ಅಧ್ಯಾಯ ಏಳು
ಹಿಂದಿನ ಆರು ಅಧ್ಯಾಯ(ಮೊದಲ ಷಟ್ಕ)ದಲ್ಲಿ ಕೃಷ್ಣ ಸಾಧಕನಾದವನು ಯಾವ ರೀತಿ ಸಾಧನೆಗೆ ತೊಡಗಬೇಕು, ಕರ್ಮ ಹೇಗಿರಬೇಕು, ಧ್ಯಾನ ಹೇಗಿರಬೇಕು, ಇತ್ಯಾದಿ ಭಗವಂತನನ್ನು ತಿಳಿಯುವ ಸಾಧನದ ಬಗ್ಗೆ ಹೇಳಿದ. ಎರಡನೇ ಷಟ್ಕ(ಅ-೭ರಿಂದ ೧೨) ಸಾಧನೆಯ ಮೂಲಕ ನಾವು ತಿಳಿದುಕೊಳ್ಳಬೇಕಾದ ಭಗವಂತನ ಸ್ವರೂಪವನ್ನು, ವಿಭೂತಿಯನ್ನು, ವೈಭವವನ್ನು, ಆತನ ಮಹಿಮೆಯನ್ನು ಹೇಳುವ ಸಾಧ್ಯಾಧ್ಯಾಯ.
ಏಳನೇ ಅಧ್ಯಾಯ ಭಗವಂತನ ಅಮೃತ ನುಡಿಯಿಂದ ಪ್ರಾರಂಭವಾಗುತ್ತದೆ.
ಭಗವಾನುವಾಚ ।
ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ ಮದಾಶ್ರಯಃ ।
ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ॥೧॥
ಭಗವಾನ್ ಉವಾಚ-ಭಗವಂತ ಹೇಳಿದನು:
ಮಯಿ ಆಸಕ್ತ ಮನಾಃ ಪಾರ್ಥ ಯೋಗಮ್ ಯುಂಜನ್ ಮತ್ ಆಶ್ರಯಃ ।
ಅಸಂಶಯಮ್ ಸಮಗ್ರಮ್ ಮಾಮ್ ಯಥಾ ಜ್ಞಾಸ್ಯಸಿ ತತ್ ಶೃಣು –ಪಾರ್ಥ, ನನ್ನನ್ನೆ ಬಗೆ ತುಂಬಿ ಪ್ರೀತಿಸುತ್ತ, ನನ್ನನ್ನೆ ಮೊರೆಹೊಕ್ಕು, ಯೋಗ ಸಾಧನೆಯಲ್ಲಿ ತೊಡಗುತ್ತ ಖಚಿತವಾಗಿ, ಅರಿವಿನ ತೆಕ್ಕೆ ತುಂಬಾ ನನ್ನನ್ನು ಹೇಗೆ ಅರಿಯಬಲ್ಲೆ ಅದನ್ನು ಕೇಳು.
ಮದ್ದಾನೆ ಅಥವಾ ಗೂಳಿಯಂತಹ ನಮ್ಮ ಮನಸ್ಸನ್ನು ಮಣಿಸಿ, ಸಾಧನೆಯ ಹಾದಿಯಲ್ಲಿ ಅದನ್ನು ಪಕ್ವಗೊಳಿಸಿದ ಮೇಲೆ, ಭಗವಂತನಲ್ಲಿ ಮತ್ತೆಂದೂ ಕದಲದ, ಸುದೃಡ ಮತ್ತು ಗಾಢವಾದ ಭಕ್ತಿಯಿಂದ, ಅಹಂಕಾರ ತೊರೆದು, ಸಂಪೂರ್ಣ ಶರಣಾಗತಿಯಿಂದ (ಎಲ್ಲಾ ಕಾಲದಲ್ಲೂ ನಾವು ಭಗವಂತನ ಅಧೀನ ಎನ್ನುವ ಎಚ್ಚರದಿಂದ), ಭಗವಂತನಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ಅರ್ಪಿಸಿಕೊಂಡು, ಧ್ಯಾನಯೋಗದಲ್ಲಿ ತೊಡಗಿದ ಮೇಲೆ, ‘ಅರಿವಿನ ಪೂರ್ಣ ಸಾಮರ್ಥ್ಯದಷ್ಟು ಭಗವಂತನನ್ನು ಹೇಗೆ ತಿಳಿಯಬಹುದು’ ಅದನ್ನು ಕೇಳು ಎನ್ನುತ್ತಾನೆ ಕೃಷ್ಣ.
ಜ್ಞಾನಂ ತೇSಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ ।
ಯಜ್ ಜ್ಞಾತ್ವಾ ನೇಹ ಭೂಯೋSನ್ಯಜ್ ಜ್ಞಾತವ್ಯಮವಶಿಷ್ಯತೇ ॥೨॥
ಜ್ಞಾನಮ್ ತೇ ಅಹಮ್ ಸ ವಿಜ್ಞಾನಮ್ ಇದಮ್ ವಕ್ಷ್ಯಾಮಿ ಅಶೇಷತಃ ।
ಯತ್ ಜ್ಞಾತ್ವಾ ನ ಇಹ ಭೂಯಃ ಅನ್ಯತ್ ಜ್ಞಾತವ್ಯಮ್ ಅವಶಿಷ್ಯತೇ –ತಿಳಿಯಬೇಕಾದ ನನ್ನ ಹಿರಿಮೆಯನ್ನು ಅದರ ಬಿತ್ತರದ ಜತೆಗೆ ನಿನಗೆ ನಾನು ಪೂರ್ತಿಯಾಗಿ ಹೇಳುತ್ತೇನೆ. ಇದನ್ನು ತಿಳಿದರೆ ಮತ್ತೆ ಈ ವಿಷಯದಲ್ಲಿ ಬೇರೆ ತಿಳಿಯುವಂಥದೇನೂ ಉಳಿದಿರುವುದಿಲ್ಲ.
ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುತ್ತದೋ ಅದನ್ನು ನಿನಗೆ ಹೇಳುತ್ತೇನೆ ಎನ್ನುತ್ತಾನೆ ಕೃಷ್ಣ. ಉಪನಿಷತ್ತಿನಲ್ಲಿ ಒಂದು ಮಾತಿದೆ “ಯಸ್ಮಿನ್ ವಿಜ್ಞಾತೇ ಸರ್ವ೦ ಇದ೦ ವಿಜ್ಞಾತ೦ ಭವತಿ” ಎಂದು. ಅಂದರೆ ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ ಅದನ್ನು ಮೊದಲು ತಿಳಿಯಬೇಕು. ನಾವು ಭಗವಂತನನ್ನು ತಿಳಿದರೆ ಈ ಪ್ರಪಂಚವನ್ನು ತಿಳಿದಂತೆ. ಅದನ್ನು ಬಿಟ್ಟು ಪ್ರಪಂಚವನ್ನು ತಿಳಿದು ಭಗವಂತನನ್ನು ತಿಳಿಯಬೇಕು ಅಂದುಕೊಂಡರೆ ಅದು ಅಸಾಧ್ಯ. ಇಲ್ಲಿ ಕೃಷ್ಣ ಹೇಳುತ್ತಾನೆ “ಯಾವ ಸಂಗತಿಯನ್ನು ತಿಳಿದರೆ ಮತ್ತೆ ಬೇರೆ ತಿಳಿದುಕೊಳ್ಳಬೇಕಾದ ಸಂಗತಿ ಉಳಿಯುವುದಿಲ್ಲವೋ ಅಂತಹ ವಿಜ್ಞಾನವನ್ನು ನಿನಗೆ ಕೊಡುತ್ತೇನೆ” ಎಂದು. ಜ್ಞಾನ ವಿಜ್ಞಾನವಾದಾಗಲೇ ಅದು ಸಮಗ್ರವಾಗುವುದು. ವಿಜ್ಞಾನ ಅಂದರೆ ವಿ+ಜ್ಞಾನ. ಇಲ್ಲಿ ‘ವಿ’ ಉಪಸರ್ಗ, ‘ವಿ’- ವಿಲಕ್ಷಣವಾದ, ವಿಶಿಷ್ಟವಾದ, ವಿಶೇಷವಾದ, ಇತ್ಯಾದಿ ಅರ್ಥವನ್ನು ಕೊಡುತ್ತದೆ. ಒಂದು ವಿಷಯವನ್ನು ತಳಸ್ಪರ್ಶಿಯಾಗಿ ತಿಳಿಯುವುದು ವಿಜ್ಞಾನ. ಇಲ್ಲಿ ಕೃಷ್ಣ ಹೇಳುತ್ತಿರುವುದು ವಿಜ್ಞಾನದ ಬಗ್ಗೆ. ‘ದೇವರು ಇದ್ದಾನೆ, ಅವನು ಸರ್ವಸಮರ್ಥ, ಸರ್ವಾಂತರ್ಯಾಮಿ’ ಎನ್ನುವುದು ಜ್ಞಾನ; ಆತ ಎಲ್ಲೆಲ್ಲಿ ಹೇಗಿದ್ದಾನೆ, ಯಾವ ವಸ್ತುವಿನಲ್ಲಿ ಯಾವ ವಿಭೂತಿಯಾಗಿದ್ದಾನೆ, ಎಂದು ವಿವರವಾಗಿ ತಿಳಿಯುವುದು ವಿಜ್ಞಾನ.
ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ ।
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ ॥೩॥
ಮನುಷ್ಯಾಣಾಮ್ ಸಹಸ್ರೇಷು ಕಶ್ಚಿತ್ ಯತತಿ ಸಿದ್ಧಯೇ ।
ಯತತಾಮ್ ಅಪಿ ಸಿದ್ಧಾನಾಮ್ ಕಶ್ಚಿತ್ ಮಾಮ್ ವೇತ್ತಿ ತತ್ತ್ವತಃ –ಸಾವಿರಾರು ಮಂದಿಯಲ್ಲಿ ಯಾರೋ ಒಬ್ಬ ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ. ಪ್ರಯತ್ನಿಸಿದವರಲ್ಲಿ, ಪ್ರಯತ್ನಿಸಿ ಗುರಿಮುಟ್ಟಿದವರಲ್ಲಿ ಯಾರೋ ಒಬ್ಬ ನನ್ನನ್ನು ಸರಿಯಾಗಿ ಅರಿತುಕೊಳ್ಳುತ್ತಾನೆ.
ಭಗವಂತನನ್ನು ಯಾರು ತಳಸ್ಪರ್ಶಿಯಾಗಿ ತಿಳಿಯಲು ಸಾಧ್ಯ? ಕೃಷ್ಣ ಹೇಳುತ್ತಾನೆ “ಸಾವಿರಾರು ಮಾನವರಲ್ಲಿ ಕೆಲವರು ಸಿದ್ಧಿಗಾಗಿ ಪ್ರಯತ್ನಿಸುತ್ತಾರೆ. ಈ ರೀತಿ ಯೋಗದಲ್ಲಿ ತೊಡಗಿಸಿಕೊಂಡು ಅದರಲ್ಲಿ ಗುರಿಮುಟ್ಟಿದ ಅನೇಕರಲ್ಲಿ, ‘ಒಬ್ಬನು ನನ್ನನ್ನು ನಿಜವಾಗಿ ಅರ್ಥ ಮಾಡಿಕೊಂಡಿದ್ದಾನೆ’ ಎಂದು ಹೇಳುವುದು ಕಷ್ಟ”. ಎಂದು. ಅಪರೋಕ್ಷ ಜ್ಞಾನದಲ್ಲಿ ಎತ್ತರಕ್ಕೇರಿದ ಸಿದ್ಧಪುರುಷರಲ್ಲೂ ಕೂಡಾ ಭಗವಂತನನ್ನು ತತ್ವತಃ ತಿಳಿದುಕೊಳ್ಳುವವರು ಬಹಳ ವಿರಳ.
No comments:
Post a Comment