Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, May 29, 2011

Bhagavad Gita Chapter-06 Shloka 29-32

ಧ್ಯಾನ ಪ್ರಕ್ರಿಯೆಯನ್ನು ವಿವರಿಸಿದ ಕೃಷ್ಣ ಮುಂದಿನ ಶ್ಲೋಕದಲ್ಲಿ ಭಗವಂತನಲ್ಲಿ ಎಂತಹ ಗುಣದ ಅನುಸಂಧಾನ ಮಾಡಬೇಕು ಎನ್ನುವುದನ್ನು ವಿವರಿಸುತ್ತಾನೆ. ದೇವರು ಎಂದರೆ ಎಲ್ಲೋ ಸತ್ಯಲೋಕದಿಂದಾಚೆಗಿನ ವೈಕುಂಠದಲ್ಲಿನ ಅಂತಃಪುರದ ಕೋಣೆಯಲ್ಲಿ ಕುಳಿತ ಒಬ್ಬ ವ್ಯಕ್ತಿ ಎಂದು ಅನುಸಂಧಾನ ಮಾಡುವುದಲ್ಲ. ದೇವರು ಎನ್ನುವ ಕಲ್ಪನೆ ಹಿಂದಿರುವ ನಿಜವಾದ ಅನುಸಂಧಾನ ಹೇಗಿರಬೇಕು  ಎನ್ನುವುದನ್ನು ಇಲ್ಲಿ ಕೃಷ್ಣ ವಿವರಿಸುತ್ತಾನೆ.

   ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾSತ್ಮನಿ
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ    ೨೯

ಸರ್ವ ಭೂತ ಸ್ಥಮ್ ಆತ್ಮಾನಮ್  ಸರ್ವ ಭೂತಾನಿ ಚ ಆತ್ಮನಿ
ಈಕ್ಷತೇ ಯೋಗ ಯುಕ್ತ ಆತ್ಮಾ ಸರ್ವತ್ರ ಸಮದರ್ಶನಃ –ಧ್ಯಾನಯೋಗಕ್ಕೆ ಬಗೆ ಸಜ್ಜುಗೊಂಡ ಸಾಧಕ ಎಲ್ಲ ಜೀವಿಗಳಲ್ಲು ಭಗವಂತನನ್ನು ಕಾಣುತ್ತಾನೆ ಮತ್ತು ಎಲ್ಲ ಜೀವಿಗಳನ್ನು ಭಗವಂತನಲ್ಲಿ ಕಾಣುತ್ತಾನೆ. ಎಲ್ಲೆಡೆ ಇರುವ ಭಗವಂತ ಏಕರೂಪನೆಂದು ಕಾಣುತ್ತಾನೆ.

ನಾವು ಭಗವಂತನನ್ನು ಬ್ರಹ್ಮ ಎನ್ನುತ್ತೇವೆ, ಪರಮಾತ್ಮ ಎನ್ನುತ್ತೇವೆ. ಏನು ಹಾಗೆಂದರೆ? ಎಲ್ಲ ಕಾಲದಲ್ಲೂ ಎಲ್ಲ ದೇಶದಲ್ಲೂ ತುಂಬಿರುವ ಬೃಹತ್ತಾದದ್ದು ಬ್ರಹ್ಮ. ಎಲ್ಲ ಕಡೆ ವ್ಯಾಪಿಸಿರುವ ಸರ್ವ ಗುಣಪೂರ್ಣನಾಗಿ ಕಾಲತಃ, ದೇಶತಃ, ಗುಣತಃ, ಶಕ್ತಿತಃ ಅನಂತವಾಗಿರುವವ ಪರಮಾತ್ಮ. ಇಲ್ಲಿ ಕೃಷ್ಣ ಹೇಳುತ್ತಾನೆ “ಸರ್ವಭೂತಸ್ಥಮಾತ್ಮಾನಂ”-ಅಂದರೆ ಸಮಸ್ತ ಜೀವಜಾತದೊಳಗೆ ಅಂತರ್ಯಾಮಿಯಾಗಿ ಬಿಂಬರೂಪಿ ಭಗವಂತನಿದ್ದಾನೆ. ಅಷ್ಟೇ ಅಲ್ಲ   “ಸರ್ವ ಭೂತಾನಿ ಚ ಆತ್ಮನಿ” ಅಂದರೆ ಸಮಸ್ತ ಜೀವಗಳೂ ಭಗವಂತನಲ್ಲಿವೆ. ಇದರ ಪೂರ್ಣ ಅರ್ಥ: ‘ಭಗವಂತ ನಮ್ಮ ಒಳಗೂ ಹೊರಗೂ ತುಂಬಿದ್ದಾನೆ’ ಎಂದು. ಇದು ನಾವು ಉಪಾಸನೆ ಮಾಡುವಾಗ ತಿಳಿದುಕೊಳ್ಳಬೇಕಾದ ಮುಖ್ಯವಾದ ಅಂಶ. ಒಬ್ಬ ಧ್ಯಾನಯೋಗದಲ್ಲಿರುವ ಸಾಧಕ ಭಗವಂತನ ಸರ್ವಗತತ್ವವನ್ನು ಕಾಣುವ ಬಗೆಯಿದು.
ಭಗವಂತ ಎಲ್ಲಾ ಜೀವದಲ್ಲೂ ತುಂಬಿದ್ದರೂ ಕೂಡಾ ಒಬ್ಬ ಸಾಧಕ ಆತನನ್ನು “ಸರ್ವತ್ರ ಸಮದರ್ಶನಃ”- ಅಂದರೆ ಏಕರೂಪದಲ್ಲಿ ಕಾಣುತ್ತಾನೆ. ಭಗವಂತನ ಅವತಾರ, ಆತನ ಆವೇಶ, ಸನ್ನಿಧಾನ, ಗುಣ, ಕೃತಿ, ರೂಪ ಎಲ್ಲವೂ ಅಖಂಡ. ಅದರಲ್ಲಿ ವೆತ್ಯಾಸವಿಲ್ಲ. ಎಲ್ಲವುದರ ಒಳಗೂ ಹೊರಗೂ ತುಂಬಿರುವ ಆತ ಏಕರೂಪನಾಗಿದ್ದಾನೆ. ಬೈಬಲ್ ನಲ್ಲಿ ಯಾರಾದರೂ ದೇವರ ಬಗ್ಗೆ ಹೇಳುವವರು ಏನು ಹೇಳುತ್ತಾರೆ ಎನ್ನುವಲ್ಲಿ ಹೀಗೆ ಹೇಳಿದ್ದಾರೆ “ If they say ‘the Kingdom is in the sky’ then the birds will precede you; if they say to you ‘It is in the sea’ then the fish will precede you. Rather ‘the Kingdom is inside of you and It is outside of you’. ಎಲ್ಲಾ ಗ್ರಂಥದ ತಾತ್ಪರ್ಯ ಒಂದೆ. ಹೀಗೆ ಭಗವಂತ ಸರ್ವಾಂತರ್ಯಾಮಿ ಮತ್ತು  ಸರ್ವಗತ ಎನ್ನುವ  ಅನುಸಂಧಾನ ನಮ್ಮ ನಿತ್ಯ  ಉಪಾಸನೆಯಲ್ಲಿರಬೇಕು.       
       
ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ           
ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ       ೩೦

ಯಃ  ಮಾಮ್  ಪಶ್ಯತಿ ಸರ್ವತ್ರ ಸರ್ವಮ್  ಚ ಮಯಿ ಪಶ್ಯತಿ    
ತಸ್ಯ ಅಹಮ್  ನ ಪ್ರಣಶ್ಯಾಮಿ ಸಃ ಚ ಮೇ ನ ಪ್ರಣಶ್ಯತಿ –ಯಾರು ನನ್ನನ್ನು ಎಲ್ಲೆಡೆ ಕಾಣುತ್ತಾನೆ ಮತ್ತು ಎಲ್ಲವನ್ನು ನನ್ನಲ್ಲಿ ಕಾಣುತ್ತಾನೆ ಅವನಿಗೆ ನಾನು ಎರವಾಗಲಾರೆ; ಅವನೂ ನನಗೆ ಎರವಾಗಲಾರ.

ಮುಂದುವರಿದು ಕೃಷ್ಣ ಹೇಳುತ್ತಾನೆ: “ಯಾರು ಹೀಗೆ ನನ್ನನ್ನು ಎಲ್ಲರಲ್ಲಿಯೂ ಮತ್ತು ಎಲ್ಲರನ್ನು ನನ್ನಲ್ಲಿ ಕಾಣುತ್ತಾನೋ ಅವನಿಗೆ ನಾನೆಂದೂ ಇಲ್ಲವಾಗುವುದಿಲ್ಲ. ಸದಾ ಆತನ ಯೋಗ ಕ್ಷೇಮದ ಹೊಣೆ ನನ್ನದು. ಅದೇ ರೀತಿ ನಾನು ಆತನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ ಎನ್ನುವ ಎಚ್ಚರ ಸದಾ ಆತನಲ್ಲಿರುತ್ತದೆ” ಎಂದು. ಹೀಗೆ ಭಗವಂತನ ಅನ್ಯೋನ್ಯ ಸಂಬಂಧ, ದೇವರು ಎಂದೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ ಎನ್ನುವ ಎಚ್ಚರ ನಮ್ಮಲ್ಲಿ ಸದಾ ಜಾಗೃತವಾಗಿರುತ್ತದೆ. ಹಿಂದೆ ಹೇಳಿದಂತೆ ಭಗವಂತ ನಾವು ಆತನನ್ನು ಹೇಗೆ ನೋಡುತ್ತೆವೋ ಹಾಗೆ. ಈ ಕಾರಣದಿಂದ ನಮ್ಮಲ್ಲಿನ ಈ ಎಚ್ಚರದಿಂದ ಯಾವತ್ತೂ ಜೀವನದಲ್ಲಿ ಬಗೆಹರಿಯದಂತಹ ಸಮಸ್ಯೆ ನಮಗೆ ಬರುವುದಿಲ್ಲ. ಪ್ರರಾಬ್ಧಕರ್ಮದಿಂದ ಬಂದರೂ ಕೂಡಾ ಕಾಣದ ಕೈ ನಮ್ಮನ್ನು ಕೈ ಹಿಡಿದು ನಡೆಸುತ್ತಿರುವ ಅನುಭವವಾಗುತ್ತದೆ. ‘ನನ್ನನ್ನು ಕಾಪಾಡುವವನಿದ್ದಾನೆ  ಅವನು ನನ್ನ ಯೋಗ-ಕ್ಷೇಮವನ್ನು ನೋಡಿಕೊಳ್ಳುತ್ತಾನೆ, ನಾನೇಕೆ ಹೆದರಬೇಕು’ ಎನ್ನುವ ದೈರ್ಯ ಬರುತ್ತದೆ. ಕೆಟ್ಟ ಯೋಚನೆ ದೂರವಾಗುತ್ತದೆ. ಸಾಮಾಜಿಕ ಪ್ರತಿಕ್ರೀಯೆಗಳಿಗೆ, ಟೀಕೆ-ಟಿಪ್ಪಣಿಗಳಿಗೆ, ಅಪವಾದಗಳಿಗೆ, ನಿಂದನೆಗಳಿಗೆ, ಯಾವುದಕ್ಕೂ ವಿಚಲಿತನಾಗುವುದಿಲ್ಲ. ಭಗವಂತ ಕೈಬಿಟ್ಟ ಎನ್ನುವ ಸ್ಥಿತಿ ಭಕ್ತನಿಗೆ ಎಂದೂ ಬರುವುದಿಲ್ಲ. ಭಗವಂತ ಎಂದೂ ತನ್ನ ಆತ್ಮೀಯ ಭಕ್ತನಿಂದ ದೂರವಾಗುವುದಿಲ್ಲ. ಇದಕ್ಕಾಗಿ ಭಗವಂತನನ್ನು ‘ಭಕ್ತಪರಾಧೀನ’ ಎನ್ನುವುದು. ಈ ಕುರಿತು ಇನ್ನಷ್ಟು ವಿವರವಾಗಿ ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.              

ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ
ಸರ್ವಥಾ ವರ್ತಮಾನೋSಪಿ ಸ ಯೋಗೀ ಮಯಿ ವರ್ತತೇ       ೩೧

ಸರ್ವಭೂತಸ್ಥಿತಂ ಯಃ  ಮಾಮ್  ಭಜತಿ ಏಕತ್ವಮ್ ಆಸ್ಥಿತಃ     
ಸರ್ವಥಾ ವರ್ತಮಾನಃ ಅಪಿ ಸಃ  ಯೋಗೀ ಮಯಿ ವರ್ತತೇ-ಎಲ್ಲಾ ಜೀವಿಗಳಲ್ಲಿರುವ ನನ್ನನ್ನು ಏಕರೀತಿಯಿಂದ ತಿಳಿದು ಪೂಜಿಸುವವನು ಯಾವ ಸ್ಥಿತಿಯಲ್ಲಿದ್ದರೂ ನನ್ನಲ್ಲಿ ಇರುತ್ತಾನೆ.

ಕೃಷ್ಣ ಹೇಳುತ್ತಾನೆ “ಸರ್ವಗತನಾದ ಭಗವಂತ ಎಲ್ಲ ಕಡೆ ಏಕರೂಪವಾಗಿದ್ದಾನೆ ಎನ್ನುವ ಅನುಸಂಧಾನ ಮತ್ತು ನಿರಂತರ ಭಕ್ತಿ ಇರುವ ಸಾಧಕ, ಆತ  ಹೇಗೇ ಇರಲಿ, ಅವನು ನನ್ನನ್ನು ಸೇರುವುದು ನಿಶ್ಚಿತ” ಎಂದು. ಅಪರೋಕ್ಷ ಜ್ಞಾನ ಪಡೆದವ ಭಗವಂತನಿಂದ ಎಂದೂ ದೂರ ಸರಿಯುವುದಿಲ್ಲ.  ಆತ ಮೋಕ್ಷವನ್ನು ಪಡೆದು ಭಗವಂತನಲ್ಲಿ  ನೆಲೆಸುತ್ತಾನೆ.

ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋSರ್ಜುನ           
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ     ೩೨

ಆತ್ಮಔಪಮ್ಯೇನ ಸರ್ವತ್ರ ಸಮಮ್  ಪಶ್ಯತಿ ಯಃ ಅರ್ಜುನ       
ಸುಖಮ್  ವಾ ಯದಿ ವಾ ದುಃಖಮ್  ಸಃ ಯೋಗೀ ಪರಮಃ ಮತಃ –ಸುಖವಿರಲಿ, ದುಃಖವಿರಲಿ, ಎಲ್ಲರ ಬೇಕು-ಬೇಡಗಳನ್ನು ತನ್ನ ಹಾಗೆಯೇ ಸಮಾನತೆಯಿಂದ ಕಾಣುವವನು, ಓ ಅರ್ಜುನ, ಬಹಳ ದೊಡ್ಡ ಸಾಧಕ ಎನ್ನುವುದು ತೀರ್ಮಾನ.

ಕೃಷ್ಣ ನಮಗೆ ಸಮದೃಷ್ಟಿ ಬಗ್ಗೆ ಹಿಂದೆ ಕೂಡಾ ಹೇಳಿದ್ದ. ಇಲ್ಲಿ ಮುಖ್ಯವಾಗಿ ಸಾತ್ವಿಕರೊಂದಿಗೆ, ಭಗವದ್ಭಕ್ತರೊಂದಿಗೆ ಒಬ್ಬ ಸಾಧಕ ಯಾವ ರೀತಿ ಸಮದರ್ಶನ ಬೆಳೆಸಿಕೊಳ್ಳುತ್ತಾನೆ ಎನ್ನುವುದನ್ನು ವಿವರಿಸಿದ್ದಾನೆ. ಯೋಗಿಗಳಲ್ಲಿ ಶ್ರೇಷ್ಠನಾದವನು ತನ್ನಂತೆಯೇ ಇನ್ನೊಬ್ಬರು ಎಂದು ತಿಳಿದಿರುತ್ತಾನೆ. ನಮಗೆ ಯಾವುದು ದುಃಖವಾಗುತ್ತದೋ ಅದು ಇನ್ನೊಬ್ಬರಿಗೂ ದುಃಖವನ್ನು ಕೊಡುತ್ತದೆ ಎನ್ನುವ ಸತ್ಯವನ್ನು ಆತ ಅರಿತಿರುತ್ತಾನೆ.  ಎಲ್ಲರಿಗೂ ಸುಖ-ದುಃಖಗಳಿವೆ, ನನ್ನನಂತೆಯೇ ಅವರು ದುಃಖವನ್ನು ಇಷ್ಟಪಡುವುದಿಲ್ಲ ಎನ್ನುವ ಎಚ್ಚರದಿಂದ ಸಾಧಕ ವ್ಯವಹರಿಸುತ್ತಾನೆ. ಯಾರು ಇನ್ನೊಬ್ಬರ ನೋವನ್ನು ತನ್ನ ನೋವಿನಷ್ಟೇ ನೋವಿನಿಂದ ಕಾಣುತ್ತಾನೋ, ಯಾರು ಇನ್ನೊಬ್ಬರ ಸಂತೋಷವನ್ನು- ಯಶಸ್ಸನ್ನು ತನ್ನ ಯಶಸ್ಸೆಂದು ತಿಳಿದು ಖುಷಿ ಪಡುತ್ತಾನೋ- ಅವನು ಬಹಳ ದೊಡ್ಡ ಯೋಗ ಸಾಧಕ. 
ಭಗವದ್ಭಕ್ತರಲ್ಲಿ ಭಗವಂತನ ವಿಶೇಷ ಸನ್ನಿಧಾನವಿದೆ. ಆದ್ದರಿಂದ ಅವರ ಸುಖ-ದುಃಖಕ್ಕೆ ನಾವು  ಸ್ಪಂದಿಸಿದಾಗ ಅದು ಅವರೊಳಗಿನ ಭಗವಂತನ ಪೂಜೆಯಾಗುತ್ತದೆ.

ಈ ಅಧ್ಯಾಯದಲ್ಲಿ ಇಲ್ಲಿಯವರೆಗೆ ಧ್ಯಾನದ ಬಗ್ಗೆ ಕೃಷ್ಣ ವಿಸ್ತಾರವಾಗಿ ಹೇಳಿದ. ಕೃಷ್ಣನ ಈ ವಿವರಣೆಯಲ್ಲಿ ಎಲ್ಲರಿಗೂ ಕಾಣುವ ಒಂದೇ ಒಂದು ಸರ್ವೇ ಸಾಮಾನ್ಯ ಕಷ್ಟದ ವಿಷಯವೆಂದರೆ ‘ಚಂಚಲ ಮನಸ್ಸನ್ನು ಹೊಂದಿದ ನಾವು ಅದನ್ನು ನಿಯಂತ್ರಿಸಿ ಸಮದೃಷ್ಟಿ ಬೆಳೆಸಿಕೊಳ್ಳುವುದು’. ಇದು ನಿಜವಾಗಲೂ ಸಾಧ್ಯವೇ? ಮುಂದಿನ ಶ್ಲೋಕದಲ್ಲಿ ಅರ್ಜುನ ನಮ್ಮೆಲ್ಲರ ಪರ ಈ ಪ್ರಶ್ನೆಯನ್ನು ಕೃಷ್ಣನಲ್ಲಿ ಮಂಡಿಸುತ್ತಾನೆ.     

No comments:

Post a Comment