Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, December 16, 2011

Bhagavad Gita Kannada Chapter-16 Shloka 1-3


ಅಧ್ಯಾಯ ಹದಿನಾರು
ಹಿಂದಿನ ಅಧ್ಯಾಯದ ಕೊನೆಯಲ್ಲಿ ನಾವು ಅನಘರಾಗಬೇಕು, ಭಾರತರಾಗಬೇಕು-ಎನ್ನುವ ಸಂದೇಶವನ್ನು ಕೊಟ್ಟ ಕೃಷ್ಣ,  ಈ ಅಧ್ಯಾಯದಲ್ಲಿ ಭಗವಂತನ ಸಾಧನೆ ಮಾಡುವವರಲ್ಲಿ ಇರಬೇಕಾದ ಗುಣಗಳ ಬಗ್ಗೆ ವಿವರಿಸುತ್ತಾನೆ. ಇಲ್ಲಿ ಕೃಷ್ಣ 'ದೈವೀಸ್ವಭಾವ' ಮತ್ತು 'ಆಸುರೀಸ್ವಭಾವ' ಹಾಗು  ಅದರ ಗುಣಲಕ್ಷಣಗಳನ್ನು ಸ್ಪಷ್ಟವಾಗಿ ನಮ್ಮ ಮುಂದೆ ತೆರೆದಿಟ್ಟಿದ್ದಾನೆ. ದೈವೀಸ್ವಭಾವ ಎಂದರೆ ದೇವತೆಗಳ ಸ್ವಭಾವ-ಇದು ಜ್ಞಾನ ಸಾಧನ. ಆಸುರೀಸ್ವಭಾವ ಎಂದರೆ ಅಸುರರ ಸ್ವಭಾವ-ಅದು ಜ್ಞಾನ ವಿರೋಧಿ. ದೈವೀ ಸ್ವಭಾವವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜ್ಞಾನ ಸಾಧನೆ ಸಾಧ್ಯ, ಅದನ್ನು ಬಿಟ್ಟು ಆಸುರಸ್ವಭಾವವನ್ನು ಅಳವಡಿಸಿಕೊಂಡರೆ ಅದು ನಮ್ಮನ್ನು ಅಜ್ಞಾನದ ದಾರಿಯಲ್ಲಿ ಕೊಂಡೊಯ್ಯುತ್ತದೆ. ಒಂದು ಬೆಳಕಿನ ದಾರಿಯಾದರೆ ಒಂದು ಕತ್ತಲಿನ ದಾರಿ. ಯಾವ ದಾರಿಯಲ್ಲಿ ನಡೆಯಬೇಕು ಎನ್ನುವ ತೀರ್ಮಾನ ನಮಗೆ ಬಿಟ್ಟಿದ್ದು. ನಮಗೆ ಬೆಳಕಿನ ದಾರಿ ಬೇಕಿದ್ದರೆ, ಆ ದಾರಿಯಲ್ಲಿ ಸಾಗಲು ಬೇಕಾದ ನಡೆಯನ್ನು ಈ ಅಧ್ಯಾಯ ತಿಳಿಸುತ್ತದೆ. ಅದೇ ರೀತಿ ಕತ್ತಲೆಯ ದಾರಿಯಲ್ಲಿ ಸಾಗುವವರ ಬುದ್ಧಿ ಹೇಗಿರುತ್ತದೆ ಎನ್ನುವುದನ್ನೂ ಇಲ್ಲಿ ವಿವರಿಸಲಾಗಿದೆ. ಇಲ್ಲಿ ದೈವೀ ಮತ್ತು ಆಸುರೀ ಸ್ವಭಾವವನ್ನು ಬಿಟ್ಟು ಬೇರೆಯಾಗಿ ಮಾನವ ಸ್ವಭಾವವನ್ನು ವಿವರಿಸಿಲ್ಲ. ಏಕೆಂದರೆ ಮಾನವ ಸ್ವಭಾವ ಈ ಎರಡೂ ಸ್ವಭಾವದ ಮಿಶ್ರಣ. ಈ ಮಿಶ್ರಣದಲ್ಲಿನ ಪ್ರಮಾಣಭೇದದಿಂದ ಮಾನವರಲ್ಲಿ ವೈವಿಧ್ಯತೆ ಬರುತ್ತದೆ. ಒಟ್ಟಿನಲ್ಲಿ ಇರುವುದು ಎರಡೇ ದಾರಿ. ಬೆಳಕಿನ ದಾರಿ ನಮ್ಮನ್ನು ಭಗವಂತನೆಡೆಗೆ ಕೊಂಡೊಯ್ಯುತ್ತದೆ; ಕತ್ತಲಿನ ದಾರಿ ನಾವು ಭಗವಂತನಿಗೆ ಬೆನ್ನುಹಾಕಿ ನಡೆಯುವಂತೆ ಮಾಡುತ್ತದೆ.

ಭಗವಂತನೆಡೆಗೆ ಹೋಗುವವರಲ್ಲಿ ಇರಬೇಕಾದ ಒಳ್ಳೆಯ ಲಕ್ಷಣಗಳ ಬಗ್ಗೆ ಹೇಳುತ್ತ ಈ ಅಧ್ಯಾಯ ಪ್ರಾರಂಭವಾಗುತ್ತದೆ. ಅಧ್ಯಾತ್ಮದಲ್ಲಿ ಖಂಡಿತವಾಗಿ ಬೇಕಾದ, ನಾವು ರೂಢಿಸಿಕೊಳ್ಳಬೇಕಾದ ಪ್ರಮುಖ ಇಪ್ಪತ್ತಾರು ಗುಣಗಳನ್ನು ಕೃಷ್ಣ ಈ ಅಧ್ಯಾಯದ ಮೊದಲ ಮೂರು ಶ್ಲೋಕದಲ್ಲಿ ವಿವರಿಸಿದ್ದಾನೆ. ಬನ್ನಿ, ಭಗವಂತನತ್ತ ನಮ್ಮನ್ನು ಕೊಂಡೊಯ್ಯುವ ಬೆಳಕಿನ ದಾರಿಯ ಗುಣ ಲಕ್ಷಣಗಳನ್ನು ಕೃಷ್ಣನಿಂದ ತಿಳಿದು, ಕತ್ತಲಿನಿಂದ ಬೆಳಕಿನತ್ತ ಹೆಜ್ಜೆ ಹಾಕೋಣ.

ಭಗವಾನುವಾಚ ।
ಅಭಯಂ ಸತ್ತ್ವಸಂಶುದ್ಧಿರ್ಜ್ಞಾನಯೋಗವ್ಯವಸ್ಥಿತಿಃ ।
ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್                      ॥೧॥

ಅಹಿಂಸಾ ಸತ್ಯಮಕ್ರೋಧಸ್ತ್ಯಾಗಃ ಶಾನ್ತಿರಪೈಶುನಮ್ ।
ದಯಾ ಭೂತೇಷ್ವಲೋಲುತ್ವಂಮಾರ್ದವಂ ಹ್ರೀರಚಾಪಲಮ್            ॥೨॥

ತೇಜಃ ಕ್ಷಮಾ ಧೃತಿಃ ಶೌಚಮದ್ರೋಹೋ ನಾತಿಮಾನಿತಾ ।
ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತ                             ॥೩॥

ಭಗವಾನ್ ಉವಾಚ-ಭಗವಂತ ಹೇಳಿದನು:
ಅಭಯಂ ಸತ್ತ್ವಸಂಶುದ್ಧಿಃ ಜ್ಞಾನಯೋಗ ವ್ಯವಸ್ಥಿತಿಃ ।
ದಾನಮ್  ದಮಃ ಚ ಯಜ್ಞ ಚ  ಸ್ವಾಧ್ಯಾಯಃ ತಪಃ  ಆರ್ಜವಮ್  ||
ಅಹಿಂಸಾ ಸತ್ಯಮ್ ಅಕ್ರೋಧಃ ತ್ಯಾಗಃ  ಶಾಂತಿಃ ಅಪೈಶುನಮ್ ।
ದಯಾ ಭೂತೇಷು ಅಲೋಲುತ್ವಂ ಮಾರ್ದವಂ ಹ್ರೀಃ ಅಚಾಪಲಮ್  ||
ತೇಜಃ ಕ್ಷಮಾ ಧೃತಿಃ ಶೌಚಮ್ ಅದ್ರೋಹಃ  ನ ಅತಿಮಾನಿತಾ ।
ಭವಂತಿ  ಸಂಪದಂ ದೈವೀಮ್ ಅಭಿಜಾತಸ್ಯ ಭಾರತ –ಹೇ ಭಾರತ, ದೈವೀಸಂಪತ್ತು  [ಒಳ್ಳೆಯ ನಡತೆ] ಹೊತ್ತು ಹುಟ್ಟಿದವನಲ್ಲಿ ಈ ಗುಣಗಳಿರುತ್ತವೆ: ಅಂಜದಿರುವುದು ಮತ್ತು ಅಂಜಿಸದಿರುವುದು, ತಿಳಿಯಾದ ಮನಸ್ಸು, ಅರಿವಿನ ದಾರಿಯಲ್ಲಿ ನೆಲೆಗೊಳ್ಳುವುದು, ಕೊಡುಗೈತನ, ಇಂದ್ರಿಯಗಳ ಮೇಲೆ ಹಿಡಿತ, ದೇವತೆಗಳ ಆರಾಧನೆ, ವೇದಗಳ ಅಧ್ಯಯನ, ನೋಂಪಿಯ ನಿಷ್ಠೆ, ನೇರತನ, ನೋಯಿಸದಿರುವುದು, ನಿಜ ನುಡಿಯುವುದು, ಸಿಡುಕದಿರುವುದು, ಧಾರಾಳತನ, ಭಗವಂತನಲ್ಲಿ ಬಗೆ ನೆಟ್ಟಿರುವುದು, ಚಾಡಿ ಹೇಳದಿರುವುದು, ಪ್ರಾಣಿಗಳಲ್ಲಿ ಕನಿಕರ, ಅತಿಯಾಸೆ ಇರದಿರುವುದು, ನಮ್ರತೆ, ನಾಚಿಕೆ, ಗಟ್ಟಿತನ, ಕುಗ್ಗದಿರುವುದು, ತಪ್ಪನ್ನು ಮನ್ನಿಸುವ ತಾಳ್ಮೆ, ಕೆಚ್ಚು, ಒಳಹೊರಗಣ ಮಡಿ, ಎರಡೆಣಿಸದಿರುವುದು, ಮತ್ತು ಬೀಗದಿರುವುದು.

ಅಧ್ಯಾತ್ಮದ ಸಾಧನೆಯಲ್ಲಿರಬೇಕಾದ ಇಪ್ಪತ್ತಾರು ಸದ್ಗುಣಗಳನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಈ ಇಪ್ಪತ್ತಾರು ಗುಣಗಳ ಬೆನ್ನುಹತ್ತಿ ಅದರಲ್ಲಿ ನಮ್ಮಲ್ಲಿರುವ ಗುಣವನ್ನು ನಾವು ಗುರುತಿಸಿಕೊಂಡು, ಅದನ್ನು ನಾವು ವೃದ್ಧಿಪಡಿಸಿಕೊಳ್ಳಬೇಕು  ಮತ್ತು ಇಲ್ಲದ ಗುಣವನ್ನು  ಬೆಳಸಿಕೊಳ್ಳಬೇಕು .
(೧) ಅಭಯಂ (ನಿರ್ಭಯತ್ವ/ Fearlessness): ಇದು ಅಧ್ಯಾತ್ಮದ ದಾರಿಯಲ್ಲಿ ಸಾಗುವವರಿಗಿರಬೇಕಾದ ಮೊತ್ತ ಮೊದಲ ಗುಣ.  ಅಧ್ಯಾತ್ಮ ಹೇಡಿಗಳಿಗೆ ಹೇಳಿಸಿದ್ದಲ್ಲ. ಹನುಮಂತನ ಕುರಿತಾದ ಈ ಕೆಳಗಿನ ಶ್ಲೋಕ ಹೇಳುವಂತೆ:
ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ |
ಅಜಾಡ್ಯಂ ವಾಕ್ ಪಟುತ್ವಂ ಚ ಹನುಮತ್ ಸ್ಮರಣಾತ್ ಭವೇತ್ ||
ನಮ್ಮಲ್ಲಿ ನಿರ್ಭಯತ್ವ ಬರಬೇಕಾದರೆ ನಾವು ಪ್ರಾಣದೇವರ ಉಪಾಸನೆ ಮಾಡಬೇಕು. ಧೈರ್ಯವಿಲ್ಲದೆ ವೇದಾಂತ ಓದಿದರೆ ದೃಢನಂಬಿಕೆ(Conviction)ಬರುವುದಿಲ್ಲ. ನಾವು ಉಪಾಸನೆ ಮಾಡುವಾಗ ಯಾರೋ ಬಂದು  ಏನೋ  ಹೇಳುತ್ತಾರೆ. ಆಗ ನಮ್ಮ ಮನಸ್ಸು ದೃಢವಾಗಿ ದೇವರಲ್ಲಿ ನಿಲ್ಲುವುದಿಲ್ಲ. ಯಾರು ಏನೇ ಹೇಳಲಿ, ನಾನು ಹಿಡಿದ ದಾರಿಯನ್ನು ಬಿಡುವುದಿಲ್ಲ, ದೇವರು ನನ್ನನ್ನು ರಕ್ಷಿಸುತ್ತಾನೆ ಎನ್ನುವ ದೃಢ ನಂಬಿಕೆ ಇದ್ದಾಗ ಮಾತ್ರ ನಾವು ಯಶಸ್ಸನ್ನು ಕಾಣಲು ಸಾಧ್ಯ.
ಇಂದಿನ ದಿನಗಳಲ್ಲಿ “ಹೀಗೆ ಮಾಡಿದರೆ ಅನರ್ಥ, ಹಾಗೆ ಮಾಡಿದರೆ ಅನರ್ಥ” ಎಂದು ಹೆದರಿಸುವ ಜನರೇ ಹೆಚ್ಚು. ಹೀಗೆ ಹೇಳುವ ಮಂದಿಗೆ ಶಾಸ್ತ್ರದ ಗಂಧ-ಗಾಳಿಯೂ ಗೊತ್ತಿರುವುದಿಲ್ಲ. ಇವರು ಹಿರಣ್ಯಕಶಿಪುವಿನ ಆವೇಶವುಳ್ಳ ಜನ. ಉದಾಹರಣೆಗೆ ಕೆಲವರು ‘ವಿಷ್ಣುಸಹಸ್ರನಾಮವನ್ನು ಹೆಂಗಸರು ಹೇಳಬಾರದು’ ಎಂದು ಹೆದರಿಸುತ್ತಾರೆ. ಆದರೆ ವಿಪರ್ಯಾಸವೆಂದರೆ ದೇವರ ನಾಮವಿರುವುದೇ ನಮ್ಮ ಅಭಯಕ್ಕಾಗಿ. ಇದನ್ನು ತಿಳಿಯದೆ ಭಯಬಿದ್ದು ದೂರ ಸರಿದರೆ ಅದರಿಂದ ನಮಗೇ ನಷ್ಟ. ದೇವರು ಎಂದೂ ಭಯಾನಕ ಅಲ್ಲ. ಆತ ಭಯಾನಕನಾಗುವುದು ಕೇವಲ ಹಿರಣ್ಯಕಶಿಪುವಿನ ಆವೇಶವುಳ್ಳವರಿಗೆ ಹೊರತು ಪ್ರಹ್ಲಾದನ ಆವೇಶವುಳ್ಳವರಿಗಲ್ಲ. ನಾವು ಪ್ರಹ್ಲಾದನಂತಾಗಿ, ನಮ್ಮನ್ನು ಹೆದರಿಸುವ ಹಿರಣ್ಯಕಶಿಪುಗಳಿಗೆ  ಭಯಬೀಳದೆ, ಅಭಯಪ್ರದ ಭಗವಂತನನ್ನು ಸ್ತುತಿಸಬೇಕು.
ಅಧ್ಯಾತ್ಮ ಸಾಧಕ ಎಂದೂ ಹೇಡಿಯಾಗಿರುವುದಿಲ್ಲ. ಏಕೆಂದರೆ ಅವನಿಗೆ ಒಂದು ವಿಷಯ ಖಚಿತವಾಗಿ ತಿಳಿದಿರುತ್ತದೆ. “ನಾನು ಹೆದರುವುದಕ್ಕೆ ಅರ್ಥವಿಲ್ಲ, ಏಕೆಂದರೆ ಭಗವಂತ ರಕ್ಷಿಸುವ ತನಕ ನನ್ನನ್ನು ಇಡೀ ಪ್ರಪಂಚ ಏನೂ ಮಾಡಲಾರದು; ಭಗವಂತ ಕೈಬಿಟ್ಟಮೇಲೆ ಯಾರೂ ನನ್ನನ್ನು ರಕ್ಷಿಸಲಾರರು”. ಈ ರೀತಿ  ನಿಶ್ಚಿತಾಭಿಪ್ರಾಯ ನಮ್ಮಲ್ಲಿ ಬೆಳೆಯಬೇಕು.
“ರಕ್ಷತೀತ್ಯೇವ ವಿಶ್ವಾಸಃ”-ಭಗವಂತ ತನ್ನ ಭಕ್ತರನ್ನು ಎಂದೂ ಬಿಟ್ಟು ಕೊಡುವುದಿಲ್ಲ. ಆದ್ದರಿಂದ ‘ಅಭಯ’ ನಮ್ಮಲ್ಲಿರಬೇಕಾದ ಮೊದಲ ಅರ್ಹತೆ. ಈ ವಿಶ್ವಾಸ ನಮ್ಮಲ್ಲಿ ಎಷ್ಟು ದೃಢವಾಗುವುದೋ ಅಷ್ಟು ರಕ್ಷಣೆ ಭಗವಂತನಿಂದ ಭಕ್ತನಿಗೆ ದೊರೆಯುತ್ತದೆ.
(೨) ಸತ್ತ್ವಸಂಶುದ್ಧಿ(ಶುದ್ಧವಾದ ಮನಸ್ಸು/Pure Mind) : ನಮ್ಮ ಮನಃಶುದ್ಧಿ ಅಧ್ಯಾತ್ಮ ಸಾಧನೆಯಲ್ಲಿ ಬಹಳ ಮುಖ್ಯ. ಸಾಮಾನ್ಯವಾಗಿ ನಮ್ಮ ಮನಸ್ಸು ಅನುವಂಶೀಯ ಕಾರಣದಿಂದ, ಅಥವಾ ಪರಿಸರದ ಪ್ರಭಾವದಿಂದ ಶುದ್ಧವಾಗಿರುವುದಿಲ್ಲ.ಹದಿಮೂರನೆ ಶತಮಾನದಲ್ಲೇ ಆಚಾರ್ಯರು “ದೌರ್ಲಭ್ಯಾತ್ ಶುದ್ಧ ಬುದ್ಧೀನಾಂ” ಎಂದಿರುವುದನ್ನು ನಾವು ಇಲ್ಲಿ ಗಮನಿಸಬೇಕು. ಶುದ್ಧ ಮನಸ್ಸಿರುವವರು ಸಮಾಜದಲ್ಲಿ ತುಂಬಾ ದುರ್ಲಭ. 
ಇಲ್ಲಿ ಕೃಷ್ಣ ಕೇವಲ ಸತ್ತ್ವ ಶುದ್ಧಿ ಎಂದು ಹೇಳದೆ, ‘ಸತ್ತ್ವ ಸಂ-ಶುದ್ಧಿ’ ಎಂದು ಹೇಳಿದ್ದಾನೆ. ನಮ್ಮ ಮನಸ್ಸು ಒಮ್ಮೊಮ್ಮೆ ಶುದ್ಧವಾಗಿರುತ್ತದೆ, ನಿದ್ದೆಯಲ್ಲಿ ಎಲ್ಲರ ಮನಸ್ಸೂ ಶುದ್ಧ. ಆದರೆ ಇಲ್ಲಿ ಕೃಷ್ಣ ಹೇಳುವುದು ಸದಾ ಶುದ್ಧವಾಗಿರುವ ಎಚ್ಚರದ ಮನಸ್ಸು. ಇದನ್ನು ಭಾಗವತದಲ್ಲಿ “ಸತ್ತ್ವಂ ವಿಶುದ್ಧಂ ವಸುದೇವಶಬ್ದಿತಂ”..(೪-೩೦-೨೩)ಎಂದಿದ್ದಾರೆ. ಅಂದರೆ “ಸದಾ ಶುದ್ಧವಾಗಿರುವ ಮನಸ್ಸಿಗೆ ವಾಸುದೇವ ಗೋಚರನಾಗುತ್ತಾನೆ” ಎಂದರ್ಥ. ಆದ್ದರಿಂದ ಅಧ್ಯಾತ್ಮ ಸಾಧನೆಗೆ ಯಾವುದೇ ಕೊಳೆ ಇಲ್ಲದ, ಯಾವುದೇ ಪೂರ್ವಾಗ್ರಹ ಇಲ್ಲದ ಮನಸ್ಸು ಬಹಳ ಮುಖ್ಯ.
(೩) ಜ್ಞಾನಯೋಗ ವ್ಯವಸ್ಥಿತಿಃ (ನಿರಂತರ ಜ್ಞಾನಯೋಗದಲ್ಲಿ ಮನಸ್ಸನ್ನು ನೆಲೆಗೊಳಿಸುವುದು): ಉಪಾಸನಯೋಗ ಬಹಳ ಪ್ರಮುಖವಾದ ಯೋಗ. ಭಕ್ತಿ, ಜ್ಞಾನ ಮತ್ತು ಕರ್ಮಯೋಗ ಇದರ ಮೂರು ಮುಖಗಳು. ಇವು ಒಂದನ್ನೊಂದು ಬಿಟ್ಟು ಇರಲಾರವು. ಜ್ಞಾನಯೋಗ ಅಂದರೆ ಭಗವಂತನ ಹಿರಿಮೆಯನ್ನು ತಿಳಿದು, ಅವನ ಪೂಜಾರೂಪವಾಗಿ ಕರ್ಮವನ್ನು ಮಾಡಿ, ಅವನಲ್ಲಿ ಭಕ್ತಿ ಮಾಡುವುದು. ‘ವ್ಯವಸ್ಥಿತಿಃ’ ಅಂದರೆ ಅಚಲವಾದ ಸ್ಥಿತಿ. ಭಗವಂತನ ವಿಷಯವಾಗಿ ಅಚಲವಾದ ಮನಸ್ಸನ್ನಿಟ್ಟು, ನಿರಂತರ ಭಗವಂತನ ಚಿಂತನೆಯಲ್ಲಿ ಮನಸ್ಸನ್ನು ನೆಲೆಗೊಳಿಸುವುದು. ಇದರಿಂದ ಮನಸ್ಸು ಸ್ವಚ್ಛವಾಗುತ್ತದೆ.
(೪) ದಾನಂ(ನಮ್ಮಲ್ಲಿರುವುದನ್ನು ಇನ್ನೊಬ್ಬರಿಗೆ ಕೊಡುವುದು): ನಮ್ಮಲ್ಲಿ ಇರುವ ವಸ್ತು ಇನ್ನೊಬ್ಬರಲ್ಲಿ ಇಲ್ಲದೇ ಇದ್ದಾಗ, ಅವರಿಗೆ ಅದು ಬಹಳ ಅಗತ್ಯವಿದ್ದಾಗ,  ಆ ವಸ್ತು ನಮಗೆ ಮುಂದೆ ಅಗತ್ಯಬೀಳಬಹುದಾದರೂ ಕೂಡ, ಅದರ ಬಗ್ಗೆ ಯೋಚಿಸದೆ, ಅರ್ಪಣಾ ಭಾವದಿಂದ ಕೊಡುವುದು ದಾನ. ಇದನ್ನು ಬಿಟ್ಟು ಮನೆಯಲ್ಲಿ ಅಗತ್ಯವಿಲ್ಲದ ವಸ್ತುವನ್ನು ಸಾಗಹಾಕುವುದಕ್ಕೋಸ್ಕರ ಕೊಡುವುದು, ಉತ್ತಮ ದರ್ಜೆಯನ್ನು ಒಳಗಿಟ್ಟು, ಕೀಳು ದರ್ಜೆಯನ್ನು ಕೊಡುವುದು-ದಾನವಲ್ಲ. ಕೊಡುವಾಗ ಮನಸ್ಸಿನಲ್ಲಿ ನಮಗೆ ಕೊಡುವ ವಸ್ತುವಿನ ಮೇಲೆ ಯಾವ ಮಮಕಾರವೂ ಇರಕೂಡದು; 'ಕೊಡುತ್ತಿದ್ದೇನೆ', ಕೊಟ್ಟೆ' ಎನ್ನುವ ಅಹಂಕಾರ ಇರಕೂಡದು. ಪೂರ್ಣ ಅರ್ಪಣಾಭಾವದಿಂದ ಕೊಡಬೇಕು. ಕೊಡುವ ವಸ್ತು ಜ್ಞಾನವಾಗಿರಬಹುದು, ಧಾನ್ಯವಾಗಿರಬಹುದು, ಅಭಯವಾಗಿರಬಹುದು (ಇನ್ನೊಬ್ಬರಿಗೆ ಧೈರ್ಯ  ಕೊಡುವುದು), ಹೀಗೆ ಯಾವುದೇ ಕಾರ್ಯವಿರಬಹುದು. ಅಲ್ಲಿ ಕಾರ್ಯಕ್ಕಿಂತ ಮುಖ್ಯವಾದುದು ಆ ಕಾರ್ಯದ ಹಿಂದಿನ ನಮ್ಮ ಭಾವನೆ (ಇನ್ನೂ ಹೆಚ್ಚಿನ ವಿವರಣೆಯನ್ನು  ಅ-೧೦, ಶ್ಲೋ-೦೫ರಲ್ಲಿ ವಿವರಿಸಲಾಗಿದೆ) .
(೫) ದಮ (೬) ಯಜ್ಞ : ಇಲ್ಲಿ ಈ ಎರಡು ಕ್ರಿಯೆಯನ್ನು ಕೃಷ್ಣ ‘ಚ’-ಕಾರ ಬಳಸಿ(ದಮಶ್ಚ, ಯಜ್ಞಶ್ಚ) ಹೇಳಿದ. ಇದು ಇತರ ಎಲ್ಲ ನಡತೆಗಳೊಂದಿಗೆ ಬಹಳ ಮುಖ್ಯ ನಡತೆ ಎಂದು ತೋರಿಸಲು ಇಲ್ಲಿ ಚ-ಕಾರ ಬಳಸಲಾಗಿದೆ. ‘ದಮ’ ಅಂದರೆ ಕೆಟ್ಟದ್ದನ್ನು ಮಾಡುವುದನ್ನು ಬಿಡುವುದು; ನಮ್ಮ ಇಂದ್ರಿಯಗಳು ಕೆಟ್ಟದ್ದನ್ನು ಮಾಡದಂತೆ ನಿಯಂತ್ರಿಸುವುದು. ಯಜ್ಞ ಅಂದರೆ ಮಾಡುವ ಎಲ್ಲ ಕೆಲಸವನ್ನು ಭಗವದರ್ಪಣೆಯಾಗಿ ಮಾಡುವುದು. ನಾವು ಈ ಎರಡು ನಡತೆಯನ್ನು ನಿರಂತರ ನಮ್ಮ ಜೀವನದಲ್ಲಿ ಪಾಲಿಸಬೇಕು. ಈ ಎರಡು ನಡತೆ ಇಲ್ಲದೆ, ಇತರ ನಡತೆಯನ್ನು ಸಾಧಿಸಲು ಸಾಧ್ಯವಿಲ್ಲ. 
(೭) ಸ್ವಾಧ್ಯಾಯಃ – ಮೂರು ತರದಲ್ಲಿ ಸ್ವಾಧ್ಯಾಯವಿದೆ. ಸ್ವತಂತ್ರನಾದ ಭಗವಂತನ ಬಗೆಗೆ ಇರತಕ್ಕಂತಹ ಸಮಗ್ರ ವೇದಗಳ ಅಧ್ಯಯನ-ಸ್ವಾಧ್ಯಾಯ; ಇದು ಸಾಧ್ಯವಾಗದೇ ಇದ್ದರೆ ಅವರವರ ಶಾಖೆಯ(ಸ್ವಂ) ವೇದಾಧ್ಯಯನ.  ಇದನ್ನು ಕೂಡ ಸ್ವಾಧ್ಯಾಯ ಎನ್ನುತ್ತಾರೆ. ಇನ್ನು ಮೂರನೆಯದು ನಾವು ಗುರುಗಳಿಂದ ಕೇಳಿದ ಅಧ್ಯಾತ್ಮ ವಿಚಾರವನ್ನು ಮನನ ಮಾಡಿ, ಸ್ವಪ್ರವಚನ ಮಾಡಿಕೊಂಡು, ನಮ್ಮ ಆತ್ಮಕ್ಕೆ ಆ ವಿಚಾರ ತಿಳಿದ ಮೇಲೆ ಇನ್ನೊಬ್ಬರಿಗೆ ಹೇಳುವುದು. ಆದರೆ ಇಂದು ಈ ಸ್ವಾಧ್ಯಾಯ ಕಣ್ಮರೆಯಾಗುತ್ತಿದೆ. ಪತಂಜಲಿ ಹೇಳುತ್ತಾನೆ: “ ವೇದಂ ಅಧಿತ್ಯ ತ್ವರಿತ ವಕ್ತಾರೋ ಭವಂತಿ” ಎಂದು. ಇಂದು ವಿಧ್ಯಾರ್ಥಿ-ನಾಳೆ ಅಧ್ಯಾಪಕ(ವಕ್ತಾರಃ). ನಡುವೆ ಸ್ವಾಧ್ಯಾಯ ಎನ್ನುವ ವಿಚಾರ ಇಂದು ಇಲ್ಲವಾಗಿದೆ. “ತ್ವರಿತ ಅಧಿತ್ಯ”, ಎಲ್ಲವೂ ತ್ವರಿತ!
(೮) ತಪಃ : ಕೃಷ್ಣ ಇಲ್ಲಿ ಹೇಳುವ ತಪಃ ಹಿಂದೆ ಹೇಳಿದ ತಪಸ್ಸಲ್ಲ. ನಮ್ಮ ಮನಸ್ಸು ದಾರಿ ತಪ್ಪಿ ಹೋಗದಂತೆ ನಿಯಂತ್ರಣ ಮಾಡುವುದು ‘ದಮ’; ಅದರಿಂದ ಶಾಸ್ತ್ರದ ನಿರಂತರ ಅಧ್ಯಾಯನ ‘ಸ್ವಾಧ್ಯಾಯ’. ಇವೆರಡರಲ್ಲಿ ನಮಗೆ ತೊಂದರೆ ಕೊಡುವ ಎರಡು ಅಂಶಗಳಿವೆ. ಅವುಗಳೆಂದರೆ ನಾಲಿಗೆ ಚಪಲ ಮತ್ತು ಲೈಂಗಿಕ ಆಸಕ್ತಿ. ಇವು ಅಧ್ಯಯನದ ಮೂಲ ಶತ್ರುಗಳು. ಇದನ್ನು ನಿಯಂತ್ರಿಸುವುದು ತಪಃ. ಇದಕ್ಕಾಗಿ ಹಿಂದೆ ಪುಣ್ಯಕ್ಷೇತ್ರಕ್ಕೆ ಹೋದಾಗ ತಮ್ಮ ಯಾವುದೋ ಒಂದು ತಿನ್ನುವ ಚಪಲವನ್ನು ಅಲ್ಲಿ ಬಿಟ್ಟುಬರುತ್ತಿದ್ದರು. ಯಾವುದಾದರೊಂದು ನೆಪದಿಂದ ತಮ್ಮ ಚಪಲವನ್ನು ಕಳಚಿಕೊಳ್ಳುವುದು ಇದರ ಹಿಂದಿನ ಕಾರಣ.
(೯) ಆರ್ಜವಮ್ (ಪ್ರಾಮಾಣಿಕತೆ/Straightforwardness): ನೇರ ನಡೆ ನುಡಿ. ಮಾತನಾಡುವುದೊಂದು- ಮಾಡುವುದು ಇನ್ನೊಂದು ಮಾಡದೆ, ಪ್ರಾಮಾಣಿಕತೆಯಿಂದಿರುವುದು.
(೧೦) ಅಹಿಂಸಾ : ಈ ಬಗ್ಗೆ ಅಧ್ಯಾಯ ಹತ್ತರಲ್ಲಿ(ಶ್ಲೋಕ-೦೫) ಸ್ವಲ್ಪ ಮಟ್ಟಿಗೆ ವಿಶ್ಲೇಷಿಸಿದ್ದೇವೆ. ದ್ವೇಷದಿಂದ, ಅಸಹನೆಯಿಂದ, ಅಸೂಯೆಯಿಂದ  ಇನ್ನೊಬ್ಬರಿಗೆ ನೋವನ್ನುಂಟುಮಾಡುವುದು ಹಿಂಸೆ. ಆಹಾರಕ್ಕಾಗಿ ಇನ್ನೊಂದು ಜೀವಯನ್ನು ಅನಿವಾರ್ಯವಾಗಿ ಸಾಯಿಸುವುದು ಹಿಂಸೆ ಅಲ್ಲ(ಉದಾ: ವನಸ್ಪತಿಗಳ ಸೇವನೆ, ಕ್ಷತ್ರಿಯರ ಮಾಂಸಭಕ್ಷಣೆ ಇತ್ಯಾದಿ); ನಡೆಯುವಾಗ, ಉಸಿರಾಡುವಾಗ, ತಿಳಿಯದೆ ಸೂಕ್ಷ್ಮ ಜೀವಿಗಳು ಸತ್ತರೆ ಅದು ಹಿಂಸೆ ಅಲ್ಲ; ದೇಶವನ್ನು ಕಾಯುವ ಸೈನಿಕ ತನ್ನ ಧರ್ಮ ಪಾಲನೆಗಾಗಿ ಶತ್ರು ಸೈನಿಕನನ್ನು ಕೊಂದರೆ ಅದು ಹಿಂಸೆ ಅಲ್ಲ; ಮುಂದೆ ನಡೆಯುವ ಮಹಾ ಹಿಂಸೆಯನ್ನು ತಡೆಯಲು ಅನಿವಾರ್ಯವಾಗಿ ನಡೆಯುವ ಯುದ್ಧ ಹಿಂಸೆ ಅಲ್ಲ(ಉದಾ: ಮಹಾಭಾರತ ಯುದ್ಧ); ಸಾವಿರಾರು ಜನರನ್ನು ರಕ್ಷಿಸುವುದಕ್ಕೋಸ್ಕರ ಒಬ್ಬನನ್ನು ಕೊಲ್ಲುವುದು ಹಿಂಸೆ ಅಲ್ಲ (ಉದಾ: ದಿನಕ್ಕೆ ಹತ್ತು ಸಾವಿರ ಸೈನಿಕರನ್ನು ಕೊಲ್ಲುವ ಪಣತೊಟ್ಟು ಹಗಲೂ ರಾತ್ರಿ ಹೋರಾಡುತ್ತಿದ್ದ ದ್ರೋಣಾಚಾರ್ಯರನ್ನು ಕೃಷ್ಣ ಕೊಲ್ಲಿಸಿರುವುದು); ವೈದ್ಯರು ರೋಗಿಯನ್ನು ಬದುಕಿಸುವುದಕ್ಕೋಸ್ಕರ ಮಾಡುವ ಕ್ರಿಯೆ ಹಿಂಸೆ ಅಲ್ಲ;   ಹೀಗೆ ಒಟ್ಟಿನಲ್ಲಿ ದ್ವೇಷ, ಅಸಹನೆ, ಅಸೂಯೆ, ಸ್ವಾರ್ಥವಿಲ್ಲದೆ ನಡೆಯುವ ಅನಿವಾರ್ಯವಾದ ಹಿಂಸೆ-ಅಹಿಂಸೆ ಎನಿಸುತ್ತದೆ.
ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು ಅಹಿಂಸೆ. ನಾವು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿದರೆ ಅದನ್ನು ಮರಳಿ ವಾಸಿ ಮಾಡುವ ಯಾವ ಔಷಧವೂ ಇಲ್ಲ. ಆದ್ದರಿಂದ ಎಂದೂ ಇನ್ನೊಬ್ಬರನ್ನು ಮುಖಭಂಗ(Insult) ಮಾಡಬೇಡ. ಉದಾಹರಣೆಗೆ: ಒಬ್ಬರನ್ನು ಚುಚ್ಚು ಮಾತಿನಿಂದ ಹಂಗಿಸುವುದು, ಮಾನಸಿಕವಾಗಿ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಶಾಪ ಹಾಕುವುದು. ನಾವು ನಮ್ಮ ಮಾತಿನಿಂದ, ಕೃತಿಯಿಂದ ಮತ್ತು ಮನಸ್ಸಿನಿಂದ ಇನ್ನೊಬ್ಬರಿಗೆ ಹಿಂಸೆಯಾಗದಂತೆ ನಡೆದುಕೊಳ್ಳಬೇಕು.
(೧೧) ಸತ್ಯಮ್: ಇದು ಪ್ರಾಮಾಣಿಕತೆಯ ಇನ್ನೊಂದು ಮುಖ. ಇಲ್ಲಿ ಸತ್ಯ ಅಂದರೆ ಇದ್ದದ್ದನ್ನು ಇದ್ದಂತೆ ಹೇಳುವುದಲ್ಲ. ಸಮಾಜಲ್ಲಿ ಸಾದು ಸಜ್ಜನರಿಗೆ ಹಿತವಾಗುವಂತಹ ಮಾತು ಸತ್ಯ. ಕೆಲವೊಮ್ಮೆ ಲೋಕ ಹಿತಕ್ಕೋಸ್ಕರ ನಾವು ಹೇಳುವ ಸುಳ್ಳೂ ಕೂಡ ಸತ್ಯವಾಗುತ್ತದೆ; ಲೋಕಕ್ಕೆ ಅನ್ಯಾಯವಾಗುವಂತಹ ಸತ್ಯವೂ ಸುಳ್ಳಾಗುತ್ತದೆ. ಮಹಾಭಾರತದಲ್ಲಿ ಕೃಷ್ಣ ಈ ಸಂದೇಶವನ್ನು ಕ್ರಾಂತಿಕಾರಕ ರೂಪದಲ್ಲಿ ಮಾಡಿ ತೋರಿಸಿದ್ದಾನೆ. ಈ ವಿಷಯ ಮಹಾಭಾರತದಲ್ಲಿ ವಿಶೇಷವಾಗಿ ಪ್ರಸ್ತಾಪವಾಗಿದೆ. ಅಲ್ಲಿ ಹೇಳುವಂತೆ:
ನ ನರ್ಮ ಯುಕ್ತಂ ವಚನಂ ಹಿನಸ್ತಿ ನ ಸ್ತ್ರೀಷು ರಾಜನ್ ನ ವಿವಾಹ ಕಾಲೇ     
ಪ್ರಾಣಾತ್ಯಯೈ ಸರ್ವಧನಾಪಹಾರೇ ಪಂಚಾನೃತಾನ್ಯ ಆಹುರ್ ಅಪಾತ್ ಕಾನಿ ||೧-೭೭-೧೬||
ಒಬ್ಬರ ಮದುವೆಯನ್ನು ಹೊಟ್ಟೆಕಿಚ್ಚಿನಿಂದ ಸುಳ್ಳು ಹೇಳಿ ತಪ್ಪಿಸುವುದು, ನಿಶ್ಚಿತಾರ್ಥವಾಗಿರುವ ಮದುವೆಯನ್ನು ತಪ್ಪಿಸುವುದು,  ಇತ್ಯಾದಿಯನ್ನು ಶಾಸ್ತ್ರ ಖಂಡಿಸುತ್ತದೆ. ಪ್ರಾಣಾಪಾಯದ ಕಾಲದಲ್ಲಿ ಜೀವ ರಕ್ಷಣೆಗಾಗಿ ಹೇಳುವ ಸುಳ್ಳು  ಸುಳ್ಳಲ್ಲ.
 (೧೨) ಅಕ್ರೋಧಃ ಯಾವ ಕಾಲಕ್ಕೂ ಇನ್ನೊಬ್ಬರ ಮೇಲೆ ಕೋಪಿಸಿಕೊಳ್ಳದೆ ಇರುವುದು. ಅಪ್ರೀಯ ಘಟನೆ ನಡೆದಾಗ ಕೋಪ ಬರಬಹುದು. ಆದರೆ ನಿಮ್ಮನ್ನು ಕೋಪದ ಕೈಗೆ ಎಂದೂ ಕೊಡಬೇಡಿ. ಕೋಪಬಂದಾಗ-ಕೋಪ ಇಳಿಯುವ ತನಕ ಮೌನವನ್ನಾಚರಿಸಿದರೆ ಅದರಿಂದಾಗುವ ಅನಾಹುತ ತಪ್ಪುತ್ತದೆ. ಕಾಮ-ಕ್ರೋದದ ಬಗ್ಗೆ ಕೃಷ್ಣ ಗೀತೆಯಲ್ಲಿ ಅನೇಕ ಬಾರಿ ನಮ್ಮನ್ನು ಎಚ್ಚರಿಸುತ್ತಾನೆ. ನೆಮ್ಮದಿಯ ಜೀವನಕ್ಕೆ ಇವು ಮಾರಕ. ಹೇಗೆ ಶಾಂತತೆಯನ್ನು ನಾವು ಕಲಿತುಕೊಳ್ಳಬೇಕು ಎನ್ನುವುದಕ್ಕೆ ಶ್ರೀರಾಮಚಂದ್ರನ ಜೀವನವೇ ಉತ್ತಮ ಉದಾಹರಣೆ. ರಾಮಾಯಣದಲ್ಲಿ ವಾಲ್ಮೀಕಿ ಹೇಳುತ್ತಾರೆ: “ಉಚ್ಚಮಾನೋSಪಿ ಪರುಷಮ್ ನೋತ್ತರಂ ಪ್ರತಿಪದ್ಯತೆ” ಎಂದು. ||ಅಯೋಧ್ಯಾ-೧.೧೫|| ರಾಮನಲ್ಲಿ ಯಾರಾದರೂ ಜಗಳಕ್ಕೆ ನಿಂತರೆ ಆತ ಎಂದೂ ಸಿಟ್ಟಿಗೇಳುತ್ತಿರಲಿಲ್ಲವಂತೆ.
(೧೩) ತ್ಯಾಗಃ: ಮೇಲ್ನೋಟಕ್ಕೆ ದಾನ ಮತ್ತು ತ್ಯಾಗ ಒಂದೇ ಎನ್ನುವಂತೆ ಕಾಣಿಸುತ್ತದೆ. ಆದರೆ ತ್ಯಾಗ ಎಂದರೆ ನಮ್ಮಲ್ಲಿರುವ ವಸ್ತುವೂ ಕೂಡ ನನ್ನದಲ್ಲ-ಭಗವಂತನದು ಎನ್ನುವ ಭಾವನೆಯಿಂದ ಬದುಕುವುದು. ತ್ಯಾಗದಲ್ಲಿ ಅನೇಕ ವಿಧ. ಅಭಿಮಾನ ತ್ಯಾಗ, ಫಲ ತ್ಯಾಗ, ಅಹಂಕಾರ-ಮಮಕಾರ ತ್ಯಾಗ ಇತ್ಯಾದಿ. ಪ್ರೀತಿ ಇರಲಿ, ಆದರೆ ‘ನನ್ನದು’ ಎನ್ನುವ ಭಾವನೆಯಿಂದ ದೂರ ನಿಲ್ಲು. ಬಂದಾಗ ಸಂತೋಷದಿಂದ ಸ್ವೀಕರಿಸು, ಹೋದಾಗ ನಿರ್ಲಿಪ್ತನಾಗಿ ಇದ್ದು ಬಿಡು. ಈ ಜೀವನ ಪಯಣದಲ್ಲಿ ಯಾವುದೂ ಶಾಶ್ವತವಲ್ಲ. ಭಗವಂತನೊಬ್ಬನೆ ನಿತ್ಯ ಎಂದು ತಿಳಿದು ಆತನನ್ನು ಗುರಿಯಿಟ್ಟು ಪಯಣಿಸು.     
(೧೪) ಶಾಂತಿಃ : ತ್ಯಾಗದಿಂದ ಮೊತ್ತ ಮೊದಲು ಸಿಗುವುದು ನೆಮ್ಮದಿ. ಸ್ವಲ್ಪವೂ ಉದ್ವೇಗಕ್ಕೆ ಒಳಗಾಗದೆ, ಪ್ರತಿಯೊಂದನ್ನೂ  ಸ್ವೀಕರಿಸಿದಾಗ ಎಲ್ಲವೂ ಶಾಂತ. ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿದಾಗ ಮಾತ್ರ ಅಂತಹ ಶಾಂತಿ ಬರಲು ಸಾಧ್ಯ. ಕ್ಷುದ್ರವಾದ ಲೌಕಿಕ ವಿಚಾರದಲ್ಲಿ ತಲೆ ಹಾಕಿಕೊಂಡು- ಪೈಪೋಟಿ, ಸ್ಪರ್ಧೆ, ಜಗಳ, ವಿರಸದಿಂದ ಜೀವನ ಸಾಗಿಸುವುದಕ್ಕಿಂತ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಿ ಶಾಂತಿಯನ್ನು ಸಾಧಿಸು. 
(೧೫) ಅಪೈಶುನಮ್: ‘ಪೈಶುನಮ್’ ಅಂದರೆ ಚಾಡಿ ಹೇಳಿ ವಿರಸ ಹುಟ್ಟಿಸುವುದು. ಇದು ಅತ್ಯಂತ ನಿಕೃಷ್ಟ ಗುಣ. ನಮ್ಮ ಸ್ವಾರ್ಥಕ್ಕಾಗಿ ದೊಡ್ದವರಲ್ಲಿ ಚಾಡಿಹೇಳಿ, ಸಮಾಜ ಸ್ವಾಸ್ಥ್ಯವನ್ನು ಕೆಡಿಸುವುದು ಮಹಾ ಪಾಪ. ಆದ್ದರಿಂದ ನೀನು ಅಪೈಶುನನಾಗು ಎನ್ನುತ್ತಾನೆ ಕೃಷ್ಣ. ಚಾಡಿ ಹೇಳಬೇಡ ಮತ್ತು ಚಾಡಿಗೆ ಕಿವಿಗೊಡಬೇಡ.    
(೧೬) ದಯಾ ಭೂತೇಷು: ಚೈತನ್ಯವಿರುವ ಪ್ರತಿಯೊಂದು ಜೀವಿಗಳ ಮೇಲೆ ಅನುಕಂಪವಿರಲಿ. ಅದು ವನಸ್ಪತಿ ಇರಲಿ, ಪ್ರಾಣಿ ಇರಲಿ, ಪಕ್ಷಿ ಇರಲಿ, ಮಾನುಷ್ಯನಿರಲಿ. ಎಲ್ಲರ ಮೇಲೂ ದಯೆ ಇರಲಿ. ಇದನ್ನು ಹಿಂದಿನ ಕಾಲದಲ್ಲಿ ವಿಶೇಷ ರೀತಿಯಲ್ಲಿ ಅನುಸರಿಸಿಕೊಂಡು ಬರುತ್ತಿದ್ದರು. ಬೆಳೆಗ್ಗೆ ಎದ್ದು ತುಳಸಿಗೆ ನೀರು ಹಾಕುವುದು, ಗೋಶಾಲೆಗೆ ಹೋಗಿ    ಹಸುಗಳಿಗೆ ಆಹಾರ ನೀಡುವುದು, ಮನೆಯಲ್ಲಿರುವ ನಾಯಿಗೆ ನಾವು ಊಟ ಮಾಡುವ  ಮೊದಲು ಆಹಾರ ನೀಡುವುದು, ಮನೆ ಸುತ್ತಮುತ್ತಲಿರುವ ಪಕ್ಷಿಗಳಿಗೆ ಆಹಾರ ಕೊಡುವುದು, ಹಸಿದು ಬಂದ ವ್ಯಕ್ತಿಯ ಹೊಟ್ಟೆಯಲ್ಲಿರುವ ವೈಶ್ವಾನರನನ್ನು ತಣಿಸುವುದು ಇತ್ಯಾದಿ. ಇದಲ್ಲದೆ ಇನ್ನೊಬ್ಬರು ತೊಂದರೆಯಲ್ಲಿದ್ದಾಗ, ಆತ ಮಿತ್ರ ಶತ್ರು ಎನ್ನುವ ಭೇದವೆಣಿಸದೆ ಅವರ ಮೇಲೆ ದಯೆ ತೋರುವುದು ಬಹಳ ದೊಡ್ಡ ಗುಣ. ಈ ಗುಣವನ್ನು ಮುಖ್ಯವಾಗಿ ಮಹಾಭಾರತದಲ್ಲಿ ಧರ್ಮರಾಯನಲ್ಲಿ ಕಾಣುತ್ತೇವೆ.  
(೧೭) ಅಲೋಲುತ್ವಂ/ ಅಲೋಲತ್ವಂ: ಒಂದನ್ನು ಅತಿಯಾಗಿ ಹಚ್ಚಿಕೊಳ್ಳುವುದು ಲೋಲುತ್ವ. ಯಾವುದರ ಮೇಲೂ ಅತಿಯಾದ ಮೋಹ ಬೇಡ. ಅಂಟಿಸಿಕೊಳ್ಳುವುದು ದುಃಖಕ್ಕೆ ಕಾರಣ.
(೧೮) ಮಾರ್ದವಂ(Softness):ಸೌಜನ್ಯ, ಮೃದು ಸ್ವಭಾವವನ್ನು ಇಲ್ಲಿ ಮಾರ್ದವಂ ಎಂದಿದ್ದಾರೆ. ನಮ್ಮಲ್ಲಿ ಕೆಲವರು ತಮ್ಮ ಕೆಲಸದವರನ್ನು, ಅಥವಾ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಹೋದ್ಯೋಗಿಗಳನ್ನು ಗೌರವವಿಲ್ಲದೆ ಮಾತನಾಡಿಸುತ್ತಾರೆ. ಅವರು ‘ನನ್ನ ಸೇವಕರು’ ಎಂದು ಅಹಂಕಾರದಿಂದ ಅವರೊಂದಿಗೆ ವ್ಯವಹರಿಸುತ್ತಾರೆ. ಇದು ಅತ್ಯಂತ ನೀಚ ಗುಣ. ಇದರಿಂದಾಗಿ ನಾವು ಆ ವ್ಯಕ್ತಿಯ ಮನ ನೋಯಿಸುವುದಷ್ಟೇ ಅಲ್ಲ, ಆತನ ಒಳಗಿರುವ ಭಗವಂತನನ್ನು ಧಿಕ್ಕರಿಸಿದಂತೆ. ಇದು ಅಹಂಕಾರದ ಇನ್ನೊಂದು ಮುಖ. ಅದಕ್ಕಾಗಿ ಕೃಷ್ಣ ಹೇಳಿದ: “ನಿಮ್ಮ ನಡತೆಯಲ್ಲಿ ನಯ ವಿನಯವಿರಲಿ, ಸೌಜನ್ಯವಿರಲಿ” ಎಂದು.
(೧೯) ಹ್ರೀಃ (ನಾಚಿಕೊಳ್ಳುವುದು): ತಪ್ಪು ಮಾಡಿದಾಗ ನಾಚಿಕೊಳ್ಳುವುದು. ಇದು ಬಹಳ ದೊಡ್ಡ ಗುಣ. ತೈತ್ತಿರೇಯ ಉಪನಿಷತ್ತಿನಲ್ಲಿ ಹೇಳುವಂತೆ : |  ಶ್ರೀಯಾ ದೇಯಂ ಹ್ರೀಯಾ ದೇಯಂ ಭಿಯಾ ದೇಯಂ ಸಂವಿದಾ ದೇಯಂ ||೧೧-೦೩|| ಇನ್ನೊಬ್ಬರು ಟೀಕೆ ಮಾಡಬಹುದು ಎನ್ನುವ ನಾಚಿಕೆಯಿಂದಾದರೂ ದಾನ ಮಾಡು ಎನ್ನುತ್ತದೆ ಶಾಸ್ತ್ರ.
(೨೦) ಅಚಾಪಲಮ್ : ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ಥೈರ್ಯ. ವಿಷಯ ವಿಶ್ಲೇಷಣೆ ಮಾಡಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದು, ಯಾವುದು ನನ್ನ ದಾರಿ ಎಂದು ಗಟ್ಟಿಯಾಗಿ ನಿಲ್ಲುವುದು ಅಚಾಪಲಮ್.
(೨೧) ತೇಜಃ (ತೇಜಸ್ಸು): ಇದನ್ನು ಶಾಸ್ತ್ರಕಾರರು ಬ್ರಹ್ಮವರ್ಚಸ್ಸು ಎನ್ನುತ್ತಾರೆ. ಮುಖದಲ್ಲಿ ಕಳೆ ತುಂಬಿಕೊಂಡಿರುವುದು. ಕಣ್ಣಿನಲ್ಲಿ ತೇಜಸ್ಸು.  ಮನಸ್ಸು ಸ್ವಚ್ಛವಿರುವ ಸಾಧನೆಯ ಮಾರ್ಗದಲ್ಲಿ ಸಾಗುವ ಜ್ಞಾನಿಗಳಲ್ಲಿ ಮಾತ್ರ ಈ ಗುಣವಿರುತ್ತದೆ.
(೨೨) ಕ್ಷಮಾ(forgiveness): ತಪ್ಪು ಮಾಡಿದವರ ಮೇಲೆ ಕೂಡ ಪ್ರತೀಕಾರ ಭಾವನೆ ಬೆಳೆಸಿಕೊಳ್ಳದೆ ಇರುವುದು.  ನಮ್ಮ ಮನಸ್ಸಿನಲ್ಲಿ ಎಂದೂ ಪ್ರತೀಕಾರ ಭಾವನೆ ಹುಟ್ಟಲೇಬಾರದು. ಶಾಸ್ತ್ರದಲ್ಲಿ ಹೇಳುವಂತೆ: “ಇನ್ನೊಬ್ಬರು ಅಪಕಾರ ಮಾಡಿದರೂ ಕೂಡ ಅವರನ್ನು ಕ್ಷಮಿಸು” ಎಂದು. “ದೇವರೆ, ಅವರಿಗೆ ಒಳ್ಳೆ ಬುದ್ಧಿ ಕೊಡು” ಎಂದು ಪ್ರಾರ್ಥಿಸು-ಆದರೆ ಪ್ರತೀಕಾರದ ಭಾವನೆ ಬೇಡ. ನಮ್ಮಲ್ಲಿ “ಎಲ್ಲರೂ ನನ್ನನ್ನು ಮೆಚ್ಚಿಕೊಳ್ಳಬೇಕು” ಎನ್ನುವ ಅಹಂಕಾರ(Ego) ಇಲ್ಲದೆ ಇದ್ದರೆ ಮಾತ್ರ ಕ್ಷಮಾ ಸಾಧ್ಯ.  
(೨೩) ಧೃತಿಃ (ಏನೇ ಆದರೂ ಜೀವನದಲ್ಲಿ ಕಂಗೆಡದಿರುವುದು): ಆತ್ಮ ಭರವಸೆ ಇದ್ದಾಗ ನಮ್ಮನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ. ನಿಜವಾದ ಜ್ಞಾನಿ ಎಂದೂ ಅಂಜುಬುರುಕನಾಗಿ ಧೃತಿಗೆಡುವುದಿಲ್ಲ. “ಮುಂದೆ ಹೀಗಾಗಬಹುದು” ಎಂದು ಮನಸ್ಸಿನಲ್ಲಿ ಯೋಚಿಸಿಕೊಂಡು ಕೊರಗುವುದು ಜೀವನವಲ್ಲ, ಬದಲಿಗೆ ಏನೇ ಬಂದರು ಅದನ್ನು ಎದುರಿಸುವ ಶಕ್ತಿ ಭಗವಂತ ನನಗೆ ಕೊಡುತ್ತಾನೆ ಎನ್ನುವ ಧೃಡವಾದ ಆತ್ಮಶಕ್ತಿ ಧೃತಿ. ವಿಷಮ ಪರಿಸ್ಥಿತಿ(crisis)ಯನ್ನು ಎದುರಿಸಿಕೊಂಡು ಬದುಕುವುದೇ ಜೀವನ. ಅನಿರೀಕ್ಷಿತ ಆಪತ್ತು ಜೀವನದಲ್ಲಿ ಸಾಮಾನ್ಯ. ಅದನ್ನು ತಿಳಿದು ಆತ್ಮವಿಶ್ವಾಸದಿಂದ ಬದುಕು. ಆಗಬಾರದ್ದು ಈ ಜಗತ್ತಿನಲ್ಲಿ ಎಂದೂ ಆಗುವುದಿಲ್ಲ, ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಮ್ಮ ರಕ್ಷಣೆಯ ಭಾರ ಸರ್ವನಿಯಾಮಕ ಭಗವಂತನದು. ಹೀಗಿರುವಾಗ ಭಯವೇಕೆ?
(೨೪) ಶೌಚಮ್: ಈ ವಿಷಯವಾಗಿ ಹಿಂದಿನ ಅಧ್ಯಾಯಗಳಲ್ಲಿ ಅನೇಕ ಬಾರಿ ಚರ್ಚಿಸಿದ್ದೇವೆ. ಶೌಚ ಎಂದರೆ ಒಳಗೂ ಹೊರಗೂ ಸ್ವಚ್ಚವಾಗಿರುವುದು. ಸಮಾಜದಲ್ಲಿ ನಮ್ಮಿಂದಾಗಿ ಇತರರಿಗೆ ತೊಂದರೆಯಾಗಬಾರದು. ನಮ್ಮ ಮೈಮನ ಸ್ವಚ್ಛವಾಗಿರುವಂತೆ ನಾವು ನೋಡಿಕೊಳ್ಳಬೇಕು. ಇದಕ್ಕಾಗಿ ಹಿಂದಿನ ಕಾಲದಲ್ಲಿ ಪ್ರತಿದಿನ ಶುಭ್ರವಾದ ಗರಿ-ಗರಿಯಾದ ಬಟ್ಟೆಯನ್ನು ಧರಿಸುತ್ತಿದ್ದರು, ಮೈ ವಾಸನೆ ಬರಬಾರದು ಎಂದು ಮೃತ್ತಿಕಾ ಸ್ನಾನ ಮಾಡುತ್ತಿದ್ದರು, ಮೈಗೆ ಗಂಧವನ್ನು ಬಳಿದುಕೊಳ್ಳುತ್ತಿದ್ದರು. ನಮ್ಮಿಂದಾಗಿ ಇನ್ನೊಬ್ಬರು ‘ಅಯ್ಯೋ’ ಎಂದು ಮೂಗು ಮುರಿಯುವಂತೆ ನಾವಿರಬಾರದು. ನಮ್ಮ ಮನಸ್ಸು ಸ್ವಚ್ಛವಾಗಿರಬೇಕು. ಒಳ್ಳೆಯ ಬಟ್ಟೆ ತೊಟ್ಟು, ಮನಸ್ಸಿನಲ್ಲಿ ಕಶ್ಮಲ ತುಂಬಿಕೊಂಡಿದ್ದರೆ ನಾವು ನಮಗರಿವಿಲ್ಲದಂತೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಕೆಡಿಸುತ್ತೇವೆ. ಇದಕ್ಕಾಗಿ ಒಳಗೂ ಹೊರಗೂ ಸ್ವಚ್ಛವಾಗಿರಬೇಕು.   
(೨೫) ಅದ್ರೋಹಃ: ಇನ್ನೊಬ್ಬರ ಬಗ್ಗೆ ದ್ರೋಹ ಚಿಂತನೆ ಮಾಡದಿರುವುದು. ಇನ್ನೊಬ್ಬರಿಗೆ ಎರಡೆಣಿಸಬೇಡ. ಇನ್ನೊಬ್ಬರಿಗೆ ಕೆಟ್ಟದಾಗಲಿ ಎಂದು ಕನಸಿನಲ್ಲೂ ಬಯಸಬೇಡ.
(೨೬) ನಾತಿಮಾನಿತಾ: ‘ಅತಿಮಾನ’ ಅಂದರೆ ನನ್ನ ಬಗ್ಗೆ ನಾನು ಅತಿ ಹೆಗ್ಗಳಿಕೆ ಕಲ್ಪಿಸಿಕೊಂಡು ಬೀಗುವುದು. ಕೃಷ್ಣ ಹೇಳುತ್ತಾನೆ: “ನಿನ್ನ ಬಗ್ಗೆ ನೀನು ಎಂದೂ ಅತಿಯಾದಂತಹ ಅಹಂಕಾರ ತಾಳಬೇಡ” ಎಂದು. ಈ ಗುಣಕ್ಕೆ  ಶ್ರೀರಾಮಚಂದ್ರನ ಜೀವನ ಉತ್ತಮ ದೃಷ್ಟಾಂತ. ವಾಲ್ಮೀಕಿ-ರಾಮಾಯಣದಲ್ಲಿ ಹೇಳುತ್ತಾರೆ: “ವೀರ್ಯವಾನ್ ನಚ ವೀರ್ಯೇನ ಮಹತಾ ಸ್ವೇನ ವಿಸ್ಮಿತಃ”||೨-೧-೧೩|| ಎಂದು. ಅಸಾಧಾರಣ ಪೌರುಷೇಯನಾಗಿದ್ದ  ರಾಮ ಎಂದೂ “ನಾನು ಮಹಾವೀರ” ಎಂದು ಅಹಂಕಾರ ಪಡದೆ, ಒಬ್ಬ ಸಾಮಾನ್ಯ ಮಾನವನಂತೆ ಬದುಕಿ ತೋರಿಸಿದ.  ಇದು ಬಹು ದೊಡ್ಡ ಗುಣ.   
ಹೀಗೆ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಇಪ್ಪತ್ತಾರು ಗುಣಗಳನ್ನು ಹೇಳಿ ಕೃಷ್ಣ ಹೇಳುತ್ತಾನೆ: “ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತ” ಎಂದು. ಇಲ್ಲಿ ‘ಅಭಿ’ ಅಂದರೆ ‘ಬಯಸಿ’ ಎನ್ನುವ ಅರ್ಥವನ್ನು ಕೊಡುತ್ತದೆ. “ದೈವೀ ಸಂಪತ್ತನ್ನು ಬಯಸಿ ಹುಟ್ಟಿದವನಲ್ಲಿ ಈ ಗುಣಗಳಿರುತ್ತವೆ”. ಅಂದರೆ ಯಾರು ಹುಟ್ಟುವಾಗಲೇ ಸಾತ್ವಿಕತೆಯ ಅಭಿಲಾಷೆಯನ್ನು ಇಟ್ಟುಕೊಂಡು ಹುಟ್ಟುತ್ತಾರೋ ಅವರಿಗೆ ಸಹಜವಾಗಿ ಈ ಗುಣಗಳಿರುತ್ತವೆ. ಇವು ದೈವೀ ಸಂಪತ್ತು. ಮಾನವನು ಬೆಳಸಿಕೊಳ್ಳಬೇಕಾದ ಮಾನಸಿಕ ಸಂಪತ್ತು(Divine Wealth).   

No comments:

Post a Comment