Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, April 2, 2011

Bhagavad Gita Kannada Chapter-03 Shloka 21-25


ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ ।
ಸ ಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ    ॥೨೧॥

ಯತ್ ಯತ್ ಆಚರತಿ ಶ್ರೇಷ್ಠಃ ತತ್ ತತ್  ಏವ ಇತರಃ  ಜನಃ
ಸಃ  ಯತ್ ಪ್ರಮಾಣಮ್  ಕುರುತೇ ಲೋಕಃ ತತ್ ಅನುವರ್ತತೇ--ಮುಂದಾಳು ಏನೇನು ಮಾಡುತ್ತಾನೆ ಉಳಿದ ಮಂದಿ ಅದೇ ದಾರಿ ಹಿಡಿಯುತ್ತಾರೆ. ಅವನು ಯಾವುದನ್ನು ಆಧಾರವಾಗಿ ಬಳಸುತ್ತಾನೆ ಜನತೆ ಅದನ್ನೇ ಬೆನ್ನು ಹತ್ತುತ್ತದೆ.

ಸಮಾಜದಲ್ಲಿ ಹಿರಿಯನೆನಿಸಿದವ(ಶ್ರೇಷ್ಠ), ವಯಸ್ಸಿನಲ್ಲಿ, ಆಚರಣೆಯಲ್ಲಿ, ಜ್ಞಾನದಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡಬಲ್ಲ, ಎತ್ತರದಲ್ಲಿರುವ ವ್ಯಕ್ತಿ ಯಾವ ದಾರಿಯಲ್ಲಿ ಸಾಗುತ್ತಾನೋ, ಉಳಿದವರೂ ಅದೇ ಹಾದಿಯಲ್ಲಿ ಸಾಗುತ್ತಾರೆ. ಇಲ್ಲಿ ಅರ್ಜುನ ಸಮಾಜದ ಮುಖಂಡ. ಆತ ಏನು ಮಾಡುತ್ತಾನೋ ಅದನ್ನೇ  ಸಮಾಜ ಹಿಂಬಾಲಿಸುತ್ತದೆ. ಏಕೆಂದರೆ ಸಾಮಾನ್ಯ ಜನರಿಗೆ ಶಾಸ್ತ್ರ ಇತ್ಯಾದಿ ತಿಳಿಯುವುದಿಲ್ಲ. ಅವರು ಕೇವಲ ಆದರ್ಶ ವ್ಯಕ್ತಿಗಳೆನಿಸಿದವರನ್ನು ಹಿಂಬಾಲಿಸುತ್ತಾರೆ. ನಾಯಕನಾದವನು ಯಾವುದನ್ನು ಪ್ರಮಾಣವಾಗಿರಿಸಿಕೊಂಡು ಮಾಡುತ್ತಾನೋ ಅದನ್ನೇ ಸಾಮಾನ್ಯ ಜನರು ಅನುಸರಿಸುತ್ತಾರೆ.
ಈ ಶ್ಲೋಕದಲ್ಲಿ ಕೃಷ್ಣ ಕೊಟ್ಟಿರುವ ಸಂದೇಶವನ್ನು ನಾವು ನಮ್ಮ ದೈನಂದಿನ ಬದುಕಿನಲ್ಲಿ ಕಾಣುತ್ತೇವೆ. ಒಂದು ಸಂಸ್ಥೆಯನ್ನು ನಡೆಸುವ ಮುಖ್ಯಸ್ತನ ನಡವಳಿಕೆ, ಆಚರಣೆ, ಸರಿದಾರಿಯಲ್ಲಿ ಇಲ್ಲದಿದ್ದರೆ, ಆ ಸಂಸ್ಥೆ ಅದೋಗತಿಯನ್ನು ಕಾಣುತ್ತದೆ. ದುಷ್ಟ ಶಕ್ತಿಗಳು ಎದ್ದು ನಿಲ್ಲುತ್ತವೆ.  ಏಕೆಂದರೆ ಮುಖಂಡ ಎನಿಸಿದವ ಏನನ್ನು ಅನುಸರಿಸುತ್ತಾನೋ ಅದನ್ನೇ ಪ್ರಮಾಣವಾಗಿ ಆತನ ಕೆಳಗಿರುವ ಜನರು ತಮಗರಿವಿಲ್ಲದಂತೆ ಅನುಸರಿಸಲಾರಂಭಿಸುತ್ತಾರೆ. ಈ ಕಾರಣದಿಂದ ಒಬ್ಬ ಮುಖಂಡ ಎಷ್ಟು ಎಚ್ಚರದಿಂದಿದ್ದರೂ ಸಾಲದು. ಒಂದು ದೇಶವನ್ನು ನಡೆಸುವ ಮುಖ್ಯಸ್ಥ ಬ್ರಷ್ಟಾಚಾರಿಯಾಗಿದ್ದಲ್ಲಿ ಇಡೀ ದೇಶ ಬ್ರಷ್ಟಾಚಾರದ ಹಾದಿಯನ್ನು ತುಳಿಯುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮಾನವರು ಒಳ್ಳೆಯದನ್ನು ಅನುಸರಿಸುವುದಕ್ಕಿಂತ ಹೆಚ್ಚಾಗಿ ಹಾಗು ವೇಗವಾಗಿ ಕೆಟ್ಟದನ್ನು ಅನುಸರಿಸುವುದು ಹೆಚ್ಚು. ಉದಾಹರಣೆಗೆ ಒಬ್ಬ ಉತ್ತಮ ಅಧ್ಯಾಪಕ ಧೂಮಪಾನ ಮಾಡುವ ಹವ್ಯಾಸದವನಾಗಿದ್ದರೆ, ಆತನ ವಿದ್ಯಾರ್ಥಿಗಳು  ಆತನಲ್ಲಿರುವ ಜ್ಞಾನಕ್ಕಿಂತ ಮಿಗಿಲಾಗಿ ಆತನ ದುರಾಭ್ಯಾಸವನ್ನು ಪ್ರಮಾಣವಾಗಿರಿಸಿಕೊಂಡು ಕೆಟ್ಟ ದಾರಿ ಹಿಡಿಯುವ ಸಾಧ್ಯತೆ ಹೆಚ್ಚು. ಇದು ಹಿರಿಯವರೆನಿಸಿದವರು ತಪ್ಪು ದಾರಿ ತುಳಿದಾಗ ಸಮಾಜದ ಮೇಲಾಗುವ ದುಷ್ಟರಿಣಾಮ. ಇದು ತುಂಬಾ ಅಪಾಯಕಾರಿ ಹಾಗು ಇದರ ಅರಿವು ನಮಗಿರಬೇಕು.

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ           ।
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ         ॥೨೨॥

ನ ಮೇ ಪ್ರಾರ್ಥ ಅಸ್ತಿ  ಕರ್ತವ್ಯಮ್  ತ್ರಿಷು ಲೋಕೇಷು ಕಿಂಚನ
ನ ಅನವಾಪ್ತಮ್ ಅವಾಪ್ತವ್ಯಮ್ ವರ್ತೇ ಏವ ಚ ಕರ್ಮಣಿ --ಪಾರ್ಥ, ಮೂರು ಲೋಕಗಳಲ್ಲು ನಾನು ಮಾಡಬೇಕಾದ್ದು ಏನೂ ಇಲ್ಲ. ಪಡೆಯದೇ ಇದ್ದು ಪಡೆಯಬೇಕಾದ್ದು ಇಲ್ಲ.ಆದರೂ ನಾನು ಕರ್ಮದಲ್ಲಿ ತೊಡಗಿದ್ದೇನೆ.

ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ   ।
ಮಮ ವರ್ತ್ಮಾನುವವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ          ॥೨೩॥

ಯದಿ ಹಿ ಅಹಮ್ ನ ವರ್ತೇಯಮ್  ಜಾತು ಕರ್ಮಣಿ ಅತಂದ್ರಿತಃ
ಮಮ ವರ್ತ್ಮ ಅನುವವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ --ಓ ಪಾರ್ಥ, ನಾನು ಎಂದಾದರೂ ಎಚ್ಚರದಿಂದ ಕರ್ಮದಲ್ಲಿ ತೊಡಗದೆ ಹೋದರೆ, ಮನುಷ್ಯರು ಎಲ್ಲ ಬಗೆಯಿಂದಲೂ ನನ್ನ ದಾರಿ ಹಿಡಿದು ಬಿಡುತ್ತಾರೆ.

ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಮ್ ।
ಸಂಕರಸ್ಯ ಚ ಕರ್ತಾ ಸ್ಯಾಮುಪಹನ್ಯಾಮಿಮಾಃ ಪ್ರಜಾಃ            ॥೨೪॥

ಉತ್ಸೀದೇಯಃ ಇಮೇ ಲೋಕಾಃ  ನ ಕುರ್ಯಾಮ್  ಕರ್ಮ ಚೇತ್ ಅಹಮ್
ಸಂಕರಸ್ಯ ಚ ಕರ್ತಾ ಸ್ಯಾಮ್ ಉಪಹನ್ಯಾಮ್ ಇಮಾಃ ಪ್ರಜಾಃ  --ನಾನು ಕರ್ಮ ಮಾಡದೇ ಇದ್ದರೆ ಈ ಜನರೆಲ್ಲಾ ದಾರಿ ತಪ್ಪಿ ಹಾಳಾಗುತ್ತಾರೆ. ಧರ್ಮದ ಕಲಬೆರೆಕೆಗೆ ಕಾರಣನಾಗಿ ಈ ಎಲ್ಲ ಜನತೆಯನ್ನು ನಾನೆ ಕೈಯಾರ ಕೆಡವಿದಂತಾದೀತು.

ಈ ಮೇಲಿನ ಮೂರು  ಶ್ಲೋಕದಲ್ಲಿ ಕೃಷ್ಣ ತನ್ನನ್ನೇ ತಾನು ಉದಾಹರಣೆಯಾಗಿಟ್ಟುಕೊಂಡು ಹಿಂದೆ  ಹೇಳಿದ ವಿಷಯವನ್ನು ವಿವರಿಸುತ್ತಾನೆ. ಅರ್ಜುನನ ಸಾರಥಿಯಾಗಿ ನಿಂತಿರುವ ಕೃಷ್ಣ ಹೇಳುತ್ತಾನೆ- "ನನಗೆ ಏನಾದರೂ ಮಾಡಬೇಕಾದ್ದು ಅಥವಾ ಮಾಡದೇ ಇದ್ದರೆ ತೊಂದರೆ ಆಗುವಂಥದ್ದು ಏನೂ ಇಲ್ಲ, ಆದರೆ ನಾನು ಕರ್ತವ್ಯ ಕರ್ಮದಲ್ಲಿ ನಿಂತಿದ್ದೇನೆ" ಎಂದು. ಮೂರು ಲೋಕದಲ್ಲಿ, ಸೃಷ್ಠಿ-ಸ್ಥಿತಿ-ಸಂಹಾರವನ್ನು ತನ್ನ ನಿತ್ಯ ಕರ್ಮವಾಗಿ ಮಾಡುತ್ತಿರುವ ಭಗವಂತ, ಎಲ್ಲವನ್ನು ತನ್ನ ಪ್ರೀತಿಯ ಭಕ್ತರಿಗಾಗಿ, ಜೀವಜಾತಕ್ಕಾಗಿ ಮಾಡುತ್ತಿದ್ದಾನೆಯೇ ಹೊರತು ಇನ್ನೇನೋ ಲಾಭಕ್ಕಾಗಿ ಅಲ್ಲ.
ಒಂದು ವೇಳೆ ಕೃಷ್ಣ ತನ್ನನ್ನು ನಿತ್ಯ ಕರ್ಮದಲ್ಲಿ ತೊಡಗಿಸಿಕೊಳ್ಳದೆ ಇದ್ದಿದ್ದರೆ ಎಲ್ಲರೂ ಆತನನ್ನು ಪ್ರಮಾಣವಾಗಿರಿಸಿಕೊಂಡು ಆತನ ದಾರಿಯನ್ನು ಹಿಡಿಯುತ್ತಿದ್ದರು. ಈ ಕಾರಣಕ್ಕಾಗಿ ಭಗವಂತ ಅವತಾರ ತಾಳಿದಾಗ ಒಬ್ಬ ಸಾಮಾನ್ಯ ಮಾನವನಂತೆ ಕಾಣಿಸಿಕೊಂಡು, ತನ್ನ ನಿತ್ಯ ಕರ್ಮಗಳನ್ನು ಆದರ್ಶವಾಗಿ ಜನತೆ ಪಾಲಿಸುವಂತೆ ಕರ್ತವ್ಯ ಕರ್ಮವನ್ನು ನಿರ್ವಹಿಸುತ್ತಾನೆ. ಕೃಷ್ಣಾವತಾರದಲ್ಲಿ ನೋಡಿದರೆ ಕೃಷ್ಣ ಸಂಧ್ಯಾವಂದನೆ ಇತ್ಯಾದಿ ಮೂಲ ಕರ್ಮವನ್ನು ತಪ್ಪದೆ ಮಾಡುತ್ತಿದ್ದ. ಇದು ಆತನಿಗೊಸ್ಕರವಲ್ಲ, ಆತನನ್ನು ಹಿಂಬಾಲಿಸುವ ಜನರಿಗೆ ಮಾರ್ಗದರ್ಶನಕ್ಕೋಸ್ಕರ.
ಕೃಷ್ಣ ಹೇಳುತ್ತಾನೆ "ನಾನು ಕರ್ಮ ಮಾಡದೇ ಇದ್ದರೆ ಇಡೀ ಲೋಕ ಕರ್ಮ ಪ್ರಜ್ಞೆಯನ್ನು ಕಳೆದುಕೊಂಡು ದಾರಿತಪ್ಪಿಬಿಡುತ್ತದೆ, ಸ್ವಚ್ಛಂದತೆ ಬಂದು ನಿರ್ದಿಷ್ಟ ವ್ಯವಸ್ಥೆ ಹೊರಟು ಹೋಗುತ್ತದೆ" ಎಂದು. ಯಾರಿಗೆ ಯಾವುದು ಧರ್ಮವೋ ಅದನ್ನು ಮಾಡಲೇ ಬೇಕು. ಅದೊಂದು ವ್ಯವಸ್ಥೆ. ಇಲ್ಲದಿದ್ದರೆ ಎಲ್ಲರೂ ತಮಗೆ ತೋಚಿದಂತೆ ಮಾಡಲಾರಂಭಿಸಿಬಿಡುತ್ತಾರೆ. "ಇದರಿಂದ ಅವ್ಯವಸ್ಥೆ ತಾಂಡವವಾಡುತ್ತದೆ ಹಾಗು ಅದಕ್ಕೆ ಜವಾಬ್ದಾರಿ ನಾವಾಗುತ್ತೇವೆ" ಎನ್ನುತ್ತಾನೆ ಕೃಷ್ಣ.

ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ  ಭಾರತ।
ಕುರ್ಯಾದ್ ವಿದ್ವಾಂಸ್ತಥಾsಸಕ್ತಶ್ಚಿಕೀರ್ಷುರ್ಲೋಕಸಂಗ್ರಹಮ್       ॥೨೫॥

ಸಕ್ತಾಃ ಕರ್ಮಣಿ ಅವಿದ್ವಾಂಸಃ ಯಥಾ ಕುರ್ವಂತಿ  ಭಾರತ
ಕುರ್ಯಾತ್  ವಿದ್ವಾನ್ ತಥಾ ಅಸಕ್ತಃ ಚಿಕೀರ್ಷುಃ ರ್ಲೋಕ ಸಂಗ್ರಹಮ್ -ಓ ಭಾರತ, ತಿಳಿಯದ ಮಂದಿ ಫಲದ ನಂಟಿಗಾಗಿ ಕರ್ಮಗಳನ್ನು ಮಾಡುತ್ತಾರೆ ಹೇಗೆ, ಹಾಗೇ ತಿಳಿದವನೂ ಕರ್ಮ ಮಾಡುತ್ತಿರಬೇಕು-ಫಲದ ನಂಟು ತೊರೆದು, ಸಮಾಜವನ್ನು ತಿದ್ದುವುದಕ್ಕಾಗಿ.

ತಿಳುವಳಿಕೆ ಇಲ್ಲದವರು ಫಲಾಪೇಕ್ಷೆಯಿಂದ ಕರ್ಮ ಮಾಡುತ್ತಾರೆ. ಆದರೆ ತಿಳಿದವನು, ಜ್ಞಾನಿ, ಯಾವುದೇ  ಫಲದ ಅಧಿಕಾರ ಸಾಧಿಸದೆ, ನಿಷ್ಕಾಮ ಕರ್ಮ ಮಾಡುತ್ತಿರಬೇಕು. "ನಾನು ನನ್ನ ಕಣ್ಮಂದೆ ಬೆಳೆಯುತ್ತಿರುವ ಜನಾಂಗಕ್ಕೆ ಮಾರ್ಗದರ್ಶನವಾಗಿ ಭಗವಂತನ ಸೇವೆ ಮಾಡುತ್ತಿದ್ದೇನೆ, ನನಗೆ ಇದರಿಂದ ಭಗವಂತ ಏನು ಕೊಟ್ಟರೂ ಸಂತೋಷ" ಎಂಬ ಸಂಕಲ್ಪದಿಂದ ಕರ್ಮ ಮಾಡಬೇಕು ಇದು ನಿಜವಾದ ಕರ್ಮಯೋಗ.

No comments:

Post a Comment