ಯೇSಪ್ಯನ್ಯದೇವತಾ ಭಕ್ತಾ ಯಜಂತೇ ಶ್ರದ್ಧಯಾSನ್ವಿತಾಃ ।
ತೇSಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್ ॥೨೩॥
ಯೇ ಅಪಿ ಅನ್ಯ ದೇವತಾ ಭಕ್ತಾಃ ಯಜಂತೇ ಶ್ರದ್ಧಯಾ ಅನ್ವಿತಾಃ ।
ತೇ ಅಪಿ ಮಾಮ್ ಏವ ಕೌಂತೇಯ ಯಜಂತಿ ಅವಿಧಿ ಪೂರ್ವಕಮ್-ಕೌಂತೇಯ, ಯಾರು ಬೇರೆ ದೇವತೆಗಳ ಭಕ್ತರಾಗಿ ಶ್ರದ್ಧೆಯಿಂದ ಅವರನ್ನು ಆರಾಧಿಸುತ್ತಾರೆ ಅಂಥವರು ಕೂಡ ತಪ್ಪುದಾರಿಯಿಂದ ನನ್ನನ್ನೆ ಆರಾಧಿಸುತ್ತಾರೆ.
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ ।
ನತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ ॥೨೪॥
ಅಹಮ್ ಹಿ ಸರ್ವಯಜ್ಞಾನಾಮ್ ಭೋಕ್ತಾ ಚ ಪ್ರಭುಃ ಏವ ಚ ।
ನ ತು ಮಾಮ್ ಅಭಿಜಾನಂತಿ ತತ್ತ್ವೇನ ಅತಃ ಚ್ಯವಂತಿ ತೇ-ನಾನೆ ಅಲ್ಲವೆ ಎಲ್ಲ ಪೂಜೆಗಳನ್ನು ಕೊಳ್ಳುವವನು ಮತ್ತು ನಡೆಸುವವನು. ನಿಜವಾಗಿ ಅವರು ನನ್ನನ್ನು ಚನ್ನಾಗಿ ತಿಳಿದಿಲ್ಲ. ಅದರಿಂದ ಜಾರಿ ಬೀಳುತ್ತಾರೆ.
ಹಿಂದೆ ವಿಶ್ಲೇಶಿಸಿದಂತೆ ಕೆಲವರು ತಮ್ಮ ಬಯಕೆಗಳನ್ನು ಈಡೇರಿಸುವಂತೆ ಕೋರಿ ದೇವತೆಗಳನ್ನು ಪ್ರಮುಖವಾಗಿ (ಭಗವಂತನಿಗಿಂತ ಬಿನ್ನವಾಗಿ) ಪೂಜಿಸುತ್ತಾರೆ. ಹೀಗೆ ಮಾಡಿದಾಗ ಏನಾಗುತ್ತದೆ ಎನ್ನುವ ಪ್ರಶ್ನೆ ನಮಗೆ ಮೂಡಬಹುದು. ಹಿಂದೆ ಕೃಷ್ಣ ಹೇಳಿದ್ದ “ಎಲ್ಲವುದರಲ್ಲೂ ಇರುವವನು ನಾನು” ಎಂದು. ಯಾರನ್ನು ಪ್ರಮುಖವಾಗಿ ಪೂಜಿಸಿದರೂ ಕೂಡಾ ಅದು ಸಲ್ಲುವುದು ಭಗವಂತನನ್ನೇ. ಇಲ್ಲಿ ಸಮಸ್ಯೆ ಎಂದರೆ ಪೂಜೆ ಮಾಡುವವರಿಗೆ ಆ ಅರಿವು ಇಲ್ಲದಿರುವುದು. ಇದರಿಂದ ತಪ್ಪು ಅನುಸಂಧಾನ. ಅರಿವಿಲ್ಲದೇ ಮಾಡುವ ಭಕ್ತಿ ಪೂರ್ಣ ಭಕ್ತಿಯಾಗಲಾರದು. ಪರತತ್ವದ ಎಚ್ಚರ ಇಲ್ಲದೆ ಮಾಡುವ ಪೂಜೆ ಎಂದೂ ನಮ್ಮನ್ನು ಉನ್ನತಿಗೇರಿಸಲಾರದು. ಕೃಷ್ಣ ಹೇಳುತ್ತಾನೆ “ಈ ರೀತಿಯ ಪೂಜೆಯಿಂದ ಪುಣ್ಯ ಗಳಿಸುವ ಬದಲು, ಪುಣ್ಯ ಕರ್ಮ ಮಾಡಿಯೂ ಜಾರಿ ಬಿದ್ದಂತೆ” ಎಂದು. ಆದ್ದರಿಂದ ಯಾವ ಪೂಜೆಯನ್ನೇ ಆಗಲಿ ಪರತತ್ವದ ಎಚ್ಚರದಿಂದ ಮಾಡಿದಾಗ ಮಾತ್ರ ಅದು ಸಾರ್ಥಕ. ಯಾರನ್ನೇ ಪೂಜಿಸಿದರೂ ಆ ಪೂಜೆ ಅಂತತಃ ಸಲ್ಲುವುದು ಭಗವಂತನನ್ನೇ. ಏಕೆಂದರೆ ಸರ್ವ ಯಜ್ಞಗಳ ಭೊಕ್ತಾರ ಭಗವಂತ. ಇದು ಯಜ್ಞದ ಹಿಂದಿರುವ ಯಜ್ಞಪುರುಷನ ರಹಸ್ಯ. ಪುರುಷಸೂಕ್ತದಲ್ಲಿ ಹೇಳುವಂತೆ "ಯಜ್ಞೇನ ಯಜ್ಞ ಮಯಜಂತ ದೇವಾಃ"-ಯಜ್ಞದಿಂದ ಯಜ್ಞ ನಾಮಕ ಭಗವಂತನ ಆರಾಧನೆ. ಯಜ್ಞಗಳ ಭೊಕ್ತ, ಯಜ್ಞಗಳ ಸ್ವಾಮಿ, ಯಜ್ಞ ಶಬ್ದವಾಚ್ಯನಾದ ಭಗವಂತನ ಆರಾಧನೆಯಿಂದ ನಾವು ಭಗವಂತನನ್ನು ಸೇರಬಹುದು.
ಹೀಗಿದ್ದರೂ ಕೂಡಾ ಸಮಾಜದಲ್ಲಿ ನಾವು ಅನೇಕ ರೀತಿಯಲ್ಲಿ ದೇವತಾ ಆರಾದನೆ ಮಾಡುವವರನ್ನು ನೋಡುತ್ತೇವೆ. ಅಂತವರು ಆ ದೇವತೆಯನ್ನು ಪೂಜಿಸುವುದರಲ್ಲೇ ಶ್ರದ್ಧೆ ಇಟ್ಟಿರುತ್ತಾರೆ. ಆ ರೀತಿ ಪೂಜೆ ಮಾಡುವವರ ಗತಿ ಏನು? ಇದಕ್ಕೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ.
ಯಾಂತಿ ದೇವವ್ರತಾ ದೇವಾನ್ ಪಿತ ನ್ ಯಾಂತಿ ಪಿತೃವ್ರತಾಃ ।
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಪಿ ಮಾಮ್ ॥೨೫॥
ಯಾಂತಿ ದೇವವ್ರತಾಃ ದೇವಾನ್ ಪಿತ ನ್ ಯಾಂತಿ ಪಿತೃವ್ರತಾಃ ।
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮತ್ ಯಾಜಿನಃ ಅಪಿ ಮಾಮ್-ದೇವತೆಗಳ ನೇಮ ಹಿಡಿದವರು ದೇವತೆಗಳನ್ನು ಸೇರುತ್ತಾರೆ. ಪಿತೃಗಳ ನೇಮ ಹಿಡಿದವರು ಪಿತೃಗಳನ್ನು ಸೇರುತ್ತಾರೆ. ದೆವ್ವಗಳನ್ನು ಪೂಜಿಸುವವರು ದೆವ್ವಗಳನ್ನು ಸೇರುತ್ತಾರೆ. ನನ್ನನ್ನು ಪೂಜಿಸುವವರು ನನ್ನನ್ನೇ ಸೇರುತ್ತಾರೆ.
ಕೃಷ್ಣ ಹೇಳುತ್ತಾನೆ “ನೀವು ಯಾರನ್ನು ಪೂಜಿಸುತ್ತೀರೋ ಅವರನ್ನೇ ಪಡೆಯುತ್ತೀರಿ” ಎಂದು. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನೂ, ಪಿತೃಗಳನ್ನು ಪೂಜಿಸುವವರು ಪಿತೃಗಳನ್ನೂ, ಭೂತ ಪ್ರೇತವನ್ನು(ದೇವತಾ ಗಣ) ಪೂಜಿಸುವವರು ಭೂತ ಪ್ರೇತಗಳನ್ನೂ ಪಡೆಯುತ್ತಾರೆ. ಆದರೆ ಯಾರು ಏಕಭಕ್ತಿಯಿಂದ ಎಲ್ಲವುದರಲ್ಲೂ ಭಗವಂತನನ್ನು ಕಂಡು ಶ್ರದ್ಧೆಯಿಂದ ಆತನನ್ನು ಪೂಜಿಸುತ್ತಾರೋ- “ಅವರು ನನ್ನನ್ನು ಸೇರುತ್ತಾರೆ” ಎನ್ನುವ ಭರವಸೆಯನ್ನು ಇಲ್ಲಿ ಕೃಷ್ಣ ಕೊಡುತ್ತಾನೆ. ದೇವತೆಗಳನ್ನು ಪೂಜಿಸಿ ಸ್ವರ್ಗವನ್ನು ಪಡೆಯಬಹುದು, ಆದರೆ ಮರಳಿ ಹುಟ್ಟದ ಮೋಕ್ಷವನ್ನಲ್ಲ. ಯಾವ ಪೂಜೆ ಮಾಡಿದರೂ ಸರಿಯೇ, ಪ್ರತಿಯೊಂದು ಕ್ರಿಯೆಯ ಹಿಂದೆ ಭಗವಂತನ ಅರಿವಿದ್ದು ಅದರಿಂದ ಅವನನ್ನು ಆರಾಧಿಸುವುದೇ ನಿಜವಾದ ಪೂಜೆ. ಅರಿವಿಲ್ಲದ ಪೂಜೆ ಎಂದೂ ನಮ್ಮನ್ನು ಮೋಕ್ಷದತ್ತ ಕೊಂಡೊಯ್ಯುವುದಿಲ್ಲ.ಬ್ರಹ್ಮಾದಿ ಸಮಸ್ತ ದೇವತಾ ಪರಿವಾರ ಸಮೆತನಾಗಿರತಕ್ಕಂತಹ ಭಗವಂತನ ಆರಾಧನೆ ಮಾಡಿದರೆ ಆಗ ಭಗವಂತನನ್ನು ಸೇರುತ್ತಾರೆ. ಇದು ಶಾಸ್ತ್ರದ ವ್ಯವಸ್ಥೆ.
No comments:
Post a Comment