Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, September 1, 2011

Bhagavad Geeta Kannada Chapter-10 Shloka 15-18

ಸ್ವಯಮೇವಾSತ್ಮನಾSSತ್ಮಾನಂ ವೇತ್ಥ ತ್ವಂ ಪುರುಷೋತ್ತಮ 
ಭೂತಭಾವನ ಭೂತೇಶ ದೇವದೇವ ಜಗತ್ ಪತೇ ೧೫
ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ
ಯಾಭಿರ್ವಿಭೂತಿಭಿರ್ಲೋಕಾನಿಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ೧೬

ಸ್ವಯಮ್ ಏವ ಆತ್ಮನಾತ್ಮಾನಮ್  ವೇತ್ಥ ತ್ವಮ್  ಪುರುಷೋತ್ತಮ 
ಭೂತಭಾವನ ಭೂತೇಶ ದೇವದೇವ ಜಗತ್ ಪತೇ ||
ವಕ್ತುಮ್ ಅರ್ಹಸಿ ಅಶೇಷೇಣ ದಿವ್ಯಾಃ ಹಿ ಆತ್ಮ ವಿಭೂತಯಃ
ಯಾಭಿಃ ವಿಭೂತಿಭಿಃ ಲೋಕಾನ್ ಇಮಾನ್ ತ್ವಮ್  ವ್ಯಾಪ್ಯ ತಿಷ್ಠಸಿ –ಓ ಪುರುಷೋತ್ತಮ, ನೀನೆ ಸ್ವತಃ ನಿನ್ನಳವಿನಿಂದ ನಿನ್ನನ್ನು ಅರಿತಿರುವೆ. ಓ ಎಲ್ಲಾ ಜೀವಿಗಳ ಸ್ರಷ್ಟಾರನೆ, ಎಲ್ಲ ಜೀವಿಗಳ ದೊರೆಯೆ, ದೇವತೆಗಳಿಗೂ ಹಿರಿಯ ದೈವತವೆ, ಜಗದೊಡೆಯನೆ, ಯಾವ ರೂಪಗಳಿಂದ ನೀನು ಈ ಲೋಕಗಳನ್ನೆಲ್ಲ ತುಂಬಿ ನಿಂತಿರುವೆಯೋ ಅಂಥ ಅಲೌಕಿಕವಾದ ನಿನ್ನ ಬಗೆಬಗೆಯ ರೂಪಗಳ ಹಿರಿಮೆಗಳನ್ನು ಬಿಡದೆ ತಿಳಿಹೇಳಬೇಕು ನೀನೆ.

ಅರ್ಜುನ ಹೇಳುತ್ತಾನೆ: “ನಿನ್ನ ಗುಣಪ್ರಮಾಣವನ್ನು ದೇವತೆಗಳಿಂದಲೂ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ನಿನ್ನ ಬಗೆಗೆ ತಿಳಿದಿರುವುದು ನೀನೊಬ್ಬನೆ. ಅದನ್ನು ನೀನು ನೀನಾಗಿಯೇ ಹೇಳಬೇಕು ಹೊರತು ಇನ್ನೊಬ್ಬರಿಂದ ಹೇಳಲು ಸಾಧ್ಯವಿಲ್ಲ. ಏಕೆಂದರೆ ನೀನು ಪುರುಷೋತ್ತಮ” ಎಂದು. ಇಲ್ಲಿ   ಪುರುಷೋತ್ತಮ ಎನ್ನುವ ವಿಶೇಷಣ ಬಳಕೆಯಾಗಿದೆ. ಪುರುಷೋತ್ತಮ  ಎಂದರೆ ಕ್ಷರ(ಜೀವ)ವನ್ನು ಮೀರಿನಿಂತವನು. ಅಕ್ಷರ(ಶ್ರೀತತ್ವ)ಕ್ಕಿಂತಲೂ ಹಿರಿಯನು. ಕ್ಷರ-ಅಕ್ಷರವನ್ನು ಮೀರಿ ನಿಂತ ನೀನಲ್ಲದೆ ನಿನ್ನಿಂದ ಹಿರಿದಾದ ತತ್ವ ಇನ್ನೊಂದಿಲ್ಲ. ಆದ್ದರಿಂದ ಇದರ ವಿವರಣೆಯನ್ನು ನಿನ್ನಿಂದ ತಿಳಿಯಬೇಕು”  ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ ಎನ್ನುವುದನ್ನು ಈ ವಿಶೇಷಣ ತಿಳಿಸುತ್ತದೆ.
ಇಲ್ಲಿ ಅರ್ಜುನ ಕೃಷ್ಣನನ್ನು- ಭೂತಭಾವನ, ಭೂತೇಶ, ದೇವದೇವ ಮತ್ತು  ಜಗತ್ ಪತೇ  ಎಂದು ಸಂಬೋಧಿಸಿದ್ದಾನೆ. ಭೂತಭಾವನ ಎಂದರೆ- ಪಂಚಭೂತಾತ್ಮಕ ಪ್ರಪಂಚವನ್ನು ಸೃಷ್ಟಿ ಮಾಡಿ,  ಸಮಸ್ತ ಜೀವ-ಜಾತದ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾಗಿರುವವ. ಭೂತೇಶ ಎಂದರೆ- ಎಲ್ಲರನ್ನು ನಿಯಂತ್ರಿಸುವ ಸರ್ವ ನಿಯಾಮಕ  ಸ್ವಾಮಿ. ದೇವದೇವ ಎಂದರೆ-ಎಲ್ಲಾ ದೇವತೆಗಳಿಗೂ ದೇವನಾಗಿರುವವ; ಸೂರ್ಯಾದಿಗಳಿಗೂ ಬೆಳಕನ್ನು ಕೊಡುವ ಮೂಲ ಜ್ಯೋತಿ. ಜಗತ್ ಪತಿ ಎನ್ನುವಲ್ಲಿ 'ಪತಿ' ಎಂದರೆ ಪಾಲಕ. ಹುಟ್ಟಿಸುವವನೂ ಭಗವಂತ, ಸಾಯಿಸುವವನೂ ಭಗವಂತ. ಹುಟ್ಟು ಸಾವಿಲ್ಲದ ಮೋಕ್ಷ  ಕೊಡುವವನೂ ಅವನೆ. ಆತ ಸಮಸ್ತ ಜಗತ್ತಿನ ಪಾಲಕ. ನಮಗೆ ಭಗವಂತ ‘ಸಂಸಾರಬಂಧ’ ಕೊಡುವುದು ಆತನ ಪಾಲನೆಯ, ಶಿಕ್ಷಣದ ಒಂದು ಮುಖ ಅಷ್ಟೆ. ಒಟ್ಟಿನಲ್ಲಿ “ನೀನಿಲ್ಲದೆ ನಾವಿಲ್ಲ, ನೀನೇ ಸರ್ವ ರಕ್ಷಕ” ಎನ್ನುವ ಭಾವವನ್ನು ಅರ್ಜುನ ಈ ಮೂಲಕ ವ್ಯಕ್ತಪಡಿಸಿದ್ದಾನೆ.

ಕಥಂ ವಿದ್ಯಾಮಹಂ ಯೋಗಿಂಸ್ತ್ವಾಂ ಸದಾ ಪರಿಚಿಂತಯನ್ 
ಕೇಷು ಕೇಷು ಚ ಭಾವೇಷು ಚಿಂತ್ಯೋSಸಿ ಭಗವನ್ ಮಯಾ ೧೭

ಕಥಮ್  ವಿದ್ಯಾಮ್ ಅಮ್  ಯೋಗಿನ್ ತ್ವಾಮ್  ಸದಾ ಪರಿಚಿಂತಯನ್      
ಕೇಷು ಕೇಷು ಚ ಭಾವೇಷು ಚಿಂತ್ಯಃ ಅಸಿ ಭಗವನ್ ಮಯಾ—ಸರ್ವಸಮರ್ಥನೆ, ನಿನ್ನನ್ನು ಅನುಗಾಲ ಪರಿಪರಿ ನೆನೆಯುತ್ತ ನಾನು ಹೇಗೆ ತಿಳಿದೇನು? ಓ ಭಗವನ್, ಯಾವಯಾವ ವಸ್ತುಗಳಲ್ಲಿ ಹೇಗಿರುವೆಯೆಂದು ನಾನು ನೆನೆಯಬೇಕು?

ಈ ಪ್ರಪಂಚದ ಪ್ರತಿಯೊಂದು ವಸ್ತುವಿನಲ್ಲಿರುವ ಒಂದು ವಿಶಿಷ್ಟ ಗುಣದ ಹಿಂದೆ ಭಗವಂತನ ವಿಭೂತಿ ಅಡಗಿದೆ. ಇಲ್ಲಿ ಅರ್ಜುನ ಭಗವಂತನಲ್ಲಿ ಪ್ರಾರ್ಥಿಸುತ್ತಾನೆ: “ಸರ್ವ ಸಮರ್ಥನಾದ ನೀನು ಎಲ್ಲಿ ಏನಾಗಿದ್ದಿ ಎಂದು ನಿನಗೆ ಗೊತ್ತಿದೆ ಹೊರತು ನನಗಲ್ಲ. ನಾನು ಒಂದು ವಸ್ತುವನ್ನು ಕಂಡಾಗ ಅದರ ಹಿಂದಿರುವ ಭಗವತ್ ಶಕ್ತಿಯ ನೆನಪು ನನಗೆ ಬರಬೇಕು. ಯಾವಯಾವ ವಸ್ತುವಿನಲ್ಲಿ ನಿನ್ನ ಉಪಾಸನೆಯನ್ನು ನಾನು ಮಾಡಬೇಕು-ಅದನ್ನು ನಾನು ತಿಳಿಯಬೇಕು” ಎಂದು.    

ವಿಸ್ತರೇಣಾSತ್ಮನೋ ಯೋಗಂ ವಿಭೂತಿಂ ಚ ಜನಾರ್ದನ     
ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇSಮೃತಮ್ ೧೮

ವಿಸ್ತರೇಣಾ ತ್ಮನಃ  ಯೋಗಮ್  ವಿಭೂತಿಮ್  ಚ ಜನಾರ್ದನ         
ಭೂಯಃ ಕಥಯ ತೃಪ್ತಿಃ ಹಿ ಶೃಣ್ವತಃ ನ ಅಸ್ತಿ ಮೇ ಅಮೃತಮ್—ಓ ಜನಾರ್ದನ, ನಿನ್ನ ಆಳವನ್ನೂ ಬಗೆಬಗೆಯ ರೂಪಗಳ ಹಿರಿಮೆಯನ್ನೂ ಇನ್ನಷ್ಟು ಬಿತ್ತರಿಸಿ ಹೇಳು. ನನಗೆ ಈ ಸುಧೆಯನ್ನು ಎಷ್ಟು ಸವಿದರೂ ತಣಿವಿಲ್ಲ.

“ಉಪಾಸನೆಗೆ ಉಪಯೋಗವಾಗುವ ನಿನ್ನ ವಿಭೂತಿಯನ್ನು ಇನ್ನೂ ಹೇಳು”  ಎಂದು ಅರ್ಜುನ ಕೃಷ್ಣನನ್ನು ಕೇಳಿಕೊಳ್ಳುತ್ತಾನೆ. ಭಗವಂತನ ವಿಭೂತಿಯಲ್ಲಿ ಪ್ರಮುಖವಾಗಿ ನಾಲ್ಕು ವಿಧ. (೧) ಸಾಕ್ಷಾತ್ ವಿಭೂತಿ: ಇಲ್ಲಿ ಭಗವಂತ ವಿಶಿಷ್ಟ ರೂಪದಲ್ಲಿ ನಮಗೆ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾನೆ. ಉದಾಹರಣೆಗೆ: ಭಗವಂತನ ಅವತಾರಗಳು. (೨) ವಿಜಾತಿಯ ಸ್ರಷ್ಟಪ್ರಭ. ಉದಾಹರಣೆಗೆ: ನಕ್ಷತ್ರಗಳ ರಾಜ ಚಂದ್ರ. ಇಲ್ಲಿ ಚಂದ್ರ ನಕ್ಷತ್ರಗಳ ಜಾತಿಗೆ ಸೇರಿಲ್ಲ ಆದರೆ ಆತ ನಕ್ಷತ್ರಗಳ ರಾಜ. (೩)ಸ್ವಜಾತಿಯ ಸ್ರಷ್ಟಪ್ರಭ. ಉದಾಹರಣೆಗೆ: ದೇವತೆಗಳಲ್ಲಿ ಇಂದ್ರ, ಬೆಳಕಿನಲ್ಲಿ ಸೂರ್ಯ. (೪) ಸ್ವಜಾತಿಯ ಏಕದೇಶೀಯ ಸ್ರಷ್ಟಪ್ರಭ. ಉದಾಹರಣೆಗೆ: ಪಾಂಡವರಲ್ಲಿ ಅರ್ಜುನ.  ಹೀಗೆ ಈ ನಾಲ್ಕು ಬಗೆಯಲ್ಲಿ ಭಗವಂತನ ವಿಭೂತಿ ರೂಪಗಳು ಅನಂತ. ಇಲ್ಲಿ ಎಲ್ಲವನ್ನೂ ನಾವು ಉಪಾಸನೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅರ್ಜುನ  “ಉಪಾಸನೆ ಮಾಡುವುದಕ್ಕೆ ಅನುಕೂಲವಾದ ನಿನ್ನ ವಿಭೂತಿಯನ್ನು ವಿಸ್ತಾರವಾಗಿ ಹೇಳು” ಎಂದು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ.
ಅರ್ಜುನ ಕೃಷ್ಣನ ಸಂದೇಶವನ್ನು ಕೇಳಿ ಆನಂದ ಸಾಗರದಲ್ಲಿ ತೇಲುತ್ತಿದ್ದಾನೆ. ಆತ ಹೇಳುತ್ತಾನೆ: “ನಾನು ಅಮೃತಪಾನ ಮಾಡುತ್ತಿದ್ದೇನೆ, ಇಲ್ಲಿ ಸಾಕು ಎನ್ನುವುದಿಲ್ಲ” ಎಂದು. ಇದು ಮೊಕ್ಷಪ್ರದವಾದ, ಕಿವಿ ಬೊಗಸೆಯಿಂದ ಮಾಡುವ ಅಮೃತಪಾನ. ಇದು ನಮ್ಮನ್ನು ಹುಟ್ಟು-ಸಾವಿನ ಸುಳಿಯಲ್ಲಿ ಸಿಗದಂತೆ ಮಾಡಿ,ಅಮೃತರನ್ನಾಗಿ ಮಾಡುವ ಜ್ಞಾನ. ಇದನ್ನು ಎಷ್ಟು ಸವಿದರೂ ತಣಿವಿಲ್ಲ. ಅದಕ್ಕಾಗಿ “ಇನ್ನೂ ಹೇಳು” ಎಂದು ಕೃಷ್ಣನಲ್ಲಿ ಅರ್ಜುನ ಕೇಳಿಕೊಳ್ಳುತ್ತಾನೆ. 

2 comments:

  1. ಇಲ್ಲಿ ನನ್ನದೂ ಅರ್ಜುನನ ಪಾತ್ರ! “ಇನ್ನೂ ಹೇಳು” ಎ೦ದಷ್ಟೇ ಹೇಳಿ ಕೇಳಲು ಕಾತುರಳಾಗುತ್ತೇನೆ! ಬಹಳ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು.

    ReplyDelete