Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, May 9, 2011

Bhagavad Gita in Kannada Chapter-05 Shloka-24-26

ಯೋSನ್ತಃ ಸುಖೋSನ್ತರಾರಾಮಸ್ತಥಾSನ್ತರ್ಜ್ಯೋತಿರೇವ ಯಃ 
ಸ ಯೋಗೀ ಬ್ರಹ್ಮ ನಿರ್ಬಾಣಂ ಬ್ರಹ್ಮಭೂತೋSಧಿಗಚ್ಛತಿ ೨೪

ಯಃ ಅಂತಃ ಸುಖಃ ಅಂತಃ ಆರಾಮಃ ತಥಾ ಅಂತಃ ಜ್ಯೋತಿಃ ಏವ ಯಃ  
ಸಃ  ಯೋಗೀ ಬ್ರಹ್ಮ ನಿರ್ಬಾಣಂ ಬ್ರಹ್ಮಭೂತಃ ಅಧಿಗಚ್ಛತಿ-ಬಯಕೆಯಳಿದು ಒಳಬಗೆಯ ಸುಖ ಕಂಡವನು , ಭಗವಂತನನ್ನು ಕಂಡು ಒಳಗೊಳಗೇ ಖುಷಿಗೊಂಡವನು, ಭಗವಂತನ ಬೆಳಕನ್ನೆ ಒಳಗೆಲ್ಲ ತುಂಬಿಕೊಂಡವನು, ಭಗವಂತನಲ್ಲೆ ನೆಲೆ ನಿಂತ ಇಂಥ ಸಾಧಕ ಅಳಿವಿರದ ಮೈ ತಳೆದ ಭಗವಂತನನ್ನೇ ಸೇರುತ್ತಾನೆ.

ಮನುಷ್ಯ ಸುಖ ಬೇಕು ಎಂದು ಬಯಸದೆ ಅಂತಃಸುಖ ಬೇಕು ಎಂದು ಬಯಸಬೇಕು. ಈ ಶ್ಲೋಕದಲ್ಲಿ ‘ಸುಖ’ ಮತ್ತು ‘ಆರಾಮ’ ಎನ್ನುವ ಎರಡು ಶಬ್ದಗಳು ಬಳಕೆಯಾಗಿವೆ. ಈ ಎರಡು ಶಬ್ದಗಳ ನಡುವೆ ಸೂಕ್ಷ್ಮ ವೆತ್ಯಾಸವಿದೆ. ನಮ್ಮ ಬಯಕೆಗಳು ಈಡೇರುವುದು ಅಥವಾ  ಬಯಸಿದ್ದು ಸಿಕ್ಕಿದಾಗ ಆಗುವುದು ‘ಆರಾಮ’ ; ಬಯಕೆಗಳೇ ಇಲ್ಲದಿರುವುದು ಸುಖ. ಯಾವುದೋ ಕೊರತೆ, ತೊಂದರೆ, ಕಷ್ಟ ಪರಿಹಾರವಾದಾಗ, ಯಾವುದೋ ತಾಪತ್ರಯದಿಂದ ಪಾರಾದಾಗ ಆಗುವುದು ಸುಖ. ಇಲ್ಲಿ ಕೃಷ್ಣ ಹೇಳುತ್ತಾನೆ “ಅಧ್ಯಾತ್ಮ ಯೋಗದ ಸಾಧಕ, ಸಾಧನೆ ಮಾಡಿ ಫಲ ಪಡೆದವನು- ಮಾನಸಿಕವಾಗಿ ಭಗವಂತನಲ್ಲೇ ನೆಲೆಸಿರುತ್ತಾನೆ. ಆತ   ಒಳಗಿಂದೊಳಗೆ ಆರಾಮವಾಗಿರುತ್ತಾನೆ”  ಎಂದು. ಅಂತರಂಗದಲ್ಲಿ ಭಗವಂತನನ್ನು ನೋಡುತ್ತಾ ಆರಾಮವಾಗಿರುವುದು. ಕಾಮ ಕ್ರೋಧವನ್ನು ಬಿಟ್ಟು ಸುಖಪಡುವುದು. ಸಾಧಕ ತನ್ನೊಳಗಿರುವ ಆ ಜ್ಯೋತಿಯನ್ನು ಅರಿತು ತನ್ನೊಳಗಿರುವ ಆ ಮಹಾ ಬೆಳಕಾದ ಭಗವಂತನನ್ನು ಕಂಡು  ಭಗವಂತನಲ್ಲೇ ನೆಲೆಸಿಬಿಡುತ್ತಾನೆ.  

ಲಭಂತೇ  ಬ್ರಹ್ಮನಿರ್ಬಾಣಮೃಷಯಃ ಕ್ಷೀಣಕಲ್ಮಷಾಃ
ಛಿನ್ನದ್ವೈಧಾಯತಾತ್ಮಾನಃ ಸರ್ವಭೂತಹಿತೇ ರತಾಃ    ೨೫

ಲಭಂತೇ  ಬ್ರಹ್ಮನಿರ್ಬಾಣಮ್ ಋಷಯಃ ಕ್ಷೀಣ ಕಲ್ಮಷಾಃ
ಛಿನ್ನ ದ್ವೈಧಾಃ ಯತಆತ್ಮಾನಃ ಸರ್ವಭೂತಹಿತೇ ರತಾಃ –ಕೊಳೆಗಳನೆಲ್ಲ ಕಳೆದು, ಇಬ್ಬಂದಿತನವಳಿದು ತಿಳಿವಿನ ಕೊಳವಾದವರು.[ಬಗೆಯನ್ನು ಹದಗೊಳಿಸಿದವರು], ಎಲ್ಲ ಜೀವಿಗಳಿಗು ಒಳಿತನ್ನೆ ಬಯಸುವ ಬಲ್ಲವರು ನಿತ್ಯ ಸ್ವರೂಪನಾದ ಭಗವಂತನನ್ನೇ ಪಡೆಯುತ್ತಾರೆ.

ತನ್ನಲ್ಲಿ ಉದ್ಭವವಾಗುವ ಸಂದೇಹವನ್ನು, ದ್ವಂದ್ವವನ್ನು ಮೀರಿ ನಿಂತವರು ನಿಜವಾದ ಸಾಧಕರು. ಇವರು ಸದಾ ತಮ್ಮ ಮನಸ್ಸನ್ನು ಅಂತರಂಗದಲ್ಲಿ ನೆಲೆಗೊಳಿಸಿರುತ್ತಾರೆ. ಇವರು ಬಯಸುವ ಸುಖ ‘ಅಂತರಂಗದ ಸುಖ’. ಬಾಹ್ಯ ಸುಖದ ಬೆನ್ನುಹತ್ತದೆ, ಎಲ್ಲ ಜೀವಿಗಳಿಗೆ ಒಳಿತನ್ನೇ ಬಯಸುವ ಇವರು ಸದಾ ನಿತ್ಯ ಸ್ವರೂಪನಾದ ಭಗವಂತನಲ್ಲೇ ನೆಲಸಿ ಅವನನ್ನೇ  ಸೇರುತ್ತಾರೆ.    

ಕಾಮಕ್ರೋಧವಿಯುಕ್ತಾನಾಂ ಯತೀನಾಂ ಯತಚೇತಸಾಮ್
ಅಭಿತೋ ಬ್ರಹ್ಮನಿರ್ಬಾಣಂ ವರ್ತತೇ ವಿದಿತಾತ್ಮನಾಮ್           ೨೬


ಕಾಮ ಕ್ರೋಧ ವಿಯುಕ್ತಾನಾಮ್  ಯತೀನಾಮ್  ಯತಚೇತಸಾಮ್
ಅಭಿತಃ  ಬ್ರಹ್ಮನಿರ್ಬಾಣಮ್  ವರ್ತತೇ ವಿದಿತ ಆತ್ಮನಾಮ್-ಪ್ರಯತ್ನಶೀಲರಾಗಿ ಒಲುಮೆ-ಸಿಡುಕುಗಳನ್ನು ಓದ್ದವರಿಗೆ, ಬಗೆಯನ್ನು ಗೆದ್ದವರಿಗೆ ಭಗವಂತನನ್ನು ಬಲ್ಲವರಿಗೆ ಎಲ್ಲೆಡೆಯು ನಿತ್ಯ ಸ್ವರೂಪನಾದ ಭಗವಂತ ತುಂಬಿರುತ್ತಾನೆ.

ಕಾಮ-ಕ್ರೋಧವನ್ನು ಸಂಪೂರ್ಣ  ತೊರೆದು, ಪೂರ್ಣವಾಗಿ ಇಂದ್ರಿಯನಿಗ್ರಹ ಸಾಧಿಸಿದವರಿಗೆ ಎಲ್ಲೆಡೆಯೂ ಎಲ್ಲ ಜೀವ ಜಂತುವಿನಲ್ಲೂ ಭಗವಂತ ಕಾಣಿಸುತ್ತಾನೆ. ಯಾವುದೇ ಐಹಿಕ  ಕ್ಲೇಶದ ನೋವು ಇವರಿಗಿರುವುದಿಲ್ಲ. ಇವರ  ಮನದಲ್ಲಿ ಸರ್ವಾಂತರ್ಯಾಮಿಯಾದ, ನಿತ್ಯ ಸ್ವರೂಪನಾದ ಭಗವಂತ ನೆಲೆನಿಂತಿರುತ್ತಾನೆ.

No comments:

Post a Comment