Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, May 19, 2011

Bhagavad Gita in Kannada Chapter-06 Shloka-7-9


ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ
ಶೀತೋಷ್ಣಸುಖದುಃಖೇಷು ತಥಾ ಮಾನಾಪಮಾನಯೋಃ

ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋ ವಿಜಿತೇಂದ್ರಿಯ
ಯುಕ್ತ ಇತ್ಯುಚ್ಯತೇ ಯೋಗೀ ಸಮಲೋಷ್ಟಾಶ್ಮಕಾಂಚನಃ

ಜಿತ ಆತ್ಮನಃ ಪ್ರಶಾಂತಸ್ಯ ಪರಮ ಆತ್ಮಾ ಸಮಾಹಿತಃ
ಶೀತ ಉಷ್ಣ ಸುಖ ದುಃಖೇಷು ತಥಾ ಮಾನ ಅಪಮಾನಯೋಃ  ||
ಜ್ಞಾನ ವಿಜ್ಞಾನ ತೃಪ್ತ ಆತ್ಮಾ ಕೂಟ ಸ್ಥಃ ವಿಜಿತ ಇಂದ್ರಿಯ
ಯುಕ್ತಃ ಇತಿ ಉಚ್ಯತೇ ಯೋಗೀ ಸಮಲೋಷ್ಟ ಅಶ್ಮ ಕಾಂಚನಃ –ಬಗೆಯನ್ನು[ಭಕ್ತಿಯಿಂದ ಭಗವಂತನನ್ನು] ಗೆಲಿದವನ, ವಿಷಯಗಳತ್ತ ಸುಳಿಯದೆ ಭಗವಂತನಲ್ಲೆ ನಲಿದವನ ಬಗೆಯಲ್ಲಿ ಭಗವಂತ ನೆಲೆಗೊಳ್ಳುತ್ತಾನೆ. ಅಂತವನು ತಂಪು –ಬಿಸಿ, ಸುಖ –ದುಃಖ ಮತ್ತು ಸಮ್ಮಾನ-ತಿರಸ್ಕಾರ ಇಂಥ ದ್ವಂದ್ವಗಳಲ್ಲಿ ನಿರ್ವಿಕಾರನಾಗಿ ನಿಲ್ಲಬಲ್ಲವನು ; ಭಗವಂತನ ಅರಿವು ಕಾಣ್ಕೆಗಳಿಂದ ಬಗೆದುಂಬಿದವನು; ಇಂದ್ರಿಯಗಳನ್ನು ಹಿಡಿತದಲ್ಲಿಟ್ಟವನು. ಅವನಿಗೆ ಮಣ್ಣು, ಕಲ್ಲು, ಚಿನ್ನ ಎಲ್ಲ ಒಂದೆ. ಇಂಥ ಯೋಗ ಸಾಧಕನು ಗುರಿ ಸೇರಿದವನು ಎನ್ನಿಸುತ್ತಾನೆ.

ಭಕ್ತಿಯಿಂದ ಭಗವಂತನ ಅನುಗ್ರಹ ಪಡೆದಾಗ ಮೊದಲು ಮನಸ್ಸು ಆತನಲ್ಲಿ ನೆಲೆ ನಿಲ್ಲುತ್ತದೆ. ಮನಸ್ಸು ಎಂಥಹ ಪ್ರಸಂಗದಲ್ಲೂ ಉದ್ವೇಗಗೊಳ್ಳುವುದಿಲ್ಲ. “ಪರಮಾತ್ಮಾ ಸಮಾಹಿತಃ” –ಭಗವಂತ ಅವನ ಹೃದಯದಲ್ಲಿ ಬಂದು ನೆಲೆಸಿ ಬಿಡುತ್ತಾನೆ. ನಾವು ಬಯಸಿದಾಗ ಆತನ ಅಂತರ್ದರ್ಶನ ಸಾಧ್ಯ. ಈ ರೀತಿ ಭಗವಂತನನ್ನು ಕಾಣುವವರ, ಅಪರೋಕ್ಷ ಜ್ಞಾನದ ಪರಿಣಾಮ ಏನು ಎನ್ನುವುದನ್ನು ಇಲ್ಲಿ ಮತ್ತೊಮ್ಮೆ ವಿವರಿಸುತ್ತಾನೆ ಕೃಷ್ಣ.
ಮುಖ್ಯವಾಗಿ ಅಪರೋಕ್ಷ ಜ್ಞಾನಿಗಳಿಗೆ ಎಂದೂ ಇಂದ್ರಿಯ ಚಾಪಲ ಕಾಡುವುದಿಲ್ಲ. ಅಪಮಾನಕ್ಕೆ ಆತ ಎಂದೂ ಕುಸಿಯುವುದಿಲ್ಲ. ಮಾನಾಪಮಾನ ಆತನಿಗೆ ದೊಡ್ಡ ಸಂಗತಿ ಆಗುವುದಿಲ್ಲ. ಈ ಸ್ಥಿತಿ ತಲುಪಿದವ ಸಿದ್ಧ ಎನಿಸುತ್ತಾನೆ. ಆತ ಎಷ್ಟು ನಿರ್ವೀಕಾರ ಎಂದರೆ ಆತ ಎಲ್ಲವನ್ನೂ  ಸಮನಾಗಿ ಕಾಣಲಾರಂಭಿಸುತ್ತಾನೆ. ಧನ-ಕನಕ ಎಲ್ಲವೂ ಬೇಡವೆನಿಸಿ ಅದರಿಂದ ದೂರವಿರುತ್ತಾನೆ. (ರಾಮಕೃಷ್ಣ ಪರಮಹಂಸರ ಆತ್ಮಕಥೆಯನ್ನು ಓದಿದರೆ ಒಬ್ಬ ಅಪರೋಕ್ಷ ಜ್ಞಾನಿಯ ಮನಃಸ್ಥಿತಿ ನಮಗೆ ಅರ್ಥವಾಗುತ್ತದೆ).

ಮುಂದಿನ ಶ್ಲೋಕದಲ್ಲಿ ಕೃಷ್ಣ  ಧ್ಯಾನಕ್ಕೆ ಪೂರ್ವಭಾವಿಯಾಗಿ  ಒಬ್ಬ ಯೋಗಿಯ ಮನಃಸ್ಥಿತಿ ಹೇಗಿರಬೇಕು ಎನ್ನುವ ಬಹಳ  ಮಹತ್ವವಾದ ವಿಚಾರವನ್ನು ವಿವರಿಸುತ್ತಾನೆ.               

ಸುಹೃನ್ಮಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂದುಷು
ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಿಷ್ಯತೇ

ಸುಹೃತ್ ಮಿತ್ರ ಅರಿ ಉದಾಸೀನ ಮಧ್ಯಸ್ಥ ದ್ವೇಷ್ಯ ಬಂದುಷು
ಸಾಧುಷು ಅಪಿ ಚ ಪಾಪೇಷು ಸಮಬುದ್ಧಿಃ ವಿಶಿಷ್ಯತೇ –ಹೆಳೆಯಿಲ್ಲದೆ ಹಚ್ಚಿಕೊಳ್ಳುವವರು, ಕಷ್ಟ ಕಾಲದಲ್ಲಿ ಎಚ್ಚರಿಸುವವರು, ಕಾಟಕೊಡುವವರು, ಒಳಿತು-ಕೆಡುಕು ಯಾವುದಕ್ಕೂ ಇಲ್ಲದವರು, ಎರಡಕ್ಕೂ ನಿಲ್ಲುವವರು, ಬೇಡವಾದದ್ದನ್ನು ಬಗೆವವರು, ನೆಂಟರು, ಒಳ್ಳೆಯವರು ಮತ್ತು ಕೆಟ್ಟವರು –ಎಲ್ಲರೂ ಮೂಲತಃ ಜ್ಞಾನ ಸ್ವರೂಪರು ಎಂದು ಸಮಭಾವದಿಂದ ಕಾಣುವವನು[ಎಲ್ಲರನ್ನೂ ಅವರವರ ಇರವಿಗೆ ತಕ್ಕಂತೆ ಗೌರವಿಸುವವನು] ಮಿಗಿಲಾದವನು.

ಮನಸ್ಸು ಸಮತೋಲನವಾಗದೆ ಧ್ಯಾನ ಮಾಡಲು ಸಾಧ್ಯವಿಲ್ಲ. ಯಾರ್ಯಾರೋ ಬಗ್ಗೆ ಯಾವುದ್ಯಾವುದೋ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರಂಭಿಸಿದರೆ ಧ್ಯಾನ ಅಸಾಧ್ಯ. ಪ್ರಪಂಚದಲ್ಲಿ ಅನೇಕ ವಿಧದ ಜನರಿರುತ್ತಾರೆ. ಉದಾಹರಣೆಗೆ ಸುಹೃತರು-ಅಂದರೆ ಒಳ್ಳೆಯ ಹೃದಯ ಉಳ್ಳವರು. ಯಾವ ಪ್ರತ್ಯುಪಕಾರ ಬಯಸದೆ ಎಲ್ಲರಿಗೂ ಸಹಾಯ ಮಾಡುವ ಜನರಿವರು. ಇವರ ನಂತರ ‘ಮಿತ್ರ’- ತನ್ನ ಆತ್ಮೀಯನಿಗೆ ಸದಾ ಸಹಾಯ ಮಾಡುವವ, ನಾವು ತಪ್ಪಿದಾಗ ನಮ್ಮನ್ನು ತಿದ್ದುವವನೀತ. ಆರಿಗಳು: ಕೊಲ್ಲುವ ಕೆಟ್ಟ ಶತ್ರುತ್ವ ಸಾಧಿಸುವ ಇವರಿಗೆ ದ್ವೇಷಿಸಲು ಕಾರಣ ಬೇಡ. ಉದಾಸೀನರು: ಇವರು ಒಳ್ಳೆಯದಕ್ಕೂ ಇಲ್ಲ ಕೆಟ್ಟದಕ್ಕೂ ಇಲ್ಲ. ಮಧ್ಯಸ್ಥ: ಒಳ್ಳೆಯದು ಮಾಡಿದಾಗ ಒಳ್ಳೆಯದು, ಕೆಟ್ಟದ್ದು ಮಾಡಿದಾಗ ಕೆಟ್ಟದ್ದು ಮಾಡುವವ. ದ್ವೇಷ್ಯ: ಒಬ್ಬರನ್ನು ಕಂಡು ಸಹಿಸದವ(hatred). ಕೊನೆಯದಾಗಿ ಬಂಧುಗಳು(Relatives).ಹೀಗೆ ಮಾನವ ಜನಾಂಗದಲ್ಲಿ ಒಳ್ಳೆಯರು ಮತ್ತು ಕೆಟ್ಟವರು ತುಂಬಿರುತ್ತಾರೆ.(ದೇವತೆಗಳಲ್ಲಿ- ದಾನವರಲ್ಲಿ ಈ ರೀತಿಯ ಸಮ್ಮಿಶ್ರ ವರ್ಗವಿಲ್ಲ. ದೇವತೆಗಳು ಕೇವಲ ಸಾದುಗಳು, ಅಸುರರು ಸದಾ ಪಾಪಿಗಳು, ಆದರೆ ಮಾನವರಲ್ಲಿ ಮಾತ್ರ ಈ ಎರಡು ಗುಣ ಮಿಶ್ರಿತ ಗುಂಪುಗಳನ್ನು ಕಾಣಬಹುದು). ಧ್ಯಾನದಲ್ಲಿ ನಮಗೆ ಭಗವಂತನ ದರ್ಶನವಾಗಬೇಕಾದರೆ ಮೊದಲು ನಾವು ನಮ್ಮ ಅಂತರಂಗದಲ್ಲಿ ಈ ಎಲ್ಲಾ ರೀತಿಯ ಜನರ ಬಗ್ಗೆ ಸಮಬುದ್ಧಿಯನ್ನು ಬೆಳೆಸಿಕೊಳ್ಳಬೇಕು. ಒಬ್ಬ ವ್ಯಕ್ತಿಯ ನಡವಳಿಕೆ ಆತನು ಬೆಳೆದುಬಂದ ವಾತಾವರಣದಿಂದ ಅಥವಾ ತಿಳುವಳಿಕೆ ಇಲ್ಲದೆ ಇದ್ದುದರಿಂದ ಬಂದದ್ದು ಎಂದು ತಿಳಿದು  ಅವನ ಬಗ್ಗೆ ಮನಸ್ಸಿನಲ್ಲಿ ಯಾವ ಕೆಟ್ಟ ಭಾವನೆಯೂ ಇರದಂತೆ ನೋಡಿಕೊಳ್ಳಬೇಕು. ಒಬ್ಬ ನಮ್ಮ ವೈರಿಯಂತೆ ನಮ್ಮನ್ನು ಕಾಡುತ್ತಿರಬಹುದು. ಇದಕ್ಕೆ ಕಾರಣ ಆತನ ಹಾಗು ನಮ್ಮ ಪ್ರಾರಾಬ್ಧ ಕರ್ಮವಿರಬಹುದು. ದೇವರು ಈ ಜನ್ಮದಲ್ಲಿ ಅವನಿಗೆ ಕೊಟ್ಟ ಪಾತ್ರವನ್ನು ಆತ ನಿಭಾಯಿಸುತ್ತಿದ್ದಾನೆ ಎನ್ನುವ ಭಾವದಲ್ಲಿ ಅವನನ್ನು ನೋಡಿದಾಗ ನಮ್ಮಲ್ಲಿ ದ್ವೇಷ ಹುಟ್ಟುವುದಿಲ್ಲ; ಇನ್ನೊಬ್ಬರು ನಮ್ಮನ್ನು  ಬೈದಾಗ ನಾವು ಉದ್ವೇಗಕ್ಕೊಳಗಾಗುವುದಿಲ್ಲ-"ಭಗವಂತ ಅವನಿಗೆ ಕೊಟ್ಟ ಪಾತ್ರವನ್ನು ಅದೆಷ್ಟು ಚನ್ನಾಗಿ ನಿಭಾಯಿಸುತ್ತಿದ್ದಾನೆ" ಎನ್ನುವ ಭಾವ ನಮ್ಮಲ್ಲಿ ಮೂಢಬೇಕು.  ಸಂಬಂಧಿಕರಿರಲಿ, ಶತ್ರುಗಳಿರಲಿ, ಯಾರೇ ಇರಲಿ  ಧ್ಯಾನ ಸಮಯದಲ್ಲಿ ಮನಸ್ಸಿನಲ್ಲಿ ಶುದ್ಧವಾದ ಸಮಭಾವ ನೆಲೆಗೊಂಡಿರಬೇಕು. ಈ ಸ್ಥಿತಿಯಲ್ಲಿ  ಧ್ಯಾನಕ್ಕೆ ಕುಳಿತಾಗ ಇವರ್ಯಾರೂ ಎದುರಿಗೆ ಬರದೆ ಆ ಭಗವಂತನ ದರ್ಶನವಾಗುತ್ತದೆ. ಇಲ್ಲಿ ಒಂದು ಎಚ್ಚರದ ವಿಷಯ ಎಂದರೆ ಅಂತರಂಗದ ಸಮಭಾವವನ್ನು ವ್ಯವಹಾರಿಕವಾಗಿ ಹೊರ ಪ್ರಪಂಚದಲ್ಲಿ ಅಳವಡಿಸಲು ಬರುವುದಿಲ್ಲ. ವ್ಯವಹಾರಿಕವಾಗಿ ನಾವು ಹಿಂದೆ ಹೇಳಿದ ಮೈತ್ರಿ, ಕರುಣಾ, ಮುದಿತ ಮತ್ತು ಉಪೇಕ್ಷ ಎನ್ನುವ ನಾಲ್ಕು ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಎಲ್ಲರನ್ನೂ ಸಮಾನವಾಗಿ ಕಾಣುವುದು ಅಂದರೆ ಅವರವರನ್ನು ಆಯಾ ಸ್ಥಾನದಲ್ಲಿ ನೋಡುವುದು ವ್ಯಾವಹಾರಿಕ ಪ್ರಪಂಚದ ಸಮದೃಷ್ಟಿ. ತಂದೆಯನ್ನು ತಂದೆಯಂತೆ, ಮಗನನ್ನು ಮಗನಂತೆ ಕಂಡು ನಡೆಯುವುದು, ದುಷ್ಟರಿಂದ ದೂರವಿರುವುದು(ಉಪೇಕ್ಷ) ವ್ಯವಹಾರಿಕ ಪ್ರಪಂಚ.  ಅಂತರಂಗ ಪ್ರಪಂಚದಲ್ಲಿ ನಾವು ಎಲ್ಲರಲ್ಲೂ ಆತನ ಒಳಗಿರುವ ಭಗವಂತನನ್ನು ಮಾತ್ರ ಕಾಣಬೇಕು. ಇದು ಧ್ಯಾನಕ್ಕೆ ಬೇಕಾದ  ಪೂರ್ವಭಾವಿ ಮನಃಸ್ಥಿತಿ.  ಮಾನಸಿಕವಾಗಿ ಎಲ್ಲಾ ಸಂಬಂಧದ ನಂಟನ್ನು ಕಳಚಿ ಧ್ಯಾನಕ್ಕೆ  ಕುಳಿತುಕೊಳ್ಳಬೇಕು. ಧ್ಯಾನದಲ್ಲಿ ತಂದೆ, ತಾಯಿ, ಗುರು ಶಿಷ್ಯ, ವೈರಿ, ಮಿತ್ರ ಇತ್ಯಾದಿ ವರ್ಗಗಳಿಲ್ಲ. ಎಲ್ಲವೂ ಒಂದೆ, ಅದು  ಕೇವಲ ಜ್ಞಾನಸ್ವರೂಪವಾದ ಜೀವ- ಅದರೊಳಗೆ ಬಿಂಬ ರೂಪಿ ಭಗವಂತ. ಇದು ಧ್ಯಾನಕ್ಕೆ ಬೇಕಾದ ಮಾನಸಿಕ ಸ್ಥಿತಿ.                                

No comments:

Post a Comment