Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, January 29, 2011

Bhagavad Gita Kannada Chapter-02-Shloka-11

ಶ್ರೀಭಗವಾನುವಾಚ
ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ   |
ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ        ೧೧

ಶ್ರೀ ಭಗವಾನ್ ಉವಾಚ-ಭಗವಂತ ಹೇಳಿದನು:
ಅಶೋಚ್ಯಾನ್ ಅನ್ವಶೋಚಃ ತ್ವಮ್ ಪ್ರಜ್ಞಾವಾದಾನ್ ಚ ಭಾಷಸೇ
ಗತ ಅಸೂನ್ ಅಗತ ಅಸೂನ್ ಚ  ನ ಅನುಶೋಚಂತಿ ಪಂಡಿತಾಃ -ಅಳಬಾರದವರಿಗಾಗಿ ನೀನು ಅಳುತ್ತಿರುವೆ. ತಿಳಿದವರು ಆಡದಂಥ ಮಾತುಗಳನ್ನು ತೋಚಿದಂತೆ ಆಡುತ್ತಿರುವೆ. ಅಳಿದವರ ಬಗೆಗಾಗಲಿ, ಅಳಿಯದವರ ಬಗೆಗಾಗಲಿ, ತಿಳಿದವರು ಅಳುವುದಿಲ್ಲ.

ಇದು ಭಗವಂತನ ಉಪದೇಶದ ಮೊದಲ ನುಡಿ. ಇದು ಇಡೀ ಗೀತೆಗೆ ಪಂಚಾಂಗ ರೂಪದಲ್ಲಿದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ "ಯಾರಿಗೋಸ್ಕರ ಅಳಬಾರದೋ ಅಂತವರಿಗೋಸ್ಕರ ಅಳುತ್ತಿರುವೆ. ತುಂಬಾ ತಿಳಿದ ಮಹಾ ಜ್ಞಾನಿಯಂತೆ ಮಾತನಾಡುತ್ತಿರುವೆ" ಎಂದು. ಇದು ಅರ್ಜುನನ ದೌರ್ಬಲ್ಯಕ್ಕೆ ಕೃಷ್ಣ ಹಿಡಿದ ಕನ್ನಡಿ. ಇಲ್ಲಿ 'ನಿನಗೇನೂ ತಿಳಿದಿಲ್ಲ' ಎನ್ನುವ ಭಾವ ಕೂಡ ಸ್ಪಷ್ಟವಾಗಿದೆ. ಅರ್ಜುನನಿಗೆ ಕಾಡಿರುವುದು ಕೆಲವರು(ಗುರು-ಹಿರಿಯರು) ಸಾಯುತ್ತಾರೆ ಇನ್ನು ಕೆಲವರು(ದುಷ್ಟರು) ಬದುಕುತ್ತಾರಲ್ಲಾ ಎನ್ನುವ ಭಯ-ಅದರಿಂದಾಗಿ ದುಃಖ. ದುಃಖಕ್ಕೆ ಮೂಲ ಭಯ-ಭಯಕ್ಕೆ ಮೂಲ ಅಜ್ಞಾನ.
ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. ಭೀಷ್ಮ ದ್ರೋಣರಂತಹ ಮಹಾತ್ಮರು ಸತ್ತರೆ ಅಳುವುದು ತಪ್ಪೇ? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನಾವು ಹುಟ್ಟು ಸಾವಿನ ಗುಟ್ಟನ್ನು ಅರಿತಿರಬೇಕು. ಹುಟ್ಟು ಸಾವಿನ ಇನ್ನೊಂದು ಆಯಾಮ ತಿಳಿದಾಗ ನಮಗೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಜೀವ ಅನಾದಿನಿತ್ಯ; ಅದಕ್ಕೆಂದೂ ಸಾವಿಲ್ಲ. ಈ ಭೌತಿಕ ಶರೀರ ಜೀವಕ್ಕೆ ಒಂದು ಪಂಜರದಂತೆ. ಈ ಪಂಜರದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಹುಟ್ಟು. ಪಂಜರದಿಂದ ಹೊರ ಹೋಗುವುದು ಸಾವು. ಈ ಆಯಾಮದಲ್ಲಿ ನೋಡಿದರೆ ಹೊಸ ಅಂಗಿ ತೊಡುವುದು ಹುಟ್ಟು-ಹಳೆ ಅಂಗಿ ತೊರೆಯುವುದು ಸಾವು. ಈ ಜ್ಞಾನ ನಮಗಿದ್ದರೆ ನಮಗೆ ಸಾವಿನ ಭಯವಿರುವುದಿಲ್ಲ.
ಇಲ್ಲಿ ಕೃಷ್ಣ ಹೇಳುತ್ತಾನೆ: "ಜ್ಞಾನಿಗಳು ಆಡುವ ಮಾತನ್ನು ನೀನು ಆಡುತ್ತಿಲ್ಲ" ಎಂದು. ಏಕೆಂದರೆ ಜ್ಞಾನಿಗಳು ಹುಟ್ಟು-ಸಾವಿನ ಮರ್ಮವನ್ನು ಚನ್ನಾಗಿ ಅರಿತಿರುತ್ತಾರೆ. ನೀನು ಆಡುತ್ತಿರುವುದು ತಿಳುವಳಿಕೆಯ ಮಾತಲ್ಲ. ನಿನ್ನ ತಿಳುವಳಿಕೆಯೇ ವಿಶ್ವದ ಸತ್ಯ ಎನ್ನುವ ಭ್ರಮೆಯಿಂದ ನೀನು ಮಾತನಾಡುತ್ತಿದ್ದೀಯ ಎನ್ನುತ್ತಾನೆ ಕೃಷ್ಣ.
ಇಲ್ಲಿ ಕೃಷ್ಣ ಅರ್ಜುನ ಹಾಕಿದ ಎಲ್ಲಾ ಲೌಕಿಕ ಪ್ರಶ್ನೆಗಳನ್ನು ಬಿಟ್ಟು ಅವನಿಗೆ ಸತ್ಯದ ಸಾಕ್ಷಾತ್ಕಾರ ಮಾಡಿಸುತ್ತಿದ್ದಾನೆ. ಅರ್ಜುನ ಕಂಡಿದ್ದು ಕೇವಲ ಐಹಿಕ ಪ್ರಪಂಚವಾದರೆ, ಕೃಷ್ಣ ಆತನಿಗೆ ಅದರಾಚೆಗಿನ ಸತ್ಯದ ಇನ್ನೊಂದು ಮುಖದ ಪರಿಚಯ ಮಾಡಿಸುತ್ತಿದ್ದಾನೆ.
ಸಾವು ಭಯಾನಕವಲ್ಲ,  ಹುಟ್ಟಿ ಬಂದವನಿಗೆ ಸಾವು ಅನಿವಾರ್ಯ. ಆತ್ಮಕ್ಕೆ ಎಂದೂ ಸಾವಿಲ್ಲ. ಆತ್ಮ ಅನಾದಿನಿತ್ಯ. ಆದರೆ ದೇಹ ನಾಶ ಅನಿವಾರ್ಯ. ಮನುಷ್ಯ ತನ್ನ ವಿಕೃತಿಯಿಂದ ಪ್ರಕೃತಿಯೆಡೆಗೆ ಪಯಣಿಸುವ ಕ್ರಿಯೆ ಸಾವು. ಆದ್ದರಿಂದ ಅಳಿದವರ ಬಗೆಗಾಗಲಿ, ಅಳಿಯದವರ ಬಗೆಗಾಗಲಿ, ತಿಳಿದವರು ಅಳುವುದಿಲ್ಲ ಎನ್ನುವುದನ್ನು ಇಲ್ಲಿ ಕೃಷ್ಣ ಅರ್ಜುನನಿಗೆ ಮನವರಿಕೆ ಮಾಡಿಸುತ್ತಿದ್ದಾನೆ.

Bhagavad Gita Kannada Chapter-02_Shloka 4-10

ಅರ್ಜುನ ಉವಾಚ
ಕಥಂ ಭೀಷ್ಮಮಹಂ ಸಂಖೇ ದ್ರೋಣಂ ಚ ಮಧುಸೂದನ          
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ      

ಅರ್ಜುನ ಉವಾಚ-ಅರ್ಜುನ ಹೇಳಿದನು:
ಕಥಮ್  ಭೀಷ್ಮಮ್ ಅಹಮ್ ಸಂಖೇ ದ್ರೋಣಮ್  ಚ ಮಧುಸೂದನ
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾ ಅರಿಸೂದನ- ಅರಿಗಳನ್ನು ತರಿದ ಓ ಮಧುಸೂದನ, ಭೀಷ್ಮನನ್ನು, ದ್ರೋಣನನ್ನು, ಪೂಜಿಸಬೇಕಾದ ಮಂದಿಯನ್ನು ನಾನೆಂತು ರಣದಲ್ಲಿ ಬಾಣಗಳಿಂದ ಹೊಡೆದು ಹೋರಾಡಲಿ?

ಕೃಷ್ಣನ ತೀಕ್ಷ್ಣ ಉತ್ತರ ಹಾಗು ಆತನ ನಗುಮೊಗವನ್ನು ಗಮನಿಸಿದ ಅರ್ಜುನನ ಮಾತಿನ ದಾಟಿ ಈಗ ಬದಲಾಗುತ್ತದೆ. ಆತ ಭಾವಾವೇಶ ಬಿಟ್ಟು ಈಗ ಭಾವುಕತೆಯಿಂದ ಶರಣಾಗತಿಯತ್ತ ಹೊರಳುತ್ತಿದ್ದಾನೆ.
ಅರ್ಜುನ ಹೇಳುತ್ತಾನೆ "ನನ್ನ ಕಣ್ಣಮುಂದೆ ನಿಂತ ಭೀಷ್ಮಾಚಾರ್ಯರು, ದ್ರೋಣಾಚಾರ್ಯರನ್ನು ಹೇಗೆ ಎದುರಿಸಲಿ?  ಒಬ್ಬರು ನಮ್ಮ ವಂಶದ ಮೂಲಪುರುಷನಾದ ರಾಜರ್ಷಿ. ಇನ್ನೊಬ್ಬರು ಎಲ್ಲಾ ಕ್ಷತ್ರಿಯರಿಗೂ ವಿದ್ಯೆ ಕೊಟ್ಟ ಮಹರ್ಷಿ. ಇಂತಹ ಪೂಜಾರ್ಹರಾದ ಮಹಾನೀಯರತ್ತ ಹೇಗೆ ಬಾಣ ಹೂಡಲಿ ? ಸೃಷ್ಟಿಯ ಆದಿಯಲ್ಲಿ ಮದು-ಕೈತಪರನ್ನು ಸಂಹಾರ ಮಾಡಿದ ಓ ಮದುಸೂದನನೆ; ದುಷ್ಟ ಸಂಹಾರಕ್ಕೆಂದು  ಅವತರಿಸಿದ ಅರಿಸೂದನನೆ,  ಜ್ಞಾನಿಗಳ, ಆಚಾರ್ಯರ ಹತ್ಯೆ ನಿನ್ನ ಮೂಲ ಉದ್ದೇಶ ಅಲ್ಲ" ಎಂದು ಭಿನ್ನ ದಾಟಿಯಲ್ಲಿ ಅರ್ಜುನ ತನ್ನ ಮಾತನ್ನು ಮುಂದುವರಿಸುತ್ತಾನೆ.

ಗುರೂನಹತ್ವಾ ಹಿ ಮಹಾನುಭಾವಾನ್ ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೇ         
ಹತ್ವಾSರ್ಥಕಾಮಾಂಸ್ತು ಗುರೂನಿಹೈವ ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್       

ಗುರೂನ್ ಅಹತ್ವಾ ಹಿ ಮಹಾನುಭಾವಾನ್ ಶ್ರೇಯಃ   ಭೋಕ್ತುಮ್  ಭೈಕ್ಷ್ಯಮ್ ಅಪಿ ಇಹ ಲೋಕೇ
ಹತ್ವಾ ಅರ್ಥ ಕಾಮಾನ್ ತು  ಗುರೂನ್ ಇಹ ಏವ ಭುಂಜೀಯ ಭೋಗಾನ್ ರುಧಿರ ಪ್ರದಿಗ್ಧಾನ್-- ಈ ಮಹಾನುಭಾವಿಗಳನ್ನು ಕೊಲ್ಲುವ ಬದಲು ಇಲ್ಲೆ, ಈ ನೆಲದಲ್ಲಿ  ಭಿಕ್ಷೆ ಬೇಡುವುದು ಮೇಲು. ಸಿರಿಯ ಬೆನ್ನು ಹತ್ತಿದ ಇವರನ್ನು ಕೊಂದು ಇಲ್ಲೆ ಅವರ ನೆತ್ತರಿನಿಂದ ನೆನೆದ ಐಸಿರಿಯನುಣ್ಣಬೇಕು!
ಗುರು ಹಿರಿಯರನ್ನು ಕೊಂದು, ಸಿರಿವಂತಿಕೆಯ ಭೋಗವನ್ನು ಅನುಭವಿಸುವುದಕ್ಕಿಂತ, ಭಿಕ್ಷೆ ಬೇಡಿ ಬದುಕುವುದು ಹಿರಿತನವಲ್ಲವೇ? ಯಾವ ಸಿಂಹಾಸನ ಅಂತರಂಗದ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ಭೀಷ್ಮ-ದ್ರೋಣರಂತಹ ಮಹಾನುಭಾವರನ್ನು ಕೊಡಲಾರದೋಅಂತಹ ಸಿಂಹಾಸನ ನಮಗೇಕೆ ಬೇಕು? ದುರ್ಯೋಧನನ ಸಂಬಳದ ದಾಸರಾಗಿ, ಅರಮನೆಯ ಋಣಕ್ಕಾಗಿ ಹೋರಾಟಕ್ಕೆ ನಿಂತ ಇವರನ್ನು ಕೊಂದು ಸಿಂಹಾಸನವೇರಿದರೆ, ಗುರುಗಳ ನೆತ್ತರಿನಿಂದ ತೊಯ್ದ ಭೋಗವನ್ನು  ಅನುಭವಿಸಿದಂತೆ.

ನ ಚೈತದ್ ವಿದ್ಮಃ ಕತರನ್ನೋ ಗರೀಯೋ ಯದ್ ವಾ ಜಯೇಮ ಯದಿ ವಾ ನೋ ಜಯೇಯುಃ 
ಯಾನೇವ ಹತ್ವಾ ನ ಜಿಜೀವಿಷಾಮಸ್ತೇSವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ        

ನ ಚ ಏತತ್ ವಿದ್ಮಃ ಕತರತ್ ನಃ ಗರೀಯಃ ಯತ್ ವಾ  ಜಯೇಮ ಯದಿ ವಾ ನಃ ಜಯೇಯುಃ
ಯಾನ್ ಏವ  ಹತ್ವಾ ನ ಜಿಜೀವಿಷಾಮಃ ತೇ ಅವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ --ಇದೇ ತಿಳಿಯುತ್ತಿಲ್ಲ. ಯಾವುದು ನಮಗೆ ಹೆಚ್ಚು ಒಳಿತು-ನಾವು ಗೆಲ್ಲುವುದೇ? ಅಥವ ನಮ್ಮನ್ನು ಅವರು ಗೆಲ್ಲುವುದೇ ಯಾರನ್ನು   ಕೊಂದು ನಾವು ಬದುಕ ಬಯಸುವುದಿಲ್ಲವೋ, ಅವರು(ಕೌರವರು) ನಮ್ಮೆದುರು ನಿಂತಿದ್ದಾರೆ.

ಇಲ್ಲಿಯ ತನಕ ತನ್ನ ವಾದವನ್ನೇ ಮಂಡಿಸಿದ ಅರ್ಜುನ ಈಗ ಕೃಷ್ಣನಿಗೆ ಶರಣಾಗಿ ತನಗ್ಯಾವುದು ಒಳಿತು ಎಂದು ಪ್ರಶ್ನೆ ಮಾಡುತ್ತಾನೆ. “ನಾವು ಯುದ್ಧ ಮಾಡಿ ಗೆಲ್ಲುವುದರಲ್ಲಿ  ನಮಗೆ ಶ್ರೆಯಸ್ಸೋ ಅಥವಾ ಗುರುಹಿರಿಯರು ಗೆಲ್ಲುವುದರಲ್ಲಿ ನಮಗೆ ಶ್ರೆಯಸ್ಸೋ ತಿಳಿಯುತ್ತಿಲ್ಲ. ಯುದ್ಧದಲ್ಲಿ ಗೆಲ್ಲಬೇಕು ಎನ್ನುವ ಆಸೆಯೂ ಹೊರಟುಹೋಗಿದೆ” ಎಂದು ತನ್ನ ಮನಸ್ಸಿನ ಸಂಧಿಗ್ಧತೆಯನ್ನು ಅರ್ಜುನ ಕೃಷ್ಣನ ಮುಂದೆ ಬಿಚ್ಚಿಡುತ್ತಾನೆ. ತಂದೆ ಸಮಾನಾದ ಧೃತರಾಷ್ಟ್ರನ ಮಕ್ಕಳು ನಮ್ಮ ಮುಂದೆ ಯುದ್ಧಕ್ಕೆ ನಿಂತಿದ್ದಾರೆ. ಮಕ್ಕಳೆಂದರೆ ಪ್ರಾಣ ಬಿಡುವ  ನಮ್ಮ ದೊಡ್ಡಪ್ಪನ ವಿರುದ್ಧ ಹೋರಾಡಲು  ಇಷ್ಟವಿಲ್ಲ ಎನ್ನುತ್ತಾನೆ ಅರ್ಜುನ.

ಕಾರ್ಪಣ್ಯದೋಷೋಪಹತಸ್ವಭಾವಃ ಪೃಚ್ಛಾಮಿ ತ್ವಾ ಧರ್ಮಸಂಮೂಢಚೇತಾಃ  
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ ಶಿಷ್ಯಸ್ತೇSಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್     

ಕಾರ್ಪಣ್ಯ ದೋಷ ಉಪಹತ ಸ್ವಭಾವಃ ಪೃಚ್ಛಾಮಿ ತ್ವಾಮ್  ಧರ್ಮ ಸಮ್ಮೂಢ ಚೇತಾಃ
ಯತ್ ಶ್ರೇಯಃ  ಸ್ಯಾತ್ ನಿಶ್ಚಿತಮ್  ಬ್ರೂಹಿ ತತ್ ಮೇ ಶಿಷ್ಯಃ ತೇ ಅಹಮ್ ಶಾಧಿ ಮಾಮ್  ತ್ವಾಮ್  ಪ್ರಪನ್ನಮ್- -ದೌರ್ಬಲ್ಯದ ದೋಷದಿಂದ ನನ್ನ ಸಹಜ ಬೀರಕ್ಕೆ ಮಂಕು ಕವಿದಿದೆ. ಧರ್ಮದ ಬಗೆಗೆ ಬಗೆಗಾಣದವನಾಗಿ ನಿನ್ನನ್ನು ಕೇಳುತ್ತಿದ್ದೇನೆ;    ಹೇಳು ನನಗಿದನ್ನು: ಯಾವುದು ನಿಖರವಾದ ಒಳಿತಿನ ದಾರಿ? ನಾನು ನಿನ್ನ ಶಿಷ್ಯ. ನಿನಗೆ ಶರಣು ಬಂದ ನನಗೆ ದಾರಿ ತೋರು.

ನನಗೆ ಕಾರ್ಪಣ್ಯ ದೋಷ ಬಂದಿದೆ. ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನ ಮಾಡಲಾರದ ದಯನೀಯ ಸ್ಥಿತಿಯಲ್ಲಿದ್ದೇನೆ. ಧರ್ಮದ ಬಗ್ಗೆ ನನ್ನ ಚಿಂತನಶಕ್ತಿ ಗೊಂದಲದ ಗೂಡಾಗಿದೆ. ಯುದ್ಧ ಬೇಕೋ ಬೇಡವೋ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ. ಯಾವುದು ನನಗೆ ಹಿತ ಎಂದು ತಿಳಿಯದಾಗಿದೆ. ನಾನು ನಿನ್ನ ಶಿಷ್ಯನಾಗಿ ನಿನ್ನಲ್ಲಿ ಶರಣಾಗಿದ್ದೇನೆ. ನನಗೆ ಮಾರ್ಗದರ್ಶನ ಮಾಡು ಎಂದು ಅರ್ಜುನ ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ. ಇಲ್ಲಿಯ ತನಕ ಭಗವಂತನ ಮುಂದೆ ಪಂಡಿತನಂತೆ ಮಾತನಾಡಿದ ಅರ್ಜುನ, ಈಗ ಭಗವಂತನಲ್ಲಿ ಶರಣಾಗತಿಯನ್ನು ಬೇಡುತ್ತಿರುವುದು ಇಲ್ಲಿ ಸ್ಪಷ್ಟ.

ನಹಿ ಪ್ರಪಶ್ಯಾಮಿ ಮಮಾಪನುದ್ಯಾದ್ ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್      
ಅವಾಪ್ಯ ಭೂಮಾವಸಪತ್ನಮೃದ್ಧಂ ರಾಜ್ಯಂ ಸುರಾಣಾಮಪಿ ಚಾSಧಿಪತ್ಯಮ್           

ನ ಹಿ ಪ್ರಪಶ್ಯಾಮಿ ಮಮ ಅಪನುದ್ಯಾತ್ ಯತ್ ಶೋಕಮ್ ಉಚ್ಛೋಷಣಮ್ ಇಂದ್ರಿಯಾಣಾಮ್  
ಅವಾಪ್ಯ ಭೂಮೌ ಅಸಪತ್ನಮ್ ಋದ್ಧಮ್ ರಾಜ್ಯಮ್ ಸುರಾಣಾಮ್ ಅಪಿ ಚ ಆಧಿಪತ್ಯಮ್ - ಸತ್ಯ ಸಾರವನ್ನೆಲ್ಲ ಹೀರಿ ಬತ್ತಿಸಿಬಿಡಬಲ್ಲ ನನ್ನ ಈ ದುಗುಡವನ್ನು ದೂರೀಕರಿಸಬಲ್ಲ ದಾರಿಯನ್ನೆ ಕಾಣದವನಾಗಿದ್ದೇನೆ-ಹಗೆಗಳೇ ಇಲ್ಲದ, ಹುಲುಸಾದ ಇಡಿಯ ನೆಲದ ಒಡೆತನ ಪಡೆದರೂ, ಸಗ್ಗಿಗರ ಸಾಮ್ರಾಟನಾದರೂ ಕೂಡಾ.

“ನನ್ನ ಇಂದ್ರಿಯಗಳು ಸೊರಗಿ ಹೋಗುತ್ತಿವೆ. ನನ್ನ ದುಃಖವನ್ನು ಹೊಡೆದೋಡಿಸಲು ನನಗೆ ಮಾರ್ಗವೇ ಕಾಣುತ್ತಿಲ್ಲ. ಭೂಮಿಯಲ್ಲಿ, ಸ್ವರ್ಗದಲ್ಲಿ ಪ್ರಭುತ್ವವನ್ನು ಪಡೆದರೂ ಕೂಡಾ ನಾನು ಈ ದುಃಖವನ್ನು ಹೋಗಲಾಡಿಸಿಕೊಳ್ಳಲಾರೆ” ಎನ್ನುತ್ತಾನೆ ಅರ್ಜುನ.

ಸಂಜಯ ಉವಾಚ
ಏವಮುಕ್ತ್ವಾ ಹೃಷೀಕೇಶಂ ಗುಡಾಕೇಶಃ ಪರಂತಪಃ 
ನ ಯೋತ್ಸ್ಯ ಇತಿ ಗೋವಿಂದಮುಕ್ತ್ವಾ ತೂಷ್ಣೀಂ ಬಭೂವ ಹ           

ಸಂಜಯ ಉವಾಚ -ಸಂಜಯ ಹೇಳಿದನು:
ಏವಮ್ ಉಕ್ತ್ವಾ ಹೃಷೀಕೇಶಮ್  ಗುಡಾಕೇಶಃ ಪರಂತಪಃ
ನ ಯೋತ್ಸ್ಯೇ ಇತಿ ಗೋವಿಂದಮ್ ಉಕ್ತ್ವಾ ತೂಷ್ಣೀಮ್  ಬಭೂವ ಹ- ಅರಿಗಳನ್ನು ತರಿದ, ನಿದ್ದೆಯನ್ನು ಗೆದ್ದ ಅರ್ಜುನ-ಇಂದ್ರಿಯಗಳ ಒಡೆಯನಾದ ಗೋವಿಂದನ ಬಳಿ ಹೀಗೆಂದು- ಮತ್ತೆ 'ನಾನು ಕಾದಲಾರೆ' ಎಂದು ಸುಮ್ಮನಾದನು!

ಸಂಜಯ ಯುದ್ಧಭೂಮಿಯಲ್ಲಿ ಅರ್ಜುನನನ ಸ್ಥಿತಿಯನ್ನು ಧೃತರಾಷ್ಟ್ರನಿಗೆ ವರ್ಣಿಸುತ್ತಾ, ಈ ರೀತಿ ಹೇಳುತ್ತಾನೆ:  "ಇಡೀ ಬ್ರಹ್ಮಾಂಡದಲ್ಲಿ ತುಂಬಿರುವ ನಮ್ಮ ಇಂದ್ರಿಯಗಳ ಸ್ವಾಮಿ  ಗೋವಿಂದನಲ್ಲಿ ನಿದ್ದೆಯನ್ನು ಗೆದ್ದ ಅರ್ಜುನ 'ನಾನು ಯುದ್ಧ ಮಾಡಲಾರೆ' ಎಂದು ಹೇಳಿ ಮೌನಿಯಾದ” ಎಂದು.

ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ    
ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ      ೧೦

ತಮ್ ಉವಾಚ ಹೃಷೀಕೇಶಃ ಪ್ರಹಸನ್ ಇವ ಭಾರತ 
ಸೇನಯೋಃ ಉಭಯೋಃ  ಮಧ್ಯೇ ವಿಷೀದಂತಮ್ ಇದಮ್  ವಚಃ -ಓ ಭರತ ವಂಶದ ದೊರೆಯೆ, ಎರಡು ಪಡೆಗಳ ನಡುವೆ ತಳಮಳಗೊಂಡಿರುವ ಅವನನ್ನು ಕುರಿತು ಕೃಷ್ಣ ಮೆಲುನಗುತ್ತ ಈ ಮಾತು ನುಡಿದ.

ಅರ್ಜುನ ಸಂಪೂರ್ಣ ಶರಣಾಗಿ ತನ್ನಮುಂದೆ ಅಂಗಲಾಚಿ ನಿಂತಾಗ, ಶ್ರೀಕೃಷ್ಣ ನಸುನಗುತ್ತ ತನ್ನ ಮಾತನ್ನು ಆರಂಭಿಸುತ್ತಾನೆ.
ಇಲ್ಲಿ ಅರ್ಜುನ ಕೃಷ್ಣ ಹೇಳುವುದನ್ನು ಸ್ವೀಕರಿಸುವ ಹಂತವನ್ನು ತಲುಪಿದ್ದಾನೆ. ಆತನಲ್ಲಿ ಭಾವಾವೇಶ ಹೊರಟುಹೋಗಿ ಶರಾಣಗತಿ ಬಂದಿದೆ. ಭಗವಂತ ನಮಗೆ ಮಾರ್ಗದರ್ಶನ ಮಾಡಬೇಕಾದರೆ ನಾವು ನಮ್ಮ ಅಹಂಕಾರವನ್ನು ತೊರೆದು, ಆತನಲ್ಲಿ ಸಂಪೂರ್ಣ ಶರಣಾಗಬೇಕು. ಆಗ ಖಂಡಿತ ನಮಗೆ ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಮಾಡುವ ಉಪದೇಶ ನಮ್ಮೆಲ್ಲರಿಗೆ ಆತ ಮಾಡಿದ ಉಪದೇಶ. ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ಕೃಷ್ಣನ ಉಪದೇಶವನ್ನು ಆಲಿಸೋಣ ಬನ್ನಿ.

Thursday, January 27, 2011

Bhagavad Gita Kannada Chapter-02 Shloka_ 1-3

ಅಧ್ಯಾಯ ಎರಡು
ಯುದ್ಧ ಮಾಡುವುದಿಲ್ಲ ಎಂದು ಕೈಚಲ್ಲಿ ರಥದಲ್ಲಿ ಕುಸಿದು ಕುಳಿತ ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ ಎರಡನೇ ಅಧ್ಯಾಯದಿಂದ ಆರಂಭವಾಗುತ್ತದೆ. ಈ ಅಧ್ಯಾಯ ಇಡೀ ಭಗವದ್ಗೀತೆಗೆ ಪಂಚಾಂಗ ರೂಪದಲ್ಲಿದ್ದು, ಸಮಗ್ರ ಸಂದೇಶದ ಸಾರವನ್ನು ವ್ಯಾಸರು ಇಲ್ಲಿ ಸೆರೆ ಹಿಡಿದಿದ್ದಾರೆ.ಇಲ್ಲಿ  ಬರುವ ಉಪದೇಶದ ವಿಸ್ತಾರ ರೂಪವೇ ಇತರ ಹದಿನಾರು ಅಧ್ಯಾಯಗಳು.
ಸಂಜಯ ಉವಾಚ
ತಂ ತಥಾ ಕೃಪಯಾSSವಿಷ್ಟಮಶ್ರುಪೂರ್ಣಾಕುಲೇಕ್ಷಣಮ್
ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ

ಸಂಜಯ ಉವಾಚ-ಸಂಜಯ ಹೇಳಿದನು:
ತಮ್  ತಥಾ ಕೃಪಯಾ ಆವಿಷ್ಟಮ್ ಅಶ್ರು ಪೂರ್ಣ ಅಕುಲ ಈಕ್ಷಣಮ್ 
ವಿಷೀದಂತಮ್ ಇದಮ್ ವಾಕ್ಯಮ್ ಉವಾಚ ಮಧುಸೂದನಃ -ಹಾಗೆ ಕಾರುಣ್ಯಕ್ಕೊಳಗಾಗಿ ಕಂಬನಿ ತುಂಬಿ ಕಣ್ಣು ಮಸುಕಾಗಿ ಉಮ್ಮಳಿಸುತ್ತಿರುವ ಅವನನ್ನು ಕಂಡು ಕೃಷ್ಣ ಈ ಮಾತು ನುಡಿದ.

ಅರ್ಜುನನಿಗೆ  ಇಡೀ ಸಮಾಜದ, ಜನಾಂಗದ ಮೇಲೆ ಅನುಕಂಪ. ಯುದ್ಧ ಮಾಡುವುದರಿಂದ ಜನಾಂಗ ಹತ್ಯೆಗೆ ಕಾರಣವಾಗುತ್ತೇವೆ ಎನ್ನುವುದು ಆತನ ತಲೆಯಲ್ಲಿ ತುಂಬಿ ಹೋಗಿದೆ. ಕೃಪೆಯ ಆವೇಶದಿಂದ ಕಣ್ಣಲ್ಲಿ ನೀರಿಳಿಯುತ್ತಿದೆ. ಅಜ್ಞಾನದ ಮಂಜು ಮನಸ್ಸನ್ನು ವಿಕ್ಷಿಪ್ತಗೊಳಿಸಿದೆ. ತರ್ಕದ ಮೂಲಕ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದಾನೆ. ಇದು ಸಹಜ ಪ್ರವೃತ್ತಿ ಅಲ್ಲ, ಇದೊಂದು ಆವೇಶ. ಇದಕ್ಕೆ ಕೃಷ್ಣ ನಿಷ್ಠುರವಾಗಿ ಉತ್ತರಿಸುತ್ತಾನೆ.

ಶ್ರೀಭಗವಾನುವಾಚ
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ 
ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ

ಶ್ರೀ ಭಗವಾನ್ ಉವಾಚ-ಭಗವಂತ ಹೇಳಿದನು:
ಕುತಃ ತ್ವಾ ಕಶ್ಮಲಮ್ ಇದಮ್  ವಿಷಮೇ ಸಮುಪಸ್ಥಿತಮ್ 
ಅನಾರ್ಯ ಜುಷ್ಟಮ್ ಅಸ್ವರ್ಗ್ಯಮ್ ಅಕೀರ್ತಿ ಕರಮ್ ಅರ್ಜುನ - ಅರ್ಜುನ, ಇಂಥ ಸಂಕಟದಲ್ಲಿ ಬಲ್ಲವರು ಮೆಚ್ಚದ, ಅಲ್ಲಿ ಸ್ವರ್ಗಕ್ಕೆ ಸಲ್ಲದ, ಇಲ್ಲಿ ಹೆಸರುಗೆಡಿಸುವ ಈ ಕೊಳೆ ನಿನ್ನನ್ನೇಕೆ ಕವಿಯಿತು?

"ಎಲ್ಲಿಂದ ಬಂತು ನಿನಗೆ ಈ ಬುದ್ಧಿ? ಈ ಭೌತಿಕ  ಕೊಳೆ ನಿನಗೆ ಹೇಗೆ ಅಂಟಿತು? ಇಂತಹ ತುರ್ತುಪರಿಸ್ಥಿತಿಯಲ್ಲಿ, ತಕ್ಷಣ ಕಾರ್ಯಪ್ರವೃತ್ತರಾಗಬೇಕಾದ ಈ ಕ್ಷಣದಲ್ಲಿ ಇದೇನು ಹೊಲಸು ಯೋಚನೆ? ಆರ್ಯರಾದವರು ಯಾರೂ ಈ ರೀತಿ ಎಂದೂ ಯೋಚಿಸುವುದಿಲ್ಲ. ಇಂಥಹ ವಿಚಾರದಾರೆಯಿಂದ- ಪರದಲ್ಲಿ ಸ್ವರ್ಗವಿಲ್ಲ ಹಾಗು ಇಹದಲ್ಲಿ ಕೀರ್ತಿ ಇಲ್ಲ. ತಿಳಿದವರು, ಜ್ಞಾನಿಗಳು, ಹಿರಿಯರು ಎಂದೂ ಈ ರೀತಿ ಯೋಚನೆ ಮಾಡುವುದಿಲ್ಲ"-ಎಂದು ನಿಷ್ಠುರವಾಗಿ ಅರ್ಜುನನ ಸಂಪೂರ್ಣ ವಾದವನ್ನು ಒಂದೇ ಮಾತಿನಲ್ಲಿ ಹೊಡೆದು ಹಾಕಿದ ಕೃಷ್ಣ.  ಇಲ್ಲಿ ಬಳಕೆಯಾದ "ಆರ್ಯ" ಎನ್ನುವ ಪದ ಜನಾಂಗ ವಾಚಕ ಪದ ಅಲ್ಲ. ಆರ್ಯ ಎಂದರೆ ತಿಳುವಳಿಕೆ ಇರುವವರು, ವಯೋವೃದ್ಧ ಜ್ಞಾನಿಗಳು, ಗೌರವಾನ್ವಿತರು ಎಂದರ್ಥ. ಕನ್ನಡದಲ್ಲಿ  'ಅಯ್ಯಾ' ಎನ್ನುವ ಪದಕ್ಕೆ ಇದೇ ಅರ್ಥವಿದೆ.

ಕ್ಲೈಬ್ಯಂ ಮಾಸ್ಮಗಮಃ ಪಾರ್ಥ ನೈತತ್ ತ್ವಯ್ಯುಪಪದ್ಯತೇ     
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ      

ಕ್ಲೈಬ್ಯಮ್  ಮಾ ಸ್ಮಗಮಃ  ಪಾರ್ಥ ನ ಏತತ್ ತ್ವಯಿ ಉಪಪದ್ಯತೇ
 ಕ್ಷುದ್ರಮ್  ಹೃದಯ ದೌರ್ಬಲ್ಯಮ್ ತ್ಯಕ್ತ್ವಾ  ಉತ್ತಿಷ್ಠ ಪರಮ್ ತಪ -ಪಾರ್ಥ, ಹೇಡಿಯಾಗಬೇಡ, ನಿನ್ನಲ್ಲಿ ಇದು ತರವಲ್ಲ. ಅರಿಗಳ ಎದೆಗೆಡಿಸುವ ವೀರನೆ, ಕೀಳರಿಮೆಯ ಎದೆಗೇಡಿತನವನ್ನು ತೊರೆದು ಎದ್ದು ನಿಲ್ಲು.

"ನಪುಂಸಕನಂತೆ ಮಾತನಾಡಬೇಡ. ಅರ್ಜುನನಲ್ಲಿ ಇಂತಹ ಹೇಡಿತನವನ್ನು ನಾನು ನಿರೀಕ್ಷಿಸಿರಲಿಲ್ಲ. ಇಂತಹ ಕ್ಷುದ್ರ ಮಾನಸಿಕ ದೌರ್ಬಲ್ಯವನ್ನು ತೊಡೆದುಹಾಕಿ, ವೀರನಾಗಿ ಅನ್ಯಾಯದ ವಿರುದ್ಧ ಹೋರಾಡು" ಎಂದು ಹೇಳಿ ಕೃಷ್ಣ, ಅರ್ಜುನನಿಗೆ  ದಿಗ್ಬ್ರಾಂತಿಗೊಳಿಸಿ ಚಿಕೆತ್ಸೆ(Shock Treatment) ನೀಡಿದ್ದಾನೆ.
ಕೃಷ್ಣ   ಏಕೆ ಹೀಗೆ ಹೇಳಿದ? ಆತ ಯುದ್ಧ ಹಾಗು ರಕ್ತಪಾತವನ್ನು ಬಯಸಿದ್ದನೇ ? ಇತ್ಯಾದಿ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಾಮಾನ್ಯ. ಇಲ್ಲಿ ಸೂಕ್ಷ್ಮವಾಗಿ ನೋಡಿದರೆ: ಯುದ್ಧವಾದರೆ ಸಾಮಾಜಿಕವಾಗಿ ಏನೇನು ತೊಂದರೆ ಆಗಬಹುದು ಎಂದು ಅರ್ಜುನ ಹೇಳಿದ್ದನೋ, ಅದಕ್ಕಿಂತ ಹತ್ತುಪಟ್ಟು ಅನ್ಯಾಯ ಯುದ್ಧವಾಗದೇ ಇದ್ದಿದ್ದರೆ ಆಗುತ್ತಿತ್ತು. ದುರ್ಯೋಧನ ಆ ಕಾಲದ ಮಹಾ ಲೋಕಕಂಟಕ. ತುಂಬಿದ ಸಭೆಯಲ್ಲಿ ತನ್ನ ಸ್ವಂತ ಅತ್ತಿಗೆಯ ಮಾನಭಂಗಕ್ಕೆ ಕೈ ಹಾಕಿದ ಆತ, ಅಧಿಕಾರದ ಗದ್ದುಗೆ ಏರಿದ್ದರೆ ಸಮಾಜದ ಪರಿಸ್ಥಿತಿ ಏನಾಗುತ್ತಿತ್ತು ಯೋಚಿಸಿ. ಇಲ್ಲಿ ಕೃಷ್ಣನ ಧೋರಣೆ ಈ ದೇಶದ ನಾಯಕತ್ವ ಮುಂದೆ ಯಾರ ಕೈ ಸೇರಬೇಕು ಎನ್ನುವುದೇ ಹೊರತು ಬಂಧು ಪ್ರೇಮವಲ್ಲ. ಗೆಲ್ಲುವುದು ಸೋಲುವುದಕ್ಕಿಂತ, ಅನ್ಯಾಯದ ವಿರುದ್ಧ ದ್ವನಿ ಎತ್ತುವುದು ಮುಖ್ಯ. ಅನ್ಯಾಯದ ವಿರುದ್ಧ ಹೋರಾಡಿ ಸತ್ತರೂ ತೊಂದರೆ ಇಲ್ಲ, ಆದರೆ ಅದರ  ವಿರುದ್ಧ ಸೆಟೆದು ನಿಲ್ಲಬೇಕು ಎನ್ನುವುದು ಕೃಷ್ಣನ ಸಂದೇಶ.
ಶ್ರೀ ಕೃಷ್ಣ ಮಹಾಭಾರತದ ಮುಖೇನ ನಮಗೆ ಧರ್ಮದ ಒಂದು ಹೊಸ ಸಿದ್ಧಾಂತವನ್ನು ಕೊಟ್ಟ. ಮಹಾಭಾರತಕ್ಕೆ ಮೊದಲು ಇದ್ದ ಧರ್ಮದ ಕಲ್ಪನೆಯೇ ಬೇರೆ. ಉದಾಹರಣೆಗೆ ಸತ್ಯ ಹೇಳುವುದು: ಇದ್ದದ್ದನ್ನು ಇದ್ದಂತೆ ಹೇಳುವುದು ಸತ್ಯ. ಆದರೆ ಕೃಷ್ಣನ ಪ್ರಕಾರ-ಯಾವ ಸುಳ್ಳು ಹೇಳುವುದರಿಂದ ಸಮಾಜಕ್ಕೆ ಹಿತವಾಗುತ್ತದೋ ಅದು ಸತ್ಯ; ಯಾವ ಸತ್ಯ ಹೇಳುವುದರಿಂದ ಸಮಾಜಕ್ಕೆ ಕೆಡುಕಾಗುತ್ತದೋ ಅದು ಸುಳ್ಳು. ಇನ್ನು ಹಿಂಸೆ: ಒಂದು ಹಿಂಸೆಯಿಂದ ಅನೇಕ ಅಹಿಂಸೆ ಸಾಧ್ಯವಾದರೆ ಅದು ಅಹಿಂಸೆ. ಉದಾಹರಣೆಗೆ ನರಭಕ್ಷಕ ಹುಲಿಯೊಂದು ಪ್ರತಿದಿನ ಊರಿಗೆ ದಾಳಿಯಿಟ್ಟು ಒಬ್ಬೊಬ್ಬರನ್ನೇ ತಿನ್ನುತ್ತಿದ್ದರೆ, ಅದನ್ನು ಕೊಲ್ಲುವುದು ಪ್ರಾಣಿ ಹಿಂಸೆ ಅಲ್ಲ. ಒಂದು ಯುದ್ಧದಿಂದ ತಲತಲಾಂತರದವರೆಗೆ ಅಹಿಂಸೆ ಸ್ಥಾಪನೆ ಸಾಧ್ಯವಾದರೆ ಯುದ್ಧಮಾಡುವುದರಲ್ಲಿ ತಪ್ಪಿಲ್ಲ. ಯಾವುದರಿಂದ ಸಜ್ಜನಿಕೆಯ ರಕ್ಷಣೆ ಆಗುತ್ತದೋ ಅದು ಸತ್ಯ. ಧರ್ಮಕ್ಕೆ ಭಾವ ಮುಖ್ಯ. ಯಾವ ಕಾರಣಕ್ಕಾಗಿ ಹೋರಾಡುತ್ತೇವೆ, ಅದರ ಹಿಂದೆ ಇರುವ ಉದ್ದೇಶ ಏನು ಎನ್ನುವುದು ಮುಖ್ಯ.