Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, June 26, 2011

Bhagavad Geeta Kannada Chapter-07 Shloka 19


ಬಹೂನಾಂ ಜನ್ಮನಾಮಂತೇ ಜ್ಞಾನವಾನ್ ಮಾಂ ಪ್ರಪದ್ಯತೇ           
ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ           ೧೯

ಬಹೂನಾಮ್  ಜನ್ಮನಾಮ್ ಅಂತೇ ಜ್ಞಾನವಾನ್ ಮಾಮ್  ಪ್ರಪದ್ಯತೇ          
ವಾಸುದೇವಃ ಸರ್ವಮ್ ಇತಿ ಸಃ  ಮಹಾತ್ಮಾ ಸು ದುರ್ಲಭಃ  -ಬಹಳ ಜನ್ಮಗಳ ಸಾಧನೆಯ ಕೊನೆಯಲ್ಲಿ ಅರಿವು ಪಡೆದು ನನ್ನನ್ನು ಸೇರುತ್ತಾನೆ. ‘ವಾಸುದೇವನೆ ಎಲ್ಲೆಡೆ ತುಂಬಿರುವ ಪೂರ್ಣತತ್ವ’ ಎಂದರಿತ ಅಂಥ ಹಿರಿಯ ವ್ಯಕ್ತಿ ತುಂಬ ವಿರಳ.

ಜೀವನದಲ್ಲಿ ಜ್ಞಾನಿ ಎನಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಕೃಷ್ಣ ಹೇಳುತ್ತಾನೆ: “ಬಹೂನಾಂ ಜನ್ಮನಾಮಂತೇ ಜ್ಞಾನವಾನ್ ಮಾಂ ಪ್ರಪದ್ಯತೇ” ಎಂದು. ಅಂದರೆ “ಅನೇಕಾನೇಕ ಜನ್ಮಗಳ ಸಾಧನೆಯಿಂದ, ಜಿಜ್ಞಾಸೆಯಿಂದ, ಅಧ್ಯಯನದಿಂದ ಜ್ಞಾನ ಬರುತ್ತದೆ ಮತ್ತು ಇಂತಹ  ಜ್ಞಾನಿ ಸಹಜವಾಗಿ ನನಗೆ ಶರಣಾಗುತ್ತಾನೆ”.  ಹಿಂದಿನ ಅಧ್ಯಾಯಗಳಲ್ಲಿ ಹೇಳಿದಂತೆ ಜ್ಞಾನ ಸಂಪಾದನೆ ಒಂದು ಜನ್ಮದ ಸಾಧನೆ ಅಲ್ಲ. ಆದರೆ ಒಂದು ಜನ್ಮದಲ್ಲಿ ಮಾಡಿದ ಅಧ್ಯಾತ್ಮ ಸಾಧನೆ ಎಂದೂ ನಷ್ಟವಾಗುವುದಿಲ್ಲ. ಹುಟ್ಟುವಾಗಲೇ ನಾವು ನಮ್ಮ ಹಿಂದಿನ ಜನ್ಮದ ಅಧ್ಯಾತ್ಮ ಸಾಧನೆಯ ಜ್ಞಾನವನ್ನು ಹೊತ್ತು ಹುಟ್ಟುತ್ತೇವೆ. ಇದು ಮಾನವನಿಗೆ ಭಗವಂತನ ಮಹಾ ಪ್ರಸಾದ. ಜ್ಞಾನ ಎನ್ನುವುದು ನೂರಾರು ಜನ್ಮಗಳ ಸಂಚಯನ. ಇದು ಒಂದು ಜನ್ಮದಲ್ಲಿ ಪಡೆಯಬಹುದಾದ ವಿಷಯವಲ್ಲ. ನಾವು ಎಷ್ಟು ತಿಳಿದಿದ್ದರೂ ಕೂಡಾ ಅದು ಕಡಿಮೆಯೇ. ಭಗವಂತನೇ ಹೇಳುವಂತೆ ವೇದದ ಪೂರ್ಣ ಅರ್ಥವನ್ನು ಭಗವಂತನಲ್ಲದೆ ಇನ್ಯಾರೂ ತಿಳಿದಿಲ್ಲ.
ಹೀಗೆ ಯಾರು ಜನ್ಮ ಜನ್ಮಗಳ ಸಾಧನೆಯಿಂದ ಜ್ಞಾನಿ ಎನಿಸುತ್ತಾನೋ ಆತ ಸರ್ವಸ್ವವನ್ನೂ ವಾಸುದೇವನಲ್ಲಿ ಅರ್ಪಿಸಿ ಮೋಕ್ಷ ಪಡೆಯುತ್ತಾನೆ. ಇಲ್ಲಿ ವಾಸುದೇವ ಎನ್ನುವ ಭಗವಂತನ ನಾಮಕ್ಕೆ ವಿಶೇಷ ಅರ್ಥವಿದೆ. ವಾಸು+ದೇವ-ವಾಸುದೇವ. ಭಗವಂತ ವಾಸು, ಅಂದರೆ ತನ್ನನ್ನು ತಾನು ಮುಚ್ಚಿಕೊಂಡವನು. ಯಾವಾಗ ನಾವು ಜ್ಞಾನವನ್ನು ಪಡೆದು, ಹದಿನೈದು ಬೇಲಿಗಳನ್ನು ದಾಟಿ, ಸಮಾದಿ ಸ್ಥಿತಿಯಿಂದ ಆಳಕ್ಕಿಳಿದು, ಹದಿನಾರನೇ ಜೀವಸ್ವರೂಪವನ್ನು ಕಾಣುತ್ತೇವೋ, ಆಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ; ಈ ಸ್ಥಿತಿಯಲ್ಲಿ ಮುಚ್ಚಿಕೊಂಡ ಭಗವಂತ ದೇವನಾಗಿ ತೆರೆದುಕೊಳ್ಳುತ್ತಾನೆ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮನ್ನು ಕಾಣಬೇಕು. ನಮ್ಮ ಅರಿವೇ ನಮಗಿಲ್ಲದೆ ಭಗವಂತನನ್ನು ಕಾಣುವುದು ಅಸಾಧ್ಯ. ನಾವು ನಮ್ಮ ಜೀವಸ್ವರೂಪವನ್ನು ಕಂಡಾಗ, ಅದರೊಳಗಿನಿಂದ ಸಾಕ್ಷಾತ್ಕಾರವಾಗುವ ಭಗವಂತ ದೇವಃ. ನಾವು ನಮ್ಮ ಪಂಚಕೋಶಗಳ ಪರದೆಯಲ್ಲಿದ್ದಾಗ ವಾಸುವಾಗಿ; ಜ್ಞಾನ ಸಂಪಾದನೆಯಿಂದ ಪರದೆಯಿಂದಾಚೆಗೆ ಬಂದು ಜೀವ ಸ್ವರೂಪವನ್ನು ಕಂಡಾಗ ದೇವನಾಗಿ ದರ್ಶನ ಕೊಡುವ ಭಗವಂತ ವಾಸುದೇವಃ.
ಹೀಗೆ ಅನೇಕ ಜನ್ಮಗಳ ಸಾಧನೆಯಿಂದ ಜ್ಞಾನ ಸಂಪಾದಿಸಿ, ಭಗವಂತನನ್ನು ತಿಳಿದು, ಭಗವಂತನಲ್ಲಿ ಶರಣಾಗುವ ಜ್ಞಾನಿ ಬಹಳ ಹಿರಿಯ. ಜಗತ್ತಿನಲ್ಲಿ ಇಂತವರು ಬಹಳ ವಿರಳ ಎನ್ನುತ್ತಾನೆ ಕೃಷ್ಣ.

ಇಲ್ಲಿ ನಾವು ನಾಲ್ಕು ಬಗೆಯ ಭಕ್ತರನ್ನು ಮತ್ತು ಅವರಲ್ಲಿ ಜ್ಞಾನಿಯ ಶ್ರೇಷ್ಠತೆಯನ್ನು ನೋಡಿದೆವು. ಈ ನಾಲ್ಕು ಬಗೆಯಲ್ಲೂ ಸೇರದೆ ಪಂಚಮರಾಗಿ ಹೊರಗುಳಿಯುವ ಜನರು ಏಕೆ ಹಾಗಿರುತ್ತಾರೆ ಎನ್ನುವ ವಿಚಾರವನ್ನೂ ಕೃಷ್ಣ ವಿವರಿಸಿದ. ಮನುಷ್ಯ ನಿಜವಾದ ಅಧ್ಯಾತ್ಮ ಮಾರ್ಗದಲ್ಲಿ ನಡೆಯದೆ ಎಲ್ಲಿ ಎಡವುತ್ತಾನೆ ಎನ್ನುವ ಅಂಶಗಳನ್ನು ಕೃಷ್ಣ ಈ ಅಧ್ಯಾಯದ ಮುಂದಿನ ಭಾಗದಲ್ಲಿ ವಿವರಿಸುತ್ತಾನೆ.  

Saturday, June 25, 2011

Bhagavad Geeta Chapter-07 Shloka 16-18


ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋSರ್ಜುನ  
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ          ೧೬

ಚತುರ್ವಿಧಾಃ ಭಜಂತೇ ಮಾಮ್  ಜನಾಃ ಸುಕೃತಿನಃ ಅರ್ಜುನ          
ಆರ್ತಃ ಜಿಜ್ಞಾಸುಃ ಅರ್ಥ ಅರ್ಥೀ ಜ್ಞಾನೀ ಚ ಭರತ ಋಷಭ-ಓ ಭರತ ವಂಶದ ವೀರ ಅರ್ಜುನ, ಪುಣ್ಯವಂತರಾದ ನಾಲ್ಕು ಬಗೆಯ ಜನರು ನನ್ನಲ್ಲಿ ಭಕ್ತಿ ಇಡುತ್ತಾರೆ: ಸಂಕಟದಲ್ಲಿರುವವರು, ಸಿರಿಯನ್ನು ಬಯಸುವವರು, ತಿಳಿಯ ಬಯಸುವವನು ಮತ್ತು ತಿಳಿದವನು.

ದುಷ್ಕೃತಿಗಳ ಬಗ್ಗೆ ಮೊದಲು ವಿವರಿಸಿದ ಕೃಷ್ಣ ಈ ಶ್ಲೋಕದಲ್ಲಿ ಸುಕೃತಿಗಳ ಬಗ್ಗೆ  ವಿವರಿಸುತ್ತಾನೆ. ಭಗವಂತನ ಕಡೆಗೆ ಸಾಗುವುದು ಒಂದು ಸರಳರೇಖೆಯ ದಾರಿ ಇದ್ದಂತೆ. ಅದು ಕವಲು ದಾರಿ ಅಲ್ಲ. ಈ ಸರಳರೇಖೆಯಲ್ಲಿ ಭಗವಂತನಿಗೆ ಬೆನ್ನು ಹಾಕಿ ಸಾಗುವವರು ಸ್ವಭಾವತಃ ದುಷ್ಕೃತಿಗಳು, ಭಗವಂತನಿಗೆ ಬೆನ್ನು ಹಾಕಿ ಸಾಗಿ, ನಂತರ ಅರಿವು ಮೂಡಿ ಪುನಃ ಭಗವಂತನತ್ತ ಮುಖ ಹಾಕುವವರು ದುಷ್ಕೃತಿಗಳಾಗಿದ್ದು ಸುಕೃತಿಗಳಾಗುವವರು, ಇನ್ನು ಭಗವಂತನತ್ತ ಮುಖ ಮಾಡಿ ಸಾಗುವವರು ಸ್ವಭಾವತಃ ಸುಕೃತಿಗಳು. ಇವರು ಭಗವಂತನನ್ನು ಭಜಿಸುವವರು. ಈ ಸುಕೃತಿಗಳಲ್ಲಿ ನಾಲ್ಕು ವಿಧ: (೧) ಆರ್ತಃ  (೨) ಜಿಜ್ಞಾಸುಃ (೩) ಅರ್ಥ ಅರ್ಥೀ (೪) ಜ್ಞಾನಿ.
ಕೃಷ್ಣ ಹೇಳುತ್ತಾನೆ “ನನ್ನನ್ನು ನಾಲ್ಕು ವಿಧದಲ್ಲಿ ಭಜಿಸುವ ಸುಕೃತ ಜನರಿದ್ದಾರೆ” ಎಂದು. ಇಲ್ಲಿ ಭಜಿಸುವುದು ಅಥವಾ ‘ಭಜನೆ’ ಅಂದರೆ ‘ಭಕ್ತಿಯಿಂದ ಭಗವಂತನನ್ನು ಆರಾದಿಸುವುದು’ ಎಂದರ್ಥ.  ಭಜ ಸೇವಾಯಾಂ ಧಾತು. ಭಗವಂತನನ್ನು ಎಲ್ಲವುದಕ್ಕಿಂತ ಹಿರಿದಾಗಿ ಮತ್ತು ಹೆಚ್ಚಾಗಿ ಪ್ರೀತಿಸಿ, ಆ ಪ್ರೀತಿಗೆ ತಕ್ಕಂತೆ ನಡೆದುಕೊಳ್ಳುವುದು ಭಜನೆ. ಈ ರೀತಿ ಭಜಿಸುವವರಲ್ಲಿ ಮೊದಲನೆಯವರು ಆರ್ತರು.
ಮನುಷ್ಯ ಯಾವುದೋ ಒಂದು ತೊಂದರೆಗೆ ಸಿಕ್ಕಿಕೊಂಡಾಗ, ದುಃಖಕ್ಕೊಳಗಾದಾಗ, ಪರಿಹಾರ ಕೋರಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾನೆ. ಇದು ಆರ್ತಃ ಭಕ್ತಿ. ಈ ಭಕ್ತಿಯಲ್ಲಿ ಅತ್ಯಂತ ಕೆಳ ಮಟ್ಟದಿಂದ ಅತ್ಯಂತ ಶ್ರೇಷ್ಠ ಮಟ್ಟನ್ನು ಕಾಣಬಹುದು. ಕಷ್ಟ ಬಂದಾಗ ದೇವರನ್ನು ಆರ್ತನಾಗಿ ಭಜಿಸಿ ಸುಖ ಬಂದಾಗ ಸಂಪೂರ್ಣ ಮರೆತರೆ ‘ಸಂಕಟ ಬಂದಾಗ ವೆಂಕಟರಮಣ’ ಎನ್ನುವಂತೆ ಅದು ಅತ್ಯಂತ ಕೆಳಮಟ್ಟದ ಆರ್ತಭಕ್ತಿಯಾಗುತ್ತದೆ. ಆರ್ತ ಭಕ್ತಿಯಲ್ಲಿ ಅತ್ಯಂತ ಶ್ರೇಷ್ಠ ಮಟ್ಟದ ಭಕ್ತಿಗೆ ಉತ್ತಮ ದೃಷ್ಟಾಂತ ದ್ರೌಪದಿ. ಸಭೆಯಲ್ಲಿ ಆಕೆಯ ಮಾನಭಂಗ ಪ್ರಸಂಗ ಎದುರಾದಾಗ, ಆಕೆ ಕೃಷ್ಣನನ್ನು ಆರ್ತನಾದದಿಂದ ಕೂಗಿ ಭಜಿಸುತ್ತಾಳೆ.(ಇಲ್ಲಿ ದ್ರೌಪದಿ ಕೃಷ್ಣನನ್ನು ನಿರಂತರ ಭಜಿಸುತ್ತಿದ್ದಳು ಎನ್ನುವುದನ್ನು ನಾವು ಮರೆಯಬಾರದು). ಮೊಸಳೆ ತನ್ನ ಕಾಲನ್ನು ಕಚ್ಚಿ ಹಿಡಿದಾಗ ಗಜೇಂದ್ರ ಮಾಡಿದ್ದೂ ಕೂಡಾ ಆರ್ತ ಭಕ್ತಿ.
ಆರ್ತ ಭಕ್ತಿಯಲ್ಲಿ ಒಂದು ಸಮಸ್ಯೆ ಇದೆ. ಸಾಮಾನ್ಯವಾಗಿ ನಮಗೆ ಸುಖ ಬಂದಾಗ ನಾವು ಭಗವಂತನನ್ನು ಮರೆತುಬಿಡುತ್ತೇವೆ. ನಮ್ಮೆಲಾ ಐಶ್ವರ್ಯ-ಸಂಪತ್ತು ‘ನಮ್ಮ ದುಡಿಮೆಯ ಫಲ’ ಅಂದುಕೊಳ್ಳುತ್ತೇವೆ. ಆಗ ನಮಗೆ ದೇವರು ನನಪಿಗೆ ಬರುವುದೇ ಇಲ್ಲ. ಆದರೆ ಒಂದು ವೇಳೆ ಏನಾದರೂ ಸಮಸ್ಯೆ ಬಂದರೆ-ಮೊದಲು ನೆನಪಿಗೆ ಬರುವುದು ದೇವರು. ಎಂದೆಂದೂ ‘ದೇವರು ಸುಖವನ್ನೇಕೆ  ಕೊಟ್ಟ’ ಎಂದು ಯೋಚಿಸದ ನಾವು, ಕಷ್ಟ ಬಂದಾಗ  ‘ದೇವರು ನನಗೇಕೆ ಹೀಗೆ ಮಾಡಿದ’ ಎನ್ನಲಾರಭಿಸುತ್ತೇವೆ!   ಸಾಮಾನ್ಯವಾಗಿ ಜನರು ಸಂಕಟ ಬಂದಾಗ  ಮೊದಲು ಜೋತಿಷಿಗಳ ಬಳಿ ಹೋಗುತ್ತಾರೆ. ಜೋತಿಷಿಗಳು  ಒಂದು ಪರಿಹಾರ ಮಾರ್ಗವನ್ನು ಸೂಚಿಸುತ್ತಾರೆ. ನವಗ್ರಹ ಪೂಜೆ, ನಾಗಾರಾಧನೆ,ಗಣಪತಿ ಪೂಜೆ, ದೇವೀ ಆರಾದನೆ ಇತ್ಯಾದಿ. ಇಲ್ಲಿ  ಕೆಲವು ಶಾಸ್ತ್ರ ಜ್ಞಾನವಿಲ್ಲದ ಮತ್ತು ಅಧ್ಯಾತ್ಮದ ಅರಿವಿಲ್ಲದ ಸಾಮಾನ್ಯ ಜೋತಿಷಿಗಳು, ಜನರಿಗೆ ಸರಿಯಾದ ಮಾರ್ಗದರ್ಶನ ಮಾಡದೇ ತಪ್ಪು ಮಾರ್ಗ ತೋರಿಸುವ ಸಾಧ್ಯತೆ ಹೆಚ್ಚು. ಕೆಲವರು  “ನೀನು ವಿಷ್ಣು ಪೂಜೆ ಮಾಡಿದ್ದರಿಂದ ದೇವಿ ಕೊಪಗೊಂಡಿದ್ದಾಳೆ!!!” ಎಂಬಿತ್ಯಾದಿ  ಅಸಂಬದ್ಧ ಹೇಳಿಕೆ ಕೊಟ್ಟು,  ಜನರನ್ನು ದಾರಿತಪ್ಪಿಸುವ ಪ್ರಸಂಗವಿದೆ.   ಹೀಗಾದಾಗ ಸಾಮಾನ್ಯ ಜನರು ಎಲ್ಲಾ ದೇವತೆಗಳನ್ನು ಬೇರೆ ಬೇರೆಯಾಗಿ ಪೂಜಿಸಿ, ಏಕಭಕ್ತಿಯಿಂದ ದೂರ ಸರಿಯುತ್ತಾರೆ. ಇದರಿಂದಾಗಿ ಭಗವಂತನನ್ನು ಪ್ರೀತಿಸುವ ಬದಲು ಭಯದಿಂದ ‘ದೇವರಿಂದ ನನಗೆ ಯಾವ ತೊಂದರೆ ಆಗದಿರಲಿ’ ಎನ್ನುವಂತೆ ಭಕ್ತಿ ಮಾಡುವ ಸಾಧ್ಯತೆ ಇದೆ! ಈ ಎಲ್ಲ ಕಾರಣದಿಂದ ನಿರಂತರಭಕ್ತಿ ಮತ್ತು ಏಕಭಕ್ತಿ ಆರ್ತಭಕ್ತರಲ್ಲಿ ಇಲ್ಲದೇ ಇರುವ ಸಾಧ್ಯತೆ ಹೆಚ್ಚು.
ಆರ್ತರು ಕಷ್ಟವನ್ನು ನೀಗುವಂತೆ ಭಗವಂತನಲ್ಲಿ ಭಕ್ತಿ ಮಾಡಿದರೆ, ಜಿಜ್ಞಾಸುಗಳು ಜ್ಞಾನಕ್ಕಾಗಿ ಭಗವಂತನಲ್ಲಿ ಭಕ್ತಿ ಮಾಡುತ್ತಾರೆ. ಅದೇ ರೀತಿ ಅರ್ಥಾರ್ಥಿಗಳು ಐಹಿಕ ಸಂಪತ್ತಿಗಾಗಿ,  ಐಶ್ವರ್ಯಕ್ಕಾಗಿ, ಏನನ್ನೋ ಪಡೆಯುವುದಕ್ಕಾಗಿ  ಭಗವಂತನನ್ನು ಪೂಜಿಸುತ್ತಾರೆ.
ಈ ಮೂರು ಭಕ್ತರಿಗಿಂತ ಭಿನ್ನ ನಾಲ್ಕನೇ ವಿಧದ ಭಕ್ತ. ಆತ ಜ್ಞಾನಿ. ಆತ ಏನೋ ಬೇಕು ಅಥವ ಬೇಡ ಎಂದು ಭಗವಂತನನ್ನು ಪೂಜಿಸುವುದಿಲ್ಲ; ಬದಲಿಗೆ ಭಗವಂತನ ಮಹಿಮೆಯನ್ನು ಸಂಪೂರ್ಣ ತಿಳಿದ ಆತ ಸಹಜವಾಗಿ ಭಗವಂತನನ್ನು ಅನನ್ಯವಾಗಿ ಪ್ರೀತಿಸುತ್ತಿರುತ್ತಾನೆ. ಈತನಲ್ಲಿ ಏಕಭಕ್ತಿ ಮತ್ತು ನಿರಂತರ ಭಕ್ತಿ ಇರುತ್ತದೆ. ಯಾವುದೇ ಐಹಿಕ ಫಲಾಪೇಕ್ಷೆಯಿಂದ ಈತ ಭಗವಂತನನ್ನು ಭಜಿಸುವುದಿಲ್ಲ.
ಮುಂದಿನ ಶ್ಲೋಕಕ್ಕೆ ಹೋಗುವ ಮೊದಲು ಇಲ್ಲಿ ನಾವು ಏಕಭಕ್ತಿ ಅಂದರೆ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿದಿರಬೇಕು. ಏಕಭಕ್ತಿ ಎಂದರೆ ಎಲ್ಲಾ ದೇವತೆಗಳನ್ನು, ಗುರು-ಹಿರಿಯರನ್ನು ನಿರ್ಲಕ್ಷಿಸಿ ಕೇವಲ ಭಗವಂತನನ್ನು ಪೂಜಿಸುವುದಲ್ಲ. ಒಂದು ವೇಳೆ ನಾವು ಹೀಗೆ ಮಾಡಿದರೆ ಅದು ಭಗವಂತನನ್ನು ಅವಮಾನ ಮಾಡಿದಂತೆ. ಉದಾಹರಣೆಗೆ ನಮಗೆ ಯಾವುದೋ ತೊಂದರೆ ಬಂದಾಗ  ಜೋತಿಷಿಯೊಬ್ಬರು ‘ನವಗ್ರಹ ಶಾಂತಿ’ ಮಾಡಿಸಿ ಪರಿಹಾರವಾಗುತ್ತದೆ  ಎಂದು ಹೇಳುತ್ತಾರೆ. ಹೀಗೆ ಹೇಳಿದಾಗ ನಾವು ಅದನ್ನು ನಿರ್ಲಕ್ಷಿಸಿ ಕೇವಲ ಭಗವಂತನನ್ನು ಮಾತ್ರ ನಾನು ಭಜಿಸುತ್ತೇನೆ, ಭಗವಂತನ ಅಧೀನ ದೇವತೆಯ ಪೂಜೆಯ ಅಗತ್ಯವೇನು ಎಂದು ತಿಳಿದುಕೊಂಡರೆ ಅದು ತಪ್ಪಾಗುತ್ತದೆ. ನವಗ್ರಹಗಳ ಪರಿವಾರ ಸಹಿತನಾಗಿ ಕೂತ ಭಗವಂತನಿಗೆ ಮಾಡುವ ಪೂಜೆ ‘ನವಗ್ರಹ ಪೂಜೆ’. ಇದು ಯಾವುದರಿಂದ ಸಮಸ್ಯೆ ಬಂತೋ ಅದರ ಮುಖಂಡನಾಗಿ ಕುಳಿತ ಭಗವಂತನ ಪೂಜೆ. ಭಗವಂತನ ಸಮಸ್ತ ಪರಿವಾರದ ವೈಭವನ್ನು ನೆನೆಸಿಕೊಂಡು ಯಾವುದೇ ಪೂಜೆ ಮಾಡಿದರೂ ಅದು ಶ್ರೇಷ್ಠ ಪೂಜೆ ಎನಿಸುತ್ತದೆ. ಸಮಸ್ತ ದೇವತೆಗಳ ಸಹಿತನಾದ ಭಗವಂತನ ಉಪಾಸನೆಯೇ ಏಕಭಕ್ತಿ. ಭಗವಂತ ಏಕಾಕಿ ಅಲ್ಲ. ಆತ ಅನಂತ ಪ್ರಜಾಪತಿ. ಆದ್ದರಿಂದ ಭಗವಂತನನ್ನು ಪ್ರಧಾನವಾಗಿಟ್ಟುಕೊಂಡು ಇತರ ದೇವತೆಗಳನ್ನು ಭಗವಂತನ ಪರಿವಾರವಾಗಿ ತಿಳಿದು ನಿಷ್ಠೆಯಿಂದ ಪೂಜಿಸಬೇಕು. ಇದು ದೇವರನ್ನು ಸೇರಲು ನಮಗೆ ಮಾರ್ಗದರ್ಶನ ಮಾಡುವ ದೇವತೆಗಳೂ ಇಷ್ಟಪಡುವ ಅತಿಶ್ರೇಷ್ಠ ಭಕ್ತಿ. ಒಂದು ವೇಳೆ ನಾವು ಭಗವಂತನನ್ನು ಮರೆತು ಕೇವಲ ಒಂದು ದೇವತೆಯನ್ನು ಪೂಜಿಸಿದರೆ ಆ ದೇವತೆ ನಮ್ಮ ಪೂಜೆಯನ್ನು ಸ್ವೀಕರಿಸುವುದಿಲ್ಲ. ಪೂಜೆ ಪರಿಪೂರ್ಣವಾಗಬೇಕಾದರೆ ನಾವು ಏಕಭಕ್ತಿಯನ್ನು ಭಗವಂತನಲ್ಲಿ ತೋರಬೇಕು.
ಗುರುಭಕ್ತಿ ಕೂಡಾ ಇದೇ ರೀತಿ. ಗುರುಭಕ್ತಿಯಲ್ಲಿ ನಾವು ಕಾಣಬೇಕಾಗಿರುವುದು ಗುರುವಿನ  ಅಂತರಂಗದೊಳಗಿರುವ ಭಗವಂತನನ್ನು. ಜ್ಞಾನಿ ಎಲ್ಲವುದರಲ್ಲೂ ಅದರ ಅಂತರ್ಯಾಮಿಯಾದ ಭಗವಂತನನ್ನು ಕಾಣುತ್ತಾ, ಐಹಿಕ ಫಲಾಪೇಕ್ಷೆ ಇಲ್ಲದ ಏಕಭಕ್ತಿ ಮತ್ತು ನಿರಂತರ ಭಕ್ತಿಯನ್ನು ರೂಢಿಸಿಕೊಂಡಿರುತ್ತಾನೆ.                        
    
ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ
ಪ್ರಿಯೋ ಹಿ ಜ್ಞಾನಿನೋSತ್ಯರ್ಥಮಹಂ ಸ ಚ ಮಮ ಪ್ರಿಯಃ   ೧೭

ತೇಷಾಮ್  ಜ್ಞಾನೀ ನಿತ್ಯಯುಕ್ತಃ  ಏಕಭಕ್ತಿಃ ವಿಶಿಷ್ಯತೇ
ಪ್ರಿಯಃ ಹಿ ಜ್ಞಾನಿನಃ ಅತ್ಯರ್ಥಮ್ ಅಮ್  ಸಃ ಚ ಮಮ ಪ್ರಿಯಃ ಅವರಲ್ಲಿ ತಿಳಿದವನು ಮಿಗಿಲಾದವನು ; ನನ್ನಲ್ಲೇ ಭಕ್ತಿಯನ್ನಿಟ್ಟು, ನನ್ನನೇ ಸದಾ ನೆನೆಯುವವನು. ತಿಳಿದವನಿಗೆ ನಾನೆಂದರೆ ತುಂಬಾ ಇಷ್ಟ, ಅವನೆಂದರೆ ನನಗೂ ತುಂಬಾ ಇಷ್ಟ.
ಮೇಲೆ ಹೇಳಿದ ನಾಲ್ಕು ರೀತಿಯ ಭಕ್ತರಲ್ಲಿ ಜ್ಞಾನಿ ಎಲ್ಲರಿಗಿಂತ ಶ್ರೇಷ್ಠ. ಆತ ಜ್ಞಾನಪೂರ್ವಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಭಗವಂತನನ್ನು ತಿಳಿದು ಸಹಜವಾಗಿ  ಪ್ರೀತಿಸುತ್ತಾನೆ. ಹಿಂದಿನ ಅಧ್ಯಾಯಗಳಲ್ಲಿ ನೋಡಿದಂತೆ ನಾವು ಏನನ್ನು ಮಾಡುತ್ತೇವೋ ಅದನ್ನೇ ಪಡೆಯುತ್ತೇವೆ. ಭಗವಂತನನ್ನು ಹೇಗೆ ಕಾಣುತ್ತೇವೋ ಹಾಗೇ ಭಗವಂತ ನಮ್ಮನ್ನು ಕಾಣುತ್ತಾನೆ. ಈ ಕಾರಣದಿಂದ ಜ್ಞಾನಪೂರ್ವಕವಾದ, ಫಲಾಪೇಕ್ಷೆ ಇಲ್ಲದ, ಏಕಭಕ್ತಿಯುಳ್ಳ ಜ್ಞಾನಿ ಭಗವಂತನಿಗೆ ಬಹಳ ಹತ್ತಿರದಲ್ಲಿರುತ್ತಾನೆ.

ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಮ್
ಆಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ ೧೮

ಉದಾರಾಃ  ಸರ್ವೇವ ಏತೇ  ಜ್ಞಾನೀ ತು ಆತ್ಮಾ ಏವ  ಮೇ ಮತಮ್
ಆಸ್ಥಿತಃ ಸಃ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ –ಇವರೆಲ್ಲರೂ ದೊಡ್ದವರೇ. ತಿಳಿದವನಂತು ತೀರ ನನ್ನವನು ಎಂದು ನನ್ನ ತೀರ್ಮಾನ. ಏಕೆಂದರೆ ಅವನು ಹಿರಿಯ ನೆಲೆಯಾದ ನನ್ನಲ್ಲೆ ಬಗೆ ನೆಟ್ಟು ನನ್ನಲ್ಲೆ ನೆಲೆಗೊಂಡವನು.

ಕೃಷ್ಣ ಹೇಳುತ್ತಾನೆ “ಭಕ್ತಿ ಮಾರ್ಗದಲ್ಲಿ ನಡೆಯುವ ಈ ಎಲ್ಲಾ ರೀತಿಯ ಸುಕೃತಿಗಳೂ ಉತ್ತಮರೆ ; ಆದರೆ ಜ್ಞಾನಿ ಮಾತ್ರ ನನಗೆ ತುಂಬಾ ಹತ್ತಿರದವನು ಮತ್ತು ಆತ್ಮೀಯ” ಎಂದು. ಏಕೆಂದರೆ ನಮಗೆ ತಿಳಿದಂತೆ ಜ್ಞಾನವಿಲ್ಲದ ಭಕ್ತಿ ಪೂರ್ಣಭಕ್ತಿ ಆಗುವುದಿಲ್ಲ. ಜ್ಞಾನಪೂರ್ವಕವಾಗಿ ಭಕ್ತಿ ಮಾಡುವವ ನೇರವಾಗಿ ಭಗವಂತನನ್ನು ಹೋಗಿ ಸೇರುತ್ತಾನೆ. ಆದ್ದರಿಂದ ಅದು ಶ್ರೇಷ್ಠವಾದ ಭಕ್ತಿ.
ಜ್ಞಾನಿಗಳು ಆರ್ತರಾಗಿರಬಹುದು, ಜಿಜ್ಞಾಸುಗಳಾಗಿರಬಹುದು ಅಥವಾ ಅರ್ಥಾರ್ಥಿಗಳಾಗಿರಬಹುದು(ಉದಾಹರಣೆಗೆ ಅರ್ಜುನ). ಆದರೆ ಎಲ್ಲಾ ಆರ್ತರು, ಜಿಜ್ಞಾಸುಗಳು ಮತ್ತು ಅರ್ಥಾರ್ಥಿಗಳು ಜ್ಞಾನಿಗಳಾಗಿರಬೇಕೆಂದೇನಿಲ್ಲ. ಜ್ಞಾನಿಗೆ ಸದೃಶವಾದ ಭಕ್ತಿ ಇನ್ನೊಂದಿಲ್ಲ. ಜ್ಞಾನಿಯ ಮನಸ್ಸು ಸದಾ ಭಗವಂತನಲ್ಲಿ ನೆಟ್ಟಿರುತ್ತದೆ. ಭಕ್ತಿಯ ಮಾರ್ಗದಲ್ಲಿ ಸಾಗುವ ಎಲ್ಲರೂ ದೊಡ್ಡವರಾದರೂ ಕೂಡಾ, ಜ್ಞಾನಿ ಮಾತ್ರ ಭಗವಂತನಿಗೆ ಅತೀ ಆತ್ಮೀಯ.
ಮೇಲೆ ಹೇಳಿದಂತೆ ಜ್ಞಾನಿ ಅರ್ಥಾರ್ಥಿಯಾಗಿರಬಹುದು. ಈ ವಿಚಾರ  ನಿಮಗೆ ಸ್ವಲ್ಪ ಗೊಂದಲವೆನಿಸಬಹುದು. ಪ್ರಹ್ಲಾದನ ಜೀವನದ ಒಂದು ಘಟನೆಯನ್ನು ನೋಡಿದರೆ ಈ ವಿಚಾರ ನಮಗೆ ಅರ್ಥವಾಗುತ್ತದೆ. ಪ್ರಹ್ಲಾದನ ಕಥೆ ನಮಗೆಲ್ಲರಿಗೂ ತಿಳಿದಿದೆ. ಆತ ಮಹಾನ್ ಜ್ಞಾನಿ. ಇಂತಹ ಪ್ರಹ್ಲಾದ ತನ್ನ ತಂದೆ ಹಿರಣ್ಯಾಕ್ಷನನ್ನು ಕೊಂದ ನರಸಿಂಹ ರೂಪಿ ಭಗವಂತನಲ್ಲಿ ಒಂದು ಪ್ರಾರ್ಥನೆ ಮಾಡುತ್ತಾನೆ. “ನನ್ನ ತಂದೆ ತಿಳುವಳಿಕೆ ಇಲ್ಲದೆ, ನಿನ್ನ ಮಹತ್ವ ಗೊತ್ತಿಲ್ಲದೆ, ನಿನ್ನನ್ನು ನಿಂದೆ ಮಾಡಿದ. ಆ ದೋಷಕ್ಕೆ ಎಂದೂ ಪರಿಹಾರ ಇಲ್ಲ ಎನ್ನುವುದು ನನಗೆ ತಿಳಿದಿದೆ. ಆದರೂ ಅಜ್ಞಾನದಿಂದ ಆತ ಮಾಡಿದ ತಪ್ಪನ್ನು ಕ್ಷಮಿಸು” ಎಂದು. ಇಲ್ಲಿ ಯಾವುದೇ ಸ್ವಾರ್ಥ ನಮಗೆ ಕಾಣುವುದಿಲ್ಲ. ಆದ್ದರಿಂದ ಇದು ಜ್ಞಾನಿ ಅರ್ಥಾರ್ಥಿ ಹೇಗೆ ಆಗುತ್ತಾನೆ ಎನ್ನುವುದಕ್ಕೆ ಉತ್ತಮ ನಿದರ್ಶನ.

Friday, June 24, 2011

Bhagavad Geeta Kannada Chapter-07 shloka-15


ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯನ್ತೇ ನರಾಧಮಾಃ ।
ಮಾಯಯಾSಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ     ॥೧೫॥

ನ ಮಾಂ ದುಷ್ಕೃತಿನಃ ಮೂಡಾಃ ಪ್ರಪದ್ಯನ್ತೇ ನರ ಅಧಮಾಃ ।
ಮಾಯಯಾ ಅಪಹೃತ ಜ್ಞಾನಾಃ ಆಸುರಮ್  ಭಾವಮ್ ಆಶ್ರಿತಾಃ – ಕೆಡು ನಡೆಯ ತಿಳಿಗೇಡಿ ಹುಲು ಮನುಜರು, ಮೈಯ ಸುಖದಲ್ಲೆ ಮೈಮರೆತು ಮಾಯೆಯಿಂದ ತಿಳಿವು ಮಂಕಾದವರು. ಇವರು ನನಗೆ ಶರಣಾಗುವುದಿಲ್ಲ.

ಕೃಷ್ಣ ಈ ಶ್ಲೋಕದಲ್ಲಿ ದುಷ್ಕೃತಿಗಳ ಬಗ್ಗೆ ಹೇಳುತ್ತಾನೆ. ಇವರಲ್ಲಿ ಎರಡು ವಿಧ. ಯಾವುದೋ ಪ್ರಾರಬ್ಧ ಕರ್ಮಕ್ಕೊಳಗಾಗಿ-ಪರಿಸರದ ಪ್ರಭಾವದಿಂದ  ಪಾಪದ ದಾರಿಯಲ್ಲಿ ಸಾಗುವವರು(ಉದಾ: ಕರ್ಣ , ಅಜಾಮಿಳ) ಹಾಗು ಸ್ವಭಾತಃ ಪಾತಕಿಗಳು(ಉದಾ: ದುರ್ಯೋಧನ). ಕೃಷ್ಣ ಹೇಳುತ್ತಾನೆ “ನಾನೇ ನಾನು ನನಗೆ ಶರಣಾದವರನ್ನು ಮಾಯೆಯಿಂದ ಬಿಡಿಸುತ್ತೇನೆ. ಆದರೂ ಕೂಡಾ ಎಲ್ಲರೂ ನನಗೆ ಶರಣಾಗುವುದಿಲ್ಲ” ಎಂದು. ಸ್ವಭಾವತಃ ದುಷ್ಕೃತಿಗಳಾದವರು ಎಂದೂ ಭಗವಂತನನ್ನು ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಅರ್ಥವಾಗುವುದಿಲ್ಲ. ಇಂತವರು ಮಾಯೆಯ ಬಲೆಯಲ್ಲಿ ಬಿದ್ದು  ಇಂದ್ರಿಯದಲ್ಲೇ  ಎಲ್ಲಾ ಸುಖವಿದೆ ಎಂದು ತಿಳಿದು ಬದುಕುತ್ತಾರೆ. ಪ್ರಭಾವದಿಂದ ಮಾಯೆಯ ಬಲೆಗೆ ಬೀಳುವ ಸಜ್ಜನರಿಗೆ ಮರಳಿ ಸರಿದಾರಿಗೆ ಬರುವ ವ್ಯವಸ್ಥೆ  ಸೃಷ್ಟಿಯಲ್ಲಿದೆ. ಜೀವ ಸ್ವಭಾವವೇ ನೀಚವಾಗಿದ್ದರೆ ಅಂತವರನ್ನು ಎಂದೂ ತಿದ್ದಲು ಸಾಧ್ಯವಿಲ್ಲ. ಅವರು ಎಂದೂ ಭಗವಂತನನ್ನು ತಿಳಿಯಲು ಪ್ರಯತ್ನಿಸುವುದಿಲ್ಲ. ಇವರು ದುಷ್ಕೃತ್ಯವೇ ತಮ್ಮ  ಕರ್ತವ್ಯ ಎಂದು ತಿಳಿದ ತಿಳಿಗೇಡಿಗಳೆನಿಸುತ್ತಾರೆ. ಇಂಥವರನ್ನು ಇಲ್ಲಿ ಕೃಷ್ಣ ‘ನರಾಧಮಃ’ ಎಂದು ಸಂಬೋಧಿಸಿದ್ದಾನೆ. ಇವರನ್ನು ಸದಾ ಮಾಯೆ ಆವರಿಸಿರುತ್ತದೆ. ಅವರಿಗೆ ತಮಗೆ ಬುದ್ಧಿ ಇಲ್ಲ ಎಂದೂ ತಿಳಿದಿರುವುದಿಲ್ಲ! ಅವರು ಎಂದೂ ಭಗವಂತನಲ್ಲಿ ಶರಣಾಗುವುದಿಲ್ಲ ಮತ್ತು ಭಗವಂತನನ್ನು ಸೇರುವುದಿಲ್ಲ.
 ಪ್ರಭಾವದಿಂದ ದುಷ್ಕೃತ್ಯಕ್ಕಿಳಿದವರ ಬುದ್ಧಿಯನ್ನು ಮಾಯೆ ಆವರಿಸಿರುತ್ತದೆ. ಕಾಲ ಪಕ್ವವಾದಾಗ ಅವರು ಪರಿಸರ ಪ್ರಭಾವದಿಂದ ಕಳಚಿಕೊಂಡು ಮರಳಿ ಭಗವಂತನಿಗೆ ಶರಣಾಗುತ್ತಾರೆ. ಇದಕ್ಕೆ ಉತ್ತಮ ದೃಷ್ಟಾಂತ ಅಜಾಮಿಳನ ಜೀವನ ಕಥನ.
ಭಗವಂತ ಅವರವರ ಸ್ವಭಾವಕ್ಕೆ ತಕ್ಕಂತೆ ಅವರವರ ವ್ಯಕ್ತಿತ್ವ ವಿಕಾಸಗೊಳಿಸುತ್ತಾನೆ. ಜೀವ ಸ್ವಭಾವವನ್ನು ಆತ ಎಂದೂ ಬದಲಿಸುವುದಿಲ್ಲ. ಪಾಪಿಗಳಾದವರಿಗೆ ಪಾಪದ ಫಲ, ಪುಣ್ಯವಂತರಿಗೆ ಪುಣ್ಯದ ಫಲ. ಈ ವ್ಯವಸ್ಥೆ ಎಂದೂ ಬದಲಾಗುವುದಿಲ್ಲ. ಈ ಕಾರಣದಿಂದ ಪ್ರಪಂಚದಲ್ಲಿ ನಾವು ಎಲ್ಲಾ ವಿಧದ ಜನರನ್ನು ಕಾಣುತ್ತೇವೆ. ಸಾಮಾನ್ಯವಾಗಿ ಪ್ರಪಂಚದಲ್ಲಿ ಭಗವದ್ಭಕ್ತರು ಮತ್ತು ಜ್ಞಾನಿಗಳು ಅಲ್ಪಸಂಖ್ಯಾತರು. ಯಾವ ಕಾಲದಲ್ಲೂ ಕೂಡಾ ಇವರು ಬಹು ಸಂಖ್ಯೆಯಲ್ಲಿ ಇರುವುದಿಲ್ಲ.

ಹರಿಕಥಾಮೃತಸಾರದಲ್ಲಿ ದಾಸರು ಸತ್ವರು, ತಾಮಸರು ಮತ್ತು ರಾಜಸರ ಬಗ್ಗೆ ಈ ರೀತಿ ಸೊಗಸಾಗಿ ಹಾಡಿದ್ದಾರೆ:
ಸತ್ವಸತ್ವರು ಸತ್ವರಾಜಸ ಸತ್ವತಾಮಸ ಮೂವರೂ-
ರಜ ಸತ್ವಾಧಿಕಾರಿಗಳು ಭಗವದ್ಭಕ್ತರೆನಿಸುವರು |
ನಿತ್ಯಬದ್ಧರು ರಜೋರಜರುತ್ಪತ್ತಿ ಭೂಸ್ವರ್ಗದೊಳು-
ನರಕದಿ ಪ್ರಥ್ವಿಯೊಳು ಸಂಚರಿಸುತಿಪ್ಪರು ರಾಜಸ್ತಾಮಸರು||

ತಮಸ್ಸಾತ್ವಿಕರೆನಿಸಿಕೊಂಬರು ಅಮಿತನಾಖ್ಯಾತಾಸುರರಗಣ-
ತಮೋರಾಜಸರೆನಿಸಿಕೊಂಬರು ದೈತ್ಯ ಸಮುದಾಯ |
ತಮಸ್ತಾಮಸ ಕಲಿ ಪುರಂಧ್ರಿಯು ಅಮಿತ ದುರ್ಗುಣಪೂರ್ಣ-
ಸರ್ವಧರ್ಮರೊಳಧಮಾಧಮದುರಾತ್ಮನು ಕಲಿಯೆನಿಸಿಕೊಂಬ ||

ಮಾಯೆಯ ಪ್ರಭಾವ ನಮ್ಮ ಮೇಲೆ ಕಾಲಕ್ಕನುಗುಣವಾಗಿರುತ್ತದೆ. ಸಾತ್ವಿಕ ಯುಗದಲ್ಲಿ ಸಾತ್ವಿಕ ಸ್ವಭಾವ ಎಷ್ಟು ಬಲಿಷ್ಟ ಎಂದರೆ ಅದು ಸಾತ್ವಿಕರು ತಾಮಸ ಪ್ರಭಾವಕ್ಕೆ ಒಳಗಾಗದೆ ಶುದ್ಧವಾಗಿರುವಂತೆ ಮಾಡುತ್ತದೆ. ಆದರೆ ಕಲಿಯುಗದಲ್ಲಿ ಎಲ್ಲರೂ  ಬಹಳ ಸುಲಭವಾಗಿ ತಾಮಸ ಪ್ರಭಾವಕ್ಕೊಳಗಾಗುತ್ತಾರೆ. ಒಂದು ವೇಳೆ ಅದನ್ನು ಮೀರಿ ಭಗವಂತನತ್ತ ಮನಸ್ಸು ಹರಿದರೆ ಅದು ಪರಮ ಶ್ರೇಷ್ಠ. ಇದಕ್ಕಾಗಿ ‘ಕಲಿಯುಗದಲ್ಲಿ ಹರಿನಾಮ ನೆನೆದರೆ ಕುಲಕೋಟಿ ಉದ್ಧಾರವಾಗುವುದು’ ಎನ್ನುತ್ತಾರೆ. ಕಲಿಯುಗದಲ್ಲಿ ತಾಮಸ ಪ್ರಭಾವಕ್ಕೊಳಗಾಗಿ ಮಾಡುವ ತಪ್ಪಿಗೆ ಶಿಕ್ಷೆ ಕಡಿಮೆ. ಹಾಗೇ ಪುಣ್ಯಕ್ಕೆ ಮಹಾ ಫಲ.
ದುಷ್ಕೃತಿಗಳ ಬಗ್ಗೆ ವಿವರಿಸಿದ ಕೃಷ್ಣ, ಪುಣ್ಯವಂತ ಸಜ್ಜನರ ವಿಧವನ್ನು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

Bhagavad Geeta Kannada Chapter-07 Shloka 12-14


ಯೇ ಚೈವ ಸಾತ್ತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ    
ಮತ್ತ ಏವೇತಿ ತಾನ್ ವಿದ್ಧಿ ನ ತ್ವಹಂ ತೇಷು ತೇ ಮಯಿ         ೧೨

ಯೇ ಚ ಏವ ಸಾತ್ತ್ವಿಕಾಃ ಭಾವಾ ರಾಜಸಾಃ ತಾಮಸಾಃ ಚ ಯೇ        
ಮತ್ತ ಮತ್ತಃ ಏವ ಇತಿ ತಾನ್ ವಿದ್ಧಿ  ನ ತು ಅಹಮ್ ತೇಷು ತೇ ಮಯಿ-ಯಾವ ವಸ್ತುಗಳು ಸತ್ವಗುಣದ ಪ್ರಭಾವಕ್ಕೆ ಒಳಗಾದವು ಮತ್ತು ಯಾವವು ರಜೋಗುಣ ಮತ್ತು ತಮೋಗುಣದ ಪ್ರಭಾವಕ್ಕೆ-ಅವೆಲ್ಲವೂ ನನ್ನಿಂದಾಗಿಯೇ ಆಗಿವೆ ಎಂದು ತಿಳಿ. ನಾನು ಅವುಗಳ ಹಂಗಿನಲ್ಲಿಲ್ಲ. ಅವು ನನ್ನ ಹಂಗಿನಲ್ಲಿವೆ.

ಈ ಪ್ರಪಂಚ ಎಂದರೆ ಅಂತರಂಗ ಮತ್ತು ಬಹಿರಂಗ. ಅಂತರಂಗ ಪ್ರಪಂಚದಲ್ಲಿ  ತ್ರೈಗುಣ್ಯದ ಭಾವನೆಗಳು, ಬಾಹ್ಯ ಪ್ರಪಂಚದಲ್ಲಿ ತ್ರೈಗುಣ್ಯ ಪದಾರ್ಥಗಳು. ಸತ್ವ, ರಜಸ್ಸು ಮತ್ತು ತಮಸ್ಸು ಈ ಮೂರರ ಸಮಾವೇಶವೇ ಈ ಪ್ರಪಂಚ. ಮಣ್ಣು ತಮೋಗುಣದ, ನೀರು ರಜೋಗುಣದ ಮತ್ತು ಬೆಂಕಿ ಸತ್ವ ಗುಣದ ಸಂಕೇತ. ಆದ್ದರಿಂದ ಈ ಪ್ರಪಂಚದಲ್ಲಿ ನಮಗೆ ಕಾಣುವ ಪ್ರತಿಯೊಂದು ವಸ್ತುವೂ ಕೂಡಾ ಈ ಮೂರರ ಸಮಾವೇಶ. ನಮ್ಮ ಅಂತರಂಗದ ಭಾವನೆಗಳೂ ಕೂಡಾ ಈ ಮೂರು ಗುಣದ ಸಮಾವೇಶ. ನಮ್ಮಲ್ಲಿರುವ ವರ್ಣ ಪದ್ಧತಿ ಕೂಡಾ ತ್ರೈಗುಣ್ಯ ಆಧಾರಿತ. ಎಲ್ಲರಲ್ಲಿಯೂ ಕೂಡಾ ಈ ಮೂರು ಗುಣಗಳಿವೆ. ಆದರೆ ಸತ್ವದ ಅಂಶ ಹೆಚ್ಚಾಗಿದ್ದು, ರಜಸ್ಸು ಮತ್ತು ತಮಸ್ಸು ಕಡಿಮೆ ಇರುವವ ಬ್ರಾಹ್ಮಣ ವರ್ಣ; ರಜಸ್ಸಿನ ಅಂಶ ಹೆಚ್ಚಾಗಿದ್ದು ಅದರ ನಂತರ ಸತ್ವ ಮತ್ತು ತಮಸ್ಸು ಇರುವವ ಕ್ಷತ್ರಿಯ; ರಜಸ್ಸು ಹೆಚ್ಚಾಗಿದ್ದು ಅದರ ನಂತರ ತಮಸ್ಸು ಮತ್ತು ಸತ್ವ ಗುಣ ಉಳ್ಳವ ವೈಶ್ಯ; ತಮೋಗುಣ ಹೆಚ್ಚಾಗಿದ್ದು, ಅದರ ನಂತರ ರಜಸ್ಸು ಮತ್ತು ಸತ್ವ ಗುಣ ಉಳ್ಳವ ಶೂದ್ರ. ಈ ಎಲ್ಲಾ ವರ್ಣದವರೂ ಮೋಕ್ಷ ಯೋಗ್ಯರೆ. ಸೃಷ್ಟಿಯ ಆದಿಯಲ್ಲಿ ಈ ಮೂರು ಗುಣಗಳ ಮಿಶ್ರಣವಾಗಿಯೇ ಸೃಷ್ಟಿ ಪ್ರಾರಂಭವಾಯಿತು. ಇಲ್ಲಿ ಶುದ್ಧ ಸತ್ವ ಅನ್ನುವುದೊಂದಿಲ್ಲ. (ಗಣಿತಬದ್ಧವಾಗಿ ಹೇಗೆ ತ್ರೈಗುಣ್ಯದಿಂದ ಈ ಪ್ರಪಂಚ ನಿರ್ಮಾಣವಾಯಿತು ಎನ್ನುವುದನ್ನು ಮಧ್ವಾಚಾರ್ಯರು ತಮ್ಮ ಭಾಗವತ ತಾತ್ಪರ್ಯನಿರ್ಣಯ ಗ್ರಂಥದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಇದೊಂದು ಸೃಷ್ಟಿಯ ಪ್ರಮೇಯ).
ಹೀಗೆ ಪ್ರತಿಯೊಂದು ಪದಾರ್ಥದಲ್ಲಿ ಮೂರು ಅಂಶಗಳಿವೆ ಮತ್ತು ನಮ್ಮ ಭಾವದಲ್ಲಿಯೂ ಮೂರು ಅಂಶಗಳಿವೆ. ಈ ಮೂರು ಗುಣಗಳ ಸಂಕೀರ್ಣ ಪ್ರಪಂಚ ಬಹಳ ವಿಚಿತ್ರ. ಇವು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಮನುಷ್ಯ ತೀರ್ಮಾನ ಮಾಡಲಾಗದಷ್ಟು ಗೊಂದಲಗೆಡಿಸುತ್ತವೆ. ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ “ತ್ರೈಗುಣ್ಯ ವರ್ಜಿತನಾಗಿ ಈ ಮೂರು ಗುಣಗಳನ್ನುಕೊಡುತ್ತಿರುವವನು ನಾನು” ಎಂದು! ಪ್ರತಿಯೊಂದು ಜೀವದ ಜೀವ ಸ್ವಭಾವಕ್ಕನುಗುಣವಾಗಿ, ಅದಕ್ಕೆ ಬೇಕಾದ ಗುಣ ಪ್ರವೃತ್ತಿಯನ್ನು ಕೊಡುವವ ಆ  ಭಗವಂತ. ಯಾರಲ್ಲೂ ಯಾವ ಕ್ರಿಯೆಯೂ ಭಗವಂತನ ಪ್ರೇರಣೆ ಇಲ್ಲದೆ ಆಗುವುದಿಲ್ಲ. ಹಿಂದೆ ವಿವರಿಸಿದಂತೆ ಜೀವನಿಗೆ ಸ್ವತಂತ್ರ ಇಚ್ಛಾಪೂರ್ವಕ ಕ್ರಿಯೆ ಇಲ್ಲ. “ನಹಿ ಪ್ರತಿಬಿಂಬಸ್ಯ ಕ್ರಿಯಾ | ಸ ಹಿ ಬಿಂಬ ಕ್ರಿಯೈವ ಕ್ರಿಯಾವಾನ್ ||”. ಬಿಂಬದಲ್ಲಿ ಕ್ರಿಯೆ ಇಲ್ಲದೆ ಪ್ರತಿಬಿಂಬದಲ್ಲಿ ಕ್ರಿಯೆ ಇಲ್ಲ. ಭಗವಂತನ ಅಧೀನವಾಗಿ ಈ ಮೂರು ಗುಣಗಳು ಈ ಪ್ರಪಂಚದಲ್ಲಿ ತುಂಬಿಕೊಂಡಿವೆ. ಇದು ನಮ್ಮ ಜೀವ ಪಕ್ವವಾಗಿ ಮೋಕ್ಷವನ್ನು ಸೇರಲು ಭಗವಂತ ನಿರ್ಮಿಸಿರುವ ಪಾಠಶಾಲೆ.
ಭಗವಂತ ತ್ರೈಗುಣ್ಯ ವರ್ಜಿತ. ಆತ ತ್ರಿಗುಣದ ನಿಯಂತ್ರಣಕ್ಕೊಳಪಟ್ಟಿಲ್ಲ.  ಅದಕ್ಕಾಗಿ ಭಗವಂತನನ್ನು “ತ್ರಿಗುಣಾತೀತ ವಿದಾರಕ-ಪರಿತೋ ತೇಹಿಸುಭಕ್ತಿಂ- ಕರುಣಾಪೂರ್ಣ ಪರಪ್ರದ-ಚರಿತಂ ಜ್ಞಾಪಯಮೇತೇ”  ಎಂದು ಸ್ತುತಿಸುತ್ತಾರೆ. ಇಡೀ ಜಗತ್ತು ತ್ರಿಗುಣದ ನಿಯಂತ್ರಣಕ್ಕೊಳಪಟ್ಟಿದೆ ಆದರೆ ಭಗವಂತ ತ್ರಿಗುಣಾತೀತ.

ತ್ರಿಭಿರ್ಗುಣಮಯೈರ್ಭಾವೈರೇಭಿಃ ಸರ್ವಮಿದಂ ಜಗತ್        
ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್ ೧೩

ತ್ರಿಭಿಃ ಗುಣ ಮಯೈಃ ಭಾವೈಃಭಿಃ ಸರ್ವಮ್ ಇದಮ್ ಜಗತ್         
ಮೋಹಿತಮ್ ನ ಅಭಿಜಾನಾತಿ ಮಾಮ್ ಏಭ್ಯಃ ಪರಮ್ ಅವ್ಯಯಮ್-ತ್ರಿಗುಣಾತ್ಮಕವಾದ ಈ ಸೋತ್ತುಗಳಿಂದ ಮೋಹಗೊಂಡ ಈ ಎಲ್ಲ ಜೀವಜಾತ ಇವುಗಳಿಂದಾಚೆಗಿರುವ, ಅಳಿವಿರದ ನನ್ನನ್ನು ತಿಳಿಯದಾಗಿದೆ.

ಇಡೀ ಜಗತ್ತು ತ್ರಿಗುಣಗಳಿಂದ ಮೋಹಿತವಾಗಿರುವುದರಿಂದ ಮತ್ತು ಈ ಮೂರು ಗುಣಗಳು ಎಲ್ಲಾ ಕಡೆ ತುಂಬಿರುವುದರಿಂದ ನಮಗೆ ತ್ರಿಗುಣಾತೀತವಾದ ಯೋಚನೆ ಅಸಾಧ್ಯ. ಈ ಕಾರಣದಿಂದ ತ್ರಿಗುಣಾತೀತನೂ ಅವ್ಯಯನೂ ಆದ  ಆ ಭಗವಂತನನ್ನು ಪೂರ್ಣ ಗ್ರಹಿಸಲು ಜೀವನಿಗೆ ಸಾಧ್ಯವಿಲ್ಲ.  ಭಗವಂತನನ್ನು ಅರಿಯಬೇಕಾದರೆ ನಾವು ಈ ತ್ರಿಗುಣದ ಚಕ್ರದಿಂದ ಹೊರಕ್ಕೆ ಬರಬೇಕು. ಆದರೆ ಹೊರ ಬರುವ ಮಾರ್ಗ ಎಂತು? ಉತ್ತರ ಮುಂದಿನ ಶ್ಲೋಕ.    

ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ
ಮಾಮೇವ ಯೇ ಪ್ರಪದ್ಯಂತೇ  ಮಾಯಾಮೇತಾಂ ತರಂತಿ ತೇ ೧೪

ದೈವೀ ಹಿ ಏಷಾ  ಗುಣಮಯೀ ಮಮ ಮಾಯಾ ದುರತ್ಯಯಾ
ಮಾಮ್ ಏವ ಯೇ ಪ್ರಪದ್ಯಂತೇ  ಮಾಯಾಮ್ ಎತಾಮ್ ರಂತಿ ತೇ-ಗುಣಮಯವಾದ ನನ್ನ ಮಾಯೆ ತುಂಬಾ ಶಕ್ತಿಶಾಲಿ. ಅದನ್ನು ದಾಟುವುದು ಸುಲಭವಲ್ಲ. ಯಾರು ನನ್ನಲ್ಲಿ ಮೊರೆ ಹೋಗುತ್ತಾರೆ ಅವರು ಈ ಮಾಯೆಯನ್ನು ದಾಟುತ್ತಾರೆ.

ತ್ರಿಗುಣಾತ್ಮಕವಾದ ಈ ಮೂರು ಭಾವಗಳಲ್ಲಿ ಇನ್ನೊಂದು ಮುಖವಿದೆ. ತ್ರಿಗುಣದ ಮಾನಿನಿ(ಶ್ರೀ ಲಕ್ಷ್ಮಿ)ಯೂ ಕೂಡಾ ಮೂರು ಮುಖದವಳು. ಶ್ರೀ-ಭೂ-ದುರ್ಗ-ಇವು ತ್ರಿಗುಣವನ್ನು ನಿಯಂತ್ರಿಸುವ ಮೂರು ರೂಪಗಳು. ಈ ಗುಣಮಯೀ ತಾಯಿ ಮಾಯೆಯಾಗಿ ಜಗತ್ತಿನಲ್ಲಿ ತುಂಬಿದ್ದಾಳೆ. ಇಡೀ ಜಗತ್ತನ್ನು ನಿಯಂತ್ರಿಸಬಲ್ಲ  ಮಹಾ  ಶಕ್ತಿ ಸ್ವರೂಪ ಆ ಮಾಯೆ ಭಗವಂತನ ಅಧೀನ. ನಾವು ಭಗವಂತನನ್ನು ಕಾಣಬೇಕಾದರೆ ಈ ಮಾಯಾ ಪರದೆಯನ್ನು ಸರಿಸಿ ಕಾಣಬೇಕು. ಆದರೆ ನಮ್ಮಿಂದ ಅದು ಅಸಂಭವ. ಈ ಕಾರಣದಿಂದ ಭಗವಂತನನ್ನು ಸೇರುವ ಏಕೈಕ ಮಾರ್ಗ ಭಗವಂತನಲ್ಲಿ ಪೂರ್ಣ ಶರಣಾಗತಿ. ಆತ ಈ ಮಾಯಾ ಪರದೆಯನ್ನು ಸರಿಸಿ ದರ್ಶನ ಕೊಡಬಲ್ಲ. ಈ ಹಿಂದೆ ಹೇಳಿದಂತೆ ಸಂಸಾರದ ಮೋಹ ಪಾಶದಿಂದ ದೂರ ಸರಿದು ನಾರಾಯಣನಲ್ಲಿ  ಶರಣಾದಲ್ಲಿ ಆತ ನಮ್ಮನ್ನು ಈ ಮಾಯಾ ಪರದೆಯಿಂದ ದಾಟಿಸುತ್ತಾನೆ. 
ಭಗವಂತನಲ್ಲದೆ  ನನಗೆ ಬೇರೆ ಅಸ್ತಿತ್ವವಿಲ್ಲ ಎನ್ನುವ ಎಚ್ಚರದಿಂದ ನಾವು ನಮ್ಮನ್ನು ಆತನಿಗೆ ಅರ್ಪಿಸಿಕೊಳ್ಳಬೇಕು. ನವವಿಧ ಭಕ್ತಿಯಲ್ಲಿ ಇದು ಶ್ರೇಷ್ಠವಾದ ಭಕ್ತಿ. ಇದನ್ನು ಆತ್ಮನಿವೇದನ ಎನ್ನುತ್ತಾರೆ.ಮೊದಲು ನಮ್ಮೊಳಗಿರುವ ಭಗವಂತನನ್ನು ಅರಿತು, ಅಹಂಕಾರ ಮಮಕಾರವನ್ನು ತೊರೆದು ನಮ್ಮನ್ನು ಸಂಪೂರ್ಣವಾಗಿ ಭಗವಂತನಲ್ಲಿ ಅರ್ಪಿಸಿಕೊಂಡಾಗ ಭಗವದ್ ಸಾಕ್ಷಾತ್ಕಾರವಾಗುತ್ತದೆ. ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ಏಕ ಭಕ್ತಿ ಮತ್ತು ಏಕ ಶರಣಾಗತಿ. ಕೃಷ್ಣ ಹೇಳುತ್ತಾನೆ "ಯಾರು ನನಗೇ ಶರಣಾಗುತ್ತಾರೋ ಅವರು ಪಾರಾಗಿಯೇ  ಆಗುತ್ತಾರೆ" ಎಂದು. ಕೃಷ್ಣನ ಈ ಮಾತನ್ನು ಕೇಳಿದಾಗ ನಮ್ಮನ್ನು ಕೆಲವು ಪ್ರಶ್ನೆಗಳು  ಕಾಡಬಹುದು. "ಎಲ್ಲರೂ ಏಕೆ ಭಗವಂತನಲ್ಲಿ ಶರಣಾಗುವುದಿಲ್ಲ? ಕೆಟ್ಟತನ  ಜನರಲ್ಲಿ ಹೇಗೆ ಬರುತ್ತದೆ?" ಇತ್ಯಾದಿ. ಬನ್ನಿ ನಮ್ಮ ಪ್ರಶ್ನೆಗೆ ಉತ್ತರವನ್ನು ಮುಂದಿನ ಶ್ಲೋಕದಲ್ಲಿ ಹುಡುಕೋಣ.        

Thursday, June 23, 2011

Bhagavad Geeta Chapter-07 Shloka-11


ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್
ಧರ್ಮಾವಿರುದ್ಧೋ ಭೂತೇಷು ಕಾಮೋSಸ್ಮಿ ಭರತರ್ಷಭ ೧೧

ಬಲಮ್  ಬಲವತಾಂ ಚ ಅಹಮ್ ಕಾಮ ರಾಗ ವಿವರ್ಜಿತಮ್
ಧರ್ಮವಿರುದ್ಧಃ  ಭೂತೇಷು ಕಾಮಃ ಅಸ್ಮಿ ಭರತ ಋಷ- ಬಲವಂತರ ಬಯಕೆ-ಒಲವುಗಳಿಲ್ಲದ ಬಲ ನನ್ನಿಂದ. [ಬಲವಂತರೊಳಗಿದ್ದು ಬಲ ನೀಡುವುದರಿಂದ ಮತ್ತು ಕಾಮನೆಯಿಲ್ಲದ, ಆಸ್ಥಾನದಲ್ಲಿ ಬಳಸದ ಬಲರೂಪನಾದ್ದರಿಂದ ‘ಕಾಮ ವಿವರ್ಜಿತ’ ಮತ್ತು ‘ಬಲ’ ನಾಮಕ.] ಭರತಶ್ರೇಷ್ಠ, ಜೀವಿಗಳಲ್ಲಿ ಧರ್ಮಕ್ಕೆ ಅನುಗುಣವಾದ ಬಯಕೆ ನನ್ನಿಂದ. [ಜೀವಿಗಳಲ್ಲಿದ್ದು ಧರ್ಮ ವೃದ್ಧಿಗೆ ನೆರವಾಗಿ ಎಲ್ಲರಿಂದಲೂ ಕಾಮಿತನಾದ್ದರಿಂದ ‘ಧರ್ಮಾವಿರುದ್ಧ’ ಮತ್ತು ‘ಕಾಮ’ನಾಮಕ.]

ವಿಭೂತಿಯ ಸಮಸ್ತ ಮುಖಗಳನ್ನು ಕ್ರೂಡೀಕರಿಸಿ ಸಮಷ್ಟಿಯಾಗಿ ಹೇಳಿದ ಕೃಷ್ಣ, ಇಲ್ಲಿ ಮೂಲಭೂತವಾಗಿ ಬದುಕಿನ ಎರಡು ಮುಖವನ್ನು ವಿವರಿಸುತ್ತಾನೆ. ಕೃಷ್ಣ ಚೇತನದಲ್ಲಿರುವ ಬಲವನ್ನು ಈ ಶ್ಲೋಕದಲ್ಲಿ ಉಲ್ಲೇಖಿಸುತ್ತಾನೆ. ಬಲದಲ್ಲಿ ಅನೇಕ ವಿಧ. ಮುಡಕೋಪನಿಷತ್ತಿನಲ್ಲಿ ಹೇಳುವಂತೆ:

ನಾಯಮಾತ್ಮಾ ಪ್ರವಚನೇನ ಲಭ್ಯೋ ನ ಮೇಧಯಾ ನ ಬಹುನಾ ಶ್ರುತೇನ ।
ಯಮೇವೈಷ ವೃಣುತೇ ತೇನ ಲಭ್ಯಸ್ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್ ॥೩-೨-೩॥

ನಾಯಮಾತ್ಮಾ ಬಲಹೀನೇನ ಲಭ್ಯೋ ನ ಚ ಪ್ರಮಾದಾತ್ ತಪಸೋ ವಾಪ್ಯಲಿಙ್ಗಾತ್ ।
ಏತೈರುಪಾಯೈರ್ಯತತೇ ಯಸ್ತು ವಿದ್ವಾಂಸ್ತಸ್ಯೈಷ ಆತ್ಮಾ ವಿಶತೇ ಬ್ರಹ್ಮಧಾಮ ॥೩-೨-೪॥

“ನ ಅಯಂ ಆತ್ಮಾ ಬಲಹೀನೇನ ಲಭ್ಯಃ” ಅಂದರೆ ಭಗವಂತನನ್ನು ಪಡೆಯುವುದು ದುರ್ಬಲರಿಗೆ ಸಾಧ್ಯವಿಲ್ಲ ಎಂದರ್ಥ. ಇಲ್ಲಿ ಬಂದಿರುವ ಬಲ ದೇಹಬಲವಲ್ಲ. ಇದು ಭಗವಂತನ ಅನುಗ್ರಹದ ಬಲ, ಸ್ವರೂಪ ಯೋಗ್ಯತೆ ಮತ್ತು ಜೊತೆಗೆ ಮನೋಬಲ. ಈ ಶ್ಲೋಕದಲ್ಲಿ ಹೇಳುವಂತೆ-ಅಧ್ಯಯನದಿಂದ, ಶಾಸ್ತ್ರ ಶ್ರವಣದಿಂದ ‘ಮನೋಬಲ’ ವೃದ್ಧಿಯಾಗಬಹುದು, ಆದರೆ ಆತ್ಮಬಲವಿಲ್ಲದೆ  ಭಗವಂತನನ್ನು ಕಾಣಲು ಸಾಧ್ಯವಿಲ್ಲ.

"ಯಸ್ಯ ದೇವೇ ಪರಾ ಭಕ್ತಿರ್ಯಥಾ ದೇವೇ ತಥಾ ಗುರೌ|
ತಸ್ಮೈತೇ ಕಥಿತಾ ಹ್ಯರ್ಥಾಃ ಪ್ರಕಾಶಂತೇ ಮಹಾತ್ಮನಃ" 

ಜ್ಞಾನದ ಬಲವಿದ್ದರೆ ಸಾಲದು,ಭಕ್ತಿಯ ಬಲಬೇಕು. ಭಗವಂತನ ಅನುಗ್ರಹಕ್ಕೆ ನಮ್ಮಲ್ಲಿ ಭಕ್ತಿಯನ್ನು ಜಾಗೃತಗೊಳಿಸುವ ಗುರು ಅನುಗ್ರಹದ ಬಲವೂ ಮುಖ್ಯ. ಹೀಗೆ ಆತ್ಮ ಯೋಗ್ಯತೆಯ ಬಲ, ಸಾಧನೆಯ ಬಲ, ಭಕ್ತಿಯ ಬಲ,ಶಾಸ್ತ್ರಾಧ್ಯಾಯನದ ಬಲ, ಗುರುಗಳ ಅನುಗ್ರಹದ ಬಲ, ಇವನ್ನೆಲ್ಲವನ್ನೂ ನಮಗೆ ಕೊಡುವವ ಆ ಭಗವಂತ. ಆತ  ಅನೇಕರೂಪದಲ್ಲಿ ‘ಬಲ’ ನಾಮಕನಾಗಿ  ನಿಂತು  ಜೀವ ಯೋಗ್ಯತೆಗನುಗುಣವಾಗಿ ವಿಶೇಷ ಬಲವನ್ನು ಅನುಗ್ರಹಿಸುತ್ತಾನೆ.
ಸಾಮಾನ್ಯವಾಗಿ ಬಲದ ಹಿಂದೆ ಒಂದು ದೋಷವಿರುತ್ತದೆ. ಬಲ ಬಂದಾಗ ನಮಗೆ ಕೆಟ್ಟ ಕಾಮನೆ ಹುಟ್ಟುತ್ತದೆ. ಆದರೆ ಭಗವಂತ  ಕಾಮ-ರಾಗ ವಿವರ್ಜಿತ  ಬಲ ಸ್ವರೂಪ. ನಮಗೆ ಕಾಮವರ್ಜಿತ ಬಲ ಕಲ್ಪನಾತೀತ. ಇಲ್ಲಿ ಕೃಷ್ಣ ‘ಕಾಮನೆ’ ಬೇಡ ಎಂದು ಹೇಳುತ್ತಿಲ್ಲ. ‘ಭಗವಂತನನ್ನು ತಿಳಿಯಬೇಕು’, ‘ಭಕ್ತಿಯಿಂದ  ಶಾಸ್ತ್ರಾಧ್ಯಾಯನ ಮಾಡಬೇಕು’ ಇತ್ಯಾದಿ ಕಾಮನೆಗಳು ನಮಗೆ ಅಗತ್ಯವಾಗಿ ಬೇಕು. ಯಾವ ಬಯಕೆ ನಮಗೆ ಧಾರಕ ಶಕ್ತಿಯಾಗಿ ನಿಲ್ಲುತ್ತದೋ ಅಲ್ಲಿ ‘ಕಾಮ ವಿವರ್ಜಿತನಾಗಿ’ ಭಗವಂತ ನಿಂತ. ಇಲ್ಲಿ ಕೃಷ್ಣ ಹೇಳುತ್ತಾನೆ “ಸಮಸ್ತ ಜೀವಜಾತದಲ್ಲಿ ಧರ್ಮಕ್ಕೆ ಅವಿರುದ್ಧವಾಗಿರುವ ಕಾಮನೆಯ ಹಿಂದೆ ನಾನಿದ್ದೇನೆ” ಎಂದು.
ಈ  ಶ್ಲೋಕದಲ್ಲಿ ಕೃಷ್ಣ ಅರ್ಜುನನನ್ನು ‘ಭರತ ಋಷ’ ಎಂದು ಸಂಬೋಧಿಸುತ್ತಾನೆ.  ಜ್ಞಾನಾನಂದದಲ್ಲಿ ರಥನಾದವ ‘ಭರತರ್ಷಭ’;  ಭರತ(ವಾಯು) ಋಷಭ(ಅಣ್ಣ)ನಾಗಿ ಉಳ್ಳವ ಭರತರ್ಷಭ.
ಈ ಮೇಲಿನ ಶ್ಲೋಕದಲ್ಲಿ ಒಳ್ಳೆಯ ಅಂಶದಲ್ಲಿ ಇರತಕ್ಕಂತಹ ತನ್ನ ವಿಭೂತಿಯನ್ನು ಕೃಷ್ಣ ವಿವರಿಸಿದ. ಈ ಅನುಸಂಧಾನದಲ್ಲಿ ಗೀತೆಯನ್ನು ನೋಡಿದಾಗ, ಇಲ್ಲಿ ಕೆಲವರಿಗೆ ಒಂದು ಸಂಶಯ ಬರಬಹುದು. “ಒಳ್ಳೆಯದನ್ನು ಮಾಡಿಸುವವನು ದೇವರು, ಕೆಟ್ಟದ್ದನ್ನು ಮಾಡಿಸುವುದು ಯಾವುದೋ ದುಷ್ಟಶಕ್ತಿ” ಎಂದು. ಅಂದರೆ  ಎಲ್ಲವನ್ನೂ ಭಗವಂತ ಮಾಡಿಸುವುದಲ್ಲ ಎನ್ನುವ ಸಂಶಯ ನಮ್ಮನ್ನು ಕಾಡಬಹುದು. ಈ ನಮ್ಮ ಸಂಶಯಕ್ಕೆ  ಕೃಷ್ಣನ  ಉತ್ತರ ಮುಂದಿನ ಶ್ಲೋಕ.

Friday, June 17, 2011

Bhagavad Gita Kannada Chapter-07 Shloka 10


ಕೃಷ್ಣ ಪಿಂಡಾಂಡ-ಬ್ರಹ್ಮಾಂಡದಲ್ಲಿ ನಿಂತು ಹೇಗೆ ವಿಭೂತಿಯಾಗಿ ಬೇರೆ ಬೇರೆ ವಸ್ತುವಿನಲ್ಲಿ ವಿಶಿಷ್ಟ ಶಕ್ತಿಯನ್ನು ತುಂಬುತ್ತಾನೆ ಎನ್ನುವ ಮಾತಿನ ಸಂಕ್ಷಿಪ್ತ ಉಪಾಸನೆ ನೋಡಿದೆವು. ಈ ವಿಭೂತಿಯ ವಿಸ್ತಾರ ಮುಂದೆ ಪುನಃ ಬರುತ್ತದೆ. ಇಲ್ಲಿ ಕೃಷ್ಣ ಅದನ್ನು ಕ್ರೂಡೀಕರಣ ಮಾಡಿ ಸಮಷ್ಟಿಯಾಗಿ ವಿಭೂತಿಯ ಅನುಸಂಧಾನ ಹೇಗಿರಬೇಕು ಎಂದು ವಿವರಿಸಿದ್ದಾನೆ.   
ಬೀಜಂ ಮಾಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಮ್
ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ೧೦

ಬೀಜಮ್  ಮಾಮ್  ಸರ್ವಭೂತಾನಾಮ್  ವಿದ್ಧಿ ಪಾರ್ಥ ಸನಾತನಮ್
ಬುದ್ಧಿ ಬುದ್ಧಿಮತಾಮ್ ಅಸ್ಮಿ ತೇಜಃ ತೇಜಸ್ವಿನಾಮ್ ಅಹಮ್- ಓ ಪಾರ್ಥ, ಎಲ್ಲ ಜೀವಿಗಳ ಅಳಿವಿರದ ಬೀಜ [ಸ್ವಭಾವದ ಅಭಿವ್ಯಕ್ತಿಗೆ ಕಾರಣನಾಗಿ ‘ಬೀಜ’ ನಾಮಕ] ನಾನೆಂದು ತಿಳಿ. ತಿಳಿದವರ ತಿಳಿವು ನನ್ನಿಂದ. [ತಿಳಿದವರೊಳಗಿದ್ದು ತಿಳಿವು ನೀಡುವುದರಿಂದ ‘ಬುದ್ಧಿ’ನಾಮಕ ]. ಪರಾಕ್ರಮಿಗಳ ಸೋಲರಿಯದ ಶಕ್ತಿ ನನ್ನಿಂದ. [ಪರಾಕ್ರಮಿಗಳೊಳಗಿದ್ದು ಸೋಲರಿಯದ ಶಕ್ತಿ ನೀಡುವುದರಿಂದ ‘ತೇಜಸ್’ ನಾಮಕ].

ಕೃಷ್ಣ ಹೇಳುತ್ತಾನೆ “ಬೀಜಮ್  ಮಾಮ್  ಸರ್ವಭೂತಾನಾಮ್  “ ಎಂದು. ಅಂದರೆ ‘ಎಲ್ಲಾ ಜೀವಗಳ ಬೀಜ’ ನಾನು ಎಂದು. ಬೀಜ ಎಂದಾಗ ನಮಗೆ ಸಾಮಾನ್ಯವಾಗಿ ನೆನಪಿಗೆ ಬರುವುದು ಮರಗಿಡದ ಬೀಜ. ಈ ಬೀಜವನ್ನು ಬಿತ್ತಿದಾಗ ಅದು ಮರವಾಗಿ ಬೆಳೆಯುತ್ತದೆ. ಅಂದರೆ ಮರಕ್ಕೆ ಬೀಜ ಉಪಾದಾನ ಕಾರಣ. ಹಾಗೇ ಭಗವಂತ ಕೂಡಾ ಈ ಜಗತ್ತಿಗೆ ಉಪಾದಾನ ಕಾರಣವೆ? ಇದು ನಮ್ಮ ಮುಂದೆ ಬರುವ ಮೊದಲ ಪ್ರಶ್ನೆ. ಇದನ್ನು ತಿಳಿಯಬೇಕಾದರೆ ಮೊದಲು ನಾವು ‘ಬೀಜ’ ಅನ್ನುವ ಪದದ ಅಧ್ಯಾತ್ಮಿಕ ಅರ್ಥವಿಶೇಷವನ್ನು(etymological meaning) ಅರಿಯಬೇಕು. ಬೀಜ ಎನ್ನುವುದು ‘ಅಂಜು’ ಧಾತುವಿನಿಂದ ಬಂದಿರುವುದು. ಇಲ್ಲಿ ‘ವಿ’ ವಿಸರ್ಗ. ಯಾವುದು ವ್ಯಂಜನ (ವ್ಯಂಜನಾತ್) ಅದು ಅಭಿವ್ಯಂಜನ. ಅಂದರೆ ಯಾರಿಂದ ಅಭಿವ್ಯಕ್ತವಾಯಿತೋ ಅದು ಬೀಜ. ಯಾವುದು(ಮೂಲವಸ್ತು) ಇದ್ದೂ ಕಾಣಿಸುತ್ತಿರಲಿಲ್ಲವೋ ಅದಕ್ಕೆ ಕಾಣುವಂತಹ ಆಕಾರಕೊಟ್ಟವನು ಆ ಭಗವಂತ. ಅಂದರೆ ಸೂಕ್ಷ್ಮ ರೂಪದಲ್ಲಿ ತುಂಬಿದ್ದ ಈ ಅವ್ಯಕ್ತ ಪ್ರಪಂಚಕ್ಕೆ ವ್ಯಕ್ತವಾದ ರೂಪ ಕೊಟ್ಟವ. ಆದ್ದರಿಂದ ಇಡೀ ಪ್ರಪಂಚದಲ್ಲಿರುವ ಜೀವಜಾತಕ್ಕೆ ಅಭಿವ್ಯಕ್ತವನ್ನು ಕೊಟ್ಟವನು ಯಾರೋ ಅವನು ಸರ್ವಭೂತಗಳಿಗೆ ಬೀಜ. ಈ ಜಗತ್ತಿಗೆ ತಂದೆಯೂ ತಾಯಿಯೂ ಆದ ಆ  ಭಗವಂತ ಬೀಜ. ಪ್ರಳಯ ಕಾಲದಲ್ಲಿ ಕಣ್ಣಿಗೆ ಕಾಣದ(ಅವ್ಯಕ್ತ), ಸೂಕ್ಷ್ಮರೂಪದಲ್ಲಿ ಇದ್ದ ಈ ಪ್ರಪಂಚಕ್ಕೆ-ವ್ಯಕ್ತವಾದ ರೂಪವನ್ನು ಕೊಟ್ಟವ ‘ಸರ್ವಭೂತಾನಾಂ ಬೀಜ’.
ಜಗತ್ತಿನ ಸಮಸ್ತ ಜೀವಜಾತಕ್ಕೆ ಅಂದರೆ- ಚತುರ್ಮುಖ-ಪ್ರಾಣ-ಗರುಡ-ಶೇಷ-ರುದ್ರ-ಇಂದ್ರ-ಕಾಮ-ಸರ್ವ ದೇವತೆಗಳು, ಮಾನವರು, ವನಸ್ಪತಿಗಳು, ಇತ್ಯಾದಿ. ಹೀಗೆ ಸಮಸ್ತ ಜೀವಕೋಟಿಗೆ ದೇಹಕೊಟ್ಟು, ಆಕಾರ ಕೊಟ್ಟು, ಅಭಿವ್ಯಕ್ತಿಕೊಟ್ಟು, ಇಡೀ ಜೀವಜಾತದ ಹಿಂದೆ ತಂದೆಯಾಗಿ ನಿಂತವ ಆ ಭಗವಂತ. ಈ ಪ್ರಪಂಚದಲ್ಲಿ ಯಾವ-ಯಾವ ಜೀವಜಾತವಿದೆ, ಆ ಜೀವಜಾತದಲ್ಲಿರುವ ವಿಶೇಷ ಶಕ್ತಿ(exclusive quality) ಹಿಂದೆ ಕಾರಣ ಪುರುಷನಾಗಿ, ವ್ಯಕ್ತಿತ್ವ ವಿಕಸನಕ್ಕೆ (ಅಭಿವ್ಯಕ್ತಿಗೆ) ಮೂಲಕಾರಣನಾಗಿ ಆ ಭಗವಂತ ನಿಂತಿದ್ದಾನೆ.
ನಮಗಿರುವ ಬೀಜದ ಇನ್ನೊಂದು ಕಲ್ಪನೆ –ಅದು ಮರವಾಗಿ ಬೆಳೆದಾಗ ತನ್ನ ಆಕಾರವನ್ನು ಕಳೆದುಕೊಳ್ಳುತ್ತದೆ ಎನ್ನುವುದು. ಆದರೆ ಭಗವಂತ ‘ಸನಾತನ’. ಇಲ್ಲಿ ಕೃಷ್ಣ ಹೇಳುತ್ತಾನೆ “ನಾನು ನಾನಾಗಿಯೇ ಇದ್ದು ಪ್ರಪಂಚಕ್ಕೆ ಆಕಾರ ಕೊಡುತ್ತೇನೆ” ಎಂದು. ಅಂದರೆ ಭಗವಂತ ಎಂದೂ ಬದಲಾಗುವುದಿಲ್ಲ-ಆದರೆ ಪ್ರಪಂಚ ಬದಲಾಗುತ್ತದೆ. ಭಗವಂತ ಪ್ರಪಂಚಕ್ಕೆ ಬೇರೆ ಬೇರೆ ಆಕಾರದ ಅಭಿವ್ಯಕ್ತ ಕೊಡುತ್ತಾನೆ. ಹೊಸ ಶಕ್ತಿ ಕೊಡುತ್ತಾನೆ. ಇದರಿಂದ ಅದು ಬದಲಾಗುತ್ತಾ, ಹೊಸ ರೂಪ ಪಡೆಯುತ್ತಾ ಇರುತ್ತದೆ. ಇದಕ್ಕೆ ಕಾರಣಪುರುಷನಾದ ಭಗವಂತ ಮಾತ್ರ ಎಲ್ಲಾ ಕಾಲದಲ್ಲೂ ಏಕರೂಪದಲ್ಲಿರುತ್ತಾನೆ. ಹೀಗೆ ಭಗವಂತ ಸಮಸ್ತ ಭೂತಗಳಿಗೆ(ಜಡ, ಚೇತನ, ಮುಕ್ತರು)ಬೀಜ ಮತ್ತು ಆತ ಸನಾತನ.
ಕೃಷ್ಣ ಹೇಳುತ್ತಾನೆ “ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್” ಎಂದು. ಅಂದರೆ “ಬುದ್ಧಿವಂತರ ಬುದ್ಧಿಮತ್ತೆ ಏನಿದೆ ಅದು ನನ್ನ ಕೊಡುಗೆ; ಹಾಗೇ ತೇಜಸ್ವಿಗಳಿಗೆ ತೇಜಸ್ವಿ ನಾನು”. ಜ್ಞಾನಪ್ರದ ಜೀವರಲ್ಲಿ ಜ್ಞಾನಶಕ್ತಿಯನ್ನು  ಭಗವಂತ ಅಭಿವ್ಯಕ್ತ ಗೊಳಿಸಿದ. ಇದರಿಂದ ಅವರು ಜ್ಞಾನ ಯೋಗಿಗಳಾದರು ಮತ್ತು ಸಂಸಾರದಲ್ಲಿ ಜ್ಞಾನ ಪರಂಪರೆಯನ್ನು ಬೆಳೆಸಿ ಮುಕ್ತಿಯನ್ನು ಪಡೆದರು. ಅದೇ ರೀತಿ ಕರ್ಮಪ್ರಧಾನವಾಗಿರುವ ಕರ್ಮಯೋಗಿಗಳಿಗೆ ತೇಜಸ್ಸಾಗಿ ನಿಂತು ಮುನ್ನೆಡೆಸಿದ ಭಗವಂತ, ಅವರಿಗೆ ‘ತೇಜಸ್ಸಾಗಿ’ ಮುಕ್ತಿ ಕರುಣಿಸುವವ. ಬುದ್ಧಿಃ ಮತ್ತು ತೇಜಃ ಎನ್ನುವುದು ಭಗವಂತನ ಹೆಸರು. ಜ್ಞಾನದ ಅಪಾರ ಮತ್ತು ಅನಂತ ಕಡಲಾಗಿರುವ ಭಗವಂತ ‘ಬುದ್ಧಿಃ’. ದೇಹಬಲ, ಆತ್ಮಬಲ ಎಲ್ಲವೂ ಪೂರ್ಣಪ್ರಮಾಣದಲ್ಲಿರುವ ಸರ್ವಸಮರ್ಥ ಭಗವಂತ ತೇಜಃ.