Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, April 26, 2011

Bhagavad Gita Chapter-05 Shloka 4-7

ಸಾಂಖ್ಯಯೋಗೌ ಪೃಥಗ್ ಬಾಲಾಃ ಪ್ರವದದಂತಿ  ನ ಪಂಡಿತಾಃ
ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಮ್

ಸಾಂಖ್ಯ ಯೋಗೌ ಪೃಥಕ್  ಬಾಲಾಃ ಪ್ರವದಂತಿ  ನ ಪಂಡಿತಾಃ
ಏಕಮ್ ಅಪಿ ಅಸ್ಥಿತಃ ಸಮ್ಯಕ್  ಉಭಯೋಃ ವಿಂದತೇ ಫಲಮ್- ಜ್ಞಾನ ಮತ್ತು ಕರ್ಮದ ದಾರಿ ಬೇರೆ ಬೇರೆ [ಒಂದು ಸಂನ್ಯಾಸಿಗಳಿಗೆ ಹಾಗು ಇನ್ನೊಂದು ಸಂಸಾರಿಗಳಿಗೆ] ಎಂದು ನುಡಿದವರು ಬಾಲಿಷರು[ತಿಳಿಗೇಡಿಗಳು]; ತಿಳಿದವರಲ್ಲ. ಯಾವುದೋ ಒಂದು ದಾರಿಯಲ್ಲಿ ಸರಿಯಾಗಿ ನಡೆದವನು ಎರಡರ ಫಲವನ್ನೂ ಪಡೆಯುತ್ತಾನೆ.

ಹಿಂದೆ ಕರ್ಮಸಂನ್ಯಾಸ  ಮತ್ತು ಕರ್ಮಯೋಗವನ್ನು ವಿವರಿಸಿದಂತೆ ಕೃಷ್ಣ ಇಲ್ಲಿ ಸಾಖ್ಯವನ್ನು(ಜ್ಞಾನ-Spiritual Wisdom) ಮತ್ತು ಯೋಗವನ್ನು(ಅನುಷ್ಠಾನ-Spiritual Practice) ವಿವರಿಸುತ್ತಾನೆ. ಶಾಸ್ತ್ರದಲ್ಲಿ ಸಾಂಖ್ಯ(ಸಮ್ಯಕ್ ಖ್ಯಾತಿ) ಎಂದರೆ ಗಣಿತವಲ್ಲ, ಅದು  ಶುದ್ಧ ಆತ್ಮತತ್ವವಿಜ್ಞಾನ-ಭಗವಂತನ ಜ್ಞಾನ. ಯಾರ ಅಂಕೆಯಲ್ಲಿ ಈ ಇಡೀ ಜಗತ್ತು ನಡೆಯುತ್ತಿದೆಯೋ ಅವನ ಅರಿವು. ಇದನ್ನು ತಿಳಿಯದೇ ಇರುವವರನ್ನು ಕೃಷ್ಣ ಬಾಲಿಷರು ಹಾಗು ಅಂತವರ ಮಾತಿಗೆ ಮೂಲ ಆಧಾರ ಎನ್ನುವುದಿಲ್ಲ ಎನ್ನುತ್ತಾನೆ. ಇಷ್ಟು ಹೇಳಿ ಕೃಷ್ಣ ಹೇಳುತ್ತಾನೆ "ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಮ್" ಎಂದು.  ಅಂದರೆ ಯಾವುದೇ ಒಂದನ್ನು ನೀನು ಚೆನ್ನಾಗಿ ಆಚರಣೆಗೆ ತಂದರೆ ಎರಡರ ಫಲವನ್ನೂ ಪಡೆಯುತ್ತಿ ಎಂದರ್ಥ. ಇಲ್ಲಿ ಪುನಃ ನಮಗೆ ಗೊಂದಲವಾಗಬಹುದು. ಇದರರ್ಥ ಜ್ಞಾನವನ್ನು ಮಾತ್ರ ಅಥವಾ ಕರ್ಮವನ್ನು ಮಾತ್ರ ಆಚರಣೆ ಮಾಡುವುದು ಎಂದಲ್ಲ. ನಾವು ಕರ್ಮವನ್ನು ಚನ್ನಾಗಿ ಮಾಡುವದು ಎಂದರೆ ತಿಳಿದು ಜ್ಞಾನಪೂರ್ವಕವಾಗಿ ಮಾಡುವದು, ಅದೇ ರೀತಿ ಜ್ಞಾನ ಚನ್ನಾಗಿರುವುದು ಎಂದರೆ ತಿಳಿದಿದ್ದನ್ನು ಅನುಷ್ಠಾನಗೊಳಿಸುವುದು. ಆದ್ದರಿಂದ ಒಂದು 'ಜ್ಞಾನಪ್ರಧಾನ' ಇನ್ನೊಂದು 'ಕರ್ಮ ಪ್ರಧಾನ'ವಾಗಿರಬಹುದು ಆದರೆ ಒಂದು ಇನ್ನೊಂದಕ್ಕೆ ಪೂರಕ. ಯಾರು ಇದನ್ನು ತಿಳಿದಿದ್ದಾರೆ ಅವರು ಪಂಡಿತರು ಹಾಗು ಅವರು ನಿಜವಾದ ಫಲವನ್ನೂ ಪಡೆಯುತ್ತಾರೆ.                 
 
ಯತ್  ಸಂಖ್ಯೈಃ ಪ್ರಾಪ್ಯತೇ ಸ್ಥಾನಂ ತದ್ ಯೊಗೈರಪಿ ಗಮ್ಯತೇ
ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ          

ಯತ್  ಸಂಖ್ಯೈಃ ಪ್ರಾಪ್ಯತೇ ಸ್ಥಾನಮ್  ತತ್  ಯೋಗ್ಯೆಃ  ಅಪಿ ಗಮ್ಯತೇ
ಏಕಮ್  ಸಾಂಖ್ಯಮ್  ಚ ಯೋಗಮ್  ಚ ಯಃ ಪಶ್ಯತಿ ಸಃ  ಪಶ್ಯತಿ-ಜ್ಞಾನ ಯೋಗಿಗಳು ಪಡೆಯುವ ತಾಣದೆಡೆ ಕರ್ಮ ಯೋಗಿಗಳೂ ನಡೆಯುತ್ತಾರೆ. ಜ್ಞಾನ ಮತ್ತು ಕರ್ಮದ ದಾರಿಗಳ ಗುರಿ ಒಂದೆ ಎಂದು ತಿಳಿದವನೆ ನಿಜವಾಗಿ ತಿಳಿದವನು.

ಜ್ಞಾನಿಗಳು ತಮಗೋಸ್ಕರ ಅಲ್ಲದೆ ಲೋಕಕ್ಕೆ ಮಾರ್ಗದರ್ಶನ ಮಾಡುವ ಸಲುವಾಗಿಯೂ ಕರ್ಮ ಮಾಡಬೇಕಾಗುತ್ತದೆ. ಏಕೆಂದರೆ ಸಮಾಜ ಅವರನ್ನು ಅನುಸರಿಸುತ್ತದೆ. ಇದು ಅವರ ಮೇಲಿರುವ ಸಾಮಾಜಿಕ ಜವಾಬ್ದಾರಿ. ಆದ್ದರಿಂದ ಜ್ಞಾನ ಮತ್ತು ಕರ್ಮ ಒಂದಕ್ಕೊಂದು ಪೂರಕ. ಜ್ಞಾನಪ್ರದ ಮತ್ತು ಕರ್ಮಪ್ರದ ಈ ಮಾರ್ಗದ ಗುರಿ ಒಂದೆ. ಜ್ಞಾನಪ್ರಧಾನವಾಗಿ ಕರ್ಮ ಮಾಡುವ ಋಷಿಗಳು, ದೇವತೆಗಳು, ಮತ್ತು ಕರ್ಮಪ್ರಧಾನವಾಗಿ ಜ್ಞಾನದಿಂದ ಕರ್ಮಮಾಡುವವರು ಸೇರುವ ಗುರಿ ಒಂದೆ-ಅದು ಆ ಭಗವಂತನನ್ನು. ಇಲ್ಲಿ ಕರ್ಮಸಂನ್ಯಾಸವೇ ಬೇರೆ ಮತ್ತು ಕರ್ಮಯೋಗವೇ ಬೇರೆ ಎನ್ನುವುದು ಅರ್ಥ ಶೂನ್ಯ. ಇವೆರಡೂ ಒಂದಕ್ಕೊಂದು ಪೂರಕ.  ಯಾರು ಈ ಸತ್ಯವನ್ನು ತಿಳಿಯುತ್ತಾರೋ ಅವರು'ತಿಳಿದವರು'     

ಸಂನ್ಯಾಸಸ್ತು ಮಹಾಬಾಹೋ ದುಃಖಮಾಪ್ತುಮಯೋಗತಃ       
ಯೋಗಯುಕ್ತೋ ಮುನಿರ್ಬ್ರಹ್ಮನ ಚಿರೇಣಾಧಿಗಚ್ಛತಿ     

ಸಂನ್ಯಾಸಃ ತು  ಮಹಾಬಾಹೋ ದುಃಖಮ್ ಆಪ್ತುಮ್ ಅಯೋಗತಃ       
ಯೋಗ ಯುಕ್ತಃ ಮುನಿಃ ಬ್ರಹ್ಮ ನ ಚಿರೇಣ ಅಧಿಗಚ್ಛತಿ-ಓ ಮಹಾವೀರ,ಕರ್ಮಯೋಗವಿರದ ಬರಿಯ ಸಂನ್ಯಾಸ [ದ್ವಂದ್ವ ತ್ಯಾಗ] ಬನ್ನವನ್ನೇ ತಂದೀತು.[ಭಗವಂತನ ಪೂಜೆಯೆಂದು ಕರ್ಮ ಮಾಡುವ ಬದಲು ಕರ್ಮವನ್ನೇ ತೊರೆಯುವುದು ನರಕದ ದಾರಿ]. ಕರ್ಮ ಮಾಡುತ್ತ ದ್ವಂದ್ವವನ್ನು ಗೆದ್ದವನು ಭಗವಂತನನ್ನು ಪಡೆಯಲು ತಡವಾಗದು.

ಕರ್ಮಯೋಗವಿಲ್ಲದ   ಬರಿಯ ದ್ವಂದ್ವತ್ಯಾಗ [ಸಂನ್ಯಾಸ] ವ್ಯರ್ಥ.ಶಾಸ್ತ್ರವನ್ನು ಓದಿ ನನಗೆ ಜ್ಞಾನ ಬಂತು, ನಾನು ದ್ವಂದ್ವಾತೀತ, ನನಗೆ ಯಾವ ಕರ್ಮವೂ ಬೇಕಾಗಿಲ್ಲ ಎಂದು ತಿಳಿದು ನಿಷ್ಕ್ರೀಯನಾದರೆ ಅದು ನಮ್ಮನ್ನು ಅದೋಗತಿಗೆ ತಳ್ಳುತ್ತದೆ. ಆದರೆ ದ್ವಂದ್ವಾತೀತನಾಗಿ ಕಾಮಕ್ರೋಧವನ್ನು ಗೆದ್ದು  ಜ್ಞಾನಪೂರ್ವಕವಾಗಿ ಕರ್ಮ ಮಾಡಿದರೆ ಅದರಿಂದ ಮೋಕ್ಷ ನಿಶ್ಚಿತ.   

ಯೋಗಯುಕ್ತೋ ವಿಶುದ್ಧಾತ್ಮಾ ವಿಜಿತಾತ್ಮಾ ಜಿತೇಂದ್ರಿಯಃ        
ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಪಿ ನ ಲಿಪ್ಯತೇ   

ಯೋಗಯುಕ್ತಃ ವಿಶುದ್ಧ ಆತ್ಮಾ ವಿಜಿತ ಆತ್ಮಾ ಜಿತ ಇಂದ್ರಿಯಃ        
ಸರ್ವ ಭೂತ ಆತ್ಮಭೂತ ಆತ್ಮಾ ಕುರ್ವನ್ ಅಪಿ ನ ಲಿಪ್ಯತೇ-ಕರ್ಮ ಯೋಗದಲ್ಲಿ ತೊಡಗಿದವನು, ತಿಳಿಯಾದ ಬಗೆಯವನು, ಬಗೆಯ ಗೆದ್ದವನು. ಇಂದ್ರಿಯಗಳನ್ನೂ ಗೆದ್ದವನು. ಎಲ್ಲಾ ಜೀವಿಗಳನ್ನು ಪೊರೆವ ಭಗವಂತ ತನ್ನ ದೊರೆಯೆಂದು ತಿಳಿದವನು.[ಭಗವಂತನಲ್ಲೆ ಬಗೆ ನೆಟ್ಟವನು]. ಮಾಡಿದರೂ ಅಂಟಿಸಿಕೊಳ್ಳುವುದಿಲ್ಲ.

ಕರ್ಮಯೋಗದಲ್ಲಿ ತೊಡಗಿದವನು ತನ್ನ  ಮನೋನಿಗ್ರಹ ಮಾಡಿ ಶುದ್ಧವಾದ ಮನಸ್ಸಿನಿಂದ ಶುದ್ಧ ಕರ್ಮವನ್ನು ಮಾಡಬೇಕು. ಮನಸ್ಸನ್ನು ಗೆಲ್ಲಬೇಕಾದರೆ ಭಗವಂತನ ಒಲವು ಬೇಕು. ಮನಸ್ಸನ್ನು ಗೆದ್ದವನು ಇಂದ್ರಿಯಗಳನ್ನು ಗೆಲ್ಲುತ್ತಾನೆ-ಅದರಿಂದ ಆತ್ಮ ಶುದ್ಧಿಯಾಗುತ್ತದೆ. ಆಗ ಸರ್ವಭೂತಗಳಿಗೂ ಆತ್ಮಭೂತನಾದ ಭಗವಂತನೇ ನನ್ನ ಆತ್ಮ ಎನ್ನುವ ಅರಿವಾಗುತ್ತದೆ. ಸರ್ವಗತ, ಸರ್ವನಿಯಾಮಕ ಭಗವಂತ ನನ್ನೊಳಗೂ ಇದ್ದಾನೆ ಅವನೇ ವಿಶ್ವನಿಯಾಮಕನಾಗಿ ವಿಶ್ವದಲ್ಲಿ ತುಂಬಿದ್ದಾನೆ. ಜಗತ್ತನ್ನು ನಿಯಂತ್ರಿಸುವ ಅನಂತ ಶಕ್ತಿ ಅಣೋರ್ಣಿಯವಾಗಿ ನನ್ನ ಜೀವ ಸ್ವರೂಪದೊಳಗೂ  ತುಂಬಿದೆ ಎನ್ನುವ ಅನುಷ್ಠಾನದಿಂದ, ಸರ್ವ ಭೂತಗಳಲ್ಲಿ ಅಂತರ್ಯಾಮಿಯಾದ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಿ ಕರ್ಮ ಮಾಡಿದಾಗ ನಮಗೆ ಕರ್ಮ ಅಂಟಿಕೊಳ್ಳುವುದಿಲ್ಲ.

No comments:

Post a Comment