Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, October 31, 2011

Bhagavad Gita Chapter-13 Shloka 8-11


ಇಂದ್ರಿಯಾರ್ಥೇಷು ವೈರಾಗ್ಯಮನಹಂಕಾರ ಏವ ಚ
ಜನ್ಮಮೃತ್ಯುಜರಾವ್ಯಾಧಿದುಃಖದೋಷಾನುದರ್ಶನಮ್                    

ಇಂದ್ರಿಯ ಅರ್ಥೇಷು ವೈರಾಗ್ಯಮ್ ಅನಹಂಕಾರಃ  ಏವ ಚ
ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷನುದರ್ಶನಮ್ -- ಇಂದ್ರಿಯ ವಿಷಯಗಳಲ್ಲಿ ಮೈಮರೆಯದಿರುವುದು, ಸೊಕ್ಕು ಇರದಿರುವುದು, ಹುಟ್ಟು-ಸಾವು-ಮುಪ್ಪು-ಬೇನೆಗಳಿಂದ ದುಗುಡತುಂಬಿದ ಬಾಳಿನ ದೋಷಗಳ ಎಚ್ಚರ,-

(೧೦) ಇಂದ್ರಿಯಾರ್ಥೇಷು ವೈರಾಗ್ಯ : ಇಂದ್ರಿಯಗಳನ್ನು ಹೊರಪ್ರಪಂಚದತ್ತ ಹರಿಯದಂತೆ ತಡೆದು ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು. ಇದನ್ನು ಶಮ-ಧಮ ಎನ್ನುತ್ತಾರೆ. ಇಂದ್ರಿಯಗಳು ಲೌಕಿಕ ವಿಚಾರದತ್ತ ಹರಿಯದಂತೆ ಮಾಡುವುದು ಧಮ ಮತ್ತು ಅದನ್ನು ಭಗವಂತನತ್ತ ಹರಿಯುವಂತೆ ಮಾಡುವುದು ಶಮ. ಭಗವಂತನ ಬಗ್ಗೆ ತಿಳಿದಾಗ ಇಂದ್ರಿಯ ಇನ್ಯಾವುದರ ಕಡೆಗೂ ಹರಿಯುವುದಿಲ್ಲ. ಪ್ರಾಪಂಚಿಕವಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧದ ಬಗ್ಗೆ ವಿರಕ್ತಿ ತಾಳು. ಉದಾಹರಣೆಗೆ ನಾಲಿಗೆ ಚಪಲ. ನಮ್ಮಲ್ಲಿ ಕೆಲವರು ಮನೆಯಲ್ಲಿ ಯಾವ ರೀತಿ ಅಡಿಗೆ ಮಾಡಿದರೂ ಅಲ್ಲಿ ಅದು ಸರಿಯಾಗಿಲ್ಲ, ಇದು ಸರಿಯಾಗಿಲ್ಲ ಇತ್ಯಾದಿಯಾಗಿ ತಗಾದೆ ಎತ್ತುತ್ತಾರೆ. ಈ ರೀತಿಯ ಚಪಲವನ್ನು ಬಿಟ್ಟುಬಿಡು.  ಇಲ್ಲಿ ಬೇಕು ಬೇಡಗಳ ಆಯ್ಕೆ ಇಲ್ಲದೆ ಏನನ್ನು ಹಾಕಿದರೂ ಭಗವಂತನ ಪ್ರಸಾದ ಎಂದು ಸ್ವೀಕರಿಸುವುದನ್ನು ಕಲಿ. ಈ ರೀತಿ ಶಮ-ಧಮ ಸಾಧಿಸು.  
(೧೧) ಅನಹಂಕಾರ: ಇದು ಎಲ್ಲ ಗುಣಗಳಿಗಿಂತ ಶ್ರೇಷ್ಠ ಗುಣ. ನಮ್ಮಲ್ಲಿ ಯಾವ ಗುಣವಿದ್ದರೂ ಅದು ನಮ್ಮ ಅಹಂಕಾರದ ಮುಂದೆ ವ್ಯರ್ಥ. ಅಹಂಕಾರ(Ego) ನಮ್ಮಲ್ಲಿನ ಎಲ್ಲ ಗುಣವನ್ನು ನಾಶ ಮಾಡುತ್ತದೆ. ಅಹಂಕಾರವಿದ್ದೆಡೆ  ಉಳಿದ ಗುಣಗಳಿಗೆ ಅಸ್ತಿತ್ವವೇ ಇಲ್ಲ. ಆದ್ದರಿಂದ ಕೃಷ್ಣ ಅದನ್ನು ಇಲ್ಲಿ “ಏವ-” ಎಂದು ಒತ್ತಿ ಹೇಳಿದ್ದಾನೆ. ‘ನಾನು ವಿದ್ವಾಂಸ, ನಾನು ಅನುಷ್ಠಾನವಂತ, ನಾನು ಮಡಿ’ ಹೀಗೆ ನಮ್ಮನ್ನು ಅಹಂಕಾರ ಪ್ರತಿಯೊಂದು ವಿಚಾರದಲ್ಲೂ ಕಾಡುತ್ತದೆ. ಹೀಗೆ ನಾವು ಅಹಂಕಾರಪಟ್ಟರೆ ನಮ್ಮ ಅನುಷ್ಠಾನ-ಅನುಷ್ಠಾನವೇ ಆಗುವುದಿಲ್ಲ. ಎಲ್ಲಿ ಅಹಂಕಾರ ಕಾಡಿತೋ ಅಲ್ಲಿ ಸಾಧನೆ ವ್ಯರ್ಥವಾಗುತ್ತದೆ. ಎಲ್ಲಿ ಅಹಂಕಾರವಿದೆ ಅಲ್ಲಿ ದೇವರಿರುವುದಿಲ್ಲ-ಅಂದರೆ ಅಹಂಕಾರದಿಂದಾಗಿ ನಾವು ದೇವರಿಂದ ದೂರ ಸರಿಯುತ್ತೇವೆ. ಈ ಕಾರಣದಿಂದ ‘ನಾನು ಮಾಡಿದೆ, ನನ್ನಿಂದಾಯ್ತು’ ಎಂದು ಬೀಗುವುದನ್ನು ಬಿಡು. ಭಗವಂತ ನನ್ನ ಕೈಯಿಂದ ಮಾಡಿಸಿದ ಎಂದು ಆತನಿಗೆ ಕೃತಜ್ಞತೆಯನ್ನು ತೋರು.
(೧೨) ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷನುದರ್ಶನಮ್:  ಜೀವನವನ್ನು ಒಳನೋಟದಿಂದ ನೋಡು. ಈ ಜೀವನ ಎನ್ನುವುದು ಹುಟ್ಟು ಸಾವು ಎನ್ನುವ ಎರಡು ದಡದ ನಡುವೆ ಹರಿಯುವ ಒಂದು ಪ್ರವಾಹ. ಈ ಪ್ರವಾಹದಲ್ಲಿ ವ್ಯಾಧಿ, ಮುಪ್ಪು, ದುಃಖ, ಶೋಕ ಎನ್ನುವ ಅಲೆಗಳ ಸರಮಾಲೆ. ಈ ನಮ್ಮ ಬದುಕಿನ ಉದ್ದೇಶವೇನು,  ಭಗವಂತ ನಮ್ಮನ್ನು ಏಕೆ ಹುಟ್ಟಿಸಿದ, ಮಾನವ ಜನ್ಮವನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬೇಕು ಎನ್ನುವ ಅನುದರ್ಶನ ಮಾಡು. ಆಹಾರ ನಿದ್ರಾ ಭಯ ಮೈಥುನ ಇಷ್ಟೇ ಜೀವನವಲ್ಲ. ಇದನ್ನು ಪ್ರಾಣಿಗಳೂ ಅನುಭವಿಸುತ್ತವೆ. ಆದ್ದರಿಂದ ಶಾಸ್ತ್ರವನ್ನು ಓದಿ ಸತ್ಯಕ್ಕೆ ಅನುಗುಣವಾದ ಯಥಾರ್ಥ ದರ್ಶನವನ್ನು ಮಾಡಿಕೊ. ಕೇವಲ ಲೌಕಿಕ ಸುಖದ ನಿರೀಕ್ಷೆಯಲ್ಲಿ ಬದುಕುವುದನ್ನು ಬಿಟ್ಟು-ಸತ್ಯದ ಸಾಕ್ಷಾತ್ಕಾರಕ್ಕಾಗಿ, ಭಗವಂತನನ್ನು ಸೇರುವುದಕ್ಕಾಗಿ ಬದುಕು. ಎಲ್ಲ ಲೌಕಿಕ ಸುಖ, ಸಂಪತ್ತು ನಿಸ್ಸಾರ. ಇದರಿಂದಾಚೆಗಿನ ಸಾರವಾದ ಭಗವಂತನನ್ನು ತಿಳಿದು ಅದರತ್ತ ಹೆಜ್ಜೆಹಾಕು.

ಅಸಕ್ತಿರನ ಭಿಷ್ವಂಗಃ ಪುತ್ರದಾರಗೃಹಾದಿಷು
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು                              

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ
ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ                                        ೧೦

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಮ್
ಏತಜ್ ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋSನ್ಯಥಾ                 ೧೧

ಅಸಕ್ತಿಃ ಅನಭಿಷ್ವಂಗಃ ಪುತ್ರ ದಾರ ಗೃಹದಿಷು
ನಿತ್ಯಮ್ ಚ ಸಮಚಿತ್ತತ್ವಮ್ ಇಷ್ಟನಿಷ್ಟ ಉಪಪತ್ತಿಷು
ಮಯಿ ಚನನ್ಯಯೋಗೇನ ಭಕ್ತಿಃ ಅವ್ಯಭಿಚಾರಿಣೀ
ವಿವಿಕ್ತ ದೇಶ ಸೇವಿತ್ವಮ್ ಅತಿಃ ಜನ ಸಂಸದಿ
ಅಧ್ಯಾತ್ಮ ಜ್ಞಾನ ನಿತ್ಯತ್ವಮ್ ತತ್ತ್ವಜ್ಞಾನರ್ಥ ದರ್ಶನಮ್
ಏತತ್  ಜ್ಞಾಮ್ ಇತಿ ಪ್ರೋಕ್ತಮ್ ಅಜ್ಞಾನಮ್  ಯತ್ ಅತಃ ಅನ್ಯಥಾ -- ಅಂಟಿಸಿಕೊಳ್ಳದಿರುವುದು, ಮಕ್ಕಳು ಮಡದಿ ಮನೆ ಮುಂತಾದುವನ್ನು ಅತಿಯಾಗಿ ಹಚ್ಚಿಕೊಳ್ಳದಿರುವುದು, ಇಷ್ಟ-ಅನಿಷ್ಟಗಳು ಬಂದೊದಗಿದಾಗ ಎಂದೆಂದೂ ಬಗೆಗೆಡಡಿರುವುದು, ಬೇರೆಡೆ ಕದಲದೆ ನನ್ನಲ್ಲೆ ಅಚಲವಾದ ಭಕ್ತಿ, ಏಕಾಂತವಾಸ, ಜನಜಂಗುಳಿಯಲ್ಲಿ ಬೆರೆಯದಿರುವುದು, ಅಧ್ಯಾತ್ಮದ ಅರಿವಿನಲ್ಲೇ ನಿರಂತರ ಸ್ಥಿತಿ, ಅಪರೋಕ್ಷ ಜ್ಞಾನಕ್ಕಾಗಿ ಶಾಸ್ತದ ಅಧ್ಯಯನ,[ತತ್ವಜ್ಞಾನಕ್ಕೆ ಗೋಚರನಾದ ಭಗವಂತನ ಸಾಕ್ಷಾತ್ಕಾರ] ಇವೇ ಜ್ಞಾನ ಮತ್ತು ಜ್ಞಾನ ಸಾಧನಗಳು. ಅದಕ್ಕಿಂತ ಬೇರೆಯಾದದ್ದು ಅಜ್ಞಾನ ಮತ್ತು ಅಜ್ಞಾನದ ದಾರಿ.

(೧೩) ಅಸಕ್ತಿಃ : ‘ಸಕ್ತಿ’ ಎಂದರೆ ಹಚ್ಚಿಕೊಳ್ಳುವುದು ಅಥವಾ ಅಂಟಿಸಿಕೊಳ್ಳುವುದು(Attachment).  ಈ ವಿಚಾರವಾಗಿ ನಾವು ಹಿಂದೆ ಅನೇಕ ಬಾರಿ ಚರ್ಚಿಸಿದ್ದೇವೆ. ನಮ್ಮೆಲ್ಲ ದುಃಖಕ್ಕೂ ಮೂಲಕಾರಣ ‘ಸಕ್ತಿ’. ಆದ್ದರಿಂದ ಯಾವುದನ್ನೂ ಅಂಟಿಸಿಕೊಳ್ಳಬೇಡ. ಹುಟ್ಟುವಾಗ ನಾವು ಏನನ್ನೂ ತಂದಿಲ್ಲ, ಸಾಯುವಾಗ ಯಾವುದನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಲೌಕಿಕವಾದ ಈ ಸಕ್ತಿಯಿಂದ ದೂರ ನಿಲ್ಲು. ಬಂದದ್ದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸು, ಹೋದಾಗ ಭಗವಂತನ ಇಚ್ಛೆ ಎಂದು ಸಂತೋಷದಿಂದಿರು.      
(೧೪) ಅನಭಿಷ್ವಂಗಃ ಪುತ್ರ ದಾರ ಗೃಹದಿಷು : ಅಭಿಷ್ವಂಗ ಎಂದರೆ ಅತಿಯಾಗಿ ಹಚ್ಚಿಕೊಳ್ಳುವುದು(Over attachment). ಮನೆ, ಹೆಂಡತಿ(ಗಂಡ/ಹೆಂಡತಿ) ಮಕ್ಕಳು ಇತ್ಯಾದಿಯನ್ನು ಅತಿಯಾಗಿ ಹಚ್ಚಿಕೊಳ್ಳಬೇಡ ಎನ್ನುತ್ತಾನೆ  ಕೃಷ್ಣ.  ಇಲ್ಲಿ ಮನೆ ಸಂಸಾರವನ್ನು ಹಚ್ಚಿಕೊಳ್ಳದೆ ಇರುವುದು ಎಂದರೆ ಎಲ್ಲವನ್ನು ತೊರೆದು ಕಾಡಿಗೆ ಹೋಗುವುದಲ್ಲ. ‘ಇದನ್ನು ಬಿಟ್ಟು ನಾನು ಇರಲಾರೆ’ ಎನ್ನುವ ಅಭಿಷ್ವಂಗ ಬಿಟ್ಟುಬಿಡುವುದು ಅಷ್ಟೆ. ಜೀವನದಲ್ಲಿ ಏನು ಬರುತ್ತದೆ ಅದನ್ನು ಸಾಕ್ಷಿಭೂತನಾಗಿ ನೋಡು. ಜೀವನವೇ ಒಂದು ನಾಟಕ, ಅದರಲ್ಲಿ ನೀನೇ ಪಾತ್ರಧಾರಿ , ನೀನೇ  ಪ್ರೇಕ್ಷಕ. ಭಗವಂತ ನಿರ್ದೇಶಕ. ಇಲ್ಲಿ ನನ್ನ ಮಕ್ಕಳೇ ನನ್ನ ಬದುಕು, ನನ್ನ ಪತಿ/ಪತ್ನಿ ನನ್ನ ಬದುಕು, ನನ್ನ ಸಂಪಾದನೆಯೇ ನನ್ನ ಬದುಕು, ಇದನ್ನು ಬಿಟ್ಟು ನನ್ನ ಅಸ್ತಿತ್ವವಿಲ್ಲ ಎನ್ನುವ ಅತಿಯಾದ ಅಭಿಷ್ವಂಗ ಬೇಡ. ಪ್ರೀತಿಸು-ಆದರೆ ಹಚ್ಚಿಕೊಂಡು ಕೊರಗಬೇಡ, ನಿರಾಶನಾಗಬೇಡ. ಈ ರೀತಿ ಬದುಕಲು ಕಲಿತಾಗ ಜೀವನ ಸುಂದರವಾಗಿರುತ್ತದೆ. ನಮ್ಮಿಂದ ನಮ್ಮ ಮಕ್ಕಳು ದೂರವಾದರೆ, ಹೆಂಡತಿ/ಗಂಡ ದೂರವಾದರೆ, ನಾವು ನಮ್ಮ ಸಂಪತ್ತನ್ನು(ಮನೆ, ಆಸ್ತಿ ಇತ್ಯಾದಿ) ಕಳೆದುಕೊಂಡರೆ ದುಃಖ-ನಿರಾಶೆಯಾಗುವುದಿಲ್ಲ. ಈ ರೀತಿ ಬದುಕಿದಾಗ  ಜೀವನದಲ್ಲಿ ಏನು ದುರಂತ ಬಂದರೂ ಅದು ನಮ್ಮ ಪಾಲಿನ ಪಾತ್ರಾಭಿನಯ ಎನ್ನುವ ಭಾವನೆಯಿಂದ ನಾವು ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ-ಆಘಾತವಾಗುವುದಿಲ್ಲ.      
(೧೫) ನಿತ್ಯಮ್ ಚ ಸಮಚಿತ್ತತ್ವಮ್ ಇಷ್ಟನಿಷ್ಟ ಉಪಪತ್ತಿಷು : ಜೀವನದಲ್ಲಿ ಇಷ್ಟವಾದ ಘಟನೆ ನಡೆಯಬಹುದು, ಅನಿಷ್ಟವಾದ ಘಟನೆ ನಡೆಯಬಹುದು. ಇಷ್ಟ ಅನಿಷ್ಟಗಳು ಬಂದೊದಗಿದಾಗ ಮನಸ್ಸಿನ ಸಮತೊಲನವನ್ನು ಕಳೆದುಕೊಳ್ಳದೆ ಎಲ್ಲ ಸಮಯದಲ್ಲೂ ಸಮಚಿತ್ತತ್ವದಿಂದಿರಲು ಕಲಿ.  ನಾವು ಅನಿಷ್ಟ ಅಂದುಕೊಂಡಿದ್ದು ಅನಿಷ್ಟವಾಗಿರಬೇಕೆಂದಿಲ್ಲ ಅಥವಾ ನಾವು ಇಷ್ಟಪಟ್ಟಿದ್ದು ಒಳ್ಳೆಯದಾಗಿರಬೇಕೆಂದಿಲ್ಲ. ಆದ್ದರಿಂದ ಇಷ್ಟ-ಅನಿಷ್ಟ ಎಂದು ಲೇಪ ಹಚ್ಚದೆ ಬಂದಿದ್ದನ್ನು ‘ನಾಹಂ ಕರ್ತಾ ಹರಿಃ ಕರ್ತಾ’ ಎಂದು ಸ್ವೀಕರಿಸಲು ಕಲಿ. ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆ ಭಗವಂತ ನಮ್ಮ ತರಬೇತಿಗಾಗಿ ಸೃಷ್ಟಿಸಿರುವ ಪ್ರಾಯೋಗಿಕ(Practical)ಶಿಕ್ಷಣ. ಭಗವಂತ ನಮಗೆ ದುಃಖವನ್ನು ಕೊಟ್ಟು ನಮ್ಮನ್ನು ಜಾಣರನ್ನಾಗಿ ಮಾಡುತ್ತಾನೆ ಎನ್ನುವ ಸತ್ಯವನ್ನು ಅರಿತು ಬದುಕು.
(೧೬) ಮಯಿ ಚನನ್ಯಯೋಗೇನ ಭಕ್ತಿಃ ಅವ್ಯಭಿಚಾರಿಣೀ: ಭಗವಂತನಲ್ಲಿ ನಿರಂತರ ಪರಿಶುದ್ಧ ಭಕ್ತಿ  ಇರಲಿ. ಭಗವಂತ ಒಬ್ಬನೆ, ಆತನ ನಾಮ ಹಲವು. ಆತನಲ್ಲಿ ಅನನ್ಯವಾದ ಭಕ್ತಿಯನ್ನಿಡು. ಇಲ್ಲಿ ಏಕಭಕ್ತಿ ಬಹಳ ಮುಖ್ಯ. ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸುವುದು, ಒಂದು ದೇವತೆಯನ್ನು ಪೂಜಿಸಿದಾಗ ಇನ್ನೊಂದು ದೇವತೆ ಕೋಪಗೊಳ್ಳಬಹುದು ಎನ್ನುವ ಭಯದಿಂದ ಅನೇಕ ದೇವತಾ ಆರಾಧನೆ ಮಾಡುವುದು ಮಾಡಿದರೆ ಅದು ವ್ಯಭಿಚಾರವಾಗುತ್ತದೆ. ಆದ್ದರಿಂದ ಕೃಷ್ಣ ಇಲ್ಲಿ “ನಿನ್ನ ಭಕ್ತಿ ಅನನ್ಯವಾಗಿದ್ದು ಅವ್ಯಭಿಚಾರಿಣಿಯಾಗಿರಬೇಕು” ಎಂದು ಒತ್ತಿ ಹೇಳಿದ್ದಾನೆ. ಭಗವಂತ ಸರ್ವಸಮರ್ಥ, ಸರ್ವಶಕ್ತ, ಜಗತ್ಜನ್ಮಾದಿ ಕಾರಣ ಎನ್ನುವ ನಿಷ್ಠೆ ನಿನ್ನಲ್ಲಿರಲಿ. ದೇವರ ಮೇಲೆ ನಂಬಿಕೆ ಇಲ್ಲದೆ ಯಾವ ಶಾಸ್ತ್ರ ಓದಿ ಏನೂ ಉಪಯೋಗವಿಲ್ಲ. ಭಗವಂತನ ಮೇಲಿನ ಪೂರ್ಣ ನಂಬಿಕೆಯಿಂದ ಮಾತ್ರ ಜ್ಞಾನ ಸಾಧನ ಸಾಧ್ಯ.   
(೧೭) ವಿವಿಕ್ತ ದೇಶ ಸೇವಿತ್ವಮ್: ಸಾಧ್ಯವಾದಷ್ಟು ಅತಿ ಹೆಚ್ಚು ಸಾತ್ವಿಕ ಕಂಪನವಿರುವ ಕಡೆ, ಸಾತ್ವಿಕ ಜನರ ಜೊತೆಗೆ ವಾಸ ಮಾಡಲು ಪ್ರಯತ್ನಿಸು. ಪೂರ್ಣಪ್ರಮಾಣದಲ್ಲಿ ಅಖಂಡವಾದ ಸಾತ್ವಿಕ ಕಂಪನವಿರುವ ಸ್ಥಳ  ಪುಣ್ಯಕ್ಷೇತ್ರವೆನಿಸುತ್ತದೆ. ಅಂತಹ ಸ್ಥಳದಲ್ಲಿ ಒಳ್ಳೆಯದನ್ನು ಮಾತನಾಡುವ, ಒಳ್ಳೆಯ ಚಿಂತನೆ ಮಾಡುವ ಸಜ್ಜನರೊಂದಿಗೆ ವಾಸಮಾಡು. ಇದು ಸಾಧ್ಯವಾಗದೇ ಇದ್ದಲ್ಲಿ ಆದಷ್ಟು ಏಕಾಂತವಾಸವನ್ನು ಅಭ್ಯಾಸ ಮಾಡು. ನಾಲ್ಕು ಜನರೊಂದಿಗೆ ಸೇರಿ ಹಾಳು ಹರಟೆಯಲ್ಲಿ ನಿನ್ನ ಅಮೂಲ್ಯವಾದ ಜನ್ಮವನ್ನು ವ್ಯರ್ಥ ಮಾಡಿಕೊಳ್ಳಬೇಡ.    
(೧೮) ಅತಿಃ ಜನ ಸಂಸದಿ: ಎಲ್ಲಿ ಬೇಡವಾದ ವಿಚಾರಕ್ಕಾಗಿ ಜನಜಂಗುಳಿ ಸೇರುತ್ತದೋ, ಅಂಥಹ ಜನಜಂಗುಳಿಯಿಂದ ದೂರವಿರು.
(೧೯) ಅಧ್ಯಾತ್ಮ ಜ್ಞಾನ ನಿತ್ಯತ್ವಮ್ : ಅಧ್ಯಾತ್ಮದ ಅರಿವಿನಲ್ಲಿ ನಿರಂತರವಾಗಿರು. ಮೊದಲು ಪಿಂಡಾಂಡ-ಬ್ರಹ್ಮಾಂಡವನ್ನು ತಿಳಿ,  ಆನಂತರ ಇದನ್ನು ತಿಳಿಯುವ ಅಪೂರ್ವ ಮನಸ್ಸಿನ ವಿಸ್ಮಯದ ಬಗ್ಗೆ ತಿಳಿ,  ನಂತರ ‘ನಾನು’ ಎಂದರೆ ಏನು(Awareness of self) ಎನ್ನುವುದನ್ನು ತಿಳಿ. ಇದು ತಿಳಿದಮೇಲೆ ಈ ಆತ್ಮವನ್ನು ನಿಯಂತ್ರಿಸುವ ಪರಮಾತ್ಮನನ್ನು ತಿಳಿ. ಇದು ಅಧ್ಯಾತ್ಮಜ್ಞಾನ. ನಿನ್ನ ಅಧ್ಯಯನದ ಗುರಿ ಅಧ್ಯಾತ್ಮ ಜ್ಞಾನವಾಗಿರಲಿ.   
(೨೦) ತತ್ತ್ವಜ್ಞಾನರ್ಥ ದರ್ಶನಮ್: ಜಗತ್ತಿನ ಮೂಲಭೂತ ಸತ್ಯ ತಿಳಿಯುವುದಕ್ಕೆ ನಿನ್ನ ಅಧ್ಯಯನ ಮೀಸಲಿರಲಿ. ಮೇಲಿನ ಎಲ್ಲ ಗುಣಗಳಿಂದ ಎಲ್ಲ ಶಾಸ್ತ್ರಗಳಿಗೆ ವಿಷಯಭೂತನಾದ, ಎಲ್ಲ ಶಾಸ್ತ್ರಗಳಿಂದ ಪ್ರತಿಪಾಧ್ಯನಾದ ಭಗವಂತನ ಸಾಕ್ಷಾತ್ಕಾರ ಪಡೆ.
ಇಲ್ಲಿ ಹೇಳಿರುವ ಗುಣಗಳೇ ಜ್ಞಾನ ಮತ್ತು ಜ್ಞಾನ ಸಾಧನಗಳು. ಇದಕ್ಕಿಂತ ಬೇರೆಯಾಗಿರುವುದು ಅಜ್ಞಾನ ಮತ್ತು ಅಜ್ಞಾನದ ಗುರಿ. 

Tuesday, October 25, 2011

Bhagavad Gita Kannada Chapter-13 Shloka-7


ಜ್ಞಾನದ ದಾರಿಯಲ್ಲಿ ಸಾಗಬೇಕಿದ್ದರೆ ನಮ್ಮ ನಡತೆಯಲ್ಲಿ ನಾವು ಅನುಸರಿಸಬೇಕಾದ ಕೆಲವು ನೀತಿ ಸಂಹಿತೆ(code of conduct)ಗಳಿವೆ. ಅದನ್ನು ನಾವು ಅನುಸರಿಸಬೇಕು. ನಾವು ನಮ್ಮ ಜೀವನದಲ್ಲಿ ಅನುಸರಿಸಬೇಕಾದ ಇಪ್ಪತ್ತು ಗುಣ(discipline)ಗಳನ್ನು ಕೃಷ್ಣ ಮುಂದಿನ ಐದು ಶ್ಲೋಕಗಳಲ್ಲಿ ವಿವರಿಸುತ್ತಾನೆ. ಈ ಗುಣಗಳಲ್ಲಿ ಪ್ರತಿಯೊಂದನ್ನು ನಮ್ಮ ಜೀವನದಲ್ಲಿ ಎಷ್ಟು ಹೆಚ್ಚು ಅಳವಡಿಸಿಕೊಂಡೆವೋ ಅಷ್ಟು ನಾವು ಜ್ಞಾನ ದಾರಿಯಲ್ಲಿ ಸಾಗಬಹುದು. ಇಲ್ಲದಿದ್ದರೆ ನಾವು ಅಜ್ಞಾನದ ದಾರಿಯಲ್ಲಿ ಸಾಗಬೇಕಾಗುತ್ತದೆ ಎನ್ನುವ ಎಚ್ಚರವನ್ನು ಕೂಡ ಕೃಷ್ಣ  ಇಲ್ಲಿ ಕೊಟ್ಟಿದ್ದಾನೆ.

ಅಮಾನಿತ್ವಮಡಂಭಿತ್ವಮಹಿಂಸಾ ಕ್ಷಾಂತಿರಾರ್ಜವಮ್
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ                

ಅಮಾನಿತ್ವಮ್ ಅಡಂಭಿತ್ವಮ್ ಅಹಿಂಸಾ ಕ್ಷಾಂತಿಃ ಆರ್ಜವಮ್
ಚಾರ್ಯ ಉಪಾಸನಮ್ ಶೌಚಮ್  ಸ್ಥೈರ್ಯಮ್ ಆತ್ಮವಿನಿಗ್ರಹಃ -- ಬಿಂಕ ತೊರೆಯುವುದು, ಹಿರಿತನದ ಸೋಗು ಹಾಕದಿರುವುದು, ನೋಯಿಸದಿರುವುದು, ಸೈರಣೆ, ನೇರ ನಡೆ ನುಡಿ, ಗುರುಸೇವೆ, ಮೈಮನಗಳ ಮಡಿ, ಕದಲದ ತೀರ್ಪು, ಬಗೆಯ ಬಿಗಿತ,

(೧) ಅಮಾನಿತ್ವಮ್: ಜ್ಞಾನ ಗಳಿಸುವುದಕ್ಕಾಗಿ ನಾವು ಮಾನ-ಸಮ್ಮಾನದ ಬಯಕೆಯನ್ನು ಬಿಡಬೇಕು. ತನಗೆ ಸನ್ಮಾನವಾಗಬೇಕು, ಪ್ರಶಸ್ತಿ ಸಿಗಬೇಕು ಎನ್ನುವ ನಿರೀಕ್ಷೆಯಲ್ಲಿರುವವರಿಗೆ ಎಂದೂ ಜ್ಞಾನ ಸಿದ್ಧಿಯಾಗದು. ಅದಕ್ಕಾಗಿ ಪ್ರಚಾರಪ್ರೀಯತೆಯನ್ನು ನಾವು ಮೊದಲು ಬಿಡಬೇಕು. ಎಲ್ಲ ಪ್ರಚಾರಗಳಿಗೆ ತಿಲಾಂಜಲಿ ಕೊಟ್ಟು ಜ್ಞಾನದ ಬೆನ್ನು ಹತ್ತು- ಆಗ ಜ್ಞಾನ ದಕ್ಕುತ್ತದೆ. ಯಾರಾದರೂ ನಿನ್ನನ್ನು ಮೆಚ್ಚಿಕೊಂಡರೆ ಅದು ಅವರ ದೊಡ್ಡಸ್ತಿಕೆ- ಅಲ್ಲಿ ನಮ್ರತೆಯಿಂದಿರು. 
(೨) ಅಡಂಭಿತ್ವಮ್ : ಎಲ್ಲರ ಮುಂದೆ ಸಣ್ಣವನಾಗಿ ಬದುಕಲು ಕಲಿ. ದೊಡ್ಡಸ್ತಿಕೆಯ ಪ್ರದರ್ಶನ ಬೇಡ. ಜ್ಞಾನ ಮಾರ್ಗದಲ್ಲಿ ಎಂದೂ ಪ್ರಾಮಾಣಿಕತೆಯಿಂದ ಅತ್ತ ಸರಿಯಬೇಡ. ಇಲ್ಲದ್ದನ್ನು ಇದೆ ಎಂದು ತೋರಿಸಲು ಹೋಗಬೇಡ.
(೩) ಅಹಿಂಸಾ : ಎಂದೂ ಇನ್ನೊಬ್ಬರನ್ನು ನೋಯಿಸಬೇಡ. ನಾವು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿದರೆ ಅದನ್ನು ಮರಳಿ ವಾಸಿ ಮಾಡುವ ಯಾವ ಔಷಧವೂ ಇಲ್ಲ. ಆದ್ದರಿಂದ ಎಂದೂ ಇನ್ನೊಬ್ಬರನ್ನು ಮುಖಭಂಗ(Insult) ಮಾಡಬೇಡ. ಇನ್ನೊಬ್ಬರಿಗೆ ತೊಂದರೆ ಕೊಡದೆ ಇರುವುದು ಅಹಿಂಸೆ.
(೪)  ಕ್ಷಾಂತಿಃ :  ಪ್ರತಿಕಾರ ಮಾಡದೇ ಇರುವುದು. ಒಬ್ಬರು ನಮಗೆ ಕೇಡು ಬಗೆದಾಗ ನಾವು ಅದಕ್ಕೆ ಪ್ರತಿಕೇಡು ಬಗೆಯಲು ಹೋಗಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಒಂದು ವ್ಯವಸ್ಥೆ ಇದೆ. ಲೌಕಿಕವಾಗಿ ನೋಡಿದರೆ, ಯಾರಾದರು ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ಕೊಡುವ  ಜವಾಬ್ಧಾರಿ ಆರಕ್ಷಕ ಮತ್ತು ನ್ಯಾಯಾಂಗ ವ್ಯವಸ್ಥೆಯದೆ ಹೊರತು ನಮ್ಮದಲ್ಲ. ಒಂದು ವೇಳೆ ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಹೊರಟರೆ ಅದು ಕಾನೂನನ್ನು ಕೈಯಲ್ಲಿ ತೆಗೆದುಕೊಂಡ ಅಪರಾಧವಾಗುತ್ತದೆ. ಅದೇ ರೀತಿ ಭಗವಂತನ ರಾಜ್ಯದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಪ್ರತ್ಯೇಕ ವ್ಯವಸ್ಥೆ ಇದೆ. ಆದ್ದರಿಂದ ನಿನಗೆ ಪ್ರತೀಕಾರ ತೆಗೆದುಕೊಳ್ಳುವುದಕ್ಕಾಗಲಿ  ಶಾಪ ಹಾಕುವುದಕ್ಕಾಗಲಿ ಹಕ್ಕಿಲ್ಲ.
ಈ ಮೇಲಿನ ಗುಣಗಳಿಗೆ ಉತ್ತಮ ದೃಷ್ಟಾಂತ ಜಡಭರತ ಮತ್ತು ರೈಕ್ವ ಮುನಿ. ಇವರ ಜೀವನ ಚರಿತ್ರೆಯನ್ನು ಓದಿದರೆ ಅವರು ಈ ಗುಣವನ್ನು ತಮ್ಮ ಜೀವನದಲ್ಲಿ ಹೇಗೆ ಪಾಲಿಸಿದ್ದರು ಎನ್ನುವುದು ತಿಳಿಯುತ್ತದೆ.
(೫) ಆರ್ಜವಮ್ : ಮುಖವಾಡವಿಲ್ಲದ ಬದುಕು. ನೇರ ನಡೆ ನುಡಿ. ಒಳಗೊಂದು ಹೊರಗೊಂದು ಇಲ್ಲದ ಪ್ರಾಮಾಣಿಕ ಬದುಕು(Sincerity-Straightforwardness).
(೬) ಆಚಾರ್ಯೋಪಾಸನಮ್: ಆಚಾರ್ಯ ಎಂದರೆ ಯಾವುದು ಸರಿ ಯಾವುದು ತಪ್ಪು ಎಂದು ಚನ್ನಾಗಿ ತಿಳಿದು ಅದನ್ನು ಆಚರಣೆಗೆ ತರುವವನು. ತಾನು ಸತ್ಯವನ್ನು ಕಂಡು, ಸಮಾಜದ ಮುಂದೆ ಅದನ್ನು ನಡೆದು ತೋರಿಸುವವರು. ಅಂಥವರ ಸೇವೆ ಮಾಡು. ಜ್ಞಾನಿಗಳು ಸುಲಭವಾಗಿ ಸಿಗುವುದಿಲ್ಲ ಮತ್ತು ಅವರು ಸಾಮಾನ್ಯವಾಗಿ ಪರೀಕ್ಷಿಸದೆ ಜ್ಞಾನ ಧಾರೆ ಮಾಡುವುದಿಲ್ಲ. ಏನೇ ಆದರೂ ಜ್ಞಾನಿಗಳ ಬೆನ್ನುಬಿಡಬೇಡ. ನಿನ್ನಲ್ಲಿರುವ ಜ್ಞಾನ ತೃಷೆ ಗಾಢವಾಗಿದ್ದಲ್ಲಿ ಖಂಡಿತವಾಗಿ ಅವರು ಜ್ಞಾನ ಧಾರೆ ಮಾಡುತ್ತಾರೆ. ಜ್ಞಾನ ಬೇಕಿದ್ದರೆ ಜ್ಞಾನಿಗಳು ತೆರೆದುಕೊಳ್ಳುವ ತನಕ ಕಾಯಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಶ್ವೇತಕೇತು ಮತ್ತು  ಪ್ರಶ್ನೋಪನಿಷತ್ತಿನಲ್ಲಿ ಬರುವ ಪಿಪ್ಪಲಾದರ ಕಥೆ.
(೭) ಶೌಚಮ್: ಶೌಚ ಎಂದರೆ ಶುಚಿತ್ವ. ಈ ವಿಷಯವನ್ನು ಹಿಂದಿನ ಅಧ್ಯಾಯದಲ್ಲಿ ಸ್ವಲ್ಪ ಮಟ್ಟಿಗೆ ನೋಡಿದ್ದೇವೆ. ಕನ್ನಡದಲ್ಲಿ ಶೌಚಮ್ ಎಂದರೆ ‘ಮಡಿ’. ನಾವು ಮಡಿ ಮಾಡುವುದನ್ನು ಬಿಟ್ಟು ಮಡಿಯಾಗುವುದನ್ನು ಕಲಿಯಬೇಕು. ಸ್ನಾನ ಮಾಡಿ ಒದ್ದೆ ಬಟ್ಟೆ ಉಟ್ಟು ಯಾರನ್ನೂ ಮುಟ್ಟದೆ ಇದ್ದರೆ ಮಡಿಯಾಗಲು ಸಾಧ್ಯವಿಲ್ಲ.  ಶುಚಿ ಎನ್ನುವುದು ಮೂಲಭೂತವಾಗಿ ಮನಸ್ಸಿಗೆ ಸಂಬಂಧಪಟ್ಟಿದ್ದು. ಅದಕ್ಕೆ ಪೂರಕವಾಗಿ ದೇಹ ಶುದ್ಧಿ. ಪ್ರಾಪಂಚಿಕ ವಿಚಾರವನ್ನು ಮರೆತು, ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು ಮಡಿ. ನಾವು ಕಾಯೇನ-ವಾಚಾ-ಮನಸಾ ಮಡಿಯಾಗಬೇಕು. ನಮ್ಮಲ್ಲಿ ಕೆಟ್ಟ ಯೋಚನೆ ಬಂದರೆ, ಕೆಟ್ಟ ಮಾತು ಬಾಯಲ್ಲಿ ಬಂದರೆ- ಆಗ  ನಾವು ಮೈಲಿಗೆ. ನಿಜವಾಗಿ ಕಾಯೇನ-ವಾಚಾ-ಮನಸಾ ಮಡಿಯಾಗಿರುವವ ಮೈಲಿಗೆಯವರೊಂದಿಗಿದ್ದರೆ  ಜೊತೆಗಿರುವವರೆಲ್ಲರೂ ಮಡಿಯಾಗಬಹುದು. ಇದನ್ನೇ ಹಿಂದೆ ‘ಪಂಕ್ತಿಪಾವನ’ ಎಂದು ಕರೆಯುತ್ತಿದ್ದರು. ಪೂರ್ಣ ಮಡಿಯಾಗಿರುವವ ಯಾವ ಪಂಕ್ತಿಯಲ್ಲಿ ಕುಳಿತನೋ ಆ ಪಂಕ್ತಿ ಮಡಿ. ಶಾಸ್ತ್ರ ಜ್ಞಾನವಿಲ್ಲದ ಮಡಿ ಮಡಿಯಲ್ಲ. ದೇವರ ಸ್ಮರಣೆ ಮನಸ್ಸಿನಲ್ಲಿ, ದೇವರ ನಾಮ ಬಾಯಿಯಲ್ಲಿ ಇದ್ದಾಗ ನಾವು ಮಡಿ.
ಮನಸ್ಸನ್ನು ಶುದ್ಧ ಮಾಡುವುದಕ್ಕೋಸ್ಕರ ಆಚಮನ ಮತ್ತು ಪ್ರಾಣಯಾಮ. “ಓ ಭಗವಂತ,  ನಿನ್ನ ಕಾರುಣ್ಯಧಾರೆಯಿಂದ ನನ್ನ ಸಹಸ್ರಾರದಿಂದ ಅಮೃತವನ್ನು ಕೆಳಕ್ಕೆ ಇಳಿಸಿ, ನನ್ನ ಇಡೀ ಮೈ ಪಾವನವಾಗುವಂತೆ ಮಾಡು, ನನ್ನೊಳಗಿನ ಎಲ್ಲ ಪಾಪಗಳೂ ಕೊಳೆಗಳೂ ಸುಟ್ಟು ತೊಳೆದುಹೋಗಲಿ” ಎನ್ನುವ ಅನುಸಂಧಾನದಿಂದ,  ಧ್ಯಾನಪೂರ್ವಕ ಪಾಪಪುರುಷ ನಿರಸನ ಮಾಡಬೇಕು. ಇಲ್ಲಿ ನಮ್ಮ ತಲೆಯಿಂದ ಅಮೃತಧಾರೆ ಇಳಿದು ಬರುವುದನ್ನು ನಾವು ಅನುಭವಿಸಬೇಕು(Feel it). ಪ್ರಾಣಾಯಾಮದಿಂದ ನಮ್ಮೊಳಗಿನ ಎಲ್ಲ ಕೊಳೆ ಸುಟ್ಟು ಹೋಗುತ್ತದೆ. ನಮ್ಮ ಅಂಗಾಂಗದಲ್ಲಿ ಕೂತ ಭಗವಂತನ ಸ್ಮರಣೆಯೇ ಆಚಮನ. “ಓ ನೀರೆ, ನೀನು ಸುಖದ ಸೆಲೆ, ನೀನು ಸುಖದ ನೆಲೆ, ನಿನ್ನನ್ನು ಪ್ರೋಕ್ಷಿಸಿಕೊಳ್ಳುತ್ತಿದ್ದೇನೆ. ಆ ಭಗವಂತ ನನ್ನಲ್ಲಿ ಬಂದು ನೆಲೆಸುವಂತೆ ಮಾಡು” ಎಂದು ಪ್ರಾರ್ಥಿಸಿ ಪ್ರೋಕ್ಷಣೆಮಾಡಿಕೊಳ್ಳಬೇಕು. ಇದೆಲ್ಲವನ್ನು ನಾವು ತಿಳಿದು ಮಾಡಿದಾಗ ಮಾತ್ರ  ಮಡಿಯಾಗುತ್ತೇವೆ. ದೇವರನ್ನು ನೆನೆಯುವುದೇ ಮಡಿ. ದೇವರನ್ನು ಮರೆಯುವುದೇ ಮೈಲಿಗೆ. ಪುಂಡರೀಕಾಕ್ಷನ ಸ್ಮರಣೆ ಇಲ್ಲದೆ, ಅಂತರಂಗ ಶುದ್ಧಿ ಅಸಾಧ್ಯ.
(೮) ಸ್ಥೈರ್ಯಮ್ : ಮನಸ್ಸಿನ ಸ್ಥಿರತೆ(Conviction)ಸ್ಥೈರ್ಯ. ನಮಗೆ ನಮ್ಮದೇ ಆದ ಸ್ವಂತ ನಿರ್ಧಾರ ಬೇಕು. ಯಾರೋ ಹೇಳಿದಂತೆ ನಾವು ನಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುತ್ತಾ ಗೊಂದಲಕ್ಕೊಳಗಾಗಬಾರದು. ನಾವು ನಮ್ಮ ತಲೆಯಲ್ಲಿ ಚಿಂತಿಸಬಲ್ಲವರಾಗಬೇಕು. ನಮಗೆ ಯಾವುದಾದರೂ ಪ್ರಶ್ನೆ ಬಂದರೆ ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಸಾಮರ್ಥ್ಯ ನಮ್ಮ ತಲೆಯಲ್ಲೇ ಇರುತ್ತದೆ. “ಎಲ್ಲಿ ಪ್ರಶ್ನೆ ಇದೆಯೊ ಅಲ್ಲೇ ಉತ್ತರವೂ ಇರುತ್ತದೆ”. ಶಾಸ್ತ್ರವನ್ನು ಚನ್ನಾಗಿ ಅಧ್ಯಾಯನ ಮಾಡಿ ನೀನೇ ನಿನ್ನ ಸಮಸ್ಯೆಗೆ ಉತ್ತರ ಕಂಡುಕೊಂಡು ದೃಢವಾಗಿ ಕೆಲಸ ಮಾಡು. ಯಾರ ಯಾರೋ ಮಾತನ್ನು ಕೇಳಿ ಗೊಂದಲಗೊಳ್ಳದೆ ಸ್ಥೈರ್ಯವನ್ನು ಸಾಧಿಸು.   
(೯) ಆತ್ಮವಿನಿಗ್ರಹಃಇಂದ್ರಿಯ ನಿಯಂತ್ರಣ(Self Control). ನಮ್ಮ ಇಂದ್ರಿಯ ನಮ್ಮ ಹಿಡಿತದಲ್ಲಿರಬೇಕು. ಇಂದ್ರಿಯ ಹಿಡಿತಲ್ಲಿರಬೇಕಾದರೆ ನಾವು ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಮನಸ್ಸಿನ ಕೈಯಲ್ಲಿ ನೀನು ಮಂಗನಾಗಬೇಡ, ಮನಸ್ಸನ್ನು ನೀನು ನಿಯಂತ್ರಿಸು. ಇದಕ್ಕಾಗಿ ನಿನ್ನ ಮನಸ್ಸನ್ನು ದೇವರಲ್ಲಿ ನೆಲೆ ನಿಲ್ಲಿಸು. ಹೀಗೆ ಮನೋನಿಗ್ರಹದಿಂದ ಇಂದ್ರಿಯ ನಿಗ್ರಹ ಸಾಧಿಸು.           

Monday, October 17, 2011

Bhagavad Gita Kannada Chapter-13 Shloka 5-6



ಮಹಾಭೂತಾನ್ಯಹಂಕಾರೋ ಬುದ್ಧಿರವ್ಯಕ್ತಮೇವ ಚ  
ಇಂದ್ರಿಯಾಣಿ ದಶೈಕಂ ಚ ಪಂಚ ಚೇಂದ್ರಿಯಗೋಚರಾಃ                    

ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ಧೃತಿಃ      
ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್                   

ಮಹಾಭೂತಾನಿ[ಮಹಾನ್ ಭೂತಾನಿ]ಅಹಂಕಾರಃ ಬುದ್ಧಿಃ ಅವ್ಯಕ್ತ ಏವ ಚ
ಇಂದ್ರಿಯಾಣಿ ದಷ ಏಕಮ್  ಚ ಪಂಚ ಚ ಇಂದ್ರಿಯ ಗೋಚರಾಃ 
ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಃ ಚೇತನಾ ಧೃತಿಃ      
ಏತತ್ ಕ್ಷೇತ್ರಂ ಸಮಾಸೇನ ಸವಿಕಾರ ಉದಾಹೃತಮ್ -- ಮಣ್ಣು[ಪೃಥಿವಿ], ನೀರು[ವರುಣ], ಬೆಂಕಿ[ಅಗ್ನಿ], ಗಾಳಿ[ವಾಯುಪುತ್ರ ಮರೀಚಿ], ಬಾನು[ಅವಕಾಶ ದೇವತೆ, ವಿಘ್ನನಾಶ-ವಿನಾಯಕ-ಗಣಪತಿ]-ಎಂಬ ಐದು ಮಹಾಭೂತಗಳು. ಅಹಂಕಾರತತ್ವ [ಬ್ರಹ್ಮವಾಯು ಮತ್ತು ಶಿವ], ಬುದ್ಧಿತತ್ವ[ಪಾರ್ವತಿ], ಮೂಲಪ್ರಕೃತಿ[ಶ್ರೀ], ಕಿವಿ[ಚಂದ್ರ], ತೊಗಲು[ವಾಯುಪುತ್ರ ಮರುತ್], ಕಣ್ಣು[ಸೂರ್ಯ], ನಾಲಿಗೆ[ವರುಣ], ಮೂಗು[ಅಶ್ವಿಗಳು], ಬಾಯಿ[ಅಗ್ನಿ], ಕೈಗಳು[ವಾಯುಪುತ್ರರಿಬ್ಬರು], ಕಾಲುಗಳು[ಇಂದ್ರ ಪುತ್ರರಾದ ಯಜ್ಞ(ಜಯತ) ಮತ್ತು ಶಂಭು], ಪಾಯು[ಯಮ], ಉಪಸ್ಥ[ಲಿಂಗ ದೇವತೆ ಶಿವ-ಗಂಡಸರಲ್ಲಿ ; ಸ್ವಾಯಂಭುವಮನು-ಸ್ತ್ರೀಯರಲ್ಲಿ] ಹೀಗೆ ಹತ್ತು ಇಂದ್ರಿಯಗಳು. ಹನ್ನೊಂದನೆಯದು ಮನಸ್ತತ್ವ[ಇಂದ್ರ, ಕಾಮ ಮತ್ತು ಅನಿರುದ್ಧ] ಮತ್ತು ಐದು ಜ್ಞಾನೇಂದ್ರಿಯ ವಿಷಯಗಳು: ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ[ರುದ್ರ ಪುತ್ರರಾದ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ]ಇವು ೨೪ ಅಡಕವಾಗಿ ಕ್ಷೇತ್ರಗಳು.
ಬಯಕೆ[ಶ್ರೀ ಮತ್ತು ಭಾರತಿ], ದ್ವೇಷ[ದ್ವಾಪರ-ಶಕುನಿ], ಸುಖ[ಮುಖ್ಯಪ್ರಾಣ-ವಾಯು-ಭೀಮ], ದುಃಖ[ಕಲಿ-ದುರ್ಯೋಧನ], ಸಮಷ್ಟಿಶರೀರ[ಶರೀರದಲ್ಲಿರುವ ಅಭಿಮಾನಿ ಜೀವ; ಸಮಸ್ತ ಅಭಿಮಾನಿ ದೇವತೆಗಳು], ನೆನಪಿನ ಹರಹು[ಶ್ರೀ], ಧೈರ್ಯ[ಸರಸ್ವತಿ ಮತ್ತು ಭಾರತಿ] ಇವು ಏಳು ವಿಶೇಷ ಕ್ರಿಯೆಗಳಾದ ವಿಕಾರಗಳು. ಹೀಗೆ ವಿಕಾರಗಳ ಜತೆ ಕ್ಷೇತ್ರವನ್ನು ಅಡಕವಾಗಿ ಹೇಳಿದ್ದಾಯಿತು.

ಈ ಎರಡು ಶ್ಲೋಕಗಳಲ್ಲಿ ಕೃಷ್ಣ  ಕ್ಷೇತ್ರ ಮತ್ತು ಕ್ಷೇತ್ರದ ವಿಕಾರವನ್ನು ವಿವರಿಸಿದ್ದಾನೆ. ಕ್ಷೇತ್ರ ಎನ್ನುವ ಅಖಂಡ ಘಟಕದೊಳಗೆ ಇರುವ ಜಗತ್ತಿನ ಘಟಕಾಂಶಗಳನ್ನು ಕೃಷ್ಣ ಇಲ್ಲಿ ಸೂತ್ರ ರೂಪದಲ್ಲಿ ಅಡಕವಾಗಿ ವಿವರಿಸಿದ್ದಾನೆ. ಮೊದಲನೆಯದಾಗಿ ಪಂಚಮಹಾಭೂತಗಳು. ಈ ಐದರಿಂದ ಈ ಪಿಂಡಾಂಡ ಮತ್ತು ಬ್ರಹ್ಮಾಂಡ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ ಬ್ರಹ್ಮಾಂಡವನ್ನು ‘ಪ್ರ-ಪಂಚ’ ಎಂದು ಕರೆಯುತ್ತಾರೆ. ಈ ಪಂಚ ಮಹಾಭೂತಗಳೇ ಪ್ರಪಂಚದ ಮೂಲದ್ರವ್ಯ. ಪಿಂಡಾಂಡದಲ್ಲಿ  ಈ ಪಂಚ ಮಹಾಭೂತಗಳನ್ನು ಅನ್ನಮಯ ಮತ್ತು ಪ್ರಾಣಮಯ ಎಂದು ಕರೆಯತ್ತಾರೆ. ಕಾಣುವ ಸ್ಥೂಲ ಶರೀರ ಪ್ರಥಿವಿ ಮತ್ತು ನೀರಿನ ಭಾಗದಿಂದಾಗಿದೆ. ಇಂಥಹ ಸ್ಥೂಲ ಶರೀರದೊಳಗೆ ಕಾಣದ ಪ್ರಾಣಮಯಕೊಶವಿದೆ. ದೇಹದ ಶಾಖ(ಬೆಂಕಿ), ಉಸಿರಾಟ(ಗಾಳಿ) ಮತ್ತು ಒಳಗೆ ರಕ್ತ-ಗಾಳಿ ಸಂಚಾರದ ಅವಕಾಶ(ಆಕಾಶ). ಇದರಿಂದಾಚೆಗೆ ಮನಸ್ಸು ಮತ್ತು ಬುದ್ಧಿಯನ್ನೂಳಗೊಂಡ ಮನೋಮಯಕೋಶ, ಅದರಿಂದಾಚೆಗೆ ವಿಜ್ಞಾನಮಯಕೋಶ-ಸ್ಮರಣಶಕ್ತಿ. ಆದ್ದರಿಂದ ಬುದ್ದಿಗೆ ಮೊದಲು ಅಹಂಕಾರ ಮತ್ತು ಚಿತ್ತ. ಇಲ್ಲಿ ಅಹಂಕಾರ ಅಂದರೆ ‘ನನ್ನ ಅಸ್ತಿತ್ವದ ಅರಿವು(awareness of self)’. ಈ ಅಹಂಕಾರ ತತ್ವ ಪಿಂಡಾಂಡದಲ್ಲಿ ಚಿತ್ತ, ಬ್ರಹ್ಮಾಂಡದಲ್ಲಿ ಮಹತತ್ವ.
ವ್ಯಕ್ತವಾಗುವ ಈ ಪ್ರಪಂಚದ ಮೂಲ ಅವ್ಯಕ್ತ. ಸೃಷ್ಟಿಯ ಮೂಲಸ್ಥಿತಿ-ಪ್ರಳಯಸಾಗರ. ಅಂದರೆ ಪರಮಾಣುರೂಪದಲ್ಲಿ ಚದುರಿಕೊಂಡಿರುವ ಅವ್ಯಕ್ತ ಪ್ರಪಂಚ. ಇಂಥಹ ಪ್ರಪಂಚದಲ್ಲಿ ಚತುರ್ಮುಖ ಮಹಾತತ್ವವನ್ನು ಸೃಷ್ಟಿ ಮಾಡಿದ. ಪ್ರಳಯ ಸಾಗರದಲ್ಲಿ ತನ್ನ ಅಸ್ತಿತ್ವದ ಅರಿವಿಲ್ಲದೆ ಇದ್ದ ಜೀವಗಳಿಗೆ ‘ನಾನು’ ಎನ್ನುವ ಅರಿವು ಬರುವುದೇ ಮಹತತ್ವದ ಸೃಷ್ಟಿ. ಚಿತ್ತದ ವ್ಯಾಪ್ತಿ ಚೇತನ. ಇದು ನಮ್ಮ ನೆನಪಿನ ವಿಸ್ತಾರ.
ಈ ಶರೀರದಲ್ಲಿ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳಿವೆ ಮತ್ತು ಹನ್ನೊಂದನೇ ಇಂದ್ರಿಯವಾಗಿರುವುದು ಮನಸ್ಸು. ಕಿವಿಯಿಂದ ಶಬ್ದಗ್ರಹಣ, ಕಣ್ಣಿನಿಂದ ರೂಪ ಗ್ರಹಣ, ಮೂಗಿನಿಂದ ಗಂಧ ಗ್ರಹಣ, ನಾಲಿಗೆಯಿಂದ ರಸ ಗ್ರಹಣ, ತೊಗಲಿನಿಂದ ಗಾಳಿಯ ಗ್ರಹಣ. ಅದೇ ರೀತಿ ಬಾಯಿ ಮಾತನಾಡಲು, ಕೈ ಕೆಲಸ ಮಾಡಲು, ಕಾಲು ನಡೆಯಲು. ಈ ಎಂಟನ್ನು ಗ್ರಹ(Receiver)ಗಳೆನ್ನುತ್ತಾರೆ. ನಂತರ ಪಾಯು ಮತ್ತು ಉಪಸ್ಥ(ವಿಸರ್ಜನಾಂಗ ಮತ್ತು ಸಂತಾನವೃದ್ಧಿ)ಗಳು. ಈ ಎಲ್ಲವನ್ನು ಚಿಂತನೆಗೊಳಪಡಿಸುವ ಹನ್ನೊಂದನೆ ಇಂದ್ರಿಯ ಮನಸ್ಸು. ಇವೆಲ್ಲವೂ ಕ್ಷೇತ್ರದ ಘಟಕಾಂಶಗಳು. ಸಮಷ್ಟಿಯಾಗಿ ಇದು ಕ್ಷೇತ್ರ. [ಇಲ್ಲಿ ಹೇಳಿರುವ ಪ್ರತಿಯೊಂದು ಘಟಕದೊಂದಿಗೆ ಅದರ ಅಭಿಮಾನಿ ದೇವತೆಯರೂ ಸೇರಿದ್ದಾರೆ.  ಅದನ್ನು ಮೇಲೆ ಸಂಕ್ಷಿಪ್ತವಾಗಿ ಹೇಳಲಾಗಿದೆ]
ಈ ಜಗತ್ತು ಸದಾ ಬದಲಾಗುತ್ತಿರುತ್ತದೆ. ಅದಕ್ಕಾಗಿ ಜಗತ್ತನ್ನು ಅಶ್ವತ್ಥ ಎಂತಲೂ ಕರೆಯುತ್ತಾರೆ. ಅಶ್ವ ನಿರಂತರ ಚಲನೆಯಲ್ಲಿರುವ ಪ್ರಾಣಿ. ಅದು ನಿಶ್ಚಲವಾಗಿ ಇರುವುದೇ ಇಲ್ಲ. ಈ ಪ್ರಪಂಚ ಕೂಡ ಹಾಗೆ ಸದಾ ಚಲನೆಯಲ್ಲಿರುವುದರಿಂದ-ಅದನ್ನು ಪ್ರಾಚೀನರು ಅಶ್ವತ್ಥ ಎಂದು ಕರೆದರು. ನಮ್ಮ ದೇಹ ಅನ್ನುವುದು ಭೌತಿಕ ವಿಕಾರ. ಅದರಲ್ಲಿ ಆಗತಕ್ಕಂತಹ ಮಾನಸಿಕ ಪ್ರಪಂಚದ ಎಲ್ಲ ತೊಳಲಾಟ ಮಾನಸಿಕ ವಿಕಾರ.   ವಿಶೇಷವಾಗಿ ನಮ್ಮ ಇಚ್ಛೆ(ಬಯಕೆ), (ಅ)ದ್ವೇಷ, ಸುಖ-ದುಃಖ, ನಮ್ಮ ನೆನಪಿನ ಹರವು (ಚೇತನ), (ಅ)ಧೃತಿ. ಇದು ಕೃಷ್ಣನ  ಕ್ಷೇತ್ರ ಮತ್ತು ಅದರ ವಿಕಾರದ ಸೂತ್ರ ರೂಪದ ವಿವರಣೆ. ಈ ವಿಚಾರವನ್ನು ಎಷ್ಟು ವಿಸ್ತಾರವಾಗಿ ಬೇಕಾದರೂ ನಾವು ವಿಶ್ಲೇಷಿಸಬಹುದು. ಕೃಷ್ಣ ಇಲ್ಲಿ ಎಲ್ಲವನ್ನು ಅಡಕವಾಗಿ ವಿವರಿಸಿದ್ದಾನೆ.

Sunday, October 16, 2011

Bhagavad Gita Kannada Chapter-13 Shloka 1-4


ಅಧ್ಯಾಯ ಹದಿಮೂರು

ಇದು ಭಗವದ್ಗೀತೆಯ ಮೂರನೇ ಷಟ್ಕದ  ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ ಅಧ್ಯಾಯ. ಈ ಹಿಂದಿನ ಹನ್ನೆರಡು ಅಧ್ಯಾಯಗಳಲ್ಲಿ ಏನು ಹೇಳಲಾಗಿದೆ ಅವೆಲ್ಲವನ್ನು ಸಂಗ್ರಹ ಮಾಡಿ ಈ ಅಧ್ಯಾಯದಲ್ಲಿ ಹೇಳಲಾಗಿದೆ. ಆದ್ದರಿಂದ ಹಿಂದಿನ ಎರಡು ಷಟ್ಕಗಳಲ್ಲಿ ಕಂಡ ವಿಷಯಗಳ ಪೂರ್ಣ ವಿಶ್ಲೇಷಣೆ ಈ ಅಧ್ಯಾಯ. ಜಡಪ್ರಪಂಚ, ಅದರಲ್ಲಿ ಪ್ರಕೃತಿಯಲ್ಲಿ ಬದ್ಧನಾಗಿ, ಪ್ರಕೃತಿಯಿಂದ ಪಾರಾಗಲು ಬಯಸುವ ಜೀವ. ಪಾರಾಗುವುದಕ್ಕೊಸ್ಕರ ಜ್ಞಾನದ ಅನುಸಂಧಾನ ಮತ್ತು ಸಾಧನೆ- ಈ ಎಲ್ಲಾ ವಿಷಯಗಳನ್ನು ನಾವು ಹಿಂದಿನ ಅಧ್ಯಾಯಗಳಲ್ಲಿ ವಿಕ್ಷಿಪ್ತವಾಗಿ ನೋಡಿದ್ದೇವೆ. ಅದೆಲ್ಲವುದರ ಒಂದು ಸಮಷ್ಠಿ ಸಂಗ್ರಹ(ಸರ್ವಾರ್ತ ಸಂಕ್ಷೇಪಃ) ಈ ಅಧ್ಯಾಯ. ಈ ಅಧ್ಯಾಯ ಗೀತೆಯಲ್ಲಿ ಅತ್ಯಂತ ಗ್ರಾಹ್ಯವಾದ ಅಧ್ಯಾಯ.

ಇಲ್ಲಿ ಪ್ರಾರಂಭದಲ್ಲಿ ಒಂದು ಶ್ಲೋಕವಿದೆ. ಈ ಅಧ್ಯಾಯದಲ್ಲಿ ಮುಂದೆ ಏನು ವಿವರಣೆ ಬರುತ್ತದೆ ಅದನ್ನು ತಾನು ತಿಳಿಯಬೇಕೆಂದು ಅರ್ಜುನ ಕೃಷ್ಣನನ್ನು ಕೇಳುವ ಶ್ಲೋಕ. ಈ ಶ್ಲೋಕ ಹೀಗಿದೆ:

ಪ್ರಕೃತಿಂ ಪುರುಷಂ ಚೈವ ಕ್ಷೇತ್ರಂ ಕ್ಷೇತ್ರಜ್ಞಮೇವ ಚ |
ಏತದ್ ವೇದಿತುಮಿಚ್ಛಾಮಿ ಜ್ಞಾನಂ  ಜ್ಞೇಯಂ ಚ ಕೇಶವ ||

ಅರ್ಥಾತ್- “ಕೇಶವ, ನಾನಿದನ್ನು ತಿಳಿಯಬಯಸುತ್ತೇನೆ: ಪ್ರಕೃತಿಯನ್ನು, ಪುರುಷನನ್ನು, ಕ್ಷೇತ್ರವನ್ನು, ಕ್ಷೇತ್ರಜ್ಞನನ್ನು, ಜ್ಞಾನವನ್ನು ಮತ್ತು   ಜ್ಞೇಯವನ್ನು”.

ವಾಸ್ತವವಾಗಿ ಈ ಶ್ಲೋಕ ಭಗವದ್ಗೀತೆಯ ಶ್ಲೋಕವಲ್ಲ. ಪ್ರಾಚೀನ ಭಾಷ್ಯಕಾರರು ಯಾರೂ ಈ ಶ್ಲೋಕವನ್ನು ಗೀತೆಯ ಶ್ಲೋಕವೆಂದು ಪರಿಗಣಿಸಿಲ್ಲ. ಬಹಳ ಮಂದಿಯ ಅಭಿಪ್ರಾಯದಂತೆ ಇದು ಪ್ರಕ್ಷಿಪ್ತಶ್ಲೋಕ.  ಗೀತೆಯಲ್ಲಿ ಒಟ್ಟು ಏಳುನೂರು ಶ್ಲೋಕಗಳಿವೆ. ಅದಕ್ಕಾಗಿ ಗೀತೆಯನ್ನು ‘ಸಪ್ತಶತಿ’ ಎಂದು ಕರೆಯುತ್ತಾರೆ. [ಇದಕ್ಕಾಗಿ ವಾದಿರಾಜರು ತಮ್ಮ ಯುಕ್ತಿಮಲ್ಲಿಕಾದಲ್ಲಿ ಬ್ರಹ್ಮಸೂತ್ರ ಮತ್ತು ಭಗವದ್ಗೀತೆಯನ್ನು ರಚಿಸಿದ ವೇದವ್ಯಾಸರನ್ನು ‘ಸೂತ್ರಸಪ್ತಶತೀಪತೇ’ ಎಂದು ಸಂಬೊಧಿಸಿದ್ದಾರೆ]. ಇಂಥಹ ಏಳುನೂರು ಶ್ಲೋಕಗಳಿರುವ ಭಗವದ್ಗೀತೆಗೆ ಈ ಮೇಲಿನ ಶ್ಲೋಕವನ್ನು ಸೇರಿಸಿದರೆ ಒಟ್ಟು ಏಳುನೂರ ಒಂದು ಶ್ಲೋಕವಾಗುತ್ತದೆ. ಇನ್ನು ಈ ಶ್ಲೋಕದಲ್ಲಿ ಕೇಳಲಾದ ಪ್ರಶ್ನೆಗೆ ಸಂಬಂಧಪಟ್ಟಂತೆ ಹಿಂದಿನ ಅಧ್ಯಾಯದ ಕೊನೆಯಲ್ಲಿ ಎಲ್ಲೂ ಕೃಷ್ಣ ಉಲ್ಲೇಖ ಮಾಡಿಲ್ಲ. ಈ ಕಾರಣದಿಂದ  ಇಲ್ಲಿ ಅರ್ಜುನ ಈ ರೀತಿ ಪ್ರಶ್ನೆ ಮಾಡುವ ಸಾಧ್ಯತೆ ಇಲ್ಲ. ಆದ್ದರಿಂದ ಈ ಶ್ಲೋಕ ಪ್ರಕ್ಷಿಪ್ತಶ್ಲೋಕ. ಗೀತೆಯ ಏಳುನೂರು ಶ್ಲೋಕಗಳಲ್ಲಿ ಇದು ಸೇರಿಲ್ಲ.

ನೇರವಾಗಿ ಕೃಷ್ಣ ಅರ್ಜುನನಿಗೆ ಕ್ಷೇತ್ರ ಮತ್ತು ಕ್ಷೇತ್ರಜ್ಞ ಎನ್ನುವುದರ ಶಾಸ್ತ್ರೀಯ ಅರ್ಥವನ್ನು ವಿವರಿಸುವುದರೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ.     

ಭಗವಾನುವಾಚ
ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ
ಏತದ್ ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ

ಭಗವಾನ್ ಉವಾಚ-ಭಗವಂತ ಹೇಳಿದನು:
ಇದಮ್  ಶರೀರಮ್  ಕೌಂತೇಯ ಕ್ಷೇತ್ರಮ್ ಇತಿ ಅಭಿಧೀಯತೇ
ಏತತ್ ಯಃ ವೇತ್ತಿ ತಮ್  ಪ್ರಾಹುಃ ಕ್ಷೇತ್ರಜ್ಞಃ ಇತಿ ತತ್ ವಿದಃ –ಭಗವಂತನ ಶರೀರದಂತಿರುವ ಈ ಚರಾಚರ ವಿಶ್ವ ‘ಕ್ಷೇತ್ರ’ ಎನಿಸಿದೆ. ಇದನ್ನು ಅರಿತವನನ್ನು ಬಲ್ಲವರು ‘ಕ್ಷೇತ್ರಜ್ಞ’ ಎನ್ನುತ್ತಾರೆ.

‘ಕ್ಷೇತ್ರ’ ಅನ್ನುವ ಪದಕ್ಕೆ ಒಂದು ನಿಶ್ಚಿತ ಅರ್ಥವಿಲ್ಲ. ಈ ಶ್ಲೋಕದಲ್ಲಿ ಕ್ಷೇತ್ರಂ ಅನ್ನುವ ಪದವನ್ನು ಯಾವ ರೀತಿ ಅರ್ಥಮಾಡಿಕೊಳ್ಳಬೇಕು ಎನ್ನುವ ಸುಳಿವನ್ನು ಕೃಷ್ಣ ಕೊಟ್ಟಿದ್ದಾನೆ. ಕ್ಷೇತ್ರ ಎಂದರೆ ‘ಇದಂ ಶರೀರಂ’ ಎಂದಿದ್ದಾನೆ ಕೃಷ್ಣ. ಆದ್ದರಿಂದ ಇಲ್ಲಿ ಕ್ಷೇತ್ರ ಎಂದರೆ ಜೀವ ವಾಸಮಾಡುವ ನೆಲೆಮನೆ ಪಿಂಡಾಂಡದಿಂದ- ಬ್ರಹ್ಮಾಂಡದ ತನಕ ಎಲ್ಲವೂ ಹೌದು. ಈ ಬ್ರಹ್ಮಾಂಡಕ್ಕೆ 'ಕ್ಷೇತ್ರ ಮತ್ತು ಶರೀರ' ಅನ್ನುವುದು ಅನ್ವರ್ಥನಾಮ(epithet). ಇಂಥಹ ಕ್ಷೇತ್ರವನ್ನು ಯಾರು ಸಮಗ್ರವಾಗಿ ತಿಳಿದಿದ್ದಾನೋ ಅವನು 'ಕ್ಷೇತ್ರಜ್ಞ'. ಯಾರೀತ? ಮುಂದಿನ ಶ್ಲೋಕದಲ್ಲಿ ನೋಡೋಣ.

ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ
ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ ತಜ್ ಜ್ಞಾನಂ ಮತಂ ಮಮ        

ಕ್ಷೇತ್ರಜ್ಞಮ್  ಚಪಿ ಮಾಮ್  ವಿದ್ಧಿ ಸರ್ವ ಕ್ಷೇತ್ರೇಷು ಭಾರತ
ಕ್ಷೇತ್ರ ಕ್ಷೇತ್ರಜ್ಞಯೋ ಜ್ಞಾನಮ್ ತ್ ತತ್  ಜ್ಞಾಮ್ ಮತಮ್  ಮಮ –ಓ ಭಾರತ, ಎಲ್ಲ ಕ್ಷೇತ್ರಗಳಲ್ಲಿ ನೆಲೆಸಿರುವ ನನ್ನನ್ನೆ ‘ಕ್ಷೇತ್ರಜ್ಞ’ನೆಂದು ತಿಳಿ. ಕ್ಷೇತ್ರ ಮತ್ತು  ಕ್ಷೇತ್ರಜ್ಞರ  ಅರಿವೆ ನಿಜವಾದ ‘ಜ್ಞಾನ’ ಎನ್ನುವುದು ನನ್ನ ಅಭಿಪ್ರಾಯ.

ಒಳಗೂ ಹೊರಗೂ ತುಂಬಿರುವ, ಎಲ್ಲ ಕ್ಷೇತ್ರದಲ್ಲಿರುವ ಭಗವಂತನೇ ಕ್ಷೇತ್ರಜ್ಞ. ಜೀವ ಕೇವಲ ಕ್ಷೇತ್ರಸ್ಥ. ನಿಜವಾದ ಜ್ಞಾನವೆಂದರೆ ವಿಶ್ವದ ಅರಿವು; ವಿಶ್ವದಲ್ಲಿ ತುಂಬಿರುವ ಭಗವಂತನ ಅರಿವು. ಈ ವಿಶ್ವದೊಳಗೆ ನಾವು ಹೇಗಿದ್ದೇವೆ? ಈ ವಿಶ್ವ ನಮಗೆ ಹೇಗೆ ಬಂಧಕವಾಗಿದೆ? ಈ ಬಂಧನವನ್ನು ಕಳಚಿಕೊಂಡು ಆ ವಿಶ್ವಾತ್ಮ ಭಗವಂತನನ್ನು ನಾವು ಸೇರುವುದು ಹೇಗೆ? ಈ ಅರಿವೇ ಜ್ಞಾನ. ಹಿಂದಿನ ಅಧ್ಯಾಯದಲ್ಲಿ ಹೇಳಿದಂತೆ ನಾವು ಹದಿನೈದು ಬೇಲಿಗಳ ಸೆರೆಮನೆಯಲ್ಲಿದ್ದೇವೆ. ಆದರೆ ಇದು ಶಿಕ್ಷೆಯಲ್ಲ, ಶಿಕ್ಷಣ. ಈ ಬಂಧನದಿಂದ ಪಾರಾಗಬೇಕಾದರೆ ಭವಮೋಚಕನಾದ ಕ್ಷೇತ್ರಜ್ಞನನ್ನು ತಿಳಿಯಬೇಕು. ಈ ಎಚ್ಚರವೇ ನಿಜವಾದ ಜ್ಞಾನ.    

ತ್ ಕ್ಷೇತ್ರಂ ಯಚ್ಚ ಯಾದೃಕ್ ಚ ದ್ ವಿಕಾರಿ ಯತಶ್ಚ ಯತ್    
ಸ ಚ ಯೋ ಯತ್ ಪ್ರಭಾವಶ್ಚ ತತ್ ಸಮಾಸೇನ ಮೇ ಶೃಣು

ತ್  ಕ್ಷೇತ್ರಮ್ ತ್ ಚ  ಯಾದೃಕ್ ಚ ತ್  ವಿಕಾರಿ ಯತಃ ಚ ಯತ್      
ಸಃ  ಚ ಯಃ ತ್ ಪ್ರಭಾವಃ ಚ ತತ್ ಸಮಾಸೇನ ಮೇ ಶೃಣು – ಆ ಕ್ಷೇತ್ರವೆಂದರೇನು? ಅದು ಎಂಥದು? ಅದರ ವಿಕಾರಗಳೇನು? ಅದರ ಪ್ರೇರಕ ಶಕ್ತಿ ಯಾರು? ಅವನು ಎಂಥವನು ? ಅವನ ಹಿರಿಮೆಗಳೇನು? ಅದನ್ನು ಅಡಕವಾಗಿ ನನ್ನಿಂದ ಕೇಳು.

ಮೊದಲು ಕ್ಷೇತ್ರವೆಂದರೇನು? ಬ್ರಹ್ಮಾಂಡ ಮತ್ತು ಪಿಂಡಾಂಡ ಹೇಗೆ ಮತ್ತು ಯಾವುದರಿಂದ ನಿರ್ಮಾಣವಾಗಿದೆ? ಅದರ ಗುಣಧರ್ಮವೇನು? ಅದು ಯಾವ ಯಾವ ರೀತಿ ರೂಪಾಂತರಗೊಳ್ಳುತ್ತದೆ? ಈ ಬದಲಾವಣೆಗಳು ಹೇಗಾಗುತ್ತದೆ? ಯಾರಿಂದ ಆಗುತ್ತದೆ? ಇದೆಲ್ಲವನ್ನು ಸೂತ್ರರೂಪವಾಗಿ ಸಂಕ್ಷಿಪ್ತವಾಗಿ, ಚುಟುಕಾಗಿ ನನ್ನಿಂದ ಕೇಳು.      

ಋಷಿಭಿರ್ಬಹುಧಾ ಗೀತಂ ಛಂದೋಭಿರ್ವಿವಿಧೈಃ ಪೃಥಕ್
ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ

ಋಷಿಭಿಃ ಬಹುಧಾ ಗೀತಮ್  ಛಂದೋಭಿಃ ವಿವಿಧೈಃ ಪೃಥಕ್
ಬ್ರಹ್ಮಸೂತ್ರಪದೈಃ ಚ ಏವ ಹೇತುಮದ್ಭಿಃ ವಿನಿಶ್ಚಿತೈಃ –ಬಗೆಬಗೆಯ ಬೇರೆಬೇರೆ ಮಂತ್ರಗಳಿಂದ ಋಷಿಗಳು ಅದನ್ನು ಬಗೆಬಗೆಯಿಂದ ಹಾಡಿದ್ದಾರೆ. ಯುಕ್ತಿಯಿಂದ ನಿರ್ಣಯಿಸುವ ವೇದಾಂತ ಸೂತ್ರದ ನುಡಿಗಳು ಕೂಡ.

ಜ್ಞಾನಿಗಳು ಕೂಡ ಈ ವಿಚಾರವನ್ನು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಅದು ಅವರ ಅನುಭವಕ್ಕೆ ಸೀಮಿತವಾಗಿರುತ್ತದೆ. ಬ್ರಹ್ಮಸೂತ್ರದಲ್ಲಿ ಹೇಳಿರುವ ವಿಚಾರ ಸುಲಭವಾಗಿ ಅರ್ಥವಾಗದು. ಆದ್ದರಿಂದ ನಿಜವನ್ನು ಕ್ಷೇತ್ರಜ್ಞನಾದ ನಾನೆ ನೇರವಾಗಿ ಹೇಳುತ್ತೇನೆ ಕೇಳು.  

Friday, October 14, 2011

Bhagavad Gita in Kannada Chapter-12 Shloka 18-20


ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ
ಶೀತೋಷ್ಣಸುಖದುಃಖೇಷು ಸಮಃ ಸಂಗವಿವರ್ಜಿತಃ ೧೮

ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್
ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ ಮೇ ಪ್ರಿಯೋ ನರಃ ೧೯

ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಪಮಾನಯೋಃ
ಶೀತ ಉಷ್ಣ ಸುಖ ದುಃಖೇಷು ಸಮಃ ಸಂಗವಿವರ್ಜಿತಃ          
ತುಲ್ಯನಿಂದಾಸ್ತುತಿಃ ಮೌನೀ ಸಂತುಷ್ಟಃ  ಯೇನ ಕೇನಚಿತ್ 
ಅನಿಕೇತಃ ಸ್ಥಿರ ತಿಃ ಭಕ್ತಿಮಾನ್ ಮೇ ಪ್ರಿಯಃ ನರಃ –ಹಗೆಯ-ಗೆಳೆಯರಲ್ಲಿ ಭೇದ ಬಗೆಯದವನು; ಗೌರವಗಳನ್ನು, ಶೀತ-ಉಷ್ಣಗಳನ್ನು, ಸುಖ-ದುಃಖಗಳನ್ನು ಸಮನಾಗಿ ಕಾಣುವವನು; ಯಾವುದಕ್ಕು ಅಂಟಿಕೊಳ್ಳದವನು; ಹೊಗಳಿಕೆಯನ್ನು ತೆಗಳಕೆಯಂತೆ ಕಾಣುವವನು; ಚಿಂತನಶೀಲನು; ಏನು ಇದೆಯೊ ಅಷ್ಟರಲ್ಲಿ ತೃಪ್ತನಾದವನು; ಒಂದೆಡೆ ನೆಲೆನಿಲ್ಲದವನು [ಭಗವಂತನಲ್ಲಿ ನೆಲೆ ನಿಂತವನು;] ಭಗವಂತನ ಅರಿವು ಗಟ್ಟಿಗೊಂಡವನು-ಭಕ್ತನಾದ ಇಂಥ ಮನುಜ ನನಗೆ ಅಚ್ಚುಮೆಚ್ಚು.

ಸಾಮಾನ್ಯವಾಗಿ ನಾವು ಶತ್ರು ಅಥವಾ  ಮಿತ್ರ ಅನ್ನುವ ಭಾವನೆಯನ್ನು ವ್ಯಾವಹಾರಿಕವಾಗಿ ರೂಢಿಸಿಕೊಳ್ಳುತ್ತೇವೆ. ನಮ್ಮನ್ನು ಹೊಗಳುವವರು ನಮಗೆ ಮಿತ್ರರು, ನಮ್ಮ ತಪ್ಪನ್ನು ತೆಗಳುವವರು ಶತ್ರುಗಳು. ಇದು ನಮ್ಮ ಅಪ್ರಭುದ್ದ ನಡೆ. ಸ್ನೇಹದ ಹಿಂದೆ ದ್ವೇಷವಿರಬಹುದು, ದ್ವೇಷದ ಹಿಂದೆ ಸ್ನೇಹವಿರಬಹುದು. ಪುರಂದರದಾಸರು ‘ನಿಂದಕರಿರಬೇಕು’ ಎಂದು ಹಾಡಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ನಿಂದಕರು ನಮ್ಮ ನಿಂದೆ ಮಾಡುವ ಮೂಲಕ ನಮ್ಮಲ್ಲಿರುವ ನಿಂದ್ಯವಾದ ದೋಷಗಳ ಫಲವನ್ನು ತೆಗೆದುಕೊಳ್ಳುತ್ತಾರೆ. ಹೊಗಳುವವರು ಹೊಗಳುವ ಮೂಲಕ ನಮ್ಮಲ್ಲಿರುವ ಒಳ್ಳೆಯತನದ ಪುಣ್ಯದ ಫಲದ ಪಾಲನ್ನು ಪಡೆಯುತ್ತಾರೆ. ಆದ್ದರಿಂದ ಸಾಧನೆಯ ಮಾರ್ಗದಲ್ಲಿ ಹೊಗಳುವವರಿಗಿಂತ ನಿಂದಕರು ಸಹಾಯಕರು. ಈ ಕಾರಣದಿಂದ ಶತ್ರು ಮಿತ್ರ ಎನ್ನುವ ಪರಿಭೇದ ಮಾಡಿಕೊಂಡು ಯಾರನ್ನೋ ಟೀಕೆ ಮಾಡುವುದಾಗಲಿ, ದ್ವೇಷ ಕಟ್ಟಿಕೊಳ್ಳುವುದಾಗಲಿ ಮಾಡಿಕೊಳ್ಳಬೇಡ. ದುರ್ಗುಣದಿಂದ ದೂರವಿರು. ಒಳ್ಳೆಯ ಗುಣವನ್ನು ಪ್ರೀತಿಸು. ಎಲ್ಲಿ ಒಳ್ಳೆಯತನವಿದೆ ಅವರ ಒಡನಾಟಮಾಡು(ಮೈತ್ರಿ); ದುಃಖವನ್ನು ಕಂಡು ಕರಗು(ಕರುಣ); ಇನ್ನೊಬ್ಬರ ಸಂತೋಷವನ್ನು ಕಂಡು ಸಂತೋಷಪಡು(ಮುದಿತತ); ಕೆಟ್ಟತನದಿಂದ ದೂರವಿರು(ಉಪೇಕ್ಷ). ಮೂಲಭೂತವಾಗಿ ಶತ್ರು ಮಿತ್ರ ಎನ್ನುವ ವಿಭಾಗ ಬೇಡ. ಎಲ್ಲರಲ್ಲಿಯೂ ಭಗವಂತನನ್ನು ಕಾಣು. ಲೌಕಿಕ ಶತ್ರು-ಮಿತ್ರ ಭಾವನೆಯನ್ನು ಬಿಟ್ಟುಬಿಡು.
ಸನ್ಮಾನ ಮಾಡಿದಾಗ ಉಬ್ಬಬೇಡ. ಅವಮಾನ ಮಾಡಿದಾಗ ಕುಗ್ಗಬೇಡ. ಮಾನ-ಅವಮಾನವನ್ನು ಗೆಲ್ಲು.  ಇನ್ನೊಬ್ಬರು ಏನು ಹೇಳಿದರು ಎನ್ನುವುದು ಮುಖ್ಯವಲ್ಲ. ನಮ್ಮ ಅಂತರಾತ್ಮ ಏನು ಎನ್ನುವುದು ಮುಖ್ಯ. ಇನ್ನೊಬ್ಬರು ಹೊಗಳಿದಾಗ ನಮ್ಮಲ್ಲಿ ಇಲ್ಲದ ಗುಣ ನಮ್ಮನ್ನು ಬಂದು ಸೇರುವುದಿಲ್ಲ. ಅದೇ ರೀತಿ ಇನ್ನೊಬ್ಬರು ತೆಗಳಿದಾಗ ನಾವು ಕೆಳಗೆ ಹೋಗುವುದಿಲ್ಲ. ಹೊಗಳಿಕೆ ಬಗ್ಗೆ ನಾವು ಎಚ್ಚರದಿಂದಿರಬೇಕು. ಏಕೆಂದರೆ ಅದರಿಂದ ನಾವು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಅವಮಾನದಿಂದ ನಾವು ತಪ್ಪು ದಾರಿಯನ್ನು ಬಿಟ್ಟು ಸರಿ ದಾರಿಯಲ್ಲಿ ಸಾಗಿ ಎತ್ತರಕ್ಕೇರುವ ಸಾಧ್ಯತೆ ಇದೆ.
ಸುಖ ದುಃಖವನ್ನು ಸಮನಾಗಿ ಕಾಣು. ಯಾವುದೇ ವಸ್ತು ನಮಗೆ ಸುಖ-ದುಃಖವನ್ನು ಕೊಡುವುದಿಲ್ಲ. ಆ ವಸ್ತುವನ್ನು ನಾವು ನೋಡುವ ಭಾವನೆ ನಮಗೆ ಸುಖ-ದುಃಖವನ್ನು ಕೊಡುತ್ತದೆ. ಆದ್ದರಿಂದ ಶೀತ-ಉಷ್ಣದಂತೆ ಸುಖ-ದುಃಖವನ್ನು ಸಮನಾಗಿ ಕಾಣುವುದನ್ನು ರೂಢಿಸಿಕೊ.
ನಮಗನಿಸುತ್ತದೆ ಇವೆಲ್ಲವೂ ಮಾನವ ಸಹಜಪ್ರವೃತ್ತಿ(Instinct) ಎಂದು. ಆದರೆ ಇದು ಸಹಜ ಧರ್ಮವಲ್ಲ. ನಾವು ಅಂಟಿಸಿಕೊಳ್ಳುವುದರಿಂದ  ನಮ್ಮಲ್ಲಿ ನಮಗೆ ಬೇಡವಾದ ಈ ಗುಣಗಳು ತುಂಬಿಕೊಳ್ಳುತ್ತವೆ. ಆದ್ದರಿಂದ ಹೊಗಳಿಕೆ ಮತ್ತು ತೆಗಳಿಕೆಗೆ ತಕ್ಷಣ ಪ್ರತಿಕ್ರಿಯಿಸಬೇಡ. ಮೌನಿಯಾಗು. ವಿಷಯದ ಬಗ್ಗೆ ಮನನ ಮಾಡು. ದುಡುಕಬೇಡ. ಎಷ್ಟು ಕಡಿಮೆ ಮಾತನಾಡಲು ಸಾಧ್ಯವೋ ಅಷ್ಟು ಕಡಿಮೆ ಮಾತನಾಡು. ಯೋಚಿಸಿ ಮಾತನಾಡು. ಏನಿದೆಯೋ ಅದನ್ನು ತೃಪ್ತಿಯಿಂದ ಅನುಭವಿಸು. ಸ್ಥಿರ-ಚರ ವಸ್ತುಗಳ(Making own property) ಹಿಂದೆ ಹೋಗಬೇಡ. ಭಗವಂತ ಕೊಟ್ಟಿರುವುದರಲ್ಲಿ ಸಂತೋಷದಿಂದ ನಿಶ್ಚಿಂತೆಯಿಂದ ಬದುಕು. ಭಕ್ತಿಯಿಂದ ಭಗವಂತನಲ್ಲಿ ಶರಣಾದಾಗ ನಾವು ನಮ್ಮ ಸಾಧನೆಯ ಹಾದಿಯಲ್ಲಿ ಈ ಎತ್ತರಕ್ಕೇರಬಹುದು. ‘ಇಂಥಹ ಗುಣವನ್ನು ಹೊಂದಿರುವ ಭಕ್ತ ನನಗೆ ಅಚ್ಚುಮೆಚ್ಚು’ ಎನ್ನುತ್ತಾನೆ ಕೃಷ್ಣ.

ಯೇ ತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ
ಶ್ರದ್ದಧಾನಾ ಮತ್ ಪರಮಾ ಭಕ್ತಾಸ್ತೇSತೀವ ಮೇ ಪ್ರಿಯಾಃ ೨೦

ಯೇ ತು ಧರ್ಮ ಅಮೃತಮ್ ಇಮ್  ಯಥಾಉಕ್ತಮ್  ಪರ್ಯುಪಾಸತೇ
ಶ್ರದ್ದಧಾಣಾಃ ತ್ ಪಮಾಃ  ಭಕ್ತಾಃ ತೇ ಅತೀವ ಮೇ ಪ್ರಿಯಾಃ –ಧರ್ಮ ಮೋಕ್ಷಗಳಿಗೆ ಸಾಧನವಾದ ಈ ಭಕ್ತಿ ಯೋಗವನ್ನು ಇಲ್ಲಿ ಹೇಳಿದ ತರ ಆಚರಿಸುವವರು, ನನ್ನ ಹಿರಿಮೆಯನ್ನು ನಂಬಿ ನಡೆದು ನನ್ನಲ್ಲಿ ಭಕ್ತಿಯಿಟ್ಟವರು –ಅಂಥವರು ನನಗೆ ತುಂಬ ಅಚ್ಚುಮೆಚ್ಚು.

ನಮ್ಮ ಭಕ್ತಿ ಹೇಗಿರಬೇಕು, ಭಕ್ತನಲ್ಲಿರಬೇಕಾದ ಗುಣಗಳೇನು ಎನ್ನುವ ಈ ಅಮೃತ(ಮೋಕ್ಷ)ಸಾಧನಾ ಧರ್ಮವನ್ನು ವಿವರಿಸಿದ ಕೃಷ್ಣ, ಇಲ್ಲಿ ಫಲಶ್ರುತಿಯಾಗಿ ಹೇಳುತ್ತಾನೆ: “ಇಲ್ಲಿ ಹೇಳಿದಂತೆ ಉಪಾಸನೆ ಮಾಡುವವರು, ಗುಣಧರ್ಮವನ್ನು ಬೆಳೆಸಿಕೊಂಡವರು, ಭಕ್ತಿಯಿಂದ ಆಚರಣೆಗೆ ತಂದುಕೊಳ್ಳುವ ಭಕ್ತರು ನನಗೆ ಪರಮ ಪ್ರಿಯರು” ಎಂದು.

ಇತಿ ದ್ವಾದಶೋSಧ್ಯಾಯಃ
ಹನ್ನೆರಡನೆಯ ಅಧ್ಯಾಯ ಮುಗಿಯಿತು
*******