ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ ।
ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು ॥೭॥
ಆಹಾರಃ ತು ಅಪಿ ಸರ್ವಸ್ಯ ತ್ರಿವಿಧಃ ಭವತಿ ಪ್ರಿಯಃ ।
ಯಜ್ಞ ತಪಃ ತಥಾ ದಾನಂ ತೇಷಾಂ ಭೇದಮ್ ಇಮಮ್ ಶೃಣು –ಎಲ್ಲರೂ ಉಣ್ಣುವ ಆಹಾರವೂ ಮೂರು ತೆರನಾಗಿ ಮೆಚ್ಚಿಗೆಯಾಗುತ್ತದೆ. ಯಜ್ಞ, ತಪಸ್ಸು, ದಾನ ಕೂಡ. ಅವುಗಳ ಈ ಬಗೆಯನ್ನಾಲಿಸು.
ನಾವು ತಿನ್ನುವ ಆಹಾರ ಕೂಡ ಮೂರು ತೆರನಾಗಿರುತ್ತದೆ. ಸಾತ್ವಿಕ, ರಾಜಸ ಮತ್ತು ತಾಮಸ ಆಹಾರ. “ಅನ್ನಂ ಅಷಿತಂ ತ್ರೇಧಾ ವಿಧ್ಯತೆ” (ಛಾಂದೋಗ್ಯೋಪನಿಷತ್-೫-೧) ಎನ್ನುವಂತೆ ನಾವು ಸೇವಿಸುವ ಆಹಾರವನ್ನು ನಮ್ಮೊಳಗಿರುವ ಪ್ರಾಣ ಮತ್ತು ವೈಶ್ವಾನರರು ಮೂರು ಬಗೆಯನ್ನಾಗಿ(ಸೂಕ್ಷ್ಮ, ಸ್ಥೂಲ ಮತ್ತು ಸ್ಥೂಲ) ವಿಂಗಡಿಸಿ ಅದನ್ನು ದೇಹದ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತಾರೆ. ನಮ್ಮ ಆಹಾರಕ್ಕೂ ಮನಸ್ಸಿಗೂ ನೇರ ಸಂಬಂಧವಿದೆ. ಇದನ್ನು ನಮ್ಮ ಪ್ರಾಚೀನರು ಅರಿತಿದ್ದರು. ಅದಕ್ಕಾಗಿ ಮನಸ್ಸಿನ ಮೇಲೆ ಪ್ರಭಾವ ಬೀರುವ ಆಹಾರವನ್ನು ಅವರು ನಿಷೇಧಿಸಿದರು. ಉದಾಹರಣೆಗೆ ಬೆಳ್ಳುಳ್ಳಿ. ಇದು ಔಷಧೀಯ ವಸ್ತು. ಆದರೆ ಇದನ್ನು ನಿತ್ಯ ಆಹಾರದಲ್ಲಿ ಬಳಸುವುದನ್ನು ನಿಷೇಧಿಸಿದ್ದಾರೆ. ಏಕೆಂದರೆ ಇದು ನಮ್ಮ ಬುದ್ಧಿ ಬೆಳವಣಿಗೆಗೆ ಪೂರಕವಲ್ಲ. ಇದೇ ರೀತಿ ನುಗ್ಗೆಕಾಯಿ, ತೊಂಡೇಕಾಯಿ ಇತ್ಯಾದಿ. ಅಧ್ಯಯನ ಮಾಡುವವರಿಗೆ ಇದು ನಿಷಿದ್ಧ (ಔಷಧವಾಗಿ ಬಳಸಬಹುದು). ಹೀಗೆ ಮನುಷ್ಯನ ಬುದ್ಧಿಗೆ ಯಾವ ವಿಧದ ಆಹಾರ ಸೂಕ್ತ ಎನ್ನುವುದನ್ನು ಮೊತ್ತ ಮೊದಲ ಬಾರಿಗೆ ಕೃಷ್ಣ ಜಗತ್ತಿಗೆ ಕೊಟ್ಟ.
ಆಹಾರದ ಜೊತೆಗೆ ನಾವು ಮಾಡುವ ದೇವರ ಪೂಜೆ, ತಪಃ, ನಮ್ಮ ಚಿಂತನಾ ಕ್ರಮ, ದಾನ, ಜೀವನದ ನಡೆ, ಮಾತು ಎಲ್ಲವುದರಲ್ಲೂ ಈ ಮೂರು ವಿಧವನ್ನು ಗುರುತಿಸಬಹುದು. ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಆಹಾರ, ಯಜ್ಞ, ತಪಸ್ಸು ಮತ್ತು ದಾನದಲ್ಲಿ ಈ ಮೂರು ಬಗೆಯನ್ನು ಗುರುತಿಸುವುದು ಹೇಗೆ ಎನ್ನುವುದನ್ನು ವಿವರಿಸುತ್ತಾನೆ.
ಆಯುಃಸತ್ವಬಲಾರೋಗ್ಯಸುಖಪ್ರೀತಿವಿವರ್ಧನಾಃ ।
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ವಿಕಪ್ರಿಯಾಃ ॥೮॥
ಆಯುಃ ಸತ್ವ ಬಲ ಆರೋಗ್ಯ ಸುಖ ಪ್ರೀತಿ ವಿವರ್ಧನಾಃ ।
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾಃ ಆಹಾರಾಃ ಸಾತ್ವಿಕ ಪ್ರಿಯಾಃ –ಇವು ಸಾತ್ವಿಕರಿಗೆ ಮೆಚ್ಚಿಕೆಯಾದ ತಿನಿಸುಗಳು: ಆಯುಸ್ಸು, ಒಳ್ಳೆಯತನ, ತ್ರಾಣ, ಆರೋಗ್ಯವನ್ನು ಹೆಚ್ಚಿಸುವಂಥವು; ಬಹಳ ಕಾಲ ಮೆಚ್ಚಿಕೆಯಾಗುವಂಥವು; ತಿಂದಾಗ ಖುಷಿಯಾಗುವಂಥವು; ರುಚಿಯಾದಂಥವು; ಕಸುವಿರುವಂಥವು; ಧೀರ್ಘಕಾಲ ಪರಿಣಾಮ ಬೀರುವಂಥವು; ಮತ್ತೆಮತ್ತೆ ಮನ ಸೆಳೆಯುವಂಥವು.
ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಆಹಾರದ ಬಗ್ಗೆ ವಿವರಿಸಿದ್ದಾನೆ. ಯಾವ ಆಹಾರ ನಮ್ಮ ಆಯುಸ್ಸಿನ ವೃದ್ಧಿಗೆ ಪೂರಕವೋ; ಯಾವ ಆಹಾರ ನಮಗೆ ಸೌಮ್ಯ ಸ್ವಭಾವವನ್ನು ಕೊಡುತ್ತದೋ; ಯಾವ ಆಹಾರ ದೇಹಕ್ಕೆ ಪೌಷ್ಟಿಕಾಂಶವನ್ನು ಕೊಡುತ್ತದೋ; ಯಾವ ಆಹಾರ ಆರೋಗ್ಯವನ್ನು ಕೊಡುತ್ತದೋ ಅಂತಹ ಆಹಾರ ಸಾತ್ವಿಕ ಆಹಾರ. ಈ ಆಹಾರವನ್ನು ನೋಡಿದಾಗ ನಮಗೆ ಕೆಟ್ಟ ಭಾವನೆ ಬರುವುದಿಲ್ಲ. ಅದು ರಸವತ್ತಾಗಿರುತ್ತದೆ, ರುಚಿಯಾಗಿರುತ್ತದೆ. ಇದನ್ನು ತಿಂದಾಗ ನಮ್ಮ ಹೊಟ್ಟೆ ತುಂಬುತ್ತದೆ ಮತ್ತು ತಕ್ಷಣ ಹಸಿವೆಯಾಗುವುದಿಲ್ಲ. ನೋಡಲು ಹೃದಯಂಗಮವಾಗಿರುತ್ತದೆ, ತಿಂದ ನೆನಪು ಉಳಿಯುವಂತಿರುತ್ತದೆ.
ನಿಜವಾದ ಸಾತ್ವಿಕರು ಏನು ತಿನ್ನುತ್ತಾರೋ ಅದು ಸಾತ್ವಿಕ ಆಹಾರವಾಗಿರುತ್ತದೆ. ಪ್ರಕೃತಿ ಸಹಜವಾದ, ರಸವತ್ತಾದ, ರುಚಿಯಾದ, ಹಣ್ಣು-ಹಂಪಲು, ಗಡ್ಡೆ-ಗೆಣಸು, ಬೇಳೆ-ಕಾಳು, ಕಂದ-ಮೂಲಗಳು ಸಾಮಾನ್ಯವಾಗಿ ಸಾತ್ವಿಕ ಆಹಾರವಾಗಿರುತ್ತದೆ. ಆಯುಸ್ಸನ್ನು ಹೆಚ್ಚಿಸುವ ಶುದ್ಧ ತುಪ್ಪ(ಮಿತವಾಗಿ ಬಳಸಿದಾಗ) ಸಾತ್ವಿಕ ಆಹಾರ.
ನಿಜವಾದ ಸಾತ್ವಿಕರು ಏನು ತಿನ್ನುತ್ತಾರೋ ಅದು ಸಾತ್ವಿಕ ಆಹಾರವಾಗಿರುತ್ತದೆ. ಪ್ರಕೃತಿ ಸಹಜವಾದ, ರಸವತ್ತಾದ, ರುಚಿಯಾದ, ಹಣ್ಣು-ಹಂಪಲು, ಗಡ್ಡೆ-ಗೆಣಸು, ಬೇಳೆ-ಕಾಳು, ಕಂದ-ಮೂಲಗಳು ಸಾಮಾನ್ಯವಾಗಿ ಸಾತ್ವಿಕ ಆಹಾರವಾಗಿರುತ್ತದೆ. ಆಯುಸ್ಸನ್ನು ಹೆಚ್ಚಿಸುವ ಶುದ್ಧ ತುಪ್ಪ(ಮಿತವಾಗಿ ಬಳಸಿದಾಗ) ಸಾತ್ವಿಕ ಆಹಾರ.
ಕಟ್ವಮ್ಲಲವಣಾತ್ಯುಷ್ಣತೀಕ್ಷ್ಣರೂಕ್ಷವಿದಾಹಿನಃ ।
ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ ॥೯॥
ಕಟು ಆಮ್ಲ ಲವಣ ಅತಿ ಉಷ್ಣ ತೀಕ್ಷ್ಣ ರೂಕ್ಷ ವಿದಾಹಿನಃ ।
ಆಹಾರಾಃ ರಾಜಸಸ್ಯ ಇಷ್ಟಾ ದುಃಖ ಶೋಕ ಆಮಯ ಪ್ರದಾಃ –ಇವು ರಾಜಸರಿಗೆ ಮೆಚ್ಚಿಕೆಯಾದ ತಿನಿಸುಗಳು: ಅತಿಯಾದ ಖಾರ, ಹುಳಿ, ಉಪ್ಪು, ತುಂಬ ಬಿಸಿ, ಬಿರುಸು, ನೀರಸ ಮತ್ತು ಉರಿಬರಿಸುವಂಥವು; ದುಃಖ-ದುಮ್ಮಾನ ಮತ್ತು ಖಾಯಿಲೆ ಬರಿಸುವಂಥವು.
ಇಲ್ಲಿ ರಾಜಸ ಆಹಾರದ ವಿವರಣೆಯನ್ನು ಕೃಷ್ಣ ಕೊಟ್ಟಿದ್ದಾನೆ. ವಿಪರೀತ ಖಾರ, ವಿಪರೀತ ಹುಳಿ, ಅತಿ ಉಪ್ಪು, ರಾಜಸ ಆಹಾರವೆನಿಸುತ್ತದೆ. ಅತಿಯಾದ ಬಿಸಿಯನ್ನು ಕುಡಿಯುವುದು; ಬಿರುಸು ಮತ್ತು ನೀರಸವಾದ ಆಹಾರವನ್ನು ಸೇವಿಸುವುದು; ಎದೆ ಸುಡುವ ಆಹಾರ ಸೇವನೆ-ಇವು ರಾಜಸರ ಲಕ್ಷಣವಾಗಿರುತ್ತದೆ. ಈ ಆಹಾರ ಸೇವನೆಯಿಂದ ಮಾನಸಿಕ ಮತ್ತು ದೈಹಿಕ ವೇದನೆ ಹೆಚ್ಚುತ್ತದೆ. ಇದು ಖಾಯಿಲೆಯನ್ನು ತರಬಲ್ಲ ಆಹಾರ.
ಹಸಿಮೆಣಸಿನ ಕಾಯಿಯನ್ನು ನೇರವಾಗಿ ತಿನ್ನುವುದು, ಹುಣಸೇ ಹಣ್ಣನ್ನು ಅತಿಯಾಗಿ ತಿನ್ನುವುದು, ಯಾವಾಗಲೂ ಹೆಚ್ಚು ಉಪ್ಪನ್ನು ಬಳಸುವುದು, ಗಂಟಲು ಸುಡುವ ಕಾಫಿ ಕುಡಿಯುವುದು, ಅತಿಯಾಗಿ ಸಾಸಿವೆ ಮತ್ತು ಮಸಾಲೆ ಬಳಸುವುದು, ರಸವಿಲ್ಲದ ಆಹಾರ(Ex:Chewing gum) ಸೇವನೆ; ಇತ್ಯಾದಿ ರಾಜಸರ ಆಹಾರ ಕ್ರಮಕ್ಕೆ ಕೆಲವು ಉದಾಹರಣೆಗಳು.[ಒಂದು ವೇಳೆ ಇಲ್ಲಿ ಹೇಳಿದ ಈ ಆಹಾರವನ್ನು ರೋಗ ಪರಿಹಾರಕ್ಕಾಗಿ ವೈದ್ಯರು ಸೂಚಿಸಿದ್ದರೆ ಅದು ಸಾತ್ವಿಕ ಆಹಾರವೆನಿಸುತ್ತದೆ].
ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ ।
ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಮ್ ॥೧೦॥
ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ ।
ಉಚ್ಛಿಷ್ಟಮ್ ಅಪಿ ಚ ಅಮೇಧ್ಯಂ ಭೋಜನಂ ತಾಮಸ ಪ್ರಿಯಮ್ – ಇದು ತಾಮಸರಿಗೆ ಮೆಚ್ಚಿನ ತಿನಿಸು: ಅಟ್ಟು ಜಾವ ಕಳೆದದ್ದು, ರುಚಿ ಕಳೆದುಕೊಂಡದ್ದು, ಹಳಸಿದ್ದು, ತಂಗಳಾದದ್ದು, ಎಂಜಲು ಮತ್ತು ಕೊಳಕಾದದ್ದು.
ತಾಮಸರಿಗೆ ಜೀವನದಲ್ಲಿ ಅತಿದೊಡ್ಡ ಸಂಗತಿ ಎಂದರೆ ಭೋಜನ. ಇವರು ಆಹಾರವನ್ನು ದೇವರಿಗೆ ಸಮರ್ಪಿಸದೆ ಸೇವನೆ ಮಾಡುತ್ತಾರೆ. ನೀರಸವಾದ, ಹಳಸಿದ, ವಾಸನೆ ಬರುವ, ರುಚಿಗೆಟ್ಟ ಆಹಾರ ತಾಮಸರಿಗೆ ಇಷ್ಟ. ಇವರು ಎಂಜಲು ಊಟವನ್ನು ಇಷ್ಟಪಡುತ್ತಾರೆ. [ಉದಾಹರಣೆಗೆ ಒಂದೇ ತಟ್ಟೆಯಲ್ಲಿ ಅನೇಕ ಮಂದಿ ಎಂಜಲು ಹಂಚಿಕೊಂಡು ತಿನ್ನುವುದು].
ಹೀಗೆ ಆಹಾರದಿಂದ ಹೇಗೆ ವ್ಯಕ್ತಿಯನ್ನು ಗುರುತಿಸಬಹುದು ಎನ್ನುವ ವಿಧಾನವನ್ನು ವಿವರಿಸಿದ ಕೃಷ್ಣ, ಮುಂದೆ ನಮ್ಮ ಆಚಾರದಿಂದ(ಯಜ್ಞ, ತಪಸ್ಸು, ದಾನ) ವ್ಯಕ್ತಿಯ ಸ್ವಭಾವವನ್ನು ಅರಿಯುವ ವಿಧಾನವನ್ನು ವಿವರಿಸುತ್ತಾನೆ.
No comments:
Post a Comment