Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, May 31, 2011

Bhagavad Gita Kannada Chapter-06 Shloka 33-36


ಅರ್ಜುನ ಉವಾಚ
ಯೋSಯಂ ಯೋಗಸ್ತ್ವಯಾ ಪ್ರೋಕ್ತಃ ಸಾಮ್ಯೇನ ಮಧುಸೂದನ
ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಂ ಸ್ಥಿರಾಮ್        ೩೩

ಅರ್ಜುನಃ  ಉವಾಚ-ಅರ್ಜುನ ಕೇಳಿದನು:
ಯಃ ಅಯಾಮ್  ಯೋಗಃ ತ್ವಯಾ  ಪ್ರೋಕ್ತಃ ಸಾಮ್ಯೇನ ಮಧು ಸೂದನ
ಏತಸ್ಯ ಅಹಮ್  ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಮ್  ಸ್ಥಿರಾಮ್-ಮಧುಸೂದನ, ನೀನು ಸಮದೃಷ್ಟಿಯ ಧ್ಯಾನ ಯೋಗವನ್ನು ಹೇಳಿದೆ. ನನಗನಿಸುತ್ತದೆ: ಮನಸ್ಸು ಚಂಚಲವಾದ್ದರಿಂದ ಇದರಲ್ಲಿ ಗಟ್ಟಿಯಾಗಿ ನಿಲ್ಲುವುದು ಸಾಧ್ಯವಿಲ್ಲ.

ಸಾತ್ವಿಕರಿಗೆ ಆನಂದವನ್ನು ಕೊಡುವ ‘ಓ ಮಧುಸೂದನ’ ಎಂದು ಅರ್ಜುನ ಶ್ರೀಕೃಷ್ಣನನ್ನು ಸಂಭೋದಿಸಿ ಹೇಳುತ್ತಾನೆ: “ನೀನು ಸಂಗ್ರಹವಾಗಿ ಹೇಳಿದ ಈ ಧ್ಯಾನ ಪದ್ಧತಿಯನ್ನು ನಾವು ಅಳವಡಿಸಿಕೊಳ್ಳಲು ಹೇಗೆ ಸಾಧ್ಯ?  ಧ್ಯಾನವೆಂಬುದು ಸಂಪೂರ್ಣ ಮಾನಸಿಕ ಪ್ರಕ್ರಿಯೆ. ಆದರೆ ನಮ್ಮ ಮನಸ್ಸು ಪ್ರಕ್ಷಬ್ಧ ಮತ್ತು ಚಂಚಲ. ಇಂತಹ ಮನಸ್ಸನ್ನು ಹಿಡಿತದಲ್ಲಿಟ್ಟು ನೀನು ಹೇಳಿದ ಸ್ಥಿರವಾದ ಈ ಧ್ಯಾನಯೋಗವನ್ನು ಸಾಧಿಸುವುದು ಸಾಧ್ಯವಿಲ್ಲ” ಎನ್ನುತ್ತಾನೆ ಅರ್ಜುನ.           

ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ ದೃಢಮ್
ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ೩೪

ಚಂಚಲಂ ಹಿ ಮನಃ ಕೃಷ್ಣ ಪ್ರಮಾದಿ ಬಲ ವತ್  ದೃಢಮ್          
ತಸ್ಯ ಅಹಮ್  ನಿಗ್ರಹಮ್  ಮನ್ಯೇ ವಾಯೋಃ ಇವ ಸು ದುಷ್ಕರಮ್ –ಕೃಷ್ಣ ಬಗೆ ಚಂಚಲವಲ್ಲವೇ? ನಮ್ಮನ್ನು ಕಂಗೆಡಿಸಿಬಿಡುವಷ್ಟು ಗಟ್ಟಿ, ಬಲಶಾಲಿ. ಅದನ್ನು ಬಿಗಿ ಹಿಡಿಯುವುದೆಂದರೆ ಗಾಳಿಯನ್ನು ಬಿಗಿ ಹಿಡಿದಂತೆ ಎಂದು ನನ್ನ ಭಾವನೆ.

ಮನಸ್ಸು ತುಂಬಾ ಚಂಚಲ, ಅದು ವಿಷಯದಿಂದ ವಿಷಯಕ್ಕೆ ಹಾರುತ್ತಿರುತ್ತದೆ. ನನ್ನ ಮನಸ್ಸು ಸದಾ ನನ್ನನ್ನು ಮಣಿಸುತ್ತಿದೆ ಆದರೆ ನಾನು ಅದನ್ನು ಮಣಿಸಲಾಗುತ್ತಿಲ್ಲ. ತನಗೆ ಬೇಕಾದಂತೆ ಇನ್ನೊಬ್ಬರನ್ನು ಬಗ್ಗು ಬಡಿಯುವ ಸ್ವಭಾವ ಮನಸ್ಸಿನದು. ನಮ್ಮ ಭಗವದ್ ಸಂಕಲ್ಪವನ್ನು ಅದು ನುಚ್ಚು ನೂರುಮಾಡಿ ತನ್ನ ಸ್ವಾಧೀನ ಮಾಡಿಕೊಂಡು ಬಿಡುತ್ತದೆ. ಇಂತಹ ಮನಸ್ಸನ್ನು ಸಾಮಾನ್ಯ ಮನುಷ್ಯ ನಿಗ್ರಹ ಮಾಡುವುದು ಹೇಗೆ? ಬೀಸುವ ಗಾಳಿಯನ್ನು ಹೇಗೆ ಮುಷ್ಠಿಯಲ್ಲಿ ಹಿಡಿಯುವುದು ಅಸಾಧ್ಯವೋ ಹಾಗೆ ಮನಸ್ಸನ್ನು ನಿಗ್ರಹ ಮಾಡುವುದು ಅಸಾಧ್ಯ ಎನ್ನುವುದು ನನ್ನ ಭಾವನೆ ಎನ್ನುತ್ತಾನೆ ಅರ್ಜುನ.

ಅರ್ಜುನನ ಈ ಪ್ರಶ್ನೆ ಭಾಗಶಃ ನಮ್ಮ ಪ್ರತಿಯೊಬ್ಬ ಓದುಗರಿಗೂ ಈ ಅಧ್ಯಾಯದ ಇಲ್ಲಿಯ ತನಕದ ಭಾಗವನ್ನು ಓದುವಾಗ ಮನಸ್ಸಿಗೆ ಬಂದಿರುತ್ತದೆ. “ಇದೆಲ್ಲಾ ನಮ್ಮಂತವರಿಗಲ್ಲ” ಅಥವಾ “ಇದು  ನಮ್ಮಿಂದ ಸಾಧ್ಯವಿಲ್ಲ” ಎನ್ನುವುದು ಸಾಮಾನ್ಯವಾಗಿ ನಮ್ಮ ಮನಸ್ಸಿಗೆ ಬರುವ ಮೊದಲ ವಿಚಾರ. ಈ ಕಾರಣವನ್ನು ತಿಳಿದೇ ಇಲ್ಲಿ ನಮ್ಮೆಲ್ಲರ ಪ್ರತಿನಿಧಿ ನರ ನಾರಾಯಣನನ್ನು ಈ ರೀತಿ ಪ್ರಶ್ನಿಸಿದ್ದಾನೆ. ಈಗ ನರನ ಈ ಪ್ರಶ್ನೆಗೆ ಕೃಷ್ಣ ಏನೆಂದು ಉತ್ತರಿಸುತ್ತಾನೆ ಎಂದು ತಿಳಿಯುವ ಕರ್ಣಕುತೂಹಲ ನಿಮಗೆಲ್ಲರಿಗೂ ಮೂಡಿರುತ್ತದೆ. ಏಕೆಂದರೆ ನಮಗೆ ಆ ನಮ್ಮ ಚಂಚಲ ಮನಸ್ಸನ್ನು ಮಣಿಸಬೇಕು, ಮಣಿಸಿ ಭಗವಂತನಲ್ಲಿ ನೆಲೆ ನಿಲ್ಲಿಸಬೇಕು ಎನ್ನುವ ಸಂಕಲ್ಪವಿದೆ. ಆದರೆ ಆ ಮನಸ್ಸು ಮಹಾ ಬಲಶಾಲಿ ಎನ್ನುವ ಭಯವಿದೆ!  ಬನ್ನಿ ಆ ಮಧುಸೂದನ ನಮ್ಮ ಪ್ರಶ್ನೆಗೆ ಏನೆಂದು ಉತ್ತರಿಸಿದ ಎಂದು  ಈ ಅಧ್ಯಾಯದ ಮುಂದಿನ ಭಾಗದಲ್ಲಿ  ನೋಡೋಣ.

ಭಗವಾನುವಾಚ
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ |
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ೩೫

ಭಗವಾನುವಾಚ-ಭಗವಂತ ಹೇಳಿದನು:
ಅಸಂಶಯಮ್ ಮಹಾಬಾಹೋ ಮನಃ  ದುರ್ನಿಗ್ರಹಮ್ ಚಲಮ್ |
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ –ಮಹಾವೀರ, ಖಂಡಿತ ಹೌದು;ಬಗೆ ಚಪಲವಾದದ್ದು, ಹಿಡಿತಕ್ಕೆ ಸಿಗದ್ದು. ಆದರೆ ಕೌಂತೇಯ, ಮರಳಿ ಮರಳಿ ಯತ್ನಿಸುವುದರಿಂದ ಮತ್ತು ವೈರಾಗ್ಯದಿಂದ ಅದನ್ನು ಬಿಗಿಹಿಡಿಯಬಹುದು.

ಕೃಷ್ಣ ಹೇಳುತ್ತಾನೆ “ನೀನು ಹೇಳುವುದರಲ್ಲಿ ಯಾವ ಸಂಶಯವೂ ಇಲ್ಲ. ಮನಸ್ಸನ್ನು ತಡೆ ಹಿಡಿಯುವುದು ಸುಲಭದ ಕೆಲಸವಲ್ಲ, ಆದರೆ ಅಭ್ಯಾಸ ಮತ್ತು ವೈರಾಗ್ಯದಿಂದ ಇದನ್ನು ಕ್ರಮೇಣವಾಗಿ ಸಾಧಿಸಬಹುದು” ಎಂದು. ನಾವು ಪ್ರಯತ್ನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಂದಕ್ಕೂ ಪ್ರಯತ್ನ ಬೇಕು. ನಾವು ನಮ್ಮ ಮನಸ್ಸು ಹೇಳಿದಂತೆ ಕುಣಿಯುವ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇವೆ. ಅದನ್ನು ಬಿಟ್ಟು  ನಾವು ಹೇಳಿದಂತೆ ಮನಸ್ಸು ಕೇಳುವಂತೆ ಮಾಡುವ ಪ್ರಯತ್ನವನ್ನು ನಾವೆಂದೂ ಮಾಡಿರುವುದಿಲ್ಲ. ಇಲ್ಲಿ ಕೃಷ್ಣ ವೈರಾಗ್ಯ ಮತ್ತು ಅಭ್ಯಾಸ  ಎನ್ನುವ ಎರಡು ವಿಚಾರವನ್ನು ಒತ್ತುಕೊಟ್ಟು ಹೇಳುತ್ತಾನೆ. ವೈರಾಗ್ಯ ಎಂದರೆ ಯಾವುದರ ಕಡೆ ಮನಸ್ಸು ಹರಿಯಬಾರದೋ ಅದನ್ನು ಮನಸ್ಸಿಗೆ ಉಣಿಸದೇ(Feed) ದೂರವಿಡುವುದು. ನಮಗೆ ದೇವರು ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತಿಳಿದುಕೊಳ್ಳುವ ಬುದ್ಧಿ ಕೊಟ್ಟಿದ್ದಾನೆ. ಆ ಬುದ್ಧಿಯನ್ನು ಉಪಯೋಗಿಸಿ ನಮ್ಮ ಮನಸ್ಸನ್ನು ಕೆಟ್ಟದರಿಂದ ದೂರವಿರಿಸುವುದು. ಕೆಟ್ಟದ್ದನ್ನು ಮನಸ್ಸಿಗೆ ಪರಿಚಯ ಮಾಡಿಕೊಡದೇ ಇರುವುದು. ಹೀಗೆ ಯಾವುದು ನಮ್ಮ ಬೆಳವಣಿಗೆಗೆ ಬಾದಕವೋ ಅದನ್ನು ಮನಸ್ಸಿನಿಂದ ದೂರವಿಡುವುದು ವೈರಾಗ್ಯ. ಇದರ ಜೊತೆಗೆ ನಿರಂತರವಾಗಿ ಏಕಾಗ್ರತೆಗೆ ಬೇಕಾದ ಅಭ್ಯಾಸವನ್ನು ತಪ್ಪದೆ ಮಾಡುವುದು. ಇದರಿಂದ ನಾವು ಮನಸ್ಸನ್ನು ಖಂಡಿತವಾಗಿ ನಿಯಂತ್ರಿಸಬಹುದು ಎನ್ನುತ್ತಾನೆ ಕೃಷ್ಣ.
ಸಾಮಾನ್ಯವಾಗಿ ನಾವು ನಮ್ಮ ಮನಸ್ಸಿಗೆ ಪ್ರತೀ ದಿನ ಬೇಡದ ತರಬೇತಿಯನ್ನೇ ಕೊಡುತ್ತೇವೆ. ಉದಾಹರಣೆಗೆ ನಮ್ಮ ಅಮೂಲ್ಯವಾದ ಸಮಯದಲ್ಲಿ ದೂರದರ್ಶನದಲ್ಲಿ ಬರುವ ಯಾವುದೋ ದೈನಂದಿನ ದಾರಾವಾಹಿ, ಸಿನಿಮ ಇತ್ಯಾದಿ ವಿಷಯದಲ್ಲಿ ನಮ್ಮ ಮನಸ್ಸನ್ನು ಸಂಪೂರ್ಣ ತೊಡಗಿಸಿಕೊಳ್ಳುತ್ತೇವೆ. ನಮಗೆ ಆಧ್ಯಾತ್ಮಿಕ ಗ್ರಂಥಗಳನ್ನು ಓದಲು ಸಮಯವೇ ಇರುವುದಿಲ್ಲ! ದೇವರ ಪೂಜೆ ಮಾಡುವಾಗ ಕೂಡಾ ನಮಗೆ ಆ ದಾರಾವಾಹಿಯ ಮುಂದಿನ ಭಾಗದ  ಚಿಂತೆ. ನಾವು ರಾತ್ರಿ ಮಲಗುವಾಗ ಯಾವುದೋ ಕೆಟ್ಟ ಪುಸ್ತಕವನ್ನು ಓದಿ, ಕೆಟ್ಟ  ದಾರಾವಾಹಿಯನ್ನು ನೋಡಿ ಮಲಗುವ ಬದಲು, ಒಳ್ಳೆಯ ಅಧ್ಯಾತ್ಮಿಕ ಗ್ರಂಥವನ್ನು ಓದುವ ಅಭ್ಯಾಸವನ್ನು ಮಾಡಿಕೊಂಡು ನಮಗೆ ಬೇಡವಾದ ವಿಷಯದತ್ತ ವೈರಾಗ್ಯ ಸಾಧಿಸಬೇಕು. ಇದು ಕೇವಲ ಒಂದು ಉದಾಹರಣೆಯಷ್ಟೇ, ನಾವು ನಮ್ಮ ದೈನಂದಿನ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಇಂತಹ ಸಾವಿರ ಉದಾಹರಣೆಗಳು ಸಿಗುತ್ತವೆ.
ಮನಸ್ಸು ತನಗೆ ತಿಳಿಯದ ವಿಷಯದತ್ತ ಹೆಚ್ಚು ಗಮನ ಕೊಡುವುದಿಲ್ಲ. ಆದರೆ ಒಮ್ಮೆ ರುಚಿ ನೋಡಿದರೆ ಅದು ನಿಮ್ಮನ್ನು ಬಿಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಮಧ್ಯ ಸೇವನೆ. ಎಂದೂ ಮಧ್ಯ ಸೇವನೆ ಮಾಡದವನಿಗೆ ಅದು ಅಸಹ್ಯ, ಆದರೆ ಒಮ್ಮೆ ಒತ್ತಾಯದಿಂದ ಬೇಡದ ಮಧ್ಯವನ್ನು ಸೇವಿಸಿ ನಮ್ಮ ಮನಸ್ಸಿಗೆ ಅದರ ಪರಿಚಯ ಮಾಡಿಸಿದಾಗ ನಮ್ಮ ಮನಸ್ಸು “ಹೇಗೂ ಒಮ್ಮೆ ಕುಡಿದಿದ್ದೀಯ ಇನ್ನೊಮ್ಮೆ ಕುಡಿದರೆ ಏನೂ ಆಗುವುದಿಲ್ಲ-ಕುಡಿ” ಎಂದು ಹೇಳುತ್ತದೆ! ಇದರ ಪರಿಣಾಮ ಏನು ಎನ್ನುವುದನ್ನು ಇಲ್ಲಿ ವಿವರಿಸಬೇಕಾಗಿಲ್ಲ.
ನಮ್ಮ ಇನ್ನೊಂದು ಮಹಾ ತಪ್ಪು ಎಂದರೆ ಬೇಡದ ವಿಷಯದಲ್ಲಿ ತಲೆ ಹಾಕುವುದು. “ಯಾರೋ ಏನೋ ಮಾಡಿದರಂತೆ”-ಈ ರೀತಿ ಒಂದು ಮಾತು ನಮ್ಮ ಕಿವಿಗೆ ಬಿದ್ದಾಗ ನಾವು ನಮಗೆ ಆ ವಿಚಾರವನ್ನು ತಿಳಿಯುವುದರಿಂದ ಏನು ಉಪಯೋಗ ಎಂದು ಯೋಚಿಸದೆ ಆ ವಿಷಯಕ್ಕೆ ತಲೆ ಹಾಕುತ್ತೇವೆ. ಒಮ್ಮೆ ತಲೆ ಹಾಕಿದರೆ ಮತ್ತೆ ಮನಸ್ಸು ಅದನ್ನು ಬಿಡುವುದಿಲ್ಲ. ಎಲ್ಲವನ್ನೂ ಬಿಟ್ಟು ಆ ವಿಷಯದ ಬೆನ್ನು ಹತ್ತುತ್ತದೆ. ಆದ್ದರಿಂದ ಒಂದು ವಿಷಯಕ್ಕೆ ತಲೆ ಹಾಕುವ ಮೊದಲು ಆ ವಿಷಯದ ಬಗ್ಗೆ ಬುದ್ಧಿಪೂರ್ವಕವಾಗಿ ನಿರ್ಧಾರ ತೆಗೆದುಕೊಂಡು ಮನಸ್ಸು ಇಲ್ಲ ಸಲ್ಲದ ವಿಚಾರದ ಹಿಂದೆ ಓಡದಂತೆ ತಡೆಹಿಡಿಯಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಗ್ರೀಕ್ ದೇಶದ ಸೋಕ್ರಾಟೆಸ್ ಎನ್ನುವ ವಿಚಾರವಾಧಿಯ ಮೂರು ಹಂತದ ಸೋಸುವಿಕೆ ಎನ್ನುವ ಕಥೆ(The Socrates Triple Filter Test). ಒಮ್ಮೆ ಸೋಕ್ರಾಟೆಸ್ ನ ಒಬ್ಬ ಪರಿಚಯದ ವ್ಯಕ್ತಿ ಬಂದು ಸೋಕ್ರಾಟೆಸ್ ನಲ್ಲಿ ಈ ರೀತಿ ಹೇಳುತ್ತಾನೆ “ನಾನು ನಿನ್ನ ಮಿತ್ರನ ಬಗ್ಗೆ ಏನು ಕೇಳಿದೆ ಗೊತ್ತಾ?( Do you know what I just heard about your friend?)” ಎಂದು. ತಕ್ಷಣ ಸೋಕ್ರಾಟೆಸ್ ಹೇಳುತ್ತಾನೆ “ಸ್ವಲ್ಪ ನಿಲ್ಲು (Hold on a minute); ನೀನು ನನ್ನ ಮಿತ್ರನ ಬಗ್ಗೆ ಏನನ್ನಾದರೂ ಹೇಳುವ ಮೊದಲು ನಾನು ಮೂರು ವಿಚಾರವನ್ನು ತಿಳಿಯ ಬಯಸುತ್ತೇನೆ. ಮೊದಲಿಗೆ ನೀನು ಹೇಳಲು ಹೊರಟಿರುವ ವಿಚಾರದ ಬಗ್ಗೆ ನಿನಗೆ ನೈಜ ಮಾಹಿತಿ ಇದೆಯೋ?(Have you made absolutely sure that what you are about to tell me is true?)”. ಆಗ ಆ ವ್ಯಕ್ತಿ ಹೇಳುತ್ತಾನೆ “ ಇಲ್ಲ.... ಆದರೆ ನಾನು ಈ ವಿಚಾರವನ್ನು ಕೇಳಿಸಿಕೊಂಡೆ...(“No, actually I just heard about it and…)” ಎಂದು. ಈಗ ಸೋಕ್ರಾಟೆಸ್ ಕೇಳುತ್ತಾನೆ “ ಅಂದರೆ ನಿನಗೆ ಆ ವಿಚಾರ ಸರಿಯಾಗಿ ತಿಳಿದಿಲ್ಲ(So you don’t really know if it’s true or not), ಇರಲಿ, ನೀನು ಹೇಳಬೇಕೆಂದಿರುವ ವಿಚಾರ ತುಂಬಾ ಒಳ್ಳೆಯ ವಿಚಾರವೋ?( Is what you are about to tell me about my friend something good?)”. ಆಗ ಆ ವ್ಯಕ್ತಿ ಹೇಳುತ್ತಾನೆ “ಅಲ್ಲ ಅದು ಒಳ್ಳೆಯ ವಿಚಾರವಲ್ಲ(No, on the contrary…)” ಎಂದು. ಕೊನೆಯದಾಗಿ ಸೋಕ್ರಾಟೆಸ್ ಕೇಳುತ್ತಾನೆ “ನೀನು ಹೇಳಲು ಹೊರಟಿರುವ ವಿಚಾರ ನನಗೆ ಉಪಯೋಗಕ್ಕೆ ಬರುವ ವಿಚಾರವೋ?( Is what you want to tell me about my friend going to be useful to me?)”. ಆಗ ಆ ವ್ಯಕ್ತಿ ಹೇಳುತ್ತಾನೆ “ಅಲ್ಲ (No, not really)” ಎಂದು. ಈಗ ಸೋಕ್ರಾಟೆಸ್ ಹೇಳುತ್ತಾನೆ “ನೀನು ಹೇಳಲು ಹೊರಟಿರುವ ವಿಚಾರ ನಿಜವಲ್ಲ, ಒಳ್ಳೆಯ ವಿಚಾರವಲ್ಲ, ಉಪಯೋಗಕ್ಕೆ ಬರುವ ವಿಚಾರವಲ್ಲ ಮತ್ತೆ ಏಕೆ ನನಗೆ ಹೇಳುತ್ತೀಯ?( if what you want to tell me is neither true nor good nor even useful, why tell it to me at all)”.
ಸ್ನೇಹಿತರೆ, ಇಲ್ಲಿ ನಾವು ಕಲಿಯಬೇಕಾದ ವಿಚಾರವೇನೆಂದರೆ ಮನಸ್ಸನ್ನು ಇಲ್ಲ ಸಲ್ಲದ ವಿಚಾರದಲ್ಲಿ ತೊಡಗಿಸುವ ಮೊದಲು ವಿಷಯವನ್ನು ಮೂರು ಬಾರಿ ಸೋಸುವುದನ್ನು ಕಲಿಯಿರಿ. ಬೇಡದ ವಿಚಾರದಲ್ಲಿ ವೈರಾಗ್ಯವನ್ನು ತಾಳಿ ಮತ್ತು ಮನಸ್ಸನ್ನು ಏಕಾಗ್ರಮಾಡುವ ಸಾಧನೆಯನ್ನು ಮನಸ್ಸಿಗೆ ಅಭ್ಯಾಸ ಮಾಡಿಸಿ. ಈ ಮಾರ್ಗದಲ್ಲಿ ಸಾಗಿದವರಿಗೆ ಧ್ಯಾನಯೋಗ ಎಂದೂ ಅಸಾಧ್ಯವಲ್ಲ. 

ಅಸಂಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ
ವಶ್ಯಾತ್ಮನಾ ತು ಸತತಂ ಶಕ್ಯೋSವಾಪ್ತುಮಶೇಷತಃ ೩೬

ಅಸಂಯತ ಆತ್ಮನಾ ಯೋಗಃ  ದುಷ್ಪ್ರಾಪಃ  ಇತಿ ಮೇ ಮತಿಃ
ವಶ್ಯ ಆತ್ಮನಾ ತು ಸತತಂ ಶಕ್ಯಃ ಆವಾಪ್ತುಮ್ ಅಶೇಷತಃ –ಬಗೆ ಬಿಗಿಗೊಳಿಸದವನಿಗೆ ಸಮಾಧಿ ಸಿಗುವಂತದ್ದಲ್ಲ ಎಂದು ನನ್ನ ತೀರ್ಮಾನ.ಬಗೆಯನ್ನು ಸದಾ ಹಿಡಿತದಲ್ಲಿಟ್ಟವನು ಸಮಗ್ರವಾಗಿ ಸಮಾಧಿಯನ್ನು ಸಾಧಿಸಬಲ್ಲ.

ಯಾರು ತನ್ನ ಸೋಮಾರಿತನದಿಂದ, ಕೆಟ್ಟ ಲೌಕಿಕ ಅಭಿಲಾಷೆಯಿಂದ ಈ ರೀತಿ ಪ್ರಯತ್ನ ಮಾಡುವುದಿಲ್ಲವೋ ಅವನಿಗೆ ಸಮಾಧಿ ಎಂದೂ ದಕ್ಕುವುದಿಲ್ಲ. ವೈರಾಗ್ಯ ಮತ್ತು ಅಭ್ಯಾಸವೆಂಬ ಉಪಾಯದಿಂದ ಮನಸ್ಸನ್ನು ಮಣಿಸಿ ನಮಗೆ ಬೇಕಾದಂತೆ ಆ ಮನಸ್ಸಿನಿಂದ ಕೆಲಸವನ್ನೂ ಮಾಡಿಸಿಕೊಳ್ಳಬೇಕು. ಹೀಗೆ ಮಾಡಿದಾಗ ಸಮಾಧಿಯನ್ನು ಸಾಧಿಸಬಹುದು ಎನ್ನುವ ಭರವಸೆಯನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.

ಕೃಷ್ಣನ ಈ ಉತ್ತರದಲ್ಲಿ ನಮಗೆ ಧ್ಯಾನಕ್ಕೆ ಬೇಕಾದ ಉಪಾಯ ದೊರಕಿತು. ಆದರೆ ಈಗ ನಮ್ಮೆಲ್ಲರಿಗೆ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಅದೇನೆಂದರೆ ಸಂಸಾರದಲ್ಲಿರುವ ನಾವು ಒಂದು ವೇಳೆ ಸಾಧನೆಯ ಹಾದಿಯಲ್ಲಿ ಪೂರ್ಣ ಸಮಾಧಿಯನ್ನು ಸಾಧಿಸದೆ ಮಧ್ಯದಲ್ಲೇ ನಿಂತಿದ್ದರೆ ಅಥವಾ ಅರ್ಧ ಸಾಧನೆಯ ನಂತರ ನನ್ನ ಈ ಜನ್ಮ ಕೊನೆಗೊಡರೆ ಆಗ ನನ್ನ ಪಾಡೇನು? ಈ ಜನ್ಮದ ಸಾಧನೆ ವ್ಯರ್ಥವೋ? ನಾನು ಭಗವಂತನನ್ನು ಸೇರುವುದು ಅಸಾಧ್ಯವೋ? ನಮ್ಮ ಈ ಪ್ರಶ್ನೆಯನ್ನೇ ಮುಂದಿನ ಶ್ಲೋಕದಲ್ಲಿ  ಅರ್ಜುನ ಕೃಷ್ಣನಲ್ಲಿ ಕೇಳುತ್ತಾನೆ.        

1 comment: