Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, September 24, 2011

Bhagavad Geeta Kannada Chapter-10 Shloka 39-42


ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ ।
ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಮ್   ॥೩೯॥

ಯತ್ ಚ ಅಪಿ ಸರ್ವ ಭೂತಾನಾಮ್  ಬೀಜಮ್  ತತ್ ಅಹಮ್ ಅರ್ಜುನ ।
ನ ತತ್ ಅಸ್ತಿ ವಿನಾ ಯತ್ ಸ್ಯಾತ್ ಮಯಾ ಭೂತಮ್ ಚರ ಅಚರಮ್ –ಅರ್ಜುನ, ಸಮಸ್ತ ಜೀವಿಗಳಲ್ಲಿ  ಏನೆಲ್ಲ ವಿಶಿಷ್ಠ ಗುಣವಿದೆಯೊ ಅವುಗಳಲ್ಲಿ ನಾನೆ ಇದ್ದು ಆ ಶಕ್ತಿ ನೀಡಿದ್ದೇನೆ. ನನ್ನನ್ನು ಹೊರತುಪಡಿಸಿ ಈ ಚರಾಚರದಲ್ಲಿ ಯಾವುದೂ ತಾನೆ ತಾನಾಗಿ ಇಲ್ಲ.

“ಈ ಜಗತ್ತಿನಲ್ಲಿರುವ ಸಮಸ್ತ ವಸ್ತು(ಜಡ-ಚೇತನ)ವಿಗೂ ಮೂಲಭೂತವಾಗಿರುವ ಅಭಿವ್ಯಂಜಕ ರೂಪ ಮತ್ತು ಶಕ್ತಿ ಕೊಡುವವನು ನಾನು” ಎನ್ನುತ್ತಾನೆ ಕೃಷ್ಣ. ಹೀಗೆ ಭಗವಂತ ಸಮಸ್ತ ಸೃಷ್ಟಿಗೂ ಬೀಜಪುರುಷನಾಗಿ ನಿಂತಿದ್ದಾನೆ. ಕಣ್ಣಿಗೆ ಕಾಣದ ಜೀವಕ್ಕೆ ಕಣ್ಣಿಗೆ ಕಾಣುವ ಶರೀರ ಕೊಡುವವನು ಆತ. ಗಂಡಿನ ರೇತಸ್ಸಿನಲ್ಲಿದ್ದು, ಜೀವವನ್ನು ರೇತಸ್ಸಿನ ಮುಖೇನ ಹೆಣ್ಣಿನ ದೇಹದೊಳಗೆ ಸೇರಿಸಿ, ಅಲ್ಲಿ ಜೀವಕ್ಕೆ ಒಂದು ರೂಪವನ್ನು ಕೊಟ್ಟು ಬೆಳಗಿಸುವವ ಭಗವಂತ. ಹೀಗೆ ಈ ಪ್ರಪಂಚದಲ್ಲಿರುವ ಚೇತನಾಚೇತನ ಅಥವಾ ಚರಾಚರಾತ್ಮಕ-ಎಲ್ಲವನ್ನೂ ಹುಟ್ಟಿಸುವವನು ಭಗವಂತ. “ಈ ಪ್ರಪಂಚದಲ್ಲಿ ನನ್ನನ್ನು ತೊರೆದು ಸ್ವತಂತ್ರವಾಗಿ ಯಾವ ವಸ್ತುವೂ ಇಲ್ಲ” ಎನ್ನುತ್ತಾನೆ ಕೃಷ್ಣ. ಇದು ವೈದಿಕ ಪರಂಪರೆಯಲ್ಲಿ ಇರುವ ಗೊಂದಲಕ್ಕೆ ಕೃಷ್ಣ ಕೊಟ್ಟ ನೇರ ಉತ್ತರ. ಜೀವ ಮತ್ತು ಭಗವಂತ ಒಂದೇ ಅಲ್ಲ. ಜೀವ ಭಗವಂತನ ಪ್ರತಿಬಿಂಬ. ಎಲ್ಲವೂ ಇದೆ. ಆದರೆ  ಭಗವಂತನನ್ನು ಬಿಟ್ಟು ಸ್ವತಂತ್ರ ಅಸ್ತಿತ್ವ ಯಾರಿಗೂ ಇಲ್ಲ.         

ನಾಂತೋSಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ ।
ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ ॥೪೦॥

ನ ಅಂತಃ ಅಸ್ತಿ ಮಮ ದಿವ್ಯಾನಾಮ್ ವಿಭೂತೀನಾಮ್ ಪರಂತಪ      ।
ಏಷಃ ತು ಉದ್ದೇಶತಃ ಪ್ರೋಕ್ತಃ  ವಿಭೂತೇಃ ವಿಸ್ತರಃ  ಮಯಾ—ಓ ಅರಿಗಳ ಉರಿಯೆ, ನನ್ನ ದಿವ್ಯರೂಪಗಳ ಹಿರಿಮೆಗಳಿಗೆ ಕೊನೆಯಿಲ್ಲ. ನನ್ನ ಹಿರಿಮೆಯ ಬಿತ್ತರದ ಕೆಲವನ್ನಷ್ಟೆ ಇಲ್ಲಿ ಹೆಸರಿಸಿ ಹೇಳಿದೆ.

ಕೃಷ್ಣ ಹೇಳುತ್ತಾನೆ “ನನ್ನ ವಿಭೂತಿ ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಇದೆ. ಅದನ್ನು ಹೇಳಿ ಕೊನೆ ಇಲ್ಲ” ಎಂದು. ಲೋಕವಿಲಕ್ಷಣವಾದ ಭಗವಂತನ ವಿಭೂತಿಗೆ ಕೊನೆ ಇಲ್ಲ. ಅದನ್ನು ಹೇಳಿ ಮುಗಿಯುವುದಿಲ್ಲ. ಇಲ್ಲಿ ಕೃಷ್ಣ ಅತ್ಯಂತ ಮುಖ್ಯವಾದ, ನಾವು ನಿರಂತರ ಉಪಾಸನೆ ಮಾಡಬೇಕಾದ, ನಿತ್ಯ ಅನುಸಂಧಾನದಲ್ಲಿರಬೇಕಾದದ್ದನ್ನು ಹೇಳಿದ.    

ಯದ್ಯದ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ ।
ತತ್ತದೇವಾವಗಚ್ಛ ತ್ವಂ ಮಮ ತೇಜೋಂSಶಸಂಭವಮ್ ॥೪೧॥

ಯತ್ ಯತ್  ವಿಭೂತಿ ಮತ್ ಸತ್ತ್ವಮ್ ಶ್ರೀಮತ್ ಊರ್ಜಿತಮ್ ಏವ ವಾ ।
ತತ್ ತತ್ ಏವ ಅವಗಚ್ಛ ತ್ವಮ್ ಮಮ ತೇಜಃ ಅಂಶ ಸಂಭವಮ್—ಗುಂಪಿನಲ್ಲಿ ಮಿಗಿಲಾದದ್ದು , ಸಿರಿಯಲ್ಲಿ ಹಿರಿದಾದದ್ದು. ಎತ್ತರದಲ್ಲಿ ಮೆರೆದದ್ದು ಯಾವುದೆಲ್ಲ ಇದೆ ಅದೆಲ್ಲವೂ ನನ್ನ ಹಿರಿಮೆಯ ಬೆಳಕಿನ ಕಿಡಿಯಿಂದ ಮೂಡಿಬಂದದ್ದು ಎಂದು ತಿಳಿ.

ಒಟ್ಟಿನಲ್ಲಿ ಒಬ್ಬ ವ್ಯಕ್ತಿಯಲ್ಲಿ, ಒಂದು ವಸ್ತುವಿನಲ್ಲಿ ಇನ್ನೊಬ್ಬರಲ್ಲಿಲ್ಲದ ಯಾವ ವಿಶಿಷ್ಠ ಗುಣವಿದೆ ಅದು ಭಗವಂತನ ಹಿರಿಮೆಯ ಒಂದು ಬೆಳಕಿನ ಕಿಡಿ. ಇದು ಭಗವಂತನ ಅನಂತ ತೇಜಸ್ಸಿನ ಒಂದು ತುಣುಕು.   

ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ । 
                   ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್        ॥೪೨॥

ಅಥವಾ ಬಹುನಾ ಏತೇನ ಕಿಮ್ ಜ್ಞಾತೇನ ತವ ಅರ್ಜುನ ।
ವಿಷ್ಟಭ್ಯ ಅಹಮ್ ಇದಮ್  ಕೃತ್ಸ್ನಮ್ ಏಕ ಅಂಶೇನ ಸ್ಥಿತಃ ಜಗತ್ –ಅಥವಾ, ಓ ಅರ್ಜುನ, ಎಲ್ಲವನ್ನು ತಿಳಿದು ಏನು ಬಂತು ? ಸಾರವಿದು: ನಾನು ನನ್ನ ಅಳವಿನ ಒಂದು ಅಂಶದಿಂದ ಈ ಇಡಿಯ ವಿಶ್ವವನ್ನು ತಬ್ಬಿ ತಡೆಹಿಡಿದು ನಡೆಸುತ್ತಿದ್ದೇನೆ.

ಒಂದೊಂದನ್ನು ಪ್ರತ್ಯೇಕ ತಿಳಿದು ಹೇಳುವುದು ಅಸಾಧ್ಯ. ಈ ರೀತಿ ಮಾಡುವ ಅಗತ್ಯವೂ ಇಲ್ಲ. ಎಲ್ಲವುದರೊಳಗೂ ಒಂದು ವಿಶಿಷ್ಠ ಶಕ್ತಿಯಾಗಿ ಭಗವಂತನಿದ್ದಾನೆ. ಎಲ್ಲದರಲ್ಲೂ ಭಗವಂತನ ವಿಭೂತಿ ಅಡಗಿದೆ. ಕೃಷ್ಣ ಹೇಳುತ್ತಾನೆ “ ಇಡೀ ವಿಶ್ವವನ್ನು ನಾನು ನನ್ನ ಸಾಮರ್ಥ್ಯದ ಒಂದು ತುಣುಕಿನಿಂದ  ವ್ಯಾಪಿಸಿ ನಿಂತಿದ್ದೇನೆ” ಎಂದು. ಪುರುಷ ಸೂಕ್ತದಲ್ಲಿ ಹೇಳುವಂತೆ:
ಪಾದೋಸ್ಯ ವಿಶ್ವಾ ಭೂತಾನಿ| ತ್ರಿಪಾದಸ್ಯಾಮೃತಂ ದಿವಿ|
ತ್ರಿಪಾದೂರ್ಧ್ವ ಉದೈತ್ಪುರುಷಃ| ಪಾದೋಸ್ಯೇಹಾಭವಾತ್ಪುನಃ|
ತತೋ ವಿಷ್ವಂವ್ಯಕ್ರಾಮತ್| ಸಾಶನಾನಶನೇ ಅಭಿ|

ಈ ಪ್ರಪಂಚದಲ್ಲಿ ವ್ಯಾಪಿಸಿರುವುದು  ಭಗವಂತನ ಕೇವಲ ಕಾಲು ಭಾಗವಷ್ಟೇ. ಅಮೃತಮಯವಾದ  ಮುಕ್ಕಾಲು ಭಾಗ ದಿವ್ಯಲೋಕ (ಮುಕ್ತಲೋಕ) ದಲ್ಲಿ ನೆಲೆಸಿದೆ. “ಜಗತ್ತಿನ ಸಮಸ್ತ ವಸ್ತುವಿನ ಒಳಗೂ ಹೊರಗೂ  ತುಂಬಿ ನಾನು ವಿಶ್ವ ರೂಪನಾಗಿದ್ದೇನೆ” ಎನ್ನುತ್ತಾನೆ ಕೃಷ್ಣ.

ಇತಿ  ದಶಮೋSಧ್ಯಾಯಃ
ಹತ್ತನೆಯ ಅಧ್ಯಾಯ ಮುಗಿಯಿತು
*******

1 comment:

  1. Bhagavad Gita In Kannada: Bhagavad Geeta Kannada Chapter-10 Shloka 39-42 >>>>> Download Now

    >>>>> Download Full

    Bhagavad Gita In Kannada: Bhagavad Geeta Kannada Chapter-10 Shloka 39-42 >>>>> Download LINK

    >>>>> Download Now

    Bhagavad Gita In Kannada: Bhagavad Geeta Kannada Chapter-10 Shloka 39-42 >>>>> Download Full

    >>>>> Download LINK LS

    ReplyDelete