Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, March 26, 2011

Bhagavad Gita Kannada Chapter-03 Shloka 08-09


ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ ।
ಶರೀರಯಾತ್ರಾsಪಿ ಚ ತೇ ನ ಪ್ರಸಿದ್ಧ್ಯೇದಕರ್ಮಣಃ ॥೮॥
ನಿಯತಮ್  ಕುರು ಕರ್ಮ ತ್ವಮ್  ಕರ್ಮ ಜ್ಯಾಯಃ  ಹಿ  ಅಕರ್ಮಣಃ
ಶರೀರ ಯಾತ್ರಾ ಅಪಿ ಚ ತೇ ನ ಪ್ರಸಿದ್ಧ್ಯೇತ್ ಅಕರ್ಮಣಃ -ನಿನ್ನ ಪಾಲಿನ ಕರ್ಮ ನೀನು ಮಾಡು. ನಿಷ್ಕ್ರೀಯತೆಗಿಂತ ಕರ್ಮ ಮೇಲಲ್ಲವೇ ? ನಿಷ್ಕ್ರೀಯನಾದರೆ ನಿನ್ನ ಬಾಳ ಬಂಡಿಯ ಪಯಣವು ಸಾಗದು.

ಕೃಷ್ಣ ಹೇಳುತ್ತಾನೆ: 'ನೀನು ನಿನ್ನ ಜೀವ ಸ್ವಭಾವಕ್ಕೆ ಅನುಗುಣವಾದ, ಜ್ಞಾನಕ್ಕೆ ಪೂರಕವಾದ ನಿಯತ ಕರ್ಮವನ್ನು ಮಾಡು' ಎಂದು. ಇಲ್ಲಿ ಅರ್ಜುನನನ್ನು ನೋಡಿದರೆ, ಆತನ ಜೀವ ಸ್ವಭಾವ ಅನ್ಯಾಯದ ವಿರುದ್ಧ ಹೋರಾಡಿ ದೇಶದ ಪ್ರಜೆಗಳ ರಕ್ಷಣೆ ಮಾಡುವ ಕ್ಷತ್ರಿಯ ಸ್ವಭಾವ. ಅದನ್ನು ಬಿಟ್ಟು, ದೇಶದಲ್ಲಿ ಅನ್ಯಾಯ ತಾಂಡವವಾಡುತ್ತಿರುವಾಗ, ಜ್ಞಾನ ಮಿಗಿಲೆಂದು ತಪಸ್ಸನ್ನಾಚರಿಸಿದರೆ ಅದು ನಿಜವಾದ ಯೋಗವೆನಿಸುವುದಿಲ್ಲ. ಕೃಷ್ಣ ಹೇಳುತ್ತಾನೆ, “ಎಂದೂ ನಿಷ್ಕ್ರೀಯನಾಗಬೇಡ,ನಿನ್ನ ಕರ್ಮವನ್ನು ನೀನು ಮಾಡು,ಅದರಿಂದ ಏನು ಸಿಕ್ಕಿತೋ ಅದನ್ನು ಅನುಭವಿಸು. ಆದರೆ ಮಾಡುವ ಕರ್ಮ ಜ್ಞಾನಕ್ಕೆ ಪೂರಕವಾಗಿರಲಿ. ಭಗವಂತನ ಎಚ್ಚರ ಯಾವಾಗಲೂ ಇರಲಿ” ಎಂದು. ‘ಭಗವಂತ ಈ ಕರ್ಮವನ್ನು ನನ್ನ ಕೈಯಿಂದ ಮಾಡಿಸುತ್ತಿದ್ದಾನೆ, ಇದು ಅವನಿಗರ್ಪಿತ’ ಎನ್ನುವ ಭಾವನೆಯಿಂದ ಕರ್ಮ ಮಾಡಿದಾಗ ಯಾವ ಕರ್ಮವೂ ನಮಗೆ ಬಂಧಕವಾಗುವುದಿಲ್ಲ.
ನಿನ್ನ   ಪಾಲಿನ ಕರ್ಮ ಮಾಡು, ಬಂದುದನುಣ್ಣು, ಹರಿಯ ಚರಣದ ಅರಿವು ತಪ್ಪದಿರಲಿ.
ಹರಿಯೇ ಪರ ದೈವತವು, ಹರಿಯೇ ಗುರು ಆಸರೆಯು, ಹರಿಯೊಬ್ಬನೆ ಜಗದ ತಾಯಿ ತಂದೆ.
ನಾವು ಒಂದು  ದೇಹದಲ್ಲಿರುವಷ್ಟು ಕಾಲ ಕರ್ಮ ಅನಿವಾರ್ಯ. ಅಪರೋಕ್ಷ ಜ್ಞಾನ ಬಂದಾಗಲೂ ಕೂಡಾ ಕರ್ಮ ನಿರಂತರ. ಈ ರೀತಿ ಕೃಷ್ಣ  ಕರ್ಮ ಸಿದ್ಧಾಂತವನ್ನು ಈ ಶ್ಲೋಕದ ಮುಖೇನ ನಮ್ಮ ಮುಂದೆ ಬಿಚ್ಚಿಟ್ಟಿದ್ದಾನೆ.

ಇಲ್ಲಿ ಒಂದು ವಿಷಯವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಶಾಸ್ತ್ರಗಳು ಹೇಳುವ ಪ್ರಕಾರ ಕರ್ಮ ಬಂಧಕ . ಪುನಃ ಕರ್ಮ ಮಾಡುವುದರಿಂದ ನಾವು ಕರ್ಮ ಚಕ್ರದಲ್ಲಿ ಸಿಲುಕುತ್ತೇವೆ. ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ- ಕರ್ಮ ಅನಿವಾರ್ಯ ಎಂದು.  ಹಾಗಿದ್ದರೆ ಮೋಕ್ಷದ ಮಾರ್ಗ ಯಾವುದು? ನಮ್ಮ ಈ ಪ್ರಶ್ನೆಗೆ ಮುಂದಿನ ಶ್ಲೋಕದಲ್ಲಿ ಸ್ಪಷ್ಟ ಉತ್ತರವಿದೆ.

ಯಜ್ಞಾರ್ಥಾತ್ ಕರ್ಮಣೋsನ್ಯತ್ರ ಲೋಕೋsಯಂ ಕರ್ಮಬಂಧನಃ ।
ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ ॥೯॥

ಯಜ್ಞಾ ಅರ್ಥಾತ್ ಕರ್ಮಣಃ ಅನ್ಯತ್ರ ಲೋಕಃ ಅಯಮ್  ಕರ್ಮ ಬಂಧನಃ
ತತ್ ಅರ್ಥಮ್  ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ-- ಭಗವಂತನ ಪೂಜಾ ರೂಪವಾದ ಇಂಥ ಕರ್ಮಕ್ಕಿಂತ ಬೇರೆಯಾದ ನಡೆಯಲ್ಲಿ ಮಾತ್ರ ಸಾಧಕ ಕರ್ಮದ ಕಟ್ಟಿಗೆ ಸಿಲುಕುತ್ತಾನೆ. ಓ ಕೌಂತೇಯ, ಫಲದ ನಂಟು ತೊರೆದು, ಭಗವಂತನ ಪೂಜೆಯೆಂದು ಕರ್ಮ ಮಾಡು.

ಈ ಲೋಕ ಕರ್ಮದ ಬಂಧನಕ್ಕೆ ಒಳಗಾಗಿದೆ. ಆದರೆ ಎಲ್ಲಾ ಕರ್ಮವೂ ಬಂಧಕ ಅಲ್ಲ. ತಿಳಿದು ಮಾಡುವ ಕರ್ಮ ಎಂದೂ ಬಂಧಕವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ಭಗವಂತನ ಪ್ರಜ್ಞೆಯಿಂದ ಮಾಡಬೇಕು. ನಾವು ಸೂತ್ರದ ಗೊಬೆಗಳಿದ್ದಂತೆ. ಭಗವಂತ ಸೂತ್ರದಾರ. ಈ ಎಚ್ಚರದಿಂದ ನಾವು ಕರ್ಮ ಮಾಡಿದಾಗ ನಮ್ಮ ಪ್ರತಿಯೊಂದು ಕರ್ಮವೂ ಕೂಡಾ ಯಜ್ಞವಾಗುತ್ತದೆ.  ಉದಾಹರಣೆಗೆ ನಾವು ಉಸಿರಾಡುತ್ತೇವೆ. ಹೊರಗಿನಿಂದ ಆಮ್ಲಜನಕವನ್ನು ಹೀರಿ ಕಾರ್ಬನ್  ಡೈ ಆಕ್ಸೈಡನ್ನು ಹೊರ ಹಾಕುತ್ತೇವೆ. ನಮ್ಮೊಳಗಿರುವ ಆ ವಿಶೇಷ ಯಂತ್ರದ ಕಲ್ಪನೆ ಕೂಡಾ ನಮಗಿರುವುದಿಲ್ಲ. ನಮಗೆ ಅರಿವಿಲ್ಲದಂತೆ ಈ ಕ್ರಿಯೆ ನಡೆಯುತ್ತಿರುತ್ತದೆ.  ನಾವು ಬಿಟ್ಟ ಗಾಳಿಯನ್ನು ಗಿಡಗಳು ಸೇವಿಸಿ ನಮಗೆ ಬೇಕಾದ ಆಮ್ಲಜನಕವನ್ನು ಕೊಡುತ್ತವೆ. ಇದೆಲ್ಲವೂ ಆ ಭಗವಂತನ ವ್ಯವಸ್ಥೆ. ಈ ಕಾರಣಕ್ಕಾಗಿ ಭಾರತೀಯರು ಅತಿಹೆಚ್ಚು ಆಮ್ಲಜನಕವನ್ನು ಕೊಡುವ ಅಶ್ವತ್ಥವೃಕ್ಷವನ್ನು ಪೂಜಿಸುತ್ತಾರೆ.  ಆ ವೃಕ್ಷದಲ್ಲಿ ಭಗವಂತನ ವಿಶೇಷ ವಿಭೂತಿ ಅಡಗಿದೆ. ಈ ರೀತಿ ನಾವು ನಮ್ಮ ಪ್ರತಿಯೊಂದು ಕಾರ್ಯದಲ್ಲೂ  ಭಗವಂತನ ಹಿರಿಮೆಯನ್ನು ತಿಳಿದಾಗ, ನಾವು ಮಾಡುವ ಕರ್ಮ-ಕರ್ಮಯೋಗವಾಗುತ್ತದೆ. ಹಾಗು ಅದು ಎಂದೂ ಬಂಧಕವಾಗುವುದಿಲ್ಲ.
ಇಲ್ಲಿ ಬಳಕೆಯಾದ 'ಯಜ್ಞ' ಪದದ ಅರ್ಥ 'ಯಜ-ದೇವ-ಪೂಜಾ' ಅಂದರೆ ದೇವರ ಪೂಜೆ ಎಂದರ್ಥ. ದೇವರನ್ನು ಕೂಡಾ ಯಜ್ಞ ಎಂದು ಕರೆಯುತ್ತಾರೆ.  ಆದ್ದರಿಂದ ಕೇವಲ ಅಗ್ನಿ ಮುಖದಲ್ಲಿ ಮಾಡುವ  ಪೂಜೆ ಮಾತ್ರ ಯಜ್ಞವಲ್ಲ. ನಮ್ಮ ಪ್ರತಿಯೊಂದು ಕರ್ಮವನ್ನು  ಭಗವದ್ಪ್ರಜ್ಞೆಯಿಂದ ಮಾಡಿದಾಗ ಅದು ಯಜ್ಞವಾಗುತ್ತದೆ. ಇಲ್ಲಿ ನಾವು ಬಿಡಬೇಕಾದದ್ದು ಕರ್ಮವನ್ನಲ್ಲ, ಬದಲಿಗೆ ನಾವು ಕರ್ಮದ ಬಗ್ಗೆ ಇರುವ ನಮ್ಮ  ಭಾವನೆಯನ್ನು ಬದಲಿಸಿ ಕೊಳ್ಳಬೇಕು ಅಷ್ಟೆ. ಕರ್ಮ ಎಂದರೆ 'ಕರ+ಮ' ಅಂದರೆ ಭಗವಂತನ ರಾಜ್ಯದ ಪ್ರಜೆಗಳಾದ ನಾವು ಆತನಿಗೆ ಸಲ್ಲಿಸುವ 'ಕರ' ಅಥವಾ ಕಂದಾಯವೇ ಕರ್ಮ.  ಭಗವಂತ ಎಂದೂ ದುಡ್ಡಿನ ಕಂದಾಯವನ್ನು ಪಡೆಯುವುದಿಲ್ಲ. ಆತನ ಕರ ಸಂದಾಯವನ್ನು ನಾವು- ನಮ್ಮನ್ನು ಸಮಾಜ ಕ್ರಿಯೆಯಲ್ಲಿ ತೊಡಗಿಸಿಗೊಂಡು ಸಲ್ಲಿಸಬೇಕು. ಈ ಭಾವನೆ ಬಂದಾಗ ಕರ್ಮ ಬಂಧಕವಾಗದೆ ಮೋಕ್ಷ ಮಾರ್ಗವಾಗುತ್ತದೆ.
ಇಲ್ಲಿ  ಕೃಷ್ಣ ಅರ್ಜುನನನ್ನು 'ಕೌಂತೇಯ' ಎಂದು ಸಂಬೋಧಿಸಿದ್ದಾನೆ. ಈ ರೀತಿ ಇಲ್ಲಿ ಸಂಬೋಧಿಸಲು ವಿಶೇಷ ಕಾರಣವಿದೆ.  ಕುಂತಿ  ಅಷ್ಟು ದೊಡ್ಡ ಮನೆತನದಲ್ಲಿ ಹುಟ್ಟಿ ಬೆಳೆದರೂ ಕೂಡಾ,  ಆಕೆ ಎಂದೂ ಭೋಗದ ಆಸೆಗೆ ಬಲಿಬಿದ್ದವಳಲ್ಲ. ತನ್ನ ಯೌವನವನ್ನು ಕಾಡಿನಲ್ಲಿ ಕಳೆದ ಆಕೆ, ತನ್ನ ಮಕ್ಕಳು ಧೈರ್ಯಗೆಟ್ಟಾಗ ಧೈರ್ಯ ತುಂಬಿದ ಧೀರ ಮಹಿಳೆ.  ಆಕೆ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಆದರೆ ಆಕೆ ಕೃಷ್ಣನಲ್ಲಿ “ನನಗೆ ಕಷ್ಟವನ್ನೇ ಕೊಡು, ಏಕೆಂದರೆ ಆಗ ನಮಗೆ ಸದಾ ನಿನ್ನೊಂದಿಗಿರುವ ಭಾಗ್ಯವಿರುತ್ತದೆ” ಎಂದಾಕೆ!  ಕರ್ತವ್ಯ ನಿಷ್ಠೆಯನ್ನು ಜಗತ್ತಿಗೆ ತೋರಿದ ಧೀರ ಮಹಿಳೆ ಆಕೆ. ಇಂಥ ಮಹಾ ಮಹಿಳೆಯ ಮಗನಾದ ನಿನಗೆ ಕರ್ಮ ಯೋಗದ ಬಗ್ಗೆ ತಿಳಿದೇ ಇದೆ  ಎನ್ನುವ ಧ್ವನಿಯಲ್ಲಿ ಕೃಷ್ಣ ಅರ್ಜುನನನ್ನು 'ಕೌಂತೇಯ' ಎಂದು ಸಂಬೋಧಿಸಿದ್ದಾನೆ.

ಈ ರೀತಿ ಜ್ಞಾನವನ್ನು ಮತ್ತು ಕರ್ಮವನ್ನು ಹೇಗೆ ಸಮನ್ವಯಗೊಳಿಸಿಕೊಂಡು ಬದುಕಬೇಕು ಎನ್ನುವುದನ್ನು ಹೇಳಿದ ಕೃಷ್ಣ, ಮುಂದೆ ಅದು ಸ್ಪಷ್ಟವಾಗಿ ಅರ್ಥವಾಗುವಂತೆ ಒಂದು ಕಥೆಯ ರೂಪದಲ್ಲಿ ವಿವರಣೆಯನ್ನು ಕೊಡುತ್ತಾನೆ. ಆ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.

No comments:

Post a Comment