಲ್ನೋಟಕ್ಕೆ  ಈ ಸಾಲನ್ನು ನೋಡಿದರೆ ನಮಗೆ ಏನೂ ಅರ್ಥವಾಗುವುದಿಲ್ಲ. ಶೀರ್ಷಾಸನ ಮಾಡುತ್ತಿರುವ ಅರಳಿ ಮರ- ಏನಿದು? ಅದರಲ್ಲೂ ಅಶ್ವತ್ಥ ಮರವನ್ನೇ ಕೃಷ್ಣ ಏಕೆ ಹೇಳಿದ? ಹಣ್ಣನ್ನೂ ಕೊಡದ, ಹೂವನ್ನೂ ಬಿಡದ, ಮನೆಕಟ್ಟಲೂ ಸಹಾಯಕವಲ್ಲದ ಈ ಮರದ ಪ್ರಸ್ತಾಪ ಏಕೆ? ಇದು ಅರ್ಥವಾಗಬೇಕಾದರೆ ನಾವು ‘ಅಶ್ವತ್ಥ’ ಪದದ ಹಿಂದಿರುವ ಅರ್ಥವನ್ನು ಹುಡುಕಬೇಕು. ಮೇಲ್ನೋಟದ ಅರ್ಥದಿಂದ ಒಂದೊಂದಾಗಿ ಎಳೆ-ಎಳೆಯಾಗಿ ಒಳಹೊಗಬೇಕು.
(೧) ಅಶ್ವತ್ಥ ಅನ್ನುವುದಕ್ಕೆ ಸ್ಥೂಲ ಅರ್ಥ ಅರಳಿ ಮರ. ಪ್ರಪಂಚದಲ್ಲಿರುವ ಎಲ್ಲ ಮರಗಳಿಗಿಂತ ಈ ಮರ ಭಿನ್ನ. ಗಾಳಿಯ ಸುಳಿಯೇ ಇಲ್ಲದೆ ಎಲ್ಲ ಮರಗಳೂ ಸ್ಥಬ್ಧವಾಗಿರುವಾಗ , ಸಣ್ಣ ಗಾಳಿಯ ಎಳೆ ಬಂದರೆ ಯಾವ ಮರವೂ ಅಲ್ಲಾಡುವುದಿಲ್ಲ. ಆದರೆ ಅಶ್ವತ್ಥಮರದ ಎಲೆಗಳು ಗಿಲಿ-ಗಿಲಿ ಎಂದು ಹಂದಾಡಲು ಆರಂಭಿಸುತ್ತವೆ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ‘ಚಲಧರಃ’ ಎಂದೂ ಕರೆಯುತ್ತಾರೆ. ಅಂದರೆ ಯಾವಾಗಲೂ ಚಲನಶೀಲವಾದ ಎಲೆಗಳುಳ್ಳ ಮರ ಅಶ್ವತ್ಥ. ಇದೇ ಪ್ರಪಂಚಕ್ಕೂ ಮತ್ತು ಅಶ್ವತ್ಥಮರಕ್ಕೂ ಇರುವ ಸಾಮ್ಯ. ಪ್ರಪಂಚ ಕೂಡ ಯಾವಾಗಲೂ ಚಲನಶೀಲ. ಅದು ಸದಾ ಚಲಿಸುತ್ತಾ ಬದಲಾಗುತ್ತಾ ಇರುತ್ತದೆ.
(೨) ಅಶ್ವ+ತ್ಥ: ಇಲ್ಲಿ ಅಶ್ವ ಎಂದರೆ ಕುದುರೆ. ಪ್ರಪಂಚ ಅಶ್ವದ ಹಾಗೆ ಇರುವಂಥದ್ದು. ಕುದುರೆಯನ್ನು ಗಮನಿಸಿದರೆ ನಮಗೆ ಈ ಅರ್ಥ ತಿಳಿಯುತ್ತದೆ. ಇತರ ಪ್ರಾಣಿಗಳಿಗೂ ಕುದುರೆಗೂ ಒಂದು ವೆತ್ಯಾಸವಿದೆ. ಎಲ್ಲಾ ಪ್ರಾಣಿಗಳೂ ವಿಶ್ರಾಮದ ಕಾಲದಲ್ಲಿ ನಿಶ್ಚಲವಾಗಿ ನಿಲ್ಲಬಲ್ಲವು. ಆದರೆ ಕುದುರೆ ಒಂದು ಕ್ಷಣವೂ ನಿಶ್ಚಲವಾಗಿ ನಿಲ್ಲದು. ಈ ಜಗತ್ತೂ ಕೂಡ ಅಶ್ವದಂತೆ. ಇದು ಎಂದೂ  ಸ್ಥಿರವಾಗಿ ನಿಲ್ಲುವುದಿಲ್ಲ.
(೩) ಅ+ಶ್ವ+ತ್ಥ –ಇಲ್ಲಿ ‘ಶ್ವ’ ಅಂದರೆ ನಾಳೆ, ‘ತ್ಥ’ ಅಂದರೆ ಇರುವಂಥದ್ದು. ಅಶ್ವತ್ಥ ಅಂದರೆ  “ನ ಶ್ವ ತಿಷ್ಠತಿ”. ಇಂದು ಇದೆ ಆದರೆ ನಾಳೆ ಇರುತ್ತದೆ ಎನ್ನುವ ಖಾತರಿ ಇಲ್ಲ. ಅಂದರೆ ಈ ಪ್ರಪಂಚ ಕ್ಷಣಿಕ. ಕಠೋಪನಿಷತ್ತಿನಲ್ಲಿ ಯಮ- ನಚಿಕೇತನಲ್ಲಿ “ನಿನಗೆ ಯಾವ ಸುಖಭೋಗ ಬೇಕಿದ್ದರೂ ಕೊಡುತ್ತೇನೆ” ಎಂದಾಗ, ನಚಿಕೇತ ಹೇಳುತ್ತಾನೆ: “ಶ್ವೋಭಾವಾ ಮರ್ತ್ಯಸ್ಯ ಯದಂತಕೈತತ್   ಸರ್ವೇಂದ್ರಿಯಾಣಾಂ ಜರಯಂತಿ ತೇಜಃ” ಎಂದು(೧-೨೬). “ಸದಾ ಬದಲಾಗುತ್ತಿರುವ,  ಕ್ಷಣಿಕವಾದ ಈ ಪ್ರಪಂಚದಲ್ಲಿ ನಮ್ಮನ್ನು ಕಿತ್ತು ತಿನ್ನುವ ಭೋಗ ನನಗೆ ಬೇಡ, ಬದಲಿಗೆ ಜ್ಞಾನವನ್ನು ಕೊಡು” ಎಂದು ನಚಿಕೇತ ಕೇಳುತ್ತಾನೆ.  ಬದಲಾವಣೆಯೇ ಜಗದ ನಿಯಮ.
(೪) ಅಶ್ವತ್ಥದ ಶಾಸ್ತ್ರೀಯ ನಿರ್ವಚನ ಅರ್ಥವನ್ನು ನೋಡಿದರೆ(etymologicaly)- ಅಶು+ವಾ+ತ+ಥ. ಇಲ್ಲಿ ಅಶು+ವಾ ಎಂದರೆ ಎಲ್ಲಕ್ಕಿಂತ ವೇಗವಾಗಿ ಹೋಗುವಂಥದ್ದು-ಅದು ಭಗವಂತ. ಅದಕ್ಕಾಗಿ ಭಗವಂತನನ್ನು ‘ಅಶ್ವ’ ಎಂದೂ ಕರೆಯುತ್ತಾರೆ. ಕುದುರೆ ಮುಖದ ಹಯಗ್ರೀವ ರೂಪದಲ್ಲಿ ಭಗವಂತ ಸಮಸ್ತ ವೇದ ವಿದ್ಯೆಯನ್ನು ಪ್ರಪಂಚಕ್ಕೆ ಕೊಟ್ಟ. ಎಲ್ಲವನ್ನು ಎಲ್ಲಕ್ಕಿಂತ ಮೊದಲು ತಿಳಿದ ಭಗವಂತ ಈ ಜಗತ್ತಿನಲ್ಲಿ, ಇದರ ಒಳಗೂ ಹೊರಗೂ ನಿಯಮನ ಮಾಡುವುದಕ್ಕೋಸ್ಕರ ‘ಅಶ್ವ’ ನಾಮಕನಾಗಿ ಕೂತಿದ್ದಾನೆ(ತ್ಥ). ಈತ ಇಡೀ ಪ್ರಪಂಚದಲ್ಲಿ ‘ತತ’(ತುಂಬಿದ್ದಾನೆ) ಮತ್ತು ಕೊನೆಗೆ ಇಡೀ ಜಗತ್ತು ಆತನಿಗೆ ಥಂ.(ಥಂ =ಆಹಾರ -ಇಡೀ ಜಗತ್ತನ್ನು ಕಬಳಿಸುವ ಶಕ್ತಿ-ಪ್ರಳಯದ ವಿವರಣೆ).
ಇವು ನಾವು ‘ಅಶ್ವತ್ಥ’ ಎನ್ನುವ ಪದದಲ್ಲಿ ಕಾಣಬಹುದಾದ ಅರ್ಥ. ಈ ರೀತಿ ಒಂದು ಪದದಲ್ಲಿ ಅನೇಕ ವಿಷಯಗಳನ್ನು ತುಂಬಿಸಲು ಬೇರೆ ಯಾವ ಭಾಷೆಯಲ್ಲೂ ಸಾಧ್ಯವಿಲ್ಲ. ಅದಕ್ಕಾಗಿ ಸಂಸ್ಕೃತವನ್ನು ಗರ್ಭಿಣಿ (ಅರ್ಥಗರ್ಭಿತ) ಭಾಷೆ ಎನ್ನುತ್ತಾರೆ. ಇಲ್ಲಿ ಹೇಳಿದ ಮರದ ಕಲ್ಪನೆ ಮತ್ತು ವಿವರಣೆ ಬೈಬಲ್ ನಲ್ಲಿ ಕೂಡಾ ಕಾಣಬಹುದು. ಅಲ್ಲಿ ಅವರು ಮರಕ್ಕೆ “The Garden of Eden” ಎಂದಿದ್ದಾರೆ. ಅಲ್ಲಿ ಹೇಳುತ್ತಾರೆ: but of the tree of the knowledge of good and evil, you shall not eat of it; for in the day that you eat of it you will surely die." ಅಂದರೆ: “ಈ ಮರ ಹಣ್ಣು ಬಿಡುತ್ತದೆ; ಈ ಹಣ್ಣನ್ನು ತಿಂದರೆ ನೀನು ಸಾಯುತ್ತೀಯ” ಎಂದು. ಇಲ್ಲಿ ಹಣ್ಣು ಅಂದರೆ ಅದು ಕರ್ಮಫಲ. ಕರ್ಮಫಲ ಅಪೇಕ್ಷೆ(demand) ಮಾಡುವವ ಸಾವಿಲ್ಲದ ಮೋಕ್ಷವನ್ನು ಪಡೆಯಲಾರ. ಆತ ನಿರಂತರ ಹುಟ್ಟು ಸಾವಿನ ಚಕ್ರದಲ್ಲಿ ಸುತ್ತುತ್ತಾನೆ ಎನ್ನುವುದು ಈ ಸಾಲಿನ ಅರ್ಥ.
ಪ್ರಾಹುಃ ಅವ್ಯಯಮ್” ಎನ್ನುವಲ್ಲಿ ‘ಪ್ರಾಹುಃ’ ಎಂದರೆ ತಿಳಿದು ಹೇಳುವುದು. “ವೇದಕಾಲದ ಋಷಿಗಳು ಈ ಪ್ರಪಂಚ ಒಂದು  ಅಶ್ವತ್ಥ ಎಂದು ತಿಳಿದು ಹೇಳಿದ್ದಾರೆ” ಎನ್ನುತ್ತಾನೆ ಕೃಷ್ಣ. 'ಈ ಪ್ರಪಂಚ ನಶ್ವರ, ಒಂದು ದಿನ ನಾಶವಾಗುವಥದ್ದು' ಎಂದು ಹೇಳಿ ತಕ್ಷಣ ಕೃಷ್ಣ ಹೇಳುತ್ತಾನೆ-“ಇದು ಅವ್ಯಯ” ಎಂದು! ಅಂದರೆ ನಾಶವಿಲ್ಲದ್ದು! ಇದು ಅರ್ಥವಾಗಬೇಕಾದರೆ ನಾವು ಸಮುದ್ರ ತಡಿಯಲ್ಲಿ ಹೋಗಿ ಕುಳಿತು ಅಲ್ಲಿ ಬರುವ ತೆರೆಗಳನ್ನು ಗಮನಿಸಬೇಕು. ಪ್ರತಿಯೊಂದು ತೆರೆಯೂ ಕೂಡ ಅಬ್ಬರದಿಂದ ಬರುತ್ತದೆ. ಅಲ್ಲಿ ಯಾವ ತೆರೆಯೂ ಶಾಶ್ವತವಲ್ಲ. ಎಲ್ಲ ತೆರೆಯೂ ಕ್ಷಣಿಕ. ಆದರೆ ಸಮುದ್ರದಲ್ಲಿ ತೆರೆ ಇಲ್ಲದ ಕ್ಷಣವಿಲ್ಲ. ಅದು ಅವ್ಯಯ. ಅದೇ ರೀತಿ ಒಂದು ಪ್ರಪಂಚ ನಾಶವಾಗುತ್ತದೆ, ಇನ್ನೊಂದು ಪ್ರಪಂಚ ಹುಟ್ಟುತ್ತದೆ. ಪ್ರಪಂಚ ನಾಶವಾಗಬಹುದು ಆದರೆ ಪ್ರಪಂಚದ ಪ್ರವಾಹ ನಿರಂತರ. ಒಂದು ಪ್ರಳಯದ ನಂತರ ಇನ್ನೊಂದು ಸೃಷ್ಟಿ; ಸೃಷ್ಟಿಯ ನಂತರ ಪ್ರಳಯ-ಇದು ನಿರಂತರ. ಆದ್ದರಿಂದ ಪ್ರಪಂಚ ಅವ್ಯಯ. ಜೀವ ಅನಾದಿ ಅನಂತ. ಹುಟ್ಟು ಸಾವು ನಿರಂತರ. ಜೀವ-ಜಡಗಳ ಸಮಾಗಮ ಜನನ, ಅದರ ಬೇರ್ಪಡುವಿಕೆ ಮರಣ. ಇಲ್ಲಿ ಎಲ್ಲವೂ ನಿರಂತರ ಬದಲಾವಣೆಯನ್ನು ಕಾಣುತ್ತದೆ. ಒಟ್ಟಿನಲ್ಲಿ ಈ ಜಗತ್ತು ಅಳಿವಿರದ ಅಶ್ವತ್ಥ.
ಇಲ್ಲಿ “ಈ ಮರದ ಮೂಲ ಮೇಲಿದೆ(ಊರ್ಧ್ವಮೂಲ)” ಎಂದಿದ್ದಾರೆ. ಮೇಲೆ ಅಂದರೆ ಎಲ್ಲಕ್ಕಿಂತ ಹಿರಿದಾದ ಭಗವಂತ. ಈ ಪ್ರಪಂಚ ಅನ್ನುವ ಮರಕ್ಕೆ ಮೂಲ ಆ  ಭಗವಂತ. ಪ್ರಪಂಚದ ಮೂಲದಲ್ಲಿ ಎಲ್ಲಕ್ಕಿಂತ ಎತ್ತರದಲ್ಲಿ ತಂದೆ-ತಾಯಿಯಾಗಿ ಲಕ್ಷ್ಮೀ-ನಾರಾಯಣರಿದ್ದಾರೆ. ಜಡಪ್ರಕೃತಿಯಿಂದ ಈ ಮರ ವಿಕಸನವಾಗುತ್ತದೆ. ಭಗವಂತನಿಂದ ಚತುರ್ಮುಖಬ್ರಹ್ಮ(ಮಹತತ್ವ), ವಾಯು, ಗರುಡ-ಶೇಷ-ರುದ್ರರು(ಆಹಂಕಾರ ತತ್ವ), ಇಂದ್ರಾದಿ ದೇವತೆಗಳು, ಅವಾಂತರ ದೇವತೆಗಳು, ಗಂಧರ್ವರು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಹೀಗೆ ಒಂದರ ನಂತರ ಒಂದು ಶಾಖೆಗಳು ಸೃಷ್ಟಿಯಾದವು. ಇವೆಲ್ಲವೂ ಸೇರಿ ಒಂದು ಮರವಾಯಿತು. ಇಲ್ಲಿ ‘ಅಧಃ ಶಾಖಮ್’ ಅಂದರೆ  ಮೇಲಿನಿಂದ ಕೆಳಕ್ಕೆ ಬೆಳೆಯುವುದು. ಇದು ದೇವತಾ ತಾರತಮ್ಯವನ್ನು ಸೂಚಿಸುತ್ತದೆ.
ಮರದ ಟೊಂಗೆ-ಟಿಸಿಲಿನ ನಂತರ ಅದರ ಎಲೆಗಳು. “ಈ ಮರದ ಎಲೆಗಳೇ ವೇದಗಳು” ಎನ್ನುತ್ತಾನೆ ಕೃಷ್ಣ. ನಮಗೆ ತಿಳಿದಂತೆ ಪ್ರಪಂಚಕ್ಕೆ ಎರಡು ಮುಖ. ಒಂದು ನಾಮಾತ್ಮಕ ಪ್ರಪಂಚ, ಇನ್ನೊಂದು ರೂಪಾತ್ಮಕ ಪ್ರಪಂಚ. ಇಲ್ಲಿ ರೂಪಾತ್ಮಕ ಪ್ರಪಂಚ ಟೊಂಗೆ-ಟಿಸಿಲುಗಳಾದರೆ, ನಾಮಾತ್ಮಕ ಪ್ರಪಂಚ ಮರದ ಎಲೆ. ಮೊತ್ತ ಮೊದಲು ನಾಮಾತ್ಮಕ ಪ್ರಪಂಚದಲ್ಲಿ ಸೃಷ್ಟಿಯಾದದ್ದು ವೇದಗಳು. ವಸ್ತುವಿಗೆ ಒಂದು ಹೆಸರು ಕೊಟ್ಟಿರುವುದು ಈ ವೇದದಲ್ಲಿರುವ ವೈದಿಕ ಶಬ್ದಗಳು.
ಸರ್ವೇಷಾಂ ತ ಸ ನಾಮಾನಿ ಕರ್ಮಾಣಿ ಚ ಪೃಥಕ್ ಪೃಥಕ್
ವೇದಶಬ್ದೇಭ್ಯ ಏವಾದೌ ಪೃಥಕ್ ಸಂಸ್ಥಾಶ್ಚ ನಿರ್ಮಮೇ ॥ಮನುಸ್ಮೃತಿ ೧-೨೧||
ವೇದದಲ್ಲಿ ಏನು ಶಬ್ದಗಳಿವೆ ಅವು ಮೂಲತಃ ಭಗವಂತನ ನಾಮಗಳು. ಅದನ್ನೇ ಲೋಕಕ್ಕೆ ಬಳಸಿದರು. ಈ ರೀತಿ ಶಬ್ದಗಳ ಸೃಷ್ಟಿಯಾಯಿತು. ಅದೇ ಛಂದಸ್ಸು. ವೇದ ಮಂತ್ರಗಳು-ವೇದವಾಙ್ಮಯಗಳೇ ಈ ಮರದ ಎಲೆಗಳು.

ಏಕೆ ವೇದವನ್ನು ಇಲ್ಲಿ ಎಲೆಗೆ ಹೋಲಿಸಿದರು ಎಂದರೆ, ಒಂದು ಮರ ಹೂ-ಹಣ್ಣು ಕೊಡಬೇಕಾದರೆ ಅಲ್ಲಿ ಫಲಪ್ರದತ್ವ ಇರುವುದು ಎಲೆಗೆ. ಹಾಗೇ ನಮಗೆ ಅಧ್ಯಾತ್ಮ ಸಾಧನೆಯ ಫಲವನ್ನು ಕೊಡತಕ್ಕವು ವೇದಗಳು. ಈ ಕಾರಣಕ್ಕಾಗಿ ಮರವನ್ನು ವಿಶ್ವಕ್ಕೆ ಹೋಲಿಸಿದರೆ, ವೇದಗಳನ್ನು ಮರದ ಎಲೆಗಳಿಗೆ ಹೋಲಿಸಿದ ಕೃಷ್ಣ. ಪ್ರಳಯಕಾಲದಲ್ಲಿ ಮರ ನಾಶವಾಗುತ್ತದೆ. ಆದರೆ ಮರದ ಎಲೆ ನಾಶವಾಗುವುದಿಲ್ಲ. ಆದ್ದರಿಂದ ‘ಪ್ರಳಯ ಕಾಲದಲ್ಲಿ ಭಗವಂತ ಆಲದ ಎಲೆಯ ಮೇಲೆ ಮಲಗಿರುತ್ತಾನೆ’-ಎನ್ನುತ್ತಾರೆ. ವೇದ ನಿತ್ಯ ಅದಕ್ಕೆ ನಾಶವಿಲ್ಲ.  ಎಲೆಯ ಮೇಲೆ ಭಗವಂತ ಮಲಗಿದ ಎಂದರೆ ವೇದ ವಾಚ್ಯನಾಗಿ ಭಗವಂತ ಮಲಗಿದ ಎಂದರ್ಥ. ಪ್ರಳಯಕಾಲದಲ್ಲಿ ವೇದಗಳಿದ್ದವು ಎನ್ನುವುದು ಇದರಿಂದ ತಿಳಿಯುತ್ತದೆ. ಇಲ್ಲಿ ನಮಗೆ ಒಂದು ಪ್ರಶ್ನೆ ಬರಬಹುದು. ಯಾವ ವಸ್ತುವೂ ಇಲ್ಲದೇ ಇದ್ದಾಗ ವೇದಗಳಿದ್ದವು ಅಂದರೆ ಏನು ಅರ್ಥ? ಅಗ್ನಿಮೀಳೇ ಪುರೋಹಿತಂ... ಎನ್ನುವಲ್ಲಿ ಅಗ್ನಿಯೂ ಇಲ್ಲ, ಪುರೋಹಿತನೂ ಇಲ್ಲ. ಹೀಗಿರುವಾಗ ಯಾರು ವೇದವನ್ನು ಹೇಳುವವರು ಮತ್ತು ವೇದಗಳು ಪ್ರಳಯ ಕಾಲದಲ್ಲಿ ಯಾರನ್ನು ಹೇಳುತ್ತವೆ ?
ಪ್ರಳಯ ಕಾಲದಲ್ಲಿ ವೇದಗಳಿಗೆ ಭಗವಂತನೊಬ್ಬನೇ ಅರ್ಥ. ಇನ್ಯಾವ ಅರ್ಥವೂ ಇಲ್ಲ. ಹಾಗಾಗಿ ವೇದದಲ್ಲಿನ ಸರ್ವ ಶಬ್ದವೂ ಭಗವಂತನನ್ನು ಹೇಳುತ್ತವೆ. “ನಾಮಾನಿ ಸರ್ವಾಣಿ ಯಮಾ ವಿಷಂತಿ ತಮ್ ವೈ ವಿಷ್ಣುಂ ಪರಮ ಉದಾಹರಂತಿ”- ಯಾರಲ್ಲಿ ಎಲ್ಲಾ ಶಬ್ದಗಳು ಪ್ರವೇಶ ಮಾಡುತ್ತವೋ-ಅವನು ವಿಷ್ಣು. ಆತ ಸರ್ವ ಶಬ್ದವಾಚ್ಯ. ವಿಷ್ಣು ಅಂದರೆ “ವಿಷಂತಿ ಸರ್ವಾಣಿ ನಾಮಾನಿ ಅತ್ರ”. ಐತರೇಯ ಅರಣ್ಯಕದಲ್ಲಿ ಹೇಳುವಂತೆ: “ಸರ್ವೇ ಘೋಷಾಃ ಸರ್ವೇ ವೇದಾಃ ಸರ್ವಾಃ ರಚಃ ಎಕೈವ ವ್ಯಾಹೃತಿಃ...” ಪ್ರಕೃತಿಯಲ್ಲಿನ ಸರ್ವಶಬ್ದಗಳು, ಸರ್ವ  ನಾದಗಳು ಭಗವಂತನನ್ನು ಹೇಳುತ್ತವೆ. ಹೀಗಾಗಿ ಪ್ರಳಯ ಕಾಲದಲ್ಲಿ ವೇದಾಭಿಮಾನಿನಿ ಲಕ್ಷ್ಮಿ  ವೇದವನ್ನು ಹಾಡುತ್ತಿರುತ್ತಾಳೆ(ಶ್ರುತಿಗೀತ) ಮತ್ತು ಭಗವಂತ ಕೇಳುತ್ತಿರುತ್ತಾನೆ. ಇದು ನಾಮಾತ್ಮಕ ಪ್ರಪಂಚದ ಪರಿಕಲ್ಪನೆ. ಕೃಷ್ಣ ಹೇಳುತ್ತಾನೆ “ಇಲ್ಲಿ ಹೇಳಿದ ವಿಚಾರವನ್ನು ಯಾರು ತಿಳಿಯುತ್ತಾರೋ ಅವರು ಸಮಸ್ತ ವೇದವನ್ನು ತಿಳಿದಂತೆ” ಎಂದು.


ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾಃ
ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬನ್ಧೀನಿ ಮನುಷ್ಯಲೋಕೇ         

ಅಧಃ ಚ ಊರ್ಧ್ವಂ ಪ್ರಸೃತಾಃ ತಸ್ಯ ಶಾಖಾ ಗುಣ ಪ್ರವೃದ್ಧಾಃ ವಿಷಯ ಪ್ರವಾಲಾಃ ।
ಅಧಃ ಚ  ಮೂಲಾನಿ ಅನುಸಂತತಾನಿ ಕರ್ಮ ಅನುಬನ್ಧೀನಿ ಮನುಷ್ಯಲೋಕೇ --ತ್ರಿಗುಣಗಳಿಂದ ಕೊಬ್ಬಿದ ಇದರ ಟೊಂಗೆಗಳು ಕೆಳಗೂ ಮೇಲೂ ಹಬ್ಬಿ ಹರಡಿವೆ. ಇಂದ್ರಿಯ ವಿಷಯಗಳೆ ಇವುಗಳ ತಳಿರುಗಳು. ಇದರ ಬುಡಕಟ್ಟುಗಳೂ ಜೀವಿಗಳ ಕರ್ಮಕ್ಕೆ ತಕ್ಕಂತೆ ಕೆಳಗೆ ಕೂಡ, ಭೂಮಿಯಲ್ಲು ಹರವಿಕೊಂಡಿವೆ.

ಮರದ ವರ್ಣನೆಯನ್ನು ಇಲ್ಲಿ ಮತ್ತಷ್ಟು ವಿವರಿಸಲಾಗಿದೆ. ಈ ಮರದ ಬೇರುಗಳು ಕೆಳಮುಖವಾಗಿಯೂ, ಮೇಲ್ಮುಖವಾಗಿಯೂ ಹರಡಿಕೊಂಡಿದೆ ಎನ್ನುವಲ್ಲಿ ಆಲದ ಮರದ ವರ್ಣನೆ ಎದ್ದು ಕಾಣುತ್ತದೆ. ಪಂಚಭೂತ ಎನ್ನುವ ಟೊಂಗೆ ಟಿಸಿಲು ಮೇಲಿನಿಂದ ಕೆಳಗಿನ ತನಕ ವ್ಯಾಪಿಸಿಕೊಂಡಿದೆ. ನಮ್ಮ ಶರೀರವನ್ನೇ ನೋಡಿದಾಗ- ನಮ್ಮ ಸಹಸ್ರಾರದಲ್ಲಿ ಭಗವಂತ ಕೂತಿದ್ದಾನೆ. ಮೇಲಿನಿಂದ ಕೆಳಗಿನ ತನಕ ಪಂಚಭೂತಗಳು, ಸತ್ವ-ರಜಸ್ಸು-ತಮಸ್ಸು ಎನ್ನುವ ತ್ರಿಗುಣಗಳು ಟೊಂಗೆಗಳಾಗಿ ನಿಂತಿವೆ. ಇಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಚಿಗುರೆಲೆಗಳಿದ್ದಂತೆ. ಅಂದರೆ ಪಂಚಭೂತಾತ್ಮಕವಾದ ವಿಷಯಗಳೇ ಈ ಮರದ ಚಿಗುರು. ಈ ಚಿಗುರು ನಮಗೆ ಯಾವಾಗಲೂ ಆಕರ್ಷಣೆ. ಭಗವಂತನ ಅನಂತ ರೂಪ ಮೇಲಿನಿಂದ ಕೆಳಗಿನ ತನಕ ನಮ್ಮ ಅಂಗಾಂಗದಲ್ಲಿ ತುಂಬಿದೆ.  ಅಲ್ಲಿ ನಮ್ಮ ಕರ್ಮವನ್ನು ಅವಲಂಬಿಸಿ ಅವನ ಕ್ರಿಯೆ. ಭಗವಂತನ ಮೂಲ ಮೇಲೆ, ಆದರೆ ಆತ ಮೇಲಿನಿಂದ ಕೆಳಗಿನ ತನಕ ಹರವಿಕೊಂಡಿದ್ದಾನೆ.  ಹೀಗೆ ಆತ ಎಲ್ಲ ಕಡೆ ವ್ಯಾಪಿಸಿ ನಿಂತಿದ್ದಾನೆ.      

No comments:

Post a Comment