Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, May 8, 2011

Bhagavad Gita Kannada Chapter-05 Shloka 22-23

ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ
ಆದ್ಯಂತವಂತಃ  ಕೌಂತೇಯ ನ ತೇಷು ರಮತೇ ಬುಧಃ ೨೨

ಯೇ ಹಿ ಸಂಸ್ಪರ್ಶ ಜಾಃ ಭೋಗಾಃ  ದುಃಖ ಯೋನಯಃ ಏವ ತೇ
ಆದಿ ಅಂತ ವಂತಃ  ಕೌಂತೇಯ ನ ತೇಷು ರಮತೇ ಬುಧಃ –ವಿಷಯದ ನಂಟಿನಿಂದ ಬರುವ ಸುಖಗಳು ಬನ್ನದ ತವರು. ಬಂತು ಎನ್ನುವಷ್ಟರಲ್ಲೇ ಬರಿದಾಗುವಂಥವು. ಕೌಂತೇಯ, ಬಲ್ಲವರು ಅವನ್ನು  ಮೆಚ್ಚುವುದಿಲ್ಲ.

ಬಾಹ್ಯ ವಿಷಯ ಸ್ಪರ್ಶದಿಂದ ಸಿಗುವ ಸುಖಭೋಗದ ಅನುಭವ(ಸಂಸ್ಪರ್ಶ)ದಿಂದ ನಮಗೆಷ್ಟು ಸುಖ ಸಿಕ್ಕೀತು?  ಒಂದು ಗುಲಗಂಜಿಯಷ್ಟು ಸುಖಕ್ಕಾಗಿ ಕುಂಬಳಕಾಯಿಯಷ್ಟು ದುಃಖವನ್ನು ಅನುಭವಿಸಲು ನಾವು ಸಿದ್ಧರಾಗಿರುತ್ತೇವೆ. ಇಂದಿನ ಎಲ್ಲಾ ಪ್ರಾಪಂಚಿಕ ಅಪರಾಧಗಳಿಗೆ ಇದೇ ಕಾರಣ. ಕ್ಷಣಿಕ ಸುಖದ ಆಸೆಗೆ ಬಿದ್ದು ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುವವರನ್ನು ನಮ್ಮ ದೈನಂದಿನ ಜೀವನದಲ್ಲಿ ನಾವು ಕಾಣುತ್ತೇವೆ. ನಮಗೆ ಬಾಹ್ಯವಾಗಿ ಸುಖ ಎಂದು ಕಾಣುವುದು ದುಃಖವನ್ನು ಮರಿ ಹಾಕುವ ಮೊಟ್ಟೆ ಎನ್ನುವ ಸತ್ಯವನ್ನರಿಯದೆ ಅದೇ ಸುಖ ಎಂದು ಅದರ ಬೆನ್ನು ಹಿಡಿಯುತ್ತೇವೆ. ಪ್ರತಿಯೊಂದು ಬಾಹ್ಯಸುಖದ ಹಿಂದೆ ದುಃಖವೆಂಬ ಕಗ್ಗತ್ತಲು ಮಡುಗಟ್ಟಿರುತ್ತದೆ. ಬಾಹ್ಯ ಸುಖ-ಆನಂದ ಎನ್ನುವುದು ಕೇವಲ ಒಂದು ಮಿಂಚು. ಅದು ಬಂತು ಎನ್ನುವಷ್ಟರಲ್ಲಿ ಬರಿದಾಗುತ್ತದೆ. ತಿಳುವಳಿಕೆ ಉಳ್ಳವರು ಈ ಬಾಹ್ಯ ಸುಖದ ಆಸೆಯಲ್ಲಿ ಬದುಕುವುದಿಲ್ಲ.         

ಅಧ್ಯಾತ್ಮದ ಬಗ್ಗೆ  ಕೆಲವರು ಹೇಳುವುದಿದೆ “ಈಗಾಗಲೇ ನಮಗೇಕೆ ಅಧ್ಯಾತ್ಮ, ಅದೆಲ್ಲಾ ಅರವತ್ತರ ಶಾಂತಿ ಆದ ಮೇಲೆ” ಎಂದು. ಇದು ಏಕೆ ಸರಿಯಲ್ಲ  ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ  ವಿವರಿಸುತ್ತಾನೆ.

ಶಕ್ನೋತೀಹೈವ ಯಃ ಸೋಢುಂ ಪ್ರಾಕ್ ಶರೀರವಿಮೋಕ್ಷಣಾತ್
ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ೨೩


ಶಕ್ನೋತಿ ಇಹ ಏವ ಯಃ ಸೋಢುಮ್  ಪ್ರಾಕ್ ಶರೀರ ವಿಮೋಕ್ಷಣಾತ್
ಕಾಮ ಕ್ರೋಧ ಉದ್ಭವಮ್  ವೇಗಮ್  ಸಃ ಯುಕ್ತಃ ಸಃ ಸುಖೀ ನರಃ –ಒಲುಮೆ-ಸಿಡುಕುಗಳ ಸೆಳೆತವನ್ನು ಇಲ್ಲೇ, ಈ ನರದೇಹ ಕಳಚುವ ಮುನ್ನವೆ ಯಾರು ತಾಳಬಲ್ಲ ಅಂಥ ಮಾನವನೇ ನಿಜವಾದ ಯೋಗಿ; ನಿಜವಾದ ಸುಖಿ.

ನಾವು ನಮ್ಮ ಪ್ರಾಪಂಚಿಕ ಸುಖ-ಸ್ಪರ್ಶದ ಮೋಹವನ್ನು ಗೆಲ್ಲಲು ಸಾಧ್ಯವಾಗುವುದು ಈ ದೇಹ ಇರುವಾಗಲೇ. ವಿಷಯಗಳ ಸ್ಪರ್ಶ ಇರುವುದು ದೇಹಕ್ಕೆ ಹಾಗು ವಿಷಯಗಳನ್ನು ಗೆಲ್ಲಲು ಸಾಧ್ಯವಾಗುವುದು ಈ ದೇಹವಿರುವಾಗಲೇ. ಭಗವಂತ ನಮಗೆ ಯಾವುದು ಸರಿ, ಯಾವುದು ತಪ್ಪು ಎನ್ನುವ ವಿಚಾರ ಮಾಡುವ ಬುದ್ಧಿಶಕ್ತಿಯನ್ನು ಕೊಟ್ಟಿದ್ದಾನೆ. ಇಂತಹ ವಿಚಾರ ಶಕ್ತಿಯನ್ನು ಬಳಸಿಕೊಂಡು ಶರೀರ ಬಿದ್ದುಹೋಗುವ ಮೊದಲೇ ಇಂದ್ರಿಯ ನಿಗ್ರಹವನ್ನು ಅಭ್ಯಾಸ ಮಾಡಬೇಕು. ಇದು ಮುಂದಕ್ಕೆ ಹಾಕುವ ಮತ್ತು ಒಂದು ದಿನದಲ್ಲಿ ಸಾಧಿಸುವ ವಿಷಯವಲ್ಲ. ಇದಕ್ಕೆ ನಿರಂತರ ಸಾಧನೆ ಅಗತ್ಯ. ಈ ದೇಹ ಗಟ್ಟಿಯಾಗಿರುವಾಗಲೇ ಈ ಸಾಧನೆ ಮಾಡಬೇಕು.
ಮನುಷ್ಯನನ್ನು ಕಾಡುವ ಮೂಲಭೂತ ಸಮಸ್ಯೆ ಕಾಮ ಮತ್ತು ಕ್ರೋಧ. ಈ ಕಾಮ ಕ್ರೋಧದ ವೇಗ ನಮ್ಮೆಲ್ಲಾ ವಿವೇಕವನ್ನು ತಳ್ಳಿ ಮುಂದೆ ಬಂದು ನಿಲ್ಲುವಷ್ಟು ಬಲಿಷ್ಠ. ಅದು ಮಳೆಗಾಲದ ಹುಚ್ಚು ಹೊನಲಂತೆ ನಿನ್ನ ವಿಚಾರಧಾರೆಯನ್ನು ಕೊಚ್ಚಿಕೊಂಡು ಹೋಗುವ ಮೊದಲು ಅದನ್ನು ತಡೆ. ಯಾರು ಇದನ್ನು ತಡೆಯಬಲ್ಲರೋ ಅವರು “ಸ ಯುಕ್ತಃ ಸ ಸುಖೀ ನರಃ” ಎನ್ನುತ್ತಾನೆ ಕೃಷ್ಣ.  ಯಾರು ಕಾಮ-ಕ್ರೋಧದ ಬೆನ್ನುಹತ್ತದೆ, ಬಾಹ್ಯ ಸ್ಪರ್ಶವನ್ನು ತಡೆದು ಅಂತರಂಗದ ಅನುಭವಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾನೆ ಅವನು ನಿಜವಾದ ಸುಖಿ.

ನಮ್ಮ ಅಂತರಂಗದ ಅನುಭವ ಎಂಥದ್ದು? ಒಬ್ಬ ಸಾಧಕ ತನ್ನ ಅಂತರಂಗದಲ್ಲಿ ಕಾಣತಕ್ಕಂತಹ  ಆನಂದದ ಅನುಭವವನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.                

No comments:

Post a Comment