Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, April 3, 2011

Bhagavad Gita Kannada Chapter-03 Shloka 26-28


ನ ಬುದ್ಧಿಭೇದಂ ಜನಯೇದಜ್ಞಾನಾಮ್  ಕರ್ಮಸಂಗಿನಾಮ್             ।

ಜೋಷಯೇತ್ ಸರ್ವಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್           ॥೨೬॥

ನ ಬುದ್ಧಿ ಭೇದಮ್  ಜನಯೇತ್ ಅಜ್ಞಾನಾಮ್  ಕರ್ಮ ಸಂಗಿನಾಮ್
ಜೋಷಯೇತ್ ಸರ್ವ ಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್--ತಿಳುವಳಿಕೆಯಿಲ್ಲದೆ ಫಲದ ನಂಟಿಗಾಗಿಯೇ ಕರ್ಮ ಮಾಡುವ ಮಂದಿಯ ನಂಬಿಕೆಯನ್ನು ನಲುಗಿಸಬಾರದು. ಉಪಾಯ ಬಲ್ಲ ತಿಳಿದವನು ತಾನು ಎಲ್ಲಾ ಕರ್ಮಗಳನ್ನು ಮಾಡುತ್ತ ಅವರನ್ನು ಒಲೈಸಬೇಕು.

ಸಮಾಜದಲ್ಲಿ ಅನೇಕ ತರದ ಜನರಿರುತ್ತಾರೆ. ಎಲ್ಲರಿಗೂ ತಿಳುವಳಿಕೆ ಇರುವುದಿಲ್ಲ. ಅವರು ಅವರ ನಂಬಿಕೆಗೆ ತಕ್ಕಂತೆ ನೆಡೆದುಕೊಳ್ಳುತ್ತಿರುತ್ತಾರೆ. ತಿಳಿದವನಿಗೆ ಅದು ಮೂಢನಂಬಿಕೆಯಾಗಿ ಕಾಣಬಹುದು. ಆದರೆ ಎಂದೂ ಒಮ್ಮೆಗೆ ಹೋಗಿ ಅಂತಹ ಜನರನ್ನು ಪರಿಹಾಸ್ಯ ಮಾಡಬಾರದು. ಒಬ್ಬ ಒಂದು ಕಲ್ಲನ್ನು ಅದಕ್ಕೊಂದು ಹೆಸರನ್ನು ಕೊಟ್ಟು ದೇವರೆಂದು ಪೂಜಿಸುತ್ತಿರಬಹುದು. ಆತನ ಅಪಾರ ನಂಬಿಕೆ ಶರಣಾಗತಿ ಆತನನ್ನು ರಕ್ಷಿಸುತ್ತಿರುತ್ತದೆ. ಇದನ್ನು ನೋಡಿ ಪರಿಹಾಸ್ಯ ಮಾಡುವುದು ಮೂಢತನ. ಅವರು ಇಂತಹ ನಂಬಿಕೆಯ ನೆಲಗಟ್ಟಿನಲ್ಲಿ ಜೀವನದಲ್ಲಿ ಭರವಸೆಯಿಂದ ಬದುಕುತ್ತಿರುತ್ತಾರೆ.ಅವರಿಗೊಂದು ಸನಾತನ ಪ್ರಜ್ಞೆ ಇರುತ್ತದೆ. ಸರ್ವಗತ, ಸರ್ವಶಬ್ದವಾಚ್ಯ ಹಾಗು ಸರ್ವಶಕ್ತ ಭಗವಂತ ಆತನಿಗೆ ಕಲ್ಲಿನ ಮುಖೇನ ರಕ್ಷಣೆ ಕೊಡಲೂ ಸಾಧ್ಯವಿದೆಯಲ್ಲವೇಆದ್ದರಿಂದ ಎಂದೂ ಅಂತವರನ್ನು ನೋಡಿ ನಗಬಾರದು. ಅದನ್ನು ಬಿಟ್ಟು ಅವನನ್ನು ಕ್ರಮೇಣವಾಗಿ ಜ್ಞಾನದ ಪರಿದಿಗೆ ತರುವ ಪ್ರಯತ್ನವನ್ನು ಮಾಡಬೇಕು.  ಎಲ್ಲವನ್ನು ಸಾಮಾಜಿಕ ಕಾಳಜಿಯಿಂದ ಮಾಡಬೇಕು, ಆದರೆ ನಿರ್ಲಿಪ್ತನಾಗಿ ಎಲ್ಲಾ ಕರ್ಮವನ್ನು ಮಾಡುತ್ತಾ ಅಜ್ಞಾನಿಗಳಲ್ಲಿ ಜ್ಞಾನವನ್ನು ತುಂಬಬೇಕು.

ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ  ।
ಅಹಂಕಾರವಿಮೂಢಾತ್ಮಾ ಕರ್ತಾsಹಮಿತಿ ಮನ್ಯತೇ     ॥೨೭॥

ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ
ಅಹಂಕಾರವಿಮೂಢ ಆತ್ಮಾ ಕರ್ತಾ ಅಹಮ್ ಇತಿ ಮನ್ಯತೇ--ಪ್ರಕೃತಿಯ ಅಂಗಾಂಗಗಳಾದ ಇಂದ್ರಿಯಾದಿಗಳಿಂದ(ಭಗವದಧೀನವಾದ, ಜೀವನ ಸ್ವಭಾವ ಸಹಜವಾದ ಗುಣಗಳಿಂದ) ಎಲ್ಲ ಬಗೆಯ ಕರ್ಮಗಳೂ  ನಡೆಯುತ್ತಿರುತ್ತವೆ. ಹಮ್ಮಿನಿಂದ ಮೈಮರೆತವನು 'ನಾನೇ ಮಾಡಿದೆ' ಎಂದು ತಿಳಿಯುತ್ತಾನೆ.
ಈ ಶ್ಲೋಕ ಅನೇಕ ವಿಧದಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿ ಕೃಷ್ಣ ಮುಖ್ಯವಾಗಿ 'ನಾನೇ ಮಾಡಿದೆ' ಎಂದು ಅಹಂಕಾರ ಪಡುವುದು ಎಷ್ಟು ತಪ್ಪು ಮತ್ತು ಏಕೆ ಎನ್ನುವುದನ್ನು ವಿವರಿಸಿದ್ದಾನೆ. ಕೃಷ್ಣ ಹೇಳುತ್ತಾನೆ "ಯಾರಾದರು ಏನನ್ನಾದರು 'ನಾನೇ ಮಾಡಿದೆ' ಎಂದು ತಿಳಿದುಕೊಂಡರೆ ಅದು ಅವನ ತಿಳಿಗೇಡಿತನ" ಎಂದು. ಸೃಷ್ಟಿಯಲ್ಲಿನ ಒಂದು ವಿಚಿತ್ರವೆಂದರೆ ಯಾರೂ ಏನನ್ನೂ ಮಾಡುವುದಿಲ್ಲ-ಆದರೆ ಎಲ್ಲವೂ ಎಲ್ಲರ ಕೈಯಿಂದ ಆಗುತ್ತಿರುತ್ತದೆ!  ಈ ದೇಹ (ಪಿಂಡಾಂಡ) ಪ್ರಕೃತಿಯ ನಿರ್ಮಾಣ. ಪ್ರಕೃತಿಯಲ್ಲಿ ಅದಕ್ಕೆ ಪೋಷಕವಾದ ಅಂಗಭೂತವಾದ ಇಂದ್ರಿಯಗಳಿವೆ. ಪ್ರಕೃತಿ ಎಂದರೆ ಈ ದೇಹ, ಅದರ ಗುಣಗಳು ಎಂದರೆ ಇಂದ್ರಿಯಗಳು. ಶಬ್ದ-ಸ್ಪರ್ಶ-ರಸ-ರೂಪ- ಗಂಧ; ಕಿವಿ-ತೊಗಲು-ನಾಲಿಗೆ-ಕಣ್ಣು-ಮೂಗುಅದಕ್ಕೆ ಅನುಗುಣವಾಗಿ ಆಕಾಶ(ಶಬ್ದ), ಗಾಳಿ(ಸ್ಪರ್ಶ), ನೀರು(ರಸ), ಅಗ್ನಿ (ರೂಪ), ಮತ್ತು ಮಣ್ಣು(ಗಂಧ) ಇವು ಪ್ರಕೃತಿಯ ಗುಣಗಳು. ಹೀಗಿರುವಾಗ ನಾವು ಯಾವುದೋ ಒಂದು ವಿಷಯವನ್ನು ನಾನೇ ಮಾಡಿದೆ ಎಂದು ಹೇಳುವುದು ಅರ್ಥ ಶೂನ್ಯ. ಉದಾಹರಣೆಗೆ 'ಕಣ್ಣಿನಿಂದ ನೋಡಿದೆ'; ಈ ಕಣ್ಣನ್ನು ನಮಗೆ ಕೊಟ್ಟವನು ಯಾರು? ಹುಟ್ಟು ಕುರುಡನಿಗೆ ಕಣ್ಣು ಕೊಡಲು ನಿನಗೆ ಸಾಧ್ಯವೇ? ಅಂದರೆ ಕಣ್ಣು ಪ್ರಕೃತಿಯ ಕೊಡುಗೆ. ಭಗವಂತ ನಮಗೆ ಕಣ್ಣು ಕೊಟ್ಟ, ಕಣ್ಣ ಮುಂದೆ ನೋಡುವ ವಸ್ತುವನ್ನಿಟ್ಟ, ನೋಡುವಂತೆ ಪ್ರೇರೇಪಿಸಿದ- ನಾವು ನೋಡಿದೆವು!  ಒಂದು ವೇಳೆ ನಮಗೆ ಒಳ್ಳೆಯ ಸ್ವರವಿದ್ದರೆ ಅದಕ್ಕಾಗಿ ಅಹಂಕಾರ ಪಡುತ್ತೇವೆ. ಆದರೆ ಈ ಸ್ವರವನ್ನು ನಮಗೆ ಕೊಟ್ಟವನು ಯಾರು? ಈ ಬಗ್ಗೆ ಎಂದೂ ನಾವು ಯೋಚಿಸುವುದಿಲ್ಲ. ಒಂದು ಕಾರ್ಯವಾಗಬೇಕಾದರೆ ಇಡೀ ವಿಶ್ವದ ಅನೇಕ ಘಟಕಗಳು ಸೇರಿ ಕಾರ್ಯ ನಿರ್ವಹಿಸಬೇಕು. ಪ್ರಕೃತಿ ಜಡ ಅದಕ್ಕೆ ಇಚ್ಛೆ ಇಲ್ಲ. 'ನಾವು ಮಾಡುವುದು' ಅಂದರೆ ಇಚ್ಛಿಸಿ ಮಾಡುವುದು. ನಮಗೆ ಇಚ್ಛೆ ಇದೆ; ಪ್ರತಿಯೊಬ್ಬ ಜೀವನಿಗೂ ಅವನದೇ ಆದ ಜೀವ ಸ್ವಭಾವವಿದೆ. ನಾವು ಮಾಡುವ ಪ್ರತಿಯೊಂದು ಕಾರ್ಯ ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿರುತ್ತದೆ. ಇದು ಇಚ್ಛಾ ಪೂರ್ವಕ ಕ್ರಿಯೆ. ಆದರೆ ಇಲ್ಲಿ ನಮಗೆ ಇಚ್ಛಾ ಸ್ವಾತಂತ್ರ್ಯವಿಲ್ಲ.
ಇಚ್ಛಾಸ್ವಾತಂತ್ರ್ಯ ಇರುವುದು ಕೇವಲ ಭಗವಂತನಲ್ಲಿ. ಅದಕ್ಕನುಗುಣವಾಗಿ ಸರ್ವಕಾರ್ಯ ನಿರ್ವಹಣೆ ಆಗುತ್ತದೆ. ಆದ್ದರಿಂದ ನಮ್ಮ ಸ್ವಭಾವವನ್ನು ನಿಯಂತ್ರಿಸುವವ ಇಡೀ ಜಗತ್ತಿನ ಮೂಲ ಕರ್ತೃ ಭಗವಂತ. ಅವನ ಇಚ್ಛೆಗನುಗುಣವಾಗಿ ಪ್ರಪಂಚದ ವ್ಯಾಪಾರ ನಡೆಯುತ್ತದೆ. ಇದು ವಿಶ್ವದ ವ್ಯವಸ್ಥೆ. ಇಡೀ ವಿಶ್ವದ ಕರ್ಮ ಚಕ್ರದಲ್ಲಿ ನಾವು ಒಂದು ಘಟಕ ಅಷ್ಟೆ. ಆದ್ದರಿಂದ 'ನಾನೇ ಮಾಡಿದೆ' ಎಂದು ಅಹಂಕಾರ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ. ನಿಜವಾದ ಕರ್ತೃ ಭಗವಂತ. ಜೀವನಿಗೊಂದು ಕರ್ತೃತ್ವ ಹಾಗು ಜಡಕ್ಕೊಂದು  ಕರ್ತೃತ್ವವಿದೆ. ಇದರ ಅಂತರ ನಮಗೆ ತಿಳಿದಿರಬೇಕು. ಮಣ್ಣು  ಜಡ ಅದಕ್ಕೆ ಇಚ್ಛೆ ಇಲ್ಲ. ಬೀಜ ಚೇತನ, ಅದಕ್ಕೆ ಮರವಾಗುವ ಸ್ವಭಾವವಿದೆ ಆದರೆ ಸ್ವಾತಂತ್ರ್ಯವಿಲ್ಲ. ಬೀಜವನ್ನು ಬಿತ್ತಿ ಬೆಳೆಸುವ ತೋಟಗಾರ ಆ ಭಗವಂತ. ಭಗವಂತನ ಇಚ್ಛೆಗನುಗುಣುವಾಗಿ, ‘ಜೀವ’ ನಲ್ಲಿರುವ ಸ್ವಭಾವಕ್ಕನುಗುಣವಾಗಿ ಪ್ರಪಂಚದಲ್ಲಿ ಕ್ರಿಯೆ ನಡೆಯುತ್ತದೆ. ಒಂದು ಕ್ರಿಯೆಯ ಹಿಂದೆ ಇಡೀ ವಿಶ್ವದ ಪಾಲುದಾರಿಕೆ ಇರುತ್ತದೆ.

ತತ್ತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋಃ   ।
ಗುಣಾ ಗುಣೇಷು ವರ್ತಂತ ಇತಿ ಮತ್ವಾ ನ ಸಜ್ಜತೇ        ॥೨೮॥

ತತ್ತ್ವವಿತ್ ತು ಮಹಾಬಾಹೋ ಗುಣ ಕರ್ಮ ವಿಭಾಗಯೋಃ
ಗುಣಾಃ  ಗುಣೇಷು ವರ್ತಂತೇ  ಇತಿ ಮತ್ವಾ ನ ಸಜ್ಜತೇ- ಓ ಮಹಾವೀರ, ಇಂದ್ರಿಯಾದಿಗಳ(ಜೀವ ಸ್ವಭಾವದ ಗುಣಗಳ) ಮತ್ತು ಕ್ರಿಯೆಗಳ ಪ್ರಭೇದಗಳ ನಿಜವನ್ನರಿತವನು, ಇಂದ್ರಿಯಗಳ ವಿಷಯಗಳಲ್ಲಿ ಚರಿಸುತ್ತವೆ ಎಂದರಿತು ಅವುಗಳನ್ನು ಅಂಟಿಸಿಕೊಳ್ಳುವುದಿಲ್ಲ.

ತತ್ವವನ್ನು ಅರಿತ ಅಥವಾ ಯಥಾರ್ಥವನ್ನು ಅರಿತ ತತ್ವವಾದಿ-ಗುಣಕರ್ಮ, ಇಂದ್ರಿಯ ಮತ್ತು ಅದರಲ್ಲಿನ ಕ್ರಿಯಾಭೇದವನ್ನು ತಿಳಿದಿರಬೇಕು. ಮೂಲಭೂತವಾಗಿ ಇಂದ್ರಿಯಗಳಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸವೆಂಬ ತ್ರೈಗುಣ್ಯಗಳಿಂದ ಕರ್ಮ ನಡೆಯುತ್ತಿರುತ್ತದೆ. ಇದು ನಾವು ಹಿಂದೆ ಅಂಟಿಸಿಕೊಂಡು ಬಂದುದರ ಪ್ರಭಾವವಿರಬಹುದು. ಇದರಿಂದ ಆಗುವ ಕರ್ಮವನ್ನು ನಾವು ತಟಸ್ಥರಾಗಿ ನೋಡುತ್ತಿರಬೇಕು. ಈ ವಿಷಯ ಮನೋಶಾಸ್ತ್ರಕ್ಕೆ ಸಂಬಂಧಪಟ್ಟಿದ್ದು. ನಾವೇ ಮಾಡುವ ಕ್ರಿಯೆಯನ್ನು ನಾವೇ ತಟಸ್ಥರಾಗಿ ವಿಶ್ಲೇಷಿಸುವುದು! ನನ್ನ ಮೇಲೆ ತ್ರೈಗುಣ್ಯದ ಯಾವ ಗುಣ ಪ್ರಭಾವಬೀರುತ್ತಿದೆ ಎನ್ನುವುದನ್ನು ಸ್ವಯಂ ವಿಶ್ಲೇಷಣೆ(Self analysis) ಮಾಡಿ, ಗುಣಕರ್ಮ ವಿಭಾಗ ತತ್ವವನ್ನು ತಿಳಿದುಕೊಂಡಾಗ, ತ್ರೈಗುಣ್ಯದ  ಪ್ರಭಾವದ ಅರಿವಾಗುತ್ತದೆ. ಆಗ ನಮಗೆ ಅದರಲ್ಲಿ ಒಡೆತನವಿಲ್ಲ ಎನ್ನುವ ಸತ್ಯ ತಿಳಿಯುತ್ತದೆ.ಇಂದ್ರಿಯಗಳು- ಅದರ ಮೇಲೆ ಪ್ರಕೃತಿಯ ತ್ರೈಗುಣ್ಯ-ಅದರ ಮೇಲೆ ಜೀವ ಸ್ವಭಾವ-ಅದರ ಮೇಲೆ ಭಗವಂತನ ಜ್ಞಾನಾನಂದ- ಇವೆಲ್ಲವೂ ಕರ್ಮವಾಗಿ ಇಂದ್ರಿಯದ ಮೂಲಕ  ಅಭಿವ್ಯಕ್ತವಾಗುತ್ತಿರುತ್ತದೆ. ಜಡದಲ್ಲಿ ಬರಿಯ ಕೃತಿ(Action), ಜೀವನಲ್ಲಿ ಇಚ್ಛೆ ಮತ್ತು ಕೃತಿ (Intentional Action) ಹಾಗು ಭಗವಂತನಲ್ಲಿ ಸ್ವತಂತ್ರ ಇಚ್ಛಾಕೃತಿ(Independent Intentional Action)-ಇದು ಕರ್ಮಭೇದ. ಹೀಗೆ ಗುಣಭೇದ ಮತ್ತು ಕರ್ಮಭೇದವನ್ನು ಅರಿತವನು 'ತತ್ವವಿತ್ತು'. ಈ ತತ್ವ ಅರ್ಥವಾದರೆ "ನಾನು ಮಾಡಿದೆ" ಎನ್ನುವ ಅಹಂಕಾರ ಎಂದೂ ನಮ್ಮನ್ನು ಕಾಡುವುದಿಲ್ಲ.
ಈ ಮೇಲಿನ ವಿಷಯವನ್ನು ಉದಾಹರಣೆಯೊಂದಿಗೆ ನೋಡುವುದಾದರೆ-ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ ಮಾತನಾಡುವ ಒಬ್ಬ ಮಾತುಗಾರನನ್ನು ನೋಡಿ:  ಆತ ಹೀಗೆ ಮಾತನಾಡಬೇಕಾದರೆ ಕೇವಲ ಬಾಯಿ ಇದ್ದರೆ ಸಾಲದು, ಬಾಯಿಯಲ್ಲಿ ಶಬ್ದ ಬರಬೇಕು. ಕೇವಲ ಶಬ್ದವಲ್ಲ-ಯಾವ ಮಾತನಾಡಬೇಕೋ ಅದಕ್ಕನುಗುಣವಾದ ಶಬ್ದ ಬರಬೇಕು. ಆ ಶಬ್ದ ಬರಬೇಕಾದರೆ ಮಾತಿಗೆ ಒಂದು ಭಾವ ಬೇಕು. ಭಾವ ಅನ್ನುವುದು ಮನಸ್ಸಿನಲ್ಲಿ ಹೊಳೆಯಬೇಕು. ಹೊಳೆದ ಭಾವಕ್ಕೆ ತಕ್ಕಂತೆ ಶಬ್ದ ಬರಬೇಕು. ಆ ಶಬ್ದ ಬಾಯಿಯಲ್ಲಿ ಸ್ಫುಟವಾಗಿ ಹೊರ ಹೊಮ್ಮಬೇಕು. ಭಾವನೆಯಿಂದ ಶಬ್ದ ಹುಟ್ಟಬೇಕಾದರೆ ಮಾಧ್ಯಮವಾಗಿ ಆಕಾಶ ಮತ್ತು ಗಾಳಿ ಅಗತ್ಯ. ಈ ಎಲ್ಲಾ ಕ್ರಿಯೆ ಸುಸೂತ್ರವಾಗಿ ನಡೆದರೆ ಮಾತ್ರ ಆತ ಚನ್ನಾಗಿ ಮಾತನಾಡಬಲ್ಲ. ಮನಸ್ಸಿನಲ್ಲಿ ಭಾವ ಮತ್ತು ಶಬ್ದವನ್ನು ಹೊಳೆಸುವವನು ಯಾರು? ಒಂದು ವೇಳೆ ಹೇಳಬೇಕು ಅನ್ನುವ ವಿಷಯಕ್ಕೆ ಅನುಗುಣವಾದ ಶಬ್ದ ಹೊಳೆಯದೆ ಇದ್ದರೆ? ನಮ್ಮ ಮೆದುಳಿನಲ್ಲಿ ಯಾವುದೋ ಒಂದು ಗುಂಡಿ ಆ ಕ್ಷಣದಲ್ಲಿ ಕೆಲಸ ಮಾಡದೆ ಇದ್ದರೆ? ಇಲ್ಲಿ ನಮ್ಮ ಕೈವಾಡ ಏನಿದೆ? ಇದು ತಿಳಿದಾಗ ಅಹಂಕಾರ ಬಾರದು. ಈ ಅರಿವಿದ್ದಾಗ ಎಲ್ಲರೊಡನೆ ಎಲ್ಲರಂತೆ ಇದ್ದು ಅಂಟಿಸಿಕೊಳ್ಳದೆ   ಇರಲು ಸಾಧ್ಯ.
ಇಂದ್ರಿಯಗಳಲ್ಲಿ ಸತ್ವ-ರಜೋ-ತಮೋ ಗುಣಗಳು ಜೀವ ಸ್ವಭಾವಕ್ಕನುಗುಣವಾಗಿ ಕೆಲಸ ಮಾಡುತ್ತವೆ. ಭಗವಂತನ ಜ್ಞಾನಾನಂದ ಸ್ವರೂಪ- ಜೀವನ ಜ್ಞಾನೇಂದ್ರಿಯ ಗುಣಗಳನ್ನು ನಿಯಂತ್ರಿಸುತ್ತವೆ. ಇದನ್ನು ತಿಳಿದಾಗ ನಾನು-ನನ್ನದು ಎನ್ನುವುದು ಹೊರಟು ಹೋಗುತ್ತದೆ. ವಿಶ್ವವೆಂಬ ಈ ಮಹಾ ಸಾಗರದಲ್ಲಿ ನಾನೊಂದು ಮರಳಿನ ಕಣ ಎನ್ನುವ ನಿಜ ತಿಳಿಯುತ್ತದೆ. ವಿಶ್ವದ ವಿಶ್ವತೋಮುಖವಾದ ಅಸ್ತಿತ್ವ ಗುರುತಿಸಿದವ "ನಾನು ಮಾಡಿದೆ" ಎಂದು ಎಂದೂ ಹೇಳುವುದಿಲ್ಲ ಹಾಗು ಯಾವುದನ್ನೂ ಅಂಟಿಸಿಕೊಳ್ಳು(Attachment)ವುದಿಲ್ಲ.
ಈ ಶ್ಲೋಕದಲ್ಲಿ ಕೃಷ್ಣ ಅರ್ಜುನನನ್ನು 'ಮಹಾಬಾಹೋ' ಎಂದು ಸಂಬೋಧಿಸಿದ್ದಾನೆ. ಮೇಲ್ನೋಟದಲ್ಲಿ ಮಹಾಬಾಹು ಎಂದರೆ ವೀರ, ಹೋರಾಟಗಾರ. ಬಲಿಷ್ಠ ತೊಳಿನವನಾದ ನೀನು ಹೇಡಿಯಾಗದೆ ಹೋರಾಡು ಎನ್ನುವುದು ಇಲ್ಲಿ ಕಾಣುವ ಭಾವ. ಆದರೆ ಅದರಿಂದಾಚೆಗೆ ಇನ್ನೂ ಅನೇಕ ಅರ್ಥವಿದೆ. ಮಹತ್ ವಹತೀತಿ ಮಹಾಬಾಹು ಅಂದರೆ ದೊಡ್ದದ್ದನ್ನು ಹೊತ್ತುಕೊಂಡವ. ಜಗತ್ತಿನ ಮೂಲಭೂತವಾದ ಸತ್ಯವನ್ನು ಹೃದಯದಲ್ಲಿ ಹೊತ್ತವ ಎಂದರ್ಥ. “ಜಗತ್ತಿನ ಮಹತ್ತಾದ ಸಂಗತಿಯನ್ನು ಗ್ರಹಿಸಬಲ್ಲ ಅರಿವಿನ ಮಹಾತೋಳಿನಿಂದ ದಿಗಂತದಾಚೆಗಿನ ಸತ್ಯ(ಭಗವಂತ)ವನ್ನು ಹಿಡಿ” ಎನ್ನುವುದು ಈ ಸಂಬೋಧನೆ ಹಿಂದಿರುವ ಇನ್ನೊಂದು ಭಾವ.

No comments:

Post a Comment