ಸಮಾಧಿಯನ್ನು ಅಭ್ಯಾಸ ಮಾಡುವವರ ಜೀವನಕ್ರಮ ಹೇಗಿರಬೇಕು ಎನ್ನುವುದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ. ಈ ಜೀವನಕ್ರಮ ಕೇವಲ ಧ್ಯಾನಕ್ಕೆ ಮಾತ್ರ ಪೂರಕವಲ್ಲ. ನಮ್ಮ ಅಧ್ಯಯನಕ್ಕೆ, ನಮ್ಮ ಆರೋಗ್ಯ ಜೀವನಕ್ಕೆ ಈ ಶಿಸ್ತು ಬಹಳ ಮುಖ್ಯ. ನಮ್ಮ ಪ್ರತಿಯೊಂದು ಅನುಷ್ಠಾನವನ್ನು ಶಾಸ್ತ್ರಕಾರರು ಇದಕ್ಕನುಗುಣವಾಗಿ ವಿನ್ಯಾಸ ಮಾಡಿದ್ದಾರೆ. ಆದರೆ ಇಂದು ನಮಗೆ ಈ ಎಚ್ಚರವಿಲ್ಲ. ಏಕಾದಶಿ ಉಪವಾಸವಿರಲಿ, ಇನ್ಯಾವುದೇ ಅನುಷ್ಠಾನವಿರಲಿ,ಅದನ್ನು ಧ್ಯಾನಕ್ಕೆ ಪೂರಕವಾಗಿ ಪಾಲಿಸಬೇಕು. ಈ ಜ್ಞಾನವಿಲ್ಲದೆ ಕೇವಲ ಯಾಂತ್ರಿಕವಾಗಿ ಪಾಲಿಸುವ ಯಾವ ಅನುಷ್ಠಾನವೂ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಾರದು.
ನಾತ್ಯಶ್ನತಸ್ತು ಯೋಗೋSಸ್ತಿ ನ ಚಾತ್ಯಂತಮನಶ್ನತಃ ।
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ॥೧೬॥
ನ ಅತಿ ಅಶ್ನತಃ ತು ಯೋಗಃ ಅಸ್ತಿ ನ ಚಾತ್ಯಂತಮ್ ಅನಶ್ನತಃ ।
ನ ಚ ಅತಿ ಸ್ವಪ್ನ ಶೀಲಸ್ಯ ಜಾಗ್ರತಃ ನ ಏವ ಚ ಅರ್ಜುನ- ಹೇ ಅರ್ಜುನ, ಹೊಟ್ಟೆಬಾಕನಿಗೆ ಧ್ಯಾನಯೋಗ ಸಾಧ್ಯವಿಲ್ಲ. ತೀರ ತಿನ್ನದವನಿಗೂ ಇಲ್ಲ. ತುಂಬಾ ತೂಕಡಿಸುವವನಿಗೂ ಇಲ್ಲ. ನಿದ್ದೆಗೇಡಿಗೂ ಇಲ್ಲ.
ಅತಿಯಾಗಿ ತಿನ್ನುವವನಿಗೆ ಧ್ಯಾನ ಸಾಧ್ಯವಿಲ್ಲ. ಹೊಟ್ಟೆಗೆ ಹೆಚ್ಚು ಆಹಾರ ಹೋದಾಗ ಮನಸ್ಸು ನಿಸ್ತೇಜವಾಗುತ್ತದೆ. ಆದ್ದರಿಂದ ಮನನಶೀಲ ಹೊಟ್ಟೆಬಾಕನಾಗಿರಬಾರದು. ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ. ಈ ಕಾರಣಕ್ಕಾಗಿ ಅತಿಥಿ ಸತ್ಕಾರದಲ್ಲಿ ಒತ್ತಾಯ ಮಾಡಿ ಬಡಿಸುವುದು ತಪ್ಪು. ಅದೇ ರೀತಿ ಯಾವಾಗಲೂ ಸರಿಯಾಗಿ ತಿನ್ನದೆ ಇದ್ದರೆ ಅದರಿಂದ ದೇಹ ಪೋಷಣೆ ಇಲ್ಲವಾಗಿ ದೇಹ ಕುಸಿಯುತ್ತದೆ. ಭಗವಂತನ ಸಾಕ್ಷಾತ್ಕಾರವಾಗುವುದು ಈ ದೇಹದ ಮೂಲಕವೇ. ಆದ್ದರಿಂದ ನಾವು ನಿಯತವಾದ ಆಹಾರವನ್ನು ನಿಯತ ಕಾಲದಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ಆಹಾರದ ಜೊತೆಗೆ ನಮ್ಮ ನಿದ್ದೆ ಮಾಡುವ ಅಭ್ಯಾಸ ನಿಯತವಾಗಿರಬೇಕು. ನಾವು ಹೇಗೆ ಅಭ್ಯಾಸ ಮಾಡಿಕೊಂಡೆವೋ ಹಾಗೆ ನಮ್ಮ ಮನಸ್ಸು. ಎಂದೂ ಅತಿ ನಿದ್ದೆ ಒಳ್ಳೆಯದಲ್ಲ, ಅದೇ ರೀತಿ ನಿದ್ದೆಗೆಟ್ಟರೆ ಖಂಡಿತ ಧ್ಯಾನ ಸಾಧ್ಯವಿಲ್ಲ. ಆಹಾರ ನಿದ್ದೆ ನಿಯತವಾಗಿದ್ದರೆ ಅದು ನಮ್ಮ ಆರೋಗ್ಯಕ್ಕೂ ಪೂರಕ ಹಾಗು ಧ್ಯಾನಕ್ಕೆ ಇದು ಅತ್ಯಗತ್ಯ.
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು ।
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ॥೧೭॥
ಯುಕ್ತ ಆಹಾರ ವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು ।
ಯುಕ್ತ ಸ್ವಪ್ನ ಅವಬೋಧಸ್ಯ ಯೋಗಃ ಭವತಿ ದುಃಖ ಹಾ-ತಕ್ಕ ತಿನಿಸು-ತಿರುಗಾಟ, ತಕ್ಕಷ್ಟೆ ಕಾಯಕ, ತಕ್ಕಂತೆ ನಿದ್ದೆ-ಎಚ್ಚರ ಸಾಧಿಸಿದವನಿಗೆ ಧ್ಯಾನಯೋಗದಿಂದ ದುಗುಡದೂರ.
ಯೋಗಾಭ್ಯಾಸ ಮಾಡುವಾಗ ನಮ್ಮ ಜೀವನಕ್ರಮ ಶಿಸ್ತುಬದ್ಧವಾಗಿರಬೇಕು. ನಿಯಮಿತವಾದ ಹಾಗು ಯೋಗ್ಯವಾದ ಆಹಾರ ಸೇವನೆ ಬಹಳ ಮುಖ್ಯ. ಧ್ಯಾನಕ್ಕೆ ಮನಸ್ಸನ್ನು ಅಣಿಗೊಳಿಸುವ ಸಾತ್ವಿಕ ಆಹಾರ ಸೇವನೆ ಧ್ಯಾನಕ್ಕೆ ಪೂರಕ. ಕೆಲವು ಆಹಾರ ನಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉದಾಹರಣೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ. ಇವುಗಳಲ್ಲಿ ಔಷಧೀಯ ಗುಣವಿದ್ದರೂ ಕೂಡ ಇದು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವ ಆಹಾರ. ನಾವು ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸಿದ ದಿನ ನಮಗೆ ಕೆಟ್ಟ ಕನಸು ಬೀಳುವುದು ಈ ಆಹಾರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಪುರಾವೆ. ವೇದಾಧ್ಯಾಯನ ಮಾಡುವವರು ಇಂತಹ ಮನಸ್ಸನ್ನು ಕೆಡಿಸುವ ಆಹಾರವನ್ನು ಸೇವಿಸಬಾರದು. ನಮ್ಮ ದೇಹದ ಪೋಷಣೆಯ ಜೊತೆಗೆ ನಮ್ಮ ಮನಸ್ಸಿಗೆ ಸಾತ್ವಿಕ ಪೋಷಣೆ ಕೊಡುವ ಆಹಾರವನ್ನು ಇಲ್ಲಿ ಕೃಷ್ಣ “ಯುಕ್ತಾಹಾರ” ಎಂದು ಕರೆದಿದ್ದಾನೆ.
ನಮ್ಮ ಮನಸ್ಸಿಗೆ ನಾವು ಎಷ್ಟು ಬೇಕೋ ಅಷ್ಟು ವಿರಾಮ ಕೊಡುವುದು ಬಹಳ ಮುಖ್ಯ. ಆದರೆ ಈ ವಿರಾಮ ಸೋಮಾರಿತನವಾಗಿ ರೂಪುಗೊಳ್ಳಬಾರದು. ಮನಸ್ಸಿಗೆ ವಿರಾಮ ಕೊಡುವಾಗ ಯಾವ ಚಿಂತನೆ ಕೂಡ ಮಾಡದೆ ಸಂಪೂರ್ಣ ವಿಶ್ರಾಂತಿಯನ್ನು ಕೊಡಬೇಕು. ಆಗ ಮನಸ್ಸು ಧ್ಯಾನಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. “ಯುಕ್ತಚೇಷ್ಟಸ್ಯ ಕರ್ಮಸು” ನಾವು ಮಾಡಬೇಕಾದ ಕೆಲಸ ಕಾರ್ಯವನ್ನು ಕ್ರಮಬದ್ಧವಾಗಿ ಪ್ರಮಾಣಬದ್ಧವಾಗಿ ನಾವೇ ಮಾಡಬೇಕು. ಮಾಡಬೇಕಾದ ಕೆಲಸದಲ್ಲಿ ಸೋಮಾರಿತನವಿರಬಾರದು.
ಹೀಗೆ ಶಾಸ್ತ್ರೀಯವಾದ ಶುದ್ಧವಾದ ಕ್ರಮಬದ್ದವಾದ ಆಹಾರ ಸೇವನೆ, ತಕ್ಕ ಕಾಲದಲ್ಲಿ ತಕ್ಕಷ್ಟು ನಿದ್ದೆ ಹಾಗು ಎಚ್ಚರ, ಕ್ರಮಬದ್ಧವಾದ ಪರಿಶ್ರಮ ಮತ್ತು ವಿರಾಮ- ಹೀಗೆ ಇದ್ದಾಗ “ಯೋಗೋ ಭವತಿ ದುಃಖಹಾ”- ದುಃಖ ರಹಿತ ಆನಂದಮಯ ಜೀವನ ಸಾಧ್ಯ.
ಧ್ಯಾನಯೋಗದಿಂದ ಮನಸ್ಸು ಒಂದು ಹದಕ್ಕೆ ಬರುತ್ತದೆ. ಮನಸ್ಸು ಹದವಾದಾಗ ಹೊರಪ್ರಪಂಚದಲ್ಲಿ ನಾವು ಅನುಭವಿಸುವ ಸುಖ ದುಃಖಗಳು ನಿರ್ಲಿಪ್ತವಾಗಿ ನೋಡಲು ಅಭ್ಯಾಸವಾಗುತ್ತದೆ. ಇದರಿಂದ ಸುಖ ಬಂದಾಗ ಹಾರಾಟವಿಲ್ಲ, ದುಃಖ ಬಂದಾಗ ಪಾತಾಳಕ್ಕೆ ಕುಸಿಯುವುದೂ ಇಲ್ಲ. ಸುಖ-ದುಃಖ, ಸೋಲು-ಗೆಲುವಿನ ದ್ವಂದ್ವವೇ ಜೀವನ ಎನ್ನುವ ಸಮದೃಷ್ಟಿ ಧ್ಯಾನಯೋಗದಿಂದ ಬಂದುಬಿಡುತ್ತದೆ.
ಯದಾ ವಿನಿಯತಂ ಚಿತ್ತಮಾತ್ಮನ್ಯೇವಾವತಿಷ್ಠತೇ ।
ನಿಸ್ಪೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ ॥೧೮॥
ಯದಾ ವಿನಿಯತಮ್ ಚಿತ್ತಮ್ ಆತ್ಮನಿ ಏವ ಅವತಿಷ್ಠತೇ ।
ನಿಸ್ಪೃಹಃ ಸರ್ವ ಕಾಮೇಭ್ಯಃ ಯುಕ್ತಃ ಇತಿ ಉಚ್ಯತೇ ತದಾ-ಚನ್ನಾಗಿ ಹದಗೊಂಡ ಒಳಬಗೆ ಭಗವಂತನಲ್ಲೆ ನೆಲೆಗೊಂಡಾಗ, ಎಲ್ಲ ಕಾಮಗಳ ಆಸೆ ಅಳಿದಾಗ ‘ಧ್ಯಾನಯೋಗಿ’ ಎನ್ನಿಸಿಕೊಳ್ಳುತ್ತಾನೆ.
ಯೋಗಾಭ್ಯಾಸದಿಂದ ಯೋಗಿಯ ಸ್ಥುಪ್ತಪ್ರಜ್ಞೆ ನಿಯಂತ್ರಣವಾಗುತ್ತದೆ. ಸಾಮಾನ್ಯವಾಗಿ ನಮ್ಮ ಚಿತ್ತದಲ್ಲಿರುವ ಹಿಂದಿನ ಕೆಟ್ಟ ನೆನಪುಗಳು ಸದಾ ನಮ್ಮನ್ನು ಕಾಡುತ್ತಿರುತ್ತವೆ. ಯಾವುದೋ ಹಗೆ, ಯಾವುದೋ ಪ್ರೀತಿ ಇವೆಲ್ಲವನ್ನೂ ಬದಿಗೊತ್ತಿ ಯೋಗಿ ತನ್ನ ಅಂತರಂಗದ ಪೀಠದಲ್ಲಿ ಕೇವಲ ಭಗವಂತನನ್ನು ಕೂರಿಸಬಲ್ಲ. ಹೀಗೆ ಮಾಡಿದಾಗ ಸದಾ ಅಂತರಂಗದಲ್ಲಿ ಭಗವಂತನ ದರ್ಶನವಾಗುತ್ತದೆ. ಆ ಭಗವಂತನನ್ನು ಕಂಡಮೇಲೆ ಇನ್ನೇನೂ ಬೇಕು ಎನ್ನಿಸುವುದಿಲ್ಲ. ಏಕೆಂದರೆ ಭಗವಂತ ನಾವು ಬಯಸುವ ಸಂಗತಿಗಳಲ್ಲೇ ಅತ್ಯಂತ ಶ್ರೇಷ್ಠ ವಾದ ಸಂಗತಿ. ಅಂತರಂಗದ ಆನಂದದ ಚಿಲುಮೆ ತೆರೆದುಕೊಂಡಾಗ ಕ್ಷುದ್ರವಾದ ಬಾಹ್ಯ ಕಾಮನೆಗಳು ಅಳಿದುಹೋಗಿ ಆತ ಧ್ಯಾನಯೋಗಿ ಎನ್ನಿಸಿಕೊಳ್ಳುತ್ತಾನೆ.
ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಮತಾ ।
ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ ॥೧೯॥
ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಮತಾ ।
ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ –ಗಾಳಿಯಿಲ್ಲದ ತಾಣದಲ್ಲಿರುವ ದೀಪ ಹಂದುವುದಿಲ್ಲ ಹೇಗೆ ಹಾಗೆ ಇದು: ಒಳಬಗೆಯನ್ನು ಹದಗೊಳಿಸಿ ಭಗವಂತನನ್ನು ನೆನೆಯುವ ಧ್ಯಾನಯೋಗಿಗೆ ಇದು ಉಪಮಾನ.
ಗಾಳಿ ಬೀಸದ ಸ್ಥಳದಲ್ಲಿ ಉರಿಯುವ ಬೆಂಕಿಯ ಶಿಖೆಯಂತೆ ಬಗೆಯನ್ನು ಹದಗೊಳಿಸಿದ ಯೋಗಿಯ ಮನಸ್ಸಿನಲ್ಲಿ ‘ಭಗವಂತನ ಕುರಿತಾದ ಮನಸ್ಸಿನ ಯೋಗ(ಆತ್ಮಯೋಗ)’ ನಿಶ್ಚಲವಾಗಿರುತ್ತದೆ. ಅದು ಚಲಿಸುವುದಿಲ್ಲ.
No comments:
Post a Comment