Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, July 9, 2011

Bhagavad Geeta Kannada Chapter-07 Shloka 29-30

ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ತಂತಿ  ಯೇ
ತೇ ಬ್ರಹ್ಮ ದ್ ವಿದುಃ ಕೃತ್ಸ್ನಮಧ್ಯಾತ್ಮಂ ಕರ್ಮ ಚಾಖಿಲಮ್ ೨೯

ಜರಾ ಮರಣ ಮೋಕ್ಷಾಯ ಮಾಮ್ ಆಶ್ರಿತ್ಯ ತಂತಿ  ಯೇ
ತೇ ಬ್ರಹ್ಮ ತ್  ವಿದುಃ ಕೃತ್ಸ್ನಮ್ ಅಧ್ಯಾತ್ಮಮ್  ಕರ್ಮ ಚ ಅಖಿಲಮ್-ಮುಪ್ಪು-ಸಾವುಗಳಿಂದ ಪಾರಾಗಲೆಂದು ನನ್ನನ್ನು ಮೊರೆಹೊಕ್ಕು ಸಾಧನೆಗೆಳಸುವವರು ಆ ‘ಬ್ರಹ್ಮತತ್ವ’ವನ್ನು ತಿಳಿಯಬಲ್ಲರು; ಸಮಗ್ರವಾದ ‘ಅಧ್ಯಾತ್ಮ’ವನ್ನು ಮತ್ತು ಎಲ್ಲ ‘ಕರ್ಮ’ ವನ್ನು ಕೂಡ.

ಭಗವಂತನೆಡೆಗೆ ತಿರುಗಿದವರು ಮುಪ್ಪು-ಸಾವಿನಿಂದ ಪಾರಾಗುವುದಕ್ಕೊಸ್ಕರ, ಈ ಸಂಸಾರ ಬಂಧದಿಂದ ಬಿಡುಗಡೆ ಬಯಸಿ ಭಗವಂತನ ಮೊರೆ ಹೋಗುತ್ತಾರೆ ಮತ್ತು ಸಾಧನೆ ಮಾಡುತ್ತಾರೆ. ಸಾಮಾನ್ಯವಾಗಿ ಏನನ್ನೂ ಬಯಸದೇ ಇರುವುದು ಶ್ರೇಷ್ಠ, ಆದರೆ ಬಯಸುವುದೇ ಜೀವನ ಧರ್ಮವಾಗಿದ್ದಾಗ ಇನ್ನೇನನ್ನೋ ಬಯಸದೆ ಮೋಕ್ಷವನ್ನು ಬಯಸುವುದು ಶ್ರೇಷ್ಠ. ಈ ಶ್ಲೋಕದಲ್ಲಿ ಕೃಷ್ಣ ಮೋಕ್ಷಕ್ಕೆ ಹೋಗುವ ಸಾಧಕನ ಪ್ರಯತ್ನ ಏನು, ಜ್ಞಾನದ ದಾರಿಯಲ್ಲಿ ಹೇಗೆ ಸಾಗಬೇಕು ಅನ್ನುವ ಅದ್ಭುತ ವಿಚಾರವನ್ನು ವಿವರಿಸುತ್ತಾನೆ.
ಅಧ್ಯಾತ್ಮದಲ್ಲಿ ತಿಳಿದುಕೊಳ್ಳಬೇಕಾದ ಸಂಗತಿ ‘ಬ್ರಹ್ಮ’ ಎನ್ನುತ್ತಾನೆ ಕೃಷ್ಣ. ಬ್ರಹ್ಮ ಎನ್ನುವ ಪದ ‘ಅವ ವೃದ್ದೋ’ ಅನ್ನುವ ದಾತುವಿನಿಂದ ಬಂದಿದೆ. ಅವತಿ ಎಂದರೆ ಎಲ್ಲಕ್ಕಿಂತ ದೊಡ್ಡದು ಅದು ಓಂ. ಅಂದರೆ ಅನಾಧಿನಿತ್ಯ, ಸರ್ವ ಗುಣಪೂರ್ಣ, ಸರ್ವಗತ, ಸರ್ವಸಮರ್ಥ ಭಗವಂತ ಬ್ರಹ್ಮ- ಅವನೇ ಓಂ. ಮುಖ್ಯವಾಗಿ ಈ ಶ್ಲೋಕದಲ್ಲಿ   “ತೇ ಬ್ರಹ್ಮ ದ್ ವಿದುಃ”  ಅಂದರೆ ‘ಎಲ್ಲಾ ಕಡೆ ಇರುವ ಭಗವಂತನನ್ನು ತಿಳಿಯುತ್ತಾರೆ’ ಎಂದರ್ಥ. ಭಗವಂತನ ಸರ್ವಗತತ್ವದ ಸಾಕ್ಷಾತ್ಕಾರವೇ ಬ್ರಹ್ಮಸಾಕ್ಷಾತ್ಕಾರ. ಬಿಂಬಸಾಕ್ಷಾತ್ಕಾರ ಅಂದರೆ ನಮ್ಮೊಳಗಿರತಕ್ಕಂತಹ ಅಣೋರಣೀಯವಾಗಿರುವ ಭಗವಂತನ ಸಾಕ್ಷಾತ್ಕಾರ. ಇಂತಹ ಬಿಂಬರೂಪಿ ಭಗವಂತನೇ ಇಡೀ ವಿಶ್ವದಲ್ಲಿ ವ್ಯಾಪ್ತನಾಗಿ ತುಂಬಿದ್ದಾನೆ ಎನ್ನುವುದು ಬ್ರಹ್ಮಸಾಕ್ಷಾತ್ಕಾರ. ಭಗವಂತನ ವ್ಯಾಪ್ತ ರೂಪವನ್ನು ನಾವು ಕಾಣಲು ಸಾಧ್ಯವಿಲ್ಲ. ಆದರೆ ಆ ವ್ಯಾಪ್ತಿಯ ಅರಿವು ಬಹಳ ಮುಖ್ಯ. ಸೌರಶಕ್ತಿಯಲ್ಲಿ ತುಂಬಿ ಇಡೀ ಪ್ರಪಂಚವನ್ನು ಬೆಳಗಿಸುವವನೂ ಅವನೆ, ನನ್ನೊಳಗಿದ್ದು ಬೆಳಗಿಸುವವನೂ ಅವನೆ ಎನ್ನುವ ಅರಿವು ಆತ್ಮ ಸಾಕ್ಷಾತ್ಕಾರ.  ಬಲಿಚಕ್ರವರ್ತಿಗೆ ಆದ ಅನುಭವ ಕೂಡಾ ಇದೇ. ನಿಮಗೆ ತಿಳಿದಿರುವಂತೆ ವಾಮನ ರೂಪಿ ಭಗವಂತ, ಮಹಾ ದಾನಿ ಬಲಿಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಶುಕ್ರಾಚಾರ್ಯರ ವಿರೋಧವನ್ನು ಲೆಕ್ಕಿಸದೆ ಬಲಿ ವಾಮನನಿಗೆ ದಾನ ಮಾಡಲು ಮುಂದಾಗುತ್ತಾನೆ. ಆಗ ವಾಮನನು ತನ್ನ ಮೊದಲ ಹೆಜ್ಜೆಯಿಂದ ಭೂಮಿಯನ್ನೂ ಮತ್ತು ಎರಡನೇ ಹೆಜ್ಜೆಯಿಂದ ಆಕಾಶವನ್ನು ಆವರಿಸಿದಾಗ , ಮೂರನೇ ಹೆಜ್ಜೆಗೆ ಬಲಿ ತನ್ನ ತಲೆಯನ್ನು ಅರ್ಪಿಸಿ ಪಾತಳವನ್ನು ಸೇರಿ ಉದ್ದಾರವಾಗುತ್ತಾನೆ. ಈ ಕಥೆಯನ್ನು ನಾವು ಸ್ವಲ್ಪ ಆಳವಾಗಿ ವಿಶ್ಲೇಷಿಸಿದರೆ ಕಥೆಯಲ್ಲಿ ಅಡಗಿರುವ ಸಾರ ತಿಳಿಯುತ್ತದೆ. ಸಂಸಾರ ಸಾಗರದಲ್ಲಿ ಮುಳುಗಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಬಲಿಗಳು. ಭಗವಂತನ ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆದ್ಯಾತ್ಮಿಕವಾಗಿ ಬಲಿಷ್ಟರಾಗಬೇಕು. ಉಪಾಸನೆಯಲ್ಲಿ ಪ್ರಮುಖವಾಗಿ ಮೂರೂ ಹೆಜ್ಜೆಗಳಿವೆ. ಮೊದಲನೆಯದು ಭಗವಂತನ ಪುಟ್ಟ (ವಾಮನ) ಮೂರ್ತಿಯನ್ನು ದೇವರು ಎಂದು ಆರಾದಿಸುವುದು. ಎರಡನೆಯದು ಉಪಾಸನೆ ಮಾಡುತ್ತಾ ಮಾಡುತ್ತಾ , ಭಗವಂತ ಕೇವಲ ಮೂರ್ತಿಯಲ್ಲಿ ಅಲ್ಲದೆ, ಇಡೀ ಲೋಕದಲ್ಲಿ ವ್ಯಾಪಿಸಿರುವ ಶಕ್ತಿ ಎಂದು ತಿಳಿಯುವುದು. ಪ್ರಮುಖವಾದ ಮೂರನೇ ಹೆಜ್ಜೆ- ಭಗವಂತ ಸರ್ವಾಂತರ್ಯಾಮಿ, ಆತ ನನ್ನೊಳಗೂ ತುಂಬಿದ್ದಾನೆ ಎಂದು ತಿಳಿದು, ಆ ಪರಶಕ್ತಿಗೆ ತಲೆಬಾಗುವುದು. ಆಗ ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ, ಹಾಗು ಭಗವಂತ ನಮ್ಮನ್ನು ಉದ್ದರಿಸುತ್ತಾನೆ. ಬಲಿ ಭಗವಂತ  ನನ್ನೊಳಗೆ ಅಂತರ್ಯಾಮಿ(ಆತ್ಮನಿ ವೇದನಂ) ಎಂದು ತಿಳಿದು ಭಗವಂತನಿಗೆ ತನ್ನನ್ನು ಅರ್ಪಿಸಿಕೊಂಡ(ಆತ್ಮ ನಿವೇದನಂ)ಅಥವಾ ತನ್ನ ತಲೆಯನ್ನು ಕೊಟ್ಟ. ಇದು ಮೂರು ಹೆಜ್ಜೆಯ ಪರಿಕಲ್ಪನೆ.
ಭಗವಂತ ಸರ್ವಗತ-ಸರ್ವಸಮರ್ಥ, ಅವನು ಎಲ್ಲವುದರ ಒಳಗೂ ಇದ್ದು ಎಲ್ಲವನ್ನು ಮಾಡುತ್ತಿದ್ದಾನೆ. ಅವನ ಅಧೀನವಾಗಿರತಕ್ಕ ಪ್ರತಿಬಿಂಬ ಈ ಜೀವ ಎನ್ನುವ ಸತ್ಯ ತಿಳಿದಾಗ ಎಲ್ಲ ಕರ್ಮದ ರಹಸ್ಯ ತಿಳಿಯುತ್ತದೆ. ಆದ್ದರಿಂದ ಅಧ್ಯಾತ್ಮದಲ್ಲಿ ತಿಳಿಯಬೇಕಾದ ಮೊದಲ ಮೂರು ವಿಚಾರ ಎಂದರೆ ಭಗವಂತನ ಪ್ರತಿಬಿಂಬವಾದ ಜೀವ, ಪರಿಪೂರ್ಣ ಮತ್ತು ಸರ್ವಸಮರ್ಥನಾದ ಬ್ರಹ್ಮ, ಆ ಅನಂತ ಸಾಮರ್ಥ್ಯದಿಂದ ನಡೆಯುವ ಕರ್ಮ. ಇದೇ ಬ್ರಹ್ಮ-ಕರ್ಮ-ಅಧಿಆತ್ಮ. ಈ ಮೂರು ವಿಚಾರವಲ್ಲದೆ ಇನ್ನೂ ಮೂರು ವಿಷಯಗಳನ್ನೂ ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಯೇ ವಿದುಃ
ಪ್ರಯಾಣಕಾಲೇSಪಿ ಮಾಂ ತೇ ವಿದುರ್ಯುಕ್ತಚೇತಸಃ           ೩೦

ಸ ಅಧಿ ಭೂತ ಅಧಿದೈವಮ್  ಮಾಮ್  ಸ ಅಧಿಯಜ್ಞಮ್   ಯೇ ವಿದುಃ
ಪ್ರಯಾಣ ಕಾಲೇಪಿ ಮಾಮ್  ತೇ ವಿದುಃ ಯುಕ್ತ ಚೇತಸಃ –ಯಾರು ‘ಅಧಿಭೂತ’ –‘ಅಧಿದೈವ’ದ ಜತೆಗೆ ನನ್ನನ್ನು ತಿಳಿಯುತ್ತಾರೆ ; ತಿಳಿದು ಕೊನೆಯ ಕ್ಷಣದಲ್ಲು ನನ್ನನ್ನು ನೆನೆಯುತ್ತಾರೆ, ನನ್ನಲ್ಲೆ ಬಗೆಯಿಟ್ಟ ಅಂಥವರೆ ನನ್ನನ್ನು ಬಲ್ಲವರು.

ಭಗವಂತನ ಅರಿವು ಮೂಡಬೇಕಾದರೆ ಮೊದಲು ಭೌತವಿಜ್ಞಾನ(ಅಧಿಭೂತ)ದ ಅರಿವಿರಬೇಕು. ಪಂಚ ಭೂತಗಳು, ಈ ದೇಹ, ಬ್ರಹ್ಮಾಂಡ, ಪಿಂಡಾಂಡ, ಇಲ್ಲಿರುವ ದ್ರವ್ಯಗಳ ಅರಿವು ಸಾಧನೆಯ ಮೊದಲ ಹೆಜ್ಜೆ. ಅಧಿಭೂತದ ನಂತರ ಅಧಿದೈವದ ಅರಿವು. ನಮ್ಮ ಪಂಚಭೂತಾತ್ಮಕವಾದ ಶರೀರದಲ್ಲಿ ‘ನೋಡುವುದು, ಕೇಳುವುದು, ಅನುಭವಿಸುವುದು’ ಇತ್ಯಾದಿ ಕ್ರಿಯೆ ನಿಯಮಬದ್ಧವಾಗಿ ಹೇಗೆ ನಡೆಯುತ್ತದೆ? ಜಡದಲ್ಲಿ ಕ್ರಿಯೆ ಇಲ್ಲ, ಬದಲಿಗೆ ಅದರ ಹಿಂದಿರುವ ಅಭಿಮಾನಿ ದೇವತೆಗಳು ಒಂದೊಂದು ಇಂದ್ರಿಯದಲ್ಲಿದ್ದು ಒಂದೊಂದು ಕ್ರಿಯೆಯನ್ನು ನಿಯಂತ್ರಿಸುತ್ತಿದ್ದಾರೆ-ಇದು ಅಧಿದೈವದ ತಿಳುವಳಿಕೆ. ಇಂತಹ ಸಹಸ್ರಾರು ದೇವತೆಗಳನ್ನು ನಿಯಂತ್ರಿಸುವ ಅಧ್ಯಕ್ಷ ಆ ಭಗವಂತ. ಈ ಪ್ರಪಂಚದಲ್ಲಿ ಅಥವಾ ಪಿಂಡಾಂಡದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆ ಒಂದು ಯಜ್ಞ. ಆ ಯಜ್ಞವನ್ನು ಅಧ್ಯಕ್ಷನಾಗಿ ನಡೆಸುವವನು ಅಧಿಯಜ್ಞ. ಆತ ಸಮಸ್ತ ದೇವತೆಗಳ ನಿಯಾಮಕನಾದ ಭಗವಂತ.
ಒಟ್ಟಿನಲ್ಲಿ ನಾವು ಆರು ವಿಚಾರವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ೧. ಅಧಿಭೂತ-ಭೌತಿಕ ಪ್ರಪಂಚ.; ೨. ಅಧಿಆತ್ಮ-ಜೀವಾತ್ಮ ; ೩. ಅಧಿದೈವ-ಸಮಸ್ತ ತತ್ವಾಭಿಮಾನಿ ದೇವತೆಗಳು ; ೪. ಅಧಿಯಜ್ಞ-ಸರ್ವ ನಿಯಾಮಕ ಭಗವಂತ; ೫. ಬ್ರಹ್ಮ ಸಾಕ್ಷಾತ್ಕಾರ -ಅಂತರ್ಯಾಮಿಯಾಗಿರುವ ಬಿಂಬ ರೂಪಿ ಭಗವಂತನೇ ಎಲ್ಲಾ ಕಡೆ ತುಂಬಿದ್ದಾನೆ ಎನ್ನುವ ಅರಿವು; ೬. ಎಲ್ಲಾ ಕರ್ಮಗಳೂ ಆ ಭಗವಂತನ ಅಧೀನವಾಗಿ ನಡೆಯುತ್ತವೆ ಎನ್ನುವ ಸತ್ಯ.
ಈ ಆರು ವಿಚಾರಗಳೂ ನಮ್ಮ ಜೀವನದ ಕೊನೆಯ ಕ್ಷಣದಲ್ಲಿ(ದೇಹ ತ್ಯಾಗ ಮಾಡುವಾಗ)ಕೂಡ ನಮ್ಮ ಮನದಲ್ಲಿ ಗಾಢವಾಗಿ ನಿಂತಿರಬೇಕು. ನಾವು ದೇಹ ತ್ಯಾಗ ಮಾಡುವಾಗ ನಮ್ಮ ಮನದಲ್ಲಿ ಯಾವುದು ಗಾಢವಾಗಿ ನಿಂತಿರುತ್ತದೋ ಅದು ನಮ್ಮ ಮುಂದಿನ ಜನ್ಮವನ್ನು ನಿರ್ಧರಿಸುತ್ತದೆ. ಇದಕ್ಕಾಗಿ ಜೀವಮಾನದಲ್ಲಿ ಭಗವಂತನ ಅರಿವು ಬಹಳ ಮುಖ್ಯ. “ಸಾಧನೆಯಲ್ಲಿ ಎಂದೂ ಯಾವುದೇ ಮೋಹಕ್ಕೊಳಗಾಗದೆ, ಅಂತ್ಯಕಾಲದಲ್ಲೂ ಸದಾ ಭಗವಂತನನ್ನು ಚಿಂತಿಸುವವನು ನನ್ನನ್ನು ಸೇರುತ್ತಾನೆ” ಎನ್ನುತ್ತಾನೆ ಕೃಷ್ಣ.
ಹೀಗೆ ಈ ಅಧ್ಯಾಯದಲ್ಲಿ ಜ್ಞಾನದ ವೈಭವವನ್ನು ನಮ್ಮ ಮುಂದೆ ತೆರೆದಿಟ್ಟ ಕೃಷ್ಣ, ಮುಂದಿನ ಅಧ್ಯಾಯದಲ್ಲಿ ಅಧಿಭೂತ, ಅಧಿದೈವ, ಅಧಿಆತ್ಮ, ಅಧಿಯಜ್ಞ, ಬ್ರಹ್ಮ, ಕರ್ಮ ಇದರ ವಿಸ್ತಾರವಾದ ವಿವರಣೆಯನ್ನು ವಿವರಿಸುತ್ತಾನೆ.                  

ಇತಿ ಸಪ್ತಮೋSಧ್ಯಾಯಃ
ಏಳನೆಯ ಅಧ್ಯಾಯ ಮುಗಿಯಿತು
*******

Bhagavad Geeta Kannada Chapter-07 Shloka 27-28

ಭಗವಂತನನ್ನು ಪೂರ್ಣವಾಗಿ ತಿಳಿಯುವುದು ಅಸಾಧ್ಯ, ಆದರೆ ತಮ್ಮ ಯಥಾಶಕ್ತಿ ಅರಿಯಲು ಎಲ್ಲರಿಗೂ  ಏಕೆ ಸಾಧ್ಯವಾಗುವುದಿಲ್ಲ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.  

ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ
ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂತಪ       ೨೭

ಇಚ್ಛಾ ದ್ವೇಷ ಸಮುತ್ಥೇನ ದ್ವಂದ್ವ ಮೋಹೇನ ಭಾರತ
ಸರ್ವ ಭೂತಾನಿ ಸಮ್ಮೋಮ್  ಸರ್ಗೇ ಯಾಂತಿ ಪರಂತಪ-ಓ ಅರಿಗಳನ್ನು ತರಿದವನೆ, ಭರತ ವಂಶದ ಕುಡಿಯೆ, ಒಲವು-ಹಗೆತನಗಳಿಂದ ಹುಟ್ಟಿದ ಸುಖ-ದುಃಖ ಮುಂತಾದ ದ್ವಂದ್ವಗಳ [ಜೀವೇಶ್ವರರು ಮುಂತಾದ ದ್ವಂದ್ವಗಳ] ತಪ್ಪು ಗ್ರಹಿಕೆಯಿಂದ ಎಲ್ಲ ಜೀವಿಗಳೂ ಹುಟ್ಟಿನಿಂದಲೆ ಸುಳ್ಳಿನ ಕೆಟ್ಟದಾರಿ  ಹಿಡಿದಿವೆ.

ನಾವು ಹುಟ್ಟುವಾಗಲೇ ಹುಟ್ಟಿನ ಜೊತೆಗೆ ‘ಇಚ್ಛಾ-ದ್ವೇಷ’ ಸೇರಿಸಿಕೊಂಡು ಹುಟ್ಟುತ್ತೇವೆ. ಶರೀರ ಬೆಳೆದಂತೆ ಅದು ಬೆಳೆಯುತ್ತಾ ಹೋಗುತ್ತದೆ. ಇದರಿಂದ ಇಬ್ಬಂದಿತನ(ದ್ವಂದ್ವ)ದ ಗೊಂದಲ. ಯಾವುದರಿಂದ ಸುಖ, ಯಾವುದರಿಂದ ದುಃಖ ಎಂದು ಗೊತ್ತಿಲ್ಲದೆ ದುಃಖವನ್ನೇ ಸುಖ ಎಂದು ತಿಳಿದು ಅದರ ಬೆನ್ನು ಹತ್ತಿ ಕೊನೆಗೆ ದುಃಖ ಬಂದಾಗ ಅಯ್ಯೋ ಎನ್ನುತ್ತೇವೆ. ಸುಳ್ಳನ್ನೇ ಸತ್ಯ ಎಂದು ನಂಬುವುದು, ಜ್ಞಾನ-ಅಜ್ಞಾನದ ಗೊಂದಲ, ಸತ್ಯ-ಅಸತ್ಯದ ಗೊಂದಲ, ಹೀಗೆ ದ್ವಂದ್ವ ಮೋಹಕ್ಕೆ ಒಳಗಾದವರನ್ನು ತಿದ್ದುವುದು ಬಹಳ ಕಷ್ಟ. ಇದು ಬರಿಯ ಮೋಹ ಮಾತ್ರವಲ್ಲ, ಇದೊಂದು ಸಮ್ಮೋಹ! ನಾನು ತಿಳಿದಿರುವುದೇ ಸರಿ ಎನ್ನುವ ಹಠ, ತನ್ನದೇ ಸರಿ ಎನ್ನುವ ಆಗ್ರಹ. ಇದರಿಂದ ಮನುಷ್ಯ ಸತ್ಯವನ್ನು ಅರಿಯದೆ ಅಜ್ಞಾನಿಯಾಗುತ್ತಾನೆ. ಹೀಗೆ ಅಜ್ಞಾನದಿಂದ ಮೋಹ, ಮೋಹದಿಂದ ಸಮ್ಮೋಹ. ಗೊತ್ತಿಲ್ಲದೇ ಇರುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸದೆ ಇದ್ದಾಗ ಅದರಿಂದ ವಿಪರೀತ ಜ್ಞಾನ-ನಂತರ ನಾನು ನಂಬಿದ್ದೇ ಸರಿ ಎನ್ನುವ ಆಗ್ರಹ. ಇದು ಸಾಮಾನ್ಯವಾಗಿ ನಾವು ಕಾಣುವ ಮನುಷ್ಯನ ದೌರ್ಬಲ್ಯ. ಈ ಪ್ರಪಂಚದಲ್ಲಿ ಪ್ರತಿಯೊಬ್ಬ ದಡ್ಡನೂ ಕೂಡಾ ತಾನು ಎಲ್ಲರಿಗಿಂತ ಬುದ್ಧಿವಂತ ಎಂದು ತಿಳಿದಿರುತ್ತಾನೆ!  ಆದ್ದರಿಂದ ಇಡೀ ಜಗತ್ತಿನ ವ್ಯವಹಾರವನ್ನು ತನ್ನ ಬುದ್ಧಿಯ ಮಾನದಂಡದಿಂದ ಅಳೆದು ದಾರಿತಪ್ಪುತ್ತಾನೆ. ಇದನ್ನು ಮಹಾಭಾರತದಲ್ಲಿ ಹೀಗೆ ಹೇಳಿದ್ದಾರೆ: “ಸರ್ವೋಹಿ ಮನ್ಯತೇ ಲೋಕ ಆತ್ಮಾನಂ ಬುದ್ಧಿಮತ್ತರಂ” ಎಂದು. ತಾನು ಬುದ್ಧಿವಂತ, ನನ್ನ ತೀರ್ಮಾನವೇ ಸರಿ, ಉಳಿದವರಿಗೆ ನನ್ನಷ್ಟು ತಿಳುವಳಿಕೆ ಇಲ್ಲ ಅನ್ನುವ ತಪ್ಪು ಕಲ್ಪನೆಯಿಂದ ಮನುಷ್ಯ ಸಮ್ಮೋಹದತ್ತ  ಸಾಗುತ್ತಾನೆ. ಈ ಅಪಾಯದಿಂದ ಯಾರು ಹೇಗೆ ಪಾರಾಗುತ್ತಾರೆ ಎನ್ನುವುದನ್ನು ಮುಂದಿನ ಶ್ಲೋಕ ವಿವರಿಸುತ್ತದೆ.
ಇಲ್ಲಿ ಕೃಷ್ಣ ಅರ್ಜುನನ್ನು ‘ಭಾರತ’ ಮತ್ತು ‘ಪರಂತಪ’ ಎನ್ನುವ ವಿಶೇಷಣಗಳಿಂದ ಸಂಬೋಧಿಸಿದ್ದಾನೆ. ಭಗವಂತನ ಅರಿವು ಪಡೆಯಬೇಕಾದರೆ ನಾವು ಭಾರತ-ಪರಂತಪರಾಗಬೇಕು. ಬೆಳಕಿನ ದಾರಿಯಲ್ಲಿ ರಥನಾಗಿ ಸಾಗಿ(ಭಾರತ), ಪರತತ್ವದ ನಿರಂತರ ಚಿಂತನೆ(ಪರಂತಪ) ಮಾಡಿದಾಗ ಮಾತ್ರ ನಮಗೆ ಭಗವಂತನ  ಛಾಯೆ ತಿಳಿದೀತು ಎನ್ನುವುದು ಈ ವಿಶೇಷಣದ ಅರ್ಥವಿಶೇಷ.  
       
ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್
ತೇ ದ್ವಂದ್ವ ಮೋಹನಿರ್ಮುಕ್ತಾ ಭಜಂತೇ  ಮಾಂ ದೃಢವ್ರತಾಃ    ೨೮

ಯೇಷಾಮ್ ತು ಅಂತಗತಮ್  ಪಾಪಮ್  ಜನಾನಾಮ್  ಪುಣ್ಯಕರ್ಮಣಾಮ್
ತೇ ದ್ವಂದ್ವ ಮೋಹ ನಿರ್ಮುಕ್ತಾಃ ಭಜಂತೇ  ಮಾಮ್  ದೃಢವ್ರತಾಃ –ಪುಣ್ಯವಂತರಾದ ಯಾವ ಜನರ ಪಾಪ ಕೊನೆಗೊಂಡಿದೆ ಅವರು ದ್ವಂದ್ವಗಳ ತಪ್ಪರಿವಿನಿಂದ ಕಳಚಿಕೊಂಡು ನಿಷ್ಠೆಯ ನೇಮದಿಂದ ನನ್ನನ್ನು ಸೇವಿಸುತ್ತಾರೆ.

ಹಿಂದಿನ ಶ್ಲೋಕದಲ್ಲಿ ಕೃಷ್ಣ ದ್ವಂದ್ವ ಮೋಹದ ಬಗ್ಗೆ ಹೇಳಿದ. ಇದಕ್ಕೆ ಮೂಲಭೂತವಾಗಿ ಎರಡು ಕಾರಣ. ಒಂದು ಜೀವ ಸ್ವರೂಪ(ಉದಾ: ದುರ್ಯೋಧನ, ಶಕುನಿ). ಇನ್ನೊಂದು ಪ್ರರಾಬ್ಧ ಕರ್ಮ(ಉದಾ: ಕರ್ಣ, ಅಜಾಮಿಳ, ಪಿಂಗಳೆ). ಜೀವ ಸ್ವರೂಪವೇ ಇಂತಹ ಗತಿಯಲ್ಲಿದ್ದರೆ ಅದಕ್ಕೆ ಯಾವುದೇ ಪರಿಹಾರ ಮಾರ್ಗವಿಲ್ಲ. ಆದರೆ ಯಾವುದೋ ಕಾರಣದಿಂದ ಕೆಟ್ಟ ದಾರಿಯಲ್ಲಿ ಸಾಗುವ ಸಾತ್ವಿಕ ಜೀವಕ್ಕೆ ಜ್ಞಾನದ ಮಾರ್ಗವಿದೆ. ಯಾವುದೋ ಒಂದು ದುರಂತದಿಂದ ಕೆಲವೊಮ್ಮೆ ಅಪರೋಕ್ಷ ಜ್ಞಾನಿಗಳೂ ದಾರಿ ತಪ್ಪುತ್ತಾರೆ. ಇಂತವರ ಪಾಪ ಕರ್ಮ ತೊಳೆದು ಹೋಗುವ ತನಕ ಅವರು ಸರಿ ದಾರಿಗೆ ಬರಲಾಗುವುದಿಲ್ಲ. ಆದರೆ ಕೆಲವೊಮ್ಮೆ ಜೀವನದಲ್ಲಿ ನಡೆಯುವ ಕೆಲವು ದುರಂತ ಅಥವಾ ಆಘಾತ ಇಂತವರನ್ನು ಮರಳಿ ಸತ್ಯದ ಮಾರ್ಗಕ್ಕೆ ಕರೆತರುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಭಾವನೆಯಿಂದ ದೇವರಲ್ಲಿ ಅಗಾಧವಾದ ಭಕ್ತಿ ಮೂಡುತ್ತದೆ.
ಪಶ್ಚಾತ್ತಾಪಕ್ಕಿಂತ ಶ್ರೇಷ್ಠವಾದ ಪ್ರಾಯಶ್ಚಿತ ಇನ್ನೊಂದಿಲ್ಲ. ಎಂತಹ ಪಾತಕವನ್ನೂ ಕೂಡ ಪಶ್ಚಾತ್ತಾಪದಿಂದ ತಿದ್ದಿಕೊಳ್ಳಬಹುದು. ನಾವು ನಮ್ಮ ಜೀವನದಲ್ಲಿ ನಮಗೆ ತಿಳಿದೋ ತಿಳಿಯದೆಯೋ ತಪ್ಪು ಮಾಡುತ್ತಿರುತ್ತೇವೆ. ಮಾನಸಿಕವಾಗಿ,  ದೈಹಿಕವಾಗಿ, ವಾಚಕವಾಗಿ ನಮಗೆ ತಿಳಿಯದೆಯೇ ನಮ್ಮಿಂದ ತಪ್ಪು ನಡೆಯುತ್ತಿರುತ್ತದೆ. ಆದರೆ ತಪ್ಪಿನ ಅರಿವಾದಾಗ ಹೃದಯದಿಂದ ಮೂಡುವ ಪಶ್ಚಾತ್ತಾಪ ಇಂತಹ ತಪ್ಪಿಗೆ ಪ್ರಾಯಶ್ಚಿತ. ವೈದಿಕ ಸಂಪ್ರದಾಯದಲ್ಲಿ ದೇವತಾರ್ಚನೆಯ ನಂತರ ನಮಸ್ಕಾರ ಮಾಡುವಾಗ ಹೇಳಿಕೊಳ್ಳುವ ಶ್ಲೋಕ ಒಂದಿದೆ.
ಪಾಪೋಽಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವ |
ತ್ರಾಹಿ ಮಾ ಕೃಪಯಾ ದೇವ ಸರ್ವಪಾಪಹರೋ ಭವ ||
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ |
ತಸ್ಮಾತ್ ಕಾರುಣ್ಯಭಾವೇನ ರಕ್ಷ ಮಾಂ ಜಗದೀಶ್ವರ ||
 ಇಲ್ಲಿ ನಾವು ಆ ಭಗವಂತನಲ್ಲಿ “ನಾನು ತಿಳಿದೋ ತಿಳಿಯದೆಯೋ ಮಾಡಿದ ತಪ್ಪನ್ನು ಕ್ಷಮಿಸು” ಎಂದು ಬೇಡುತ್ತೇವೆ. “ನಾನು ಹುಟ್ಟಿನಿಂದ ಪಾಪವನ್ನು ಹೊತ್ತು ಬಂದಿದ್ದೇನೆ, ಅದರಿಂದ ತಪ್ಪು ಮಾಡುತ್ತಿದ್ದೇನೆ, ಆದ್ದರಿಂದ ನನ್ನನ್ನು ಕ್ಷಮಿಸಿ ಈ ಪಾಪದಿಂದ ನನ್ನನ್ನು ಪಾರು ಮಾಡು” ಎಂದು ದೇವರಲ್ಲಿ ಶರಣಾಗುವುದು ಈ ಶ್ಲೋಕದ ಮೂಲಕ ನಾವು ದೇವರಲ್ಲಿ ಮಾಡುವ ಪ್ರಾರ್ಥನೆ. ಇಲ್ಲಿ ಕೃಷ್ಣ ಹೇಳುತ್ತಾನೆ “ತೇ ದ್ವಂದ್ವ ಮೋಹನಿರ್ಮುಕ್ತಾ ಭಜಂತೇ  ಮಾಂ ದೃಢವ್ರತಾಃ” ಎಂದು. ಅಂದರೆ  ಒಮ್ಮೆ ಇಂತಹ ಪಾಪ ಕರ್ಮದಿಂದ ಆಚೆ ಬಂದರೆ, ಎಲ್ಲಾ ದ್ವಂದ್ವ ಮೋಹಗಳೂ ಪರಿಹಾರವಾಗಿ ಭಗವಂತನಲ್ಲಿ ಗಾಢವಾದ ಭಕ್ತಿ ನೆಲೆ ನಿಲ್ಲುತ್ತದೆ. ಈ ರೀತಿ ಪಾಪದ ಅರಿವಾಗಿ ಪಶ್ಚಾತ್ತಾಪದಿಂದ ಭಗವಂತನೆಡೆಗೆ ತಿರುಗಿದವರು ಬಹಳ ಬೇಗ ಭಗವಂತನ ದಾರಿಯಲ್ಲಿ ಸಾಗುತ್ತಾರೆ.

Wednesday, July 6, 2011

Bhagavad Geeta in Kannada Chapter-07 Shloka 24-26


ಭಗವಂತನನ್ನು ತಿಳಿಯಬೇಕು ಎಂದು ಭಕ್ತಿ ಮತ್ತು ಜ್ಞಾನ ಮಾರ್ಗದಲ್ಲಿ ಸಾಗಿದವರಿಗೂ ಕೂಡ ಭಗವಂತನನ್ನು ತಿಳಿಯುವುದು ಎಷ್ಟು ಕಷ್ಟ ಎನ್ನುವುದನ್ನು ಕೃಷ್ಣ ಈ ಅಧ್ಯಾಯದಲ್ಲಿ ಇನ್ನೂ ವಿವರಿಸುತ್ತಾನೆ.    

ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ
ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಮ್    ೨೪

ಅವ್ಯಕ್ತಮ್  ವ್ಯಕ್ತಿಮ್ ಅಪನ್ನಮ್  ಮನ್ಯಂತೇ ಮಾಮ್ ಅಬುದ್ಧಯಃ
ಪರಮ್  ಭಾವಮ್ ಅಜಾನಂತಃ ಮಮ ಅವ್ಯಯಮ್ ಅನುತ್ತಮಮ್-ಅಳಿವಿರದ, ಮಿಗಿಲಿರದ ನನ್ನ ಮಹಿಮೆಯ ಹಿರಿಮೆಯನ್ನರಿಯದ  ತಿಳಿಗೇಡಿಗಳು ದೇಹದಿಂದ ಹುಟ್ಟಿಬರದ ನನ್ನನ್ನು ಹುಟ್ಟಿಬಂದೆ ಎಂದು [ಭಗವಂತನೇ ಜೀವಭಾವ ಪಡೆದನೆಂದು ] ತಿಳಿದುಬಿಡುತ್ತಾರೆ.
ಸಾಮಾನ್ಯವಾಗಿ ಭಗವಂತನ ಬಗೆಗೆ ಸರಿಯಾದ ತಿಳುವಳಿಕೆ ಗಳಿಸುವುದು ಕಷ್ಟ. ಆದರೆ ತಪ್ಪು ಗ್ರಹಿಕೆ ಸುಲಭ. ಇಲ್ಲಿ ಕೃಷ್ಣ ಹೇಳುತ್ತಾನೆ “ನಾನು ವಸ್ತುತಃ ಅವ್ಯಕ್ತ” ಎಂದು. ಜೀವ ವ್ಯಕ್ತ ಆಗುವುದು ಅದಕ್ಕೆ ಪಾಂಚಭೌತಿಕ ಶರೀರ ಬಂದಾಗ. ಆದ್ದರಿಂದ ಸ್ಥೂಲವಾದ ಶರೀರವುಳ್ಳದ್ದನ್ನು ವ್ಯಕ್ತ ಎನ್ನುತ್ತಾರೆ. ಭಗವಂತನಿಗೆ ಒಂದು ದಿನ ನಾಶವಾಗುವ ಪಾಂಚಭೌತಿಕ ಶರೀರ ಇಲ್ಲ- ಆತ ಸರ್ವದಾ ಅವ್ಯಕ್ತ. ಇಂತಹ ಅವ್ಯಕ್ತ ಭಗವಂತ ತನ್ನ ಅವತಾರದಲ್ಲಿ  ತನ್ನ ಸ್ವತಃ ಇಚ್ಛೆಯಿಂದ ಒಂದು ರೂಪದಲ್ಲಿ  ಎಲ್ಲರಿಗೂ ಕಾಣಿಸಿಕೊಳ್ಳುತ್ತಾನೆ.  ಶಾಸ್ತ್ರೀಯವಾಗಿ ಭಗವಂತನ ಸ್ವರೂಪದ ಅರಿವಿಲ್ಲದ ಜನ ತಮಗೆ ಕಾಣುವ ಅವತಾರರೂಪಿ ಭಗವಂತನಿಗೆ ತಮ್ಮಂತೆ ಪಾಂಚಭೌತಿಕ ಶರೀರವಿದೆ ಮತ್ತು ಭಗವಂತ ಒಂದು ದಿನ ದೇಹತ್ಯಾಗ ಮಾಡುತ್ತಾನೆ ಎಂದು ತಿಳಿಯುತ್ತಾರೆ. ವ್ಯಕ್ತವಾದ, ಸ್ಥೂಲವಾದ, ನಶ್ವರವಾದ, ಪ್ರಾಕೃತವಾದ ಶರೀರ ಇಲ್ಲದ ಭಗವಂತನನ್ನು ಅಂತಹ ಸ್ಥೂಲವಾದ ಶರೀರದೊಳಗೆ ಬದ್ಧನಾಗಿರುವವನು ಎನ್ನುವ ಅರ್ಥದಲ್ಲಿ ಅವರು ತಿಳಿದುಕೊಳ್ಳುತ್ತಾರೆ. “ಹೀಗೆ ತಿಳಿದುಕೊಳ್ಳುವವರು ಬುದ್ಧಿಶೂನ್ಯರು” ಎನ್ನುತ್ತಾನೆ ಕೃಷ್ಣ.    

ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ    
ಮೂಢೋSಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಮ್   ೨೫

ಅಹಮ್ ಪ್ರಕಾಶಃ ಸರ್ವಸ್ಯ ಯೋಗ ಮಾಯಾ ಸಮಾವೃತಃ         
ಮೂಢಃ ಅಮ್ ನ ಅಭಿಜಾನಾತಿ ಲೋಕಃ  ಮಾಮ್ ಅಮ್ ಅವ್ಯಯಮ್-ನನ್ನ ಸಾಮರ್ಥ್ಯ ಮತ್ತು ಪ್ರಕೃತಿಯ ಮಾಯೆಯಿಂದ ಮುಚ್ಚಿಕೊಂಡಿರುವ ನಾನು ಎಲ್ಲರಿಗೂ ಬಯಲಾಗಲಾರೆ. ಹುಟ್ಟಿರದ ಸಾವಿರದ ನನ್ನನ್ನು ಈ ತಿಳಿಗೇಡಿ ಮಂದಿ ತಿಳಿಯಲಾರರು.

ಭಗವಂತ ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ. ಆತನ ಅನಂತ ಗುಣದ ಸ್ಪಷ್ಟ ಚಿತ್ರ ಯಾರಿಗೂ ಬರುವುದು ಸಾಧ್ಯವಿಲ್ಲ. ಮನುಷ್ಯನ ಚಿಂತನೆಗೆ ಒಂದು ಮಿತಿ ಇದೆ, ಆದರೆ ಭಗವಂತ ಆ ಮಿತಿಯ ಒಳಗಿಲ್ಲ. ಆದ್ದರಿಂದ ನಮ್ಮ ಬುದ್ಧಿ ಆತನ ಅನಂತವಾದ ಜ್ಞಾನವನ್ನು, ಅನಂತವಾದ ಶಕ್ತಿಯನ್ನೂ, ಆನಂತ ರೂಪವನ್ನು ಗ್ರಹಿಸಲಾರದು. ನಾವು ಇಚ್ಛೆಪಟ್ಟಾಗ ಭಗವಂತ ಕಾಣುವುದಿಲ್ಲ. ಆದರೆ ಕಾಲ ಪಕ್ವವಾದಾಗ ತನ್ನ ಇಚ್ಛೆಯಂತೆ  ಭಗವಂತ ಜ್ಞಾನಾನಂದ ಸ್ವರೂಪವಾದ ಮನಸ್ಸು ಮತ್ತು ಜ್ಞಾನಾನಂದ ಸ್ವರೂಪವಾದ ಇಂದ್ರಿಯಗಳಿಗೆ ಯಥಾಶಕ್ತಿ ಗೋಚರವಾಗಬಲ್ಲ.
ಈ ಲೋಕದಲ್ಲಿ ಅಜ್ಞಾನದ ಮೋಹಕ್ಕೆ ಒಳಗಾದ ಜೀವಜಾತ  ಎಂದೂ ಭಗವಂತನನ್ನು ಗ್ರಹಿಸಲಾರದು. ಜೀವನಿಗೂ ಮತ್ತು ಭಗವಂತನಿಗೂ ನಡುವೆ ಇರುವ ಅಜ್ಞಾನವೆಂಬ ಮಾಯಾ ಪರದೆಯಿಂದಾಗಿ ಭಗವಂತ ನಮಗೆ ಕಾಣುವುದಿಲ್ಲ.     

ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ         
ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ ೨೬

ವೇದ ಅಹಮ್ ಸಮತೀತಾನಿ ವರ್ತಮಾನಾನಿ ಚ ಅರ್ಜುನ  
ಭವಿಷ್ಯಾಣಿ ಚ ಭೂತಾನಿ ಮಾಮ್  ತು ವೇದ ನ ಕಶ್ಚನ- ಅರ್ಜುನ , ನಾನು ತಿಳಿದಿದ್ದೇನೆ-ಹಿಂದಿದ್ದ ಜೀವಿಗಳನ್ನು, ಈಗಿರುವವರನ್ನು,ಮುಂದೆ ಬರುವವರನ್ನು ಕೂಡ. ನನ್ನನ್ನು ಮಾತ್ರ ಯಾರೂ ತಿಳಿದಿಲ್ಲ.

ಜೀವ ಮತ್ತು ಭಗವಂತನ ನಡುವಿನ ವೆತ್ಯಾಸವನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತಾ ಕೃಷ್ಣ ಹೇಳುತ್ತಾನೆ “ ಹಿಂದೆ ಆಗಿ ಹೋದ ಭೂತಗಳು, ಈಗ ಇರುವ ಭೂತಗಳು, ಮತ್ತು ಮುಂದೆ ಬರಲಿರುವ ಭೂತಗಳು ಈ ಎಲ್ಲವನ್ನೂ ನಾನು ತಿಳಿದಿದಿದ್ದೇನೆ” ಎಂದು. ಇಲ್ಲಿ ಭೂತ ಎನ್ನುವ ಪದಕ್ಕೆ ಅನೇಕ ಅರ್ಥವಿದೆ. ಪಂಚಭೂತಗಳು, ಅದರಿಂದ ನಿರ್ಮಾಣವಾದ ಬ್ರಹ್ಮಾಂಡ, ಅದರಿಂದ ರೂಪುಗೊಂಡ ಸಮಸ್ತ ವಸ್ತುಗಳು ಮತ್ತು ಸಮಸ್ತ ಜೀವಜಾತಗಳು ಎಲ್ಲವೂ ಭೂತಗಳು. ಈ ಹಿಂದೆ ಸೃಷ್ಟಿಯಾದ ಅನಂತ ಬ್ರಹ್ಮಾಂಡ, ಈಗಿರುವ ಬ್ರಹ್ಮಾಂಡ, ಮುಂದೆ ಸೃಷ್ಟಿಯಾಗಲಿರುವ ಅನಂತ ಬ್ರಹ್ಮಾಂಡ, ಹಿಂದೆ ಇದ್ದ ಅನಂತ ಜೀವಜಾತಗಳು, ಈಗಿರುವ ಅನಂತ ಜೀವಜಾತಗಳು ಮತ್ತು ಮುಂದೆ ಸೃಷ್ಟಿಯಾಗಲಿರುವ ಅನಂತ ಜೀವಜಾತಗಳನ್ನು ತಿಳಿದವನು ಆ ಅನಂತಕೋಟಿ ಬ್ರಹ್ಮಾಂಡ ನಾಯಕ ಭಗವಂತನೊಬ್ಬನೆ. ಕೃಷ್ಣ ಹೇಳುತ್ತಾನೆ “ಮಾಮ್  ತು ವೇದ ನ ಕಶ್ಚನ” ಎಂದು. ಅಂದರೆ ‘ನನ್ನನ್ನು ಬಿಟ್ಟು ಇನ್ನ್ಯಾರೂ ಇದನ್ನು ಪೂರ್ಣವಾಗಿ ತಿಳಿದಿಲ್ಲ’ . ಭಗವಂತನನ್ನು ಪೂರ್ಣವಾಗಿ ತಿಳಿದವರಿಲ್ಲ ಹಾಗು ತಿಳಿಯುವುದು ಸಾಧ್ಯವಿಲ್ಲ. ಆತ ಸ್ವತಂತ್ರ, ಪೂರ್ಣ ಮತ್ತು ನಿತ್ಯ ಸತ್ಯ. ಜೀವ ಅಪೂರ್ಣ, ಅಸ್ವತಂತ್ರ ಮತ್ತು ಅನಿತ್ಯಸತ್ಯ.        

Friday, July 1, 2011

Bhagavad Geeta Kannada Chapter-07 Shloka 20-23


ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇSನ್ಯದೇವತಾಃ
ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ೨೦

ಕಾಮೈಃ ತೈಃ ತೈಃ ಹೃ ಜ್ಞಾನಾಃ ಪ್ರಪದ್ಯಂತೇ ಅನ್ಯ ದೇವತಾಃ
ತಮ್ ತಮ್  ನಿಯಮಮ್ ಆಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ-ಯಾವ ಯಾವುದೋ ಬಯಕೆಗಳಿಂದ ಅರಿವು ಅಳಿದವರು ತಮ್ಮ ಸ್ವಭಾವ –ಸಂಸ್ಕಾರಗಳಿಗೆ ತಕ್ಕಂತೆ ಆಯಾ ಕಟ್ಟಲೆಗಳಿಗೆ ಕಟ್ಟುಬಿದ್ದು ಬೇರೆ ಬೇರೆ ದೇವತೆಗಳಿಗೆ ಮೊರೆಹೋಗುತ್ತಾರೆ.

ಕೃಷ್ಣ ಹಿಂದಿನ ಅಧ್ಯಾಯಗಳಲ್ಲಿ ಹೇಳಿರುವ ವಿಚಾರವನ್ನು ಮತ್ತೆ ಒತ್ತು ಕೊಟ್ಟು ಇಲ್ಲಿ ವಿವರಿಸುತ್ತಾನೆ. ಮನುಷ್ಯ ಅಧ್ಯಾತ್ಮ ಮಾರ್ಗದಿಂದ ದೂರ ಸರಿಯಲು ಮೂಲ ಕಾರಣ ಅವನ ಹುಚ್ಚು ಬಯಕೆಗಳು. ಇದು ನಮ್ಮ ಅರಿವಿಗೆ ದೊಡ್ಡ ಅಡ್ಡಗೋಡೆ. ಬಯಕೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ, ಮನುಷ್ಯ ಅಧ್ಯಾತ್ಮದ ಬೆನ್ನುಹತ್ತುವ ಬದಲು ಬಯಕೆಗಳ ಬೆನ್ನು ಹತ್ತುತ್ತಾನೆ. ಬಯಕೆಗಳ ಈಡೇರಿಕೆಗೋಸ್ಕರ ಮಾಡಬಾರದ್ದನ್ನು ಮಾಡುತ್ತಾ ಹೋಗುತ್ತಾನೆ ಮತ್ತು  ಅಧಃಪಾತವನ್ನು ಹೊಂದುತ್ತಾನೆ.
ಬಯಕೆಗಳ ಬೆನ್ನುಹತ್ತಿದಾಗ ಬಯಕೆ ಅರಿವನ್ನು ನಿಯಂತ್ರಿಸಲಾರಂಭಿಸುತ್ತದೆ. ಈ ಸಮಯದಲ್ಲಿ ಯಾರಾದರೂ ‘ನಿನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ದೇವಾಲಯಕ್ಕೆ ಹೋಗು’ ಎಂದರೆ ಆತ ಅಲ್ಲಿಗೆ ಹೋಗುತ್ತಾನೆ . ಹೀಗೆ ಇಷ್ಟಾರ್ಥ ಸಿದ್ಧಿ ಎಲ್ಲಿ ಸಾಧ್ಯ ಎಂದು ಸುದ್ದಿ ಬಂತೋ ಅಲ್ಲಿಗೆ ಭೇಟಿ ಕೊಡಲಾರಂಭಿಸುತ್ತಾನೆ. ಇದರಿಂದಾಗಿ  ಆತ ಮೂಲ ಅಧ್ಯಾತ್ಮ ತತ್ವವನ್ನು ಬಿಟ್ಟು, ಏಕಭಕ್ತಿಯಿಂದ ದೂರ ಸರಿದು, ಎಲ್ಲಿ ತನ್ನ ಅಪೇಕ್ಷೆ ಈಡೇರುತ್ತದೋ ಅಲ್ಲಿ, ಆಯಾ ದೇವತೆಗಳನ್ನು ತನ್ನ ಭೌತಿಕ ಬಯಕೆಗಳನ್ನು ಈಡೇರಿಸುವಂತೆ ಬೇಡಿ ಪೂಜಿಸಲಾರಂಭಿಸುತ್ತಾನೆ. ಅದಕ್ಕಾಗಿ ಯಾವುದ್ಯಾವುದೋ ವೃತಾಚರಣೆ ಮಾಡಲಾರಂಭಿಸುತ್ತಾನೆ. ಇದರಿಂದಾಗಿ ಆತ ನಿಜವಾದ ಭಗವಂತನ ಉಪಾಸನೆಯ ಮಾರ್ಗದಿಂದ ದೂರ ಸರಿಯುತ್ತಾನೆ. ಏಕಭಕ್ತಿ ಉಪಾಸನೆಯಿಂದ  ಈ  ರೀತಿಯ ಅಲ್ಪ ಬಯಕೆ ಎಂದೂ ಈಡೇರುವುದಿಲ್ಲ. ಏಕೆಂದರೆ  ಯದನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂಭಕ್ತರ ಸಂಪತ್ತನ್ನು ಇಲ್ಲದಂತೆ ಮಾಡಿ, ಪರೀಕ್ಷಿಸಿ, ನಂತರ ಅವರನ್ನು ಉದ್ಧರಿಸುವುದೇ ಭಗವಂತನ  ಸಂಕಲ್ಪ. ನಮಗೆ ಏನು ಬೇಕು ಎನ್ನುವುದು ನಮಗಿಂತ ಚನ್ನಾಗಿ ಭಗವಂತನಿಗೆ ಗೊತ್ತು. ಆತನ ಅನುಗ್ರಹ ಮಹಾ ಪ್ರಸಾದ. ಈ ಅರಿವು ಬಯಕೆಗಳ ಬೆನ್ನು ಹತ್ತಿದವರಿಗೆ ಇರುವುದಿಲ್ಲ ಮತ್ತು ಇದರಿಂದ ಅವರು ಭಗವಂತನ ಅನುಗ್ರಹದಿಂದ ವಂಚಿತರಾಗುತ್ತಾರೆ.
ಏಕೆ ಹೀಗೆ? ಏಕೆ ಎಲ್ಲರೂ ಒಂದೇ ರೀತಿಯಾಗಿ ಭಗವಂತನನ್ನು ಪೂಜಿಸುವುದಿಲ್ಲ? ಇದಕ್ಕೆ ಕೃಷ್ಣ ಹೇಳುತ್ತಾನೆ “ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ”.   “ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಪ್ರಕೃತಿ ಇದೆ” ಎಂದು.  [ಇಲ್ಲಿ ಹೇಳಿರುವ ‘ಪ್ರಕೃತಿ’ ಅಂದರೆ ಒಂದು ‘ಜೀವ ಸ್ವಭಾವ’ ಹಾಗು ಇನ್ನೊಂದು ‘ಪರಿಸರ ಮತ್ತು ಹುಟ್ಟಿಬಂದ ಮನೆತನದ ಸಂಸ್ಕಾರ(genes and environmental force)’ ] ಮನುಷ್ಯನ ಈ ಜೀವಸ್ವಭಾವವನ್ನು ಎಂದೂ ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ತರ. ಈ ಕಾರಣದಿಂದ ಏಕರೂಪ ಸ್ವಭಾವ ಈ ಜಗತ್ತಿನಲ್ಲಿಲ್ಲ. ಈ ಭೂಮಿಯ ಮೇಲೆ  ಎಷ್ಟೋ  ಭಾರಿ ಭಗವಂತ ಮತ್ತು ಅನೇಕ ಮಹಾತ್ಮರು ಅವತರಿಸಿ ಬಂದು ಸತ್ಯವನ್ನು ಭೋಧನೆ ಮಾಡಿದರೂ ಕೂಡಾ, ಏಕ ಧರ್ಮ ಸ್ಥಾಪನೆ ಆಗಲಿಲ್ಲ. ಕಾರಣ ಏನೆಂದರೆ ಸ್ವತಃ ಭಗವಂತನೇ ಬಂದು ಹೇಳಿದರೂ ಕೂಡಾ-ಸತ್ಯವನ್ನು ತಿಳಿಯಬಲ್ಲ ಜೀವಸ್ವಭಾವವುಳ್ಳ ಜೀವ ಮಾತ್ರ ಆ ಸತ್ಯವನ್ನು ಗ್ರಹಿಸಿ ಒಪ್ಪುತ್ತದೆ. ಉಳಿದ ಜೀವಗಳು ಈ ಸತ್ಯವನ್ನು ಗ್ರಹಿಸಲಾರವು. ಇದು ತೀರಾ ಸಹಜ. ಆದ್ದರಿಂದ ಕೃಷ್ಣ ಹೇಳುತ್ತಾನೆ “ಸತ್ಯವನ್ನು ಒಪ್ಪುವುದಕ್ಕೂ ಕೂಡಾ ಜೀವಕ್ಕೆ ಯೋಗ್ಯತೆ ಬೇಕು” ಎಂದು. ಹೀಗೆ  ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಅವರವರಿಗೆ ಇಷ್ಟವಾಗುವ ದೇವತಾ ಉಪಾಸನೆ ಪ್ರಪಂಚದಲ್ಲಿ ನಡೆಯುತ್ತದೆ. ಈ ಕಾರಣದಿಂದ ಪ್ರಪಂಚದಲ್ಲಿ ಎಲ್ಲರೂ ನಿಜವಾದ ಭಗವದ್ ಭಕ್ತರಾಗಲು ಸಾಧ್ಯವಿಲ್ಲ, ಅದು ಕೇವಲ ಸಾತ್ವಿಕ ಚೇತನಕ್ಕೆ ಮಾತ್ರ ಸಾಧ್ಯ.          

ಯೋಯೋ ಯಾಂಯಾಂ ತನುಂ ಭಕ್ತಃ ಶ್ರದ್ಧಯಾSರ್ಚಿತುಮಿಚ್ಛತಿ
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್     ೨೧

ಯಃ ಯಃ  ಯಾಮ್ ಯಾಮ್  ತನುಮ್  ಭಕ್ತಃ ಶ್ರದ್ಧಯಾರ್ಚಿತುಮ್ ಇಚ್ಛತಿ
ತಸ್ಯ ತಸ್ಯಚಲಾಮ್  ಶ್ರದ್ಧಾಮ್  ತಾಮ್ ಏವ ವಿದಧಾಮಿ ಅಹಮ್-ಯಾರು ಯಾವ ದೇವತಾರೂಪವನ್ನು ಭಕ್ತಿಯಿಟ್ಟು ಶ್ರದ್ಧೆಯಿಂದ ಪೂಜಿಸಬಯಸುತ್ತಾನೆ ಅವರಿಗೆ ಅಂಥದೇ ಶ್ರದ್ಧೆಯನ್ನು ನಾನು ಗಟ್ಟಿಗೊಳಿಸುತ್ತೇನೆ.

ಭಗವಂತನೆಂಬ ಅಸಾಧಾರಣ ಶಕ್ತಿ ತನ್ನ ದೇವತಾ ಪರಿವಾರದೊಂದಿಗೆ ಈ ಜಗತ್ತನ್ನು ನಿಯಂತ್ರಿಸುತ್ತಿದೆ ಎನ್ನವ ಎಚ್ಚರ ಇಲ್ಲದೆ, ಭಗವಂತನ ಮೇಲಿನ  ಏಕಭಕ್ತಿ ಬಿಟ್ಟು, ಕೇವಲ ಒಂದು ದೇವತೆಯನ್ನು ಶ್ರದ್ಧೆಯಿಂದ  ಪೂಜೆ ಮಾಡಲು ಆಯ್ಕೆ ಮಾಡಿಕೊಂಡವರಿಗೆ –“ಯಾವ ದೇವತೆಯ ಮೇಲೆ ಭಕ್ತಿ ಇದೆಯೋ ಅದನ್ನೇ ಆಚಲವಾಗಿಸುತ್ತೇನೆ” ಎನ್ನುತ್ತಾನೆ ಕೃಷ್ಣ!  
ಮನುಷ್ಯ ಶ್ರದ್ಧೆಯ ಸ್ವರೂಪ. ಯಾವುದರ ಬಗೆಗೆ ಶ್ರದ್ಧೆ ಮೂಡಿತೋ ಅದೇ ಅವನಲ್ಲಿ ಬೆಳೆದುಕೊಂಡು ಹೋಗುತ್ತದೆ. ಯಾವ ದೇವತಾ ಶಕ್ತಿಯನ್ನು ಶ್ರದ್ಧೆಯಿಂದ ಆರಾಧನೆ ಮಾಡಿದೆವೋ ಅದೇ ನಂಬಿಕೆ ನಮ್ಮಲ್ಲಿ ಗಟ್ಟಿಯಾಗುತ್ತಾ ಹೋಗುತ್ತದೆ ಮತ್ತು  ಆ ಶ್ರದ್ಧೆ ನಿಶ್ಚಲವಾಗುತ್ತದೆ. ಅದನ್ನು ಬದಲಿಸುವುದು ಬಹಳ ಕಷ್ಟ. ಈ ಕಾರಣಕ್ಕಾಗಿ ನಾವು ದೇವರ ಬಗ್ಗೆ ತಿಳಿದುಕೊಳ್ಳಬೇಕು. ದೇವರು ಮತ್ತು ದೇವತಾ ಪರಿವಾರ  ಎಂದರೆ ಮಾನವರಂತೆ  ಒಬ್ಬರನೊಬ್ಬರು ದ್ವೇಷಿಸುವ ಆಸೂಹೆ ಪಡುವ ಸಂಸ್ಕ್ರತಿ ಉಳ್ಳ ಒಂದು ಗುಂಪು ಎಂದು ನಾವು ತಿಳಿದಿದ್ದರೆ ಅದು ನಮ್ಮ ಮೌಡ್ಯತೆಯ ಪರಮಾವದಿ. ಹಿಂದೆ ಹೇಳಿದಂತೆ ಭಗವಂತ ಅನ್ನುವುದು ಏಕಶಕ್ತಿ. ಆತ ಸದಾ ತನ್ನ ದೇವತಾ ಪರಿವಾರದೊಂದಿಗೆ ಅಭಿವ್ಯಕ್ತವಾಗುತ್ತಾನೆ. ನಾವು ಗಣಪತಿ ಅಥವಾ ಇನ್ನ್ಯಾವುದೇ ದೇವತೆಯ  ಆರಾಧನೆ ಮಾಡುವಾಗ ನಮಗೆ ಆ ಏಕ ಶಕ್ತಿಯ ಎಚ್ಚರ ಇದ್ದು ಮಾಡಿದರೆ ಆ ಪೂಜೆ ಮಹಾ ಪೂಜೆಯಾಗುತ್ತದೆ. ಅದನ್ನು ಬಿಟ್ಟು ಗಣಪತಿಯೇ(ಅಥವಾ ಇನ್ಯಾವುದೇ ದೇವತೆ) ಬೇರೆ, ಅವನೊಬ್ಬನೇ ದೇವರು  ಎಂದು ತಿಳಿದು ಅದರಲ್ಲೇ ಶ್ರದ್ಧೆ ಬೆಳೆಸಿಕೊಂಡರೆ  ಆಗ ಆ ಶ್ರದ್ಧೆಯ ಬೇಲಿಯಲ್ಲಿ ನಾವು ಸಿಕ್ಕಿ ಹಾಕಿಕೊಳ್ಳುತ್ತೇವೆ. ಇದು ಕಲ್ಲಿನ ಮೂರ್ತಿಯನ್ನು ದೇವರೆಂದು ಪೂಜಿಸಿದಂತಾಗುತ್ತದೆ. ನಿಜವಾಗಿ ನಾವು ಪೂಜಿಸುವುದು ಕಲ್ಲಿನ ಮೂರ್ತಿಯನ್ನಲ್ಲ –ಅದರಲ್ಲಿನ ಭಗವಂತನ  ಪ್ರತೀಕವನ್ನು. ಕಲ್ಲಿನ ಮೂರ್ತಿ ಕೇವಲ ದೇವತಾ ಪ್ರತೀಕ. ಸರ್ವಶಕ್ತ ಭಗವಂತ ಆ ಮೂರ್ತಿಯೊಳಗೆ ಅಂತರ್ಗತನಾಗಿದ್ದಾನೆ.   ಆದ್ದರಿಂದ ಯಾವುದೇ ದೇವತಾ ಪ್ರತೀಕವನ್ನು ಪೂಜಿಸುವಾಗಲೂ ಕೂಡಾ ‘ಭಗವಂತ ಒಬ್ಬನೆ, ಆತ ಈ ದೇವತೆಯ ಪ್ರತೀಕದಲ್ಲಿ ಅಂತರ್ಗತನಾಗಿ, ತನ್ನ ಸಮಸ್ತ ದೇವತಾ  ಪರಿವಾರದ ಮೂಲಕ ನಮ್ಮನ್ನು ರಕ್ಷಿಸುತ್ತಿದ್ದಾನೆ’ ಎನ್ನುವ ಅನುಸಂಧಾನ ಬಹಳ ಮುಖ್ಯ. ಈ ಅನುಸಂಧಾನದಿಂದ ಗಣಪತಿಯನ್ನಾಗಲಿ, ವೀರಭದ್ರನನ್ನಾಗಲಿ, ಕೋಟಿ ಚನ್ನಯ್ಯನನ್ನಾಗಲಿ, ಅಥವಾ ಇನ್ಯಾವುದೇ ದೇವತೆಯನ್ನು  ಪೂಜಿಸಿದರೂ ಕೂಡ ಅದು ಪರಮಾತ್ಮ ಮೆಚ್ಚುವ ಮಹಾ ಪೂಜೆಯಾಗುತ್ತದೆ. ನಾವು ಮಾಡುವ ವ್ರತ-ಅನುಷ್ಠಾನ ಕೂಡಾ ಇದೇ ರೀತಿಯಾಗಿರಬೇಕು. ಅದು ಏಕಾದಶಿಯ ಉಪವಾಸವಾಗಿರಲಿ ಅಥವಾ ಸಂಕಷ್ಟಹರ ಚತುರ್ಥಿಯ ಉಪವಾಸವಾಗಿರಲಿ, ಎಲ್ಲವೂ ಕೂಡಾ ಆ ಭಗವದ್ ಪ್ರೀತ್ಯರ್ಥವಾಗಿರಬೇಕು. ಭಗವಂತ ಸರ್ವ ಶಬ್ದವಾಚ್ಯ-ಆದ್ದರಿಂದ ಯಾವ ಹೆಸರಿನಿಂದ ಕರೆದರೂ ಅದು ಭಗವಂತನ ಹೆಸರು; ಭಗವಂತ  ಸರ್ವ ಸಮರ್ಥ-ಆದ್ದರಿಂದ ಆತ ಕಲ್ಲಿನಲ್ಲೂ ಇರಬಹುದು ಕಂಬದಲ್ಲೂ ಇರಬಹುದು; ಭಗವಂತ ಸರ್ವಾಂತರ್ಯಾಮಿ-ಸರ್ವ ದೇವತೆಗಳ ಅಂತರ್ಯಾಮಿಯಾಗಿದ್ದು ನಮ್ಮನ್ನು ರಕ್ಷಿಸುವವನು ಆ ಭಗವಂತ. ಈ ಅನುಸಂಧಾನದಿಂದ ಮಾಡುವ ಭಕ್ತಿ ಶ್ರೇಷ್ಠ ಭಕ್ತಿ ಎನಿಸುತ್ತದೆ. ಇದನ್ನು ಬಿಟ್ಟು ಅಂಧಶ್ರದ್ಧೆಯನ್ನು ಬೆಳೆಸಿಕೊಂಡರೆ ಅದೇ ನಮ್ಮಲ್ಲಿ ಗಟ್ಟಿಯಾಗಿ ನಮ್ಮನ್ನು ಅಧಃಪಾತಕ್ಕೆ ತಳ್ಳಬಹುದು!          
   
ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾSರಾಧನಮೀಹತೇ
ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿ ತಾನ್ ೨೨

ಸಃ ತಯಾ  ಶ್ರದ್ಧಯಾ ಯುಕ್ತಃ ತಸ್ಯ ಆರಾಧನಮ್ ಈಹತೇ
ಲಭತೇ ಚ ತತಃ ಕಾಮಾನ್ ಮಯಾ ಏವ ವಿಹಿತಾನ್ ಹಿ ತಾನ್-ಅವನು ಶ್ರದ್ಧೆಯನ್ನೆ ಆತುಕೊಂಡು ಆಯಾ ದೇವತೆಗಳನ್ನು ಪೂಜಿಸತೊಡಗುತ್ತಾನೆ. ಅದರ ಫಲವಾಗಿ ನಾನೇ ಈಡೇರಿಸಿದ ಆಯಾ ಬಯಕೆಗಳನ್ನು ಪಡೆಯುತ್ತಾನೆ.

ಮೇಲೆ ಹೇಳಿದ ಏಕಭಕ್ತಿಯನ್ನು ಪಾಲಿಸದೆ ಯಾವುದೋ ಒಂದು ದೇವತೆಯನ್ನು ಅಚಲವಾಗಿ ಪೂಜಿಸಿ ಫಲ ಪಡೆಯವವರನ್ನು ಪ್ರಪಂಚದಲ್ಲಿ ಕಾಣುತ್ತೇವೆ. ಇಲ್ಲಿ ‘ತಪ್ಪು ಪೂಜಾಕ್ರಮದಿಂದಲೂ ಹೇಗೆ ಫಲ ಸಿಗುತ್ತದೆ’ ಎನ್ನುವ ಪ್ರಶ್ನೆ ನಮ್ಮಲ್ಲಿ ಸಹಜವಾಗಿ ಮೂಡುತ್ತದೆ.  ಕೃಷ್ಣ ಹೇಳುತ್ತಾನೆ “ನೀನು ಯಾರನ್ನು ಉಪಾಸನೆ ಮಾಡಿದರೂ ಕೊನೆಗೆ ಫಲ ಕೊಡುವವನು ನಾನೇ” ಎಂದು. ಶಾಸ್ತ್ರಗಳಲ್ಲಿ ಹೇಳುವಂತೆ "ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ". ಯಾರನ್ನು ಪೂಜೆ ಮಾಡಿದರೂ ಅದು ಸಲ್ಲುವುದು ಅದರೊಳಗಿನ ಭಗವಂತನನ್ನೇ. ಆದರೆ ವ್ಯತ್ಯಾಸ ಒಂದೆ-ತಿಳಿದು ಮಾಡಿದಾಗ ‘ಶಾಶ್ವತವಾದ ಪೂರ್ಣಫಲ’, ತಿಳಿಯದೇ ಫಲ ಕಾಮನೆಯಿಂದ ಮಾಡಿದಾಗ ‘ಬೌತಿಕವಾದ ಅಲ್ಪಫಲ’.
ನಾವು ಯಾವುದೇ ಆರಾಧ್ಯ ಮೂರ್ತಿಯನ್ನು ಪೂಜಿಸಿದರೂ ಕೂಡಾ ಆ ಆರಾಧ್ಯ ಮೂರ್ತಿಯ ಅಂತರ್ಯಾಮಿಯಾಗಿದ್ದು ಫಲ ಕೊಡುವವನು ಭಗವಂತನೇ. ಆದರೆ ‘ದೇವತಾ ಅಂತರ್ಗತನಾದ ಭಗವಂತ ಕೊಟ್ಟ’ ಅನ್ನುವ ಅರಿವು ನಮಗಿರುವುದಿಲ್ಲ ಅಷ್ಟೇ. ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ ಈ ಎಚ್ಚರ ಬಹಳ ಮುಖ್ಯ. ನಾವು ನಮ್ಮ ಪ್ರತಿಯೊಂದು ಅನುಸಂಧಾನವನ್ನು ಭಗವಂತನ ಪೂಜಾ ರೂಪವಾಗಿ ಮಾಡಿ ಭವ್ಯವಾಗಿಸಬೇಕು. ಇಲ್ಲದಿದ್ದರೆ ಮಹಾಫಲದಿಂದ ವಂಚಿತರಾಗಿ  ಯಾವುದೋ ಕ್ಷುದ್ರ ಫಲ ನಮ್ಮದಾಗುತ್ತದೆ. [ಇಲ್ಲಿ “ಮಯೈವ ವಿಹಿತಾನ್ ಹಿ ತಾನ್” ಎಂದರೆ ನಾನೇ ದೇವತೆಯೊಳಗಿದ್ದು ಫಲವನ್ನೂ ಕೊಡುವವನು ಎಂದರ್ಥವಾದರೆ,  ‘ಮಯೈವ ವಿಹಿತಾನ್ ಹಿತಾನ್’ ಎಂದರೆ ‘ನೀನು ಬಯಸಿದ-‘ನಿನಗೆ ಹಿತವಾದ’ ಕ್ಷಣಿಕ ಫಲವನ್ನು ನನ್ನಿಂದ ಪಡೆಯುತ್ತೀಯ’ ಎಂದರ್ಥ].    

ಅಂತವತ್ತು  ಫಲಂ ತೇಷಾಂ ತದ್  ಭವತ್ಯಲ್ಪಚೇತಸಾಮ್
ದೇವಾನ್ ದೇವಯಜೋ ಯಾಂತಿದ್ ಭಕ್ತಾ ಯಾಂತಿ ಮಾಮಪಿ   ೨೩

ಅಂತವತ್ ತು   ಫಲಮ್  ತೇಷಾಮ್  ತತ್   ಭವತಿ ಅಲ್ಪಚೇತಸಾಮ್
ದೇವಾನ್ ದೇವಯಜಃ  ಯಾಂತಿತ್  ಭಕ್ತಾಃ  ಯಾಂತಿ ಮಾಮ್ ಅಪಿ-ಅಲ್ಪಮತಿಗಳಾದ ಅಂಥವರ ಆ ಫಲಕ್ಕೆ ಅಳಿವುಂಟು. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಸೇರುತ್ತಾರೆ. ನನ್ನ ಭಕ್ತರು ನನ್ನನ್ನು ಸೇರುತ್ತಾರೆ.

ಕೃಷ್ಣನ ಮಾತನ್ನು ಕೇಳಿದಾಗ ನಮ್ಮಲ್ಲಿ ಒಂದು ಭಾವನೆ ಮೂಡಬಹುದು: “ಯಾರು ಫಲ ಕೊಟ್ಟರೆ ನಮಗೇನು?  ನನಗೆ ನನ್ನ ಇಷ್ಟಾರ್ಥ ಸಿದ್ಧಿಯಾದರೆ ಸಾಕು” ಎಂದು. ಅದಕ್ಕಾಗಿ ಈ ಶ್ಲೋಕದಲ್ಲಿ ಕೃಷ್ಣ ಎಚ್ಚರಿಕೆಯ ನುಡಿಯನ್ನಾಡುತ್ತಾನೆ. ಕೃಷ್ಣ ಹೇಳುತ್ತಾನೆ “ಅಂತವತ್ತು  ಫಲಂ ತೇಷಾಂ ತದ್  ಭವತ್ಯಲ್ಪಚೇತಸಾಮ್” ಎಂದು. ಅಂದರೆ ಯಾವುದೋ ಒಂದು ಕ್ಷುದ್ರ ಫಲ ಸಿಕ್ಕಿತು ಎಂದು ಹಿಗ್ಗುವವರು  ಅಲ್ಪಮತಿಗಳು. ಈ ರೀತಿಯಾಗಿ ಸಿಗುವ ಫಲ ಎಂದೂ ಶಾಶ್ವತ ಅಲ್ಲ, ಅದು ಕ್ಷಣಿಕ. “ನೀವು ಯಾವ ದೇವತೆಯನ್ನು ಪೂಜಿಸುತ್ತೀರೋ ಆ ದೇವತೆಯನ್ನು ಸೇರುತ್ತೀರಿ ಹೊರತು ಮೊಕ್ಷವನ್ನಲ್ಲ” ಎನ್ನುತ್ತಾನೆ ಕೃಷ್ಣ. ಯಾವ ದೇವತೆಗಳೂ ಕೂಡ ಅನಂತ ಕಾಲದ ತನಕ ನಮ್ಮನ್ನು ಅವರ ಲೋಕದಲ್ಲಿ ಇರಗೊಡುವುದಿಲ್ಲ. ಆದ್ದರಿಂದ ನಾವು ಮಾಡಿದ ಕರ್ಮದ ಅವದಿ ಮುಗಿದಾಕ್ಷಣ ಮರಳಿ ಈ ಮೃತ್ಯುಲೋಕಕ್ಕೆ ಬರಬೇಕಾಗುತ್ತದೆ. ಈ ಕಾರಣದಿಂದ ಭಗವಂತನ ಅರಿವಿಲ್ಲದ ಕೇವಲ ದೇವತಾ ಉಪಾಸನೆ ಶಾಶ್ವತ ಮೋಕ್ಷವನ್ನು ಕೊಡಲಾರದು.
ಭಗವಂತನಲ್ಲಿ ಮನವಿಟ್ಟು, ಏಕಭಕ್ತಿಯಿಂದ ಭಗವಂತನನ್ನು ಭಜಿಸಿದರೆ ಆಗ ‘ತದ್ಧಾಮಂ ಪರಮಂ ಮಮ’- ಎಲ್ಲಿಂದ ಎಂದೂ ಮರಳಿ ಬರಬೇಕಾಗಿಲ್ಲವೋ ಅಂಥಹ  ಶಾಶ್ವತವಾದ ಮೋಕ್ಷವನ್ನು ಪಡೆಯುತ್ತಾರೆ. ಭಗವಂತನನ್ನು ಪ್ರೀತಿಸುವುದರಿಂದ  ಯಥಾರ್ಥ ಜ್ಞಾನ ಸಿದ್ಧಿಯಾಗುತ್ತದೆ. ಇದರಿಂದ ಎಂದೆಂದೂ ದುಃಖವಿಲ್ಲದ ಭಗವದ್ ಪ್ರಾಪ್ತಿ ರೂಪವಾದ ಮೋಕ್ಷವನ್ನು ಪಡೆಯುಬಹುದು.
ಇಲ್ಲಿ ಕೆಲವರಿಗೆ ಒಂದು ಗೊಂದಲವಾಗಬಹುದು. “ದೇವರು ಏಕೆ ಹೊಗಳುವಿಕೆಯನ್ನು ಇಷ್ಟಪಡುತ್ತಾನೆ? ಆತ ಏಕೆ ತನ್ನನ್ನು ಹೊಗಳುವವರನ್ನು ಮಾತ್ರ ಉದ್ಧರಿಸಿ ಉಳಿದವರನ್ನು ಉದ್ಧರಿಸುವುದಿಲ್ಲ?” ಎಂದು. ದೇವರು ಪ್ರೀತಿಸುವುದು ಹೊಗಳಿಕೆಯನ್ನಲ್ಲ-ಸತ್ಯವನ್ನು. ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮದಲ್ಲಿ ದೇವರು ಅಂದರೆ ಏನು ಆತನ ಮಹಾತ್ಮೆ ಏನು(etymologically)  ಎನ್ನುವ ಸತ್ಯ ಅಡಗಿದೆ. ಭಗವಂತ ಯಾರು ಸತ್ಯವನ್ನು ತಿಳಿಯುತ್ತಾರೋ ಅವರನ್ನು ಪ್ರೀತಿಸುತ್ತಾನೆ. ಆತನಿಗೆ ವೈಯಕ್ತಿಕ ಇಷ್ಟಾನಿಷ್ಟವಿಲ್ಲ. ಆತ ಇಷ್ಟ ಪಡುವುದು ಯಥಾರ್ಥ ಜ್ಞಾನವನ್ನು. ಯಥಾರ್ಥ ಜ್ಞಾನ-ಭಕ್ತಿ ರೂಪದಲ್ಲಿದೆ. ನಿಜವಾದ ಭಕ್ತಿ-ಯಥಾರ್ಥ ಜ್ಞಾನದಲ್ಲಿದೆ.  ಯಥಾರ್ಥದ ಅರಿವು ಭಗವಂತನಿಗೆ ಇಷ್ಟ ಮತ್ತು ಇದು ಮೋಕ್ಷವನ್ನು ತಲುಪಲು ಬೇಕಾದ ಅರ್ಹತೆ. ಆದ್ದರಿಂದ ಭಗವಂತ ತನ್ನನ್ನು ಹೊಗಳುವವರನ್ನು ಉದ್ಧರಿಸುವುದಲ್ಲ. ಆತ ಯಥಾರ್ಥವನ್ನು ತಿಳಿದವರನ್ನು ಉದ್ಧರಿಸುತ್ತಾನೆ ಮತ್ತು ಅರ್ಹತೆ ಉಳ್ಳವರಿಗೆ ಮೋಕ್ಷ ಕರುಣಿಸುತ್ತಾನೆ. 
“ಶಾಶ್ವತ ಫಲವನ್ನು ಕೊಡತಕ್ಕಂತಹ ಅಂತರ್ಯಾಮಿಯ ಉಪಾಸನೆಯಲ್ಲಿ ಗಟ್ಟಿಯಾಗಿ-ಮೋಕ್ಷವನ್ನು ಪಡೆ” ಎನ್ನುವುದು ಇಲ್ಲಿ ಕೃಷ್ಣನ ಸಂದೇಶ.