Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Wednesday, February 23, 2011

Bhagavad Gita Kannada Chapter-02 Shloka 28

ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ
ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ   ೨೮

ಅವ್ಯಕ್ತ ಆದೀನಿ ಭೂತಾನಿ ವ್ಯಕ್ತ ಮಧ್ಯಾನಿ ಭಾರತ |
ಅವ್ಯಕ್ತ ನಿಧನಾನಿ ಏವ  ತತ್ರ ಕಾ ಪರಿದೇವನಾ- -ಭರತವಂಶದ ಕುಡಿಯೆ, ಜೀವಿಗಳ ಬದುಕಿನ ಬುಡದ ಬೇರು ಕಾಣಿಸದು. ನಡು ಮಾತ್ರ ಕಾಣಿಸುತ್ತಿದೆ. ತುದಿಯೂ ಕಾಣಿಸದು. ಹೀಗಿರುತ ಏನಂಥ ಗೋಳು?

ಇಲ್ಲಿಯವರೆಗೆ ಜೀವ, ಜೀವದ ಇರವು, ಹುಟ್ಟು ಸಾವಿನ ಬಗ್ಗೆ ಅನೇಕ ರೀತಿಯಲ್ಲಿ ವಿಶ್ಲೇಷಣೆಯನ್ನು ಕೃಷ್ಣನ ಮಾತಿನಲ್ಲಿ ನೋಡಿದ್ದೇವೆ. ಆದರೆ ಮೂಲಭೂತವಾಗಿ ಅರ್ಜುನನಿಗೆ ಕಾಡಿದ ಸಮಸ್ಯೆ 'ನನ್ನ ಗುರು, ನನ್ನ ಅಜ್ಜ' ಎನ್ನುವ ಸಂಬಂಧದ ಸೆಳೆತ. ಅಂತಹ ಮಹಾ ಜ್ಞಾನಿಗಳ ವಿರುದ್ಧ ನಿರ್ಲಿಪ್ತನಾಗಿ ಯುದ್ಧ ಮಾಡುವುದು ಹೇಗೆ ಎನ್ನುವುದು ಆತನ ಸಮಸ್ಯೆ. ಇಲ್ಲಿ ಕೃಷ್ಣ ಆತನ ಸಮಸ್ಯೆಗೆ ಉತ್ತರಿಸುತ್ತಾನೆ.
ಒಬ್ಬ ವ್ಯಕ್ತಿ ನಮಗೆ ಸಂಬಂಧಿಯಾಗುವುದು ಆತನ ಹುಟ್ಟಿನ ನಂತರ. ಆದರೆ ಹುಟ್ಟಿನ ಮೊದಲು ಆತ ಏನಾಗಿದ್ದ? ಸತ್ತ ನಂತರ ಏಲ್ಲಿ ಹೋಗುತ್ತಾನೆ? ಈ ಹುಟ್ಟು-ಸಾವಿನ ಹಿಂದೆ ಮತ್ತು ಮುಂದೆ ನಮಗೂ ಆ ಜೀವಕ್ಕೂ ಏನೂ ಸಂಬಂಧವಿಲ್ಲ. ಈ ಸಂಬಂಧ ಜೀವದ ನಿರಂತರ ಬದುಕಿನ ಸರಳ ರೇಖೆಯಲ್ಲಿನ ಒಂದು ಬಿಂದು. ಅದು ಮಾತ್ರ ನಮಗೆ ವ್ಯಕ್ತ. ಉಳಿದದ್ದು ಅವ್ಯಕ್ತ. ಆದ್ದರಿಂದ ಸರಳ ರೇಖೆಯ ಒಂದು ಬಿಂದುವಿನಲ್ಲಿ ನಿಂತು ದುಃಖಿಸುವುದು ಸೂಕ್ತವಲ್ಲ.

ಇಲ್ಲಿ ನಾವು ಬದುಕಿದ್ದಾಗ ಒಬ್ಬರನೊಬ್ಬರು ಪ್ರೀತಿಸಬಾರದು ಎಂದಲ್ಲ. ಇದ್ದಾಗ ಪ್ರೀತಿಸು, ಆದರೆ ಇಲ್ಲವಾದಾಗ ಭಗವಂತ ಕರೆಸಿಕೊಂಡ ಎಂದು ನಿಶ್ಚಿಂತೆಯಿಂದ ಇರಲು ಮನಸ್ಸಿಗೆ ತರೆಬೇತಿ ಕೊಡು. ಇಲ್ಲದಿದ್ದರೆ ಜೀವನ ದುಸ್ತರವಾಗುತ್ತದೆ. ಇದ್ದಾಗ ಸಂತೋಷದಿಂದಿರು, ಇಲ್ಲದಿದ್ದಾಗ ದುಃಖಿಸಬೇಡ ಎನ್ನುವುದು ಈ ಶ್ಲೋಕದಲ್ಲಿ ಕೃಷ್ಣ ನಮಗೆ ಕೊಡುತ್ತಿರುವ ಸಂದೇಶ.

No comments:

Post a Comment