Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, December 30, 2011

Bhagavad GitA Kannada Chapter-18 Shloka 19-28


ಗುಣತ್ರಯಗಳ ಬಗ್ಗೆ ಹಿಂದೆ ಸಾಕಷ್ಟು ವಿವರಗಳನ್ನು ಕೊಟ್ಟಿದ್ದ ಕೃಷ್ಣ, ಇಲ್ಲಿ ಜೀವನಕ್ಕೆ ಬಹಳ ಮುಖ್ಯವಾದ ತ್ರೈಗುಣ್ಯ ವಿದ್ಯೆಯನ್ನು ವಿವರಿಸಿದ್ದಾನೆ.

ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ ।
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ               ॥೧೯॥

ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧಾ ಏವ  ಗುಣಭೇದತಃ ।
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವತ್ ಶೃಣು ತಾನಿ ಅಪಿ – ಅರಿವು, ಕಾಯಕ ಮತ್ತು ಮಾಡುವಾತ ಕೂಡ ಗುಣಗಳ ಭೇದದಿಂದ ಮೂರು ತೆರ ಎಂದು ಗುಣಗಳ ಎಣಿಕೆಯ ಪ್ರಕರಣದಲ್ಲಿ [ವೈದಿಕ ಸಾಖ್ಯ ಶಾಸ್ತ್ರದಲ್ಲಿ] ಹೇಳಲಾಗಿದೆ. ಅವುಗಳನ್ನು ಹಾಗೆಯೇ ಆಲಿಸು.

ಪ್ರತಿಯೊಬ್ಬನ ಬದುಕಿನಲ್ಲಿರುವ ಮೂರು ಪ್ರಮುಖ ಘಟಕಗಳೆಂದರೆ ಅರಿವು(ಜ್ಞಾನ), ಕಾಯಕ(ಕರ್ಮ) ಮತ್ತು ಕರ್ತಾ(ಮಾಡುವಾತ). ಏನನ್ನೇ ಮಾಡುವುದಾದರೂ ಕೂಡ ಒಂದು ತಿಳುವಳಿಕೆಯಿಂದ ಮಾಡುತ್ತೇವೆ-ಅದು ಜ್ಞಾನ; ಆ ತಿಳುವಳಿಕೆಯಿಂದ ‘ಮಾಡುವುದು’-ಕರ್ಮ; ಜ್ಞಾನ ಮತ್ತು ಕರ್ಮಗಳಿಗೆ ಆಶ್ರಿತನಾಗಿರತಕ್ಕಂತವ-ಕರ್ತಾ. ಈ ಮೂರೂ ಕೂಡ ಗುಣತ್ರಯ ವಿಭಾಗಕ್ಕೆ ಒಳಪಟ್ಟು ಪ್ರತಿಯೊಂದೂ ಮತ್ತೆ ಮೂರು ವಿಧವಾಗಿದೆ. ಶಾಸ್ತ್ರದಲ್ಲಿ ಎಲ್ಲಿ ಗುಣಗಳ ಪರಿಗಣನೆ ಆಗುತ್ತದೋ ಅಲ್ಲಿ ಈ ವಿಷಯ ಹೇಳಿದ್ದಾರೆ ಮತ್ತು ಭಗವಂತ ಕಪಿಲವಾಸುದೇವನಾಗಿ  ಜಗತ್ತಿಗೆ ಕೊಟ್ಟ ‘ಪರಮಸಾಂಖ್ಯದಲ್ಲಿ’ ಇದನ್ನು ಹೇಳಲಾಗಿದೆ. ಇದು ಕಪಿಲ ವಾಸುದೇವನಿಂದ ಮೊಟ್ಟಮೊದಲು ಹೇಳಲ್ಪಟ್ಟ, ಪುರಾತನ ಕಾಲದಿಂದಲೂ ಇದ್ದ, ಜಗತ್ತಿಗೆ ಹೇಳಬೇಕಾದ ವಿಷಯಗಳಲ್ಲೇ ಅತ್ಯಂತ ಪ್ರಕೃಷ್ಟವಾದ ವಿಷಯ. ತ್ರೈಗುಣ್ಯವಿಲ್ಲದೆ ಜೀವನವೇ ಇಲ್ಲ. ನಮ್ಮ ಬದುಕಿನ ಎಲ್ಲ ಮುಖದಲ್ಲೂ ವ್ಯಾಪಿಸಿರುವ ಈ ತ್ರೈಗುಣ್ಯವನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ ನಮ್ಮ ಬದುಕನ್ನು ತಿದ್ದಿಕೊಳ್ಳಲು ಸಾಧ್ಯವಿಲ್ಲ ಮತ್ತು ತ್ರಿಗುಣಾತೀತ ಭಗವಂತನ ಕಡೆಗೆ ಸಾಗಲು ಸಾಧ್ಯವಿಲ್ಲ. “ಅತ್ಯಂತ ಪುರಾತನವಾದ ಈ ಮೂಲಭೂತ ಸತ್ಯವನ್ನು ನಾನು ನಿನಗೆ ತದ್ವತ್ತಾಗಿ ಹೇಳುತ್ತೇನೆ -ಅದನ್ನು ಗಮನವಿಟ್ಟು ಆಲಿಸು” ಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ.

ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ ।
ಅವಿಭಕ್ತಂ ವಿಭಕ್ತೇಷು ತಜ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್                   ॥೨೦॥

ಸರ್ವಭೂತೇಷು ಯೇನ ಏಕಂ ಭಾವಂ ಅವ್ಯಯಮ್ ಈಕ್ಷತೇ ।
ಅವಿಭಕ್ತಂ ವಿಭಕ್ತೇಷು ತತ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್ – ಎಲ್ಲ ಜೀವಿಗಳಲ್ಲಿ ಬದಲಾಗದ ಒಂದು ಪರತತ್ವವನ್ನು, ಬಗೆಬಗೆಯ ವಸ್ತುಗಳಲ್ಲಿ ಒಂದೆ ಬಗೆಯ ಭಗವಂತನನ್ನು ಕಾಣುವ ತಿಳಿವು ಸಾತ್ವಿಕ ಎಂದು ತಿಳಿ.

ಬೃಹದಾರಣ್ಯಕ ಉಪನಿಷತ್ತಿನಲ್ಲಿ(೪-೫-೧೧)ಹೇಳುವಂತೆ: “ಅಸ್ಯ ಮಹತೋ ಭೂತಸ್ಯ ನಿಶ್ವಸಿತಮ್”- ‘ಅಂದರೆ ಇಡೀ ಪ್ರಪಂಚ ಆ ಮಹಾಭೂತದ ಉಸಿರಿನ ಉದ್ಗಾರ’. ವಿಷ್ಣು ಸಹಸ್ರನಾಮದಲ್ಲಿ ಹೇಳುತ್ತಾರೆ: “ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ” ಎಂದು. ಅಂದರೆ ಒಬ್ಬನೇ ಒಬ್ಬ ವಿಷ್ಣು ಹಿರಿಯ ಚೇತನ(ಮಹಾಭೂತ); ಅಲ್ಪ ಚೇತನಗಳು(ಭೂತಗಳು) ಹಲವಾರು ಎಂದು. ಗೀತೆಯ ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಅರಿವಿನ ಬಗ್ಗೆ ಹೇಳುತ್ತ ಹೇಳುತ್ತಾನೆ: “ಪರಸ್ಪರ ಭಿನ್ನವಾದ, ಒಂದರಂತೆ ಇನ್ನೊಂದಿಲ್ಲದ, ವಿಲಕ್ಷಣವಾದ ಜೀವಪ್ರಪಂಚದಲ್ಲಿ(ಸರ್ವಭೂತೇಷು)- ಯಾವ ಭೇದವೂ ಇಲ್ಲದೆ, ಪೂರ್ಣ ಗುಣಕ್ರಿಯೆಯಲ್ಲಿ ಅಖಂಡ ಸತ್ಯವಾಗಿರುವ ಒಂದು ತತ್ವ ನೆಲೆಸಿದೆ. ಅನಂತದಲ್ಲಿ ಏಕವಾಗಿರುವ, ತ್ರೈಗುಣ್ಯವರ್ಜಿತ  ಭಗವಂತನೆಂಬ ಈ ತತ್ವ ಯಾವ ಅರಿವಿಗೆ ಗೋಚರವಾಗುತ್ತದೋ ಆ ಅರಿವು ಸಾತ್ವಿಕ” ಎಂದು.

ಪೃಥಕ್ ತ್ವೇನ  ತು ಯಜ್ ಜ್ಞಾನಂ ನಾನಾಭಾವಾನ್ ಪ್ರಥಗ್ ವಿಧಾನ್            ।
ವೇತ್ತಿ ಸರ್ವೇಷು ಭೂತೇಷು ತಜ್ ಜ್ಞಾನಂ ವಿದ್ಧಿ ರಾಜಸಮ್            ॥೨೧॥

ಪೃಥಕ್ ತ್ವೇನ  ತು ಯತ್  ಜ್ಞಾನಂ ನಾನಾಭಾವಾನ್ ಪ್ರಥಗ್ ವಿಧಾನ್           ।
ವೇತ್ತಿ ಸರ್ವೇಷು ಭೂತೇಷು ತತ್  ಜ್ಞಾನಂ ವಿದ್ಧಿ ರಾಜಸಮ್ – ಭಗವಂತನ ಶಕ್ತಿಯಲ್ಲಿ ಅಂತರವನ್ನು ಕಾಣುವುದು, ಎಲ್ಲ ಜೀವಿಗಳಲ್ಲಿ ಬಗೆಬಗೆಯ ದೈವೀಶಕ್ತಿಗಳು ಬೇರೆಬೇರೆಯಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಯುವುದು[ಎಲ್ಲ ಜೀವಿಗಳಲ್ಲಿರುವ ಭೇದವನ್ನು ಮಾತ್ರ ಗುರುತಿಸುವ, ಒಂದರಂತೆ ಒಂದಿಲ್ಲ ಎಂದರಿಯುವ, ಆದರೆ ಭಗವತ್ ಪ್ರಜ್ಞೆಯಿರದ ಕೇವಲ ಭೌತಿಕ ನಿಜದರಿವು] ರಾಜಸ ಎಂದು ತಿಳಿ.

ಏಕಭಕ್ತಿ ಇಲ್ಲದೆ ಅನೇಕ ದೇವತಾವಾದದಲ್ಲಿ ನಂಬಿಕೆ-ರಾಜಸ ಅರಿವು. ಇವರಿಗೆ ಅಖಂಡವಾದ ಪರತತ್ವದ ಎಚ್ಚರವಿರುವುದಿಲ್ಲ. ಇವರು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ದೇವತೆಗಳನ್ನು ಪೂಜೆ ಮಾಡುತ್ತಾರೆ. ಇಂದಿನ ಜ್ಯೋತಿಷ್ಯ ಕೂಡ ಜನರನ್ನು ಈ ತಪ್ಪು ದಾರಿಯಲ್ಲಿ ಹೋಗುವಂತೆ ಪ್ರೇರಣೆ ಮಾಡುತ್ತಿದೆ. ಅಖಂಡವಾದ ಭಗವಂತನ ಎಚ್ಚರವಿಲ್ಲದೆ ಒಂದೊಂದು ಗ್ರಹಚಾರಕ್ಕೆ ಒಂದೊಂದು ದೇವತೆಯಪೂಜೆ ಮಾಡುವುದು ರಾಜಸ ಅರಿವು. ಯಾವ ಪೂಜೆಯೇ ಇರಲಿ ಅದನ್ನು ಸರ್ವನಿಯಾಮಕ ಭಗವಂತನ ಎಚ್ಚರದಿಂದ ಮಾಡಿದರೆ ಆ ಪೂಜೆ ಸಾತ್ವಿಕವಾಗುತ್ತದೆ. ಅದನ್ನು ಬಿಟ್ಟು ನಾನಾ ದೇವತೆಗಳನ್ನು ಬೇರೆಯಾಗಿ ಪೂಜಿಸಿದಾಗ ಅದೇ ಪೂಜೆ  ರಾಜಸವಾಗುತ್ತದೆ.   

ಯತ್ ತು  ಕೃತ್ಸ್ನವದೇಕಸ್ಮಿನ್ ಕಾರ್ಯೇ ಸಕ್ತಮಹೈತುಕಮ್ ।
ಅತತ್ತ್ವಾರ್ಥವದಲ್ಪಂ ಚ ತತ್ ತಾಮಸಮುದಾಹೃತಮ್               ॥೨೨॥

ಯತ್ ತು  ಕೃತ್ಸ್ನವತ್ ಏಕಸ್ಮಿನ್ ಕಾರ್ಯೇ ಸಕ್ತಮ್ ಅಹೈತುಕಮ್ ।
ಅತತ್ತ್ವ ಅರ್ಥವತ್ ಅಲ್ಪಂ ಚ ತತ್ ತಾಮಸಮ್ ಉದಾಹೃತಮ್ –- ಯಾವುದೋ ಒಂದು ಕ್ಷುದ್ರವಾದ ಕಜ್ಜಕ್ಕೆ ಅಂಟಿಕೊಂಡು ಅದೇ ಸರ್ವಸ್ವವೆಂದು [ಬದಲಾಗದ ಜೀವವನ್ನೆ  ಬದಲಾಗದ ಭಗವಂತನೆಂದು, ಇಡಿಯ ವಿಶ್ವ ಒಬ್ಬ ಜೀವನ ಕಲ್ಪನಾವಿಲಾಸ ಎಂದು] ನಂಬುವ, ಕಾರಣವಿರದ, ನಿಜವನ್ನು ಗ್ರಹಿಸಿದ [ವಿಶ್ವ ನಿಜವಲ್ಲ ಎಂದು ಗ್ರಹಿಸುವ] ಕ್ಷುಲ್ಲಕವಾದ ತಿಳಿವು ತಾಮಸ ಎನಿಸುತ್ತದೆ.

ತಾಮಸ ಸ್ವಭಾವಕ್ಕೆ ಅನೇಕ ಮುಖಗಳು. ಕಾಣುವುದು ಅನೇಕ-ಇರುವುದು ಏಕ ಎಂದು ತಿಳಿಯುವುದು; ಜೀವನಿಗಿಂತ ಬೇರೆಯಾದ ಭಗವಂತನನ್ನು ಒಪ್ಪದಿರುವುದು; ಈ ಪ್ರಪಂಚದಲ್ಲಿ ಯಥಾರ್ಥವಾದ ವಸ್ತುವಿಗೆ ಅಸ್ತಿತ್ವವೇ ಇಲ್ಲ ಎಂದು ತಿಳಿದುಕೊಳ್ಳುವುದು; ಅಜ್ಞಾನ-ಅದರಿಂದ ವಿಪರೀತಜ್ಞಾನ; ಅರಿವಿಲ್ಲದಿದ್ದರೂ ಕೂಡ ತನ್ನನ್ನು ತಾನು ಮಹಾಜ್ಞಾನಿ ಎಂದು ಭ್ರಮಿಸುವುದು; ಯಾವುದೋ ಒಂದು ವಿಷಯವನ್ನು ತಿಳಿದುಕೊಂಡು ನಾನು ಎಲ್ಲವನ್ನು ತಿಳಿದಿದ್ದೇನೆ ಅಂದುಕೊಳ್ಳುವುದು, ಇತ್ಯಾದಿ ತಾಮಸ ಅರಿವು ಎನಿಸುತ್ತದೆ. ನಾವು ನಮ್ಮ ಜ್ಞಾನದ ಇತಿ-ಮಿತಿಯನ್ನು ಅರಿತು ಪ್ರತಿ ಕ್ಷಣ ಅದಕ್ಕಿಂತ ಹೆಚ್ಚಿನ ಸತ್ಯವನ್ನು ತಿಳಿಯಲು ನಿರಂತರ ಪ್ರಯತ್ನ ಮಾಡಬೇಕು-ಇಲ್ಲದಿದ್ದರೆ ನಾವು ತಾಮಸರಾಗುತ್ತವೆ. ದ್ವೈತ ಸಿದ್ಧಾಂತ ನಮಗೆ ಸರಿಯಾಗಿ ಅರ್ಥವಾಗಬೇಕಾದರೆ ನಾವು ಅದ್ವೈತ ಮತ್ತು ವಿಶಿಷ್ಟಾದ್ವೈತವನ್ನು ಓದಿರಬೇಕು. ಹಿಂದುತ್ವ ಅರ್ಥವಾಗಬೇಕಾದರೆ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಏನು ಹೇಳುತ್ತದೆ ಎನ್ನುವ ಅರಿವು ನಮಗಿರಬೇಕು. ಇದನ್ನು ಬಿಟ್ಟು ನಾನು ನಂಬಿದ್ದೇ ಸತ್ಯ ಉಳಿದಿದ್ದೆಲ್ಲ ಮಿಥ್ಯ ಎಂದು ಗ್ರಹಿಸುವವನ ಮೂಢ ಅರಿವು ತಾಮಸವೆನಿಸುತ್ತದೆ. ಸದಾ ಸತ್ಯದ ಹುಡುಕಾಟ, ಜ್ಞಾನದ ದಾಹ- ನಮ್ಮನ್ನು ಸಾತ್ವಿಕತೆಯತ್ತ ಕೊಂಡೊಯ್ಯಬಲ್ಲದು. ಜ್ಞಾನವನ್ನು ತನ್ನ ಲೌಕಿಕ, ವ್ಯಾವಹಾರಿಕ ಬದುಕಿಗೆ ಸೀಮಿತಗೊಳಿಸಿಕೊಂಡು; ಇನ್ನೂಬ್ಬರಲ್ಲಿರುವ ಸಾತ್ವಿಕ ಜ್ಞಾನವನ್ನು ಗುರುತಿಸದೆ; ಪರಮಾತ್ಮನ ಪ್ರಜ್ಞೆ ಇಲ್ಲದ ಅನುಷ್ಠಾನದಲ್ಲಿ ಬದುಕುವುವಂತೆ ಮಾಡುವ ಮೂಢ ಅರಿವು ತಾಮಸ.

ನಿಯತಂ ಸಂಗರಹಿತಮರಾಗದ್ವೇಷತಃ ಕೃತಮ್ ।
ಅಫಲಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮುಚ್ಯತೇ              ॥೨೩॥

ನಿಯತಮ್ ಸಂಗರಹಿತಮ್ ಆರಾಗ ದ್ವೇಷತಃ ಕೃತಮ್ ।
ಅಫಲಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮ್ ಉಚ್ಯತೇ – ಹಚ್ಚಿಕೊಳ್ಳದೆ, ಮೆಚ್ಚು-ಕಿಚ್ಚುಗಳಿಗೊಳಗಾಗದೆ, ಫಲದ ಹಂಬಲವಿರದೆ ಮಾಡಿದ ವಿಹಿತವಾದ ಕರ್ಮ ಸಾತ್ವಿಕ ಎನಿಸುತ್ತದೆ.

ನಮಗೆ ಪ್ರಾಪ್ತವಾಗಿರುವ ವಿಹಿತಕರ್ಮವನ್ನು ಭಗವಂತನ ಪೂಜಾರೂಪವಾಗಿ ಮಾಡಿದಾಗ ಅದು ಸಾತ್ವಿಕ ಕರ್ಮವಾಗುತ್ತದೆ. ಈ ಕರ್ಮದಲ್ಲಿ ಯಾವುದೇ ರಾಗ-ದ್ವೇಷವಿಲ್ಲ; ಫಲಾಪೇಕ್ಷೆಯಿಲ್ಲ; ಯಾವುದೇ ರೀತಿ ಅಂಟಿಸಿಕೊಳ್ಳುವಿಕೆಯಿಲ್ಲ.ಶ್ರದ್ಧಾ-ಭಕ್ತಿಯಿಂದ, ನಿರ್ಲಿಪ್ತತೆಯಿಂದ, ಕರ್ತವ್ಯವನ್ನು ನಿರ್ವಂಚನೆಯಿಂದ ಭಗವದರ್ಪಣಾಭಾವದಿಂದ  ಮಾಡುವ ಕರ್ಮ ಸಾತ್ವಿಕ ಕರ್ಮ. 

ಯತ್ ತು  ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ ।
ಕ್ರಿಯತೇ ಬಹುಲಾಯಾಸಂ ತದ್ ರಾಜಸಮುದಾಹೃತಮ್          ॥೨೪॥

ಯತ್ ತು  ಕಾಮ ಈಪ್ಸುನಾ ಕರ್ಮ ಸ ಅಹಂಕಾರೇಣ ವಾ ಪುನಃ       ।
ಕ್ರಿಯತೇ ಬಹುಲ ಆಯಾಸಮ್  ತತ್ ರಾಜಸಮ್ ಉದಾಹೃತಮ್ –ಫಲದ ಬಯಕೆಯಿಂದ ಅಥವಾ ಹಮ್ಮಿನಿಂದ ದೇಹವನ್ನು ಬಳಲಿಸಿ, ದಂಡಿಸಿ ಮಾಡುವ ಕರ್ಮ ರಾಜಸ ಎನಿಸುತ್ತದೆ.

ಮಾಡುವ ಕೆಲಸವೇನೋ ಒಳ್ಳೆಯ ಕೆಲಸವೆ. ಆದರೆ ಅದರ ಹಿಂದೆ ಅನೇಕ ಕಾಮನೆ, ನಾನುಮಾಡಿದೆ ಅನ್ನುವ ಅಹಂಕಾರ ಸೇರಿದಾಗ ಅದು ರಾಜಸ ಕರ್ಮವೆನಿಸುತ್ತದೆ. ನಮ್ಮ ಯಾವುದೋ ಸಮಸ್ಯೆಯ ಪರಿಹಾರಕ್ಕಾಗಿ ಕರ್ಮ ಮಾಡುವುದು, ಕರ್ಮ ಮಾಡುವಾಗ ಅನೇಕ ಫಲದ ಅಪೇಕ್ಷೆಯಿಂದ ಮಾಡುವುದು, ಮಾಡಿದ ಮೇಲೆ ‘ನಾನು ಮಾಡಿದೆ’ ಎಂದು ಅಹಂಕಾರಪಡುವುದು ರಾಜಸ ಕರ್ಮದ ಲಕ್ಷಣ. ಜೀವನಪೂರ್ತಿ ಯಾವುದೋ ಕಾಮನೆಯ ಬೆನ್ನು ಹತ್ತಿ, ನಾಳೆಯ ಸುಖವನ್ನು ಬಯಸಿ, ಇದ್ದ ಇಂದಿನ ಸುಖವನ್ನು ಮರೆತು ದೇಹವನ್ನು ಬಳಲಿಸಿ ಮಾಡುವ ಕರ್ಮ ರಾಜಸ ಕರ್ಮ.

ಅನುಬಂಧಂ ಕ್ಷಯಂ ಹಿಂಸಾಮನಪೇಕ್ಷ್ಯ ಚ ಪೌರುಷಮ್ ।
ಮೋಹಾದಾರಭ್ಯತೇ ಕರ್ಮ ಯತ್ ತತ್ ತಾಮಸಮುಚ್ಯತೇ        ॥೨೫॥

ಅನುಬಂಧಂ ಕ್ಷಯಂ ಹಿಂಸಾಮ್ ಅನಪೇಕ್ಷ್ಯ ಚ ಪೌರುಷಮ್ ।
ಮೋಹಾತ್ ಆರಭ್ಯತೇ ಕರ್ಮ ಯತ್ ತತ್ ತಾಮಸಮ್ ಉಚ್ಯತೇ – ಪರಿಣಾಮ, ಪೋಲು, ತೊಂದರೆಗಳನ್ನು ಗಮನಿಸದೆ, ತನ್ನಳವನ್ನು ಮೀರಿ ತಿಳಿಗೇಡಿತನದಿಂದ ತೊಡಗುವ ಕರ್ಮ ತಾಮಸ ಎನಿಸುತ್ತದೆ.

ತನ್ನ ಯೋಗ್ಯತೆಯನ್ನು ತಿಳಿದುಕೊಳ್ಳದೆ, ಮುಂದೇನಾಗುತ್ತದೆ ಎನ್ನುವ ಯೋಚನೆಯನ್ನೂ ಮಾಡದೆ, ಫಲಾಪೇಕ್ಷೆ, ದುಡುಕು, ಅಹಂಕಾರ, ದ್ವೇಷದಿಂದ; ಭಗವಂತನನ್ನು ಮರೆತು ಮಾಡುವ ಸಮಾಜ ವಿನಾಶಕವಾದ ಕರ್ಮ ತಾಮಸ ಕರ್ಮ. ಇದಕ್ಕೆ ಉತ್ತಮ ದೃಷ್ಟಾಂತ ದುರ್ಯೋಧನ ಮಾಡಿದ ಕರ್ಮಗಳು. ಮುಂದೆ ಆಗುವ ದುರಂತದ ಬಗ್ಗೆ ಯೋಚಿಸದೆ, ಇನ್ನೊಬ್ಬರಿಗೆ ಕೆಟ್ಟದ್ದಾಗಬೇಕು ಎನ್ನುವ ಅನಿಷ್ಟ ಚಿಂತನೆಯಿಂದ ಮಾಡುವ ಕರ್ಮ ತಾಮಸ. ಒಳ್ಳೆಯ ಕರ್ಮವೂ ಕೆಟ್ಟ ಉದ್ದೇಶದಿಂದ ಮಾಡಿದಾಗ ತಾಮಸವಾಗುತ್ತದೆ.

ಜ್ಞಾನ ಮತ್ತು ಕರ್ಮದಲ್ಲಿ ತ್ರೈವಿದ್ಯದ ವಿಧವನ್ನು ಹೇಳಿದ ಕೃಷ್ಣ ಮುಂದೆ ‘ಕರ್ತಾ’ನಲ್ಲಿ ಮೂರು ವಿಧವನ್ನು ವಿವರಿಸುತ್ತಾನೆ.
     
ಮುಕ್ತಸಂಗೋSನಹಂವಾದೀ ಧೃತ್ಯುತ್ಸಾಹಸಮನ್ವಿತಃ ।
ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ                 ॥೨೬॥

ಮುಕ್ತ ಸಂಗಃ ಅನಹಂವಾದೀ ಧೃತಿ ಉತ್ಸಾಹ ಸಮನ್ವಿತಃ ।
ಸಿದ್ಧಿ ಅಸಿಧ್ಯೋಃ ನಿರ್ವಿಕಾರಃ ಕರ್ತಾ ಸಾತ್ತ್ವಿಕಃ ಉಚ್ಯತೇ -- ಹಚ್ಚಿಕೊಳ್ಳದವನು, ನಾನು ಮಾಡಿದೆ ಎಂದು ಕೊಚ್ಚಿಕೊಳ್ಳದವನು, ಹುರುಪಳಿಯದ ಗಟ್ಟಿಗ, ಗಳಿಕೆ-ಅಳಿಕೆಗಳಿಂದ ವಿಚಲಿತನಾಗದವನು ಸಾತ್ವಿಕ ಕರ್ತಾರ ಎನಿಸುತ್ತಾನೆ.

ಸಾತ್ವಿಕ ಕರ್ತಾ ಯಾವುದನೂ ಅಂಟಿಸಿಕೊಳ್ಳುವುದಿಲ್ಲ. ಹೇಗೆ ಯಾವುದೇ ಪೂಜೆಯ ಕೊನೆಯಲ್ಲಿ ‘ಶ್ರೀ ಕೃಷ್ಣಾರ್ಪಣಮಸ್ತು’ ಎಂದು ಅರ್ಪಿಸುವ ಪದ್ಧತಿ ಇದೆಯೊ ಹಾಗೆ ಸಾತ್ವಿಕ ತನ್ನ ಜೀವನದಲ್ಲಿ ತಾನು ಮಾಡುವ ಎಲ್ಲ ಕರ್ಮವನ್ನು ಭಗವದ್ ಭಕ್ತಿಯಿಂದ ಭಗವದರ್ಪಣಾಭಾವದಿಂದ ಮಾಡುತ್ತಾನೆ. ಅವನಿಗೆ ‘ನಾನು ಮಾಡಿದೆ’ ಎನ್ನುವ ಅಹಂಕಾರವೇ ಇಲ್ಲ. ಯಾವುದೇ ಕೆಲಸವಿರಲಿ ಆತ ಅದನ್ನು ಅತ್ಯುತ್ಸಾಹದಿಂದ ಮಾಡುತ್ತಾನೆ. ಮಾಡಿದ ಕೆಲಸ ಕೈಗೂಡದಿದ್ದಾಗ ಆತ ಕುಸಿಯುವುದಿಲ್ಲ, ಯಶಸ್ವೀಯಾದಾಗ ಹಾರಾಡುವುದಿಲ್ಲ. ಎಲ್ಲವನ್ನು ವಿರ್ವಿಕಾರನಾಗಿ ಮಾಡುತ್ತಾನೆ. ಇದನ್ನೇ ದ್ವಾದಷಸ್ತೋತ್ರದಲ್ಲಿ ಆಚಾರ್ಯರು ಈ ರೀತಿ ಸುಂದರವಾಗಿ ಹೇಳಿದ್ದಾರೆ:
ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಂ |
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ಪಿತೃಮಾತೃಗತಿಃ      ||
ನಿನ್ನ ಪಾಲಿನ ಕರ್ಮ ನೀನು ಮಾಡು. ಬಂದುದನುಣ್ಣು. ಹರಿಪಾದದ ಸ್ಮರಣೆ ತಪ್ಪದಿರಲಿ-ಇದು ಸಾತ್ವಿಕನ ಜೀವನದ ಮೂಲ ಮಂತ್ರ.

ರಾಗೀ ಕರ್ಮಫಲಪ್ರೇಪ್ಸುರ್ಲುಬ್ಧೋ ಹಿಂಸಾತ್ಮಕೋSಶುಚಿಃ    ।
ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ                    ॥೨೭॥

ರಾಗೀ ಕರ್ಮಫಲ ಪ್ರೇಪ್ಸು ಲುಬ್ಧಃ ಹಿಂಸಾ ಆತ್ಮಕಃ ಅಶುಚಿಃ    ।
ಹರ್ಷ ಶೋಕ ಅನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ – ಹಚ್ಚಿಕೊಳ್ಳುವವ, ಫಲ ದೊರೆತಾಗ ಹಿಗ್ಗುವವ, ಇರದಾಗ ಕುಗ್ಗುವವ –ಇಂಥ ಕರ್ತಾರ ರಾಜಸ ಎನಿಸುತ್ತಾನೆ.

ರಾಜಸನಾದವನು ಒಳ್ಳೆಯ ಕೆಲಸ ಮಾಡುತ್ತಾನೆ ಆದರೆ ಅದರಲ್ಲಿ ‘ಹರ್ಷ ಶೋಕ’ ತುಂಬಿರುತ್ತದೆ. ಆತ ತನ್ನ  ಕೆಲಸದಲ್ಲಿ ಯಶಸ್ವೀಯಾದಾಗ ಆಕಾಶಕ್ಕೇರುತ್ತಾನೆ, ಕೆಲಸ ಕೈಗೂಡದಾಗ ಪಾತಾಳಕ್ಕೆ ಕುಸಿಯುತ್ತಾನೆ. ಇದಕ್ಕೆ ಮೂಲ ಕಾರಣ ರಾಜಸನಾದವನು ತನ್ನ ಪ್ರತಿಯೊಂದು ಕರ್ಮವನ್ನು ಫಲಾಪೇಕ್ಷೆಯಿಂದಲೇ ಮಾಡುವುದು. ಆತ  ಕರ್ಮವನ್ನು ಅಂಟಿಸಿಕೊಂಡು ಕರ್ಮಫಲದ ನಿರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾನೆ. ಮಾಡುವ ಕಾರ್ಯದಲ್ಲಿ ಲೋಭ, ಶ್ರದ್ಧೆ ಇಲ್ಲದೆ ಮಾಡುವುದು, ಕರ್ಮ ಮಾಡುವಾಗ ಮಾನಸಿಕ ಸ್ವಚ್ಛತೆ ಇಲ್ಲದೇ ಇರುವುದು ರಾಜಸನಾದವನ ಸ್ವಭಾವ.    

ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಕೃತಿಕೋSಲಸಃ ।
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ               ॥೨೮॥

ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠಃ  ನೈಕೃತಿಕಃ ಅಲಸಃ ।
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸಃ  ಉಚ್ಯತೇ – ನಡೆಗೇಡಿ, ಅಸಂಸ್ಕೃತ[ಭಗವಂತನಲ್ಲಿ ಭಕ್ತಿಯಿರದವ], ಹಿರಿಮೆಗೆ ತಲೆ ಬಾಗದವ, ಉದ್ಧಟ, ಮೋಸಗಾರ, ಸೋಮಾರಿ, ಹುರುಪಿರದವ, ಇನ್ನೊಬ್ಬರ ತಪ್ಪನ್ನೆ  ಅನುಗಾಲ ಟೀಕಿಸುವವ [ಮತ್ತೆ ಮಾಡಿದರೆ ಸರಿ ಎಂದು ಕೆಲಸವನ್ನು ಸುಮ್ಮನೆ ಮುಂದೂಡುವವ]-ಇಂಥ ಕರ್ತಾರ ತಾಮಸ ಎನಿಸುತ್ತಾನೆ.

ತಾಮಸರಲ್ಲಿ ಅನೇಕ ವಿಧ.
(೧) ಅಯುಕ್ತಃ  : ಮಾಡುವ ಕೆಲಸದಲ್ಲಿ ನಂಬಿಕೆ ಶ್ರದ್ಧೆ ಇಲ್ಲದೇ ಇರುವುದು. ಕರ್ಮ ಮಾಡುವಾಗ ಕರ್ಮ ನಿಯಾಮಕನಾದ ಭಗವಂತನಲ್ಲಿ ಮನೋಯೋಗವೇ ಇಲ್ಲದಿರುವುದು.
(೨) ಪ್ರಾಕೃತಃ : ದೇವರ ಮೇಲೆ ನಂಬಿಕೆಯೇ ಇಲ್ಲದವರು. ಕೇವಲ ಪ್ರಾಕೃತ ಪ್ರಪಂಚದಲ್ಲಿ ಆಸಕ್ತಿ ಉಳ್ಳವರು.
(೩)  ಸ್ತಬ್ಧಃ  : ತಾನು ಮಾಡುವ ಕರ್ಮದಲ್ಲಿ ತಪ್ಪಿದ್ದರೂ ಕೂಡ ಅದನ್ನು ತಿದ್ದಿಕೊಳ್ಳದೆ, ತಿಳುವಳಿಕೆ ಇಲ್ಲದೆ, ತಪ್ಪು ನಂಬಿಕೆಯನ್ನೇ ಆಚರಿಸಿಕೊಂಡು ಸಾಗುವವರು.
(೪) ಶಠಃ : ತಪ್ಪು ಎಂದು ಗೊತ್ತಿದ್ದರೂ ತಿದ್ದಿಕೊಳ್ಳುವ ಅಪೇಕ್ಷೆ ಇಲ್ಲದೆ ಇರುವವರು. ನಾನೇಕೆ ತಲೆ ತಗ್ಗಿಸಬೇಕು ಎನ್ನುವ ಮನೋವೃತ್ತಿ ಇರುವವರು.
(೫)ನೈಕೃತಿಕಃ : ಒಳ್ಳೆಯತನದ ವೇಷಹಾಕಿಕೊಂಡು ಬುದ್ಧಿಪೂರ್ವಕವಾಗಿ ಇನ್ನೊಬ್ಬರಿಗೆ ಮೋಸಮಾಡಿ ಲಾಭಪಡೆಯುವವರು.
(೬) ಅಲಸಃ : ಯಾವುದು ಒಳ್ಳೆಯದು ಎನ್ನುವುದು ಗೊತ್ತಿದೆ ಆದರೆ ಮಾಡಲು ಸೋಮಾರಿತನ ಇರುವವರು.
(೭) ವಿಶಾದೀ: ಒಂದು ಕ್ರಿಯೆಯನ್ನು ‘ಅಯ್ಯೋ ಮಾಡಬೇಕಲ್ಲಾ' ಎಂದು ಮಾಡುವವರು. ಮಾಡಿದ ಮೇಲೂ ಮತ್ತೆ ಬೇಸರ ವ್ಯಕ್ತಪಡಿಸುವವರು.
(೮) ದೀರ್ಘಸೂತ್ರಿ: ಮತ್ತೆ ಮಾಡಿದರಾಯ್ತು ಎಂದು ದೀರ್ಘಕಾಲ ಕೆಲಸವನ್ನು ಮುಂದೂಡುವವರು. ಇನ್ನೊಬ್ಬರ ಒಳ್ಳೆಯಗುಣವನ್ನು ಕಾಣದೇ ಅವರ ಯಾವುದೋ ಹಳೆಯ ತಪ್ಪನ್ನೇ ಎತ್ತಿ ಹೇಳುವವರು.
ಇಲ್ಲಿ ಹೇಳಿರುವ ಯಾವ ಒಂದು ಗುಣವಿದ್ದರೂ ಕೂಡ ಆತ ತಾಮಸನೆನಿಸುತ್ತಾನೆ. ಉದಾಹರಣೆಗೆ ಈ ಎಲ್ಲಾ ಗುಣಗಳಿದ್ದ ವ್ಯಕ್ತಿ ಮಹಾಭಾರತದ ದುರ್ಯೋಧನ.             

Wednesday, December 28, 2011

Bhagavad Gita Kannada Chapter-18 Shloka 11-18


ನಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ ।
ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ                         ॥೧೧॥

ನಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣಿ ಅಶೇಷತಃ ।
ಯಃ ತು  ಕರ್ಮ ಫಲ ತ್ಯಾಗೀ ಸಃ ತ್ಯಾಗೀ ಇತಿ ಅಭಿಧೀಯತೇ –ಶರೀರದಲ್ಲಿರುವಷ್ಟು ಕಾಲ ಕರ್ಮಗಳನ್ನು ಪೂರ್ತಿಯಾಗಿ  ಬಿಡುವುದು ಸಾಧ್ಯವಿಲ್ಲ. ಕರ್ಮದ ಫಲವನ್ನು ತೊರೆದವನೆ ಕರ್ಮತ್ಯಾಗಿ.

ಮನುಷ್ಯನಾಗಿ ಹುಟ್ಟಿದ ಮೇಲೆ, ಹುಟ್ಟಿನಿಂದ ಸಾಯುವ ತನಕ ನಾವು ಕರ್ಮ ಮಾಡಲೇ ಬೇಕು. ಕರ್ಮವನ್ನೇ ಬಿಟ್ಟು ಬದುಕಲು ಸಾಧ್ಯವಿಲ್ಲ. ನಾವು ತೊರೆಯಬೇಕಾದದ್ದು ಕರ್ಮವನ್ನಲ್ಲ-ಕರ್ಮಫಲವನ್ನು. ಈ ರೀತಿ ಕರ್ಮ ಮಾಡಿಕೊಂಡು ಕರ್ಮಫಲ ತೊರೆದವನು ಕರ್ಮತ್ಯಾಗಿ ಎನಿಸುತ್ತಾನೆ.   

ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।
ಭವತ್ಯತ್ಯಾಗಿನಾಂ ಪ್ರೇತ್ಯ ನತು ಸಂನ್ಯಾಸಿನಾಂ ಕ್ವಚಿತ್                 ॥೧೨॥

ಅನಿಷ್ಟಮ್ ಇಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।
ಭವತಿ ಅತ್ಯಾಗಿನಾಂ ಪ್ರೇತ್ಯ ನತು ಸಂನ್ಯಾಸಿನಾಂ ಕ್ವಚಿತ್ – ಕರ್ಮದ ಫಲ ಮೂರು ತೆರ: ಬೇಕಾದ್ದು, ಬೇಡವಾದದ್ದು, ಮತ್ತು ಎರಡರ ಬೆರಕೆ. ಫಲತ್ಯಾಗ ಮಾಡದವರಿಗೆ ಇದು ಸತ್ತಮೇಲೆ ಸಲ್ಲುತ್ತದೆ. ಫಲದ ನಂಟು ತೊರೆದವರಿಗೆ ಇದು ಎಂದೂ ಸೋಕುವುದಿಲ್ಲ.

ಕರ್ಮ ಮಾಡುವುದರಿಂದ ಸುಖವಾಗಬಹುದು; ದುಃಖವಾಗಬಹುದು; ಅಥವಾ ಸುಖ-ದುಃಖದ ಬೆರಕೆಯ ಫಲ ಸಿಗಬಹುದು. ಕರ್ಮಫಲ ತ್ಯಾಗ ಮಾಡದೆ ಕರ್ಮ ಮಾಡುವವರಿಗೆ ಇದು ಸತ್ತ ಮೇಲೆ ಸಲ್ಲುತ್ತದೆ. ಇವರು ಕರ್ಮ ಮತ್ತು ಕರ್ಮ ಫಲದ ಸುಳಿಯಲ್ಲಿ ಸಿಲುಕಿ  ಮತ್ತೆ ಸಂಸಾರ ಬಂಧದಲ್ಲಿ ಸಿಲುಕುತ್ತಾರೆ. ಆದರೆ ಕರ್ಮ ಫಲದ ಅಪೇಕ್ಷೆ ಇಲ್ಲದವರಿಗೆ ಇದು ಎಂದೂ ಸೋಕುವುದಿಲ್ಲ. ಅವರಿಗೆ ಏನು ಬಂದರೂ ಅದು ಭಗವಂತನ ಪ್ರಸಾದ. ಅದರಲ್ಲಿ ಬೇಕಾದ್ದು, ಬೇಡವಾದದ್ದು ಎನ್ನುವ ಭೇದವಿಲ್ಲ. ಇದು ಮೋಕ್ಷ ಮಾರ್ಗ. ಉದಾಹರಣೆಗೆ ರಾಜ್ಯದ, ಅಧಿಕಾರದ ಆಸೆಯಿಂದ, ಭಗವಂತನನ್ನು ಮರೆತು ಯುದ್ಧವನ್ನು ಮಾಡುವವ- ಯುದ್ಧದಲ್ಲಿ ನಡೆಯುವ ಪ್ರಾಣಹಾನಿಗೆ ಕಾರಣನಾಗುತ್ತಾನೆ. ಆತ ಈ ಪಾಪದ ಹೊರೆಯನ್ನು ಸತ್ತ ನಂತರ ಪಡೆಯಬೇಕಾಗುತ್ತದೆ. ಆದರೆ ಕರ್ತವ್ಯ ಕಾರಣಕ್ಕಾಗಿ ಯಾವುದೇ ಸ್ವಾರ್ಥವಿಲ್ಲದೆ ಎಲ್ಲವನ್ನು ಭಗವಂತನಿಗೆ ಅರ್ಪಿಸಿ ಯುದ್ಧ ಮಾಡುವವನಿಗೆ ಯಾವ ಪಾಪದ ಲೇಪವೂ ಅಂಟುವುದಿಲ್ಲ.     

ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್          ॥೧೩॥

ಪಂಚ ಏತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತ ಅಂತೇ ಪ್ರೋಕ್ತಾನಿ ಸಿದ್ಧಯೇ ಸರ್ವ ಕರ್ಮಣಾಮ್ –ಎಲ್ಲ ಕಾರ್ಯಗಳು ಕೈಗೂಡಲು ಇವು ಐದು ಕಾರಣಗಳು. ಹೇ ಮಹಾಬಾಹೋ, ವೈದಿಕ ಜ್ಞಾನದ ಸಿದ್ಧಾಂತದಲ್ಲಿ ಹೇಳಲಾದ ಅವುಗಳನ್ನು ನನ್ನಿಂದ ತಿಳಿದುಕೋ :

ನಮ್ಮಲ್ಲಿ ಅನೇಕರಿಗೆ ಒಂದು ಪ್ರಶ್ನೆ ಇದೆ. ನಾವು ಮಾಡಿದ ಕೆಲಸವನ್ನು ‘ನಾನು ಮಾಡಿದೆ’ ಅನ್ನುವುದರಲ್ಲಿ ತಪ್ಪೇನು’ ಎಂದು. ಈ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಾದರೆ, ಒಂದು ಕ್ರಿಯೆ ನಡೆಯಬೇಕಾದರೆ ಆ ಕ್ರಿಯೆಯ ಹಿಂದೆ ಇರುವ ಐದು ಕಾರಣಗಳನ್ನು ತಿಳಿದುಕೊಳ್ಳಬೇಕು. ವೈದಿಕ ಸಾಂಖ್ಯ ಶಾಸ್ತ್ರದಲ್ಲಿ, ಜ್ಞಾನದ ಸಿದ್ಧಾಂತದಲ್ಲಿ ಹೇಳಲಾದ ಈ ಐದು ಕಾರಣಗಳನ್ನು ಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ. 
ಇಲ್ಲಿ ಕೃಷ್ಣ ಅರ್ಜುನನನ್ನು ಮಹಾಬಾಹೋ ಎಂದು ಸಂಬೋಧಿಸಿದ್ದಾನೆ. 'ಮಹಾ-ಬ' ಅಂದರೆ ಮಹತ್ತಾದ ಬಯಕೆಗಳು. ಅದನ್ನು ತ್ಯಾಗ ಮಾಡಿದವ-ಮಹಾಬಾಹು. ನಾವೆಲ್ಲರೂ ನಮ್ಮ ಜೀವನದಲ್ಲಿ ಕರ್ಮಫಲತ್ಯಾಗ ಮಾಡಿ, ಕೇವಲ ಭಗವದರ್ಪಣಾ ಭಾವದಿಂದ ಕರ್ಮ ಮಾಡುವುದನ್ನು ಕಲಿತುಕೊಂಡು-ಮಹಾಬಾಹುಗಳಾಗಬೇಕು ಎನ್ನುವುದು ಈ ಸಂಬೋಧನೆ ಹಿಂದಿರುವ ಧ್ವನಿ.

ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ ವಿಧಮ್ ।
ವಿವಿಧಾಶ್ಚ ಪೃಥಕ್ ಚೇಷ್ಟಾ ದೈವಂ ಚೈವಾತ್ರ ಪಂಚಮಮ್                ॥೧೪॥

ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ ವಿಧಮ್ ।
ವಿವಿಧಾಃ ಚ ಪೃಥಕ್ ಚೇಷ್ಟಾ ದೈವಂ ಚ ಏವ ಅತ್ರ ಪಂಚಮಮ್ – ಕ್ರಿಯೆ ನಡೆಯುವ ತಾಣ, ಮಾಡುವ ಭಗವಂತ [ಜೀವ], ಬೇರೆಬೇರೆ ಉಪಕರಣಗಳು, ಬಗೆಬಗೆಯ ಪೂರಕ ಕ್ರಿಯೆಗಳು ಮತ್ತು ಐದನೆಯದಾದ ಅದೃಷ್ಟ[ಭಗವಂತ].

ಪ್ರತಿಯೊಂದು ಕ್ರಿಯೆ ನಡೆಯಲು ಐದು ಕಾರಣಗಳು:
(೧) ಅಧಿಷ್ಠಾನ: ಇಲ್ಲಿ ಅಧಿಷ್ಠಾನ ಎಂದರೆ ನೆಲೆ. ನಮ್ಮ ದೇಹವೇ ನಮ್ಮ ಅಧಿಷ್ಠಾನ. ಈ ಸಾಧನಾ ಶರೀರವಿಲ್ಲದೆ ಯಾವ ಕ್ರಿಯೆಯೂ ನಡೆಯುವುದಿಲ್ಲ. ನಿನಗೆ ದೊರೆತಿರುವ ಸಾಧನಾ ಶರೀರ ಆ ಭಗವಂತನ ಪ್ರಸಾದ.
(೨) ಕರ್ತಾ: ಶರೀರದಲ್ಲಿ ಕೂತು ನಮ್ಮ ಕ್ರಿಯೆಗಳನ್ನು ನಿಯಂತ್ರಿಸುವ ಭಗವಂತ ಕರ್ತಾ. ಆತ ಸ್ವತಂತ್ರ. ಆತನಿಗೆ ಅಧೀನವಾಗಿರುವ ಜೀವ(ನಾನು-Self) ಸ್ವತಂತ್ರನಲ್ಲ. ಆದರೆ ಜೀವನಿಗೆ ಇಚ್ಛಾಪೂರ್ವಕ ಕೃತಿ ಇದೆ.
(೩) ಕರಣಗಳು: ನಮ್ಮ  ಇಂದ್ರಿಯಗಳು. ನಮ್ಮ ಇಂದ್ರಿಯಗಳನ್ನು ದೇವತೆಗಳು ನಿಯಂತ್ರಿಸುತ್ತಾರೆ. ಇಂದ್ರಿಯಗಳ ಒಡೆಯ ಭಗವಂತ(ಹೃಷೀಕೇಶ). ಇಂದ್ರಿಯಗಳು ನಮಗೆ ಭಗವಂತನ ಮಹಾ ಪ್ರಸಾದ.
(೪) ವಿವಿಧ ಪೂರಕ ಸಾಧನಗಳು: ಒಂದು ಕ್ರಿಯೆ ಆಗಬೇಕಾದರೆ ಅದಕ್ಕೆ ಪೂರಕವಾದ ಅನೇಕ ಪೂರಕ ಸಾಧನಗಳು ಅಗತ್ಯ.
(೫) ದೈವಂ: ನಮ್ಮ ಪ್ರತಿಯೊಂದು ಕ್ರಿಯೆ ಭಗವಂತನ ಸಂಕಲ್ಪವನ್ನು ಅವಲಂಭಿಸಿದೆ. ಇದನ್ನು ಅದೃಷ್ಟ, ಹಣೆಬರಹ ಎಂದೂ ಕರೆಯಬಹುದು. 

ಈ ಮೇಲಿನ ವಿಷಯವನ್ನು ಉದಾಹರಣೆಯೊಂದಿಗೆ ನೋಡುವುದಾದರೆ- ಒಬ್ಬ ಅತ್ಯುತ್ತಮ ಮಾತುಗಾರ. ಆತ ಅಷ್ಟೊಂದು ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ ಮಾತನಾಡುತ್ತಾನೆ. ಆತ ಹೀಗೆ ಮಾತನಾಡಬೇಕಾದರೆ ಆತ ಮೂಗನಾಗಿರಬಾರದು, ಬಾಯಿ ಇದ್ದರೆ ಸಾಲದು-ಬಾಯಿಯಲ್ಲಿ ಶಬ್ದ ಬರಬೇಕು. ಕೇವಲ ಶಬ್ದವಲ್ಲ-ಯಾವ ಮಾತನಾಡಬೇಕೋ ಅದಕ್ಕನುಗುಣವಾದ ಶಬ್ದ ಬರಬೇಕು. ಆ ಶಬ್ದ ಬರಬೇಕಾದರೆ ಮಾತಿಗೆ ಒಂದು ಭಾವ ಬೇಕು. ಭಾವ ಅನ್ನುವುದು ಮನಸ್ಸಿನಲ್ಲಿ ಹೊಳೆಯಬೇಕು, ಹೊಳೆದ ಭಾವಕ್ಕೆ ತಕ್ಕಂತೆ ಶಬ್ದ ಬರಬೇಕು, ಆ ಶಬ್ದ ಬಾಯಿಯಲ್ಲಿ ಸ್ಫುಟವಾಗಿ ಹೊರ ಹೊಮ್ಮಬೇಕು. ಭಾವನೆಯಿಂದ ಶಬ್ದದ ಹುಟ್ಟಿಗೆ ಆಕಾಶ-ಗಾಳಿ ಮಾಧ್ಯಮ. ಈ ಎಲ್ಲ ಕ್ರಿಯೆ ಸುಸೂತ್ರವಾಗಿ ನಡೆದರೆ ಮಾತ್ರ ಆತ ಚನ್ನಾಗಿ ಮಾತನಾಡಬಲ್ಲ. ಮನಸ್ಸಿನಲ್ಲಿ ಭಾವ ಮತ್ತು ಶಬ್ದವನ್ನು ಹೊಳೆಸುವವನು ಯಾರು? ಒಂದು ವೇಳೆ ಹೇಳಬೇಕು ಅನ್ನುವ ವಿಷಯಕ್ಕೆ ಅನುಗುಣವಾದ ಶಬ್ದ ಹೊಳೆಯದೆ ಇದ್ದರೆ? ನಮ್ಮ ಮೆದುಳಿನಲ್ಲಿ ಯಾವುದೋ ಒಂದು ಗುಂಡಿ ಆ ಕ್ಷಣದಲ್ಲಿ ಕೆಲಸ ಮಾಡದೆ ಇದ್ದರೆ? ಹುಟ್ಟುವಾಗಲೇ ಮೂಗನಾಗಿ ಹುಟ್ಟಿದ್ದರೆ? ಜ್ಞಾನ ಪರಂಪರೆಯೇ ಇಲ್ಲದ ಮನೆತನದಲ್ಲಿ ಹುಟ್ಟಿದ್ದರೆ? ಇಲ್ಲಿ ನಮ್ಮ ಕೈವಾಡ ಏನಿದೆ? ಇದು ತಿಳಿದಾಗ ‘ನಾನು ಮಾಡಿದೆ’ ಎನ್ನುವ ಅಹಂಕಾರ ಬಾರದು. ಈ ಅರಿವಿದ್ದಾಗ ಎಲ್ಲರೊಡನೆ ಎಲ್ಲರಂತೆ ಇದ್ದು ಅಂಟಿಸಿಕೊಳ್ಳದೆ   ಇರಲು ಸಾಧ್ಯ.

ಶರೀರವಾಙ್ಮನೋಭಿರ್ಯತ್ ಕರ್ಮ ಪ್ರಾರಭತೇ ನರಃ ।
ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ                 ॥೧೫॥

ಶರೀರ ವಾಕ್ ಮನೋಭಿಃ ಯತ್ ಕರ್ಮ ಪ್ರಾರಭತೇ ನರಃ ।
ನ್ಯಾಯ್ಯಂ ವಾ ವಿಪರೀತಂ ವಾ ಪಂಚ ಏತೇ ತಸ್ಯ ಹೇತವಃ – ಮೈ-ಮಾತು-ಮನಗಳಿಂದ ಮನುಷ್ಯ ಯಾವ ಕೆಲಸ ಕೈಗೊಂಡರೂ –ಅದು ಒಪ್ಪಿರಲಿ, ತಪ್ಪಿರಲಿ-ಇವು ಐದು ಅದಕ್ಕೆ ಕಾರಣಗಳು.

ಮೈ-ಮಾತು-ಮನಗಳಿಂದ ನಾವು ಯಾವ ಕ್ರಿಯೆ ಮಾಡಿದರೂ ಅದರ ಹಿಂದೆ ಮೇಲೆ ಹೇಳಿದ ಐದು ಕಾರಣಗಳಿರುತ್ತವೆ. ಆ ಕ್ರಿಯೆ ಒಳ್ಳೆಯದಿರಬಹುದು ಅಥವಾ ಕೆಟ್ಟದ್ದಿರಬಹುದು. ಕ್ರಿಯೆ ಮಾತ್ರ ಈ ಐದು ಕಾರಣಗಳಿಂದಲೇ ನಡೆಯುವುದು.

ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ        ।
ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿಃ                                ॥೧೬॥

ತತ್ರ ಏವಂ ಸತಿ  ಕರ್ತಾರಮ್ ಆತ್ಮಾನಂ ಕೇವಲಂ ತು ಯಃ       ।
ಪಶ್ಯತಿ ಅಕೃತ ಬುದ್ಧಿತ್ವಾತ್ ನ ಸಃ  ಪಶ್ಯತಿ ದುರ್ಮತಿಃ –ಅದು ಹೀಗಿರುತ, ಏನೂ ಮಾಡದ ತನ್ನನ್ನು ‘ಮಾಡುವವನು’ ಎಂದು [ತಾನೊಬ್ಬನೇ ಎಲ್ಲ ಮಾಡಿದವನು ಎಂದು] ತಿಳಿದವನು ಬುದ್ಧಿಗೇಡಿ. ಆ ತಿಳಿಗೇಡಿಗಳಿಗೆ ಏನೂ ತಿಳಿದಿಲ್ಲ.

ಈ ರೀತಿ ಐದು ಕಾರಣಗಳು ನಮ್ಮ ಕ್ರಿಯೆಯಲ್ಲಿ ಪಾತ್ರಧಾರಿಗಳಾಗಿರುವಾಗ, ಅದನ್ನು ಅರಿಯದೆ, “ನಾನು ಮಾಡಿದೆ” ಎಂದು ಅಹಂಕಾರ ಪಟ್ಟುಕೊಳ್ಳುವುದು ಅರ್ಥಶೂನ್ಯ. ಈ ರೀತಿ ತಿಳಿದುಕೊಳ್ಳುವವರು ಬುದ್ಧಿಗೇಡಿಗಳು. ಇಂಥಹ ಮತಿಗೇಡಿಗಳು ಏನನ್ನೂ ತಿಳಿದಿಲ್ಲ.    

ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ     ।
ಹತ್ವಾSಪಿ ಸ ಇಮಾನ್ ಲೋಕಾನ್ ನ ಹಂತಿ  ನ ನಿಬಧ್ಯತೇ              ॥೧೭॥

ಯಸ್ಯ ನ ಅಹಂಕೃತಃ ಭಾವಃ  ಬುದ್ಧಿಃ ಯಸ್ಯ ನ ಲಿಪ್ಯತೇ       ।
ಹತ್ವಾ ಅಪಿ ಸ ಇಮಾನ್ ಲೋಕಾನ್ ನ ಹಂತಿ  ನ ನಿಬಧ್ಯತೇ – ನಾನು ಮಾಡಿದೆ ಎಂಬ ಹಮ್ಮಿರದವನು, ಬಗೆಯಲ್ಲಿ ಫಲದ ನಂಟಿರದವನು, ಈ ಮಂದಿಯನ್ನೆಲ್ಲ ಕೊಂದರೂ ಯಾರನ್ನೂ ಕೊಲ್ಲುವುದಿಲ್ಲ. ಕರ್ಮದ ಸೆರೆ ಅವನನ್ನು ಸೋಕದು.

ಕರ್ಮಫಲದ ತ್ಯಾಗ ಮಾಡಿದವ ಯಾವ ಕರ್ಮ ಮಾಡಿದರೂ ಅದು ಅವನಿಗೆ ಬಾಧಕವಾಗುವುದಿಲ್ಲ.  ನಾವು ‘ನನ್ನಿಂದಾಯಿತು’ ಎಂದು ಅಂಟಿಸಿಕೊಳ್ಳದೆ, ಯಾವುದೇ ಫಲಾಪೇಕ್ಷೆ ಇಲ್ಲದೆ, ಕರ್ಮ ಮಾಡಿದಾಗ-ಆ ಕರ್ಮದ ಫಲ ಎಂದೂ ನಮ್ಮನ್ನು ಬಾಧಿಸುವುದಿಲ್ಲ. ನಾವು ಮಹಾಭಾರತ ಯುದ್ಧದ ಸನ್ನಿವೇಶವನ್ನು ನೋಡಿದರೆ-ಪಾಂಡವರಿಗೆ ಯುದ್ಧ ಅನಿವಾರ್ಯವಾಗಿ ಒದಗಿಬಂದಿರುವುದು. ಅವರು ಎಂದೂ ಯುದ್ಧವಾಗಬೇಕು ಎಂದು ಬಯಸಿಲ್ಲ; ಯುದ್ಧದಲ್ಲಿ ಗೆದ್ದು ಅಧಿಕಾರ ಪಡೆಯಬೇಕು ಎಂತಲೂ ಯೋಚಿಸಿಲ್ಲ. ಆದರೆ ಅವರಿಗೆ ಅನಿವಾರ್ಯವಾಗಿ ಯುದ್ಧಮಾಡುವ ಸನ್ನಿವೇಶ ಎದುರಿಗೆ ಬಂದು ನಿಂತಿತು. ಅವರು ಅದನ್ನು 'ಇದು ದೈವೇಚ್ಛೆ' ಎಂದು ಯುದ್ಧದ ಪರಿಣಾಮದ ಬಗ್ಗೆ ಯೋಚಿಸದೆ ಭಗವದರ್ಪಣಾ ಭಾವದಿಂದ ಮಾಡಿದರು. ಈ ರೀತಿ ಒದಗಿ ಬಂದ ಯುದ್ಧದಲ್ಲಿ ಅವರು ಅನೇಕಾನೇಕ ಯೋಧರನ್ನು ಕೊಲ್ಲಬೇಕಾಯಿತು. ಆದರೆ ಅವರು ತಮ್ಮ ಕರ್ತವ್ಯ ಕರ್ಮವನ್ನು ಫಲಾಪೇಕ್ಷೆ, ಅಹಂಕಾರವಿಲ್ಲದೆ ಮಾಡಿದರು.  ಈ ರೀತಿ "ನಿರ್ಲಿಪ್ತ ಮನಸ್ಸಿನಿಂದ ಯುದ್ಧ ಭೂಮಿಯಲ್ಲಿ ಅನೇಕ ಜನರನ್ನು ಕೊಲ್ಲುವ ಪ್ರಸಂಗ ಬಂದರೂ ಕೂಡ-ಆ ಕೊಂದ ಪಾಪ ಕೊಂದವನನ್ನು ಸೋಕುವುದಿಲ್ಲ" ಎನ್ನುತ್ತಾನೆ ಕೃಷ್ಣ. ಆದರೆ ಇಲ್ಲಿ ಬಹಳ ಮುಖ್ಯ ವಿಚಾರ ಎಂದರ-ಮಾನಸಿಕವಾಗಿ ಒಂದು ಕ್ಷಣವೂ ನಮಗೆ ಭಗವಂತನ ಮೇಲೆ ಅಪನಂಬಿಕೆ ಬರಕೂಡದು; ಸಂಪೂರ್ಣ ಅರ್ಪಣಾ ಭಾವದಲ್ಲಿ, ನಿಶ್ಚಿತಾಭಿಪ್ರಾಯದಲ್ಲಿ(Conviction)  ನಮ್ಮ ಪಾಲಿಗೆ ಒದಗಿ ಬಂದಿರುವ ಕರ್ಮವನ್ನು ಫಲಾಪೇಕ್ಷೆ ಇಲ್ಲದೆ ಮಾಡಬೇಕು. ಭಗವಂತನ ಕೈಯಲ್ಲಿ ನಾನು ಒಂದು ಸಾಧನ(Instrument)ಎನ್ನುವ ಎಚ್ಚರದಿಂದ ಎಲ್ಲವನ್ನು ಭಗವಂತನ ಚರಣಗಳಿಗೆ ಅರ್ಪಿಸಿ ಕರ್ಮವನ್ನು ಮಾಡಿದಾಗ ಕರ್ಮದ ಸೆರೆ ನಮ್ಮನ್ನು ಸೋಕುವುದಿಲ್ಲ. ಜೀವನಿಗೆ ಕರ್ಮದ ಫಲ ತಟ್ಟುವುದೇ ಅವನು 'ನಾನು ಮಾಡಿದೆ' ಎಂದು ತಿಳಿದುಕೊಳ್ಳುವುದರಿಂದ.


ಇಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಜೀವನಿಗೆ ಸ್ವತಂತ್ರ ಕರ್ತೃತ್ವ ಇಲ್ಲ, ಕರ್ಮ ಭಗವದಿಚ್ಛೆಯಂತೆ ನಡೆಯುತ್ತದೆ. ಹೀಗಿರುವಾಗ ಜೀವನಿಗೆ ವಿಧಿನಿಷೇಧ ಏಕೆ? ಶಾಸ್ತ್ರ ಏಕೆ ಅದನ್ನು ಮಾಡು, ಇದನ್ನು ಮಾಡಬೇಡ ಎಂದು ಹೇಳುತ್ತದೆ?  ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸಿದ್ದಾನೆ.         

ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ       ।
ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ                              ॥೧೮॥

ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮ ಚೋದನಾ      ।
ಕರಣಂ ಕರ್ಮ ಕರ್ತಾ ಇತಿ ತ್ರಿವಿಧಃ ಕರ್ಮಸಂಗ್ರಹಃ –ಕರ್ಮ ವಿಧಿಯ ಉದ್ದೇಶ ಮೂರು: ಮಾಡಬೇಕೆಂಬ ಅರಿವು, ಅದಕ್ಕಾಗಿ ಅರಿಯಬೇಕಾದ ಕರ್ಮ,ಕರ್ಮಫಲ ಮತ್ತು ಅರಿತು ಮಾಡುವವನು. [ಕರ್ಮಕ್ಕೆ ಕಾರಣವಾದ ಭಗವಂತನ ಪ್ರೇರಣೆ ಅವನ ಸ್ವರೂಪವೇ. ಆದ್ದರಿಂದ ಮುಮ್ಮುಖವಾದ ಅದು ಅರಿವಿನ ರೂಪ, ಎಲ್ಲರೂ ಅರಿಯಬೇಕಾದಂಥದು ಮತ್ತು ಎಲ್ಲವನ್ನೂ ಬಲ್ಲುದು] ಕರ್ಮದ ಕಾರಣವೂ ಅಡಕವಾಗಿ ಮೂರು ತೆರ: ಉಪಕರಣ, ಮಾಡುವಿಕೆ ಮತ್ತು ಮಾಡುವವನು.

ವಿಧಿನಿಷೇಧ  ಇರುವುದು ನಮ್ಮ ಜ್ಞಾನಕ್ಕಾಗಿ. "ಭಗವಂತನನ್ನು 'ನಾನು' ತಿಳಿದುಕೊಳ್ಳಬೇಕು" ಎನ್ನುವುದಕ್ಕಾಗಿ ಕರ್ಮದ ವಿಧಿನಿಷೇಧ. ಕರ್ಮ ಮಾಡುವುದು ಕರ್ಮಕ್ಕಾಗಿ ಅಲ್ಲ-ಜ್ಞಾನಕ್ಕಾಗಿ. ಕರ್ಮದ ವಿಧಾನದ ಹಿಂದಿರುವುದು ಕಾರುಣ್ಯ. ಜ್ಞಾನವಿಲ್ಲದ ಲೋಕಕ್ಕೆ ಭಗವಂತನ ಜ್ಞಾನ-ಆ ಜ್ಞಾನಕ್ಕೆ ಪೂರಕವಾಗಿ ಕರ್ಮ. ಕರ್ಮದ ಹಿಂದಿರುವ ಪ್ರೇರಣೆ ಮೂರು: ಜ್ಞಾನ, ಜ್ಞೇಯ ಮತ್ತು ಜ್ಞಾತಾ.  ಒಂದು ಕ್ರಿಯೆಯನ್ನು ಮಾಡಬೇಕು ಅನ್ನುವ ಅರಿವು; ಆ ಕ್ರಿಯೆಯನ್ನು ಮಾಡಲು ಅರಿಯಬೇಕಾದ ಕರ್ಮ; ಮತ್ತು ಕರ್ಮವನ್ನು ಅರಿತು ಕರ್ಮವನ್ನು ಮಾಡುವವನು. ಭಗವಂತನನ್ನು ತಿಳಿದುಕೊಳ್ಳಬೇಕು ಎನ್ನುವುದು ಕರ್ಮದ ಹಿಂದಿನ ಮೂಲಪ್ರೇರಣೆ. ಕರ್ಮ ಮಾಡುವುದು ನಮ್ಮ ತಿಳಿಗೇಡಿತನವನ್ನು ಕಳಚಿಕೊಂಡು ಜ್ಞಾನವನ್ನು ಪಡೆಯುವುದಕ್ಕೋಸ್ಕರ; ನಮ್ಮ ಅರಿವನ್ನು ಬೆಳೆಸುವುದಕ್ಕೊಸ್ಕರ; ಆ ಅರಿವು ಭಗವನ್ಮುಖವಾಗುವುದಕ್ಕೊಸ್ಕರ. ನಾವು ಅರಿವುಳ್ಳವರಾಗುವುದಕ್ಕೊಸ್ಕರವೇ ಕರ್ಮವಿಧಿನಿಷೇಧ ಶಾಸ್ತ್ರಕಾರರಿಂದ ಬಂತು.
ಜೀವನಿಗೆ ಕರ್ಮ ಮಾಡಬೇಕು ಎನ್ನುವ ಪ್ರೇರಣೆ ಮಾಡುವವ-ಭಗವಂತ. ಅದಕ್ಕನುಗುಣವಾಗಿಯೇ ಜೀವ ಕರ್ಮ ಮಾಡುತ್ತಾನೆ. ಯಾವ ಜೀವ ಏನು ಆಗಬೇಕು ಎನ್ನುವುದು ಆ ಜೀವದ ಸ್ವರೂಪಕ್ಕೆ ಸಂಬಂಧಪಟ್ಟ ವಿಚಾರ. ಆದರೆ ಸ್ವಯಂ ಜೀವನಿಗೆ ಅದನ್ನು ಅಭಿವ್ಯಕ್ತಗೊಳಿಸುವ ಶಕ್ತಿ ಇಲ್ಲ. ಭಗವಂತ ಆ ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಆತನಲ್ಲಿ ಪ್ರೇರಣೆ ಮಾಡುತ್ತಾನೆ. ಭಗವಂತನ ಪ್ರೇರಣೆಯಿಂದ ಜೀವಯೋಗ್ಯತೆ ವ್ಯಕ್ತವಾಗುತ್ತದೆ ಮತ್ತು ಅದಕ್ಕನುಗುಣವಾಗಿ ಜೀವ ಕರ್ಮದಲ್ಲಿ ತೊಡಗುತ್ತಾನೆ. ಇಲ್ಲಿ ಎಲ್ಲವೂ ಮೂಲತಃ  ಭಗವದ್ ಸ್ವರೂಪ. ಭಗವಂತನ ಜ್ಞಾನ-ಭಗವದ್ ಸ್ವರೂಪ, ಭಗವಂತನ ಕ್ರಿಯೆ-ಭಗವದ್ ಸ್ವರೂಪ, ಭಗವಂತನ ಪ್ರೇರಣೆ-ಭಗವದ್ ಸ್ವರೂಪ. ಭಗವಂತನ ಸ್ವರೂಪ ನೇರ ನಮ್ಮ ಮೇಲೆ ಕೆಲಸ ಮಾಡುತ್ತಿರುತ್ತದೆ. ಅವನೇ ಜ್ಞಾನ, ಅವನೇ  ಜ್ಞೇಯ, ಅವನೇ ಜ್ಞಾತೃ. ಆದ್ದರಿಂದ ಅವನ ಪ್ರೇರಣೆ-ಜ್ಞಾನಸ್ವರೂಪ; ಅವನ ಪ್ರೇರಣೆ- ಜ್ಞಾತೃಸ್ವರೂಪ; ಅವನ ಪ್ರೇರಣೆ-ಜ್ಞೇಯ. ಹೀಗೆ ಜ್ಞಾನಸ್ವರೂಪನಾದ ಭಗವಂತನ ಪ್ರೇರಣೆಯಿಂದ ಜೀವ ಕರ್ಮ ಮಾಡುತ್ತಾನೆ ಮತ್ತು ಎಲ್ಲವೂ  ಅವನ ಅಧೀನವಾಗಿ ನಡೆಯುತ್ತದೆ.
ಒಟ್ಟಿನಲ್ಲಿ ಕರ್ಮದ ಕಾರಣಗಳನ್ನು ಅಡಕವಾಗಿ ಹೇಳಬೇಕೆಂದರೆ ಅವು ಮೂರು ವಿಧ: ದೇಹ ಇಂದ್ರಿಯಾದಿ ಉಪಕರಣಗಳು, ಮಾಡುವಿಕೆ(ಕರ್ಮ) ಮತ್ತು ಕರ್ತಾ(ಜೀವ,ಭಗವಂತ ಮತ್ತು ಅದೃಷ್ಟ).

Tuesday, December 27, 2011

Bhagavad GitA Kannada Chapter-18 Shloka 01-10



ಅಧ್ಯಾಯ ಹದಿನೆಂಟು
ಹಿಂದಿನ ಹದಿನೇಳು ಅಧ್ಯಾಯಗಳಲ್ಲಿ ನಮ್ಮ ಸಾಧನೆ ಹೇಗಿರಬೇಕು ಎನ್ನುವುದನ್ನು ವಿವರಿಸಿದ್ದ ಕೃಷ್ಣ, ಇಲ್ಲಿ ಆ ಸಾಧನೆಯ ಸಂದೇಶವನ್ನು ಸಂಗ್ರಹ ರೂಪದಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಇದರ ಜೊತೆಗೆ ಅಧ್ಯಾಯ ಹದಿನೇಳರಲ್ಲಿ ವಿವರಿಸದೇ ಇರುವ ಸಾಧನೆಗೆ ಕುರಿತಾದ  ತ್ರೈಗುಣ್ಯದ ಮುಂದುವರಿದ ವಿವರಣೆ ಕೂಡ ಇಲ್ಲಿದೆ. ಇದು ಗೀತೆಯ ಉಪಸಂಹಾರ.  ಈ ಅಧ್ಯಾಯ ಅರ್ಜುನನ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ.
         
ಅರ್ಜುನ ಉವಾಚ ।
ಸಂನ್ಯಾಸಸ್ಯ ಮಹಾಬಾಹೋ ತತ್ವಮಿಚ್ಛಾಮಿ ವೇದಿತುಮ್ ।
ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿನಿಸೂದನ                             ॥೧॥

ಅರ್ಜುನ ಉವಾಚ –ಅರ್ಜುನ ಕೇಳಿದನು:
ಸಂನ್ಯಾಸಸ್ಯ ಮಹಾಬಾಹೋ ತತ್ವಮ್ ಇಚ್ಛಾಮಿ ವೇದಿತುಮ್ ।
ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿನಿಸೂದನ – ಮಹಾಬಾಹೋ, ಸಂನ್ಯಾಸದ ಮತ್ತು ತ್ಯಾಗದ ಅಂತರವೇನು? ಓ ಹೃಷೀಕೇಶ, ಇದರ ನಿಜವನ್ನು ಕೇಶಿನಿಸೂದನನಾದ ನೀನು ನನಗೆ ತಿಳಿಸು.

ಕೃಷ್ಣ ಮೊದಲು ಸಂನ್ಯಾಸದ ಬಗ್ಗೆ ಹೇಳಿದ್ದ; ಆನಂತರ ಹಿಂದಿನ ಅಧ್ಯಾಯದಲ್ಲಿ ಯಜ್ಞ, ದಾನ, ತಪಸ್ಸು ಎನ್ನುವ ಕರ್ಮಗಳನ್ನು ಹೇಳಿದ. ಇಲ್ಲಿ ನಮಗೆ ಸ್ವಲ್ಪ ಗೊಂದಲವಾಗುತ್ತದೆ. ಹಾಗಾಗಿ ಅರ್ಜುನ ಕೃಷ್ಣನಲ್ಲಿ ಕರ್ಮತ್ಯಾಗ ಮತ್ತು ಕರ್ಮಸಂನ್ಯಾಸ ಇವೆರಡರ ನಡುವಿನ ಅಂತರವೇನು ಎಂದು ಕೇಳುತ್ತಾನೆ. ತ್ಯಾಗ ಮತ್ತು ಸಂನ್ಯಾಸ ಎರಡು ಪದಗಳು ಮೇಲ್ನೋಟಕ್ಕೆ ಒಂದೇ ಅರ್ಥವನ್ನು ಕೊಟ್ಟಂತೆ ಕಂಡರೂ ಕೂಡ, ಅದು ಬೇರೆಬೇರೆ.  ಸಂನ್ಯಾಸ ಮತ್ತು ತ್ಯಾಗದ ಮೂಲಭೂತ ಅರ್ಥವೇನು ? ಅವೆರಡನ್ನು ಪ್ರತ್ಯೇಕವಾಗಿ ಅರ್ಥೈಸುವುದು ಹೇಗೆ ಎನ್ನುವುದು ಅರ್ಜುನನ ಪ್ರಶ್ನೆ.
ಇಲ್ಲಿ ಅರ್ಜುನ ಕೃಷ್ಣನನ್ನು ಮಹಾಬಾಹೋ, ಹೃಷೀಕೇಶ ಮತ್ತು ಕೇಶಿನಿಸೂದನ ಎನ್ನುವ ಮೂರು ದಿವ್ಯ ನಾಮಗಳಿಂದ ಸಂಬೋಧಿಸಿದ್ದಾನೆ. ಇದು ಆತನಲ್ಲಿರುವ ಗುರುಭಕ್ತಿಯನ್ನು ಸೂಚಿಸುತ್ತದೆ ಮತ್ತು  ಕೃಷ್ಣ ಕೇವಲ ವಸುದೇವನ ಮಗನಲ್ಲ, ಅವನು ‘ಭಗವಂತ’ ಎಂದು ಅರ್ಥ ಮಾಡಿಕೊಂಡು ಈ ಪ್ರಶ್ನೆ ಕೇಳಿರುವುದು ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ‘ಮಹಾಬಾಹು’ ಅಂದರೆ ಶತ್ರುಗಳನ್ನು ಎದುರಿಸುವ, ನೀಳವಾದ, ಗಟ್ಟಿಯಾದ ತೊಳುಗಳುಳ್ಳವ ಎನ್ನುವುದು ಮೇಲ್ನೋಟದ ಅರ್ಥ. ದುಷ್ಟನಿಗ್ರಹ ಮಾಡಿ ಶಿಷ್ಟ ರಕ್ಷಣೆ ಮಾಡುವ, ಎಲ್ಲರೊಳಗಿನ ಅಜ್ಞಾನವನ್ನು ನೀಗಿಸುವ, ಲೋಕರಕ್ಷಕ ತೋಳುಳ್ಳವ ಎನ್ನುವುದು ಈ ದಿವ್ಯ  ನಾಮದ ಹಿಂದಿರುವ ಮೂಲ ಅರ್ಥ.  ಇನ್ನು ‘ಹೃಷೀಕ’ ಎಂದರೆ ಇಂದ್ರಿಯಗಳು. ಪಿಂಡಾಂಡದೊಳಗಿದ್ದು ಸರ್ವ ಇಂದ್ರಿಯಗಳನ್ನು ನಿಯಂತ್ರಿಸುವ ಭಗವಂತ ಹೃಷೀಕೇಶ. ‘ಕೇಶಿ’ ಅಂದರೆ ಸೂರ್ಯಕಿರಣ; ವಾಯುದೇವರು(Ref: ಋಗ್ವೇದ ೧೦.೧೩೬.೦೭). ಸೌರಮಂಡಲದಲ್ಲಿದ್ದು; ತನ್ನ ಅಂತರಂಗದ ಭಕ್ತನಾದ ಪ್ರಾಣದೇವರಲ್ಲಿದ್ದು; ನಮ್ಮ ಅಭೀಷ್ಟವನ್ನು ಪೂರೈಸುವ, ನಮಗೆ ಶಕ್ತಿತುಂಬುವ  ಭಗವಂತ ‘ಕೇಶಿನಿಸೂದನ’. ಅವನು ಬ್ರಹ್ಮಾಂಡ ಮತ್ತು ಪಿಂಡಾಂಡದೊಳಗಿದ್ದು ಇಡೀ ವಿಶ್ವವನ್ನು ನಿಯಂತ್ರಿಸುವ ಮಹಾಶಕ್ತಿ . [ಹೆಚ್ಚಿನ ಕಡೆ ‘ಕೇಶಿನಿಷೂದನ’ ಎನ್ನುವ ಪದ ಬಳಕೆಯಲ್ಲಿದೆ, ಆದರೆ ಸರಿಯಾದ ಪದ ಕೇಶಿನಿಸೂದನ).           

ಭಗವಾನುವಾಚ ।
ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ ।
ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ                         ॥೨॥

ಭಗವಾನ್ ಉವಾಚ- ಭಗವಂತ ಹೇಳಿದನು:
ಕಾಮ್ಯಾನಾಮ್  ಕರ್ಮಣಾಮ್  ನ್ಯಾಸಮ್  ಸಂನ್ಯಾಸಂ ಕವಯಃ  ವಿದುಃ ।
ಸರ್ವಕರ್ಮಫಲ ತ್ಯಾಗಮ್  ಪ್ರಾಹುಃ ತ್ಯಾಗಂ ವಿಚಕ್ಷಣಾಃ –ಕಾಮ್ಯ ಕರ್ಮಗಳನ್ನು ತೊರೆಯುವುದನ್ನು ಬಲ್ಲವರು ‘ಸಂನ್ಯಾಸ’ ಎನ್ನುತ್ತಾರೆ. ಎಲ್ಲ ಕರ್ಮಗಳ ಫಲವನ್ನಷ್ಟೆ ತೊರೆಯುವುದನ್ನು ತಿಳಿದವರು ‘ತ್ಯಾಗ’ ಎನ್ನುತ್ತಾರೆ.

ಇಲ್ಲಿ ಹೇಳುವ ಸಂನ್ಯಾಸ ಗೃಹಸ್ಥರನ್ನೂ ಒಳಗೊಂಡು ಎಲ್ಲ ಸಾಧಕರಿಗೂ ಅನ್ವಯವಾಗುವ ಸಂನ್ಯಾಸ. ಸಂನ್ಯಾಸದಲ್ಲಿ ಎರಡು ವಿಧ. ಒಂದು ಕರ್ಮದ ಫಲವನ್ನು ಬಿಡುವುದು, ಇನ್ನೊಂದು ಬಯಕೆಗಳಿಂದ ಪ್ರೇರಿತವಾದ ಕರ್ಮವನ್ನೇ ತ್ಯಾಗ ಮಾಡುವುದು. ಇಲ್ಲಿ ತ್ಯಾಗ ಎಂದರೆ ಕರ್ಮವನ್ನು ತ್ಯಾಗ ಮಾಡುವುದಲ್ಲ, ಬದಲಿಗೆ ಯಾವ ಕರ್ಮವೇ ಇರಲಿ, ಅದನ್ನು ಮಾಡಿ-ಯಾವುದೇ ಫಲನ್ನು ಬಯಸದೇ ಇರುವುದು. ಆದ್ದರಿಂದ ಕರ್ಮತ್ಯಾಗ ಅಂದರೆ: ವೇದಾಧ್ಯಯನ ಬಿಡುವುದು, ಸಂಧ್ಯಾವಂದನೆ ಬಿಡುವುದು, ವೃತಾನುಷ್ಠಾನ ಇತ್ಯಾದಿಯನ್ನು ಬಿಡುವುದು ಎಂದಲ್ಲ. ಬದಲಿಗೆ ಸತ್ಕರ್ಮವನ್ನು ಮಾಡಿ ಅದರ ಫಲವನ್ನು ಬಯಸದೇ ಇರುವುದು ಎಂದರ್ಥ. ಯಾವ ಕರ್ಮವೇ ಇರಲಿ ಅದನ್ನು ಭಗವದ್ ಪ್ರೀತ್ಯರ್ತ ಮಾಡು-ಫಲ ಬಯಕೆಯಿಂದಲ್ಲ. 
ಇಲ್ಲಿ ಕವಯಃ ಮತ್ತು ವಿಚಕ್ಷಣಾಃ ಎನ್ನುವ ಎರಡು ವಿಶೇಷ ಪದಗಳನ್ನು ಬಳಸಲಾಗಿದೆ. ಶಬ್ದಾರ್ಥದ ಸಂಬಂಧವನ್ನು ತಿಳಿದವರು-ಕವಿಗಳು; ಶಬ್ದಾರ್ಥವನ್ನು ತಿಳಿದು ಅದನ್ನು ಅನುಭವಿಸಿ ಆಚರಿಸುವವರು ವಿಚಕ್ಷಣರು. “ಕವಿಗಳು ಮತ್ತು ವಿಚಕ್ಷಣರು ಸಂನ್ಯಾಸ ಮತ್ತು ತ್ಯಾಗಕ್ಕೆ ಈ ವಿವರಣೆಯನ್ನು ಕೊಡುತ್ತಾರೆ” ಎಂದಿದ್ದಾನೆ ಕೃಷ್ಣ.

ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ      ।
ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ                            ॥೩॥

ತ್ಯಾಜ್ಯಂ ದೋಷವತ್ ಇತಿ ಏಕೇ ಕರ್ಮ ಪ್ರಾಹುಃ ಮನೀಷಿಣಃ            ।
ಯಜ್ಞದಾನತಪಃಕರ್ಮ ನ ತ್ಯಾಜ್ಯಮ್ ಇತಿ ಚ ಅಪರೇ – ದೋಷವುಳ್ಳ ಕರ್ಮವನ್ನು ತೊರೆಯಬೇಕು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಯಜ್ಞ-ದಾನ-ತಪಗಳೆಂಬ ಕರ್ಮವನ್ನು ಬಿಡಬಾರದು ಎನ್ನುತ್ತಾರೆ ಮತ್ತೆ ಕೆಲವರು.

ಕರ್ಮತ್ಯಾಗದ ಬಗ್ಗೆ ಒಂದೊಂದು ಶಾಸ್ತ ಒಂದೊಂದು ರೀತಿ ಹೇಳಿದಂತೆ ನಮಗೆ ಕಾಣುತ್ತದೆ. ಆದರೆ ಎಲ್ಲಾ ಶಾಸ್ತ್ರಗಳ ಅಂತರಂಗದ ತಿರುಳು ಒಂದೆ. ತ್ಯಾಗ ಅಂದರೆ ಏನು ಎನ್ನುವುದು ತಿಳಿದಾಗ ಇದು ಸ್ಪಷ್ಟವಾಗುತ್ತದೆ. ತಿಳಿದ ಬುದ್ಧಿವಂತರು ಹೇಳುತ್ತಾರೆ: “ಕರ್ಮವನ್ನು ಬಿಡಬೇಕು” ಎಂದು.  ಇನ್ನು ಕೆಲವು ವೇದಾನುಯಾಯಿಗಳು ಹೇಳುತ್ತಾರೆ: “ಯಜ್ಞ-ದಾನ-ತಪಸ್ಸನ್ನು ಮಾಡಬೇಕು” ಎಂದು. “ನಿನ್ನ ಉಸಿರಿರುವ ತನಕ ಅಗ್ನಿಹೊತ್ರದಿಂದ ಭಗವಂತನನ್ನು ಆರಾಧಿಸು” ಎನ್ನುತ್ತದೆ-ಯಜುರ್ವೇದ. ಇಲ್ಲಿ ಹೇಳಿದ ವಿಷಯ ಸರಿಯಾಗಿ ಅರ್ಥವಾಗಬೇಕಾದರೆ ನಾವು ತ್ಯಾಗ ಪದದ ಅರ್ಥವನ್ನು ವಿವಿಧ ಮುಖದಲ್ಲಿ ನೋಡಬೇಕು. ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಇದರ ಸುಂದರ ವಿವರಣೆಯನ್ನು ಕೊಟ್ಟಿದ್ದಾನೆ.

ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ                      ॥೪॥

ನಿಶ್ಚಯಮ್ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗಃ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ  -- ಭರತಸತ್ತಮ, ಅದರಲ್ಲಿ ತ್ಯಾಗದ ಬಗ್ಗೆ ನನ್ನ ನಿರ್ಧಾರ ಕೇಳು. ಪುರುಷವ್ಯಾಘ್ರ, ಮೂರು ಬಗೆಯ ತ್ಯಾಗ ಉಕ್ತವಾಗಿದೆ.

“ತ್ಯಾಗದ ವಿಷಯದಲ್ಲಿ ನಿಶ್ಚಿತವಾದ ಅಭಿಪ್ರಾಯವನ್ನು ನಿನಗೆ ಹೇಳುತ್ತೇನೆ” ಎನ್ನುತ್ತಾನೆ ಕೃಷ್ಣ. ಹೇಗೆ ಯಜ್ಞ-ದಾನ-ತಪಸ್ಸು ಮೂರು ವಿಧವೋ ಹಾಗೇ  ತ್ಯಾಗವೂ ಕೂಡ ಮೂರು ವಿಧ. ಅದನ್ನು ಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ. ಇಲ್ಲಿ ಕೃಷ್ಣ ಅರ್ಜುನನನ್ನು ಭರತಸತ್ತಮ ಮತ್ತು ಪುರುಷವ್ಯಾಘ್ರ ಎಂದು ಸಂಬೋಧಿಸಿದ್ದಾನೆ. ಭರತವಂಶದ ಅರಸರ ಮಾಲಿಕೆಯಲ್ಲಿ ಗಣ್ಯನಾದ್ದರಿಂದ ಅರ್ಜುನ ಭರತಸತ್ತಮ-ಇದು ಮೇಲ್ನೋಟದ ಅರ್ಥ. ಭಗವಂತನಲ್ಲಿ ಮತ್ತು ಜ್ಞಾನದಲ್ಲಿ ರತನಾದವ, ಭಕ್ತಿ ಉಳ್ಳವ ಭರತಸತ್ತಮ ಎನ್ನುವುದು ಈ ಸಂಬೋಧನೆಯ ಅಂತರಂಗದ ಅರ್ಥ. ಅದೇ ರೀತಿ ಪುರುಷವ್ಯಾಘ್ರ  ಎಂದರೆ ಪುರುಷಶ್ರೇಷ್ಠ ಎಂದರ್ಥ. ಭಗವಂತನ ಕಡೆಗೆ ತಮ್ಮ ಮನಸ್ಸನ್ನು ಹರಿಯಗೊಟ್ಟವರು ಪುರುಷರು. ಅವರಲ್ಲಿ ಶ್ರೇಷ್ಠ-ಪುರುಷಶ್ರೇಷ್ಠ. ಅಂದರೆ ಜ್ಞಾನಿಗಳಲ್ಲಿ ಶ್ರೇಷ್ಠ ಎಂದರ್ಥ. ನಾವೂ ಕೂಡ ನಮ್ಮ ಜೀವನದಲ್ಲಿ ಭರತಸತ್ತಮರು, ಪುರುಷವ್ಯಾಘ್ರರು ಆಗಬೇಕು. ಆಗ ಭಗವಂತನ ಸಂದೇಶ ನಮಗೆ ತಲುಪುತ್ತದೆ.         

ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್      ।
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್                   ॥೫॥

ಯಜ್ಞ ದಾನ ತಪಃ ಕರ್ಮ ನ ತ್ಯಾಜ್ಯಮ್  ಕಾರ್ಯಮ್ ಏವ ತತ್        ।
ಯಜ್ಞಃ ದಾನಮ್  ತಪಃ ಚ ಏವ ಪಾವನಾನಿ ಮನೀಷಿಣಾಮ್ – ಯಜ್ಞ-ದಾನ-ತಪಗಳೆಂಬ ಕರ್ಮವನ್ನು ಬಿಡಲಾಗದು. ಅದನ್ನು ಮಾಡಲೇಬೇಕು. ಯಜ್ಞ, ದಾನ, ತಪಸ್ಸು ಜ್ಞಾನಿಗಳನ್ನು ಪಾವನಗೊಳಿಸುತ್ತದೆ.

ಯಾವಾಗಲೂ ಭಗವಂತನ ಆರಾಧನಾ ರೂಪವಾದ ಯಜ್ಞ, ದಾನ, ತಪವನ್ನು ಬಿಡಬಾರದು. ಅದನ್ನು ಮಾಡಲೇಬೇಕು. ಇದಕ್ಕಿಂತ ಮಂಗಳವಾದ ಸಂಗತಿ ಇನ್ನೊಂದಿಲ್ಲ. ಇವು ಮೂರು ಕೂಡ ನಮ್ಮ ಬದುಕನ್ನು ಪವಿತ್ರಗೊಳಿಸುವ ಕ್ರಿಯೆಗಳು. ಇದಕ್ಕಿಂತ ಹೆಚ್ಚು ಪವಿತ್ರವಾದ ಕ್ರಿಯೆ ಇನ್ನೊಂದು ಜಗತ್ತಿನಲ್ಲಿಲ್ಲ. ಇತರ ಎಲ್ಲ ಕ್ರಿಯೆಗಳೂ ಈ ಮೂರು ಕ್ರಿಯೆಯಲ್ಲಿ ಅಂತರ್ಭಾವವಾಗಿರುತ್ತವೆ. ಆದ್ದರಿಂದ ನಮ್ಮ ಜೀವನದ ಪ್ರತಿಯೊಂದು ಕ್ರಿಯೆ ಕೂಡ ಯಜ್ಞ-ದಾನ-ತಪವಾಗಬೇಕು.

ಏತಾನ್ಯಪಿತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ ।
ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್                   ॥೬॥

ಏತಾನಿ ಅಪಿ ತು ಕರ್ಮಾಣಿ ಸಂಗಮ್  ತ್ಯಕ್ತ್ವಾ ಫಲಾನಿ ಚ ।
ಕರ್ತವ್ಯಾನಿ ಇತಿ ಮೇ ಪಾರ್ಥ ನಿಶ್ಚಿತಮ್ ಮತಮ್ ಉತ್ತಮಮ್ – ಆದರೆ, ಪಾರ್ಥ, ಈ ಕರ್ಮಗಳನ್ನು ಮಮತೆ ತೊರೆದು, ಫಲದ ಹಂಬಲ ತೊರೆದು ಮಾಡಬೇಕು ಎನ್ನುವುದು ನನ್ನ ಖಚಿತವಾದ ಮತ್ತು ಹಿರಿದಾದ ಆಶಯ.

ಕರ್ಮ ಮಾಡುವಾಗ ಅದರಲ್ಲಿ ಬರುವ ಮೂಲ ದೋಷ ‘ನಾನು ಮಾಡಿದೆ, ನನ್ನಿಂದಾಯಿತು' ಎನ್ನುವ ಅಹಂಕಾರ. ಇದರ ಜೊತೆಗೆ ದೇವರ ಬಳಿ ನಮ್ಮ ಫಲಕಾಮನೆಯ ಪಟ್ಟಿ ಕೊಟ್ಟು ಫಲಾಪೇಕ್ಷೆಯಿಂದ ಕರ್ಮ ಮಾಡುವುದು. ಇವು ಕರ್ಮದಲ್ಲಿನ ಮಹಾದೋಷ. ಅಹಂಕಾರದಿಂದ ಕರ್ಮ ಮಾಡಿದರೆ ಅದು ವ್ಯರ್ಥ –ಏಕೆಂದರೆ ಅಹಂಕಾರವಿದ್ದೆಡೆಗೆ ಭಗವಂತ ಬರಲಾರ. ಇನ್ನು ನಾವು ಫಲದ ಅಸೆಯಿಂದ ಕರ್ಮ ಮಾಡುವುದು. ಫಲದಾಸೆಯಿಂದ ಕರ್ಮ ಮಾಡಿ ಒಂದು ವೇಳೆ ನಾವು ಬಯಸಿದ ಫಲ ನೆರವೇರದಿದ್ದರೆ, ಆಗ ನಮಗೆ ಆ ಕರ್ಮದಲ್ಲಿ ಆಸಕ್ತಿ ದೂರವಾಗುತ್ತದೆ. ದೇವರ ಬಗ್ಗೆ ವೈರತ್ವ ಉಂಟಾಗುತ್ತದೆ. ಇದು ಫಲಾಪೇಕ್ಷೆಯಿಂದ ಕರ್ಮ ಮಾಡುವುದರಿಂದ ಆಗುವ ಅನಾಹುತ. “ಇದು ನನ್ನ ನಿಶ್ಚಿತವಾದ ಅಭಿಪ್ರಾಯ. ನೀನು ಬಿಡಬೇಕಾದದ್ದು ಕರ್ಮವನ್ನಲ್ಲ, ಬದಲಿಗೆ ಕರ್ಮಫಲವನ್ನು ಮತ್ತು  ನಾನು ಮಾಡಿದೆ ಎನ್ನುವ ಆಸಕ್ತಿ-ಅಹಂಕಾರವನ್ನು” ಎನ್ನುತ್ತಾನೆ ಕೃಷ್ಣ. ಇದು ಕರ್ಮ ಸಿದ್ಧಾಂತದ ಅತ್ಯಂತ ಶ್ರೇಷ್ಠ ತೀರ್ಮಾನ. ಅಹಂಕಾರವನ್ನು, ಕಾಮ್ಯಕರ್ಮವನ್ನು(ಫಲಕ್ಕಾಗಿಯೇ ಕರ್ಮ ಮಾಡುವುದನ್ನು) ಮತ್ತು ಕರ್ಮದಲ್ಲಿ ಫಲವನ್ನು ಬಯಸುವುದನ್ನು-ಬಿಡುವುದು ನಿಜವಾದ ತ್ಯಾಗ ಹೊರತು, ನಿಯತಕರ್ಮವನ್ನು ಬಿಡುವುದಲ್ಲ. ಇದು ನಿಶ್ಚಿತವಾದ ಸಿದ್ಧಾಂತ.   

ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ        ।
ಮೋಹಾತ್ ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ                       ॥೭॥

ನಿಯತಸ್ಯ ತು ಸಂನ್ಯಾಸಃ ಕರ್ಮಣಃ ನ ಉಪಪದ್ಯತೇ          ।
ಮೋಹಾತ್ ತಸ್ಯ ಪರಿತ್ಯಾಗಃ ತಾಮಸಃ ಪರಿಕೀರ್ತಿತಃ – ವಿಹಿತವಾದ ಕರ್ಮವನ್ನು ತೊರೆಯುವುದು ತರವಲ್ಲ. ಅರಿವುಗೆಟ್ಟು ಅದನ್ನು ತೊರೆವುದು ತಾಮಸ ತ್ಯಾಗ ಎನಿಸುತ್ತದೆ.

ಯಾವ ಕಾಲಕ್ಕೂ ನಾವು ನಮ್ಮ ನಿಯತಕರ್ಮವನ್ನು ತೊರೆಯಬಾರದು. ಒಂದು ವೇಳೆ ತಪ್ಪು ತಿಳುವಳಿಕೆಯಿಂದ ನಿಯತ ಕರ್ಮವನ್ನು ಬಿಟ್ಟರೆ ಆಗ ಅದು ತಾಮಸ ತ್ಯಾಗ ಎನಿಸುತ್ತದೆ. ಇಲ್ಲಿ ‘ನಿಯತಕರ್ಮ’ ಎಂದರೆ ನಮ್ಮ ಜೀವಯೋಗ್ಯತೆಗೆ ಯಾವುದು ನಿಯತವೋ ಆ ಕರ್ಮ. ನಮಗೆ ತಿಳಿದಂತೆ ಎಲ್ಲ ಕರ್ಮವನ್ನು ಎಲ್ಲರೂ ಮಾಡುವಂತಿಲ್ಲ. ಉದಾಹರಣೆಗೆ ಯಜ್ಞ: ಯತಿಗಳು ಅಗ್ನಿಮುಖದಲ್ಲಿ ಆಹುತಿ ನೀಡುವಂತಿಲ್ಲ; ಬ್ರಹ್ಮಚಾರಿಗಳು ಪೂರ್ಣಪ್ರಮಾಣದ ಅಗ್ನಿಹೋತ್ರ ಮಾಡುವಂತಿಲ್ಲ. ಆದರೆ ಯತಿಗಳು ಜ್ಞಾನಯಜ್ಞ ಮಾಡಬಹುದು ಅದು ಅವರ ನಿಯತಕರ್ಮ. ಎಲ್ಲ ಕಾಲದಲ್ಲೂ ಎಲ್ಲರೂ ಮಾಡಬಹುದಾದ ಯಜ್ಞ ‘ನಾಮಯಜ್ಞ’. ಅಂದರೆ ಭಗವಂತನ ನಾಮ ಸ್ಮರಣೆ. ಇದು ಯಜ್ಞದಲ್ಲಿ ಎಲ್ಲರಿಗೂ ಅನ್ವಯಿಸುವ ನಿಯತಕರ್ಮ.  ಇನ್ನು ದಾನ: ಬ್ರಹ್ಮಚಾರಿಗಳು ಕನ್ಯಾದಾನ ಮಾಡಲಾಗುವುದಿಲ್ಲ, ಅದನ್ನು ಗೃಹಸ್ಥ ಮಾಡಬೇಕು. ಗೃಹಸ್ಥನಿಗೆ ಕನ್ಯಾದಾನ ನಿಯತಕರ್ಮ. ಎಲ್ಲರೂ ಮಾಡಬಹುದಾದ ದಾನ-ಅಭಯದಾನ ಮತ್ತು ಜ್ಞಾನದಾನ. ಮೂರನೆಯದು ತಪಸ್ಸು: ಕೆಲವು ತಪಸ್ಸನ್ನು ಎಲ್ಲರೂ ಮಾಡಲಾಗುವುದಿಲ್ಲ. ಅದಕ್ಕೆ ವೇದಧೀಕ್ಷೆ ಬೇಕಾಗಬಹುದು. ಆದರೆ ಎಲ್ಲರೂ ಮಾಡಬಹುದಾದ ತಪಸ್ಸು ಎಂದರೆ ಉಪವಾಸಾದಿ ವೃತಾನುಷ್ಠಾನಗಳು. ಈ ತಪಸ್ಸನ್ನು ಮನುಷ್ಯ ಮಾತ್ರದವರು ಮಾಡಬಹುದು. ಹೀಗೆ ಯಾರಿಗೆ ಯಾವ ಕರ್ಮ ನಿಯತವೋ ಆ ಕರ್ಮವನ್ನು ಮಾಡಬೇಕು. ನಿಯತ ಕರ್ಮದಲ್ಲಿ ಫಲಾಪೇಕ್ಷೆಯ ಪ್ರಶ್ನೆಯೇ ಇಲ್ಲ. ತಪ್ಪು ತಿಳುವಳಿಕೆಯಿಂದ ನಿಯತಕರ್ಮವನ್ನು ಬಿಟ್ಟರೆ ಅದು ತಾಮಸ ತ್ಯಾಗ ಎನಿಸುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಈ ಶ್ಲೋಕದ ಮೂಲಕ ಕೊಟ್ಟಿದ್ದಾನೆ.   

ದುಃಖಮಿತ್ಯೇವ ಯತ್ ಕರ್ಮ ಕಾಯಕ್ಲೇಶಭಯಾತ್ ತ್ಯಜೇತ್ ।
ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್                  ॥೮॥

ದುಃಖಮ್ ಇತಿ ಏವ ಯತ್ ಕರ್ಮ ಕಾಯ ಕ್ಲೇಶ ಭಯಾತ್ ತ್ಯಜೇತ್ ।
ಸ ಕೃತ್ವಾ ರಾಜಸಮ್  ತ್ಯಾಗಮ್  ನ ಏವ  ತ್ಯಾಗ ಫಲಮ್  ಲಭೇತ್ – ಮಾಡುವುದಕ್ಕೆ ಮೈಬಗ್ಗದೆ, ಬಗೆಯೊಗ್ಗದೆ, ಕಷ್ಟವಾಗುತ್ತದೆ ಎಂದು ಮಾಡದೆ ಇರುವುದು ರಾಜಸ ತ್ಯಾಗ. ಇಂಥ ತ್ಯಾಗ ಮಾಡಿಯೂ ತ್ಯಾಗದ ಫಲ ದೊರೆಯದು.

ನಮಗೆ ನಮ್ಮ ನಿಯತಕರ್ಮ ಮಾಡಬೇಕು ಎನ್ನುವುದು ಗೊತ್ತಿದ್ದೂ, ಮನಸ್ಸಿಗೆ ದೇಹಕ್ಕೆ ನೋವಾಗುತ್ತದೆ ಎನ್ನುವ ಕಾರಣಕ್ಕಾಗಿ ಕರ್ಮವನ್ನು ಮಾಡದೆ ಬಿಡುವುದು ರಾಜಸ ತ್ಯಾಗ ಎನಿಸುತ್ತದೆ. ಉದಾಹರಣೆಗೆ ಯಾವುದೋ ದೂರದರ್ಶನದ ದಾರಾವಾಹಿಯನ್ನು ನೋಡಬೇಕು ಎನ್ನುವ ಮನಸ್ಸಿನ ಉತ್ಕಟ ಬಯಕೆಯಿಂದ ಕರ್ಮವನ್ನು ಕೈಬಿಡುವುದು, ಚಳಿಯಾಗುತ್ತದೆ ಎಂದು ಸಂಧ್ಯಾವಂದನೆ ಮಾಡದೇ ಇರುವುದು, ಇತ್ಯಾದಿ ರಾಜಸ ತ್ಯಾಗ. ಇಂಥಹ ರಾಜಸ ತ್ಯಾಗ ಮಾಡಿದರೆ  ನಿಜವಾದ ತ್ಯಾಗದ ಫಲ ಸಿಗದು.

ಕಾರ್ಯಮಿತ್ಯೇವ ಯತ್ ಕರ್ಮ ನಿಯತಂ ಕ್ರಿಯತೇSರ್ಜುನ  ।
ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ                ॥೯॥

ಕಾರ್ಯಮ್ ಇತಿ ಏವ ಯತ್ ಕರ್ಮ ನಿಯತಮ್  ಕ್ರಿಯತೇ ಅರ್ಜುನ  ।
ಸಂಗಂ ತ್ಯಕ್ತ್ವಾ ಫಲಂ ಚ ಏವ ಸಃ  ತ್ಯಾಗಃ  ಸಾತ್ತ್ವಿಕಃ  ಮತಃ – ಅರ್ಜುನ, ಕರ್ತವ್ಯ ದೃಷ್ಟಿಯಿಂದ ವಿಹಿತ ಕರ್ಮವನ್ನು ಮಾಡುತ್ತಲೆ ಮಮತೆಯನ್ನೂ ಫಲದ ಹಂಬಲವನ್ನೂ ತೊರೆಯುವುದು ಸಾತ್ತ್ವಿಕ ತ್ಯಾಗ ಎನಿಸುತ್ತದೆ.

ನಿಯತಕರ್ಮವನ್ನು ಮಾಡದೇ ಇರಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ನಮ್ಮ ಮನಸ್ಸು ತಲುಪಬೇಕು. ಈ ರೀತಿ ಸತ್ತ್ವಗುಣ ಮನಸ್ಸಿನಲ್ಲಿ ತುಂಬಿದಾಗ(ಅರ್ಜುನರಾದಾಗ)ಯಾವ ಕರ್ಮವನ್ನೂ ಬಿಡಲು ನಮಗೆ ಮನಸ್ಸಾಗುವುದಿಲ್ಲ. ಅಲ್ಲಿ ಫಲದ ಬಯಕೆ ಇರುವುದೇ ಇಲ್ಲ. ಸದಾ ಭಗವದರ್ಪಣ ಭಾವನೆಯಲ್ಲಿ ಖುಷಿಯಿಂದ ಕರ್ಮ ಮಾಡುವುದು; ಯಾವುದೇ ಅಹಂಕಾರ ಇಲ್ಲದೆ ಇರುವುದು; ಎಲ್ಲ ಕರ್ಮದ ಮಹತ್ವ ತಿಳಿದು ನಿಯತವಾಗಿ ಕರ್ಮ ಮಾಡುವುದು-  ಸಾತ್ತ್ವಿಕತ್ಯಾಗ. ಇಲ್ಲಿ ತ್ಯಾಗ ಮಾಡುವುದು ಕರ್ಮವನ್ನಲ್ಲ ಬದಲಿಗೆ ಕರ್ಮ ಫಲವನ್ನು.
ಹೀಗೆ ನಮ್ಮಲ್ಲಿರುವ ಗೊಂದಲಗಳಿಗೆ ಕೃಷ್ಣ ಅತ್ಯಂತ ಸರಳವಾದ ಉತ್ತರ ಕೊಟ್ಟ. ಒಟ್ಟಿನಲ್ಲಿ ಹೇಳಬೇಕೆಂದರೆ: ಫಲಾಪೇಕ್ಷೆ ಇಲ್ಲದೆ ಅಹಂಕಾರ ತೊರೆದು ನಿಯತಕರ್ಮವನ್ನು ಮಾಡುವುದು ಸಾತ್ತ್ವಿಕ ತ್ಯಾಗ; ಸೋಮಾರಿತನದಿಂದ ಕಷ್ಟವಾಗುತ್ತದೆ ಎಂದು ನಿಯತಕರ್ಮವನ್ನು ಬಿಡುವುದು ರಾಜಸ ತ್ಯಾಗ ಮತ್ತು ತಪ್ಪು ತಿಳುವಳಿಕೆಯಿಂದ, ‘ಎಲ್ಲವೂ ಮೂಢನಂಬಿಕೆ’ ಎಂದು ನಿಯತಕರ್ಮವನ್ನು ಮಾಡದೇ ಬಿಡುವುದು ತಾಮಸ ತ್ಯಾಗ.  

ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ ।
ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಛಿನ್ನಸಂಶಯಃ                 ॥೧೦॥

ನ ದ್ವೇಷ್ಟಿ ಅಕುಶಲಮ್  ಕರ್ಮ ಕುಶಲೇ ನ ಅನುಷಜ್ಜತೇ ।
ತ್ಯಾಗೀ ಸತ್ತ್ವಸಮಾವಿಷ್ಟಃ ಮೇಧಾವೀ ಛಿನ್ನಸಂಶಯಃ – ಮುದ ನೀಡದ ಕರ್ಮದ ಬಗ್ಗೆ ಹಗೆಯೂ ಇಲ್ಲ, ಮುದ ನೀಡುವ ಕರ್ಮದ ಬಗ್ಗೆ ಅತಿಯಾದ ನಂಟೂ ಇಲ್ಲ. ಇಂಥವನು ಸಾತ್ವಿಕ-ತ್ಯಾಗಿ. ಅವನು ತಿಳಿದವನು ಮತ್ತು ಸಂದೇಹವಳಿದವನು.

ಈ ಶ್ಲೋಕ ಒಬ್ಬ ಸಾತ್ವಿಕ ತ್ಯಾಗಿ ಯಾವ ರೀತಿ ತನ್ನ ಕರ್ಮಗಳನ್ನು ನೋಡುತ್ತಾನೆ ಎನ್ನುವುದನ್ನು ಹೇಳುತ್ತದೆ. ನಾವು ಮಾಡಿದ ಹಿಂದಿನ ಯಾವುದೋ ಒಂದು ಕರ್ಮದಿಂದ ಇಂದು ಕೆಟ್ಟ ಪರಿಣಾಮ ಆಗುತ್ತಿದ್ದರೆ, ಅಥವಾ ಹಿಂದೆ ಮಾಡಿದ ಇನ್ಯಾವುದೋ ಕರ್ಮದಿಂದ ಒಳ್ಳೆಯದು ಆಗುತ್ತಿದ್ದರೆ, ಸಾತ್ವಿಕ ತ್ಯಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆತ ಒಳ್ಳೆಯದಾಯಿತು ಎಂದು ಹಾರಾಡುವುದಿಲ್ಲ, ಕೆಟ್ಟದ್ದಾಯಿತು ಎಂದು ಕುಸಿಯುವುದಿಲ್ಲ. ಈತ ದುಃಖಕಾರವಾದ ಕರ್ಮವನ್ನು ದ್ವೇಷಿಸುವುದೂ ಇಲ್ಲ. ಔಷಧಿ ಹೇಗೆ ಕಹಿ ಇರುತ್ತದೋ ಹಾಗೇ ಸತ್ಕರ್ಮ ಕಿಂಚಿತ್ ದುಃಖಕರವಾದಾಗ ಅದರ ಬಗ್ಗೆ ಆತ ಚಿಂತೆ ಮಾಡುವುದಿಲ್ಲ.
ಸಾತ್ವಿಕ ತ್ಯಾಗಿಯ ಮನಸ್ಸು ಸತ್ತ್ವಗುಣದಲ್ಲಿ ತುಂಬಿರುತ್ತದೆ. ಅವನಿಗೆ ತಾಮಸ-ರಾಜಸ ಚಿಂತೆಗಳೇ ಬರುವುದಿಲ್ಲ. ಬಲಜ್ಞಾನಗಳಿಂದ ಪರಿಪೂರ್ಣನಾದ ಭಗವಂತನಲ್ಲಿ ಎಲ್ಲವನ್ನು ಅರ್ಪಿಸಿ ಆತ ಕರ್ಮ ಮಾಡುತ್ತಿರುತ್ತಾನೆ. ಇದರಿಂದ ಆತನ ಮನಸ್ಸು ಪೂರ್ಣವಾಗಿ ಭಗವಂತನಲ್ಲಿ ಸಮಾವಿಷ್ಟವಾಗಿರುತ್ತದೆ. ಮೇಧಾವಿಯಾಗಿರುವ ಈತನಿಗೆ ತನ್ನ ಬದುಕಿನ ಪ್ರತೀ ನಡೆಯ ಎಚ್ಚರವಿರುತ್ತದೆ. ಭಗವಂತನಲ್ಲಿ ನೆಲೆಗೊಂಡ ಇಂಥವರ ಮನಸ್ಸಿಗೆ ಎಂದೂ ಯಾವ ಗೊಂದಲವೂ ಸುಳಿಯುವುದಿಲ್ಲ. ಇಂಥವರ ಜೀವನದ ನಡೆ ನೋಡಲು ಸಾಮಾನ್ಯವಾಗಿರುತ್ತದೆ ಆದರೆ ಅವರ ಕ್ರಿಯೆಯ ಹಿಂದಿನ ಅನುಸಂಧಾನ ಮಾತ್ರ ಭಿನ್ನವಾಗಿರುತ್ತದೆ. ಇವರು “ಭಗವಂತ ನೀನು ಮಾಡಿಸುತಿದ್ದಿ-ನಾನು ಮಾಡುತ್ತಿದ್ದೇನೆ” ಎನ್ನುವ ಅನುಸಂಧಾನದಿಂದ ತಮ್ಮ ಕರ್ಮವನ್ನು ಮಾಡುತ್ತಿರುತ್ತಾರೆ.  

Sunday, December 25, 2011

Bhagavad GitA Kannada Chapter-17 Shloka 23-28


ಈವರೆಗೆ ಕೃಷ್ಣ ಹೇಳಿದ ಸಾತ್ವಿಕ ಕರ್ಮದ ಮಹತ್ವವನ್ನು ಹೇಳುವ ‘ಅರ್ಥವಾದ’ ಈ ಅಧ್ಯಾಯದ ಮುಂದಿನ ಭಾಗ. ‘ಅರ್ಥವಾದ’ ಎಂದರೆ ಸಾತ್ವಿಕ ಕರ್ಮದ ಮಹತ್ವಿಕೆಯನ್ನು ಹೇಳುವ ನಿರೂಪಣೆ.

ಓಂ ತತ್ ಸದಿತಿ ನಿರ್ದೇಶೋ ಬ್ರಹ್ಮಣಸ್ತ್ರಿವಿಧಃ ಸ್ಮೃತಃ
ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ                       ೨೩

ಓಂ ತತ್ ಸತ್ ಇತಿ ನಿರ್ದೇಶಃ  ಬ್ರಹ್ಮಣಃ ತ್ರಿವಿಧಃ ಸ್ಮೃತಃ
ಬ್ರಾಹ್ಮಣಾಃ ತೇನ ವೇದಾಃ ಚ  ಯಜ್ಞಾಃ ಚ  ವಿಹಿತಾಃ ಪುರಾ ಓಂ [ಪ್ರಪಂಚವನ್ನು ಹೊತ್ತವನು ಮತ್ತು ಪ್ರಪಂಚದಲ್ಲಿ ತುಂಬಿರುವವನು], ತತ್ [ವೇದಗಳ ಮೂಲಕ, ಪರೋಕ್ಷವಾಗಿ ಮಾತ್ರ ತಿಳಿಯಲು ಸಾಧ್ಯವಾದವನು] ಸತ್  [ಎಲ್ಲ ಶುಭ ಗುಣಗಳಿಂದ ಪೂರ್ಣನಾದವನು] – ಇವು ಭಗವಂತನ ಮೂರು ಹೆಸರುಗಳು. ಆ ಭಗವಂತನೆ ವೇದಗಳನ್ನೂ, ವೇದಜ್ಞರನ್ನೂ ಮತ್ತು ಯಜ್ಞಗಳನ್ನೂ ಅಣಿಗೊಳಿಸಿದನು.  

ಓಂ, ತತ್, ಸತ್  ಇವು ಮೂರು ಭಗವಂತನ ಹೆಸರುಗಳು. ಭಗವಂತನ ಸ್ಮರಣೆಗಾಗಿ, ಭಗವಂತನನ್ನು ಕರೆಯುವುದಕ್ಕಾಗಿ ಜ್ಞಾನಿಗಳು ಈ ರೀತಿ ಅನುಸಂಧಾನವನ್ನು ಬಳಕೆಗೆ ತಂದರು. ಭಗವಂತನ ಹೆಸರು ನಮ್ಮ ಹೆಸರಂತಲ್ಲ. ಆತನ ಹೆಸರು ಆತನ ಗುಣವಾಚಕ ಪದಗಳು. ‘ಓಂ’ ಭಗವಂತನಿಗೆ ಮೀಸಲಾದ( Exclusive) ಹೆಸರು. ಇದು ಮನುಷ್ಯನ ಒಟ್ಟು ಜೀವನದ ಎಲ್ಲ ಮುಖವನ್ನು ಮೂರು ಅಕ್ಷರಗಳಲ್ಲಿ(ಅ, ಉ, ಮ್) ಹೇಳುತ್ತದೆ. ಇಡೀ ಜಗತ್ತು ಯಾರಲ್ಲಿ ಓತವಾಗಿದೆಯೋ, ಇಡೀ ಜಗತ್ತು ಯಾರಲ್ಲಿ ಹೆಣೆದುಕೊಂಡಿದೆಯೋ –ಅವನು ‘ಓಂ’.  ನಾವು ಮಾಡುವ ಸಮಸ್ತ ಕರ್ಮವೂ ಅವನಲ್ಲಿ ಅರ್ಪಿತವಾಗಿದೆ ಎಂದು ಹೇಳುವುದಕ್ಕಾಗಿ ಓಂಕಾರವನ್ನು ಬಳಸುತ್ತಾರೆ. ‘ಹರಿಃ ಓಂ’ ಎಂದು ಪ್ರಾರಂಭದಲ್ಲಿ ಹೇಳಿದರೆ - “ನಾನು ಮುಂದೆ ಮಾಡತಕ್ಕ ಸಮಸ್ತವೂ  ಭಗವಂತನಿಗೆ ಅರ್ಪಿತವಾಗಿದೆ” ಎಂದು ಹೇಳಿದಂತೆ. [ಓಂಕಾರದ ಬಗ್ಗೆ ಹೆಚ್ಚಿನ ವಿವರಣೆಗಾಗಿ ಅಧ್ಯಾಯ-೭ ಶ್ಲೋಕ ೮-೯ ನೋಡಿ).
‘ತತಃ’ ಅಂದರೆ ತುಂಬಿರುವವನು. ಭಗವಂತ ಸಮಸ್ತ ಗುಣಗಳ ನೆಲೆ. ಗುಣಪರಿಪೂರ್ಣನಾದ ಅವನು ಸಮಸ್ತ ವೇದದಲ್ಲಿ ತುಂಬಿದ್ದಾನೆ. ಆದ್ದರಿಂದ ಆತ ‘ತತ್'. ಇನ್ನು  ‘ಸತ್ ‘ ಎಂದರೆ ಯಾವ ದೋಷವೂ ಇಲ್ಲದವ. ಹೀಗೆ ಓಂ-ತತ್-ಸತ್ ಎನ್ನುವುದು ವೇದಕಾಲದ ನಾಮತ್ರಯಗಳು. ಇಂದು ನಾವು ಹೇಳುವ ಅಚ್ಯುತಾಯನಮಃ, ಅನಂತಾಯನಮಃ, ಗೋವಿಂದಾಯ ನಮಃ ಕೂಡ ಇದೇ ಅರ್ಥವನ್ನು ಕೊಡುತ್ತದೆ. ಅ-ಚ್ಯುತ ಅಂದರೆ ಯಾವ ಗುಣದಿಂದಲೂ ಚ್ಯುತನಾದವನಲ್ಲ ಎಂದರ್ಥ. ಅವನಿಂದ ಚ್ಯುತನಾಗಿ ಈ ಜಗತ್ತಿಗೆ ಅಸ್ತಿತ್ವವಿಲ್ಲ. ಆತ ಸರ್ವ ಜಗತ್ತಿಗೆ ಆಧಾರ. ಇನ್ನು ಎರಡನೇ ನಾಮ –ಅನಂತ. ಅಂತವಿಲ್ಲದ್ದು ಅನಂತ. ಯಾರ ಗುಣಗಳಿಗೆ ಕೊನೆ ಇಲ್ಲವೋ ಅವನು ಅನಂತ. ಮೂರನೆಯ ನಾಮ ಗೋವಿಂದ. ಗೋ-ಅಂದರೆ ವೇದಗಳು. ಸಮಸ್ತ ವೇದಗಳಿಂದ ಪ್ರತಿಪಾದ್ಯನಾದ  ಭಗವಂತ-ಗೋವಿಂದ. ಒಟ್ಟಿನಲ್ಲಿ ಸಂಕ್ಷಿಪ್ತವಾಗಿ ಇಲ್ಲಿ - ಓಂ ತತ್ ಸತ್ ಎಂದರೆ “ಜಗದಾದಾರನೂ, ಸಮಸ್ತ ಗುಣಪೂರ್ಣನೂ, ಸಮಸ್ತ ವೇದ ಪ್ರತಿಪಾದ್ಯನೂ, ಸಮಸ್ತ ದೋಷ ದೂರನೂ ಆದ ಭಗವಂತ” ಎಂದರ್ಥ. ಇಂಥಹ ಭಗವಂತ ವೇದವನ್ನು ಸೃಷ್ಟಿ ಮಾಡಿದ, ಅದರಿಂದ 'ಜ್ಞಾನಿಗಳಾಗಿ' ಎಂದು ವೇದಜ್ಞ(ಜ್ಞಾನಿ)ರನ್ನು ಸೃಷ್ಟಿ ಮಾಡಿದ, ಜ್ಞಾನ ಪೂರ್ವಕವಾಗಿ ಕರ್ಮ ಮಾಡಿರೆಂದು ಯಜ್ಞವನ್ನು ಸೃಷ್ಟಿ ಮಾಡಿದ.
ನಮ್ಮಲ್ಲಿ ಕೆಲವರು ವೇದ-‘ಪೌರುಷೇಯ’ ಎಂದೂ, ಹಾಗು ಇನ್ನು ಕೆಲವರು ವೇದ-‘ಅಪೌರುಷೇಯ’ ಎಂದೂ ವಾದ ಮಾಡುವವರಿದ್ದಾರೆ. ಸೃಷ್ಟಿ ಪೂರ್ವದಲ್ಲಿ ಪರಮಪುರುಷನಿಂದ ಉಚ್ಚರಿಸಲ್ಪಟ್ಟ ವೇದ ಪೌರುಷೇಯ;  ಇದು ಅನಾದಿ-ಅನಂತ ಕಾಲದಲ್ಲಿ ಪ್ರತೀ ಕಲ್ಪದಲ್ಲೂ ಭಗವಂತನಿಂದ ಉಚ್ಚರಿಸಲ್ಪಡುವುದರಿಂದ ಅಪೌರುಷೇಯ ಕೂಡ ಹೌದು. ಆದ್ದರಿಂದ ಈ ಕುರಿತು ಮಾಡುವ ವಾದ ವ್ಯರ್ಥ.                         

ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃಕ್ರಿಯಾಃ
ಪ್ರವರ್ತಂತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಮ್                ೨೪

ತಸ್ಮಾತ್ ಓಂ ಇತಿ ಉದಾಹೃತ್ಯ ಯಜ್ಞ ದಾನ ತಪಃ ಕ್ರಿಯಾಃ
ಪ್ರವರ್ತಂತೇ ವಿಧಾನ ಉಕ್ತಾಃ ಸತತಮ್  ಬ್ರಹ್ಮವಾದಿನಾಮ್ ಆದ್ದರಿಂದ ಶಾಸ್ತ್ರದ ಕಟ್ಟಳೆಗೆ  ಅನುಗುಣವಾದ, ಬ್ರಹ್ಮ ಚಿಂತಕರ ಯಜ್ಞ, ದಾನ ಮತ್ತು ತಪದ ಕ್ರಿಯೆಗಳು ಯಾವಾಗಲೂ ‘ಓಂ’ ಎಂದು ಭಗವಂತನ ನಾಮ ಸ್ಮರಣೆಯ ಜತೆಗೆಯೆ ತೊಡಗುತ್ತವೆ.

ಕರ್ಮದಲ್ಲಿ ಓಂಕಾರ ಬಳಕೆಯ ಮಹತ್ವವನ್ನು ಕೃಷ್ಣ  ಇಲ್ಲಿ ವಿವರಿಸಿದ್ದಾನೆ. ನಮಗೆ ತಿಳಿದಂತೆ ಒಬ್ಬ ವೇದಜ್ಞನಾಗಬೇಕಾದರೆ ಆತನಿಗೆ ಓಂಕಾರದ ಉಪದೇಶವಾಗಿರಬೇಕು; ಯಜ್ಞದ ಆದಿ-ಅಂತದಲ್ಲಿ ಓಂಕಾರ ಹೇಳಬೇಕು; ವೇದ ಪಠಣದ ಆದಿ-ಅಂತದಲ್ಲಿ ಓಂಕಾರವಿರಬೇಕು. ಇದೆಲ್ಲವೂ ಹಿಂದಿನಿಂದಲೂ ಬಂದಿರುವ ಆಚರಣೆಗಳು. ನಾವು ಮಾಡುವ ಯಾವ ಕಾರ್ಯವೇ ಇರಲಿ, ಅದನ್ನು ಪ್ರಾರಂಭಿಸುವಾಗ “ಇದನ್ನು ಭಗವಂತನ ಪೂಜಾರೂಪವಾಗಿ ಮಾಡುತ್ತೇನೆ” ಎನ್ನುವ ಸಂಕಲ್ಪ ಮಾಡಿ ಮಾಡುವುದು ಮತ್ತು ಅಂತ್ಯದಲ್ಲಿ  “ನಾನು ಮಾಡಿದ್ದನ್ನು ಭಗವಂತ ಸ್ವೀಕರಿಸಲಿ” ಎಂದು ಹೇಳುವುದು-ಇದರ ಮೂಲ ಉದ್ದೇಶ. ಹೀಗೆ ಓಂಕಾರ ಹೇಳಿಯೇ ಕರ್ಮ ಮಾಡಬೇಕು ಎನ್ನುವ ಆಚರಣೆ ಹಿಂದಿನಿಂದ ಬೆಳೆದುಬಂತು. ಈ ಅನುಸಂಧಾನದಿಂದ ನಾವು ಯಾವುದೇ ಪಾರಾಯಣ, ಹೋಮ, ಹವನ, ಯಜ್ಞ, ತಪಸ್ಸು, ದಾನ  ಮಾಡಿದರೂ ಕೂಡ ಅದು ಸಾತ್ವಿಕ ಕರ್ಮವೆನಿಸುತ್ತದೆ.

ತದಿತ್ಯನಭಿಸಂಧಾಯ ಫಲಂ ಯಜ್ಞತಪಃಕ್ರಿಯಾಃ
ದಾನಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ                     ೨೫

ತ್ ಇತಿ ಅನಭಿಸಂಧಾಯ ಫಲಂ ಯಜ್ಞ ತಪಃ ಕ್ರಿಯಾಃ
ದಾನ ಕ್ರಿಯಾಃ ಚ  ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ – ಮೋಕ್ಷ ಬಯಸುವ ಸಜ್ಜನರು ಫಲವನ್ನು ಬಯಸದೆ, ‘ತತ್’ ಎನಿಸಿದ ಭಗವಂತನಿಗಾಗಿ ಬಗೆಬಗೆಯ ಯಜ್ಞ, ದಾನ ಮತ್ತು ತಪದ ಕ್ರಿಯೆಗಳನ್ನು ಆಚರಿಸುತ್ತಾರೆ.

‘ತತ್’ ಎನ್ನುವುದು ಸಮಸ್ತ ವೇದ ವಾಚ್ಯನಾದ ಭಗವಂತನ್ನು ಹೇಳುತ್ತದೆ ಎನ್ನುವುದನ್ನು ಹಿಂದೆ ನೋಡಿದ್ದೇವೆ. ಇಲ್ಲಿ-ನಾವು ಮಾಡುವ ಕರ್ಮದಲ್ಲಿ ‘ತತ್’ ಏನನ್ನು ಹೇಳುತ್ತದೆ ಎನ್ನುವುದನ್ನು ಕೃಷ್ಣ ವಿವರಿಸಿದ್ದಾನೆ. ‘ತತ್’ ಎನ್ನುವುದು ವೇದಮಾತಾ ಗಾಯತ್ರಿಯ ಸಂಕ್ಷಿಪ್ತಪದ(Abbreviation; ಮೊದಲ ಮತ್ತು ಕೊನೆಯ ಅಕ್ಷರ) ಹೀಗಾಗಿ ಇದು ಗಾಯತ್ರಿ ವಾಚ್ಯ ಭಗವಂತನ ಮುಖ್ಯ ನಾಮಧೇಯ. ‘ತತ್’ ಎನ್ನುವುದು ಕರ್ಮದಲ್ಲಿ ಭಗವಂತನು ಕೊಡುವ ಫಲವನ್ನು ಹೇಳುತ್ತದೆ. ‘ತತ್’ ಎಂದರೆ ಯಾವುದೇ ಐಹಿಕ ಫಲದ ಆಸೆ ಇಲ್ಲದೆ, ಭವಬಂಧನದಿಂದ ಬಿಡುಗಡೆಗೊಳಿಸಿ ಮೋಕ್ಷವನ್ನು ಕೊಡುವ ಭಗವಂತನ ಪ್ರೀತಿಗಾಗಿ ಮಾಡುವ ಕರ್ಮ. ಅದು ಯಜ್ಞವಿರಬಹುದು, ತಪಸ್ಸಿರಬಹುದು ಅಥವಾ ದಾನವಿರಬಹುದು. ಜ್ಞಾನಿಗಳು ದಾನ ಮಾಡುವಾಗ ಕೂಡ ಯಾವುದೇ ಐಹಿಕ ಫಲದ ಅಪೇಕ್ಷೆ ಇಲ್ಲದೆ ದಾನ ಮಾಡುತ್ತಾರೆ. ಉದಾಹರಣೆಗೆ ಅನ್ನದಾನ: ಅನ್ನದ ಅಭಿಮಾನಿ ಲಕ್ಷ್ಮಿ; ಅನ್ನದಾನ ಎಂದರೆ ದಾನ ಸ್ವೀಕರಿಸುವವನೊಳಗಿರುವ ವೈಶ್ವಾನರ ರೂಪಿ ನಾರಾಯಣನಿಗೆ ಲಕ್ಷ್ಮಿಯ ಸಮರ್ಪಣೆ. ಇದೇ ರೀತಿ ಕನ್ಯಾದಾನ: ಕನ್ಯಾದಾನ ಮಾಡುವಾಗ ಕನ್ಯಾಪಿತೃಗಳು ಗಂಡಿನ ಆಸ್ತಿ, ಹುದ್ದೆ,  ಸಂಬಳ ನೋಡಿ ದಾನ ಮಾಡುವುದಲ್ಲ. ಬದಲಿಗೆ ಹುಡುಗಿಯ ಒಳಗಿರುವ ಲಕ್ಷ್ಮಿಯನ್ನು ಹುಡುಗನ ಒಳಗಿರುವ ನಾರಾಯಣನಿಗೆ ಅರ್ಪಿತವಾಗಲಿ ಎನ್ನುವ  ಅನುಸಂಧಾನದಿಂದ  ನೀಡುವುದು. ಹೀಗೆ ಮೊಕ್ಷಕಾಂಕ್ಷಿಗಳು  “ಎಲ್ಲ ಮಾಡಿಸುವವನು ಆ ಭಗವಂತ-ಅವನ ಪ್ರೀತ್ಯರ್ಥ ಈ ಪೂಜೆ” ಎಂದು ಯಾವುದೇ ಲೌಕಿಕ ಫಲಾಪೇಕ್ಷೆ ಇಲ್ಲದೆ ಕ್ರಿಯೆವನ್ನು ಮಾಡುತ್ತಾರೆ. ಇದು ‘ತತ್’.  

ದ್ ಭಾವೇ ಸಾಧುಭಾವೇ ಚ ಸದಿತ್ಯೇತತ್ ಪ್ರಯುಜ್ಯತೇ
ಪ್ರಶಸ್ತೇ ಕರ್ಮಣಿ ತಥಾ ಸಚ್ಛಬ್ದಃ ಪಾರ್ಥ ಯುಜ್ಯತೇ                          ೨೬

ತ್  ಭಾವೇ ಸಾಧುಭಾವೇ ಚ ಸತ್ ಇತಿ ಏತ್ ಪ್ರಯುಜ್ಯತೇ
ಪ್ರಶಸ್ತೇ ಕರ್ಮಣಿ ತಥಾ ಸತ್ ಶಬ್ದಃ ಪಾರ್ಥ ಯುಜ್ಯತೇ – ಪಾರ್ಥ, ‘ಹುಟ್ಟು’ ಮತ್ತು ‘ಒಳ್ಳೆಯತನ’ ಎಂಬ ಅರ್ಥದಲ್ಲಿ  ‘ಸತ್’ ಎಂಬ ಶಬ್ದ ಬಳಕೆಯಾಗುತ್ತದೆ. ‘ಒಳ್ಳೆಯ ಕೆಲಸ’ ಎಂಬ ಅರ್ಥದಲ್ಲು ‘ಸತ್’ ಶಬ್ದ ಸಲ್ಲುತ್ತದೆ.

‘ಸತ್’ ಅನ್ನುವುದಕ್ಕೆ ಒಂದು ಅರ್ಥ-ಭಾವ. ಸತ್-ಭಾವ ಎಂದರೆ ಸಜ್ಜನಿಕೆಯಿಂದ ಇರುವುದು. ಇದು ಲೋಕದಲ್ಲಿ ವ್ಯಕ್ತಿಗೆ ಬಳಸುವ ಪದಪ್ರಯೋಗ. ಇದನ್ನು ಕರ್ಮದಲ್ಲಿ ಬಳಸಿದಾಗ ಸತ್-ಕರ್ಮವಾಗುತ್ತದೆ.  ಓಂಕಾರ ವಾಚ್ಯ ಭಗವಂತನಿಗೆ ಅರ್ಪಣಾ ಭಾವದಿಂದ, ಯಾವುದೇ  ಫಲಾಪೇಕ್ಷೆ ಇಲ್ಲದೆ(ತತ್)  ಮಾಡುವ ಕರ್ಮ ‘ಸತ್’-ಕರ್ಮ. ಯಾವ ಕರ್ಮವನ್ನು ಭಗವಂತನ ಕುರಿತಾಗಿ ಮಾಡುತ್ತೇವೋ, ಆ ಕರ್ಮ ಪ್ರಶಸ್ತವಾಗಿರಬೇಕು. ಅಂದರೆ ಸ್ವಾರ್ಥಕ್ಕಾಗಿ ಮಾಡಿದರೆ ಅದನ್ನು ಜನ ಮೆಚ್ಚುವುದಿಲ್ಲ. ಬದಲಿಗೆ ತ್ಯಾಗದಿಂದ ಮಾಡುವ ಕರ್ಮ ಪ್ರಶಸ್ತ ಕರ್ಮವೆನಿಸುತ್ತದೆ. ನಾವು ಈ ರೀತಿ ಪ್ರತಿಯೊಂದು ಶಬ್ದದ ಅರ್ಥವನ್ನು ತಿಳಿದು, ಪಾಲನೆ ಮಾಡುವ ಪಾರ್ಥರಾಗಬೇಕು ಎನ್ನುವುದು ಕೃಷ್ಣನ ಸಂದೇಶ. ‘ಸತ್’ ಪದದ ಅರ್ಥವನ್ನು ಇನ್ನೂ ವಿವರವಾಗಿ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.

ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಚೋಚ್ಯತೇ
ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿಧೀಯತೇ                        ೨೭

ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸತ್ ಇತಿ ಚ ಉಚ್ಯತೇ
ಕರ್ಮ ಚ ಏವ ತತ್ ಅರ್ಥೀಯಂ ಸತ್ ಇತಿ ಏವ ಅಭಿಧೀಯತೇ – ಯಜ್ಞ-ದಾನ-ತಪಸ್ಸುಗಳಲ್ಲಿ  ನಿಷ್ಠೆಯನ್ನೂ ‘ಸತ್’ ಎನ್ನುತ್ತಾರೆ. ಭಗವಂತನಿಗಾಗಿ  ಆಚರಿಸುವ ಕರ್ಮವನ್ನೂ ‘ಸತ್’ ಎಂದೇ ಕರೆಯುತ್ತಾರೆ.

‘ಸತ್’ ಎಂದರೆ ‘ಸತ್’ ಶಬ್ದ ವಾಚ್ಯನಾದ ಭಗವಂತನನ್ನು ಯಜ್ಞ, ದಾನ, ತಪಸ್ಸಿನಿಂದ ಆರಾಧಿಸುವುದು. ಹೀಗಾಗಿ ಭಗವಂತನೂ ‘ಸತ್’; ಅವನ ಕುರಿತಾದ ಕರ್ಮವೂ ‘ಸತ್’(ಸತ್ಕರ್ಮ); ಅವನ ಕುರಿತಾಗಿ ಕರ್ಮ ಮಾಡುವವನೂ ‘ಸತ್’(ಸಜ್ಜನ). ನಾವು ಭಗವಂತನ ಎಚ್ಚರದಿಂದ, ಫಲಾಪೇಕ್ಷೆ ಇಲ್ಲದೆ, ಭಗವದರ್ಪಣಾ ಭಾವದಿಂದ, ಭಗವಂತ ಪ್ರೀತನಾಗಲಿ ಎಂದು ಮಾಡುವ ಸಮಸ್ತ ಕರ್ಮವೂ ಸತ್-ಕರ್ಮ.

ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್
ಅಸದಿತ್ಯುಚ್ಯತೇ ಪಾರ್ಥ ನ ಚ ತತ್ ಪ್ರೇತ್ಯ ನೋ ಇಹ                     ೨೮

ಅಶ್ರದ್ಧಯಾ ಹುತಮ್  ದತ್ತಮ್  ತಪಃ ತಪ್ತಮ್ ಕೃತಂ ಚ ಯತ್
ಅಸತ್ ಇತಿ ಉಚ್ಯತೇ ಪಾರ್ಥ ನ ಚ ತತ್ ಪ್ರೇತ್ಯ ನೋ ಇಹ – ಮಾಡುವ ಕರ್ಮದಲ್ಲಿ ಶ್ರದ್ದೆ ಇಲ್ಲದೆ, ಭಗವಂತನಲ್ಲಿ ಶ್ರದ್ದೆ ಇಲ್ಲದೆ, ಯಾರದ್ದೋ ಒತ್ತಾಯಕ್ಕಾಗಿ, ಅಥವಾ ಭಯದಿಂದ, ಪೂರ್ಣ ನಂಬಿಕೆ ಇಲ್ಲದೆ ಮಾಡುವ ಕ್ರಿಯೆ ವ್ಯರ್ಥ. ಶ್ರದ್ದೆ ಇಲ್ಲದೆ ಮಾಡುವ ಇಂಥಹ  ದಾನ, ತಪಸ್ಸು, ಯಜ್ಞ, ಅಥವಾ ಇತರ ಯಾವುದೇ ಕರ್ಮಕ್ಕೆ  ಇಹದಲ್ಲೂ ಫಲವಿಲ್ಲ, ಪರದಲ್ಲೂ ಫಲವಿಲ್ಲ.
             
ಇತಿ ಸಪ್ತದಶೋSಧ್ಯಾಯಃ
ಹದಿನೇಳನೆಯ ಅಧ್ಯಾಯ ಮುಗಿಯಿತು

*******