ಯಸ್ಯ ಸರ್ವೇ ಸಮಾರಂಭಾಃ
ಕಾಮಸಂಕಲ್ಪವರ್ಜಿತಾಃ ।
ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ
ಪಂಡಿತಂ ಬುಧಾಃ ॥೧೯॥
ಯಸ್ಯ ಸರ್ವೇ ಸಮಾರಂಭಾಃ ಕಾಮ ಸಂಕಲ್ಪವರ್ಜಿತಾಃ
ಜ್ಞಾನ ಅಗ್ನಿ ದಗ್ಧ ಕರ್ಮಾಣಮ್
ತಮ್ ಆಹುಃ ಪಂಡಿತಮ್ ಬುಧಾಃ -- ಮಾಡುವ ಬಯಕೆ, ಪಡೆಯುವ ಬಯಕೆಗಳನ್ನು ತೊರೆದು ಎಲ್ಲ ಕರ್ಮಗಳಲ್ಲು ತೊಡಗುವವನು ಅರಿವಿನ
ಬೆಂಕಿಯಿಂದ ಕರ್ಮಗಳನ್ನು ಸುಟ್ಟವನು. ಬಲ್ಲವರು ಅಂಥವನನ್ನು ಪಂಡಿತ ಎನ್ನುತ್ತಾರೆ.
ನಮ್ಮ ಜೀವನದ ತೊಡಗುವಿಕೆಯ ಹಿಂದೆ ಒಂದು ಕಾಮನೆ,ಸಂಕಲ್ಪ ಇರುತ್ತದೆ. ನಾನು ಸುಖ
ಪಡಬೇಕು,
ನನ್ನ ಮನೆಮಂದಿಯನ್ನು ಸುಖವಾಗಿಡಬೇಕು
ಎನ್ನುವ ಕಾಮನೆ. ಇದಕ್ಕಾಗಿ ಇನ್ನೇನೋ ವಿಧಾನವನ್ನು ಅನುಸರಿಸುತ್ತೇವೆ. ಇದು ಪ್ರತಿಯೊಂದು ಕ್ರಿಯೆಯ
ಹಿಂದೆ ಮನುಷ್ಯನನ್ನು ಕಾಡುವ ಸಮಸ್ಯೆ. ತನ್ನ ಬಯಕೆಯ ಈಡೇರಿಕೆಗಾಗಿ ನಮ್ಮನ್ನು ನಾವು
ತೊಡಗಿಸಿಕೊಳ್ಳುತ್ತೇವೆ. ಯಾರಿಗೆ ತನ್ನ ತೊಡಗುವಿಕೆಯಲ್ಲಿ ಬಯಕೆಗಳ ಸ್ಪರ್ಶ ಇಲ್ಲವೋ ಅವನು
ಪಂಡಿತ. ಒಬ್ಬ ಪಂಡಿತನ ಪಾಂಡಿತ್ಯವನ್ನು ಅವನ ನುಡಿಯಲ್ಲಿ ಅಲ್ಲ, ನಡೆಯಲ್ಲಿ ಕಾಣಬೇಕು.
ನಿನ್ನ ಜೀವನದಲ್ಲಿ ಹೀಗೇ ಆಗಬೇಕು, ಹೀಗೇ ಮಾಡಬೇಕು, ಅದರಿಂದ ಇಂತದ್ದು ನನಗೆ ಸಿಗಬೇಕು
ಅನ್ನುವ ಬಯಕೆ,
ಆಸೆಗಳನ್ನು ಬಿಟ್ಟು ನಿರಾಳವಾಗಿ ಕರ್ತವ್ಯ ಮಾಡು. ಭಗವಂತ ಏನು ಕೊಟ್ಟ
ಅದನ್ನು ಪ್ರಸಾದವಾಗಿ ಸ್ವೀಕರಿಸು. ಏನು ಬಂತೋ ಅದರಲ್ಲಿ ತೃಪ್ತಿಪಡುವುದನ್ನು ಕಲಿ. ಇಲ್ಲವಲ್ಲಾ
ಎಂದು ಸಂಕಟ ಪಡಬೇಡ. ಇದು 'ಕಾಮಸಂಕಲ್ಪವರ್ಜ್ಯ'. [ಏನೂ ಬೇಡ ಎಂದು ಬಯಸುವುದಲ್ಲ, ಇಂತದ್ದೇ ಬೇಕು ಎಂದು ಬಯಸದೇ
ಇರುವುದು ಕಾಮಸಂಕಲ್ಪವರ್ಜ್ಯ]. ಏನು ಬಂತೋ
ಬರಲಿ,
ನೀನು ಪ್ರಯತ್ನಶೀಲನಾಗು. ಬಂದಿದ್ದರಲ್ಲಿ ಸಂತೋಷದಿಂದ ಬದುಕು. ಇಂತಹ ಅರಿವಿನಿಂದ ಮಾಡಿದ ಕರ್ಮ ಸ್ವಚ್ಛವಾಗಿರುತ್ತದೆ. ಇದು
ಕರ್ಮದ ಕೊಳೆ ಅರಿವಿನ ಬೆಂಕಿಯಿಂದ ಸ್ವಚ್ಚವಾಗುವಿಕೆ. ಇಂತಹ ನಡೆ ಉಳ್ಳವನು ಪಂಡಿತ ಎನಿಸುತ್ತಾನೆ. ಇಂತವರನ್ನು ಜ್ಞಾನಿಗಳು ‘ಜ್ಞಾನಿಗಳೆಂದು’ ಗುರುತಿಸುತ್ತಾರೆ. ಮನುಷ್ಯ ಏನನ್ನು ಹೇಳುತ್ತಾನೆ ಅದು ಮುಖ್ಯವಲ್ಲ, ಏನನ್ನು ರೂಢಿಸಿಕೊಳ್ಳುತ್ತಾನೆ ಅದು ಮುಖ್ಯ. ಮನಸ್ಸಿನ ತುಂಬ
ಆಸೆಗಳನ್ನು ತುಂಬಿಕೊಂಡು ಯಾವುದ್ಯಾವುದೋ ಆಸೆಯ ಬೆನ್ನುಹತ್ತಿ ಸೋಗು ಹಾಕಿಕೊಂಡು ಬದುಕುವವನು
ಎಂದೂ ಎತ್ತರಕ್ಕೇರಲಾರ.
ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ[S]ನಿರಾಶ್ರಯಃ ।
ಕರ್ಮಣ್ಯಭಿಪ್ರವೃತ್ತೋSಪಿ ನೈವ ಕಿಂಚಿತ್ ಕರೋತಿ ಸಃ ॥೨೦॥
ತ್ಯಕ್ತ್ವಾ ಕರ್ಮ ಫಲ ಅಸಂಗಮ್
ನಿತ್ಯ ತೃಪ್ತಃ [ಅ]ನಿರಾಶ್ರಯಃ
ಕರ್ಮಣಿ ಅಭಿಪ್ರವೃತ್ತಃ ಅಪಿ ನ ಏವ ಕಿಂಚಿತ್ ಕರೋತಿ ಸಃ -- ಕರ್ಮಫಲದಲ್ಲಿ ನೇಹವನ್ನು ತೊರೆದು, ತಾನು ಎಂದೂ ಇತರ ಬಯಕೆಯೂ ಇಲ್ಲದ, ಯಾರಿಗೂ ತಲೆಬಾಗದ ಭಗವಂತನ ಪಡಿಯಚ್ಚು
ಎಂದು ತಿಳಿದವನು[ಭಗವಂತನ ಆಸರೆಯಲ್ಲಿದ್ದು ಸದಾ ನೆಮ್ಮದಿಯಿಂದಿರುವವನು] ಕರ್ಮದಲ್ಲಿ ತೊಡಗಿದರೂ
ವಾಸ್ತವವಾಗಿ ಏನನ್ನೂ ಮಾಡುವುದಿಲ್ಲ.
ಕೆಲವರಿಗೆ ಅದು ಬೇಕು, ಇದು ಬೇಕು ಎನ್ನುವ ಆಸೆ ಇರುವುದಿಲ್ಲ. ಆದರೆ ಬಂದಾಗ ಖುಷಿಯಾಗುತ್ತದೆ. ಕರ್ಮ ಫಲದಲ್ಲಿ ಅತಿಯಾದ ಸ್ನೇಹ ಒಳ್ಳೆಯದಲ್ಲ. ಭಗವಂತ ಪ್ರೇರಣೆ ಮಾಡಿದ ಬಂತು. ಅದನ್ನು ಸದ್ವಿನಿಯೋಗ ಮಾಡುವುದು
ಹೇಗೆ ಎನ್ನುವುದನ್ನು ಯೋಚಿಸು; ಉಬ್ಬಬೇಡ. ಬರಬೇಕು ಎಂದು ನಿರೀಕ್ಷಿಸಬೇಡ, ನಿರೀಕ್ಷಿಸದೆ ಬಂದಾಗ ಹಾರಾಡಬೇಡ.
ಫಲದ ಬಗ್ಗೆ ಅತಿಯಾದ ಮಮತೆ ಒಳ್ಳೆಯದಲ್ಲ. ಇದೊಂದೆ ಮನುಷ್ಯ ಹಾಯಾಗಿ ನೆಮ್ಮದಿಯಿಂದ ಬದುಕಲು ಇರುವ
ವಿಧಾನ. ಇದು ಇಲ್ಲದಿದ್ದರೆ ಹತಾಶೆ (Disappointment) ಕಟ್ಟಿಟ್ಟ ಬುತ್ತಿ!
ಮನುಷ್ಯ ಹೀಗಾಗಬೇಕು-ಹಾಗಾಗಬೇಕು ಎಂದು ಕನಸುಗಳ ಸರಮಾಲೆಯನ್ನು
ಕಟ್ಟುತ್ತಾ ಹೋಗುತ್ತಾನೆ. ಬಯಸಿದ್ದರಲ್ಲಿ ಎಲ್ಲವೂ ಕೈಗೂಡುವುದಿಲ್ಲ. ಆಗ ಹತಾಶೆ, ದುಗುಡ, ಉದ್ವೇಗ(Tension). ಅದರಿಂದ ಮಾನಸಿಕ ವ್ಯಾಕುಲತೆ (Depression). ಇನ್ನು ಅಕಾಲದಲ್ಲಿ ಸಂಪತ್ತು ಬಂದಾಗ
ಹಾರಾಟ-ಅದರಿಂದ ಜೀವನ ನಾಶ! ಈ ಕಾರಣದಿಂದ ಬಂತು ಎಂದಾಗಲಿ, ಬರಲಿಲ್ಲ ಎಂದಾಗಲಿ, ಬರಬೇಕು ಎಂದಾಗಲಿ ತಲೆ
ಕೆಡಿಸಿಕೊಳ್ಳಬೇಡ. ಸ್ವಚ್ಛವಾದ ಯೋಚನೆಯಿಂದ ಕರ್ತವ್ಯದಲ್ಲಿ ತೊಡಗು. ಎಂಥಹ ಪರಿಸ್ಥಿತಿಯಲ್ಲೂ ಸಂಯಮ ಇರಲಿ. ಈ ರೀತಿ ನಿನ್ನ ಮನಸ್ಸನ್ನು
ತರಬೇತಿಗೊಳಿಸು ಎಂದಿದ್ದಾನೆ ಕೃಷ್ಣ. ಇದು ಕೃಷ್ಣನ ಮನಃಶಾಸ್ತ್ರ.
ಜೀವ ಭಗವಂತನ ಪ್ರತಿಬಿಂಬ. ಅದಕ್ಕೆ ಸ್ವಾತಂತ್ರ್ಯವಿಲ್ಲ. ಬಿಂಬ
ಮಾಡಿಸಿದಂತೆ ಪ್ರತಿಬಿಂಬ. ಭಗವಂತ ನಿತ್ಯ ತೃಪ್ತ, ಆತನಿಗೆ ಅತೃಪ್ತಿ ಇಲ್ಲ. ಹಾಗೇ ನಾವೂ ಅತೃಪ್ತಿ ಇಲ್ಲದೆ ಇರುವುದನ್ನು
ಕಲಿತುಕೊಳ್ಳಬೇಕು. ಯಾವುದೋ ಒಂದು ಆಸೆ ಈಡೇರಿಸಿಕೊಳ್ಳುವುದಕ್ಕಾಗಿ ಎಷ್ಟೋ ಜನರ ಹಿಂದೆ ಬಾಲ
ಅಲ್ಲಾಡಿಸಿಕೊಂಡು ಸ್ವಾರ್ಥ ಮನಸ್ಸಿನಿಂದ ಬದುಕುವುದು ಜೀವನವಲ್ಲ. ಯಾರ ಆಶ್ರಯವೂ ಇಲ್ಲದಿರುವ ಭಗವಂತನ ಪ್ರತಿಬಿಂಬವಾದ ನಿನಗೆ
ಅತೃಪ್ತಿಯ ಬದುಕೇಕೆ?
ಭಗವಂತನಂತೆ ನಿರಾಶ್ರಯನಾಗು. ನಿನಗೆ
ಸದಾ ಭಗವಂತನ ಆಶ್ರಯವಿದೆ ಎನ್ನುವ ಸತ್ಯವನ್ನು
ಅರಿತು ಬಾಳು. ಹೀಗೆ ಬದುಕುವ ಮಾನವ ಕರ್ಮದಲ್ಲಿ
ತೊಡಗಿದ್ದರೂ ಕೂಡಾ ಏನನ್ನೂ ಮಾಡುವುದಿಲ್ಲ. ಏಕೆಂದರೆ ಭಗವಂತ ಎಲ್ಲವುದಕ್ಕಿಂತ ಮೇಲಿದ್ದಾನೆ
ಎನ್ನುವ ಮರ್ಮವನ್ನು ಆತ ಅರಿತಿರುತ್ತಾನೆ. ಇದಕ್ಕೆ ಇನ್ನೂ ಹೆಚ್ಚಿನ ವಿವರಣೆಯನ್ನು ಮುಂದಿನ
ಶ್ಲೋಕಗಳಲ್ಲಿ ಕಾಣಬಹುದು.
No comments:
Post a Comment