Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, May 14, 2011

Bhagavad Gita in Kannada Chapter-05 Shloka 27-29

ಬಾಹ್ಯ ಸುಖದಿಂದ ಅಂತರಂಗದ ಸ್ವರೂಪಭೂತವಾದ ಸಹಜ ಸುಖದ ಕಡೆ ತಿರುಗುವ ಸಂದೇಶವನ್ನು ಕೊಟ್ಟ ಕೃಷ್ಣ, ಅದಕ್ಕೆ ಪೂರಕವಾದ ಧ್ಯಾನದ ಬಗ್ಗೆ ಸಂಕ್ಷಿಪ್ತವಾಗಿ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.   
  
ಸ್ಪರ್ಶಾನ್ ಕೃತ್ವಾ ಬಹಿರ್ಬಾಹ್ಯಾಂಶ್ಚಕ್ಷುಶ್ಚೈವಾಂತರೇ  ಭ್ರುವೋಃ
ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯಂತರಚಾರಿಣೌ ೨೭
ಯತೇಂದ್ರಿಯಮನೋವೃತ್ತಿರ್ಮುನಿರ್ಮೋಕ್ಷಪರಾಯಣಃ
ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ ೨೮

ಸ್ಪರ್ಶಾನ್ ಕೃತ್ವಾ ಬಹಿಃ ಬಾಹ್ಯಾನ್ ಚಕ್ಷುಃ ಚ ಏವ ಅಂತರೇ   ಭ್ರುವೋಃ
ಪ್ರಾಣ ಅಪಾನೌ ಸಮೌ ಕೃತ್ವಾ ನಾಸ ಅಭ್ಯಂತರ ಚಾರಿಣೌ ||
ಯತ ಇಂದ್ರಿಯ ಮನಃ ವೃತ್ತಿಃ ಮುನಿಃ ಮೋಕ್ಷ ಪರಾಯಣಃ
ವಿಗತ ಇಚ್ಛಾ ಭಯ ಕ್ರೋಧಃ ಯಃ ಸದಾ ಮುಕ್ತಃ  ಏವ ಸಃ –ಹೊರಗಣ ವಿಷಯ ಸಂಬಂಧಗಳನ್ನು ಹೊರಗಟ್ಟಿ, ನೋಟವನ್ನು ಹುಬ್ಬುಗಳ ನಡುವಿರಿಸಿ, ಹೊರಳೆಯೊಳಗೆ ಚರಿಸುವ ಪ್ರಾಣಾಪಾನಗಳನ್ನು ಕುಂಭಕದಲ್ಲಿ ಸಮಗೊಳಿಸಿ, ಇಂದ್ರಿಯಗಳ ಮತ್ತು ಮನದ ಚೆಲ್ಲಾಟವನ್ನು ಹಿಡಿತದಲ್ಲಿಟ್ಟವನು, ಬಿಡುಗಡೆಗಾಗಿ ಕಾತರಿಸುವವನು, ಬಯಕೆ-ಅಂಜಿಕೆ-ಸಿಡುಕುಗಳನ್ನು ತೊಡೆದುಕೊಂಡವನು-ಇಂಥ ಸಾಧಕನು ಸದಾ ಮುಕ್ತನೇ ಸರಿ.

ನಾವು ನಮ್ಮ ಮನಸ್ಸನ್ನು ನಿಯಂತ್ರಿಸಬೇಕಾದರೆ ಮೊದಲು ನಮ್ಮ ಇಂದ್ರಿಯಗಳು ಹೊರ ಪ್ರಪಂಚದಲ್ಲಿ ಸಂಚರಿಸುವುದನ್ನು ನಿಯಂತ್ರಿಸಬೇಕು. “ಸ್ಪರ್ಶಾನ್ ಕೃತ್ವಾ ಬಹಿಃ ಬಾಹ್ಯಾನ್”- ಬಾಹ್ಯೇಂದ್ರಿಯ ನಿಯಂತ್ರಣ ಮಾಡದೆ ಮನಸ್ಸನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಹೊರ ಪ್ರಪಂಚದ ರೂಪ-ರಸ-ಸ್ಪರ್ಶ-ಶಬ್ದ-ಗಂಧ ಎನ್ನುವ ಸುಖದ ಭ್ರಮೆಯನ್ನು ಹೊರಗೇ ಬಿಡಬೇಕು, ಜೊತೆಗೆ ಅನಪೇಕ್ಷಿತವಾಗಿ ನಮ್ಮೊಳಗೆ ತುಂಬಿರುವ, ಸತ್ಯವನ್ನು ಕಾಣುವುದಕ್ಕೆ ಅಡ್ಡಗೋಡೆಯಾಗಿರುವ, ಈ ಪ್ರಪಂಚದ ಅನುಭೂತಿಯನ್ನು ಹೊರಹಾಕಬೇಕು. ಸಾಮಾನ್ಯವಾಗಿ ನಮಗೆ ಧ್ಯಾನಕ್ಕೆ ಕುಳಿತಾಗ ಏನೇನೊ ಕಾಣಲು ಆರಂಭವಾಗುತ್ತದೆ. ಸುಂದರವಾದದ್ದು, ಭಯಾನಕವಾದದ್ದು, ಇತ್ಯಾದಿ. ಇದಕ್ಕಾಗಿ ಭಯಪಡುವ ಅಗತ್ಯವಿಲ್ಲ. ಇವೆಲ್ಲವೂ ನಾವು ನಮ್ಮೊಳಗೆ ತುಂಬಿಕೊಂಡಿರುವ ಅನಗತ್ಯ ವಿಚಾರಗಳು. ಅವು ಹೊರ ಹೋಗುವಾಗ ಈ ರೀತಿ ನಮಗೆ ದರ್ಶನ ಕೊಡುತ್ತವೆ. ಹಠಬಿಡದೆ ಸಾಧನೆ ಮುಂದುವರಿಸಿದಾಗ ಕ್ರಮೇಣವಾಗಿ ಈ ಎಲ್ಲಾ  ವಿಚಾರಗಳು ಹೊರಹೋಗಿ ಮನಸ್ಸು ನಿರ್ಮಲವಾಗುತ್ತದೆ. ಇದು ಒಂದೇ ದಿನದಲ್ಲಿ ಆಗುವಂತದ್ದಲ್ಲ, ಇದಕ್ಕೆ ನಿರಂತರ ಸಾಧನೆ ಅಗತ್ಯ. ಒಮ್ಮೆ ಅಂತಃಕರಣ ಸ್ವಚ್ಛವಾದರೆ ಅದರಲ್ಲಿ ಏನನ್ನು ಬೇಕಾದರೂ ಪ್ರತಿಬಿಂಬಿಸಬಹುದು. 
ಧ್ಯಾನಕ್ಕೆ ಬೇಕಾದ ಇನ್ನೊಂದು ಮುಖ್ಯವಾದ ಅಂಶ ಅನ್ನಮಯಕೋಶ(ದೇಹ) ಸ್ಥಿರಗೊಳಿಸುವುದು. ದೇಹ ಚಲಿಸಿದರೆ ಮನಸ್ಸು ಚಲಿಸುತ್ತದೆ-ಆಗ ಏಕಾಗ್ರತೆ ಸಾಧ್ಯವಿಲ್ಲ. ಅದಕ್ಕಾಗಿ ನಾವು ನೆಟ್ಟಗೆ(erect and straight body),  ನಮಗೆ ಸಾಧ್ಯವಾದ ಆಸನ(Posture)ದಲ್ಲಿ ನಮ್ಮ ದೇಹವನ್ನು ಸ್ಥಿರಗೊಳಿಸಬೇಕು. ಕೃಷ್ಣ ಹೇಳುತ್ತಾನೆ “ಚಕ್ಷುಃ ಚ ಏವ ಅಂತರೇ   ಭ್ರುವೋಃ” ಎಂದು. ಅಂದರೆ ನಮ್ಮ ದೃಷ್ಟಿಯನ್ನು ನಮ್ಮ ಎರಡು ಹುಬ್ಬಿನ ನಡುವೆ ನೆಡುವುದು.(ಇದು ಕಷ್ಟವಾದರೆ ಮೂಗಿನ ತುದಿಯನ್ನೂ ಆರಿಸಿಕೊಳ್ಳಬಹುದು ಎಂದು ಶಾಸ್ತ್ರಕಾರರು ಹೇಳುತ್ತಾರೆ). ನಮ್ಮ ಎರಡು ಹುಬ್ಬಿನ ನಡುವೆ ಆಜ್ಞಾಚಕ್ರವಿದೆ, ಅಲ್ಲಿ ನಾವು ನಮ್ಮ ದೃಷ್ಟಿಯನ್ನು ನೆಟ್ಟಾಗ ಈ ಶಕ್ತಿ ಕೇಂದ್ರ  ಜಾಗೃತವಾಗುತ್ತದೆ. ಇದರಿಂದ ಅನ್ನಮಯ ಕೋಶ ಸ್ಥಿರವಾಗುತ್ತದೆ. 
ಅನ್ನಮಯಕೋಶದ ನಂತರ ಪ್ರಾಣಮಯಕೋಶ. “ಪ್ರಾಣ ಅಪಾನೌ ಸಮೌ ಕೃತ್ವಾ ನಾಸ ಅಭ್ಯಂತರ ಚಾರಿಣೌ”-ನಮ್ಮೊಳಗೆ ನಿರಂತರ ವಾಯುವಿನ ಚಲನೆ ಇರುತ್ತದೆ; ಈ ಚಲನೆಯನ್ನು  ಸ್ಥಿರಗೊಳಿಸುವುದು-ಇದನ್ನು ಕುಂಭಕ ಎನ್ನುತ್ತಾರೆ. ಇದರಲ್ಲಿ ಎರಡು ವಿಧ. ಒಂದು ಅಂತಃಕುಂಭಕ ಹಾಗು ಇನ್ನೊಂದು ಬಾಹ್ಯಕುಂಭಕ. ಅಂತಃಕುಂಭಕದಲ್ಲಿ ಮೊದಲು ಸಂಪೂರ್ಣ ಒಳಗಿರುವ ಗಾಳಿಯನ್ನು ಹೊರಹಾಕಿ ನಂತರ ಎಷ್ಟು ಹೆಚ್ಚುಸಾಧ್ಯವೋ ಅಷ್ಟು ಶುದ್ಧ ಗಾಳಿಯನ್ನು ಒಳಗೆ ತೆಗೆದುಕೊಂಡು,  ಉಸಿರನ್ನು ಸ್ಥಗನಗೊಳಿಸಬೇಕು. [ಈ ರೀತಿಯ ಪ್ರಾಣಾಯಾಮವನ್ನು ಗುರುವಿನಿಂದ ಕಲಿತು ಮಾಡಬೇಕು ಇಲ್ಲದಿದ್ದರೆ ಇದರಿಂದ ಅಪಾಯವಿದೆ]. ಬಾಹ್ಯಕುಂಭಕದಲ್ಲಿ ಒಳಗಿನ  ಗಾಳಿಯನ್ನು ಸಂಪೂರ್ಣ ಹೊರಹಾಕಿ ಅದೇ ಸ್ಥಿತಿಯಲ್ಲಿ ಉಸಿರನ್ನು ಸ್ಥಗನಗೊಳಿಸುತ್ತಾರೆ. ಸಾಮಾನ್ಯವಾಗಿ ಹೃದಯ ರೋಗವಿದ್ದವರಿಗೆ  ಅಂತಃಕುಂಭಕ ಅಪಾಯಕಾರಿ, ಅವರು  ಬಾಹ್ಯಕುಂಭಕ ಮಾಡಬಹುದು. ಹೀಗೆ ಕುಂಭಕದಿಂದ ಪ್ರಾಣಮಯಕೊಶ ಸ್ಥಿರವಾಗುತ್ತದೆ. ನಂತರದ ಹೆಜ್ಜೆ ಮನೋಮಯ ಮತ್ತು ವಿಜ್ಞಾನಮಯಕೋಶ. ನಮ್ಮ ಮನಸ್ಸು ಚಂಚಲ, ಅದು ಒಂದುಕಡೆ ನಿಲ್ಲುವುದಿಲ್ಲ, ಅದನ್ನು ಸ್ಥಿರಗೊಳಿಸಬೇಕು. ‘ಈ ದಾರಿಯಲ್ಲಿ ನಾನು ಸಾಗಿ-ಸಾಧಿಸಿ ಸಿದ್ಧಿ ಪಡೆದೇ ಪಡೆಯುತ್ತೇನೆ’ ಎನ್ನುವ ಹಠತೊಟ್ಟು ಮನಸ್ಸನ್ನು ಅದಕ್ಕೆ ಅಣಿಗೊಳಿಸಬೇಕು. ಇದರಿಂದ ಚಿತ್ತ ಭಗವಂತನ ಕಡೆ ಏಕಾಗ್ರವಾಗುತ್ತದೆ. ಈ ಸ್ಥಿತಿ ಪಂಚಬೌತಿಕವಾಗಿ ನಾವು ತಲುಪಬಹುದಾದ ಅತ್ಯಂತ ಮಹತ್ತಾದ ಸ್ಥಿತಿ. ಇಲ್ಲಿರುವ ಆನಂದ ಅಪರಿಮಿತ. ಈ ಸ್ಥಿತಿಯಲ್ಲಿರುವ ಸುಖವನ್ನು ಅನುಭವಿಸಿದರೆ ಮುಂದೆ ಬಾಹ್ಯ ಪ್ರಪಂಚದಲ್ಲಿನ ಸುಖದ ಹಿಂದೆ ನಮ್ಮ ಮನಸ್ಸು ಎಂದೂ ಹರಿಯುವುದಿಲ್ಲ.ಮನಸ್ಸು ಭಗವಂತನಲ್ಲಿ ನೆಲೆನಿಲ್ಲುತ್ತದೆ. ಇದರಿಂದ ನಮ್ಮ ಆಸೆ-ಭಯ-ಕ್ರೋಧ ಎಲ್ಲವೂ ಇಲ್ಲವಾಗುತ್ತದೆ. “ಇಂತಹ ಸಾಧಕ  ಸದಾ ಮುಕ್ತನೇ ಸರಿ” ಎನ್ನುತ್ತಾನೆ ಕೃಷ್ಣ.

ಕೃಷ್ಣ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ ಮತ್ತು  ವಿಜ್ಞಾನಮಯಕೋಶವೆಂಬ      ಚತುರ್ವಿದ ಅಂತಃಕರಣವನ್ನು ಪಕ್ವಗಳಿಸಿ ಹೇಗೆ ನಾವು ನಮ್ಮೊಳಗಿನ  ಭಗವಂತನ ದರ್ಶನವನ್ನು ಪಡೆಯಬಹುದು ಎನ್ನುವುದನ್ನು ವಿವರಿಸಿದ. ಮುಂದಿನ ಶ್ಲೋಕದಲ್ಲಿ ನಾವೆಂದೂ ಕಾಣದ ಆ  ಭಗವಂತನನ್ನು ಯಾವ ರೀತಿ ಕಾಣಬೇಕು ಎನ್ನುವುದನ್ನು ವಿವರಿಸುತ್ತಾನೆ.         

ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಮ್          
ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ೨೯


ಭೋಕ್ತಾರಮ್  ಯಜ್ಞ ತಪಸಾಮ್  ಸರ್ವಲೋಕ ಮಹಾ ಈಶ್ವರಮ್       
ಸುಹೃದಮ್  ಸರ್ವ ಭೂತಾನಾಮ್  ಜ್ಞಾತ್ವಾ ಮಾಮ್  ಶಾಂತಿಮ್ ಋಚ್ಛತಿ-ಹೊಮಗಳನ್ನು-ವೃತಗಳನ್ನು ಉಣ್ಣುವವನೆಂದು, ಎಲ್ಲ ಲೋಕಗಳ ಒಡೆಯರಿಗು ಹಿರಿಯೊಡೆಯನೆಂದು, ಎಲ್ಲ ಜೀವಿಗಳ ನೇಹಿಗನೆಂದು ನನ್ನನ್ನು ತಿಳಿದವನು ಸುಖದ ಸೆಲೆಯಾದ ಮುಕ್ತಿಯನ್ನು ಪಡೆಯುತ್ತಾನೆ.

ಆ ಭಗವಂತ ಸರ್ವ ಯಜ್ಞಗಳ ಭೋಕ್ತಾರ. [ಇಲ್ಲಿ ಯಜ್ಞ ಅಂದರೆ ಅಗ್ನಿಮುಖದಲ್ಲಿ ಮಾಡುವ ಯಜ್ಞ ಮಾತ್ರವಲ್ಲ, ಹಿಂದೆ ವಿವರಿಸಿದ ಎಲ್ಲಾ ರೀತಿಯ ಯಜ್ಞ]. ನಾವು ಯಜ್ಞದಲ್ಲಿ ದೇವತೆಗಳ ಹೆಸರಿನಲ್ಲಿ ಅರ್ಪಿಸುವ ಹವಿಸ್ಸೂ ಕೂಡಾ ಆ ದೇವತೆಯೊಳಗೆ ಅಂತರ್ಯಾಮಿಯಾಗಿರುವ ಭಗವಂತನಿಗೆ ಅರ್ಪಿತ ಎನ್ನುವ ಭಾವನೆಯಿಂದ ಅರ್ಪಿಸಬೇಕು. ಭಗವಂತನಿಗೆ ಅರ್ಪಿಸದೆ ಅರ್ಪಿಸುವ ಯಾವ ಹವಿಸ್ಸನ್ನೂ ದೇವತೆಗಳು ಸ್ವೀಕರಿಸುವುದಿಲ್ಲ. ನಮ್ಮ ಪ್ರತಿಯೊಂದು ನಡೆಯಲ್ಲಿಯೂ ಭಗವಂತನ ಅನುಸಂಧಾನವಿರಬೇಕು. ಆತ ಸರ್ವಸಮರ್ಥ, ಸರ್ವಕ್ರಿಯೆಗಳ ನಿಯಾಮಕ, ಎಲ್ಲವೂ ಅವನಿಗೆ ಸಂದದ್ದು ಎನ್ನುವ ಅನುಸಂಧಾನ ಧ್ಯಾನದಲ್ಲಿ ಬಹಳ ಮುಖ್ಯ. ದೈಹಿಕವಾಗಿ, ಮಾನಸಿಕವಾಗಿ, ವಾಚಕವಾಗಿ ಅಚಲವಾದ ದೀಕ್ಷೆ ಬಹಳ ಮುಖ್ಯ. ಯಾವ ಕಾಲಕ್ಕೂ ಅಪ್ರಾಮಾಣಿಕನಾಗಿ ಮಾತನಾಡುವುದಿಲ್ಲ ಎನ್ನುವ ದೀಕ್ಷೆ, ಸದಾ ಮನಸ್ಸಿನಲ್ಲಿ ಸತ್ಯದ ಬಗ್ಗೆ ಆಳವಾದ ಚಿಂತನೆ, ಸದಾ ಎಲ್ಲರ ಬಗ್ಗೆ ಸದ್ಭಾವ- ಹೀಗೆ  ಇದೊಂದು ತಪಸ್ಸು. ಭಗವಂತನನ್ನು ಮರೆತು ಯಾರನ್ನು ಪೂಜಿಸಿದರೂ ಅದು ವ್ಯರ್ಥ.
ಕೆಲವರಿಗೆ ಭಗವಂತ ಎಂದರೆ ಭಯ! ಇಲ್ಲಿ ಕೃಷ್ಣ ಹೇಳುತ್ತಾನೆ ‘ಸುಹೃದಮ್  ಸರ್ವ ಭೂತಾನಾಮ್’ ಎಂದು.  ಭಗವಂತನ ಬಗ್ಗೆ ಎಂದೂ ಭಯಪಡಬೇಕಾಗಿಲ್ಲ. ಆತನಿಗಿಂತ ಆತ್ಮೀಯ ಗೆಳೆಯ ಇನ್ನೊಬ್ಬನಿಲ್ಲ. ನಮ್ಮನ್ನು ಸದಾ ಪ್ರೀತಿಸುವ,ನಿರಂತರ ನಮ್ಮ ಒಳಗೆ-ಹೊರಗೆ ತುಂಬಿ ಸದಾ ರಕ್ಷಿಸುವ ಶಕ್ತಿ ಭಗವಂತ.ಪ್ರತಿಯೊಬ್ಬರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಬೆಳೆಸುವ, ತಪ್ಪು ಮಾಡಿದಾಗ ಕೇವಲ ತಿದ್ದುವುದಕ್ಕೊಸ್ಕರ ಶಿಕ್ಷೆ ಕೊಟ್ಟು ದಾರಿ ತೋರುವ, ಸದಾ ಕಾರುಣ್ಯದಿಂದ ಮೇಲೆತ್ತುವ ‘ಸುಹೃತ್’ ಆ ಭಗವಂತ. ಇಂತಹ ಕರುಣಾಳು ಇನ್ನೊಬ್ಬನಿಲ್ಲ ಎನ್ನುವ ಜ್ಞಾನ ಧ್ಯಾನದಲ್ಲಿ ಬಹಳ ಮುಖ್ಯ. ಈ ವಿಚಾರವನ್ನು ತಿಳಿದು ಅನುಸರಿಸಿದವ ಜ್ಞಾನಾನಂದದ ಪರಾಕಾಷ್ಠೆಯಾದ ಮೋಕ್ಷವನ್ನುಪಡೆಯುತ್ತಾನೆ ಎನ್ನುತ್ತಾನೆ ಕೃಷ್ಣ.     
ಇತಿ ಪಂಚಮೋSಧ್ಯಾಯಃ
ಐದನೆಯ ಅಧ್ಯಾಯ ಮುಗಿಯಿತು.
*******

No comments:

Post a Comment