ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ
।
ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಮ್ ॥೩೨॥
ಸರ್ಗಾಣಾಮ್ ಆದಿಃ ಅಂತಃ ಚ ಮಧ್ಯಮ್ ಚ
ಏವಅಹಮ್ ಅರ್ಜುನ ।
ಅಧ್ಯಾತ್ಮವಿದ್ಯಾ ವಿದ್ಯಾನಾಮ್ ವಾದಃ
ಪ್ರವದತಾಮ್ ಅಹಮ್—ಓ
ಅರ್ಜುನ, ಜೀವಿಗಳ ಹುಟ್ಟಿಗೆ, ಸಾವಿಗೆ, ಇರವಿಗೆ ಕಾರಣ ನಾನು. ಅರಿವುಗಳಲ್ಲಿ ಅಧ್ಯಾತ್ಮದ ಅರಿವು ನಾನು.
[ಜೀವರಿಗೆ ಒಡೆಯನಾದ್ದರಿಂದ ‘ಅಧ್ಯಾತ್ಮ’ ಎನ್ನಿಸಿ, ಜ್ಞಾನರೂಪನಾದ್ದರಿಂದ ‘ವಿದ್ಯಾ’ ಎನ್ನಿಸಿ ಅಧ್ಯಾತ್ಮ
ವಿದ್ಯೆಯಲ್ಲಿದ್ದೇನೆ.] ಚರ್ಚಿಸುವವರ ಚರ್ಚೆಯಲ್ಲಿ [ತತ್ವದ ತಿಳಿವಿಗಾಗಿ ನಡೆಸುವ] ವಾದ ನಾನು.
[ಎಲ್ಲ ನಾಮಗಳಿಂದ ವಾಚ್ಯನಾಗಿ ‘ವಾದ’ ಎನ್ನಿಸಿ ವಾದದಲ್ಲಿದ್ದೇನೆ.]
ಪ್ರಪಂಚದಲ್ಲಿ ಇರುವ ಪ್ರತಿಯೊಂದು ವಸ್ತುವಿನಲ್ಲಿಯೂ
ಭಗವಂತನ ವಿಭೂತಿ ಅಡಗಿದೆ. ನಮಗೆ ಮೇಲ್ನೋಟಕ್ಕೆ ವ್ಯರ್ಥವೆಂದು ಕಾಣುವ ವಸ್ತುವಿನಲ್ಲೂ ಕೂಡಾ ಇನ್ನೊಂದು
ವಸ್ತುವಿನಲ್ಲಿರದ ಒಂದು ವಿಶಿಷ್ಠಗುಣ(Exclusive Quality) ಅಡಗಿರುತ್ತದೆ. ಆದ್ದರಿಂದ ಒಂದು ಹುಲ್ಲುಕಡ್ಡಿಯಿಂದ
ಹಿಡಿದು ಚತುರ್ಮುಖ ಬ್ರಹ್ಮನವರೆಗೆ ಎಲ್ಲವೂ ಭಗವಂತನ ವಿಭೂತಿ. ಇಲ್ಲಿ ಕೃಷ್ಣ ಕೇವಲ ಆ ಗುಂಪಿನಲ್ಲಿ
ವಿಶಿಷ್ಠಭೂತಿಯನ್ನು ಹೇಳಿದ್ದಾನೆ ಅಷ್ಟೆ. ಜೀವ ಹುಟ್ಟುವ ಮೊದಲು ಇದ್ದವ, ಜೀವದ ಇರವಿಗೆ ಕಾರಣನಾದವ,
ಕೊನೆಗೆ ಸಂಹಾರಶಕ್ತಿಯಾಗಿ ನಿಲ್ಲುವವ ಆ ಭಗವಂತ. ಹೀಗೆ “ಹುಟ್ಟುವಾಗ, ಇರುವಾಗ ಮತ್ತು ಅಂತದಲ್ಲೂ ನಾನಿದ್ದೇನೆ”
ಎನ್ನುತ್ತಾನೆ ಕೃಷ್ಣ. “ಈ ವಿಷಯ-ಜ್ಞಾನಾರ್ಜನ ಮಾಡಿದ, ಸಾತ್ವಿಕನಾದ, ನಿನಗೆ ತಿಳಿದೇ ಇದೆ” ಎನ್ನುವ
ಅರ್ಥದಲ್ಲಿ ಕೃಷ್ಣ ಇಲ್ಲಿ ಪಾರ್ಥನನ್ನು ‘ಅರ್ಜುನ’
ಎಂದು ವಿಶೇಷವಾಗಿ ಸಂಬೋಧಿಸಿದ್ದಾನೆ.
“ಅರಿವುಗಳಲ್ಲಿ ಅಧ್ಯಾತ್ಮದ ಅರಿವು ನಾನು”
ಎನ್ನುತ್ತಾನೆ ಕೃಷ್ಣ. ಭಗವಂತನನ್ನು ಸ್ಪರ್ಶಮಾಡುವ ಅಧ್ಯಾತ್ಮ ವಿದ್ಯೆಯಲ್ಲಿ ಪರಮಾತ್ಮ ತುಂಬಿದ್ದಾನೆ.
ಎಲ್ಲ ಆತ್ಮಗಳಿಗೆ ಹಿರಿದಾದ ಭಗವಂತ ಅಧಿಕ-ಆತ್ಮ(ಅಧ್ಯಾತ್ಮ). ಅಧ್ಯಾತ್ಮ ವಿದ್ಯೆಯನ್ನು ಪಡೆಯಬೇಕಾದರೆ
ನಾವು ಇನ್ನೊಬ್ಬರೊಂದಿಗೆ ಸಂವಾದ ಮಾಡಬೇಕು. ಇದು ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ,
ಜ್ಞಾನ ದಾಹವನ್ನು ಇಂಗಿಸಿಕೊಳ್ಳುವುದಕ್ಕಾಗಿ ಮಾಡುವ ಶಾಸ್ತ್ರೀಯ ಚರ್ಚೆ. ಇಂತಹ ಚರ್ಚೆಯಲ್ಲಿ ‘ವಾದಃ' ವಾಚ್ಯನಾಗಿ ಭಗವಂತನಿರುತ್ತಾನೆ. ಎಲ್ಲ ನಾಮಗಳಿಂದ ವಾಚ್ಯನಾದ ಭಗವಂತ ವಾದಃ.
ಅಕ್ಷರಾಣಾಮಕಾರೋಸ್ಮಿ ದ್ವಂದ್ವಃ ಸಾಮಾಸಿಕಸ್ಯ
ಚ ।
ಅಹಮೇವಾಕ್ಷಯಃ ಕಾಲೋ ಧಾತಾSಹಂ ವಿಶ್ವತೋಮುಖಃ ॥೩೩॥
ಅಕ್ಷರಾಣಾಮ್ ಅಕಾರಃ ಅಸ್ಮಿ ದ್ವಂದ್ವಃ
ಸಾಮಾಸಿಕಸ್ಯ ಚ ।
ಅಹಮ್ ಏವ ಅಕ್ಷಯಃ ಕಾಲಃ ಧಾತಾ ಅಹಮ್ ವಿಶ್ವತೋಮುಖಃ –ಅಕ್ಷರಗಳಲ್ಲಿ ಮೊದಲ ಅಕಾರ ನಾನು. [‘ಅ’
ಎಂದು ಕರೆಸಿಕೊಂಡು, ‘ಅಕಾರ’ ಎನ್ನಿಸಿ ಅ-ಕಾರದಿಂದ
ವಾಚ್ಯನಾಗಿದ್ದೇನೆ.] ಸಮಾಸಗಳ ಗುಂಪಿನಲ್ಲಿ ದ್ವಂದ್ವ ಸಮಾಸ ನಾನು. [ಎರಡು ರೂಪಗಳಿಂದ ಒಳಗೂ ಹೊರಗೂ
ಇರುವುದರಿಂದ ‘ದ್ವಂದ್ವ’ ಎನ್ನಿಸಿ ದ್ವಂದ್ವ ಸಮಾಸದಲ್ಲಿದ್ದೇನೆ.] ಅಳಿವಿರದ ನಾನೆ
[ಕಾಲದಲ್ಲಿದ್ದು] ಕಬಳಿಸುವವನು. ಎಲ್ಲೆಡೆ ತುಂಬಿದ್ದು ಎಲ್ಲವನ್ನು ಸಲಹುವವನೂ ನಾನೆ.
ಹಿಂದೆ ಶಬ್ದಗಳಲ್ಲಿ ಓಂಕಾರವನ್ನು
ಹೇಳಿದ್ದ ಕೃಷ್ಣ, ಇಲ್ಲಿ ಅಕ್ಷರದಲ್ಲಿ ತನ್ನ ವಿಭೂತಿಯನ್ನು ಹೇಳುತ್ತ ಹೇಳುತ್ತಾನೆ: “ಅಕ್ಷರಾಣಾಮಕಾರೋಸ್ಮಿ”
ಎಂದು. ‘ಅ’ ಪೂರ್ತಿಯಾಗಿ ಭಗವಂತನ ಎಲ್ಲ ಗುಣಗಳನ್ನೂ ಹೇಳುವ ವಿಶಿಷ್ಠ ಅಕ್ಷರ. ಅ- ಅಂದರೆ ‘ಅಲ್ಲ’.
ಭಗವಂತ ‘ಅಲ್ಲ’. ಅಂದರೆ ನಮಗೆ ತಿಳಿದಿರುವ ಯಾವ ವಸ್ತುವೂ ಅವನಲ್ಲ. ಆತ ಪ್ರಪಂಚದಿಂದ ವಿಲಕ್ಷಣ.
ಇಂತಹ ಭಗವಂತ ‘ಇಲ್ಲ’. ಅಂದರೆ ಆತನಲ್ಲಿ ಯಾವ ದೋಷವೂ ಇಲ್ಲ. ಆತ ಸರ್ವಗುಣಪೂರ್ಣ. ಹೀಗೆ ಸರ್ವವಿಲಕ್ಷಣ,
ಸರ್ವದೋಷದೂರ, ಸರ್ವಗುಣಪೂರ್ಣ ಭಗವಂತ ಅ-ಕಾರವಾಚ್ಯನಾಗಿ ‘ಅ’ಕಾರದಲ್ಲಿ ತುಂಬಿದ್ದಾನೆ.
ಅಕ್ಷರದ ನಂತರ ಸಮಾಸಗಳ ಬಗ್ಗೆ ಹೇಳುತ್ತ
ಕೃಷ್ಣ ಹೇಳುತ್ತಾನೆ: “ದ್ವಂದ್ವಃ ಸಾಮಾಸಿಕಸ್ಯ” ಎಂದು. ನಮಗೆ ತಿಳಿದಂತೆ ಯಾವುದೇ ಸಮಾಸವಾಗಬೇಕಾದರೆ ಅಲ್ಲಿ ಎರಡು
ಶಬ್ದವಿರಬೇಕು (ಅಥವಾ ಒಂದು ಶಬ್ದ ಮತ್ತು ಒಂದು ಪ್ರತ್ಯಯವಿರಬೇಕು). ಇತರ ಎಲ್ಲಾ ಸಮಾಸಗಳಲ್ಲಿ ಒಂದು
ಪದ, ಅಥವಾ ಎರಡೂ ಪದ(ಬಹುವ್ರೀಹಿ) ತನ್ನ ಪ್ರಾಧಾನ್ಯತೆಯನ್ನು
ಕಳೆದುಕೊಳ್ಳಬಹುದು. ಆದರೆ ದ್ವಂದ್ವ ಸಮಾಸದಲ್ಲಿ ಎರಡೂ ಪದಗಳು ಮುಖ್ಯ. ಉಭಯಪದ ಪ್ರಧಾನ ಸಮಾಸವಾದ ದ್ವಂದ್ವ
ಸಮಾಸದಲ್ಲಿ ಭಗವಂತ ದ್ವಂದ್ವಃ ನಾಮಕನಾಗಿ ತುಂಬಿದ್ದಾನೆ. ಎರಡು ರೂಪದಿಂದ ನಮ್ಮ ಒಳಗೂ-ಹೊರಗೂ ತುಂಬಿರುವ
ಭಗವಂತ ದ್ವಂದ್ವಃ.
ಎಲ್ಲವನ್ನು ಸಂಹಾರ ಮಾಡುವ ಕಾಲಪುರುಷ
ಭಗವಂತ, ಎಲ್ಲವನ್ನು ಧಾರಣೆ ಮಾಡಿ, ಪೋಷಣೆ ಮಾಡುವ ‘ಧಾತ’. ಇಂತಹ ಭಗವಂತ ವಿಶ್ವತೋಮುಖಃ. ಆತ ಎಲ್ಲೆಡೆ
ತುಂಬಿದ್ದಾನೆ. ಆತನಿಲ್ಲದ ತಾಣವಿಲ್ಲ. ಆತ ಕಾಣದ ಎಡೆಯಿಲ್ಲ.
No comments:
Post a Comment