Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, September 26, 2011

Bhagavad Geeta in Kannada Chapter-11 Shloka 1-4


ಅಧ್ಯಾಯ ಹನ್ನೊಂದು

ಈ ಅಧ್ಯಾಯ ಭಗವಂತನ ಉಪಾಸನೆ ಮಾಡುವಾಗ ಆತನನ್ನು ಹೇಗೆ ಚಿಂತನೆ ಮಾಡಬೇಕು ಎಂದು ಹೇಳುವ ಅಧ್ಯಾಯ. ಇದು  ಭಗವಂತನ ವಿಶ್ವರೂಪ ದರ್ಶನ ಅಧ್ಯಾಯ. ಕೃಷ್ಣ ಅರ್ಜುನನಿಗೆ ದಿವ್ಯನೇತ್ರವನ್ನು ಕರುಣಿಸಿ ತನ್ನ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಆ ವಿಶ್ವರೂಪದ ವರ್ಣನೆ ಇಲ್ಲಿದೆ. ಇಲ್ಲಿ ಸರ್ವವ್ಯಾಪ್ತ, ಸರ್ವಾಂತರ್ಯಾಮಿ, ಸರ್ವಸಮರ್ಥ ಭಗವಂತನ ಚಿಂತನೆ ಹೇಗೆ ಮಾಡಬೇಕು ಎನ್ನುವ ಮಾರ್ಗದರ್ಶನವಿದೆ. ಭಗವಂತನ ರೂಪವನ್ನು ಯಾವುದೋ ಒಂದು ಲೌಕಿಕ ಅನುಭವದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಅದು ಲೋಕಾತೀತ ಅನುಭವ. ಆ ಅದ್ಭುತ ಅನುಭವದ ಚಿತ್ರಣ ಈ ಅಧ್ಯಾಯ.
ಭಗವಂತನ ಸರ್ವಗತವಾದ ವಿಶ್ವರೂಪವನ್ನು ಎಲ್ಲರೂ ಧ್ಯಾನ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲ ಕಡೆ ತುಂಬಿರುವ ಭಗವಂತನ ಕಿಂಚಿತ್ ದರ್ಶನ ಪ್ರತಿಯೊಬ್ಬರೂ ಧ್ಯಾನ ಯೋಗದಲ್ಲಿ ಪಡೆಯಲು ಸಾಧ್ಯವಿದೆ. ಹೇಗೆ ಅರ್ಜುನನಿಗೆ ಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿದನೋ ಹಾಗೆ ನಮಗೆ ಧ್ಯಾನದಲ್ಲಿ ಕೂಡ ತನ್ನ ರೂಪವನ್ನು ಆತನೇ ತೋರಿಸಬೇಕು. ಇದು ಹೊರಪ್ರಪಂಚದಲ್ಲಿ ಕಾಣುವ ರೂಪವಲ್ಲ. ನಾವು ನಮ್ಮ ಒಳಗಣ್ಣನ್ನು ತೆರೆದು ಕುಳಿತು ಧ್ಯಾನ ಮಾಡಬೇಕು, ಭಗವಂತನಲ್ಲಿ ಶರಣಾಗಬೇಕು. ಕಾತರತೆಯಿಂದ ಕರೆದಾಗ ಒಳಗಿನಿಂದ ಏನು ಅನುಭೂತಿ ಬರುತ್ತದೆ ಅದು ಲೌಕಿಕ ಅನುಭೂತಿಯನ್ನು ಮೀರಿದ ವಿಚಾರ.
ಈ ಅಧ್ಯಾಯದಲ್ಲಿ ಭಗವಂತನ ಮಾತು ಕಡಿಮೆ. ಇಲ್ಲಿ ಕೃಷ್ಣನ ವಿಶ್ವರೂಪವನ್ನು ಕಂಡವರ ಮಾತಿದೆ. ಅವರು ಕಂಡ ರೀತಿಯನ್ನು ಕೇಳಿ ನಾವು ಭಗವಂತನನ್ನು ಕಾಣಲು ಪ್ರಯತ್ನ ಮಾಡಬೇಕು. ಇದು ನಮ್ಮ ಅಂತರಂಗದ ಅಧ್ಯಾತ್ಮದ ಸಾಕ್ಷಾತ್ಕಾರಕ್ಕೆ ಪೂರಕವಾದ, ಧ್ಯಾನದ ದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುವ ಬಹಳ ಮಹತ್ವದ ಅಧ್ಯಾಯ. ಬನ್ನಿ, ವ್ಯಾಸರು ದಾಖಲಿಸಿದ ಭಗವಂತನ ಅಪೂರ್ವ ವಿಶ್ವರೂಪ ವರ್ಣನೆಯನ್ನು ಕೇಳಿ ಧನ್ಯರಾಗೋಣ.
ಅಧ್ಯಾಯಕ್ಕೆ ಪ್ರವೇಶಿಸುವ ಮುನ್ನ ನಾವು  ಒಂದು  ವಿಚಾರವನ್ನು ತಿಳಿದುಕೊಳ್ಳಬೇಕು. ನಮ್ಮಲ್ಲಿ ಕೆಲವರಿಗೆ ಒಂದು ತಪ್ಪು ತಿಳುವಳಿಕೆ ಇದೆ. ಅರ್ಜುನನಿಗೆ  ಭಗವಂತನ ಸಂದೇಶವನ್ನು ಮನವರಿಕೆ ಮಾಡಿಸಲು ಕೃಷ್ಣ ತನ್ನ  ವಿಶ್ವರೂಪ ದರ್ಶನ ಮಾಡಿಸಬೇಕಾಯಿತುಎಂದು. ಸ್ವತಃ ಶ್ರೀಕೃಷ್ಣನಿಂದಲೇ ಉಪದೇಶ ಪಡೆದರೂ ಸಹ ಅರ್ಜುನನಿಗೆ ಮನವರಿಕೆ ಆಗಲಿಲ್ಲ, ಇನ್ನು ನಮ್ಮ ಪಾಡೇನು? ನಮಗೆ ಯಾರು ವಿಶ್ವರೂಪ ದರ್ಶನ ಮಾಡಿಸುತ್ತಾರೆ”-ಎಂದು ಯೋಚಿಸುವವರಿದ್ದಾರೆ. ಆದರೆ ಇದು ನಮ್ಮ ತಪ್ಪು ತಿಳುವಳಿಕೆ. ಅರ್ಜುನನಿಗೆ ಭಗವಂತನ ಸಂದೇಶ ಪೂರ್ಣ ಮನವರಿಕೆ ಆಗಿತ್ತು. ಈ ವಿಚಾರ ಈ ಅಧ್ಯಾಯದ ಮೊದಲ ಶ್ಲೋಕದಲ್ಲೇ ತಿಳಿಯುತ್ತದೆ. ಅರ್ಜುನ ಹೇಳುತ್ತಾನೆ ಮೋಹೋಯಂ ವಿಗತೋ ಮಮ”- ‘ನಿನ್ನ ಮಹಿಮೆ ತಿಳಿದು ನನ್ನ ಎಲ್ಲ ಸಂಶಯವೂ ಕಳೆಯಿತುಎಂದು. ಇದರಿಂದ ತಿಳಿಯುವುದೇನೆದರೆ ಅರ್ಜುನ ಭಗವಂತನ ವಿಶ್ವರೂಪ ದರ್ಶನ ಬಯಸಿದ್ದು ಕೇವಲ ನೋಡಿ ಧನ್ಯನಾಗುವುದಕ್ಕೋಸ್ಕರ ಹೊರತು, ಪುರಾವೆಗಾಗಿ ಅಲ್ಲ. ಸಾಮಾನ್ಯವಾಗಿ ಮನುಷ್ಯ ಸ್ವಭಾವವೇನೆಂದರೆ ಒಂದು ವಿಷಯವನ್ನು ಕೇಳಿದ ಮೇಲೆ ಅದನ್ನೊಮ್ಮೆ ನೋಡಬೇಕು ಎನ್ನುವ ಸಹಜ ಅಭಿಲಾಷೆ. ಅರ್ಜುನ ಕೃಷ್ಣನ ಮುಂದಿಟ್ಟಿರುವುದು ಕೂಡಾ ಇಂಥಹದ್ದೇ ಬಯಕೆಯನ್ನು. ಮುಂದಿನ ನಾಲ್ಕು ಶ್ಲೋಕಗಳಲ್ಲಿ ಈ ವಿಚಾರ ಸ್ಪಷ್ಟವಾಗಿ ತಿಳಿಯುತ್ತದೆ.

ಅರ್ಜುನ ಉವಾಚ ।
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್      ।
ಯತ್ ತ್ವಯೋಕ್ತಂ ವಚಸ್ತೇನ ಮೋಹೋSಯಂ ವಿಗತೋ ಮಮ ॥೧॥

ಅರ್ಜುನಃ ಉವಾಚ- ಅರ್ಜುನ ಹೇಳಿದನು:
ಮತ್ ಅನುಗ್ರಹಾಯ ಪರಮಮ್  ಗುಹ್ಯಮ್ ಅಧ್ಯಾತ್ಮಸಂಜ್ಞಿತಮ್    ।
ಯತ್ ತ್ವಯಾ ಉಕ್ತಮ್  ವಚಃ ತೇನ ಮೋಹಃ ಅಯಮ್  ವಿಗತಃ ಮಮ –-ನನ್ನ ಮೇಲೆ ದಯೆದೋರಲೆಂದು, ಅಧ್ಯಾತ್ಮವೆಂಬ ಹಿರಿಯ ಗುಟ್ಟನ್ನು ನೀನು ನುಡಿದೆ. ಆ ನುಡಿಯಿಂದ ನನ್ನೀ ಮಂಕು ಕಳೆಯಿತು.

ಅರ್ಜುನ ಹೇಳುತ್ತಾನೆ: “ನನ್ನ ಮೇಲಿನ ಅನುಗ್ರಹದಿಂದ ಅಧ್ಯಾತ್ಮದ ಪರಮ ಗುಹ್ಯವಾದ ವಿಚಾರವನ್ನು ನನಗೆ ಹೇಳಿದಿ” ಎಂದು. ಇಲ್ಲಿ ‘ಅನುಗ್ರಹ’ ಎಂದರೆ-ತಮ್ಮಿಂದ ಚಿಕ್ಕವರನ್ನು ಸರಿದಾರಿಯಲ್ಲಿ ತಂದು, ಎತ್ತರಕ್ಕೇರಿಸಿ ಉದ್ಧಾರ ಮಾಡಬೇಕು ಎಂಬ ಹಿರಿಯರ ಇಚ್ಛೆ. “ದಾರಿ ತಪ್ಪಿ ನಡೆಯಲಿದ್ದ ನನ್ನನ್ನು ಸರಿದಾರಿಗೆ ತಂದು ಉದ್ಧಾರ ಮಾಡಿದಿ” ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ್ದಾನೆ. ಇಲ್ಲಿ ‘ಮತ್’ ಎನ್ನುವ ಪದ ಬಳಕೆಯಾಗಿದೆ. ‘ಮತ್’ ಎಂದರೆ ಕೇವಲ ‘ನನ್ನ ಅಥವಾ ನನಗೆ’ ಅನ್ನುವ ಅರ್ಥವಷ್ಟೇ ಅಲ್ಲ. ‘ಮತ್’ ಎನ್ನುವುದು ಯತ್ ಇದ್ದಂತೆ. ‘ಮಾತೀತಿ ಮತ್’-ಅಂದರೆ ‘ಸಮಸ್ತ ಜ್ಞಾನಿಗಳು’ ಅನ್ನುವ ಅರ್ಥವನ್ನು ಕೊಡುತ್ತದೆ. ಆದ್ದರಿಂದ ಮದನುಗ್ರಹ ಅಂದರೆ ‘ಸಮಸ್ತ ಜ್ಞಾನಿಗಳ ಉದ್ಧಾರಕ್ಕೋಸ್ಕರ’ ಎಂದರ್ಥ. ಭಗವಂತ ಸಮಸ್ತ ಮನುಕುಲಕ್ಕೆ ಈ ಅಪೂರ್ವ ಸಂದೇಶವನ್ನು ತಲುಪಿಸಲು ಗೀತೆಯನ್ನು ಅರ್ಜುನನಿಗೆ ಉಪದೇಶ ಮಾಡಿ, ಅದನ್ನು ತಾನೇ ವ್ಯಾಸರೂಪನಾಗಿ ದಾಖಲಿಸಿ ನಮಗೆ ಕೊಟ್ಟನೆ ಹೊರತು, ಕೇವಲ ಅರ್ಜುನನಿಗೋಸ್ಕರ ಹೇಳಿದ್ದಲ್ಲ.
ಈ ಪ್ರಪಂಚದಲ್ಲಿ ಅತ್ಯಂತ ಗೋಪ್ಯವಾಗಿರಬೇಕಾದ ವಿದ್ಯೆ-ಅಧ್ಯಾತ್ಮ ವಿದ್ಯೆ. ಯಾವಾಗಲೂ ಅಪೂರ್ವ ವಿಷಯವನ್ನು ಗೋಪ್ಯವಾಗಿಡುತ್ತಾರೆ. ಏಕೆಂದರೆ ಅದು ದುರುಪಯೋಗವಾಗಬಾರದು ಮತ್ತು ಅದರ ಮಹತ್ವ ತಿಳಿಯದವರಿಗೆ ತಲುಪಬಾರದೆಂದು. ಅಧ್ಯಾತ್ಮ-ಮನೋವಿಜ್ಞಾನ, ಜೀವವಿಜ್ಞಾನ ಮತ್ತು ಪರಮಾತ್ಮವಿಜ್ಞಾನ. ಇಂತಹ ಅಪೂರ್ವ ವಿದ್ಯೆಯನ್ನು ಕೃಷ್ಣ ಅರ್ಜುನನ ಮುಂದೆ ತೆರೆದಿಟ್ಟಿರುವುದಕ್ಕೆ ಅರ್ಜುನ ಭಗವಂತನನ್ನು ಕೊಂಡಾಡುತ್ತಾನೆ ಮತ್ತು ಹೇಳುತ್ತಾನೆ “ಇದರಿಂದ ನನ್ನೆಲ್ಲ ಮಾನಸಿಕ ಗೊಂದಲ ಹೊರಟು ಹೋಗಿ ಮೋಹ ಕಳೆಯಿತು” ಎಂದು.

ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ ।
ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ ॥೨॥

ಭವ ಅಪ್ಯಯೌ ಹಿ ಭೂತಾನಾಮ್  ಶ್ರುತೌ ವಿಸ್ತರಶಃ  ಮಯಾ ।
ತ್ವತ್ತಃ ಕಮಲಪತ್ರ ಅಕ್ಷ ಮಾಹಾತ್ಮ್ಯಮ್  ಅಪಿ ಚ ಅವ್ಯಯಮ್ –- ಜೀವಿಗಳ ಹುಟ್ಟು ಸಾವುಗಳ ಬಿತ್ತರವನ್ನು ನಾನು ನಿನ್ನಿಂದ ಕೇಳಿದೆ; ಓ ತಾವರೆ ಎಸಳಂಥ ಕಣ್ಗಳವನೆ, ನಿನ್ನ ಅಳಿವಿರದ ಮಹಿಮೆಯನ್ನು ಕೂಡ.

“ಜೀವಿಗಳ ಭವ ಮತ್ತು ಅಪ್ಯಯಗಳ ಬಿತ್ತರವನ್ನು ನಾನು ನಿನ್ನಿಂದ ಕೇಳಿದೆ” ಎನ್ನುತ್ತಾನೆ ಅರ್ಜುನ. ಇಲ್ಲಿ ಭವ ಮತ್ತು ಅಪ್ಯಯ ಎನ್ನುವುದಕ್ಕೆ ಹುಟ್ಟು-ಸಾವು, ಸೃಷ್ಟಿ-ಸಂಹಾರ ಎನ್ನುವ ಅರ್ಥವಲ್ಲದೆ ಇನ್ನೊಂದು ಬಹಳ ರೋಚಕವಾದ ಅರ್ಥವಿದೆ. ವೇದಕಾಲದ ಋಷಿಗಳು ಇದನ್ನು ಒಂದು ಹೊಸ ಅರ್ಥದಲ್ಲಿ ಬಳಸುತ್ತಿದ್ದರು. “ಪ್ರಭವಾಪ್ಯಯೌ ಭೂತಾನಾಂ” ಎಂದು ಉಪನಿಷತ್ತಿನಲ್ಲಿ ಬರುತ್ತದೆ. ಸುಖಪ್ರಾಪ್ತಿ-ಭವ  ಮತ್ತು ದುಃಖನಿವೃತ್ತಿ-ಅಪ್ಯಯ. ಇದು ಪ್ರಾಚೀನ ಋಷಿಗಳ ಅರ್ಥ. “ಯಾವ ರೀತಿಯ ನಡೆಯಿಂದ ಸುಖ ಪಡೆಯಬಹುದು, ಯಾವ ರೀತಿಯ ನಡೆಯಿಂದ ನಮ್ಮ ಬದುಕಿನ ದುಃಖದಿಂದ ಪಾರಾಗಬಹುದು ಅನ್ನುವ ಮೂಲ ಮಂತ್ರವನ್ನು ನಿನ್ನ ಬಾಯಿಯಿಂದಲೇ ಹೇಳಿದಿ-ಅದನ್ನು ನಾನು ಕಿವಿಯಾರೆ ಕೇಳಿದೆ” ಎನ್ನುತ್ತಾನೆ ಅರ್ಜುನ.
ಇಲ್ಲಿ ‘ಕಮಲಪತ್ರಾಕ್ಷ’ ಎನ್ನುವ ಒಂದು ವಿಶೇಷಣ ಬಳಸಿದ್ದಾರೆ. ಇದನ್ನು ಅರ್ಜುನ ಪ್ರಯೋಗ ಮಾಡುವುದರಲ್ಲಿ ಒಂದು ವಿಶೇಷವಿದೆ. “ನೀನು ನನ್ನ ಮೇಲೆ ಕಾರುಣ್ಯದ ರಸಧಾರೆಯನ್ನು ಹರಿಸಿದೆಯಲ್ಲ ಕೃಷ್ಣ” ಎನ್ನುವ ಭಾವ ಈ ವಿಶೇಷಣದ ಹಿಂದಿದೆ. “ನಿನ್ನ ಮಹಿಮೆ ಅವ್ಯಯ ಅನಂತವಾಗುಳಿಯುವ ಸಂಪತ್ತು. ಆ ಮಹತ್ತಾದ ಜ್ಞಾನವನ್ನು ನನಗೆ ಕೊಟ್ಟೆ. ಅತಿ ದುರ್ಲಭವಾದ ನಿನ್ನ ಮಹಿಮೆಯನ್ನು ನನಗೆ ಹೇಳಿದೆ” ಎನ್ನುತ್ತಾನೆ ಅರ್ಜುನ.

ಏವಮೇತದ್ ಯಥಾSSತ್ಥ ತ್ವಮಾತ್ಮಾನಂ ಪರಮೇಶ್ವರ ।
ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ ॥೩॥

ಏವಮ್ ಏತತ್  ಯಥಾ ಆತ್ಥ ತ್ವಮ್ ಆತ್ಮಾನಮ್  ಪರಮೇಶ್ವರ ।
ದ್ರಷ್ಟುಮ್ ಇಚ್ಛಾಮಿ ತೇ ರೂಪಮ್ ಐಶ್ವರಮ್  ಪುರುಷೋತ್ತಮ –ಪರಮೇಶ್ವರ, ನೀನು ನಿನ್ನ ಬಗೆಗೆ ಏನಂದೆಯೋ ಅದೆಲ್ಲ ನಿಜ. ಓ ಪುರುಷೋತ್ತಮ, ಜಗವನಾಳುವ ನಿನ್ನ ರೂಪವನ್ನು ಕಾಣುವ ತವಕ ನನಗೆ.

“ನೀನು ಹೇಳಿದ್ದರಲ್ಲಿ ನನಗೆ ಯಾವ ಸಂಶಯವೂ ಇಲ್ಲ” ಎನ್ನುತ್ತಾನೆ ಅರ್ಜುನ. ಇಲ್ಲಿ ಅರ್ಜುನ ಕೃಷ್ಣನನ್ನು ‘ಪರಮೇಶ್ವರಃ’ ಎಂದು ಸಂಬೋಧಿಸಿದ್ದಾನೆ. ಈಶ ಎಂದರೆ ಸಮರ್ಥ. ನಮ್ಮನ್ನು ನಿಯಂತ್ರಿಸುವ ದೇವತೆಗಳು ಈಶರು. ಅವರನ್ನು ನಿಯಂತ್ರಿಸುವ ಅಂತಃಕರಣ ಹಾಗು ಜೀವಕಲಾಭಿಮಾನಿ ದೇವತೆಗಳಾದ ಗರುಡ, ಶೇಷ ರುದ್ರ ಹಾಗು ಬ್ರಹ್ಮ ವಾಯು-ಈಶ್ವರರು. ಈ ತತ್ವಾಭಿಮಾನಿ ದೇವತೆಗಳ ನಿಯಮಕನಾದ, ಎಲ್ಲಕ್ಕಿಂತ ಎತ್ತರದಲ್ಲಿರುವ, ಎಲ್ಲರ ಒಡೆಯ ಭಗವಂತ ಪರಮೇಶ್ವರಃ.  “ನೀನು ಹೇಳಿದ ವಿಚಾರದಲ್ಲಿ ನನಗೆ ಗೊಂದಲವಿಲ್ಲ. ಏಕೆಂದರೆ ನೀನು ಪರಮೇಶ್ವರಃ. ಆದರೆ ನನಗೆ ಆ ನಿನ್ನ ಸರ್ವಸಾಮರ್ಥ್ಯದಿಂದ ತುಂಬಿದ ರೂಪವನ್ನು ಕಾಣುವ ತವಕವಾಗುತ್ತಿದೆ” ಎಂದು ‘ಭಗವಂತನ ಅದ್ಭುತ ರೂಪವನ್ನು ಕಾಣಬೇಕು’ ಎನ್ನುವ ತನ್ನ ಬಯಕೆಯನ್ನು ಅರ್ಜುನ ಕೃಷ್ಣನ ಮುಂದಿಡುತ್ತಾನೆ.
ಇಲ್ಲಿ ಅರ್ಜುನ ಭಗವಂತನನ್ನು ‘ಪುರುಷೋತ್ತಮಃ’ ಎಂದು ಸಂಬೋಧಿಸಿದ್ದಾನೆ. ಈ ಪದಕ್ಕಿರುವ ವಿಶಿಷ್ಠ ಅರ್ಥವನ್ನು ಕೃಷ್ಣ ಅಧ್ಯಾಯ ಹದಿನೈದರಲ್ಲಿ(ಅ-೧೫, ಶ್ಲೋ-೧೬-೧೮) ವಿವರವಾಗಿ ವಿವರಿಸಿದ್ದಾನೆ.  ಲೋಕದಲ್ಲಿ ಎರಡು ಬಗೆಯ ಪುರುಷರಿದ್ದಾರೆ. ಕ್ಷರಪುರುಷ ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ  ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೇ ಅಕ್ಷರ ಪುರುಷಳೆನಿಸಿದ್ದಾಳೆ-(ಅ-೧೫, ಶ್ಲೋ-೧೭); ಈ ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೇ  ಮೂರು ಲೋಕದೊಳಗಿದ್ದು ಸಲಹುತ್ತಾನೆ (ಅ-೧೫, ಶ್ಲೋ-೧೭). ಕ್ಷರವನ್ನು ಮೀರಿ ನಿಂತವನು, ಅಕ್ಷರಕ್ಕಿಂತಲೂ ಹಿರಿಯನು ಆದ ಆ ನಾರಾಯಣ  'ಪುರುಷೋತ್ತಮ'.(ಅ-೧೫, ಶ್ಲೋ-೧೮). “ನಿನ್ನ ಪುರುಷೋತ್ತಮತ್ವದ ರೂಪವನ್ನು ನಾನು ಕಾಣಬೇಕು” ಎನ್ನುವ ಅಭಿಲಾಷೆಯನ್ನು ಅರ್ಜುನ ಕೃಷ್ಣನ ಮುಂದಿಟ್ಟ.

ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ ।
ಯೋಗೇಶ್ವರ ತತೋ ಮೇ ತ್ವಂ ದರ್ಶಯಾSತ್ಮಾನಮವ್ಯಯಮ್ ॥೪॥

ಮನ್ಯಸೇ ಯದಿ ತತ್ ಶಕ್ಯಮ್  ಮಯಾ ದ್ರಷ್ಟುಮ್ ಇತಿ ಪ್ರಭೋ ।
ಯೋಗೇಶ್ವರ ತತಃ  ಮೇ ತ್ವಮ್  ದರ್ಶಯ ಆತ್ಮಾನಮ್ ಅವ್ಯಯಮ್ –ಜಗದೊಡೆಯನೆ, ಯೋಗಿಗಳೊಡೆಯನೆ, ಅದು ನನ್ನಿಂದ ಕಾಣಲು ಸಾಧ್ಯವೆಂದು ನೀನು ಭಾವಿಸುವುದಾದರೆ, ನಿನ್ನ ಅಳಿವಿರದ ರೂಪವನ್ನು ನನಗೆ ತೋರಿಸು.

ಅರ್ಜುನ ಮುಂದುವರಿದು ಹೇಳುತ್ತಾನೆ” “ನಾನು ಆ ನಿನ್ನ ರೂಪವನ್ನು ನೋಡಲು ಸಾಧ್ಯ ಎಂದು ನೀನು ಭಾವಿಸುವುದಾದರೆ, ನಿನ್ನ ರೂಪವನ್ನು ನನಗೆ ತೋರಿಸು” ಎಂದು. ಇಲ್ಲಿ ಅರ್ಜುನ ಕೃಷ್ಣನನ್ನು ‘ಪ್ರಭೋ’ ಎಂದು ಸಂಬೋಧಿಸಿದ್ದಾನೆ.  “ಪ್ರಭು’ ಅಂದರೆ ಸಾಮರ್ಥ್ಯ. “ನೋಡುವ ಸಾಮರ್ಥ್ಯ ನನಗಿಲ್ಲದಿದ್ದರೂ, ಆ ಸಾಮರ್ಥ್ಯವನ್ನು ಕರುಣಿಸಿ ತೋರಿಸುವ ಸಾಮರ್ಥ್ಯ ನಿನಗಿದೆ” ಎನ್ನುವುದು ಈ ಸಂಬೋಧನೆಯ ಹಿಂದಿರುವ ಭಾವ. “ಏಕೆಂದರೆ ನೀನು ಯೋಗೇಶ್ವರಃ” ಎನ್ನುತ್ತಾನೆ ಅರ್ಜುನ. ಯೋಗ ಅಂದರೆ ಉಪಾಯ. “ನನಗೆ ಹೇಗೆ ನಿನ್ನ ರೂಪವನ್ನು ತೋರಿಸಬೇಕು ಎನ್ನುವ ಉಪಾಯ ಕೂಡ ನಿನಗೆ ತಿಳಿದಿದೆ. ನೀನು ಎಲ್ಲ ಉಪಾಯ(ಯೋಗ)ಗಳ ಸ್ವಾಮಿ.  ಆದ್ದರಿಂದ ಅಳಿವಿರದ, ನಿತ್ಯವಾಗಿರುವ ಆ ನಿನ್ನ ರೂಪವನ್ನು ನನಗೆ ತೋರಿಸು” ಎಂದು ಅರ್ಜುನ ಕೃಷ್ಣನನ್ನು ಕೇಳಿಕೊಳ್ಳುತ್ತಾನೆ.        

No comments:

Post a Comment