Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, April 22, 2011

Bhagavad Gita Kannada Chapter-04 Shloka 21-23


ನಿರಾಶೀರ್ಯತಚಿತ್ತಾತ್ಮಾತ್ಯಕ್ತಸರ್ವಪರಿಗ್ರಹಃ            ।
ಶಾರೀರಂ ಕೇವಲಂ ಕರ್ಮ ಕುರ್ವನ್ ನಾSಪ್ನೋತಿ ಕಿಲ್ಬಿಷಮ್           ॥೨೧॥

ನಿರಾಶೀಃ ಯತ ಚಿತ್ತ ಆತ್ಮಾ ತ್ಯಕ್ತ ಸರ್ವ ಪರಿಗ್ರಹಃ |
ಶಾರೀರಮ್  ಕೇವಲಮ್  ಕರ್ಮ ಕುರ್ವನ್ ನ ಆಪ್ನೋತಿ ಕಿಲ್ಬಿಷಮ್ -- ಮನಸ್ಸು-ಚಿತ್ತಗಳನ್ನು ಹದ್ದಿನಲ್ಲಿರಿಸಿದಾಗ ಹಂಬಲ ದೂರವಾಗುತ್ತದೆ. ನಾನು-ನನ್ನದು ಎಂಬ ಭಾವ ಮರೆಯಾಗುತ್ತದೆ. ದೇಹ ಪೋಷಣೆಗಷ್ಟೆ ಕರ್ಮ ಮಾಡಿದರೂ ದೋಷ ತಟ್ಟುವುದಿಲ್ಲ.

ನಿತ್ಯತೃಪ್ತರಾಗಿರಬೇಕು ಅನ್ನುವ ಆಸೆ ಇದೆ ಆದರೆ ಅದನ್ನು ರೂಢಿಸಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಇಲ್ಲಿ ಕೃಷ್ಣ ಉತ್ತರಿಸುತ್ತಾನೆ. ಲೌಕಿಕ ಆಸೆ ಇದ್ದಾಗ ಅತೃಪ್ತಿ ತಪ್ಪಿದ್ದಲ್ಲ. ಇಲ್ಲದ್ದನ್ನು ಬಯಸಿ ಎಂದೂ ಸುಖ ಸಿಗುವುದಿಲ್ಲ. ತೃಪ್ತಿ ಇರಬೇಕಾದರೆ ಮೊದಲು ಬೇಕು ಬೇಡಗಳ ಪಟ್ಟಿಯನ್ನು ಕಡಿಮೆ ಮಾಡಬೇಕು. ಮೊದಲು  'ಯತಚಿತ್ತನಾಗು' ಅದರಿಂದ ನಿರಾಶಿಯಾಗು (be content with whatever you have ) ಎನ್ನುತ್ತಾನೆ ಕೃಷ್ಣ.  ಮೊದಲು  ನಾವು  ನಮ್ಮ  ಚಿತ್ತವನ್ನು  ಮತ್ತು  ಮನಸ್ಸನ್ನು  ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲಿ ಚಿತ್ತ ಎಂದರೆ ನಮ್ಮ ಹಿಂದಿನ ನೆನಪುಗಳು(Memory). ಹಿಂದೆ ಮೂಡಿದ ಆಸೆಗಳ ನೆನಪಿನಕೋಶ-ಚಿತ್ತ. ಚಿತ್ತದಲ್ಲಿ ಆಸೆ ನಿರಾಸೆಗಳ ಕಂತೆ ತುಂಬಿರುತ್ತದೆ. ಮೊದಲು ಹಿಂದಿನ ಆಸೆಗಳು ಮರುಕಳಿಸದಂತೆ ನೋಡಿಕೊ. ಭೂತಕಾಲವನ್ನು ಮತ್ತೆ ಕೆದುಕಬೇಡ. ಅದನ್ನು ಪೂರ್ತಿ ಬಿಟ್ಟುಬಿಡು ಹಾಗು ಮನಸ್ಸು ವರ್ತಮಾನ ಕಾಲದಲ್ಲಿ ಬೇಕು ಬೇಡಗಳೆಡೆಗೆ  ಹರಿಯದಂತೆ ನಿಯಂತ್ರಣ ಮಾಡು. ಈ ರೀತಿ ನಾವು ರೂಢಿ ಮಾಡಿಕೊಂಡರೆ ಇದರಿಂದ ತೃಪ್ತರಾಗಿರಲು ಸಾಧ್ಯ. 
ಹೀಗೆ ತೃಪ್ತಿಯನ್ನು ಸಾಧಿಸಿದ ನಂತರ ಅದರ ಜೊತೆಗೆ ಆತ್ಮಾ ತ್ಯಕ್ತ ಸರ್ವ ಪರಿಗ್ರಹಃ. ಇಲ್ಲಿ ಪರಿಗ್ರಹ ಎಂದರೆ ಸಂಸಾರ, ಕುಟುಂಬ, ಎಲ್ಲವನ್ನು ಬಿಟ್ಟು ಕಾಡಿಗೆ ಹೋಗುವುದಲ್ಲ. ಎಲ್ಲವುದರ ಜೊತೆಗೆ ಇದ್ದೂ ಅದರ ಮೇಲಿನ ಅತೀವ ಮೋಹ(Over attachment)ವನ್ನು ಬಿಟ್ಟುಬಿಡುವುದು. ಅಭಿಮಾನ ತ್ಯಾಗ (Detached  attachment)ಮಾಡುವುದು. ಎಲ್ಲವೂ ಇರಲಿ ಆದರೆ ಅದನ್ನೇ ಹಚ್ಚಿಕೊಂಡು ಅದರಲ್ಲೇ ಮುಳುಗಬೇಡ. ಅದರೊಂದಿಗೆ ಬದುಕು- ಆದರೆ ಅಂಟಿಸಿಕೊಳ್ಳಬೇಡ. ತಾವರೆಯ ಎಲೆ ಹೇಗೆ ನೀರಿನಲ್ಲೇ ಇದ್ದು  ನೀರನ್ನು ಅಂಟಿಸಿಕೊಳ್ಳುವುದಿಲ್ಲವೋ  ಹಾಗೆ.  ಹೀಗೆ ಇದ್ದಾಗ ನಾವು ಎಲ್ಲಾ ಮಾಡಿದರೂ ಏನೂ ಮಾಡುವುದಿಲ್ಲ. ಏಕೆಂದರೆ ಅರಿವಿನಿಂದ ಮಾಡಿದಾಗ ಕರ್ಮದ ಲೇಪವಿಲ್ಲ. ನಾವು ಅಂಟಿಸಿಕೊಳ್ಳದೆ  ಬದುಕಲು ಕಲಿತರೆ ಕರ್ಮ ಕೂಡಾ ನಮಗೆ ಅಂಟುವುದಿಲ್ಲ. ಶರೀರ ನಿರ್ವಹಣೆಗೆ ಬೇಕಾದ ಕರ್ಮವನ್ನು ಮಾನಸಿಕವಾಗಿ ಅಂಟಿಸಿಕೊಳ್ಳದೆ, ಬಡಾಯಿ ಇಲ್ಲದೆ ಕರ್ಮ ನಿರ್ವಹಿಸು. ಆಗ ಕರ್ಮದ ಕೊಳೆ ನಿನಗಂಟುವುದಿಲ್ಲ ಎನ್ನುತ್ತಾನೆ ಕೃಷ್ಣ.    

ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ    ।
ಸಮಃ ಸಿದ್ಧಾವಸಿದ್ಧೌ ಚ ಕೃತ್ವಾSಪಿ ನ ನಿಬದ್ಧ್ಯತೇ                 ॥೨೨॥

ಯದೃಚ್ಛಾ ಲಾಭ ಸಂತುಷ್ಟಃ  ದ್ವಂದ್ವ ಅತೀತಃ ವಿಮತ್ಸರಃ |
ಸಮಃ ಸಿದ್ಧೌ ಅಸಿದ್ಧೌ ಚ ಕೃತ್ವಾ ಅಪಿ ನ ನಿಬಧ್ಯತೇ -- ತಾನಾಗಿಯೇ ಸಿಕ್ಕಿದ್ದರಲ್ಲಿ ಸಂತಸಪಡುವವನು, ಬದುಕಿನ ಇಬ್ಬಂದಿತನವನ್ನು ಮೀರಿನಿಂತವನು, ಹೆರವರ ಏಳಿಗೆಗೆ ಕಿಚ್ಚುಪಡದವನು, ಗಳಿಕೆಯನ್ನೂ ಕಲಿಕೆಯನ್ನೂ ಒಂದೇ ಬಗೆಯಿಂದ ಕಾಣುವವನು ಕರ್ಮ ಮಾಡಿದರೂ ಅದರ ಸೆರೆಗೆ ಸಿಕ್ಕುವುದಿಲ್ಲ.

ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿ ಬಂದಾಗ ಕಾಣುವ ಮುಖ್ಯ ಲಕ್ಷಣದ ಬಗ್ಗೆ ಇಲ್ಲಿ ವಿವರಣೆ ಇದೆ.  ತೃಪ್ತಿಯನ್ನು ಸಾಧಿಸಿದವನಿಗೆ ಏನಾದರೂ ಸಿಕ್ಕಿದರೆ ಅದರಲ್ಲೇ ಸಂತೋಷವಾಗಿರುತ್ತಾನೆ. ಸಿಕ್ಕಿದ್ದು ಸಾಲದೆಂದಾಗಲಿ, ಇನ್ನೇನೋ ಸಿಗಲಿ ಎಂದಾಗಲಿ ಆತನ ಮನಸ್ಸು ಬಯಸುವುದಿಲ್ಲ. ಏಕೆಂದರೆ ನಮಗೆ ಏನೇ ಸಿಕ್ಕಿದರೂ ಅದು ಭಗವಂತನ ಇಚ್ಛೆಯಿಂದ ಸಿಕ್ಕಿರುವುದು. ಉದಾಹರಣೆಗೆ ಉದ್ಯೋಗ. ಪ್ರತಿಭೆ ಇದ್ದವರಿಗೆಲ್ಲಾ ಉದ್ಯೋಗ ಸಿಗುವುದಿಲ್ಲ. ಉದ್ಯೋಗ ಸಿಗುವುದು, ಅದರಿಂದ ಸಂಬಳ ಸಿಗುವುದು- ಎಲ್ಲವೂ ಭಗವಂತನ ಇಚ್ಛೆಯಂತೆ. ಆದ್ದರಿಂದ ಎಲ್ಲವೂ ಭಗವಂತನ ಸಂಕಲ್ಪ ಎಂದು ತಿಳಿದು ನಿಸ್ವಾರ್ಥ ಕರ್ಮದಲ್ಲಿ ತೊಡಗಿದಾಗ ಮನಸ್ಸು ನಿರ್ಮಲವಾಗುತ್ತದೆ. ಈ ಸ್ಥಿತಿಯಲ್ಲಿ ಅಹಂಕಾರ ಎಂದೂ ಹತ್ತಿರ ಸುಳಿಯುವುದಿಲ್ಲ. ಬಡತನವಾಗಲಿ, ಸಿರಿತನವಾಗಲಿ, ನಾವು ಹುಟ್ಟುವ ಮನೆಯಾಗಲಿ, ಯಾವುದೂ ನಮ್ಮ ಕೈಯಲ್ಲಿಲ್ಲ. ಎಲ್ಲವೂ ಆ ಈಶ್ವರ ಇಚ್ಛೆ. ಇದನ್ನು  ತಿಳಿದು ಬದುಕುವುದು ಯತಚಿತ್ತಾತ್ಮನ ಗುರುತು.
ಇನ್ನು ಎರಡನೆ ಲಕ್ಷಣ 'ದ್ವಂದ್ವಾತೀತ ಜೀವನ'. ನಮ್ಮ ಜೀವನ ಎಂದರೆ ದ್ವಂದ್ವ. ಹಗಲು-ರಾತ್ರಿ, ಲಾಭ-ನಷ್ಟ, ಸೋಲು-ಗೆಲುವು, ಹುಟ್ಟು-ಸಾವು ಹೀಗೆ ಎಲ್ಲವೂ ದ್ವಂದ್ವ. ನಾವು ಈ ದ್ವಂದ್ವದ ನಡುವೆಯೇ ಬದುಕಬೇಕು. ಹಗಲು-ರಾತ್ರಿಗೆ ನಾವು ಹೇಗೆ ಹೊಂದಿಕೊಂಡು ಬದುಕುತ್ತೇವೆ ಹಾಗೆ 'ಇತರ ದ್ವಂದ್ವದ ಆಘಾತಕ್ಕೆ ಒಳಗಾಗದೆ ಬದುಕಲು ಕಲಿಎನ್ನುತ್ತಾನೆ ಕೃಷ್ಣ. ಸಿಗದಿದ್ದಾಗ ದುಃಖವಿಲ್ಲ, ಸಿಕ್ಕಾಗ ಹಾರಾಟವಿಲ್ಲ. ಎರಡೂ ಸ್ಥಿತಿಯಲ್ಲಿ ಏಕರೂಪವಾದ ಮನಃಸ್ಥಿತಿಯನ್ನು ಗಳಿಸುವುದು ದ್ವಂದ್ವಾತೀತ ಜೀವನ.
ದ್ವಂದ್ವಾತೀತನಾಗಿ ಬದುಕುವಾಗ ಒಂದು  ಸಮಸ್ಯೆ ಎದುರಾಗುತ್ತದೆ. ಇದ್ದದ್ದು ಸಾಕು ಎಂದು ಬದುಕುತ್ತಿರುವಾಗ ನಮ್ಮ ಜೊತೆಗಿನ ಇನ್ನೊಬ್ಬ ಹೆಚ್ಚು ಗಳಿಸಲಾರಂಬಿಸಿದರೆ, ಅದನ್ನು ನೋಡಿ ನಮಗೆ ಕಿಚ್ಚು ಹುಟ್ಟಿಕೊಳ್ಳುತ್ತದೆ. ನಮ್ಮ ಕೆಳಗಿನ ಮಟ್ಟದವರು, ನಮ್ಮ ಪಕ್ಕದ ಮನೆಯವರು  ಯಾವುದೋ ಕಾರಣಕ್ಕೆ ಶ್ರೀಮಂತರಾದರೆ ನಮಗೆ ಸಂಕಟ! ಇಲ್ಲಿ ಕೃಷ್ಣ ಹೇಳುತ್ತಾನೆ "ಇನ್ನೊಬ್ಬರನ್ನು ಕಂಡು ಎಂದೂ ಕಿಚ್ಚು ಪಡಬೇಡ" ಎಂದು. ಯಾರ್ಯಾರಿಗೆ ಎಷ್ಟೆಷ್ಟು ಸಿಗಬೇಕೋ ಅಷ್ಟಷ್ಟೇ ಸಿಗುವುದು. ನಾವು ಎಷ್ಟು ಕೌಶಲ್ಯ(expertise)ರಾದರೂ ಕೂಡಾ ಭಗವಂತ ಅನುಗ್ರಹಿಸದೇ ಇದ್ದರೆ ನಾವು ಮೇಲಕ್ಕೇಳಲು ಸಾಧ್ಯವಿಲ್ಲ. ಈ ಎಚ್ಚರವೇ  "ಯದೃಚ್ಛಾ ಲಾಭ ಸಂತುಷ್ಟಃ"
ಇನ್ನು ಸಿದ್ಧಿ ಅಸಿದ್ಧಿಗಳು. ಉದಾಹರಣೆಗೆ ಧ್ಯಾನ(Meditation): ಧ್ಯಾನದಲ್ಲಿ ಏಕಾಗ್ರತೆ ಪಡೆಯಲು ಆಗದೆ ಇನ್ನೇನೋ ಕಾಣಿಸಿದರೆ ಏನು ಕಾಣಿಸಿತೋ ಅದರಲ್ಲೇ ಭಗವಂತನನ್ನು ಕಾಣು. ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡ. ಏಕಾಗ್ರತೆ ಸಾಧ್ಯವಾದರೆ ಭ್ರಮೆಗೊಳಗಾಗಬೇಡ. ಏಕೆಂದರೆ ಸಿದ್ಧಿ-ಅಸಿದ್ಧಿಗಳು ನಮ್ಮ ಕೈಯಲ್ಲಿಲ್ಲ. ಅಸಿದ್ಧಿಯೂ ಸಿದ್ಧಿಯ ಮೆಟ್ಟಿಲು. ಇಂತಹ ಮಾನಸಿಕ ಸಮತೋಲನ ಲೌಕಿಕ ಮತ್ತು ಅಧ್ಯಾತ್ಮಿಕ ಜೀವನದಲ್ಲಿ ಅತಿಮುಖ್ಯ. ಇಂತಹ ಸ್ಥಿತಿಯಲ್ಲಿ ಕರ್ಮ ಎಂದೂ ಬಂಧಕವಾಗುವುದಿಲ್ಲ.  

ಗತ ಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ   ।
ಯಜ್ಞಾಯಾSಚರತಃ ಕರ್ಮ ಸಮಗ್ರಂ ಪ್ರವಿಲೀಯತೇ          ॥೨೩॥

ಗತ ಸಂಗಸ್ಯ ಮುಕ್ತಸ್ಯ ಜ್ಞಾನ ಅವಸ್ಥಿತ ಚೇತಸಃ |
ಯಜ್ಞಾಯ ಆಚರತಃ ಕರ್ಮ ಸಮಗ್ರಮ್  ಪ್ರವಿಲೀಯತೇ -ಫಲದ ನಂಟು ತೊರೆದು, ದೇಹಾಭಿಮಾನ ತೊರೆದು, ಭಗವಂತನ ಅರಿವಿನಲ್ಲೆ ಬಗೆನೆಟ್ಟು, ಪೂಜೆಯೆಂದು ಮಾಡುವವನ ಎಲ್ಲಾ ಕರ್ಮ ಲಯಗೊಳ್ಳುತ್ತದೆ.

ಈ ಶ್ಲೋಕದಲ್ಲಿ ಮೇಲೆ ಹೇಳಿದ ಎಲ್ಲಾ ವಿಷಯವನ್ನು ಉಪಸಂಹಾರ ರೂಪದಲ್ಲಿ ಭಗವಂತ ನಮ್ಮ ಮುಂದಿಟ್ಟಿದ್ದಾನೆ.
ಫಲದ ಬಗ್ಗೆ ಅತಿಯಾದ ಆಸೆ ಇಟ್ಟುಕೊಳ್ಳಬೇಡ; ಅತಿಯಾದ ನಿರೀಕ್ಷೆ ಬೇಡ; ಕರ್ತವ್ಯ ನಿಷ್ಠೆ ಇರಲಿ; ದೇಹಾಭಿಮಾನ, ಪರಿವಾರದ ಅಭಿಮಾನವನ್ನು ತೊರೆದು ನಿರ್ಲಿಪ್ತನಾಗಿ ಬದುಕಲು ಕಲಿ; ಮನಸ್ಸನ್ನು ಜ್ಞಾನಸ್ವರೂಪನಾದ ಭಗವಂತ(ಚೇತಸ್ಸು)ನಲ್ಲಿ ನೆಲೆಗೊಳಿಸು. ಹೀಗೆ ಬದುಕಿದಾಗ ನಾವು ಮಾಡುವ ಕರ್ಮವೆಲ್ಲವೂ ಯಜ್ಞವಾಗಿ ಯಜ್ಞ ನಾಮಕ ಭಗವಂತನನ್ನು ಸೇರುತ್ತದೆ ಹಾಗು  ಜ್ಞಾನದ ಬೆಂಕಿಯಲ್ಲಿ ಕರ್ಮದ ಕೊಳೆ ಸುಟ್ಟುಹೋಗುತ್ತದೆ.

No comments:

Post a Comment