Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, February 20, 2011

Bhagavad Gita Kannada Chapter-02 Shloka-18

ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ
ಅನಾಶಿನೋSಪ್ರಮೇಯಸ್ಯ ತಸ್ಮಾದ್ ಯುಧ್ಯಸ್ವ ಭಾರತ     ೧೮

ಅಂತವಂತ  ಇಮೇ ದೇಹಾಃ  ನಿತ್ಯಸ್ಯ ಉಕ್ತಾಃ ಶರೀರಿಣಃ
ಅನಾಶಿನಃ ಅಪ್ರಮೇಯಸ್ಯ ತಸ್ಮಾತ್  ಯುಧ್ಯಸ್ವ ಭಾರತ-- ಅಳಿಯದ ಜೀವಕ್ಕೆ ಅಳಿವ ಈ ದೇಹಗಳ ನಂಟು. ಏತರಿದಲೂ ಅವನಿಗೆ ಅಳಿವಿಲ್ಲ. ಅವನು ಎಲ್ಲೆಡೆ ತುಂಬಿದ ಭಗವಂತನ ಪಡಿಯಚ್ಚು. ಓ ಭಾರತ, ಆದ್ದರಿಂದ [ಅಳಿವಿರದ ಅಳವಿಗೆಟುಕದ ಭಗವಂತನ ಪೂಜೆಯೆಂದು] ಹೋರಾಡು.

ಭೌತಿಕ ಶರೀರ ಅಂತವಂತ(ನಾಶವಾಗುವಂತದ್ದು). ಕೇವಲ ಕಣ್ಣಿಗೆ ಕಾಣುವ ಸ್ಥೂಲ ಶರೀರ ಮಾತ್ರ ನಾಶವಾಗುವುದೇ ಹೊರತು ಆತ್ಮವಲ್ಲ. ಏಕೆಂದರೆ ಜೀವ ಭಗವಂತನ ಪಡಿಯಚ್ಚು. ಅದು ಸರ್ವವ್ಯಾಪಿ ಭಗವಂತನ ಪ್ರತಿಬಿಂಬ. ಆದ್ದರಿಂದ ಎಲ್ಲಾ ಕಡೆ ಇರುವ ಭಗವಂತನ ಪ್ರತಿಬಿಂಬವಾದ ಈ ಜೀವ ನಿತ್ಯ. ಇಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ: "ಸಾಮ್ರಾಟನಾಗಬೇಕು ಎನ್ನುವ ಸ್ವಾರ್ಥದಿಂದಾಗಲಿ, ದುರ್ಯೋಧನನ ಮೇಲಿನ ದ್ವೇಷದಿಂದಾಗಲಿ ಹೋರಾಡದೆ, ‘ಅನ್ಯಾಯದ ವಿರುದ್ಧ ಹೋರಾಟ ಭಗವಂತನ ಪೂಜೆ’ ಎಂಬಂತೆ ಯುದ್ಧ ಮಾಡು" ಎಂದು.
ನಾವು  ನಮ್ಮ ದೈನಂದಿನ ಜೀವನದಲ್ಲಿ ಮಾಡುವ ಪ್ರತಿಯೊಂದು ಕರ್ಮ ಕೂಡಾ ಹೀಗೆ. ಅದು ಭಗವಂತನ ಅರ್ಪಣಾ ರೂಪದಲ್ಲಿರಬೇಕು. ನಮಗೆ ದೇಹ ಕೊಟ್ಟಿದ್ದು ಭಗವಂತ. ಆದ್ದರಿಂದ ಆ ದೇಹ ಹೋದಾಗ ಅಳುವ ಅಗತ್ಯವಿಲ್ಲ. ನಮ್ಮ ಪ್ರತಿಯೊಂದು ಕರ್ತವ್ಯವನ್ನು ಭಗವಂತನ ಪೂಜೆ ಎಂದು ಮಾಡಿ, ಸಾವಿಗೆ ಅಂಜದೆ ಬದುಕಿದಾಗ ಈ ಜೀವನ ಸಾರ್ಥಕ.

No comments:

Post a Comment