ಅವ್ಯಕ್ತೋSಯಮಚಿಂತ್ಯೋSಯಮವಿಕಾರ್ಯೋSಯಮುಚ್ಯತೇ ।
ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ ॥೨೫॥
ಅವ್ಯಕ್ತಃ ಅಯಮ್ ಅಚಿಂತ್ಯಃ ಅಯಮ್ ಅವಿಕಾರ್ಯಃ ಅಯಮ್ ಉಚ್ಯತೇ
ತಸ್ಮಾತ್ ಏವಮ್ ವಿದಿತ್ವಾ ಏನಮ್ ನ ಅನುಶೋಚಿತುಮ್ ಅರ್ಹಸಿ-- ಭಗವಂತ ಕಣ್ಣಿಗೆ ಕಾಣದವನು; ಇವನು ಚಿಂತನೆಗೆ ನಿಲುಕದವನು; ಇವನು ಬದಲಾಗದವನು-ಎಂದು ವೇದ ಸಾರುತ್ತದೆ. ಅದರಿಂದ ಅವನ[ಮತ್ತು ಜೀವನ] ಪರಿಯನ್ನು ಹೀಗೆ ಅರಿತ ಮೇಲೆ ಕೊರಗುವುದು ತರವಲ್ಲ.
ಭಗವಂತ ಅವ್ಯಕ್ತ. ಆತನ ಪ್ರತಿಬಿಂಬವಾದ ಜೀವ ಭೌತಿಕ ಶರೀರದಲ್ಲಿದ್ದರೂ ಕೂಡಾ ಅವ್ಯಕ್ತ. ಈ ಕಾರಣದಿಂದ ಭಗವಂತ ಹಾಗು ಜೀವ ನಮ್ಮ ಚಿಂತನೆಗೆ ನಿಲುಕದ್ದು. ನಾನು ಯಾರು? ಎಲ್ಲಿಂದ ಬಂದೆ ? ನಾನೇನು? ಎನ್ನುವುದೇ ನಮಗೆ ಗೊತ್ತಿಲ್ಲ. ಭಗವಂತ ಹಾಗು ಜೀವಸ್ವರೂಪ ಎಂದೂ ಬದಲಾಗದಿದ್ದರೂ ಕೂಡಾ, ಅದು ನಮ್ಮ ಚಿಂತನೆಗೆ ಎಟುಕುವುದಿಲ್ಲ. ಈ ಕಟು ಸತ್ಯವನ್ನು ತಿಳಿದ ಮೇಲೆ ಜೀವ ನಾಶವಾಗುತ್ತದೆ ಎಂದು ದುಃಖಿಸುವ ಅಗತ್ಯವಿಲ್ಲ.
ಅಥ ಚೈ ನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಮ್ ।
ತಥಾSಪಿ ತ್ವಂ ಮಹಾಬಾಹೋ ನೈನಂ ಶೋಚಿತುಮರ್ಹಸಿ ॥೨೬॥
ಅಥ ಚ ಏನಮ್ ನಿತ್ಯಜಾತಮ್ ನಿತ್ಯಮ್ ವಾ ಮನ್ಯಸೇ ಮೃತಮ್
ತದಾ ಅಪಿ ತ್ವಮ್ ಮಹಾಬಾಹೋ ನ ಏನಮ್ ಶೋಚಿತುಮ್ ಅರ್ಹಸಿ -- ಆದರೂ ಈ ಜೀವ ದೇಹದ ಮೂಲಕ ಸದಾ ಹುಟ್ಟುವವನು ಮತ್ತು ಸಾಯುವವನು ಎಂದು ಭಾವಿಸುವೆಯ? ಹಾಗಿದ್ದರೂ, ಓ ಮಹಾವೀರ, ನೀನು ಇವನಿಗಾಗಿ ಕೊರಗುವುದು ತರವಲ್ಲ.
ವೇದಾಂತ ಬಿಟ್ಟು ಲೋಕದ ದೃಷ್ಟಿಯಲ್ಲಿ ವಿಚಾರ ಮಾಡಿದರೆ, ಆತ್ಮ ದೇಹದ ಮೂಲಕ ವ್ಯಕ್ತವಾಗುತ್ತದೆ ಹಾಗು ಸಾವಿನ ಮೂಲಕ ಅವ್ಯಕ್ತವಾಗುತ್ತದೆ. ಹುಟ್ಟು-ಸಾವನ್ನು ಮೀರಿ ನಿಲ್ಲುವುದು ಎಂದೂ ಸಾಧ್ಯವಿಲ್ಲ. ಆದ್ದರಿಂದ ಸಾವಿನ ಬಗ್ಗೆ ದುಃಖ ಪಡುವ ಅಗತ್ಯವಿಲ್ಲ. ಮಹಾ ಬಲಿಷ್ಟನಾದ ನೀನು ಈ ಹಿಂದೆ ಅದೆಷ್ಟು ಯುದ್ಧಗಳನ್ನು ಮಾಡಿದ್ದಿ? ಆಗ ಇರದ ಸಮಸ್ಯೆ ಈಗೇಕೆ? ನೀನು ಮಾಡುತ್ತಿರುವುದು ನಿನ್ನ ಕರ್ತವ್ಯವನ್ನೇ ಹೊರತು ಇನ್ನೇನನ್ನೂ ಅಲ್ಲ-ಎಂದು ಕೃಷ್ಣ ಅರ್ಜುನನಿಗೆ ತಿಳಿಸಿ ಹೇಳುತ್ತಾನೆ.
ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ ।
ತಸ್ಮಾದಪರಿಹಾರ್ಯೇರ್ಥೇ ನ ತ್ವಂ ಶೋಚಿತುಮರ್ಹಸಿ ॥೨೭॥
ಜಾತಸ್ಯ ಹಿ ಧ್ರುವಃ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ
ತಸ್ಮಾತ್ ಅಪರಿಹಾರ್ಯೇ ಅರ್ಥೇ ನ ತ್ವಂ ಶೋಚಿತುಮ್ ಅರ್ಹಸಿ-- ಹುಟ್ಟಿದವನಿಗೆ ಸಾವು ಖಚಿತ; ಸತ್ತವನಿಗೆ ಮರುಹುಟ್ಟೂ ಖಚಿತ. ಎಂದ ಮೇಲೆ, ಅನಿವಾರ್ಯವಾದ ಸಂಗತಿಗಾಗಿ ನೀನು ಅಳುವುದು ತರವಲ್ಲ.
ಹುಟ್ಟು-ಸಾವು, ಸುಖ-ದುಃಖ, ಒಂದು ನಾಣ್ಯದ ಎರಡು ಮುಖವಿದ್ದಂತೆ. ರಾತ್ರಿ ಇಲ್ಲದೆ ಹಗಲಿಲ್ಲ. ಹುಟ್ಟಿದ ಮೇಲೆ ಸಾವು ಕಟ್ಟಿಟ್ಟ ಬುತ್ತಿ. ನಾವು ಜೀವನದಲ್ಲಿ ಅನಿವಾರ್ಯವಾದದ್ದನ್ನು ಹೊಂದಿಸಿಕೊಳ್ಳುವುದನ್ನು ಕಲಿಯಬೇಕು. ಅದನ್ನು ಬಿಟ್ಟು ಕಷ್ಟ ಬಂದಾಗ ಕೊರಗುವುದು ತರವಲ್ಲ. ಅನಿವಾರ್ಯವಾದ ಕರ್ತವ್ಯ ಪಾಲನೆಯಲ್ಲಿ ನಾವು ಎಂದೂ ದುಃಖಿಸಬಾರದು.
No comments:
Post a Comment