Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, November 6, 2011

Bhagavad Gita Kannada Chapter-13 Shloka 24-28


ಕೃಷ್ಣ ಪ್ರಕೃತಿ ಮತ್ತು ಪುರುಷನನ್ನು ಗುಣ ಸಹಿತ ತಿಳಿಯುವುದು ಮೋಕ್ಷಮಾರ್ಗ ಎಂದು ಹೇಳಿದ. ಹಾಗಿದ್ದರೆ ಇದನ್ನು ತಿಳಿಯುವ ಬಗೆ ಯಾವುದು? ಇದನ್ನು ಕೃಷ್ಣ ಮುಂದಿನ ಎರಡು ಶ್ಲೋಕಗಳಲ್ಲಿ ವಿವರಿಸುತ್ತಾನೆ. ಭಗವಂತನನ್ನು ಸೇರಲು ಅನೇಕ ವಿಧಾನಗಳಿವೆ. ಎಲ್ಲರಿಗೂ ಎಲ್ಲವೂ ಅಲ್ಲ. ಏಕೆಂದರೆ ಒಬ್ಬರು ತಿಳಿದಂತೆ ಇನ್ನೊಬ್ಬರು ತಿಳಿದುಕೊಳ್ಳಲು ಆಗುವುದಿಲ್ಲ. ಬನ್ನಿ ಈ ಕುರಿತು ಕೃಷ್ಣನ ವಿವರಣೆಯನ್ನು ಆಲಿಸೋಣ.

ಧ್ಯಾನೇನಾSತ್ಮನಿ ಪಶ್ಯಂತಿ ಕೇಚಿದಾತ್ಮಾನಮಾತ್ಮನಾ
ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ                 ೨೪

ಧ್ಯಾನೇನ ಆತ್ಮನಿ ಪಶ್ಯಂತಿ ಕೇಚಿತ್ ಆತ್ಮಾನಮ್ ಆತ್ಮನಾ
ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಪರೇ –ಕೆಲವರು ಧ್ಯಾನದ ಮೂಲಕ ಪರಮಾತ್ಮನನ್ನು ತನ್ನಲ್ಲಿ ಬಗೆಗಣ್ಣಿನಿಂದ  ಕಾಣುತ್ತಾರೆ. ಕೆಲವರು ಶಾಸ್ತ್ರದ ಅರಿವಿನ ಮೂಲಕ. ಕೆಲವರು ಕರ್ಮಯೋಗದ ಮೂಲಕ.

ಸಾಧನೆ ಮಾಡಲು ಮೊದಲು ನಮಗೆ ಸಾಧನಾ ಶರೀರ ಬೇಕು. ಹೀನಯೋನಿಯಲ್ಲಿ ಪೂರ್ಣತೆ ಪಡೆಯದ ಶರೀರದಲ್ಲಿ ಹುಟ್ಟಿ ಬಂದರೆ ಸಾಧನೆ ಸಾಧ್ಯವಿಲ್ಲ. ಮೊದಲು ನಾವು ಮಾನವರಾಗಬೇಕು(ಪೂರ್ಣತೆಯನ್ನು ಪಡೆದ ಶರೀರದಲ್ಲಿ ನೆಲೆಸುವ ಪುರುಷರಾಗಬೇಕು). ಇದಕ್ಕಾಗಿ "ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಬೇಡಿರಿ ಹುಚ್ಚಪ್ಪಗಳಿರಾ" ಎಂದು ದಾಸರು ಹಾಡಿರುವುದು. ಸಾಧನೆಗೆ ಬೇಕಾದ ಸಾಧನಾ ಶರೀರ ಇಲ್ಲದಿದ್ದರೆ ಯಾವಸಾಧನೆಯೂ ಸಾಧ್ಯವಿಲ್ಲ.
ಕೆಲವರು ತಮ್ಮ ಸ್ವರೂಪ ಯೋಗ್ಯತೆಯಿಂದ ಮತ್ತು ಭಗವದನುಗ್ರಹದಿಂದ ಜನ್ಮತಃ ಜ್ಞಾನ ಪಡೆದು ಹುಟ್ಟುತ್ತಾರೆ. ಇವರಿಗೆ ಜ್ಞಾನ ನಿಚ್ಛಳ. ಇಂಥವರು ತಮ್ಮ ಜೀವ ಯೋಗ್ಯತೆಯಿಂದ ತಮ್ಮ ಜೀವ ಸ್ವರೂಪದೊಳಗೆ- ಬಿಂಬರೂಪಿ ಭಗವಂತನನ್ನು ಕಾಣಬಲ್ಲರು. ಇಂಥವರು ಯಾವುದೇ ಅಧ್ಯಯನ ಮಾಡದೆ ಸದಾ ಭಗವಂತನನ್ನು ಅಂತರಂಗದಲ್ಲಿ ಕಾಣುತ್ತಾ-ಭಗವಂತನನ್ನು ಸೇರುತ್ತಾರೆ. ಬ್ರಹ್ಮಾದಿ ಸಕಲ ದೇವತೆಗಳು, ದೇವಾಂಶ ಸಂಭೂತರು ಈ ರೀತಿ ಕಣ್ಮುಚ್ಚಿ ಭಗವಂತನನ್ನು ಕಾಣಬಲ್ಲರು, ಕಂಡು ಆತನನ್ನು ಸೇರಬಲ್ಲರು.
ಕೆಲವರು ಶುದ್ಧ ಆತ್ಮತತ್ವ ವಿಜ್ಞಾನದಿಂದ ಮೊದಲು ಭಗವಂತನನ್ನು ತಿಳಿಯುತ್ತಾರೆ. ಜೀವನನ್ನು ಪರಮಾತ್ಮನನ್ನು ತಿಳಿಯುವುದೇ ಸಾಂಖ್ಯಯೋಗ. ಈ ರೀತಿ ಜ್ಞಾನಗಳಿಸಿ, ಜ್ಞಾನಸ್ಪುರಣವನ್ನು ಗಳಿಸಿ, ಧ್ಯಾನದ ಮೂಲಕ ಇವರು ಭಗವಂತನನ್ನು ಕಂಡು ಭಗವಂತನನ್ನು ಸೇರುತ್ತಾರೆ.
ಇನ್ನು ಕೆಲವರು ತಮ್ಮ ನಿರಂತರ ಕರ್ಮಾನುಷ್ಠಾನದಿಂದ ದೇಹ ಶುದ್ಧಿ ಸಾಧಿಸಿ, ಅದರಿಂದ ಭಗವಂತನ ಒಲುಮೆಗೆ ಪಾತ್ರರಾಗಿ, ಜ್ಞಾನಗಳಿಸಿ, ಧ್ಯಾನದಲ್ಲಿ ಭಗವಂತನನ್ನು ಕಂಡು ಭಗವಂತನನ್ನು ಸೇರುತ್ತಾರೆ.           

ಅನ್ಯೇ ತ್ವೇವಮಜಾನಂತಃ ಶ್ರುತ್ವಾSನ್ಯೇಭ್ಯ ಉಪಾಸತೇ
ತೇSಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿಪರಾಯಣಾಃ                    ೨೫

ಅನ್ಯೇ ತು ಏವಂ ಅಜಾನಂತಃ ಶ್ರುತ್ವಾನ್ಯೇಭ್ಯಃ ಉಪಾಸತೇ
ತೇಪಿ ಚತಿತರಂತಿ ಏವ ಮೃತ್ಯುಮ್  ಶ್ರುತಿಪರಾಯಣಾಃ –ಹೀಗೆ ಭಗವಂತನನ್ನರಿಯಲಾರದ ಇನ್ನು ಕೆಲವರು ಬಲ್ಲವರಿಂದ ಕೇಳಿ ಉಪಾಸನೆ ಮಾಡುತ್ತಾರೆ. ಶ್ರವಣವನ್ನೆ ನಂಬಿ ನಡೆವ ಅವರೂ ಸಾಧನೆಯಿಂದ ಬೆಳೆದು ಸಾವನ್ನು ಗೆಲ್ಲುತ್ತಾರೆ.

ಜನಸಾಮಾನ್ಯರು,  ಮೇಲಿನ ಯಾವ ವಿಧದಲ್ಲೂ ಸಾಧನೆ ಮಾಡಲಾರದವರು-ಇನ್ನೊಬ್ಬರಿಂದ ಕೇಳಿ ತಿಳಿದು ಸಾಧನೆಯ ಮೊದಲ ಮೆಟ್ಟಿಲನ್ನು ಹತ್ತಬಲ್ಲರು. ಇದು ಸಾಧನೆಯ ಮಾರ್ಗದಲ್ಲಿನ ಅತ್ಯಂತ ಕೆಳಗಿನ ಮೆಟ್ಟಿಲಾದರೂ ಸಹ, ಇವರು ನಿರಂತರ ಶ್ರವಣ, ಮನನ, ನಿಧಿಧ್ಯಾಸನದಿಂದ, ಅಹಂಕಾರವಿಲ್ಲದೆ, ಜ್ಞಾನ ಸಂಪಾದಿಸಿ, ಆ ಜ್ಞಾನದಿಂದ-ಧ್ಯಾನದಲ್ಲಿ ಭಗವಂತನನ್ನು ಕಾಣಬಲ್ಲರು. ಇದು ಸಾಮಾನ್ಯ ಮಾನವನಿಗೆ ಕೃಷ್ಣ ತೋರಿಸಿದ ಮೋಕ್ಷ ಮಾರ್ಗ.   ಹೀಗೆ ಇವರು ಶ್ರವಣ ಮತ್ತು ಉಪಾಸನೆಯಿಂದ ಮೃತ್ಯುವನ್ನು ಗೆದ್ದು ಭಗವಂತನನ್ನು ಸೇರಬಲ್ಲರು.

ಯಾವತ್ ಸಂಜಾಯತೇ ಕಿಂಚಿತ್ ಸತ್ವಂ ಸ್ಥಾವರಜಂಗಮಮ್         
ಕ್ಷೇತ್ರಕ್ಷೇತ್ರಜ್ಞಸಂಯೋಗಾತ್ ತದ್ ವಿದ್ಧಿ ಭರತರ್ಷಭ                                   ೨೬

ಯಾವತ್ ಸಂಜಾಯತೇ ಕಿಂಚಿತ್ ಸತ್ವಮ್ ಸ್ಥಾವರ ಜಂಗಮಮ್     
ಕ್ಷೇತ್ರ ಕ್ಷೇತ್ರಜ್ಞ ಸಂಯೋಗಾತ್ ತದ್ ವಿದ್ಧಿ ಭರತರ್ಷಭ -- ಭರತರ್ಷಭ, ಸ್ಥಿರ-ಚರ ಜೀವಿಯಲ್ಲಿ ಯಾವುದು ಹುಟ್ಟಿದರೂ ಅದು ಕ್ಷೇತ್ರ[ಶ್ರೀತತ್ವ] ಮತ್ತು ಕ್ಷೇತ್ರಜ್ಞನಾದ ಭಗವಂತನ ಸಹಯೋಗದಿಂದಲೆ ಎಂದು ತಿಳಿ.

ಈ ಪ್ರಪಂಚದಲ್ಲಿ ಏನೆಲ್ಲ ಹುಟ್ಟುತ್ತದೋ, ಚಲಿಸುವ-ಚಲಿಸದಿರುವ ಸಮಸ್ತ ಜೀವ ಜಡಾತ್ಮಕ ಪ್ರಪಂಚ ಮತ್ತು ಅದರ ಅಭಿಮಾನಿನಿಯಾದ  ಪ್ರಕೃತಿದೇವಿ-ಇಷ್ಟನ್ನು ಒಟ್ಟಿಗೆ ಕ್ಷೇತ್ರವೆನ್ನುತ್ತಾರೆ. ಇವೆಲ್ಲವನ್ನು ಬಲ್ಲವ  ಕ್ಷೇತ್ರಜ್ಞನಾದ ಭಗವಂತ. ಆದ್ದರಿಂದ ಕ್ಷೇತ್ರವೆಂದರೆ ಭಗವಂತನಿಂದ ನಿರ್ಮಾಣವಾದ ಸಮಸ್ತ ಜೀವ ಜಡಾತ್ಮಕ ಪ್ರಪಂಚ. ಸಮಸ್ತ ಸೃಷ್ಟಿ ಲಕ್ಷ್ಮೀ ನಾರಾಯಣರ ಸಮಾಗಮದಿಂದ ನಿರ್ಮಾಣವಾಯಿತು. ಅವರು ಈ ಪ್ರಪಂಚದ ಮೊದಲ ದಂಪತಿಗಳು. ಆದ್ದರಿಂದ ಎಲ್ಲರ ತಂದೆ ತಾಯಿ ನಾರಾಯಣ ಮತ್ತು ಶ್ರೀಲಕ್ಷ್ಮಿ. “ಇದನ್ನು ತಿಳಿದಾಗ ನೀನು ನಿಜವಾದ ಭರತರ್ಷಭನಾಗುತ್ತೀಯ” ಎನ್ನುತ್ತಾನೆ ಕೃಷ್ಣ. ಭಗವಂತನಲ್ಲಿ ರಥನಾದವನು, ಭಗವಂತನಲ್ಲಿ ಪೂರ್ಣಭಕ್ತಿ ಉಳ್ಳವನು ಭರತರ್ಷಭ.

 ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್     
ವಿನಶ್ಯತ್ಸ್ವವಿನಶ್ಯಂತಂ  ಯಃ ಪಶ್ಯತಿ ಸ ಪಶ್ಯತಿ                               ೨೭

ಸಮಮ್ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್  
ವಿನಶ್ಯತ್ಸು ಅವಿನಶ್ಯಂತಂ  ಯಃ ಪಶ್ಯತಿ ಸಃ  ಪಶ್ಯತಿ – ಎಲ್ಲ ಜೀವಿಗಳಲ್ಲು ಏಕರೂಪದಿಂದಿರುವವನು ಸರ್ವಶಕ್ತನಾದ ಭಗವಂತ-ಅವು ಅಳಿದಾಗಳೂ ಅಳಿಯದೆ ಉಳಿದವನು. ಅವನನ್ನು ತಿಳಿದವನೆ ‘ನಿಜವಾಗಿ ತಿಳಿದವನು’.

ಎಲ್ಲ ಜೀವರೊಳಗೂ ಏಕರೂಪದಿಂದಿರುವ ಸರ್ವಶಕ್ತ ಭಗವಂತ ಪರಮ-ಈಶ-ವರ. ಯಾರ ಆಜ್ಞೆಯನ್ನು ನಾವು ಪಾಲಿಸದೇ ಇರಲಾರೆವೋ; ಪಾಲಿಸುವುದು ನಮ್ಮ ಕರ್ತವ್ಯವೋ; ನಮಗರಿವಿಲ್ಲದೆ ನಮ್ಮೊಳಗಿದ್ದು ಪಾಲಿಸುವ ಅಜ್ಞಾತಶಕ್ತಿ- ‘ಈಶ-ವರ’. ಅಂದರೆ ತತ್ವಾಭಿಮಾನಿ ದೇವತೆಗಳು. ಇಂತಹ ತತ್ವಾಭಿಮಾನಿ ದೇವತೆಗಳನ್ನೂ ನಿಯಂತ್ರಿಸುವ ಭಗವಂತ ಪರಮೇಶ್ವರ. ಇಂಥ ಭಗವಂತ ಎಲ್ಲೋ ಕೂತು ನಮ್ಮನ್ನು ನಿಯಮಿಸುತ್ತಿಲ್ಲ. ಆತ ನಮ್ಮೊಳಗಿದ್ದು ನಮ್ಮನ್ನು ನಿಯಂತ್ರಿಸುತ್ತಿದ್ದಾನೆ. ಆತ ನಮ್ಮೊಳಗೆ ಸ್ವತಂತ್ರವಾಗಿದ್ದು ನಮ್ಮನ್ನು ಹೊತ್ತು  ನಡೆಸುತ್ತಿದ್ದಾನೆ [ಹಿಂದಿನ ಕಾಲದವರು ಜನರಿಗೆ ಈ ಸಂದೇಶವನ್ನು ದೇವಸ್ಥಾನದಲ್ಲಿ ತಟ್ಟಿರಾಯನ ಮೂಲಕ ಕೊಟ್ಟರು].  ಭಗವಂತ ಮುಕ್ತಾSSಮುಕ್ತ  ನಿಯಾಮಕ. ಎಲ್ಲರನ್ನು ಎಲ್ಲ ಕಾಲದಲ್ಲಿ ಅವರವರ ಯೋಗ್ಯತೆಗನುಗುಣವಾಗಿ, ಆಯಾ ವಸ್ತುವಿನ ಸ್ವಭಾವಕ್ಕನುಗುಣವಾಗಿ ಒಳಗಿದ್ದು ಪ್ರೇರಣೆ ಮಾಡುವವ ಭಗವಂತ. ಭಗವಂತನ ಶಕ್ತಿಯಲ್ಲಿ ಮೇಲು ಕೀಳು ಇಲ್ಲ. ಆನೆಯಲ್ಲಿರುವ ಭಗವಂತ ಇರುವೆಯಲ್ಲಿರುವ ಭಗವಂತ ಬೇರೆಬೇರೆ ಅಲ್ಲ.  ಆದರೆ ಆತನ ಸನ್ನಿಧಾನದಲ್ಲಿ ವೆತ್ಯಾಸವಿರುವುದರಿಂದ ಆ ಸನ್ನಿಧಾನದ ಅಧಿಷ್ಠಾನದಲ್ಲಿ ವೆತ್ಯಾಸ ಬರುತ್ತದೆ. ನಮ್ಮ ದೇಹದಲ್ಲಿರುವ ಬಿಂಬ ರೂಪಿ ಭಗವಂತ ಅವಿನಾಶಿ. ಆತನಿಗೆ ದೇಹನಾಶ, ಸ್ವರೂಪನಾಶವಿಲ್ಲ. ದುಃಖಪ್ರಾಪ್ತಿ ಇಲ್ಲ. ಆತ ಅಪೂರ್ಣನಲ್ಲ. ಈ ಸತ್ಯವನ್ನು ತಿಳಿದವನು ಯಥಾರ್ಥ ಜ್ಞಾನವುಳ್ಳವನು.
ಈ ಶ್ಲೋಕದಲ್ಲಿ ಹೇಳಿದ ವಿಚಾರವನ್ನು ಇನ್ನೂ ಬಿಡಿಸಿ ಮತ್ತೆ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ:        

ಸಮಂ ಪಶ್ಯನ್ ಹಿ  ಸರ್ವತ್ರ ಸಮವಸ್ಥಿತಮೀಶ್ವರಮ್
ನ ಹಿನಸ್ತ್ಯಾತ್ಮನಾSSತ್ಮಾನಂ ತತೋ ಯಾತಿ ಪರಾಂ ಗತಿಮ್          ೨೮

ಸಮಮ್  ಪಶ್ಯನ್ ಹಿ  ಸರ್ವತ್ರ ಸಮವಸ್ಥಿತಮ್ ಈಶ್ವರಮ್
ನ ಹಿನಸ್ತಿ ಆತ್ಮನಾತ್ಮನಮ್ತಃ  ಯಾತಿ ಪರಾಮ್ ಗತಿಮ್ – ಸರ್ವ ಶಕ್ತನಾದ ಭಗವಂತ ಎಲ್ಲೆಡೆಯು ಏರುಪೇರಿಲ್ಲದೆ ಏಕರೂಪನಾಗಿದ್ದಾನೆ  ಎಂದು ತಿಳಿದವನು ತನ್ನ ಏಳಿಗೆಗೆ ತಾನೇ ತಾನು ಅಡ್ಡಿಯನ್ನೂಡ್ಡಿಕೊಳ್ಳುವುದಿಲ್ಲ. ಮುಂದೆ ಪರಮ ಪದವನ್ನು ಪಡೆಯುತ್ತಾನೆ.

  ನಾವು ನಮ್ಮ ದೇಹದಲ್ಲಿ ಸ್ಥಿತರು. ಆದರೆ ಭಗವಂತ ‘ಸಂಸ್ಥಿತ’ . ಈ ದೇಹದೊಳಗಿರುವ ನಮಗೆ ಈ ದೇಹದ ಜ್ಞಾನ ಕೂಡ ಇಲ್ಲ. ಏಕಿದ್ದೇವೆ ಎಂದೂ ಗೊತ್ತಿಲ್ಲ. ನಾವು ಒಳಗಿದ್ದು ಆನಂದ ದುಃಖವನ್ನು ಅನುಭವಿಸುತ್ತಿರುತ್ತೇವೆ. ಆದರೆ ಭಗವಂತ ದುಃಖ ಅಜ್ಞಾನದ ಸ್ಪರ್ಶವಿಲ್ಲದ ಆನಂದಮೂರ್ತಿ. ಆತ ನಮ್ಮೊಳಗಿರುವ ಸರ್ವ ತತ್ವಾಭಿಮಾನಿ ದೇವತೆಗಳಿಗೆ ಸಮವಸ್ಥಿತನಾಗಿ ಎತ್ತರದಲ್ಲಿದ್ದಾನೆ. ದುಃಖ ಅಜ್ಞಾನದ ಸ್ಪರ್ಶವಿಲ್ಲದ ಭಗವಂತ ಯಾರನ್ನೂ ಮೇಲು-ಕೀಳು ಭಾವದಿಂದ ನೋಡುವುದಿಲ್ಲ. ಪ್ರತಿಯೊಬ್ಬರನ್ನೂ ಅವರವರ ಕರ್ಮ ಮತ್ತು ಜೀವಯೋಗ್ಯತೆಗೆ ತಕ್ಕಂತೆ ಸಮನಾಗಿ ಕಾಣುತ್ತಾನೆ. ಭಗವಂತ ಸಮಸ್ತ ಜಡ-ಚೇತನದೊಳಗೆ ಜಗದೀಶ್ವರನಾಗಿ ನಿಂತು ನಮ್ಮ ಜೀವ ಸ್ವಭಾವಕ್ಕೆ ತಕ್ಕಂತೆ, ಕರ್ಮಕ್ಕನುಗುಣವಾಗಿ ನಮ್ಮನ್ನು ನಡೆಸುತ್ತಿದ್ದಾನೆ. ಈ ಸತ್ಯ ತಿಳಿದಾಗ “ನೀನು ನಿನಗೆ ಹಿಂಸೆ ಮಾಡದೆ ಬದುಕಬಹುದು” ಎನ್ನುತ್ತಾನೆ ಕೃಷ್ಣ. ನಿನ್ನ ಅರಿವಿಲ್ಲದೆ, ಭಗವಂತನ ಅರಿವಿಲ್ಲದೆ ಬದುಕುವುದು ಒಂದು ಆತ್ಮಹಿಂಸೆ. ಒಮ್ಮೆ ‘ನಾನು’ ಅಂದರೇನು, ನನ್ನೊಳಗಿರುವ ಭಗವಂತನಂದರೇನು ಎನ್ನುವ ವಸ್ತುಃಸ್ಥಿತಿ ತಿಳಿದರೆ ಹಿಂಸೆಯಾಗುವುದಿಲ್ಲ. ಅದು ತಿಳಿಯದೆ ಬದುಕುವುದು ಅಜ್ಞಾನದ ಮತ್ತು ದುಃಖದ ಬದುಕು. ಜೀವನದಲ್ಲಿ ಬರುವ ಪ್ರತಿಯೊಂದು ಸಂಗತಿಯನ್ನು-“ನಾನು ಹಿಂದೆ ಮಾಡಿದ ಕರ್ಮದ ಫಲ-ಅದನ್ನು ಭಗವಂತ ಮಾಡಿಸಿದ” ಎಂದು ತಿಳಿದುಕೊಂಡರೆ ದುಃಖವಿಲ್ಲದೆ ಆನಂದದಿಂದ ಬದುಕಬಹುದು. ನಮ್ಮ ಮನಸ್ಸೇ ನಮಗೆ ದುಃಖ ಕೊಡುವುದು. ಅದೇ ಆನಂದ ಕೊಡುವುದು. ನಮಗೆ ದುಃಖವಾಗುವುದು ನಮ್ಮ ತಿಳುವಳಿಕೆಯಿಂದ ಹೊರತು ಇನ್ಯಾವುದರಿಂದಲೂ ಅಲ್ಲ. ಉದಾಹರಣೆಗೆ ಒಬ್ಬ ಶ್ರೀಮಂತ ಯಾವುದೋ ಕಾರಣದಿಂದ ತನ್ನಲ್ಲಿರುವ ಎಲ್ಲ ಸಂಪತ್ತನ್ನು ಕಳೆದುಕೊಳ್ಳುತ್ತಾನೆ. ಆಗ ಆತ “ನನ್ನ ಪೂರ್ವ ಜನ್ಮದ ಕರ್ಮಕ್ಕನುಗುಣವಾಗಿ ಈ ಘಟನೆ ನಡೆಯಿತು. ಎಲ್ಲವೂ ಭಗವಂತನ ಲೀಲೆ; ಕೊಡುವವನೂ ಅವನೆ, ತೆಗೆದುಕೊಳ್ಳುವವನೂ ಅವನೆ; ಪಾಲಿಸುವವನೂ ಅವನೆ; ಇದಕ್ಕಾಗಿ ನಾನೇಕೆ ಚಿಂತಿಸಬೇಕು” ಎಂದು ತಿಳಿದುಕೊಂಡರೆ ಆತ ಆನಂದದಿಂದಿರಬಹುದು. ಇದನ್ನು ಬಿಟ್ಟು ಬ್ರಹ್ಮಾಂಡವೇ ತಲೆಮೇಲೆ  ಬಿದ್ದಂತೆ ವರ್ತಿಸಿದರೆ ಅದು ನಮ್ಮನ್ನು ನಾವು ಹಿಂಸಿಸಿಕೊಂಡಂತೆ. ನಾವು ಎಲ್ಲವನ್ನು ಪ್ರೇಕ್ಷಕರಾಗಿ  ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು. ಭಗವಂತನ ಅರಿವಿನೊಂದಿಗೆ ಶಾಂತವಾದ ಇಂತಹ ಬದುಕು ನಮ್ಮನ್ನು ಪರಮಪದವಾದ ಮೊಕ್ಷದತ್ತ ಕೊಂಡೊಯ್ಯಬಲ್ಲದು.  

Saturday, November 5, 2011

Bhagavad Gita Kannada Chapter-13 Shloka 19-23


ಮುಂದಿನ ಶ್ಲೋಕದಲ್ಲಿ ಕೃಷ್ಣ ಮೂಲ ಸೃಷ್ಟಿಯ ಕಲ್ಪನೆ ಮತ್ತು ಅದರ ಅನುಸಂಧಾನವನ್ನು ವಿವರಿಸುತ್ತಾನೆ. ಈ ಶ್ಲೋಕ ಅಧ್ಯಾತ್ಮ ಪ್ರಪಂಚದಲ್ಲಿ ಸೃಷ್ಟಿಯ ಬಗೆಗಿನ ಎಲ್ಲ ಗೊಂದಲಗಳಿಗೆ ಕೃಷ್ಣ ಕೊಟ್ಟ ಉತ್ತರ. ಅಡಕವಾಗಿ ಎಲ್ಲವನ್ನು ಈ ಶ್ಲೋಕದ ಮೂಲಕ ಕೃಷ್ಣ ನಮ್ಮ ಮುಂದಿಟ್ಟಿದ್ದಾನೆ.

ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ
ವಿಕಾರಾಂಶ್ಚ ಗುಣಾಂಶ್ಚೈವ ವಿದ್ಧಿ ಪ್ರಕೃತಿಸಂಭವಾನ್                                    ೧೯

ಪ್ರಕೃತಿಮ್  ಪುರುಷಮ್ ಚ ಏವ ವಿದ್ಧಿ ಅನಾದೀಭೌ ಅಪಿ
ವಿಕಾರಾನ್ ಚ ಗುಣಾನ್ ಚ ಏವ ವಿದ್ಧಿ ಪ್ರಕೃತಿ ಸಂಭವಾನ್ – ಪ್ರಕೃತಿ[ಜಡಪ್ರಕೃತಿ ಮತ್ತು ಚೇತನಪ್ರಕೃತಿ] ಮತ್ತು ಪುರುಷ[ಜೀವ ಮತ್ತು ಈಶ್ವರ] ಇಬ್ಬರೂ ಹುಟ್ಟಿರದವರು ಎಂದು ತಿಳಿ. ಸ್ಥೂಲರೂಪಗಳು ಮತ್ತು ಗುಣತ್ರಯಗಳು ಪ್ರಕೃತಿಯ ಕಾರ್ಯಗಳು ಎಂದು ತಿಳಿ.

ಭಗವಂತ ಯಾವುದೇ ಜೀವರನ್ನಾಗಲಿ, ಪ್ರಕೃತಿಯನ್ನಾಗಲಿ ಸೃಷ್ಟಿ ಮಾಡಿಲ್ಲ. ಜಡಪ್ರಕೃತಿ,  ಚೇತನ ಪ್ರಕೃತಿ,  ಪರಮಪುರುಷ(ಭಗವಂತ), ಅವಾಂತರಪುರುಷರು(ಜೀವರು) ಎಲ್ಲರೂ ಅನಾಧಿನಿತ್ಯರು.  ಪ್ರಪಂಚ ಎಂದರೆ ಪ್ರಕೃತಿಯ ವಿಕಾರ. ಒಂದು ಮಗು ಹುಟ್ಟಿತು ಎಂದರೆ ಅಲ್ಲಿ ಆಗುವುದು ಜೀವದ ಸೃಷ್ಟಿ ಅಲ್ಲ. ಜೀವಕ್ಕೆ ಒಂದು ಆಕಾರದ ಸೃಷ್ಟಿ. ಜೀವ ತಂದೆಯ ದೇಹದ ಮುಖೇನ ತಾಯಿಯ ಗರ್ಭವನ್ನು ಸೇರಿ ಅಲ್ಲಿ ಒಂದು ಆಕಾರವನ್ನು ಪಡೆಯುತ್ತದೆ. ಈ ರೀತಿ  ಭಗವಂತ ಜೀವರಿಗೆ ಪ್ರಕೃತಿಯ ಮೂಲಕ ಒಂದು ಆಕಾರ ಸೃಷ್ಟಿ ಮಾಡುತ್ತಾನೆ. ಸೃಷ್ಟಿಯ ಮೂಲದಲ್ಲೂ  ಕೂಡ ಲಕ್ಷ್ಮೀನಾರಾಯಣರು ತಂದೆ-ತಾಯಿಯಾಗಿ  ನಿಂತು  ಪ್ರಪಂಚದ ಸೃಷ್ಟಿಗೆ ಚಾಲನೆ ಕೊಟ್ಟರು. ಸೃಷ್ಟಿಯ ಆದಿಯಲ್ಲಿ ಜೀವರು ಲಕ್ಷ್ಮೀದೇವಿಯ ಉದರದಲ್ಲಿದ್ದರು. ಲಕ್ಷ್ಮೀದೇವಿ ಪರಮಪುರುಷ ಭಗವಂತನ ಉದರದಲ್ಲಿದ್ದಳು. ಸೃಷ್ಟಿಯ ಮೂಲದಲ್ಲಿ ಲಕ್ಷ್ಮಿಯ ನೆತ್ತಿಯಿಂದ ಹೊರ ಹೊಮ್ಮಿ, ಭಗವಂತನ ನಾಭಿಯ ಮುಖೇನ ಚತುರ್ಮುಖಬ್ರಹ್ಮನ ಜನನವಾಯಿತು. ಈ ಕಾರಣದಿಂದ ಚತುರ್ಮುಖ ಬ್ರಹ್ಮನನ್ನು ಲಕ್ಷ್ಮಿಯ ಶಿರಸ್ಸಿನಿಂದ ಮತ್ತು ಭಗವಂತನ ನಾಭಿಯಿಂದ ಜನಿಸಿದವನು ಎಂದು ಕರೆಯುತ್ತಾರೆ. ಒಟ್ಟಿನಲ್ಲಿ  “ಜಗತ್ತಿಗೆ ಕಾರಣವಾಗಿರುವ ಜಡಪ್ರಕೃತಿ ನಿತ್ಯ; ಆ ಜಡಪ್ರಕೃತಿಯಿಂದ ಆಕಾರಗೊಂಡು ಸೃಷ್ಟನಾದ ಜೀವನೂ ನಿತ್ಯ; ಈ ಜಡಪ್ರಕೃತಿ ಮತ್ತು ಜೀವನಿಗೆ ಕಾರಣಪುರುಷನಾದಂತಹ ಲಕ್ಷ್ಮೀನಾರಾಯಣರೂ ನಿತ್ಯರು; ಪ್ರಪಂಚ ಎಂದರೆ ಪ್ರಕೃತಿಯ ವಿಕಾರ”. ಇದು ಇಲ್ಲಿ ನಾವು ತಿಳಿದುಕೊಳ್ಳಬೇಕಾಗಿರುವ ಮುಖ್ಯ ವಿಚಾರ.
ಮೊತ್ತ ಮೊದಲು ಸೃಷ್ಟಿ ವಿಸ್ತಾರಕ್ಕೆ ಬೇಕಾದ ಶಕ್ತಿ ಸೃಷ್ಟಿಯಾಯಿತು. ಅದೇ ಪ್ರಕೃತಿಯ ಅತ್ಯಂತ ಸೂಕ್ಷ್ಮ ವಿಕಾರವಾದ ಗುಣತ್ರಯಗಳು. ಈ ಶಕ್ತಿ ಕಂಪನದಿಂದ ಇಡೀ ಪ್ರಪಂಚ ನಿಷ್ಪನ್ನವಾಯಿತು. ಆಕಾರ ಕೊಟ್ಟಿದ್ದು ತಾಯಿ ಲಕ್ಷ್ಮಿ; ಆಕಾರ ಪಡೆದದ್ದು ಜೀವರು; ಆಕಾರ ಕೊಡುವವ ನಾರಾಯಣ. ಈ ಕಾರಣದಿಂದ ಚತುರ್ಮುಖ ಬ್ರಹ್ಮನಿಂದ ಹಿಡಿದು ಸಮಸ್ತ ದೇವಾದಿ ಜೀವರೂ ಲಕ್ಷ್ಮೀನಾರಾಯಣರ ಮಕ್ಕಳು.

ಮೇಲಿನ ಶ್ಲೋಕದಲ್ಲಿ ಕೃಷ್ಣ ಪುರುಷ ಮತ್ತು ಪ್ರಕೃತಿ ಬಗ್ಗೆ ಹೇಳಿದ. [ಪುರುಷ ಎಂದರೆ ಜೀವಾತ್ಮ ಮತ್ತು ಪರಮಾತ್ಮ. ಪ್ರಕೃತಿ ಎಂದರೆ ಜಡಪ್ರಕೃತಿ ಮತ್ತು ಚೇತನ ಪ್ರಕೃತಿ]. ಸೃಷ್ಟಿ ಪ್ರಕ್ರೀಯೆಯಲ್ಲಿ ಈ ನಾಲ್ಕು ಪಾತ್ರದ ವಿವರಣೆಯನ್ನು ಕೃಷ್ಣ ಮುಂದಿನ ಮೂರು ಶ್ಲೋಕಗಳಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಮೊದಲ ಶ್ಲೋಕದಲ್ಲಿ(ಶ್ಲೋ-೨೦) ಕೃಷ್ಣ ಜೀವಾತ್ಮ-ಪರಮಾತ್ಮ, ಜಡಪ್ರಕೃತಿ-ಚೇತನಪ್ರಕೃತಿಯ ಒಟ್ಟು ವಿವರಣೆಯನ್ನು ಕೊಡುತ್ತಾನೆ. ನಂತರ(ಶ್ಲೋ-೨೧) ಕೇವಲ ಜಡಪ್ರಕೃತಿ ಮತ್ತು ಜೀವಾತ್ಮರ ವಿವರಣೆಯನ್ನು ಕೊಟ್ಟು, ಮೂರನೇ ಶ್ಲೋಕದಲ್ಲಿ(ಶ್ಲೋ-೨೨) ಸೃಷ್ಟಿ ಪ್ರಕ್ರೀಯೆಯಲ್ಲಿ  ಪರಮಪುರುಷ ಮತ್ತು ಚೇತನಪ್ರಕೃತಿಯ ಪಾತ್ರದ ವಿವರಣೆಯನ್ನು ನಮ್ಮ ಮುಂದಿಡುತ್ತಾನೆ.      

ಕಾರ್ಯಕಾರಣಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ
ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುರುಚ್ಯತೇ                   ೨೦

ಕಾರ್ಯ ಕಾರಣ ಕರ್ತೃತ್ವೇ ಹೇತುಃ ಪ್ರಕೃತಿಃ ಉಚ್ಯತೇ
ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುಃ ಉಚ್ಯತೇ –ದೇಹ ಮತ್ತು ಇಂದ್ರಿಯಗಳ ನಿರ್ಮಾಣದಲ್ಲಿ ಜಡಪ್ರಕೃತಿ[ಚೇತನಪ್ರಕೃತಿಯಾದ ಶ್ರೀ ತತ್ವ] ಕಾರಣವೆನಿಸಿದೆ. ಸುಖ-ದುಃಖಗಳ ಅನುಭವದಲ್ಲಿ ಜೀವ[ಪರಮಾತ್ಮ] ಕಾರಣಭೂತನಾಗಿದ್ದಾನೆ.

ಈ ಶ್ಲೋಕದಲ್ಲಿ ಎರಡು ವಿಚಾರವನ್ನು ಕೃಷ್ಣ ಬಿಡಿಸಿ ತೋರಿದ್ದಾನೆ. ನಮಗೆ ಒಂದು ದೇಹವಿದೆ. ದೇಹದಲ್ಲಿ ಐದು ಬಗೆಯ ಸುಖ-ದುಃಖ ಭೋಗವನ್ನು ಅನುಭವಿಸಲು ಐದು ಇಂದ್ರಿಯಗಳಿವೆ. ಹೀಗೆ ಶರೀರ, ಶರೀರದಲ್ಲಿ ಇಂದ್ರಿಯಗಳು- ಇಂದ್ರಿಯಗಳ ಮೂಲಕ ಸುಖ-ದುಃಖ ಭೋಗ-ಇದು ಜೀವನ. ಜೀವನಿಗೆ ಅವನು ಹಿಂದೆ ಮಾಡಿದ ಕರ್ಮಕ್ಕನುಗುಣವಾಗಿ ಕಾರ್ಯ ಕಾರಣಗಳ ಕರ್ತೃತ್ವ. ಅಂದರೆ ನಮ್ಮ ಕರ್ಮಕ್ಕನುಗುಣವಾಗಿ ಭಗವಂತ ಈ ಜನ್ಮದಲ್ಲಿ ಒಂದು ರೂಪವನ್ನು ಕೊಟ್ಟ. ಈ ನಮ್ಮ ದೇಹ ರೂಪುಗೊಳ್ಳಲು ಅಧಿಷ್ಠಾನಕಾರಣ ನಮ್ಮ ತಂದೆ ತಾಯಿ. ನಮ್ಮ ದೇಹ  ಜಡಪ್ರಕೃತಿಯಿಂದಾಗಿದೆ. ತಾಯಿಯ ಹೊಟ್ಟೆಯಲ್ಲಿ ನಮಗೆ ಈ ರೂಪವನ್ನು ಕೊಟ್ಟವಳು ಜಗನ್ಮಾತೆ ಶ್ರೀಲಕ್ಷ್ಮಿ. ಭಗವಂತನಿಗೆ ಅಂಗವಾಗಿ ಲಕ್ಷ್ಮಿ ದೇಹ ರಚನೆ ಮಾಡುತ್ತಾಳೆ. ಈ ರೀತಿ ದೇಹದ ಅಂಗಾಂಗ ಮತ್ತು  ಇಂದ್ರಿಯಗಳನ್ನು ಪಡೆದ ಜೀವ, ಅದರಿಂದ ಸುಖ-ದುಃಖದ ಭೋಗವನ್ನು ಅನುಭವಿಸುತ್ತದೆ. ಪರಮಪುರುಷ ಭಗವಂತ ಜೀವನಿಗೆ ಸುಖ-ದುಃಖದ ಅನುಭವವನ್ನು ಕೊಡುತ್ತಾನೆ. ಹೀಗಾಗಿ ದೇಹರಚನೆಯಲ್ಲಿ ಚೇತನ ಮತ್ತು ಜಡ ಪ್ರಕೃತಿ ಒಳಗೊಂಡರೆ, ಭಗವಂತ ಜೀವನಿಗೆ ಭೋಕ್ತೃತ್ವದ ಅನುಭವವನ್ನು ಸ್ವಯಂ ಅಂತರ್ಯಾಮಿಯಾಗಿ ನಿಂತು ನೀಡುತ್ತಾನೆ.      

ಪುರುಷಃ ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ ಗುಣಾನ್   
ಕಾರಣಂ ಗುಣಸಂಗೋSಸ್ಯ ಸದಸದ್ಯೋನಿಜನ್ಮಸು                                    ೨೧

ಪುರುಷಃ ಪ್ರಕೃತಿಸ್ಥಃ ಹಿ ಭುಂಕ್ತೇ ಪ್ರಕೃತಿಜಾನ್ ಗುಣಾನ್      
ಕಾರಣಮ್  ಗುಣಸಂಗಃ ಅಸ್ಯ ಸತ್ ಅಸತ್ ಯೋನಿ ಜನ್ಮಸು –ಪ್ರಕೃತಿಯ ಕಟ್ಟಿಗೊಳಗಾದ ಜೀವ, ಪ್ರಕೃತಿ ಕಾರ್ಯಗಳಾದ ಸುಖ-ದುಃಖಾದಿಗಳನ್ನು ಅನುಭವಿಸುತ್ತಾನೆ. ಒಳ್ಳೆಯ ಮತ್ತು ಕೆಟ್ಟ ಬಸಿರಿನಲ್ಲಿ ಹುಟ್ಟಿಬರಲು ಜೀವನಿಗೆ ತ್ರಿಗುಣಗಳ ನಂಟೇ ಕಾರಣ.

ಪ್ರಕೃತಿ ನಿರ್ಮಿತವಾದ ದೇಹದಲ್ಲಿ ಭಗವಂತನಿದ್ದಾನೆ, ದೇವತೆಗಳಿದ್ದಾರೆ. ಆದರೆ ದೇಹದಲ್ಲಿದ್ದು ಸುಖ-ದುಃಖದ ಭೋಗವನ್ನು ಅನುಭವಿಸುವವನು-ಜೀವ. ದೇಹ ಪ್ರಕೃತಿಯ ಗುಣದಿಂದ ನಿರ್ಮಾಣವಾಗಿರುತ್ತದೆ. ಜೀವ ತನ್ನ ಸ್ವಭಾವಕ್ಕನುಗುಣವಾಗಿ, ಪೂರ್ವ ಜನ್ಮದ ಕರ್ಮಫಲಕ್ಕನುಗುಣವಾಗಿ ಈ ಜನ್ಮದಲ್ಲಿ ದೇಹವನ್ನು ಪಡೆಯುತ್ತದೆ. ಹಿಂದೆ ಹೇಳಿದಂತೆ ಜೀವ ತನ್ನ ದೇಹವನ್ನು ಬಿಟ್ಟು ಹೊರಬರುವಾಗ ಯಾವುದನ್ನು ಗಾಢವಾಗಿ ನೆನೆಯುತ್ತದೋ -ಅದಕ್ಕನುಗುಣವಾಗಿ ಅದರ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಉತ್ತಮ ಅಥವಾ ಹೀನ ಯೋನಿಯಲ್ಲಿ ಹುಟ್ಟಿಬರಲು ಜೀವನಿಗೆ ತ್ರಿಗುಣಗಳ ನಂಟೇ ಕಾರಣ.         

ಉಪದ್ರಷ್ಟಾSನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ
ಪರಮಾತ್ಮೇತಿ ಚಾಪ್ಯುಕ್ತೋ ದೇಹೇSಸ್ಮಿನ್ ಪುರುಷಃ ಪರಃ                 ೨೨

ಉಪದ್ರಷ್ಟಾನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ
ಪರಮಾತ್ಮ ಇತಿ ಚ ಅಪಿ ಉಕ್ತಃ ದೇಹೇಸ್ಮಿನ್ ಪುರುಷಃ ಪರಃ –ಎಲ್ಲದರ ಮೇಲಿದ್ದು ಎಲ್ಲವನು ನೋಡುವವನು, ತನ್ನಿಷ್ಟದಂತೆ ಎಲ್ಲವನು ನಡೆಸುವವನು, ಎಲ್ಲವನು ಹೊತ್ತವನು, ಸಾರವನುಣ್ಣುವವನು-ಸರ್ವಶಕ್ತನಾದ ಪರಮಾತ್ಮ. ಅವನೆ ಈ ದೇಹದಲ್ಲಿ ಜೀವನ ಜೊತೆಗಿರುವ ಪರಮಪುರುಷ.

ಚಿತ್ ಪ್ರಕೃತಿ ಜಡಪ್ರಕೃತಿಯಿಂದ ದೇಹ ನಿರ್ಮಿಸುವಾಗ, ಜೀವ ಆ ದೇಹದಲ್ಲಿದ್ದು ಇಂದ್ರಿಯಗಳ ಮುಖೇನ ಸುಖ ದುಃಖವನ್ನು ಭೋಗಿಸುವಾಗ- ಎಲ್ಲದಕ್ಕೂ ಪ್ರೇರಕನಾಗಿ, ಎಲ್ಲವುದಕ್ಕಿಂತ ಎತ್ತರದಲ್ಲಿದ್ದು  ಎಲ್ಲವನ್ನು ಹತ್ತಿರದಿಂದ ಸಾಕ್ಷಾತ್ ಕಾಣುವ ಭಗವಂತ ಪರಮಪುರುಷ. ಆತ ನಮ್ಮ ಕರ್ಮವನ್ನು ಬಲ್ಲವನು. ಯಾವ ರೀತಿಯ ಕರ್ಮದಿಂದ ಏನಾಗಬೇಕು ಎಂದು ತಿಳಿದವನು. ಆತ ಒಳಗೆ ಕೂತು ಪ್ರೇರಣೆ ಮಾಡುವುದರಿಂದ ಈ ದೇಹ ನಿಂತಿದೆ. ಆತ ಹೊರಟು ಹೋದರೆ ದೇಹ ಬಿದ್ದು ಹೋಗುತ್ತದೆ. ಆತ ನಮ್ಮೊಳಗಿದ್ದು ಯಾವ ದುಃಖದ ಸ್ಪರ್ಶವೂ ಇಲ್ಲದೆ ಸದಾ ಆನಂದದಿಂದಿರುವ ಆನಂದ ಭೋಕ್ತ.    

ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ
ಸರ್ವಥಾ ವರ್ತಮಾನೋSಪಿ ನ ಸ ಭೂಯೋSಭಿಜಾಯತೇ             ೨೩

ಯಃ  ಏವಮ್  ವೇತ್ತಿ ಪುರುಷಮ್ ಪ್ರಕೃತಿಮ್  ಚ ಗುಣೈಃ ಸಹ
ಸರ್ವಥಾ ವರ್ತಮಾನಃ  ಅಪಿ ಸಃ  ಭೂಯಃ  ಅಭಿಜಾಯತೇ –ಹೀಗೆ ಪ್ರಕೃತಿ-ಪುರುಷರನ್ನು ಗುಣಗಳ ಜತೆಗೆ ಅರಿತವನು ಹೇಗೆ ಬದುಕಿದರೂ ಮತ್ತೆ ಮರಳಿ ಹುಟ್ಟುವುದಿಲ್ಲ.

ಅನಾಧಿನಿತ್ಯವಾದ ಪ್ರಕೃತಿ(ಜಡ ಮತ್ತು ಚೇತನ), ಎಲ್ಲವುದಕ್ಕೂ ಕಾರಣ ಪುರುಷನಾದ ಪರಮಾತ್ಮ, ಆತನ ಅಧೀನವಾಗಿರುವ ಜೀವಜಾತ ಇದನ್ನು ಗುಣಗಳ ಜೊತೆಗೆ ಅರಿತವನು ಜ್ಞಾನಿ. ಇಂಥಹ ಜ್ಞಾನಿ ಬಾಹ್ಯವಾಗಿ ಹೇಗೆ ಕಾಣಿಸಿಕೊಂಡರೂ ಕೂಡ, ಸತ್ಯದ ಸಾಕ್ಷಾತ್ಕಾರದಿಂದ ಆತ ಮೋಕ್ಷವನ್ನು ತಲುಪುತ್ತಾನೆ. ಇಲ್ಲಿ ಬಾಹ್ಯ ಸಂಸ್ಕಾರಕ್ಕಿಂತ ಜ್ಞಾನ ಎಷ್ಟು ಮುಖ್ಯ ಎನ್ನುವುದನ್ನು ಕೃಷ್ಣ ಒತ್ತಿ ಹೇಳಿದ್ದಾನೆ. ಮುಖವಾಡದ ಬದುಕಿನಿಂದ ಏನೂ ಉಪಯೋಗವಿಲ್ಲ. ಅದಕ್ಕಿಂತ ಮಿಗಿಲಾದದ್ದು ಸತ್ಯದ ಸಾಕ್ಷಾತ್ಕಾರ. ಸತ್ಯದ ಸಾಕ್ಷಾತ್ಕಾರವಾದಾಗ ತಾನಾಗಿಯೇ ಲೌಕಿಕ ಪ್ರಪಂಚ ಎಷ್ಟು ಅರ್ಥಹೀನ ಎನ್ನುವುದು ತಿಳಿಯುತ್ತದೆ. ಜ್ಞಾನಕ್ಕಿಂತ ಮಿಗಿಲಾದ ಇನ್ನೊಂದು ಪವಿತ್ರಸಾಧನವಿಲ್ಲ. ಕರ್ಮಾನುಷ್ಠಾನದಲ್ಲಿ  ಅಕಾಸ್ಮಾತ್ ಚ್ಯುತಿಯಾದರೂ ಜ್ಞಾನ ಮಾರ್ಗದಲ್ಲಿ ಸಾಗುವವನಿಗೆ ಅದು ಬಾಧಕವಾಗುವುದಿಲ್ಲ. ಜ್ಞಾನ ಅವನನ್ನು ಸರಿದಾರಿಗೆ ತಂದು ನಿಲ್ಲಿಸುತ್ತದೆ ಮತ್ತು ಆತ ಮೋಕ್ಷವನ್ನು ಪಡೆಯುತ್ತಾನೆ.

Tuesday, November 1, 2011

Bhagavad Gita Kannada Chapter-13 Shloka 12-18


ಜ್ಞಾನ ಸಾಧನಗಳನ್ನು ವಿವರಿಸಿದ ಕೃಷ್ಣ ಮುಂದಿನ ಆರು ಶ್ಲೋಕಗಳಲ್ಲಿ ಶಬ್ದದ ಮಿತಿಯಿಂದ ಆಚೆಗಿರುವ  ಭಗವಂತನ ವರ್ಣನೆಯನ್ನು ನಮ್ಮ ಮುಂದಿಡುತ್ತಾನೆ. ದೇವರು ಹೇಗಿದ್ದಾನೆ,  ಆತನ ರೂಪವನ್ನು ಹೇಗೆ ಅನುಸಂಧಾನ ಮಾಡಬೇಕು ಎನ್ನುವ ವಿಚಾರವನ್ನು ಕೃಷ್ಣ ಇಲ್ಲಿ ಸುಂದರವಾಗಿ ವರ್ಣಿಸಿದ್ದಾನೆ. ಈ ಶ್ಲೋಕಗಳಲ್ಲಿ ಒಂದೊಕ್ಕೊಂದು ವ್ಯತಿರಿಕ್ತ(Contradicting)ವಾಗಿ ಕಾಣುವ ಅನೇಕ ವಿಷಯಗಳನ್ನು ನಾವು ಕಾಣಬಹುದು. ಉದಾಹರಣೆಗೆ: ಭಗವಂತ ನಿರ್ಗುಣ ಆದರೆ ಆತ ಸರ್ವಗುಣಪೂರ್ಣ; ಭಗವಂತ ಅಚಲ ಆದರೆ ಆತ ಚಲಿಸುತ್ತಾನೆ; ಭಗವಂತ ನಿರಾಕಾರ  ಆದರೆ ಆತ ಸಾಕಾರ; ಭಗವಂತನನ್ನು ತಿಳಿಯಲು ಅಸಾಧ್ಯ ಆದರೆ ಆತನನ್ನು ತಿಳಿಯಬಹುದು; ಭಗವಂತನಿಗೆ ಇಂದ್ರಿಯಗಳಿಲ್ಲ ಆದರೆ ಆತನಿಗೆ ಇಂದ್ರಿಯಗಳಿವೆ; ಆತ ದೂರದಲ್ಲಿದ್ದಾನೆ ಆದರೆ ಹತ್ತಿರದಲ್ಲಿದ್ದಾನೆ; ಇತ್ಯಾದಿ. ಈ ರೀತಿಯ ವರ್ಣನೆಯನ್ನು ಭಗವಂತನಿಗಲ್ಲದೆ ಇನ್ಯಾರಿಗೂ ಕೊಡಲು ಬರುವುದಿಲ್ಲ. ಇವೆಲ್ಲವುದರ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.    

ಜ್ಞೇಯಂ ಯತ್ ತತ್ ಪ್ರವಕ್ಷ್ಯಾಮಿ ಯಜ್ ಜ್ಞಾತ್ವಾSಮೃತಮಶ್ನುತೇ    
ಅನಾದಿಮತ್ ಪರಂ ಬ್ರಹ್ಮ ನ ಸತ್ ತನ್ನಾಸದುಚ್ಯತೇ                      ೧೨

ಜ್ಞೇಯಮ್  ಯತ್  ತತ್ ಪ್ರವಕ್ಷ್ಯಾಮಿ ಯತ್  ಜ್ಞಾತ್ವಾಮೃತಮ್ ಅಶ್ನುತೇ   
ಅನಾದಿಮತ್ ಪಮ್  ಬ್ರಹ್ಮ  ನ ಸತ್  ತತ್ ನ ಅಸತ್ ಉಚ್ಯತೇ – ಯಾವುದನ್ನು ತಿಳಿದು ಸಾವನ್ನು ಗೆಲ್ಲುವನೋ  ಅಂಥ ‘ಜ್ಞೇಯ’ವನ್ನು ಹೇಳುತ್ತೇನೆ: ಹುಟ್ಟಿರದ,[ದೇಹದಿಂದಲೂ ಹುಟ್ಟದ] ಪರಬ್ರಹ್ಮವೆ ಜ್ಞೇಯ. ಅದು ಕಣ್ಣಿಗೆ ಕಾಣುವ ಮಣ್ಣು-ನೀರು-ಬೆಂಕಿಗಿಂತಲು ಬೇರೆ; ಕಾಣದ ಗಾಳಿ –ಆಗಸಗಳಿಗಿಂತಲೂ ಬೇರೆ ಎನ್ನಿಸಿದೆ.

ಇಲ್ಲಿ ಕೃಷ್ಣ  ಜ್ಞಾನ ಸಾಧನಗಳ ಮೂಲಕ ತಿಳಿದುಕೊಳ್ಳಬೇಕಾದ ಜ್ಞೇಯನ ಬಗ್ಗೆ ವಿವರಿಸುತ್ತ ಹೇಳುತ್ತಾನೆ: “ಯಾವುದನ್ನು ಪ್ರತ್ಯಕ್ಷವಾಗಿ ಶಬ್ದಗಳು ಹೇಳಲಾರವೋ, ಯಾವ ಜ್ಞಾನವನ್ನು ತಿಳಿದುಕೊಂಡು ನೀನು ಅಮೃತತ್ವವನ್ನು ಸವಿಯುವೆಯೋ-ಅದನ್ನು ನಾನು ನಿನಗೆ ಹೇಳುತ್ತೇನೆ” ಎಂದು. ಭಗವಂತ ಅನಾದಿಮತ್. ಆತನಿಗೆ ನಶ್ವರವಾದ ಪಂಚಭೂತಗಳಿಂದಾದ ಯಾವ ಆಕಾರವೂ ಇಲ್ಲ. ಆತ ಜ್ಞಾನಾನಂದ ಸ್ವರೂಪ. ಭಗವಂತನ ಗುಣಕ್ರಿಯೆ ಎಲ್ಲವೂ ಅನಾದಿಮತ್. ಸದ್ಗುಣಗಳಿಂದ ತುಂಬಿರುವ ಭಗವಂತ ನಮಗೆ ಪೂರ್ಣತೆಯನ್ನು ಕೊಡುವವ. ಆತ ಸರ್ವರಕ್ಷಕ, ಆತನಿಂದ ಹಿರಿದಾದ ತತ್ವ ಇನ್ನೊಂದಿಲ್ಲ. ಇಂಥಹ ಭಗವಂತನನ್ನು ನಾವು ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಅದು ನಮ್ಮ ಅರಿವಿಗೆ ಎಟುಕದ್ದು. ಹೀಗಿದ್ದರೂ ಕೂಡಾ ಆತನನ್ನು ನಮ್ಮ ಸಾಮರ್ಥ್ಯಕ್ಕನುಗುಣವಾಗಿ ನಾವು ಯಥಾರ್ಥ ತಿಳಿಯಲು ಸಾಧ್ಯ.   

ಸರ್ವತಃಪಾಣಿಪಾದಂ ತತ್ ಸರ್ವತೋSಕ್ಷಿಶಿರೋಮುಖಮ್
ಸರ್ವತಃಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ                           ೧೩

ಸರ್ವತಃಪಾಣಿಪಾದಮ್  ತತ್ ಸರ್ವತಃ ಅಕ್ಷಿ ಶಿರಃ ಮುಖಮ್
ಸರ್ವತಃ ಶ್ರುತಿಮತ್ ಲೋಕೇ ಸರ್ವಮ್ ಆವೃತ್ಯ ತಿಷ್ಠತಿ—ಎಲ್ಲೆಡೆಯು ಅದಕ್ಕೆ ಕೈಕಾಲುಗಳು; ಎಲ್ಲೆಡೆಯು ಕಣ್ಣು-ತಲೆ-ಬಾಯಿಗಳು; ಎಲ್ಲೆಡೆಯು ಅದಕ್ಕೆ ಕಿವಿ; ಅದು ಲೋಕದೊಳಗೆಲ್ಲವನು ಆವರಿಸಿ ನಿಂತಿದೆ.

ಭಗವಂತ ಎಲ್ಲೆಡೆ ತುಂಬಿದ್ದಾನೆ. ಆತನಿಗೆ ಎಲ್ಲಕಡೆ ಕೈ ಕಾಲುಗಳು; ಎಲ್ಲ ಕಡೆ ಕಿವಿ, ಮುಖ, ಬಾಯಿ, ಕಣ್ಣು.(ಸಂಸ್ಕೃತದಲ್ಲಿ ಮುಖ ಎಂದರೆ ಮುಖವೂ ಹೌದು-ಬಾಯಿಯೂ ಹೌದು. ಸಮೃದ್ಧವಾದ ಈ ಭಾಷೆಯಲ್ಲಿ ‘ಬಾಯಿ’ಯನ್ನು ಸೂಚಿಸುವ ಪ್ರತ್ಯೇಕ ಪದ ಇಲ್ಲ!).  ಈ ಕಾರಣದಿಂದ ಭಗವಂತನಿಗೆ ತಿಳಿಯದಂತೆ ನಾವು ಯಾವ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಆತ ಸರ್ವಜ್ಞ, ಸರ್ವಗತ, ಸರ್ವಸಮರ್ಥ. ಇದೆಲ್ಲವನ್ನು ಶ್ರುತಿ ಪ್ರಮಾಣಿಕರಿಸುತ್ತದೆ. ಆದಿಯಲ್ಲಿ ವೇದವನ್ನು ಉಚ್ಛಾರ ಮಾಡಿದವನು ಭಗವಂತ. ಆತ ಎಲ್ಲವುದರ ಒಳಗೂ ಹೊರಗೂ ಆವರಿಸಿ ನಿಂತಿದ್ದಾನೆ. ಅಖಂಡವಾದ ಭಗವಂತನೊಳಗೆ ಆತನ ಅನಂತ ರೂಪಗಳಿವೆ. ಪ್ರತಿಯೊಂದು ರೂಪಕ್ಕೂ ಜ್ಞಾನಾನಂದಮಯವಾದ, ಸ್ವರೂಪಭೂತವಾದ  ಇಂದ್ರಿಯಗಳಿವೆ. ನಮ್ಮ ಸರ್ವ ಇಂದ್ರಿಯದಲ್ಲೂ ಆತ ತುಂಬಿ ನಿಂತು ನಡೆಸುತ್ತಿದ್ದಾನೆ.
           
ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯವಿವರ್ಜಿತಮ್
ಅಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತೃ ಚ                           ೧೪

ಸರ್ವೇಂದ್ರಿಯ ಗುಣಭಾಸಂ ಸರ್ವೇಂದ್ರಿಯ ವಿವರ್ಜಿತಮ್
ಅಸಕ್ತಮ್  ಸರ್ವಭೃತ್ ಚ ಏವ ನಿರ್ಗುಣಮ್ ಗುಣಭೋಕ್ತೃ ಚ –ಎಲ್ಲ ಇಂದ್ರಿಯಗಳನ್ನು, ಎಲ್ಲ ವಿಷಯಗಳನ್ನು ಬೆಳಗಿಸುತ್ತಿರುವುದು; ಅದಕೆ ಭೌತಿಕವಾದ ಯಾವ ಇಂದ್ರಿಯಗಳೂ ಇಲ್ಲ. ಯಾವುದಕು ಅಂಟದೆ ಎಲ್ಲವನು ಹೊತ್ತಿದೆ. ತ್ರಿಗುಣಗಳ ನಂಟಿಲ್ಲ; ಎಲ್ಲ ಸದ್ಗುಣಗಳ ನೆಲೆ.

ಜಗತ್ತಿನಲ್ಲಿರುವ ಎಲ್ಲ ಜೀವಜಾತಗಳು ತಮ್ಮ ಇಂದ್ರಿಯಗಳಿಂದ ಇಂದ್ರಿಯ ವಿಷಯವನ್ನು ಗ್ರಹಿಸುವುದು ಭಗವಂತನಿಂದ. ಇಂಥಹ ಭಗವಂತನಿಗೆ ಪಾಂಚಭೌತಿಕವಾದ, ನಶ್ವರವಾದ, ನಮ್ಮಂತೆ ಒಂದು ದಿನ ನಾಶವಾಗುವ, ತನ್ನ ಸ್ವರೂಪಕ್ಕಿಂತ ಭಿನ್ನವಾದ ಯಾವ ಇಂದ್ರಿಯಗಳೂ ಇಲ್ಲ. ಈ ಜಗತ್ತನ್ನು ಹೊತ್ತಿರುವ ತಂದೆ ಆ ಭಗವಂತ ಗಂಡು. ಜಗತ್ತನ್ನು ಹೆತ್ತ ಆತ ತಾಯಿಯೂ ಹೌದು. ಭೌತಿಕವಾಗಿ ಆತ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಆತ ಸ್ವರೂಪಭೂತವಾಗಿ ಗಂಡೂ ಹೌದು-ಹೆಣ್ಣೂ  ಹೌದು.  ಭಗವಂತ ಎಲ್ಲರೊಳಗೆ ತುಂಬಿದ್ದಾನೆ ಆದರೆ ಆತ ಯಾವುದನ್ನೂ ಅಂಟಿಸಿಕೊಂಡಿಲ್ಲ. ಆತ ಎಲ್ಲವನ್ನು ಹೊತ್ತಿದ್ದಾನೆ ಆದರೆ ಅದರ ಬಾಂಧವ್ಯದ ಬೆಸುಗೆ(Attachment) ಆತನಿಗಿಲ್ಲ. ಭಗವಂತ ತ್ರಿಗುಣಾತೀತ. ಆತನಿಗೆ ತ್ರಿಗುಣಗಳ ನಂಟಿಲ್ಲ. ಆದರೆ ಆತ ಸದ್ಗುಣಗಳ ನೆಲೆ. ಅವನು ನಿರಾಕಾರನೂ ಹೌದು, ಸಾಕಾರನೂ ಹೌದು.

ಬಹಿರಂತಶ್ಚ ಭೂತಾನಾಮಚರಂ ಚರಮೇವ ಚ     
ಸೂಕ್ಷ್ಮತ್ವಾತ್ ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್              ೧೫

ಹಿಃ ಅಂತಃ ಚ ಭೂತಾನಾಮ್ ಆಚರಮ್  ಚರಮ್ ಏವ
ಸೂಕ್ಷ್ಮತ್ವಾತ್ ತತ್ ಅವಿಜ್ಞೇಯಮ್  ದೂರಸ್ಥಮ್ ಚ ಅಂತಿಕೇ ಚ ತತ್ –ಅದು ಜೀವಿಗಳ ಹೊರಗಿದೆ; ಒಳಗೂ ಇದೆ; ಆದರೂ ಎಲ್ಲೆಡೆ ಚಲಿಸುತ್ತಿದೆ. ಅದು ಅಣುವಿಗಿಂತ ಅಣು; ಅದಕೆಂದೆ ತಿಳಿವಿಗೆಟುಕದ್ದು. ಅದು ದೂರದಲ್ಲಿದ್ದರೂ ಎಲ್ಲರ ಹತ್ತಿರದಲ್ಲಿದೆ.

ಭೂತ ಎಂದರೆ ಸಮಸ್ತ ಬ್ರಹ್ಮಾಂಡ, ಸಮಸ್ತ ಜೀವಜಾತ(ಪಿಂಡಾಂಡ). ಭಗವಂತ ಈ ಬ್ರಹ್ಮಾಂಡದ ಒಳಗೂ ಹೊರಗೂ ತುಂಬಿದ್ದಾನೆ. ನಾರಾಯಣ ಉಪನಿಷತ್ತಿನಲ್ಲಿ ಹೇಳುವಂತೆ “ಅಂತರ್ಬಹಿಶ್ಚ ತತ್-ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ”. ನಮ್ಮ ಒಳಗೆ ಮತ್ತು ಹೊರಗೆ ತುಂಬಿ, ಎಲ್ಲವನ್ನು ವ್ಯಾಪಿಸಿ ನಿಂತಿರುವ ಭಗವಂತ-ನಾರಾಯಣ. ಒಂದು ಅತಿ ಕ್ಷುದ್ರ ಜೀವದಿಂದ ಹಿಡಿದು ಚತುರ್ಮುಖ ಬ್ರಹ್ಮನ ತನಕ ಎಲ್ಲರ ಒಳಗೂ ಹೊರಗೂ ಭಗವಂತ ತುಂಬಿದ್ದಾನೆ.  ನಮ್ಮ ಒಳಗೆ ಅಂತರ್ಯಾಮಿಯಾಗಿ ಬಿಂಬರೂಪದಲ್ಲಿದ್ದು ನಮ್ಮನ್ನು ನಡೆಸುತ್ತಿದ್ದಾನೆ ಮತ್ತು ನಮ್ಮ ಹೊರಗೆ ನಿಂತು ನಮ್ಮನ್ನು ಧಾರಣೆ ಮಾಡಿದ್ದಾನೆ.  ಜ್ಞಾನಿಗಳಿಗೆ ಅವರ ಅಂತರಂಗದಲ್ಲಿ ದರ್ಶನ ಕೊಡುವ ಭಗವಂತ ಅಜ್ಞಾನಿಗಳಿಗೆ ಬಹಿ(ಬಹುದೂರ). ಸರ್ವಗತನಾದ ಭಗವಂತ  ಅಚಲ ಆದರೆ ಆತನ ಅನಂತ ರೂಪಗಳು ಸದಾ ಚಲಿಸುತ್ತಿರುತ್ತವೆ. ಸಮಸ್ತ ಚರಾಚಾರಾತ್ಮಕ ಜೀವದೊಳಗೆ ಭಗವಂತ ತುಂಬಿ ನಿಂತಿದ್ದಾನೆ. ಭಗವಂತ ಅಣುವಿನೊಳಗೆ ಅಣುವಾಗಿ ತುಂಬಿದ್ದಾನೆ. ಭಗವಂತ ಜ್ಞೇಯ ಆದರೆ ವಿಜ್ಞೇಯ ಅಲ್ಲ. ಭಗವಂತನ ವಿವರವನ್ನು ನಾವು ಕಿಂಚಿತ್ ತಿಳಿಯಬಹುದು ಆದರೆ ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ನಾವು ಸಮುದ್ರದಲ್ಲಿರುವ ಒಂದು ಪುಟ್ಟ ಮೀನಿನಂತೆ. ಅದು ಹೇಗೆ ಸಮುದ್ರದ ಅಗಾಧತೆಯನ್ನು ತಿಳಿಯಲಾರದೋ ಹಾಗೆ ಜಗತ್ತಿನ ಯಾವ ಜೀವಜಾತವೂ ಭಗವಂತನನ್ನು ಪೂರ್ಣವಾಗಿ ತಿಳಿಯಲಾರವು. ಏಕೆಂದರೆ ಅದು ನಮ್ಮ ಮನಸ್ಸು ಗ್ರಹಿಸಲಾರದಷ್ಟು ಸೂಕ್ಷ್ಮ ಮತ್ತು ಅಗಾಧ.

ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್
ಭೂತಭರ್ತೃ ಚ ತಜ್ ಜ್ಞೇಯಂ ಗ್ರಸಿಷ್ಣು ಪ್ರಭವಿಷ್ಣು ಚ                                   ೧೬

ಅವಿಭಕ್ತಮ್ ಚ ಭೂತೇಷು ವಿಭಕ್ತಮ್ ಇವ ಚ ಸ್ಥಿತಮ್
ಭೂತಭರ್ತೃ ಚ ತತ್  ಜ್ಞೇಯಮ್  ಗ್ರಸಿಷ್ಣು ಪ್ರಭವಿಷ್ಣು ಚ –ಎಲ್ಲ ಜೀವಿಗಳಲ್ಲು ಏಕರೂಪವಾಗಿದೆ; ಆದರೂ ಬೇರೆಯೋ ಎನುವಂತೆ ಬಹುರೂಪದಿಂದಿದೆ. ಎಲ್ಲ ಜೀವಿಗಳನ್ನು ಪಾಲಿಸುವಂಥದು; ಕಬಳಿಸುವಂಥದು ಮತ್ತು ಹುಟ್ಟಿಸುವಥದು ಅದೇ ಎಂದು ತಿಳಿಯಬೇಕು.

ಭಗವಂತ ಈ ಪ್ರಪಂಚದಲ್ಲಿನ ಪ್ರತಿಯೊಂದು ಜೀವದಲ್ಲೂ ಬಿಂಬ ರೂಪನಾಗಿ ನೆಲೆಸಿದ್ದಾನೆ. ಒಂದೊಂದು ಜೀವದಲ್ಲೂ ಅನೇಕ ರೂಪದಲ್ಲಿ ಆತನಿದ್ದಾನೆ. ಇಲ್ಲಿ ಪ್ರತಿಯೊಂದು ಜೀವಗಳೂ ವಿಭಕ್ತಗಳು. ಆದರೆ ಭಗವಂತ ಮಾತ್ರ ಅಖಂಡ(ಅವಿಭಕ್ತ). ಎಲ್ಲಾ ಕಡೆ ಇರುವ ಭಗವಂತ ಒಬ್ಬನೆ ಆದರೆ ಬೇರೆ ಬೇರೆ ಇದ್ದಂತೆ ನಮಗೆ ಕಾಣಿಸುತ್ತಾನೆ ಅಷ್ಟೆ. ಇದಕ್ಕೆ ಉತ್ತಮ ಉದಾಹರಣೆ ಭಗವಂತನ ಅವತಾರವಾದ-ಪರಶುರಾಮ, ವೇದವ್ಯಾಸ ಮತ್ತು ಶ್ರೀಕೃಷ್ಣ. ಇಲ್ಲಿ ಭಗವಂತ ಮೂರು ರೂಪದಲ್ಲಿ ನಮಗೆ ಏಕ ಕಾಲದಲ್ಲಿ ಕಾಣಿಸಿಕೊಂಡ. ಒಂದೇ ಆದರೂ ಕೂಡ ಮೂರಾಗಿ ನಮಗೆ ಆತ ಕಾಣಿಸಿಕೊಂಡ. ಆತ ಸಮಸ್ತ ಜೀವದೊಳಗಿದ್ದಾನೆ ಆದರೆ ಸಮಸ್ತ ಜೀವವನ್ನೂ ಆತನೇ ಹೊತ್ತುಕೊಂಡಿದ್ದಾನೆ. ಎಲ್ಲರ ಸೃಷ್ಟಿಕರ್ತ ಭಗವಂತ ಹಾಗು ತನ್ನ ಸೃಷ್ಟಿಯನ್ನು ಒಂದು ದಿನ ಸಂಹಾರ ಮಾಡುವವನೂ ಆತನೆ. ಸಂಹಾರದ ನಂತರ ಸೃಷ್ಟಿಯ ಪುನರ್ನಿರ್ಮಾಣ ಮಾಡುವವನೂ ಅವನೆ. 

ಜ್ಯೋತಿಷಾಮಪಿ ತಜ್ ಜ್ಯೋತಿಸ್ತಮಸಃ ಪರಮುಚ್ಯತೇ
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್                  ೧೭

ಜ್ಯೋತಿಷಾಮ್ ಅಪಿ ತತ್  ಜ್ಯೋತಿಃ ತಮಸಃ ಪರಮ್ ಉಚ್ಯತೇ
ಜ್ಞಾನಮ್  ಜ್ಞೇಯಮ್  ಜ್ಞಾನಗಮ್ಯಮ್  ಹೃದಿ ಸರ್ವಸ್ಯ ವಿಷ್ಠಿತಮ್ –ಅದು ಬೆಳಕುಗಳಿಗೆಲ್ಲ ಹಿರಿ ಬೆಳಕು. ಕತ್ತಲೆಯ ಆಚೆಗಿರುವಂಥದು. ಅದು ತಿಳಿವಿನ ರೂಪ. ತನ್ನನು ತಾನೇ ತಿಳಿವಂಥದು. ತಿಳಿವಿನಿಂದ ಪಡೆಯಬಹುದಾದಂಥದು. ಎಲ್ಲರ ಹೃದಯದಲ್ಲು ನೆಲೆಸಿರುವಂಥದು.

ಈವರೆಗೆ ಕೃಷ್ಣ ವಿವರಿಸಿದ ವಿಚಾರವನ್ನು ನಾವು ನಮ್ಮ ಧ್ಯಾನದಲ್ಲಿ ಕಾಣುವುದು ಕಷ್ಟ. ಅದಕ್ಕಾಗಿ ಕೃಷ್ಣ ಈ ಶ್ಲೋಕದಲ್ಲಿ ತನ್ನನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ. ಭಗವಂತ ಕತ್ತಲಿಲ್ಲದ ಬೆಳಕು. ಆ ಬೆಳಕಿಗೆ ಒಂದು ಅವಧಿ ಇಲ್ಲ. ಅದು ಅನಂತ. ಎಲ್ಲ ಬೆಳಕುಗಳಿಗೂ ಬೆಳಕು ಕೊಡುವ ಮಹಾಜ್ಯೋತಿ ಭಗವಂತ. ಭಗವಂತನನ್ನು ಧ್ಯಾನದಲ್ಲಿ ಕಾಣಬೇಕು ಎಂದು ಕಣ್ಣು ಮುಚ್ಚಿ ಕುಳಿತಾಗ ನಮಗೆ ನಮ್ಮ ಇಷ್ಟವಾದ ವಸ್ತು ಅಥವಾ ವ್ಯಕ್ತಿ ಕಾಣಬಹುದು. ಆಗ ಆ ವ್ಯಕ್ತಿಯೊಳಗೆ/ವಸ್ತುವಿನೊಳಗೆ ನಾವು ಭಗವಂತನನ್ನು ಕಾಣಲು ಪ್ರಯತ್ನಿಸಬೇಕು (ಏಕೆಂದರೆ ಭಗವಂತ ಸರ್ವಾಂತರ್ಯಾಮಿ-ಆತ ಎಲ್ಲವುದರ ಒಳಗೂ ಹೊರಗೂ ತುಂಬಿ ನಿಂತಿದ್ದಾನೆ). ನಂತರ "ಸೂರ್ಯನಲ್ಲಿ ಭಗವಂತನಿದ್ದಾನೆ, ಸೌರಶಕ್ತಿ ಆತನ ಕೊಡುಗೆ" ಎಂದು ಅನುಸಂಧಾನ ಮಾಡಬೇಕು. ನಂತರ ಸೌರಮಂಡಲದ ಮಧ್ಯದಲ್ಲಿ ಭಗವಂತನ ಪಾದವನ್ನು ಕಾಣುವ ಪ್ರಯತ್ನ ಮಾಡಬೇಕು. ಆ ಪಾದದ ಬೆರಳಿನ ತುದಿಯಿಂದ ಚಿಮ್ಮಿದ ಬೆಳಕು ನಮ್ಮ ಹೃದಯವನ್ನು ಪ್ರವೇಶಿಸಿ ಬೆಳಗುತ್ತಿರುವುದನ್ನು ಧ್ಯಾನದಲ್ಲಿ ನಾವು ಅನುಭವಿಸಬೇಕು. ಇದು ಧ್ಯಾನದಲ್ಲಿ ಹಂತ ಹಂತವಾಗಿ ನಾವು ಭಗವಂತನನ್ನು ಕಾಣುವ ಪ್ರಕ್ರಿಯೆ. ಭಗವಂತ ಈ ಜಗತ್ತಿನ ಎಲ್ಲ ಬೆಳಕುಗಳಿಗೂ ಬೆಳಕು ಕೊಟ್ಟವ. ನಮ್ಮ ಅಂತರಂಗವನ್ನು ಬೆಳಗಿಸುವ ಸಾಮರ್ಥ್ಯ ಇರುವುದು ಕೇವಲ ಭಗವಂತನಿಗೆ. ಭಗವಂತನೆಂಬ ಬೆಳಕು ಕತ್ತಲನ್ನು ಮೀರಿದ್ದು. ಅದು ಜ್ಞಾನಾನಂದಸ್ವರೂಪದ ಬೆಳಕು.  ಭಗವಂತನನ್ನು ಪೂರ್ಣ ತಿಳಿದವನು ಭಗವಂತನೊಬ್ಬನೆ. ನಾವು ಯಥಾಶಕ್ತಿ ಆತನನ್ನು ತಿಳಿಯುವ ಪ್ರಯತ್ನವನ್ನು ಮಾಡಬೇಕು. ಭಗವಂತ ನಮ್ಮ ಹೃದಯದಲ್ಲೇ ನೆಲೆಸಿದ್ದಾನೆ. ಆತ ಎಲ್ಲಕ್ಕಿಂತ ವಿಲಕ್ಷಣನಾಗಿ ನಮ್ಮ ಹೃತ್ಕಮಲ ಮಧ್ಯದಲ್ಲಿ ಸೂಕ್ಷಕ್ಕಿಂತ ಸೂಕ್ಷ್ಮನಾಗಿ ನೆಲೆಸಿದ್ದಾನೆ. ಇಂಥಹ ಭಗವಂತನನ್ನು ನಾವು ಭಕ್ತಿಪೂರ್ವಕ  ಜ್ಞಾನದಿಂದ ಮಾತ್ರ ಅರಿಯಲು ಸಾಧ್ಯ.    

ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ
ಮದ್ಭಕ್ತ ಏತದ್ ವಿಜ್ಞಾಯ ಮದ್ ಭಾವಾಯೋಪಪದ್ಯತೇ                  ೧೮

ಇತಿ ಕ್ಷೇತ್ರಮ್  ತಥಾ ಜ್ಞಾನಮ್  ಜ್ಞೇಯಮ್ ಚ ಕ್ತಮ್  ಸಮಾಸತಃ
ತ್ ಭಕ್ತಃ ಏತತ್  ವಿಜ್ಞಾಯ ಮತ್ ಭಾವಾಯ ಉಪದ್ಯತೇ –ಹೀಗೇ ‘ಕ್ಷೇತ್ರ’-‘ಜ್ಞಾನ’ ಮತ್ತು ‘ಜ್ಞೇಯ’ಗಳನ್ನು ಅಡಕವಾಗಿ ಹೇಳಿದಂತಾಯಿತು. ನನ್ನ ಭಕ್ತನಾದವನು ಇದನ್ನರಿತು ನನ್ನಲ್ಲೆ ನೆಲೆಸುತ್ತಾನೆ.

ಈ ಶ್ಲೋಕದಲ್ಲಿ ಕೃಷ್ಣ ಈವರೆಗೆ ಹೇಳಿದ ವಿಚಾರದ ಉಪಸಂಹಾರ ಮಾಡುತ್ತಾ ಹೇಳುತ್ತಾನೆ: “ಈ ತನಕ ಕ್ಷೇತ್ರದ ಬಗ್ಗೆ  ಜ್ಞಾನಸಾಧನಗಳ ಬಗ್ಗೆ,  ಈ ಜ್ಞಾನ ಸಾಧನಗಳಿಂದ ತಿಳಿದುಕೊಳ್ಳಬೇಕಾದ ಭಗವಂತನ ಬಗ್ಗೆ ಅಡಕವಾಗಿ(In a  nutshell) ಹೇಳಿದ್ದಾಯಿತು. ಸೃಷ್ಟಿ, ಸೃಷ್ಟಿಯಾದ ಪ್ರಪಂಚ, ಪ್ರಪಂಚ ಸೃಷ್ಟಿಯ ಬಗೆ, ಸ್ರಷ್ಟಾರನಾದ ಭಗವಂತ- ಇದನ್ನು ತಿಳಿದರೆ ಮತ್ತೆ ತಿಳಿಯಬೇಕಾದದ್ದು ಏನೂ ಉಳಿಯುವುದಿಲ್ಲ. ಪೂರ್ಣ ನಂಬಿಕೆಯಿಂದ, ಭಕ್ತಿಯಿಂದ  ಇದನ್ನು ಅರಿತ ಭಕ್ತ ನನ್ನನ್ನು ಸೇರುತ್ತಾನೆ” ಎಂದು. ಭಗವಂತನ ಬಗೆಗಿನ ಜ್ಞಾನ ಮತ್ತು ಭಕ್ತಿ ನಮ್ಮನ್ನು ಮೊಕ್ಷದತ್ತ ಕೊಂಡೊಯ್ಯಬಲ್ಲದು.