Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, July 31, 2011

Bhagavad Geeta Kannada Chapter-09 Shloka 17


ಪಿತಾSಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ
ವೇದ್ಯಂ ಪವಿತ್ರಮೋಂಕಾರ ಋಕ್ ಸಾಮ ಯಜುರೇವ ಚ      ೧೭

ಪಿತಾಮ್ ಅಸ್ಯ ಜಗತಃ  ಮಾತಾ ಧಾತಾ ಪಿತಾಮಹಃ
ವೇದ್ಯಮ್  ಪವಿತ್ರಮ್ ಓಂಕಾರಃ  ಋಕ್ ಸಾಮ ಯಜುಃ ಏವ  ಚ- ನಾನು ಈ ಜಗದ ತಂದೆ, ತಾಯಿ, ಪೋಷಕ ಮತ್ತು ಅಜ್ಜ-ಮುತ್ತಜ್ಜ.[ಸಲಹುವುದರಿಂದ ‘ಪಿತೃ’. ಅರಿಯುವುದರಿಂದ ‘ಮಾತೃ’. ಬೆಳೆಯುವುದರಿಂದ ‘ಧಾತೃ’. ತಂದೆಗಿಂತಲೂ ಹಿರಿಯನಾದ್ದರಿಂದ ‘ಪಿತಾಮಹ’] ಜಗವೆಲ್ಲ ತಿಳಿಯಬೇಕಾದವನು. ಜಗಕೆ ಪಾವನನಾದವನು. ಓಂಕಾರದಿಂದ, ಋಗ್ವೇದ-ಸಾಮವೇದ-ಯಜುರ್ವೇದಗಳಿಂದ ವಾಚ್ಯನಾದವನು. [‘ಓಂ’ ಎಂದು ಕರೆಸಿಕೊಳ್ಳುವುದರಿಂದ ‘ಓಂಕಾರ’. ಪೂಜನೀಯನಾದ್ದರಿಂದ ‘ಋಕ್’. ಸಮಾನನಾದ್ದರಿಂದ ‘ಸಾಮ’. ಯಜ್ಞಗಳಿಂದ ಆರಾಧ್ಯನಾದ್ದರಿಂದ ‘ಯಜುಸ್’]

ಬದುಕಿನ ಸಂಬಂಧಗಳಿಗೆ ಸಂಬಂಧಿಸಿ ಭಗವಂತನ ಉಪಾಸನೆಯನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ “ಪಿತಾಮ್ ಅಸ್ಯ ಜಗತಃ  ಮಾತಾ ಧಾತಾ ಪಿತಾಮಹಃ” ಎಂದು. ಅಂದರೆ “ನಾನೆ ತಂದೆ, ನಾನೆ ತಾಯಿ, ನಾನೆ ಧಾರಕ ಮತ್ತು ಪಿತಾಮಹ”. ನಮಗೆ ತಿಳಿದಂತೆ ಒಬ್ಬರು ತಂದೆಯಾಗಬಹುದು ಅಥವಾ ತಾಯಿಯಾಗಬಹುದು. ಆದರೆ ಒಬ್ಬರೇ ತಾಯಿ ಮತ್ತು ತಂದೆ ಎರಡೂ ಆಗುವುದು ಸಾಧ್ಯವಿಲ್ಲ. ಇದು ಭಗವಂತನಲ್ಲಿ ಮಾತ್ರ ಸಾಧ್ಯ. ಭಗವಂತ ಎಲ್ಲರಿಗೂ ಅಪ್ಪ ಮತ್ತು ಎಲ್ಲರಿಗೂ ಅಮ್ಮ. ತಂದೆಯೊಳಗೆ ‘ತಂದೆ’ಯಾಗಿ, ತಾಯಿಯೊಳಗೆ ‘ತಾಯಿ’ಯಾಗಿ ತುಂಬಿರುವ ಶಕ್ತಿ ಆ ಭಗವಂತ. ಇದನ್ನು ನಾವು ಈ ರೀತಿ ಸ್ತುತಿಸುತ್ತೇವೆ:       
ತ್ವಮೇವ ಮಾತಾಚ ಪಿತಾ ತ್ವಮೇವ
ತ್ವಮೇವ ಬಂದುಶ್ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ
ಗಾಯತ್ರಿಯಲ್ಲಿ ಮೂಲತಃ ಈ ಅನುಷ್ಠಾನವಿದೆ. “ತತ್ಸವಿತುರ್ವರೇಣ್ಯಂ ಭರ್ಗಃ” ಎನ್ನುವಲ್ಲಿ ಭಗವಂತ ಜಗತ್ತನ್ನು ಸೃಷ್ಟಿ ಮಾಡಿದ ತಂದೆ ಎನ್ನುವ ಅರ್ಥವಿದೆ.  ‘ಸವಿತ’. ಎಂದರೆ ಜಗತ್ತನ್ನು ಹೆತ್ತವನು ಎಂದರ್ಥ. ಪ್ರಳಯಕಾಲದಲ್ಲಿ ಜಗತ್ತನ್ನು ತನ್ನ ಉದರದಲ್ಲಿ ಧರಿಸಿ, ಸೃಷ್ಟಿ ಕಾಲದಲ್ಲಿ ಅದನ್ನು ಭಗವಂತ ಹೆತ್ತ. ಹೆತ್ತು ಹೊತ್ತು ಸಲಹುವವಳು ‘ತಾಯಿ’-ಆದ್ದರಿಂದ ಭಗವಂತ ತಾಯಿಯೂ ಹೌದು. ಅಷ್ಟೇ ಅಲ್ಲ, ಪ್ರತಿಯೊಬ್ಬ ತಾಯಿಯೊಳಗಿದ್ದು ಆ ತಾಯಿಯ ತಾಯ್ತನವನ್ನು ಜಾಗೃತಗೊಳಿಸಿ, ತಾಯಿಯೊಳಗೆ ತಾಯಿಯಾಗಿ ತುಂಬಿರುವ ಭಗವಂತ, ಎಲ್ಲ ತಂದೆಯಂದಿರ ಒಳಗೂ ಇದ್ದು, ಅವರಲ್ಲಿ ಪಿತೃತ್ವ ಜಾಗೃತಗೊಳಿಸುವ ತಂದೆ. ಪಿತಾ ಅನ್ನುವ ಪದದ ನಿರ್ವಚನ ನೋಡಿದರೆ ‘ತಂದೆ’ ಅನ್ನುವುದು ಕೇವಲ ರೂಢಿ ಅರ್ಥ. ಶ್ರುತಿಯಲ್ಲಿ ಹೀಗೆ ಹೇಳುತ್ತಾರೆ:
ಯೋ ನಃ ಪಿತಾ ಜನಿತಾ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ|
ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ||
ಇಲ್ಲಿ ಪಿತಾ ಮತ್ತು ಜನಕನನ್ನು ಬೇರೆ ಬೇರೆಯಾಗಿ ಹೇಳುತ್ತಾರೆ. ಅವನು ನಮ್ಮ ತಂದೆ, ಅವನು ನಮ್ಮ ಜನಕ. ಅಂದರೆ: ಹುಟ್ಟಿಸಿದವನೂ ಅವನೇ, ರಕ್ಷಕನೂ ಅವನೆ.
ಲೋಕದಲ್ಲಿ ಗಂಡು ಹೆಣ್ಣಲ್ಲ, ಹೆಣ್ಣು ಗಂಡಲ್ಲ. ಆದರೆ ಭಗವಂತ ಎಲ್ಲರ ಬಿಂಬರೂಪ. ಆದ್ದರಿಂದ ಭಗವಂತ ಉಭಯಲಿಂಗ-ಆತ ಸ್ತ್ರೀಪುಂಸಕ. ಆದರೆ ಆತನಲ್ಲಿ ಸ್ತ್ರೀಯಲ್ಲಿರುವ ದೋಷವಾಗಲಿ, ಪುರುಷನಲ್ಲಿರುವ ದೋಷವಾಗಲೀ ಇಲ್ಲ. ಆದ್ದರಿಂದ ಆತ ಲಿಂಗಾತೀತಕೂಡಾ ಹೌದು.[ಇದನ್ನು ನಾವು ಭಗವಂತನ ನಾಮಾವಳಿಗಳಲ್ಲಿ ಕಾಣಬಹುದು].
ಭಗವಂತನೇ ‘ಧಾತಾ’. ಆತ ಅನಾಧಿ ಅನಂತಕಾಲದಲ್ಲಿ ಈ ಜಗತ್ತಿನ ಧಾರಣೆ ಮತ್ತು ಪೋಷಣೆ ಮಾಡುವವ. ಚತುರ್ಮುಖ ಬ್ರಹ್ಮನೊಳಗಿದ್ದು, ಪಿತಾಮಹ ಶಬ್ದ ವಾಚ್ಯನಾಗಿರುವವ ಭಗವಂತ.
ಇಲ್ಲಿ ಕೃಷ್ಣ ಕೇವಲ ಮುಖ್ಯವಾದ ಸಂಬಂಧವನ್ನು ಮಾತ್ರ ಹೇಳಿದ. ಇದರರ್ಥ ಎಲ್ಲಾ ಸಂಬಂಧದಲ್ಲಿಯೂ ಆ ಭಾವವನ್ನು ಜಾಗೃತಗೊಳಿಸುವವ ಅಂತರ್ಯಾಮಿ ಭಗವಂತ ಎಂಬುದು. ಪ್ರತಿಯೊಂದು ಸಂಬಂಧದ ಹಿಂದೆ ಭಗವಂತನ ಸಂಬಂಧವಿದೆ. ಆದರೆ ನಮಗೆ ಆ ಕಲ್ಪನೆ ಇರುವುದಿಲ್ಲ. ಆಯಾ ಜೀವದ ಪ್ರಾರಾಬ್ಧ ಕರ್ಮಕ್ಕನುಗುಣವಾಗಿ ಸಂಬಂಧಗಳು. ಅಲ್ಲಿರುವ ಪ್ರೀತಿ, ಮಮತೆ, ಶತ್ರುತ್ವ ಎಲ್ಲವೂ ಭಗವಂತನ ಕಾರ್ಯಕ್ರಮ. ಇದನ್ನು ನಾವು ತಿಳಿದಾಗ ನಮ್ಮ ಜೀವನ ಸುಗಮ. ಒಬ್ಬರು ನಮ್ಮನ್ನು ದ್ವೇಷಿಸಿದಾಗ ಕುಗ್ಗುವ ಅಗತ್ಯವಾಗಲೀ, ಒಬ್ಬರು ನಮ್ಮನ್ನು ಪ್ರೀತಿಸಿದಾಗ ಹಿಗ್ಗುವ ಅಗತ್ಯವಾಗಲೀ ಇಲ್ಲ. ಎಲ್ಲವೂ ನಮ್ಮ ಜೀವಸ್ವಭಾವ ಮತ್ತು ಪ್ರರಾಬ್ಧಕರ್ಮಕ್ಕನುಗುಣವಾಗಿ ಭಗವಂತನ ಲೀಲೆ ಎನ್ನುವ ಎಚ್ಚರ ಇಲ್ಲಿ ಬಹಳ ಮುಖ್ಯ. ಇದಕ್ಕೆ ಒಂದು ಉತ್ತಮ ದೃಷ್ಟಾಂತ ಭಾಗವತದಲ್ಲಿ ಬರುವ ವೃತ್ರ ಮತ್ತು ಇಂದ್ರನ ಯುದ್ಧದ ಕಥೆ: ಇಂದ್ರನನ್ನು ಕೊಲ್ಲಲು ಹೊರಟ ವೃತ್ರನ ತಂದೆ ತ್ವಸ್ಥ ಎಂಬುವನು ಉಚ್ಚರಿಸಿದ ಮಂತ್ರದಲ್ಲಿ ಒಂದು ಸ್ವರ ತಪ್ಪಾಗಿದ್ದರಿಂದ-ವೃತ್ರನಿಂದ ಇಂದ್ರಹತ್ಯೆಯಾಗುವ ಬದಲು, ಇಂದ್ರನೇ ವೃತ್ರನನ್ನು ಕೊಲ್ಲುವಂತಾಯಿತು. ವೃತ್ರ ಮತ್ತು ಇಂದ್ರರ ಯುದ್ಧದಲ್ಲಿ ಇಂದ್ರ ಮಹಾಜ್ಞಾನಿಯಾದ ವೃತ್ರನನ್ನು ಕೊಲ್ಲಲು ಹಿಂದೇಟು ಹಾಕುತ್ತಾನೆ. ಆಗ ವೃತ್ರ ಹೇಳುತ್ತಾನೆ “ಸಂಕೋಚ ಪಡಬೇಡ ಇಂದ್ರ, ನನ್ನನ್ನು ಕೊಂದುಬಿಡು. ಏಕೆಂದರೆ ಈ ನಾಟಕದಲ್ಲಿ ಭಗವಂತ ನಿನಗೆ ಕೊಲ್ಲುವ ಪಾತ್ರವನ್ನೂ ಮತ್ತು ನನಗೆ ಸಾಯುವ ಪಾತ್ರವನ್ನೂ ಕೊಟ್ಟಿದ್ದಾನೆ. ನಾವು ಅದನ್ನು ಅಭಿನಯಿಸಬೇಕು ಅಷ್ಟೇ” ಎಂದು. ಈ ರೀತಿ ಎಚ್ಚರವಿದ್ದರೆ ನಮಗೆ ಇನ್ನೊಬ್ಬರು ಬೈದಾಗ ಅಥವಾ ದ್ವೇಶಿಸಿದಾಗ ಬೇಸರವಾಗುವುದಿಲ್ಲ. ಎಲ್ಲವೂ ಭಗವಂತನ ವ್ಯವಸ್ಥೆ ಎಂದು ತಿಳಿದಾಗ ಎಲ್ಲವೂ ಏಕರೂಪವಾಗಿ ಕಾಣುತ್ತದೆ. ದ್ವೇಷ ಮತ್ತು ಪ್ರೀತಿ ಸಹಜವಾಗಿ ಬಿಡುತ್ತದೆ. ಸಂಬಂಧ ಕಳಚಿದಾಗ ಕುಗ್ಗುವುದಾಗಲೀ, ಬೆಸೆದಾಗ ಹಿಗ್ಗುವುದಾಗಲೀ ಇರುವುದಿಲ್ಲ. ಇದು ಬಹಳ ಎತ್ತರದ ಸ್ಥಿತಿ.
ಒಟ್ಟಿನಲ್ಲಿ ಕೃಷ್ಣ ಇಲ್ಲಿ ಹೇಳಿರುವ ವಿಚಾರವೆಂದರೆ: ಎಲ್ಲಾ ಸಂಬಂಧದ ಹಿಂದೆ ಇರುವವನು ಆ ಭಗವಂತ. ಎಲ್ಲರ ಒಳಗೂ ‘ಎಲ್ಲರೂ’ ಆಗಿ ಆತ ತುಂಬಿದ್ದಾನೆ. ಒಂದೊಂದು ರೂಪದಲ್ಲಿ, ಅವರವರಲ್ಲಿ, ಆಯಾ ಕ್ರಿಯೆಗಳನ್ನು ಮಾಡಿಸುತ್ತಾನೆ. ಇದು ನಾವು ಅನುಸಂಧಾನ ಮಾಡಬೇಕಾದ ವಿಜ್ಞಾನ.
ಕ್ರಿಯೆ, ಸಂಬಂಧಗಳನ್ನು ವಿವರಿಸಿದ ಕೃಷ್ಣ ಈಗ ಜ್ಞಾನದ ಬಗ್ಗೆ ವಿವರಿಸುತ್ತಾನೆ.  ಕೃಷ್ಣ ಹೇಳುತ್ತಾನೆ “ವೇದ್ಯಂ ಪವಿತ್ರಮೋಂಕಾರ ಋಕ್ ಸಾಮ ಯಜುರೇವ ಚ” ಎಂದು. ನಾಮಾತ್ಮಕವಾದ ಈ ಪ್ರಪಂಚದ ಎಲ್ಲ ನಾಮಗಳ ಮೂಲ ‘ಓಂ’. ಕೃಷ್ಣ ಹೇಳುತ್ತಾನೆ: “ನಾನು ಓಂಕಾರ” ಎಂದು. ಪ್ರಪಂಚದಲ್ಲಿನ ಎಲ್ಲಾ ಶಬ್ದವೂ ಹುಟ್ಟಿದ್ದು ಓಂಕಾರದಿಂದ. ಆದ್ದರಿಂದ ಭಗವಂತ ಸರ್ವಶಬ್ದವಾಚ್ಯ. ಸಂಸ್ಕೃತದಲ್ಲಿನ ಎಲ್ಲಾ ಶಬ್ದಗಳೂ ಕೂಡಾ ಓಂಕಾರದಿಂದ ಆವಿರ್ಬಾವಗೊಂಡ ಶಬ್ದಗಳು. ಅದು ಹೇಗೆಂದು ನೋಡೋಣ:
ವೈದಿಕವಾಙ್ಮಯದ ಮೂಲಾಕ್ಷರವಾದ ಓಂಕಾರದಲ್ಲಿ ಎಂಟು ಅಕ್ಷರಗಳು: ಅಕಾರ, ಉಕಾರ, ಮಕಾರ, ನಾದ, ಬಿಂದು, ಕಲೆ, ಶಾಂತ, ಅತಿಶಾಂತ. ಇದರಿಂದ ವ್ಯಕ್ತವಾದದ್ದು ನಾರಾಯಣಾಷ್ಟಾಕ್ಷರ: ‘ಓಂ ನಮೋ ನಾರಾಯಣಾಯ’.  ಓಂಕಾರದ ಎಂಟು ಮೂಲವರ್ಣಗಳಿಂದ ಅಕ್ಷರ ಮಾಲಿಕೆಯ ಎಂಟು ವರ್ಗಗಳು ರೂಪುಗೊಂಡವು:
೧. ಸ್ವರಾಕ್ಷರಗಳು: ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ
೨. ಕ ವರ್ಗ: ಕ ಖ ಗ ಘ ಙ
೩. ಚ ವರ್ಗ: ಚ ಛ ಜ ಝ ಞ
೪. ಟ ವರ್ಗ : ಟ ಠ ಡ ಢ ಣ
೫. ತ ವರ್ಗ: ತ ಥ ದ ಧ ನ
೬. ಪ ವರ್ಗ: ಪ ಫ ಬ ಭ ಮ
೭.ಅಂತಸ್ಥಾಕ್ಷರಗಳು: ಯ ರ ಲ ವ
೮. ಕೊನೆಯ ಆರು ಅಕ್ಷರಗಳು: ಶ ಷ ಸ ಹ ಳ ಕ್ಷ
ಒಟ್ಟು 'ಅ' ದಿಂದ 'ಕ್ಷ' ತನಕ ಐವತ್ತೊಂದು ಅಕ್ಷರಗಳು(ಅ ದಿಂದ ಕ್ಷ ತನಕ ಆದ್ದರಿಂದ ಅ-ಕ್ಷ-ರ). ಇಡೀ ಪ್ರಪಂಚದಲ್ಲಿರುವ ಎಲ್ಲಾ ಶಬ್ದಗಳೂ ಈ ಅಕ್ಷರಗಳ ಸಂಯೋಜನೆ. ಎಲ್ಲಾ ಶಬ್ದಗಳೂ ಓಂಕಾರದಿಂದ ಹುಟ್ಟಿರುವುದರಿಂದ ಓಂಕಾರ ವಾಚ್ಯ ಭಗವಂತ ಸರ್ವ ಶಬ್ದವಾಚ್ಯ. ಆದ್ದರಿಂದ ಎಲ್ಲಾ ಶಬ್ದಗಳ ಮೂಲಭೂತ ಪವಿತ್ರ ಅರ್ಥ ಭಗವಂತನನ್ನು ಹೇಳುತ್ತದೆ.  ದೋಷವನ್ನು ಹೇಳುವ ಪದಗಳೂ ಕೂಡಾ ಭಗವಂತನಲ್ಲಿ ಕೇವಲ ಪವಿತ್ರ ಅರ್ಥವನ್ನು ಮಾತ್ರ ಹೇಳುತ್ತವೆ. ಉದಾಹರಣೆಗೆ ‘ದುಃಖಿ’. ಇದು ಭಗವಂತನಲ್ಲಿ ಹೇಳುವಾಗ ‘ದುಃಖದ ಒಡೆಯ ಎನ್ನುವ ಅರ್ಥವನ್ನು ಕೊಡುತ್ತದೆ.  
ಐವತ್ತೊಂದು ಅಕ್ಷರಗಳಿಂದ(ಮಾತೃಕೆಗಳಿಂದ) ವಾಚ್ಯನಾದ ಭಗವಂತನ ರೂಪಗಳೂ ಐವತ್ತೊಂದು:
೧. ಅಜ, ೨. ಆನಂದ, ೩. ಇಂದ್ರ,  ೩. ಈಶ, ೪. ಉಗ್ರ, ೫. ಊರ್ಜ, ೭. ಋತಂಭರ, ೮. ೠಘ, ೯. ಲ್ ಶ, ೧೦. ಲ್ೕಜಿ, ೧೧. ಏಕಾತ್ಮ , ೧೨. ಐರ, ೧೩. ಓಜೋಭೃತ್, ೧೪. ಔರಸ, ೧೫. ಅಂತ, ೧೬. ಅರ್ಧಗರ್ಭ, ೧೭. ಕಪಿಲ, ೧೮. ಖಪತಿ, ೧೯. ಗರುಡಾಸನ, ೨೦. ಘರ್ಮ, ೨೧. ಙಸಾರ ೨೨. ಚಾರ್ವಾಂಗ, ೨೩. ಛಂದೋಗಮ್ಯ, ೨೪. ಜನಾರ್ದನ, ೨೫. ಝೂಟಿತಾರಿ, ೨೬. ಞಮ, ೨೭.ಟಂಕಿ, ೨೮.ಠಕಲ, ೨೯. ಡರಕ, ೩೦.ಢರಿ, ೩೧. ಣಾತ್ಮ, ೩೨. ತಾರ, ೩೩. ಥಭ, ೩೪. ದಂಡಿ, ೩೫. ಧನ್ವಿ, ೩೬. ನಮ್ಯ, ೩೭. ಪರ, ೩೮. ಫಲಿ, ೩೯. ಬಲಿ, ೪೦. ಭಗ, ೪೧. ಮನು, ೪೨. ಯಜ್ಞ, ೪೩. ರಾಮ, ೪೪. ಲಕ್ಷ್ಮೀಪತಿ, ೪೫. ವರ, ೪೬. ಶಾಂತಸಂವಿತ್, ೪೭. ಷಡ್ಗುಣ, ೪೮. ಸಾರಾತ್ಮ, ೪೯. ಹಂಸ, ೫೦. ಳಾಳುಕ, ೫೧. ನೃಸಿಂಹ[ನೃಹರ್ಯಕ್ಷ].
ಓಂಕಾರದ ಮೂಲ ಮೂರಕ್ಷರ ಅ-ಉ-ಮ ಪದ್ಯ-ಗದ್ಯ-ಗಾನ ರೂಪದ ಮೂರು ವೇದವನ್ನು ಮತ್ತು ವೇದ ಪ್ರತಿಪಾದ್ಯ ಭಗವಂತನನ್ನು ಹೇಳುತ್ತವೆ. ಕಾರ ಋಗ್ವೇದಕ್ಕೆ, ‘ಕಾರ ಯಜುರ್ವೇದಕ್ಕೆ ಮತ್ತು ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾರಂ ರತ್ನ ಧಾತಮಂ |..."  ಎಂದು ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥ಎಂದು ಕಾರದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದುವರಿದು ಯಜುರ್ವೇದ ಇಷೇ ತ್ವೋರ್ಜೆ ತ್ವಾ …” ಎಂದು ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃಎಂದು ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ಕಾರ ಮತ್ತು ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ(abbreviation)ರೂಪ. ಇಲ್ಲಿಂದ ಮುಂದೆ ಸಾಮವೇದ. ಸಾಮವೇದ ಅಗ್ನ ಆ ಯಾಹಿ ………” ಎಂದು ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತುಎಂದು ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ ಕಾರ ಬಂದಿಲ್ಲ. ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ  ಓಂಕಾರ ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ. ಈ ಕಾರಣದಿಂದ ಓಂಕಾರ ಭಗವಂತನನ್ನು ನಾವು ಕರೆಯಲು ಬಳಸುವ ಅವನ ವಿಶೇಷ(Exclusive)ನಾಮ.
ಓಂಕಾರ ವಿಸ್ತೃತವಾದಾಗ ವ್ಯಾಹೃತಿ, ವ್ಯಾಹೃತಿ ವಿಸ್ತಾರವಾಗಿ ಗಾಯತ್ರಿ, ಗಾಯತ್ರಿ ವಿಸ್ತಾರವಾಗಿ ಕುರುಡ ಸೂಕ್ತನಂತರ ಮೂರು ವೇದಗಳು, ಅಲ್ಲಿಂದ ಸಮಸ್ತ ವೇದಗಳು. ಹೀಗೆ ಪ್ರಣವದಲ್ಲಿ, ವ್ಯಾಹೃತಿಯಲ್ಲಿ, ಪುರುಷ ಸೂಕ್ತದಲ್ಲಿ, ಸಮಸ್ತವೇದಗಳಲ್ಲಿ ಭಗವಂತ ನೆಲೆಸಿದ್ದಾನೆ. ಓಂಕಾರದ ಬಗ್ಗೆ ಅಧ್ಯಾಯ ಏಳರಲ್ಲಿ(ಶ್ಲೋಕ -೦೮) ವಿಶೇಷವಾಗಿ ವಿವರಿಸಲಾಗಿದೆ. 
ವೇದದ ಶಬ್ದಗಳಿಂದಲೇ ಹುಟ್ಟಿ ಬಂದ ಪ್ರಪಂಚದ ಎಲ್ಲಾ ಶಬ್ದದಲ್ಲೂ ಎಲ್ಲಾ ಲೌಕಿಕ ನಾದದಲ್ಲೂ  ತುಂಬಿದ ಭಗವಂತ, ಆಕಾಶದಲ್ಲಿ ಅನಂತ ಶಬ್ದಗಳನ್ನೂ, ಅನಂತ ನಾದಗಳನ್ನು ಸೃಷ್ಟಿ ಮಾಡಿದ. ನಮಗೆ ಶಬ್ದದಿಂದ ಅನಂತ ಅನುಭವವನ್ನು ಕೊಟ್ಟು, ಆ ಶಬ್ದವನ್ನು ಗ್ರಹಿಸುವ ಮತ್ತು ಗ್ರಹಿಸಿ ಪುನರುಚ್ಛರಿಸುವ ವಿಶೇಷ ಶಕ್ತಿಯನ್ನು ಕರುಣಿಸಿದ. ಜ್ಞಾನದ ಮೂಲಕ ಈ ಶಬ್ದ ನಾಮಕ ಭಗವಂತನನ್ನು ತಿಳಿಯುವ ವಿಶೇಷ ಶಕ್ತಿ ಮಾನವನಿಗೆ ಭಗವಂತನ ವಿಶೇಷ ಕೊಡುಗೆ.
ಭಗವಂತ ‘ಋಕ್’: ಯಾವುದರಿಂದ ನಾವು ಭಗವಂತನನ್ನು ಅರ್ಚನೆ ಮಾಡುತ್ತೇವೆ ಅದು ಋಕ್. ಅದು ಮಂತ್ರಗಳು. ಯಾರು ಅರ್ಚಿಸಲ್ಪಡುತ್ತಾನೋ ಅವನು ಋಕ್ ನಾಮಕ ಭಗವಂತ. ಎಲ್ಲಾ ಮಂತ್ರಗಳಿಂದ ಅರ್ಚಿಸಲ್ಪಡುವವ-ಸ್ತುತಿಗೆ ಪಾತ್ರನಾದ ಭಗವಂತ ‘ಋಕ್’
ಭಗವಂತ ‘ಸಾಮಃ’: ಎಲ್ಲವನ್ನು ಸಮೀಕರಿಸಿದವನು. ತನ್ನ ಎಲ್ಲ ರೂಪದಲ್ಲಿ ಜ್ಞಾನಾನಂದಾದಿ ಗುಣಗಳಿಂದ ಸಮನಾದ್ದರಿಂದ ಮತ್ತು ಅವರವರ ಯೋಗ್ಯತೆಗೆ ಸಮನಾಗಿ ಜೀವನ ಕೊಡುವ ಭಗವಂತ ‘ಸಾಮಃ’.
ಭಗವಂತ ‘ಯಜುಸ್’: ಎಲ್ಲ ಯಾಗಗಳಿಂದ ಹೊಮಿಸಲ್ಪಡುವ, ವೇದಗಳಲ್ಲಿ ಸನ್ನಿಹಿತನಾಗಿರುವ ಸರ್ವಶಬ್ದವಾಚ್ಯ ಭಗವಂತ ‘ಯಜುಸ್’.

Bhagavad Geeta Kannada Chapter-09 Shloka 16


ಭಗವಂತನನ್ನು ಹೇಗೆ ಅನುಸಂಧಾನ ಮಾಡಬೇಕು, ಹೇಗೆ ಮಾಡಬಾರದು ಎನ್ನುವ ಅರಿವನ್ನು ಕೊಟ್ಟ ಕೃಷ್ಣ, ಮುಂದೆ ಭಗವಂತನ ವಿಭೂತಿಯನ್ನು ಬೇರೆ ಬೇರೆ ಪ್ರತೀಕಗಳಲ್ಲಿ ಹೇಗೆ ಅನುಸಂಧಾನ ಮಾಡಬೇಕು ಎನ್ನುವುದನ್ನು ವಿವರಿಸುತ್ತಾನೆ. ಇಡೀ ವಿಶ್ವದ ಅಣು ಕಣಗಳಲ್ಲಿ ತುಂಬಿರುವ ಭಗವಂತನ ಅನುಸಂಧಾನ ಹಾಗು ಅದರ ವಿಶಿಷ್ಟ ಉಪಾಸನೆಯ ವಿವರವನ್ನು ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ವಿವರಿಸಿದ್ದಾನೆ. ಬನ್ನಿ ಈ ಅಪೂರ್ವ ವಿಶಿಷ್ಟ ಜ್ಞಾನವನ್ನು ಭಗವಂತನಿಂದಲೇ ಕೇಳಿ ತಿಳಿದು ಕೃತಾರ್ಥರಾಗೋಣ.  

ಅಹಂ ಕ್ರತುರಹಂ ಯಜ್ಞಃ ಸ್ವಧಾSಹಮಹಮೌಷಧಮ್
ಮಂತ್ರೋSಹಮಹಮೇವಾSಜ್ಯಮಹಮಗ್ನಿರಹಂ ಹುತಮ್ ೧೬

ಅಹಮ್  ಕ್ರತುಃ ಅಮ್  ಯಜ್ಞಃ ಸ್ವಧಾಮ್ ಔಷಧಮ್
ಮಂತ್ರಃ ಅಮ್ ಅಹಮ್ ಏವ ಆಜ್ಯಮ್ ಅಹಮ್ ಅಗ್ನಿಃ ಅಹಮ್  ಹುತಮ್- ನನ್ನಿಂದ ಯಾಗ. [ನನ್ನ ಕ್ರಿಯೆ ನನ್ನ ಸ್ವರೂಪವಾದ್ದರಿಂದ ನಾನು ‘ಕ್ರತು’]. ನನ್ನಿಂದ ಹವನ ಕ್ರಿಯೆ.[ಎಲ್ಲ ಬಲ್ಲವನಾದ್ದರಿಂದ ‘ಯಜ್ಞ’]. ಪಿತೃಗಳ ಅನ್ನ ನನ್ನಿಂದ [ನನಗೆ ನಾನೆ ಆಸರೆಯಾದ್ದರಿಂದ ‘ಸ್ವಧಾ’]. ನನ್ನಿಂದ ಮನುಷ್ಯರ ಆಹಾರ[ಬೆಂದವರಿಗೆ ಆಸರೆಯಾದ್ದರಿಂದ ‘ಔಷಧ’]. ಮಂತ್ರ ನನ್ನಿಂದ[ತಿಳಿವಿತ್ತು ಸಲಹುದರಿಂದ ‘ಮಂತ್ರ’]. ನನ್ನಿಂದಲೆ ತುಪ್ಪ [ಎಲ್ಲಕ್ಕಿಂತ ಹಿರಿಯನಾದ್ದರಿಂದ ‘ಆಜ್ಯ’]. ನನ್ನಿಂದ ಬೆಂಕಿ.[ನಾನೆ ಚಲಿಸದ ವಿಶ್ವಕ್ಕೆ ಚಲನೆ ನೀಡುವುದರಿಂದ ‘ಅಗ್ನಿ’]. ನನ್ನಿಂದ ಹೋಮದ ಹವಿ[ಭಕ್ತರು ಕರೆವುದರಿಂದ ನಾನೆ ‘ಹುತ’].

ಭಗವಂತನ ಉಪಾಸನೆಗೆ ಮೂರು ಪ್ರತೀಕವನ್ನು ಶಾಸ್ತ್ರಕಾರರು ಹೇಳಿದ್ದಾರೆ. ವೇದದಲ್ಲಿ ಆ ಮೂರು ಪ್ರತೀಕಗಳಿಂದ ಉಪಾಸನೆಯೇ ನಮಗೆ ಎಲ್ಲಾ ಕಡೆ ಸಿಗುವುದು. ಅವುಗಳೆಂದರೆ ಅಗ್ನಿಪ್ರತೀಕ, ವಾಯುಪ್ರತೀಕ ಮತ್ತು ಆದಿತ್ಯಪ್ರತೀಕ. ಭೂಸ್ತರದಲ್ಲಿ ಭಗವಂತನ ಉಪಾಸನೆ ಅಗ್ನಿಪ್ರತೀಕದಲ್ಲಿ. ಅಂತರಿಕ್ಷ  ಸ್ತರದಲ್ಲಿ ಆದಿತ್ಯ ಮುಖದಲ್ಲಿ ಮತ್ತು ಅಂತರಂಗದಲ್ಲಿ ಭಗವಂತನ ಉಪಾಸನೆ ವಾಯುವಿನ ಪ್ರತೀಕದಲ್ಲಿ. ಭೂಮಿಯಲ್ಲಿ ಸಾಮಾನ್ಯವಾಗಿ ಮನುಷ್ಯರು ಜ್ಞಾನಮಾರ್ಗಕ್ಕಿಂತ ಹೆಚ್ಚು ಕರ್ಮ ಮಾರ್ಗಕ್ಕೆ ಅಂಟಿಕೊಂಡವರು. ಇಂಥವರಲ್ಲಿ ಜ್ಞಾನಕ್ಕಿಂತ ಕರ್ಮಕ್ಕೆ ಒತ್ತು ಹೆಚ್ಚು. ಕೆಲವರು ಬೆಳಿಗ್ಗೆಯಿಂದ ಸಂಜೆ ತನಕ ಪೂಜೆ ಮಾಡುತ್ತಾರೆ, ಆದರೆ ತಾವು ಮಾಡುವ ಅನುಷ್ಠಾನದ ಜ್ಞಾನವೇ ಅವರಿಗಿರುವುದಿಲ್ಲ. ಇವರಿಗೆ ಜ್ಞಾನ ಸಂಪಾದನೆ  ದ್ವಿತೀಯಕ(Secondary). ಇದು ಮನುಷ್ಯನ ದೌರ್ಬಲ್ಯ. ನಮಗೆ ನಮ್ಮ ಮಡಿವಂತಿಕೆಯಲ್ಲಿರುವಷ್ಟು ಒತ್ತು ಜ್ಞಾನದಲ್ಲಿರುವುದಿಲ್ಲ! ತಿಳಿಯದ ಬಾಹ್ಯಾನುಷ್ಠಾನದಲ್ಲಿ ಕಾಲಹರಣ ಮಾಡುವುದಕ್ಕಿಂತ ಪಾಠ ಪ್ರವಚನದಿಂದ ಸ್ವಲ್ಪಮಟ್ಟಿನ ಜ್ಞಾನ ಗಳಿಸಿಕೊಳ್ಳುವುದು ದೇವರು ಮೆಚ್ಚುವ ಮಹಾ ಪೂಜೆ ಎನಿಸುತ್ತದೆ.
ಕರ್ಮ ಪ್ರಧಾನವಾಗಿರುವವರಿಗೆ ಭಗವಂತನ ಅನುಷ್ಠಾನ ಹೇಗಿರಬೇಕು ಎನ್ನುವುದನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ.  ಕೃಷ್ಣ ಹೇಳುತ್ತಾನೆ: “ಅಹಮ್  ಕ್ರತುಃ ಅಮ್  ಯಜ್ಞಃ” ಎಂದು.  ಭಗವಂತನ ಆರಾದನೆಗೊಸ್ಕರ ಮಾಡತಕ್ಕಂತಹ ಅಗ್ನಿ ಆರಾದನೆಯ ಪ್ರಕ್ರಿಯೆ ‘ಕ್ರತು’. ಇಲ್ಲಿ ಯಜ್ಞದ ಮೂಲಕ ಭಗವಂತನಿಗೆ ಆಹುತಿ ಕೊಡುವಾಗ ಈ ರೀತಿ ಹೇಳಿ ಆಹುತಿ ಕೊಡುತ್ತೇವೆ: ಅಗ್ನಯೇ ಸ್ವಾಹಾ-ಅಗ್ನಯ ಇದಂ ನ ಮಮ; ಪ್ರಜಾಪತೆಯೇ ಸ್ವಾಹ ಪ್ರಜಾಪತಯ ಇದಂ ನ ಮಮ; ಇಂದ್ರಾಯ ಸ್ವಾಹಾ-ಇಂದ್ರಾಯ ಇದಂ ನ ಮಮ; ಸೂರ್ಯಾಯ ಸ್ವಾಹಾ-ಸೂರ್ಯಾಯ ಇದಂ ನ ಮಮ; ವಾಯವೇ ಸ್ವಾಹಾ-ವಾಯವ ಇದಂ ನ ಮಮ; ವರುಣಾಯ ಸ್ವಾಹಾ-ವರುಣಾಯ ಇದಂ ನ ಮಮ;..ಇತ್ಯಾದಿ.  ಹೀಗೆ ಬೇರೆ ಬೇರೆ ಪ್ರತೀಕದಲ್ಲಿ ಭಗವಂತನಿಗೆ ಆಹುತಿ ಕೊಡುವುದು ಯಜ್ಞ. ಇಲ್ಲಿ ಕೃಷ್ಣ ಹೇಳುತ್ತಾನೆ “ನೀವು ಮಾಡುವ ಕ್ರತುವಿನ ನಿಯಾಮಕ ನಾನು" ಎಂದು. ನಾವು ಯಾವ ಪ್ರತೀಕದಲ್ಲಿ ಪೂಜೆ ಮಾಡಿದರೂ ಅದು ಸಲ್ಲುವುದು ಆ ದೇವತೆಯ ಅಂತರ್ಯಾಮಿ ಭಗವಂತನಿಗೆ. ಉದಾಹರಣೆಗೆ ಗಣಹೋಮ, ಚಂಡಿಕಾಹೋಮ, ನವಗ್ರಹಹೋಮ ಇತ್ಯಾದಿ.  ಇಲ್ಲಿ ನಾವು ಯಾವ ದೇವತೆಯ ಪ್ರತೀಕದಲ್ಲಿ ಯಜ್ಞ ಮಾಡಿದರೂ ಕೂಡಾ ಆ ಯಜ್ಞ ಭಗವಂತನಿಗೆ ಸಲ್ಲುತ್ತದೆ ಎನ್ನುವ ಅನುಸಂಧಾನ ನಮ್ಮಲ್ಲಿರಬೇಕು. ಭಗವಂತ ಅನೇಕ ಶಕ್ತಿ ರೂಪದಲ್ಲಿ ಅಭಿವ್ಯಕ್ತನಾದರೂ ಕೂಡ, ಸರ್ವ ನಿಯಾಮಕ ಭಗವಂತ ಒಬ್ಬನೆ. [ನಮಗೆ ಬಂದಿರುವ ಆಪತ್ತಿನ ನಿವಾರಣೆಗಾಗಿ ಜೋತಿಷಿಗಳು ಭಗವಂತನ ಆಯಾ ಶಕ್ತಿ ಪ್ರತೀಕವನ್ನು ಪೂಜಿಸುವಂತೆ ಹೇಳುತ್ತಾರೆ ಹೊರತು, ಭಗವಂತ ಅನೇಕ ಅಲ್ಲ]. ದೇವತೆಯ ಒಳಗಿರುವ ಭಗವಂತ ಪ್ರೀತನಾದಾಗ ಮಾತ್ರ ಅದು ಆ ದೇವತೆಗೂ ಮತ್ತು ಭಗವಂತನಿಗೂ ಸಂದಂತೆ. ಆದ್ದರಿಂದ ಒಂದೊಂದು ದಿನ ಒಂದೊಂದು ದೇವತೆಗೆ ಪ್ರೀತಿಯಾಗುವುದಕ್ಕೊಸ್ಕರ ಕರ್ಮ ಮಾಡುವುದಲ್ಲ. ಸರ್ವಾಂತರ್ಯಾಮಿ ಭಗವಂತನಿಗೆ ನಮ್ಮ ಪೂಜೆ ಮೀಸಲಾಗಿರಬೇಕು.
ನಮ್ಮ ದೇಹದೊಳಗೆ ತತ್ವಾಭಿಮಾನಿ ದೇವತೆಗಳಿದ್ದಾರೆ. ಅವರನ್ನು ನಿಯಮನ ಮಾಡಿಕೊಂಡು ಆ ಭಗವಂತನಿದ್ದಾನೆ. ಈ ತತ್ವಾಭಿಮಾನಿ ದೇವತೆಗಳು ಭಗವಂತನ ಅನುಗ್ರಹದಿಂದ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಲಿ ಎಂದು ಅವರ ಅಂತರ್ಯಾಮಿಯಾದ ಭಗವಂತನನ್ನು ಆರಾದಿಸುವುದು ಯಜ್ಞ.
ನಾವು ನಿತ್ಯ ಪೀಠದಲ್ಲಿ ಮಾಡುವ ಪೂಜೆ ತತ್ವಾಭಿಮಾನಿ ದೇವತೆಗಳನ್ನು ಕುರಿತು ಮಾಡುವ ಯಜ್ಞವಾದರೆ, ಶ್ರಾದ್ಧ- ಪಿತೃದೇವತೆಗಳನ್ನು ಕುರಿತು ಮಾಡುವ ಯಜ್ಞ. ನಮ್ಮಲ್ಲಿ ಅನೇಕರಿಗೆ ಒಂದು ತಪ್ಪು ಕಲ್ಪನೆ ಇದೆ. ಶ್ರಾದ್ಧ ‘ದೇಹ ತ್ಯಾಗ ಮಾಡಿದ ಜೀವಕ್ಕೆ’ ಎಂದು. ಆದರೆ ಇದು ಸರಿಯಲ್ಲ. ಶ್ರಾದ್ಧ ಸ್ಥೂಲ ದೇಹವನ್ನು ತ್ಯಜಿಸಿ ಸೂಕ್ಷ್ಮ ಶರೀರದಲ್ಲಿರುವ ಜೀವವನ್ನು ನಿಯಂತ್ರಿಸುವ ‘ಪಿತೃದೇವತೆಗಳಿಗೆ’ ಮಾಡುವಂತದ್ದು. ವಿಶೇಷವಾಗಿ ಹತ್ತು ಮಂದಿ ವಿಶ್ವೇದೇವತೆಗಳು(ಕ್ರತು,ದಕ್ಷ, ವಾಸು, ಸತ್ಯ, ಕಾಮ, ಕಾಲ,ಧುರಿ, ಲೋಚನ,ಪುರೂರವ ಆರ್ದ್ರವ); ಇವರಲ್ಲಿ ಪುರೂರವ ಮತ್ತು ಆರ್ದ್ರವರದ್ದು ಪಿತೃಗಣದ ನಿಯಮನ ಮಾಡತಕ್ಕಂತಹ ಖಾತೆ(Portfolio). ಪಿತೃದೇವತೆಗಳ ಗಣ ಹತ್ತು(ನೂರು ಮಂದಿ ಪಿತೃಗಳಲ್ಲಿ ಇವರು ಪ್ರಧಾನರು): ಯಮ, ಸೋಮ, ಕವ್ಯವಾಹ(ಇವರು ಮೂವರು ಪಿತೃಪತಿಗಳು), ಸೋಮಸದರು, ಅಗ್ನಿಷ್ವಾತ್ತರು, ಬಹಿರ್ಷದರು, ಸೋಮಪರು, ಹವಿರ್ಭುಜರು, ಅಜ್ಯಪರು, ಸುಕಾಲಿಗಳು. ನಾವು ಪಿಂಡ ಹಾಕುವುದು ಜೀವದ ಹಸಿವು ನೀಗಲಿಕ್ಕೆ ಅಲ್ಲ. ನಮ್ಮ ಹಿರಿಯರು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವುದು ಅವರು ಮಾಡಿದ ಕರ್ಮಫಲದಿಂದ ಹೊರತು ನಾವು ಹಾಕಿದ ಶ್ರಾದ್ಧದಿಂದಲ್ಲ. ಶ್ರಾದ್ಧಾ ಏಕೆಂದರೆ ಪಿತೃದೇವತೆಗಳ ಸ್ವಾದೀನದಲ್ಲಿರುವ ಜೀವ ಯಾವುದೋ ದುರಿತದ ಪ್ರಭಾವದಿಂದ ದಾರಿಯಲ್ಲಿ ತಡೆಯನ್ನು  (Road blockers) ಎದುರಿಸಬೇಕಾಬಹುದು. ಆ ಸಮಯದಲ್ಲಿ ಅದನ್ನು ನಿವಾರಣೆ ಮಾಡುವ ಕರ್ಮಾನುಷ್ಠಾನ ಆ ಸೂಕ್ಷ್ಮ ಶರೀರದಲ್ಲಿ ಇರುವುದಿಲ್ಲ. ಅದಕ್ಕೋಸ್ಕರ ಅಂತಹ ಪ್ರತಿಬಂಧಕಗಳಿಂದ ಅವರನ್ನು ಪಾರು ಮಾಡಿ ಮುಂದೆ ಸಾಗಲು ನೆರವು ಕೋರಿ ಮಾಡುವ  ಪಿತೃದೇವತೆಗಳ ಪೂಜೆಯೇ ಶ್ರಾದ್ಧ. ಒಟ್ಟಾರೆ ಇದು ಹಿರಿಯರು ಸತ್ತ ದಿನದ ನೆನಪು, ಅವರಿಗೆ ಕೃತಜ್ಞತೆ ಮತ್ತು ಪಿತೃದೇವತೆಗಳ ಪೂಜೆ.
ಕೃಷ್ಣ ಹೇಳುತ್ತಾನೆ “ಸ್ವಧಾಮ್” ಎಂದು. ಮಂತ್ರಗಳು ವಿಳಾಸದಂತೆ, ‘ಸ್ವಾಹ’ ತತ್ವಾಭಿಮಾನಿ ದೇವತೆಗಳಿಗಾದರೆ ‘ಸ್ವಧಾ’ ಪಿತೃದೇವತೆಗಳಿಗೆ. ನನ್ನ ಮುಖೇನವೇ ಶ್ರಾದ್ಧ ಪಿತೃದೇವತೆಗಳಿಗೆ ಸಲ್ಲುವುದು ಎನ್ನುತ್ತಾನೆ ಕೃಷ್ಣ.
ತತ್ವಾಭಿಮಾನಿದೇವತೆಗಳು ಮತ್ತು  ಪಿತೃದೇವತೆಗಳ ನಂತರ ಮನುಷ್ಯರು. ಮನುಷ್ಯರ ಮುಖ್ಯವಾದ ಆಹಾರ ‘ಓಷಧಿ’. ಫಲ ಕೊಟ್ಟು ಸಾಯುವ ಗಿಡವನ್ನು ಸಂಸ್ಕೃತದಲ್ಲಿ ‘ಓಷಧಿ’ ಎನ್ನುತ್ತಾರೆ. ಆ ಗಿಡದ ಪ್ರಸವವೇ ಅದರ ಸಾವು. ಮನುಷ್ಯ ತಿನ್ನುವ ದವಸದಾನ್ಯ ಎಲ್ಲವೂ ಓಷಧಿಗಳು. ಇಂತಹ ಓಷಧಿಗಳ ಸಮುದಾಯವೇ ಔಷಧಿ. ಕೃಷ್ಣ ಹೇಳುತ್ತಾನೆ “ಅಮ್  ಔಷಧಮ್” ಎಂದು. ನಾವು ತಿನ್ನುವ ದವಸ ಧಾನ್ಯ ಸಲ್ಲುವುದು ಕೂಡಾ ವೈಶ್ವಾನರನಾಗಿ ಒಳಗೆ ಕುಳಿತಿರುವ ಭಗವಂತನಿಗೆ. ಔಷಧ ಕೊಡತಕ್ಕವ, ಅದರಿಂದ ರೋಗ ನಿವಾರಿಸುವವ, ಹಸಿವು ನಿವಾರಿಸಿ ರಕ್ಷಣೆ ಮಾಡುವವ ಭಗವಂತ.
ನಾವು ಬೇರೆ ಬೇರೆ ಮಂತ್ರಗಳಿಂದ ಆಹುತಿಯನ್ನು ಕೊಡುತ್ತೇವೆ. ಈ ಹಿಂದೆ ಹೇಳಿದಂತೆ ಮಂತ್ರ ವಿಳಾಸವಿದ್ದಂತೆ. ಕೊಡುವ ಆಹುತಿ ಎಲ್ಲವೂ ಭಗವಂತನಿಗೆ ಸೇರುವುದಾದರೆ ಬೇರೆಬೇರೆ ವಿಳಾಸವೇಕೆ? ಕೃಷ್ಣ ಹೇಳಿದ “ಬೇರೆ ಬೇರೆ ವಿಳಾಸದಲ್ಲಿರುವ ನನಗೆ” ಎಂದು!   ಭಗವಂತ ಏಕ ಆದರೆ ಆತನ ರೂಪ ಅನೇಕ. ನಾವು ಯಾವ ಮಂತ್ರದಿಂದ ಕಳುಹಿಸಿದರೂ ಕೂಡಾ-ಅದು ಸೇರುವುದು ಎಲ್ಲಾ ಮಂತ್ರದಿಂದ ವಾಚ್ಯನಾದ, ಸರ್ವಶಬ್ದವಾಚ್ಯ ಭಗವಂತನನ್ನು. ಹೀಗೆ ಬೇರೆ ಬೇರೆ ಶಕ್ತಿ ರೂಪವನ್ನು ಬೇರೆ ಬೇರೆ ದೇವತಾ ಪ್ರತೀಕದಲ್ಲಿ ಪೂಜಿಸಿದರೂ ಕೂಡಾ ಪ್ರತಿಯೊಂದು ನಾಮವೂ ಸಹ ಅಂತತಃ ಭಗವಂತನನ್ನೇ ಹೇಳುತ್ತದೆ. ಎಲ್ಲವುದರ ಸಾರವೂ ಭಗವಂತ. ಇದಕ್ಕೆ ಉತ್ತಮ ಉದಾಹರಣೆ ತೆಂಗಿನಕಾಯಿ. ಸಿಪ್ಪೆ ಸಹಿತವಾಗಿರುವ ತೆಂಗಿನಕಾಯಿ ಉರಿಯುವ ಬೆಂಕಿಯಂತೆ; ಸಿಪ್ಪೆಯೊಳಗಿನ ಕಾಯಿ ಬೆಂಕಿಯ ಅಂತರ್ಯಾಮಿ ಅಗ್ನಿ ದೇವತೆಯಂತೆ;  ಚಿಪ್ಪಿನ ಒಳಗಿನ ಕೊಬ್ಬರಿ   ಅಗ್ನಿ ದೇವತೆಯೊಳಗಿನ ಭಗವಂತನಂತೆ. ಇಲ್ಲಿ ನಾವು ಎಲ್ಲವನ್ನೂ ಕರೆಯುವುದು ತೆಂಗಿನಕಾಯಿ ಅಥವಾ ಅಗ್ನಿ ಎಂತಲೆ. ಹೇಗೆ ನಿಜವಾದ ತೆಂಗಿನಕಾಯಿ ಒಳಗಿನ ಸಾರವೋ  ಹಾಗೇ ನಿಜವಾದ ಅಗ್ನಿ ಅಂತತಃ ಅಂತರ್ಯಾಮಿ ಭಗವಂತ. ಈ ಶ್ಲೋಕದಲ್ಲಿ ಕೃಷ್ಣ ಇದನ್ನೇ   “ಅಹಮ್ ಅಗ್ನಿಃ” ಎಂದಿರುವುದು.
ಕೃಷ್ಣ ನಾವು ಆಹುತಿಯಾಗಿ ಕೊಡುವ ಒಂದು ಪ್ರಮುಖ ವಸ್ತುವನ್ನು ಉದಾಹರಣೆಯಾಗಿ ತೆಗೆದುಕೊಂಡು ಹೇಳುತ್ತಾನೆ “ಅಹಮ್ ಏವ ಆಜ್ಯಮ್” ಎಂದು. ಆಜ್ಯ ಎಂದರೆ ತುಪ್ಪ. ಆಜ್ಯದಲ್ಲಿ ದೇವತೆಗಳನ್ನು ತಣಿಸುವ ವಿಶಿಷ್ಟ ಶಕ್ತಿ ಇದೆ. ಆಜ್ಯದಲ್ಲಿ ವಿಶಿಷ್ಟ ಶಕ್ತಿಯಾಗಿ ನಾನಿದ್ದೇನೆ ಎನ್ನುವ ಕೃಷ್ಣ ನಾನೇ ಹೋಮದ ಹವಿ (ಅಹಮ್  ಹುತಮ್) ಎನ್ನುತ್ತಾನೆ.
ಹವಿಸ್ಸು ಎಂದರೆ ಭಗವಂತನಿಗೆ ಅರ್ಪಿಸುವ ಹೋಮ ದ್ರವ್ಯ. ಆ ಹವಿಸ್ಸಿನಲ್ಲಿ ವಿಶೇಷ ಶಕ್ತಿ ಇರುವುದು ಆ ಭಗವಂತನಿಂದ. ನಾವು ಅರ್ಪಿಸುವ ಹವಿಸ್ಸು ಎಂದೂ ವ್ಯರ್ಥವಲ್ಲ. ಅಗ್ನಿಗೆ ಅರ್ಪಿಸಿದ ಹವಿಸ್ಸು ಅಗ್ನಿಯಿಂದ ಹೊರ ಹೊಮ್ಮುವ ಏಳು ಬಣ್ಣಗಳ ಮುಖೇನ ವಾತಾವರಣದಲ್ಲಿನ ಸೂರ್ಯ ಕಿರಣದೊಂದಿಗೆ ಸೇರಿ ಸಮಾಜಕ್ಕೆ ಫಲವನ್ನು ಕೊಡುತ್ತದೆ. ಹವಿರ್ಭಾಗವನ್ನು ಸ್ವೀಕರಿಸುವ ಭಗವಂತ ಹವಿರ್ಹರಿಃ . ನಾವು ಯಾವುದೇ ನಾಮವನ್ನುಚ್ಚರಿಸಿ ಹವಿಸ್ಸನ್ನು ಅರ್ಪಿಸಿದರೂ ಅದು ಸೇರುವುದು ಸರ್ವಶಬ್ದ ವಾಚ್ಯನಾದ ಭಗವಂತನನ್ನು. "ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ". ಭಗವಂತ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. ಆದ್ದರಿಂದ ಯಾವ ಶಬ್ದವನ್ನು ಹೇಳಿದರೂ ಅದು ಸೇರುವುದು ಅವನನ್ನೇ. ಹೀಗೆ ಹವಿಸ್ಸನ್ನು ಸ್ವೀಕರಿಸಿ ಭಕ್ತರ ಪಾಪವನ್ನು ಪರಿಹರಿಸುವ ಭಗವಂತ ಹವಿರ್ಹರಿಃ
ಈ ಶ್ಲೋಕವನ್ನು ಇನ್ನೊಂದು ಆಯಾಮದಲ್ಲಿ ನೋಡಿದರೆ, ಇಲ್ಲಿ  ಬರುವ  ಒಂದೊಂದು ಶಬ್ದವನ್ನು ಭಗವಂತನಲ್ಲಿ ಅನುಸಂಧಾನ ಮಾಡು ಎನ್ನುವ ಸಂದೇಶವನ್ನು ಕಾಣುತ್ತೇವೆ.
 “ಕ್ರತುಃ ” –ಭಗವಂತನೇ ಕ್ರತು ಶಬ್ದದ ಮುಖ್ಯಾರ್ಥ. 'ಕ್ರತು' ಕ್ರಿಯೆ, ಜ್ಞಾನ, ಇತ್ಯಾದಿ ಅರ್ಥವನ್ನು ಕೊಡುತ್ತದೆ. ಕ್ರಿಯಾ ಸ್ವರೂಪ, ಜ್ಞಾನ ಸ್ವರೂಪ ಭಗವಂತ  ‘ಕ್ರತುಃ’. ನಮ್ಮಲ್ಲಿ ನಂಬಿಕೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗು ಅನುಕೂಲತೆ ಕೊಟ್ಟು,  ನಮ್ಮ ಹಿಂದೆ ನಿಂತು, ಕ್ರಿಯಾ ಕಲಾಪಗಳನ್ನು ನಡೆಸುವ, ಜ್ಞಾನ ಸ್ವರೂಪನೂ, ಕರ್ಮದ ಕಟ್ಟಿನಿಂದ ನಮ್ಮನ್ನು ಪಾರು ಮಾಡುವನೂ ಆದ ಭಗವಂತ ‘ಕ್ರತುಃ’.
“ಯಜ್ಞ” -ಯಜ್ಞ ಅಂದರೆ ಎಲ್ಲವನ್ನೂ ತಿಳಿದವನು. ಜ್ಞಾನರೂಪಿಯಾಗಿ ಎಲ್ಲೆಡೆ ಇರುವ ಭಗವಂತ, ಎಲ್ಲಾ ಕ್ರಿಯೆಗಳಿಂದ ಎಲ್ಲರೂ ಆರಾಧಿಸಬೇಕಾದ ಯಜ್ಞದ ಅಂತರ್ಯಾಮಿ.
ಸ್ವಧಾಃ” ಎಂದರೆ ತನ್ನನ್ನು ತಾನು ಆದರಿಸಿ ನಿಂತ ಸರ್ವ ನಿಯಾಮಕ. 
ಭಗವಂತ   ‘ಔಧಃ’.  ಎಂದರೆ ಸಂಸಾರ ತಾಪದಲ್ಲಿ ಬಿದ್ದು ಒದ್ದಾಡುವವ(ಔಷರು)ರಿಗೆ ಆಸರೆ-ಮೋಕ್ಷ ಪ್ರದ.
“ಮಂತ್ರಃ” –ಜ್ಞಾನ ಪೂರ್ವಕವಾಗಿ ಅನುಸಂಧಾನ ಮಾಡುವವರನ್ನು ರಕ್ಷಣೆ ಮಾಡುವ ಭಗವಂತ ‘ಮಂತ್ರಃ’.  ಮಂತ್ರ ನಮ್ಮನ್ನು ರಕ್ಷಣೆ ಮಾಡುವುದು ನಾವು ತಿಳಿದು ಪಠಿಸಿದಾಗ ಮಾತ್ರ.[ಇಲ್ಲದಿದ್ದರೆ ಕಿಂಚಿತ್ ಫಲ ಮಾತ್ರ. ಮಹಾ ಫಲದಿಂದ ವಂಚಿತರಾಗುತ್ತೇವೆ].
ಭಗವಂತ ಎಲ್ಲಕ್ಕಿಂತ ದೊಡ್ಡ ವಸ್ತು ಆದ್ದರಿಂದ ಆತ “ಆಜ್ಯಃ”.  
ಚಲಿಸದೇ ಇರುವ ವಸ್ತುವಿಗೆ ಚಲನೆ ಕೊಡುವ ಭಗವಂತ “ಅಗ್ನಿಃ”.
ಎಲ್ಲ ಭಕ್ತರಿಂದ ಆಹುತನಾದ್ದರಿಂದ ಭಗವಂತ  “ಹುತಃ”.                                 

Friday, July 29, 2011

Bhagavad Geeta Kannada Chapter-09 shloka 13-15


ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ
ಜಂತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಮ್      ೧೩

ಮಹಾತ್ಮಾನಃ ತು ಮಾಮ್  ಪಾರ್ಥ ದೈವೀಮ್  ಪ್ರಕೃತಿಮ್ ಆಶ್ರಿತಾಃ
ಜಂತಿ ಅನನ್ಯ ಮನಸಃ  ಜ್ಞಾತ್ವಾ ಭೂತದಿಮ್ ಅವ್ಯಯಮ್ –ಓ ಪಾರ್ಥ, ಸಾತ್ವಿಕ ಸ್ವಭಾವದ ಹಿರಿಯ ಮಂದಿ, ಅಳಿವ ವಿಶ್ವಕ್ಕೆಲ್ಲ ಅಳಿವಿರದ ನಾನೆ  ಕಾರಣ ಎಂದು ತಿಳಿದು, ಒಂದೆ ಬಗೆಯಿಂದ ನನ್ನನ್ನು ಪೂಜಿಸುತ್ತಾರೆ.

ಹಿಂದಿನ ಶ್ಲೋಕದಲ್ಲಿ ಆಸುರೀ ಮತ್ತು ರಾಕ್ಷಸ ಸ್ವಭಾವದವರನ್ನು  ವಿವರಿಸಿದ ಕೃಷ್ಣ ಇಲ್ಲಿ ದೈವೀ ಸ್ವಭಾವದವರನ್ನು ವಿವರಿಸುತ್ತಾನೆ. ದೈವೀ ಸ್ವಭಾವದವರು ಸದಾ ಜ್ಞಾನದ, ಬೆಳಕಿನ, ಸತ್ಯದ ದಾರಿಯಲ್ಲಿ ಸಾಗುವವರು. ಅವರು ಭಗವಂತನನ್ನು ತಿಳಿಯುವ  ಭಾಗ್ಯ ಪಡೆದವರು. ಇವರನ್ನು ಭಗವಂತ “ಮಹಾತ್ಮರು” ಎನ್ನುತ್ತಾನೆ. ಭಗವಂತನಿಗೆ ಇವರ ಮೇಲೆ ಅಪಾರ ಪ್ರೀತಿ. ಕೃಷ್ಣ ಹೇಳುತ್ತಾನೆ “ಅವರು ನನ್ನನ್ನು ಅನನ್ಯ ಮನಸ್ಸಿನಿಂದ ಭಜನೆ ಮಾಡುತ್ತಾರೆ” ಎಂದು. ನಾವು ದೇವರನ್ನು ಪ್ರೀತಿಸುವುದು ಮತ್ತು ದೇವರು ನಮ್ಮನ್ನು ಪ್ರೀತಿಸುವುದು ನಿಜವಾದ ಭಜನೆ. ದೈವೀ ಸ್ವಭಾವದವರು ಭಗವಂತನನ್ನು ಬಿಟ್ಟು ಉಳಿದುದೆಲ್ಲವೂ ನಶ್ವರ, ಶಾಶ್ವತ ಸತ್ಯ ಭಗವಂತ ಮಾತ್ರ  ಎನ್ನುವ ಸತ್ಯವನ್ನು ಅರಿತಿರುತ್ತಾರೆ. ಪ್ರಪಂಚದಲ್ಲಿ ಭಗವಂತ ಮತ್ತು ಆತನ  ಜ್ಞಾನ ಮಾತ್ರ ಅವ್ಯಯ. ಉಳಿದ (ದುಡ್ಡು, ಆಸ್ತಿ, ಚಿನ್ನ, ಅಧಿಕಾರ, ಇತ್ಯಾದಿ) ಎಲ್ಲವೂ ವ್ಯಯ. ನಶ್ವರವಲ್ಲದ ಸಂಪತ್ತು ಭಗವಂತ ಮತ್ತು ಆತನ ಜ್ಞಾನ. ಈ ರೀತಿ ಭಗವಂತನ ಚಿಂತನೆ ಮಾಡುವವರು ಮಹಾತ್ಮರು.
ಈ ಶ್ಲೋಕದಲ್ಲಿ ಬಂದಿರುವ ವಿಶೇಷಣ ‘ಪಾರ್ಥ’. “ಪ್ರಥೆಯ ಮಗನೆ” ಎಂದು ಕೃಷ್ಣ ಅರ್ಜುನನನ್ನು ಸಂಬೋಧಿಸುತ್ತಿದ್ದಾನೆ ಎನ್ನುವುದು ಮೇಲ್ನೋಟದ ಅರ್ಥ. ವ್ಯುತ್ಪತ್ತಿ ಶಾಸ್ತ್ರೀಯ ದೃಷ್ಟಿಯಿಂದ(Etymologically) ನೋಡಿದರೆ ಈ ವಿಶೇಷಣದ ಹಿಂದೆ ಅಧ್ಯಾತ್ಮಿಕವಾಗಿ ಬೇರೆಯೇ ಅರ್ಥವಿದೆ. ‘ಪ್ರಥ- ವಿಸ್ತಾರೆ’ ಧಾತು. ಯಾವುದು ಹಬ್ಬಿಕೊಂಡಿದೆಯೋ, ಯಾವುದು ಎಲ್ಲಾ ಕಡೆ ತುಂಬಿದೆಯೋ ಅದು ‘ಪ್ರಥ’. ಇದು ಭಗವಂತನ ಸರ್ವಗತತ್ವವನ್ನು ಸೂಚಿಸುತ್ತದೆ. ಭಗವಂತ ಸರ್ವಗತ ಎನ್ನುವ ಸತ್ಯವನ್ನು ಅರಿತು ಅವನನ್ನು ಎಲ್ಲ ಕಡೆ ಕಾಣುವವರು ‘ಪಾರ್ಥರು’. ಇನ್ನೊಂದು ಅರ್ಥದಲ್ಲಿ ವೇದಾರ್ಥಭೂತನಾದ ಭಗವಂತನನ್ನು, ಅವನ ಗುಣಗಳನ್ನು, ಸದಾ ಪಾನ ಮಾಡುವವರು ‘ಪಾರ್ಥರು’. ನಾವೆಲ್ಲರೂ ವೇದಾರ್ಥವನ್ನು ಪಾನ ಮಾಡುತ್ತಾ ಪಾರ್ಥರಾಗಬೇಕು. ಎಲ್ಲೆಡೆ ಹಬ್ಬಿರುವ ಸರ್ವಗತವಾದ ಶಕ್ತಿಯನ್ನು ನಮ್ಮೊಳಗೂ ಕಾಣಬೇಕು ಎನ್ನುವುದು ಈ ಸಂಬೋಧನೆಯ ಹಿಂದಿರುವ  ಸಂದೇಶ.
ದೈವೀ ಸ್ವಭಾವದವರು ಭಗವಂತನನ್ನು ಯಾವಯಾವ ಬಗೆಯಲ್ಲಿ  ಉಪಾಸನೆ ಮಾಡುತ್ತಾರೆ  ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.               

ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ   
ಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ         ೧೪

ಸತತಮ್  ಕೀರ್ತಯಂತ ಮಾಮ್  ಯತಂತಃ ಚ  ದೃಢ ವ್ರತಾಃ       
ಮಸ್ಯಂತ ಚ  ಮಾಮ್  ಭಕ್ತ್ಯಾ ನಿತ್ಯ ಯುಕ್ತಾಃ  ಉಪಾಸತೇ –ಅನುದಿನವು ನನ್ನಲ್ಲಿ ಬಗೆಯಿಟ್ಟು ನನ್ನನ್ನೆ ಸೇವಿಸುತ್ತಾರೆ. ನಿರಂತರ ನನ್ನನ್ನು ಕೊಂಡಾಡುತ್ತಾ ನೇಮಗಳನ್ನುನೆಮ್ಮಿಕೊಂಡು ಹೆಣಗುತ್ತಾ ನನಗಾಗಿ ತಲೆಬಾಗುತ್ತ.

“ದೈವೀ ಸ್ವಭಾವದವರು ನಿರಂತರ  ನನ್ನನ್ನು ಕೀರ್ತನ ಮಾಡುತ್ತಾರೆ” ಎನ್ನುತ್ತಾನೆ ಕೃಷ್ಣ.  ಅವರ ಪ್ರತಿಯೊಂದು ಚಟುವಟಿಕೆಯಲ್ಲೂ ಭಗವದ್ ಪ್ರಜ್ಞೆ ಗಾಢವಾಗಿರುತ್ತದೆ. ಇನ್ನೊಂದು ಅರ್ಥದಲ್ಲಿ  ತತವಾದ್ಯವನ್ನು ಹಿಡಿದು, ತಂತಿಯನ್ನು ಮೀಟುತ್ತಾ  ಭಗವಂತನ ಗುಣಗಾನ ಮಾಡುತ್ತಾ, ಹಾಡುತ್ತಾ(ನಾರದ ಮಹರ್ಷಿಗಳಂತೆ) ಸದಾ ಸಂತೋಷವಾಗಿರುವವರು ದೈವೀ ಸ್ವಭಾವದವರು.  ಇವರು ನಿರಂತರ, ತಮ್ಮ ಗುರಿ ತಲುಪುವತನಕವೂ ದೃಡ ಧೀಕ್ಷೆಯಿಂದ, ಅನನ್ಯ ಪ್ರೀತಿಯಿಂದ ಗೌರವಿಸುತ್ತಾ ಉಪಾಸನೆ ಮಾಡುತ್ತಾರೆ. ಇವರಲ್ಲಿ ಇನ್ನೊಂದು ವಿಧದ ಭಕ್ತರನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ    
ಏಕತ್ವೇನ ಪೃಥಕ್ ತ್ವೇನ ಬಹುಧಾ ವಿಶ್ವತೋಮುಖಮ್        ೧೫

ಜ್ಞಾನಯಜ್ಞೇನ ಚ ಅಪಿ ಅನ್ಯೇ ಯಜಂತಃ  ಮಾಮ್  ಉಪಾಸತೇ      
ಏಕತ್ವೇನ ಪೃಥಕ್ ತ್ವೇನ ಬಹುಧಾ ವಿಶ್ವತಃ ಮುಖಮ್-ಕೆಲವರು ಅರಿವಿನ ಮಾನಸ ಯಜ್ಞದಿಂದ ಎಲ್ಲೆಡೆ ತುಂಬಿರುವ ನನ್ನನ್ನು ಪೂಜಿಸುತ್ತ ಸೇವಿಸುತ್ತಾರೆ- ಎಲ್ಲೆಡೆಯಿರುವ ಭಗವಂತನೊಬ್ಬನೆ ಎಂದು[ಏಕಮೂರ್ತಿಯೆಂದು], ಎಲ್ಲಕ್ಕಿಂತ ಬೇರೆಯೆಂದು[ಚತುರ್ಮೂರ್ತಿಯೆಂದು], ಬಗೆಬಗೆಯ ಬಣ್ಣದವನೆಂದು [ಅನೇಕಮೂರ್ತಿ ಯೆಂದು], ಹೀಗೆ ಹಲವಾರು ಬಗೆಯಿಂದ.

ಇನ್ನು ಕೆಲವರು ಭಗವಂತನ ಅರಿವಿನ ಪ್ರಪಂಚದಲ್ಲಿ ಮುಳುಗಿಬಿಟ್ಟಿರುತ್ತಾರೆ. ಧ್ಯಾನದಲ್ಲಿ ಅವರಿಗೆ ಹೊರಗಿನ ಪ್ರಪಂಚದ ಅರಿವೇ ಇರುವುದಿಲ್ಲ. ಧ್ಯಾನದಲ್ಲಿ ಭಗವಂತನನ್ನು ಅನೇಕ ಆಯಾಮದಲ್ಲಿ ಕಾಣುವುದೇ ಅವರ ಉಪಾಸನೆ. ಇವರ ಉಪಾಸನೆ ಧ್ಯಾನ ಪೂರ್ವಕವಾದ ಯಜ್ಞ. ಬಾಹ್ಯವಾಗಿ ಇವರನ್ನು ಮಹಾತ್ಮರು ಎಂದು ಗುರುತಿಸುವುದು ಬಹಳ ಕಷ್ಟ.   ಕೃಷ್ಣ ಹೇಳುತ್ತಾನೆ “ಇಂತವರು ನನ್ನನ್ನು ಒಂದಾಗಿ,  ಬೇರೆಯಾಗಿ, ಬಹುವಾಗಿ ಕಾಣುತ್ತಾರೆ” ಎಂದು. ಇಲ್ಲಿ ಏಕತ್ವೇನ ಅಂದರೆ ಭಗವಂತ ಒಬ್ಬನೆ ಎಂದು ಉಪಾಸನೆ ಮಾಡುವುದು. ಒಂದೊಂದು ದೇಶಕ್ಕೆ, ಒಂದೊಂದು ಜಾತಿಗೆ, ಒಂದೊಂದು ಮತಕ್ಕೆ ಒಬ್ಬ ದೇವರಲ್ಲ. ಎಲ್ಲರಿಗೂ ದೇವರು ಒಬ್ಬನೇ ಎಂದು ಉಪಾಸನೆ ಮಾಡುವುದು ಏಕತ್ವೇನ. ಪೃಥಕ್ತ್ವೇನ ಎಂದರೆ ಎಲ್ಲರಿಂದ ವಿಲಕ್ಷಣನಾದ ಭಗವಂತನನ್ನು ಅನೇಕ ಬಗೆಯಿಂದ ಕಾಣುವುದು. ಇವರು ಭಗವಂತನನ್ನು ಧ್ಯಾನದಲ್ಲಿ ಅನೇಕ ವರ್ಣದಿಂದ ಕಾಣುತ್ತಾರೆ. ಹೀಗೆ ವಿಶ್ವತೋಮುಖ ಭಗವಂತನನ್ನು ಏಕ ಎಂತಲೂ, ಚತುರ್ಮೂರ್ತಿ ಎಂತಲೂ, ಅನೇಕ ಮೂರ್ತಿ ಎಂತಲೂ, ಅನೇಕ ವರ್ಣದಿಂದ ಉಪಾಸನೆ ಮಾಡುತ್ತಾರೆ. 

Thursday, July 28, 2011

Bhagavad geeta kannada Chapter-09 Shloka 10-12


ಮಯಾSಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್
ಹೇತುನಾSನೇನ ಕೌಂತೇಯ ಜಗದ್ ವಿಪರಿವರ್ತತೇ ೧೦

ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸ ಚರಚರಮ್
ಹೇತುನಾನೇನ ಕೌಂತೇಯ ಜಗತ್  ವಿಪರಿವರ್ತತೇ-ಸಾಕ್ಷಿಯಾಗಿ ನಿಂತ ನನ್ನಿಂದಲೆ ಜೀವ-ಜಡಗಳನ್ನು ಬೆಸೆದು ಪ್ರಕೃತಿ ಹಡೆಯುತ್ತದೆ. ಕೌಂತೇಯ, ಈ ಕಾರಣದಿಂದಲೆ ಜಗತ್ತು ಬದಲುತ್ತ  ಸುತ್ತುತ್ತಿದೆ.

ಜಗತ್ತನ್ನು ಸೃಷ್ಟಿ ಮಾಡಲು ಬೇಕಾದ ಮೂಲದ್ರವ್ಯ ಜಡಪ್ರಕೃತಿ ಮತ್ತು ಅದಕ್ಕೆ ಆಕಾರ ಕೊಡುವುದು ಜಡಪ್ರಕೃತಿಯ ಮಾನಿನಿಯಾದ ಚೇತನ ಪ್ರಕೃತಿ ಲಕ್ಷ್ಮಿ. ಭಗವಂತ ಇಡೀ ಸೃಷ್ಟಿಯ ಅಧ್ಯಕ್ಷನಾಗಿ ನಿಂತು, ಕ್ರಿಯೆಯ ಹಿಂದಿನ ಶಕ್ತಿಯಾಗಿ, ಜಡ ಮತ್ತು ಚೇತನಪ್ರಕೃತಿಯ ಮೂಲಕ ಈ ಸೃಷ್ಟಿ ನಿರ್ಮಾಣ ಮಾಡುತ್ತಾನೆ. ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಕೂಡಾ ಒಂದು ವಿಶಿಷ್ಟ ಶಕ್ತಿಯಾಗಿ ಭಗವಂತ ತುಂಬಿದ್ದಾನೆ.   

ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್      ೧೧

ಅವಜಾನಂತಿ ಮಾಮ್   ಮೂಢಾಃ ಮಾನುಷೀಂ ತನುಮ್ ಆಶ್ರಿತಮ್
ಪರಮ್  ಭಾವಮ್ ಅಜಾನಂತಃ  ಮಮ ಭೂತಮಹೇಶ್ವರಮ್-ಮನುಷ್ಯರಂತೆ ಕಾಣಿಸಿಕೊಂಡು ಮೈದಾಳಿದ ನನ್ನನ್ನು ಮನುಷ್ಯನೆಂದೆ ಬಗೆದು ಕಡೆಗಾಣಿಸುತ್ತಾರೆ-ಎಂದೆಂದು ಎಲ್ಲೆಡೆಯು ಇರುವ ಹಿರಿದಕ್ಕು ಹಿರಿದಾದ ನನ್ನ ಹಿರಿಮೆಯನ್ನರಿಯದ ತಿಳಿಗೇಡಿಗಳು.  

ಈ ಶ್ಲೋಕದಲ್ಲಿ ಭಗವಂತ ತನ್ನ ಸ್ವರೂಪದ ಬಗ್ಗೆ ಇನ್ನ್ಯಾರೂ ಹೇಳಲಾಗದ ಒಂದು ಸಂಗತಿಯನ್ನು ಹೇಳುತ್ತಾನೆ. ಭಗವಂತನಿಗೆ ಪಾಂಚಭೌತಿಕ ಶರೀರವಿಲ್ಲ. ಅವತಾರ ರೂಪಿ ಭಗವಂತ ನಮಗೆ ನಮ್ಮಂತೇ ಶರೀರ ಉಳ್ಳವನಂತೆ ಕಾಣಿಸಿಕೊಳ್ಳುತ್ತಾನೆ ಅಷ್ಟೇ. ಅಲ್ಲಿ ಕಾಣುವ ಶರೀರವನ್ನು ಕಂಡು: ಭಗವಂತನ ಶರೀರ ನಮ್ಮಂತೆ ನಶ್ವರವಾದ, ಒಂದು ದಿನ ಬಿದ್ದು ಹೋಗುವ ಶರೀರ ಎಂದು ತಿಳಿಯುವವರು- ಸ್ವಭಾವತಃ ತಾಮಸರು ಅಥವಾ ತಾಮಸದ ಪ್ರಭಾವಕ್ಕೆ ಒಳಗಾದ ಭಗವಂತನ ಹಿರಿಮೆಯನ್ನರಿಯದ ತಿಳಿಗೇಡಿಗಳು ಎನ್ನುತ್ತಾನೆ ಕೃಷ್ಣ.

ಇಲ್ಲಿ ಭೂತಮಹೇಶ್ವರ  ಎನ್ನುವ ವಿಶೇಷಣ ಬಳಕೆಯಾಗಿದೆ. ಇದು ಭಗವಂತನ ಹಿರಿಮೆಯನ್ನು ಹೇಳುವ ವಿಶೇಷ ಪದ.  ಸಮಷ್ಟಿಯಾಗಿ ಈ ಪದವನ್ನು ನೋಡಿದರೆ: ಭೂತಗಳು ಎಂದರೆ ಸಮಸ್ತ ಜೀವಗಳು. ಅವರಿಗೆ ಈಶರು ಬ್ರಹ್ಮಾದಿ ದೇವತೆಗಳು(ಭೂತೇಶರು). ಈ ದೇವತೆಗಳಿಗೆ ಮಹತ್ತಾದವಳು ಶ್ರೀಲಕ್ಷ್ಮಿ(ಭೂತಮಹೇಶಳು). ಇಂತಹ ಲಕ್ಷ್ಮಿಗೆ ವರನಾಗಿರುವ ಭಗವಂತ “ಭೂತಮಹೇಶ್ವರ”. ಇದೇ ಪದವನ್ನು ಬಿಡಿಸಿ ನೋಡಿದರೆ ಭೂತಮಹಾನ್+ಈಶ್ವರ : ಅಂದರೆ  ಬ್ರಹ್ಮಾದಿ ಸಮಸ್ತ ಭೂತಗಳಿಗೂ ಮಹಾನ್ ಆಗಿ ಎಲ್ಲರನ್ನು ನಿಯಂತ್ರಿಸುವ , ಸರ್ವೋನ್ನತನಾದ- ಸರ್ವಸಮರ್ಥ ಭಗವಂತ. ಇನ್ನೊಂದು ರೀತಿಯಲ್ಲಿ ಭೂತ+ಮಹತ್+ಈಶ್ವರ. ಇಲ್ಲಿ ಭೂತ ಎಂದರೆ: ಉನ್ನತಿಯ ತುತ್ತ ತುದಿಯಲ್ಲಿರುವ, ಹುಟ್ಟು ಸಾವಿಲ್ಲದ ಅನಾಧಿನಿತ್ಯ. ಮಹತ್ ಎಂದರೆ: ಕಾಲತಃ , ದೇಶತಃ, ಗುಣತಃ ಪರಿಪೂರ್ಣವಾಗಿರುವ ತತ್ತ್ವ. ಈಶ್ವರ ಎಂದರೆ : ಸರ್ವ ಸಮರ್ಥ ಭಗವಂತ.  ಹೀಗೆ ಈ ವಿಶೇಷಣ ಅನೇಕ ರೂಪದಲ್ಲಿ ಭಗವಂತನ ಗುಣವನ್ನು ಸಾರುತ್ತದೆ.                
ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ
ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ     ೧೨

ಮೋಘಶಾ ಮೋಘಕರ್ಮಾಣಃ ಮೋಘಜ್ಞಾನಾಃ  ವಿಚೇತಸಃ
ರಾಕ್ಷಸೀಮ್ ಆಸುರೀಮ್  ಚ ಏವ ಪ್ರಕೃತಿಮ್  ಮೋಹಿನೀಮ್  ಶ್ರಿತಾಃ –ಇವರ ಆಸೆ ಈಡೇರದು. ಕರ್ಮಗಳು ಫಲಿಸವು. ತಿಳಿವು ಮಾಯವಾಗುವುದು.ಅವರು ಬಗೆಗೇಡಿಗಳು; ಮರುಳುಗೊಳಿಸುವ, ರಕ್ಕಸರ –ಅಸುರರ ತಾಮಸ ಸ್ವಭಾವಕ್ಕೆ ಒಳಗಾದವರು.

‘ಭಗವಂತ ಜ್ಞಾನಾನಂದ ಸ್ವರೂಪ, ಆತನಿಗೆ ಪಾಂಚಭೌತಿಕ ಶರೀರ ಇಲ್ಲ’ ಎನ್ನುವ ವಿಚಾರವನ್ನು ಕೃಷ್ಣ ಇಲ್ಲಿ ಒತ್ತು ಕೊಟ್ಟು ಹೇಳುತ್ತಾನೆ. “ದೇವರಿಗೆ ನಮ್ಮಂತೆ ಪಾಂಚಭೌತಿಕ ಶರೀರ ಇದೆ-ಅನ್ನುವ ಚಿಂತನೆಯೇ ಪಾತಕದ ದಾರಿ” ಎನ್ನುತ್ತಾನೆ ಕೃಷ್ಣ. ಏಕೆಂದರೆ ಹಾಗೆ ಚಿಂತನೆ ಮಾಡುವವರು ಸಾತ್ವಿಕರಾಗಿರುವುದಿಲ್ಲ. ಅವರು ಎಂದೂ ಭಗವದ್ ಭಕ್ತರಾಗಿರುವುದಿಲ್ಲ. ಹೀಗೆ ಚಿಂತನೆ ಮಾಡುವವರ ಅಧ್ಯಾತ್ಮ ಸಾಧನೆಯ ಎಲ್ಲಾ ಆಸೆಗಳೂ ಕಮರಿ ಹೋಗುತ್ತವೆ. ಭಗವಂತನನ್ನು ನಶ್ವರ ಎಂದು ಹೇಳುವವರನ್ನು ದೇವತೆಗಳು ಎಂದೂ ಪ್ರೀತಿಸುವುದಿಲ್ಲ. ಅವರು ಮಾಡುವ ಯಜ್ಞ-ಯಾಗಾದಿಗಳು ವ್ಯರ್ಥ. ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಪಾರತ್ರಿಕವಾಗಿ ಅವರ ಯಾವ ಆಸೆಯೂ ನೆರವೇರುವುದಿಲ್ಲ.
ಸಾತ್ವಿಕ ಚಿಂತನವೇ ಇಲ್ಲದವರು ಅಥವಾ ತಾಮಸ ಪ್ರಭಾವಕ್ಕೊಳಗಾದವರು ಭಗವಂತನನ್ನು ಈ ರೀತಿ ದೋಷ ಚಿಂತನೆ ಮಾಡುತ್ತಾರೆ. ಅವರಿಗೆ ಚಿಂತನಾ ಶಕ್ತಿ ಇರುವುದಿಲ್ಲ. ಇವರು ಯಾವ ಶಾಸ್ತ್ರ ಓದಿಯೂ ಉಪಯೋಗವಿಲ್ಲ. ಅವರ ಮನಸ್ಸು ಅಧ್ಯಾತ್ಮವನ್ನು ಗ್ರಹಿಸುವುದಿಲ್ಲ. “ಇಂತವರು ರಾಕ್ಷಸರು ಅಥವಾ ಅಸುರರಾಗಿರುತ್ತಾರೆ” ಎನ್ನುತ್ತಾನೆ ಕೃಷ್ಣ. ರಾಕ್ಷಸರು ಎಂದರೆ ಸ್ವಭಾವತಃ ತಾಮಸರು; ಅಸುರರು ಎಂದರೆ ರಾಜಸರು-ಇಂದ್ರಿಯ ಭೋಗದಲ್ಲೇ ಪುರುಷಾರ್ಥ ಕಾಣುವವರು. ಇವರ ಜೊತೆಗೆ ಪ್ರಭಾವದಿಂದ ಚಿಂತನಾ ಶೀಲತೆಯನ್ನು ಕಳೆದುಕೊಂಡವರು ಕೂಡಾ ಈ ರೀತಿ ಯೋಚಿಸುತ್ತಾರೆ. ಇವರಿಗೆ ಎಂದೂ ಸಹಜ ಚಿಂತನೆ ಬರುವುದೇ ಇಲ್ಲ. ಇವರು ಯಾವಾಗಲೂ ಸತ್ಯಕ್ಕೆ ವಿರುದ್ಧವಾಗಿ ಚಿಂತಿಸುತ್ತಿರುತ್ತಾರೆ.