ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ ।
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ ॥೭॥
ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ ।
ಕಲ್ಪಕ್ಷಯೇ ಪುನಃ ತಾನಿ ಕಲ್ಪ ಆದೌ ವಿಸೃಜಾಮಿ ಅಹಮ್ –ಸೃಷ್ಟಿಯ ಕೊನೆಯಲ್ಲಿ ಎಲ್ಲ ವಸ್ತುಗಳೂ ನನ್ನದೇ ಆದ ಮೂಲ ಪ್ರಕೃತಿಯನ್ನು ಸೇರುತ್ತವೆ. ಸೃಷ್ಟಿಯ ಮೊದಲಲ್ಲಿ ಮರಳಿ ಅವನ್ನುನಾನು ನಿರ್ಮಿಸುತ್ತೇನೆ.
ಸೃಷ್ಟಿಯಾಗಿ 31,104 ಸಾವಿರ ಕೋಟಿ ವರ್ಷಗಳ ನಂತರ ಮಹಾಪ್ರಳಯ. ಇದು ಚತುರ್ಮುಖ ಬ್ರಹ್ಮನ ನೂರು ವರ್ಷ. ಇದನ್ನು ಕಲ್ಪಕ್ಷಯ ಎನ್ನುತ್ತಾರೆ. ಈ ಮಹಪ್ರಳಯದಲ್ಲಿ ಸತ್ಯಲೋಕದಿಂದ ಹಿಡಿದು ಪ್ರತಿಯೊಂದೂ ತನ್ನ ಸ್ಥೂಲ ರೂಪವನ್ನು ಕಳೆದುಕೊಂಡು ಸೂಕ್ಷ್ಮ ರೂಪದಲ್ಲಿ ಭಗವಂತನ ಅಧೀನವಾದ ಪ್ರಕೃತಿಯನ್ನು ಸೇರುತ್ತವೆ. ಎಲ್ಲಾ ಜೀವ ಜಾತಗಳೂ ಕೂಡಾ ತನ್ನ ಸ್ಥೂಲ ರೂಪವನ್ನು ಕಳೆದುಕೊಂಡು ಭಗವಂತನ ಉದರವನ್ನು ಸೇರುತ್ತದೆ. ಮತ್ತೆ 31,104 ಸಾವಿರ ಕೋಟಿ ವರ್ಷ ಪ್ರಳಯಕಾಲ. ನಂತರ ಮರಳಿ ಈ ಸೃಷ್ಟಿ ನಿರ್ಮಾಣವಾಗುತ್ತವೆ. ಅಂದರೆ ಮರಳಿ ಸೂಕ್ಷ್ಮರೂಪದಿಂದ ಸ್ಥೂಲರೂಪವನ್ನು ಪಡೆಯುತ್ತವೆ.
ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ ।
ಭೂತಗ್ರಾಮಮಿಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್ ॥೮॥
ಪ್ರಕೃತಿಮ್ ಸ್ವಾಮ್ ಅವಷ್ಟಭ್ಯ ವಿಸೃಜಾಮಿ ಪುನಃ ಪುನಃ ।
ಭೂತ ಗ್ರಾಮಮ್ ಇಮಿಮಮ್ ಕೃತ್ಸ್ನಮ್ ಅವಶಮ್ ಪ್ರಕೃತೇಃ ವಶಾತ್ – ಪ್ರಕೃತಿಯ ನಿಯತಿಗೊಳಪಟ್ಟು ಪರತಂತ್ರವಾದ [ನನ್ನಂಕೆಯಲ್ಲಿರುವ] ಈ ಇಡಿಯ ವಿಶ್ವವನ್ನು ನನ್ನದೆ ಆದ ಪ್ರಕೃತಿಯನ್ನು ಬಳಸಿ ಮತ್ತೆ ಮತ್ತೆ ನಿರ್ಮಿಸುತ್ತೇನೆ.
ಪ್ರಳಯ ಕಾಲದಲ್ಲಿ ಸೂಕ್ಷ್ಮರೂಪದಲ್ಲಿ ಭಗವಂತನನ್ನು ಸೇರಿದ ಜಡ ಮತ್ತು ಜೀವವನ್ನು ಭಗವಂತ ತನ್ನ ಅಧೀನವಾದ ಪ್ರಕೃತಿಯನ್ನು ಬಳಸಿ ಮತ್ತೆ ಸೃಷ್ಟಿ ಮಾಡುತ್ತಾನೆ. ಭಗವಂತನ ಈ ಸೃಷ್ಟಿ ಮತ್ತು ಸಂಹಾರಚಕ್ರ ನಿರಂತರ. ಇಂತಹ ಅನಂತ ಬ್ರಹ್ಮಾಂಡಗಳು ಹಿಂದೆ ನಿರ್ಮಾಣವಾಗಿ ಸಂಹಾರವಾಗಿವೆ ಮತ್ತು ಇನ್ನೂ ಅನಂತ ಕಾಲದಲ್ಲೂ ಇದು ಮುಂದುವರಿಯುತ್ತದೆ. ಈ ಕಾರಣಕ್ಕಾಗಿ ಭಗವಂತನನ್ನು ಅನಂತ ಕೋಟಿ ಬ್ರಹ್ಮಾಂಡನಾಯಕ ಎಂದು ಕರೆಯುತ್ತಾರೆ.(ಈ ಬಗ್ಗೆ ವಿವರವಾಗಿ ನಾವು ಏಳನೇ ಅಧ್ಯಾಯದಲ್ಲೇ ಚರ್ಚಿಸಿದ್ದೇವೆ).
ಹೀಗೆ ನಿರಂತರ ಸೃಷ್ಟಿ-ಸಂಹಾರ ಮಾಡುವ ಭಗವಂತನಿಗೆ ಕರ್ಮ ಅಂಟುವುದಿಲ್ಲವೇ? ಮುಂದಿನ ಶ್ಲೋಕಗಳಲ್ಲಿ ನೋಡೋಣ:
ನಚ ಮಾಂ ತಾನಿ ಕರ್ಮಾಣಿ ನಿಬಧ್ನನ್ತಿ ಧನಂಜಯ ।
ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು ॥೯॥
ನಚ ಮಾಮ್ ತಾನಿ ಕರ್ಮಾಣಿ ನಿಬಧ್ನನ್ತಿ ಧನಂಜಯ ।
ಉದಾಸೀನವತ್ ಆಸೀನಮ್ ಅಸಕ್ತಮ್ ತೇಷು ಕರ್ಮಸು –ಧನಂಜಯ, ನಾನು ಮಾಡಿಯೂ ಮಾಡದವನಂತೆ ಇದ್ದುಬಿಡುತ್ತೇನೆ. ಆ ಕರ್ಮಗಳಲ್ಲಿ ನನಗೆ ನಂಟಿಲ್ಲ. ಅದರಿಂದ ಆ ಕರ್ಮಗಳು ನನ್ನನ್ನು ಕಟ್ಟಿ ಹಾಕಲಾರವು.
ಭಗವಂತ ನಿರ್ಲಿಪ್ತ, ಆತ ಕರ್ಮ ಮಾಡುವುದು ಆತನಿಗೊಸ್ಕರ ಅಲ್ಲ. ಸ್ವತಂತ್ರನಾದ ಭಗವಂತನನ್ನು ಎಂದೂ ಯಾವ ಕರ್ಮವೂ ಕಟ್ಟಿ ಹಾಕಲಾರವು.(ಒಂದು ವೇಳೆ ಹಾಗೆ ಕಟ್ಟಿ ಹಾಕುವುದಾದರೆ ಭಗವಂತ ಸ್ವತಂತ್ರ ಎನಿಸುವುದಿಲ್ಲ!). “ನಾನು ನನಗೋಸ್ಕರ ಏನೂ ಮಾಡುವುದಿಲ್ಲ ಮತ್ತು ಕರ್ಮ ನನಗೆ ಅಂಟುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳುತ್ತಾನೆ ಕೃಷ್ಣ.
ಈ ಶ್ಲೋಕದಲ್ಲಿ ಧನಂಜಯ ಎನ್ನುವ ವಿಶೇಷಣ ಬಳಕೆಯಾಗಿದೆ. ವ್ಯವಹಾರಿಕವಾಗಿ ಈ ನಾಮವನ್ನು ನೋಡಿದರೆ ‘ಜನರಿಂದ ಹಣವನ್ನು ದೋಚಿ ದುಷ್ಟ ರಾಜ್ಯಭಾರ ಮಾಡುವ ಶತ್ರು ರಾಜರನ್ನು ಸೋಲಿಸಿ, ಆ ಸಂಪತ್ತನ್ನು ಜಯಿಸಿ, ಅದನ್ನು ಪ್ರಜೆಗಳಿಗಾಗಿ ಸದುಪಯೋಗ ಮಾಡುವವ ಧನಂಜಯ’. [ತನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬರ ಮೇಲೆ ದಾಳಿಮಾಡಿ ಹಣ ಗಳಿಸುವವ ‘ದರೋಡೆಕೋರ’ ಎನಿಸುತ್ತಾನೆ ಹೊರತು ಧನಂಜಯ ಎನಿಸುವುದಿಲ್ಲ. ಮಹಾಭಾರತದಲ್ಲಿ ಏಕಲವ್ಯ ಈ ಎರಡನೇ ಗುಂಪಿಗೆ ಸೇರಿದವನಾಗಿದ್ದ. ಆದ್ದರಿಂದ ಆತನ ಬೆರಳನ್ನು ಕತ್ತರಿಸಲಾಯಿತು ಮತ್ತು ಕೃಷ್ಣ ಸ್ವತಃ ಆತನನ್ನು ಸಂಹಾರ ಮಾಡಿದ್ದ.] ಆಧ್ಯಾತ್ಮಿಕವಾಗಿ ನಿಜವಾದ ಧನ ಎಂದರೆ ಭಗವಂತ. ಅಂತಹ ಭಗವಂತನ ಜ್ಞಾನವನ್ನು ಪಡೆದವ ಧನಂಜಯ. ನಾವೆಲ್ಲರೂ ಅರ್ಜುನನಂತೆ ಭಗವಂತನ ಜ್ಞಾನವನ್ನು ಪಡೆದು ಧನಂಜಯರಾದಾಗ ಮಾತ್ರ ಮೋಕ್ಷವನ್ನು ಪಡೆಯಲು ಸಾಧ್ಯ.
No comments:
Post a Comment