Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, April 24, 2011

Bhagavad Gita Kannada Chapter-04 Shloka 34-38


ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ    ।
ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ               ॥೩೪॥

ಯಜ್ ಜ್ಞಾತ್ವಾ ನ ಪುನರ್ಮೋಹಮೇವಂ ಯಾಸ್ಯಸಿ ಪಾಂಡವ    ।
ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾSತ್ಮನ್ಯಥೋ ಮಯಿ     ॥೩೫॥

ತತ್  ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ |
ಉಪದೇಕ್ಷ್ಯಂತಿ ತೇ ಜ್ಞಾನಮ್  ಜ್ಞಾನಿನಃ ತತ್ತ್ವದರ್ಶಿನಃ  ||
ಯತ್  ಜ್ಞಾತ್ವಾ ನ ಪುನಃ ಮೋಹಮ್ ಏವಮ್ ಯಾಸ್ಯಸಿ ಪಾಂಡವ |
ಯೇನ ಭೂತಾನಿ ಅಶೇಷೇಣ ದ್ರಕ್ಷ್ಯಸಿ ಆತ್ಮನಿ ಅಥ ಉ ಮಯಿ-      ಪಾಂಡವ, ಯಾವುದನ್ನು ತಿಳಿದಾಗ ನೀನು ಮತ್ತೆ ಹೀಗೆ ಮೋಹಗೊಳ್ಳುವುದಿಲ್ಲ; ಯಾವುದರಿಂದ ಮೋಹವಳಿದದ್ದರಿಂದ ಎಲ್ಲಾ ಜೀವಿಗಳನ್ನು ಅಂತರ್ಯಾಮಿಯಾದ [ಎಲ್ಲೆಲ್ಲೂ ಇರುವ] ನನ್ನಲ್ಲಿ ಕಾಣಬಲ್ಲೆ, ಅಂಥ ತಿಳಿವನ್ನು ನಿಜ ಕಂಡು  ತಿಳಿದವರು ನಿನಗೆ ತಿಳಿಹೇಳುತ್ತಾರೆ. ಕಾಲಿಗೆರಗಿ, ಪರಿಪರಿಯಿಂದ ಕೇಳಿ, ಸೇವೆಗೈದು ಅದನ್ನು ತಿಳಿದುಕೋ.

ಜ್ಞಾನವನ್ನು ಗಳಿಸಬೇಕಾದರೆ "ನೀನು ಜ್ಞಾನಿಗಳ ಬೆನ್ನುಹತ್ತಬೇಕು; ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ತತ್ವದರ್ಶಿಗಳಿಂದ ಜ್ಞಾನವನ್ನು ಪಡೆ ಎನ್ನುತ್ತಾನೆ ಕೃಷ್ಣ. ಜ್ಞಾನ ಎನ್ನುವುದು ಕೇವಲ ಪುಸ್ತಕವನ್ನು ಓದುವುದರಿಂದ ಬರುವುದಲ್ಲ. ಅದು ನಮಗೆ ಸಾಕ್ಷಾತ್ಕಾರವಾಗಬೇಕು. "Truth is an intuitional flash, it is  not Intellectual". ಸತ್ಯ  ಎನ್ನುವುದು ನಮಗೆ ಸ್ಪೂರಣವಾಗಬೇಕು. ಎಲ್ಲಾ ವೇದ ಮಂತ್ರಗಳೂ ಋಷಿಗಳಿಗೆ ಅಂತರಂಗದಲ್ಲಿ ಸ್ಪೂರಣವಾಗಿರುವುದು(intuitional composition). ನ್ಯೂಟನ್ ಗೆ ಗುರುತ್ವಾಕರ್ಷಣ ಶಕ್ತಿಯ ವಿಚಾರ ಹೊಳೆದಂತೆ. ಈ ಕಾರಣಕ್ಕಾಗಿ ಮೊದಲು ನಾವು ಸತ್ಯಕ್ಕೆ ಶರಣಾಗಬೇಕು; ಸತ್ಯವನ್ನು ಕಂಡ ತತ್ವಜ್ಞಾನಿಗಳ ಬೆನ್ನುಹತ್ತಬೇಕು.
ಸಾಮಾನ್ಯವಾಗಿ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಜ್ಞಾನವನ್ನು ಯೋಗ್ಯರಲ್ಲದವರಿಗೆ ಎಂದೂ ಬೋಧಿಸುವುದಿಲ್ಲ. ಈ ಕಾರಣಕ್ಕಾಗಿ ಕೃಷ್ಣ ಹೇಳುತ್ತಾನೆ: "ತತ್ವದರ್ಶಿಗಳನ್ನು ಕಂಡರೆ ಬಿಡಬೇಡ, ಅವರ ಬೆನ್ನು ಹತ್ತು, ಅವರನ್ನು ಒಲಿಸಿಕೊ, ಅವರ ಮುಂದೆ ನೀನು ಯೋಗ್ಯ ಎಂದು ರುಜುವಾತು ಪಡಿಸು. ನಿನ್ನ ಅನನ್ಯ  ಬಯಕೆ ಅವರಿಗೆ ಮನವರಿಕೆಯಾಗುವಂತೆ ಮಾಡು, ಅವರಿಗೆ ಶರಣಾಗು"  ಎಂದು. ಇಲ್ಲಿ 'ಪ್ರಣಿಪಾತ' ಅಂದರೆ ಎಂಟು ಅಂಗಗಳ ನಮಸ್ಕಾರ. ತಲೆ, ಎದೆ, ಕೈ, ಕಾಲು ಎಲ್ಲವನ್ನು ನೆಲಕ್ಕೆ ತಾಗಿಸಿ, ಭಕ್ತಿಯ ದೃಷ್ಟಿಯಿಂದ, ಸ್ತೋತ್ರ(ವಚನ) ಮುಖೇನ, ಮನಸ್ಸಿನಲ್ಲಿ ಅಪಾರ ಗೌರವವಿಟ್ಟು ಮಾಡುವ ನಮಸ್ಕಾರ-'ಅಷ್ಟಾಂಗ ನಮನ'. ಹೀಗೆ ಶರಣಾಗಿ "ಕೆದಕಿ ಕೆದಕಿ, ಪರಿಪರಿಯಾಗಿ  ಕೇಳಿ ತಿಳಿದುಕು" ಎನ್ನುತ್ತಾನೆ ಕೃಷ್ಣ. 'ತತ್ವದರ್ಶಿಗಳ ಸೇವೆಮಾಡಿ ಅವರಿಂದ ಜ್ಞಾನವನ್ನು ಗಳಿಸು, ಅದರಿಂದ ಕರ್ಮ ಮಾಡು' ಎನ್ನುವುದು ಕೃಷ್ಣ  ಅರ್ಜುನನ ಮೂಲಕ ನಮಗೆ ಕೊಟ್ಟ ಸಂದೇಶ.
ಒಮ್ಮೆ ತತ್ವದರ್ಶಿಗಳಿಂದ ಜ್ಞಾನವನ್ನು ಪಡೆದರೆ ಮುಂದೆ ಮೋಹಕ್ಕೆ ಅವಕಾಶವಿಲ್ಲ. ಇಲ್ಲಿ ಅರ್ಜುನನನ್ನು ಕಾಡುತ್ತಿರುವುದು ಜ್ಞಾನವನ್ನು ಮುಚ್ಚಿರುವ  ಮೋಹದ ಪರದೆ. ಅದಕ್ಕಾಗಿ ಕೃಷ್ಣ ಅರ್ಜುನನನ್ನು 'ಪಾಂಡವ' ಎಂದು ಸಂಬೋಧಿಸುತ್ತಾನೆ.  ಇಲ್ಲಿ 'ಪಂಡಾ' ಎಂದರೆ ಜ್ಞಾನ (ಉದಾ:ಪಂಡಾ ಉಳ್ಳವ ಪಂಡಿತ)ಪಾಂಡವ ಎಂದರೆ ಜ್ಞಾನರಾಶಿಯನ್ನು ಪಡೆದವ. ಇನ್ನು ಪಾಂಡು ಎಂದರೆ 'ಬಿಳಿ ಬಣ್ಣ' ಅದು ಸಾತ್ವಿಕತೆಯ ಸಂಕೇತ. 'ನೀನು ಸ್ವಯಂ ಜ್ಞಾನಿ ಹಾಗು ಸಾತ್ವಿಕ' ಎಂದು ಸೂಚಿಸಿ ಇಲ್ಲಿ  ಈ ಸಂಬೋಧನೆ.
ಒಮ್ಮೆ ಸತ್ಯದ ಅರಿವು ಬಂದರೆ ಅದರಿಂದ ಮೋಹದ ಪಾಶ ಕಳಚಿಹೋಗುತ್ತದೆ. ಅದು ಪುನಃ ಬರುವ ಸಂಭವವಿಲ್ಲ. ಈ ಸ್ಥಿತಿಯಲ್ಲಿ ಸಮಸ್ತ ಜೀವಜಾತವೂ ಆತ್ಮನಲ್ಲಿ (ಭಗವಂತನಲ್ಲಿ) ಆಶ್ರಿತವಾಗಿದೆ, ಎಲ್ಲವುದಕ್ಕೂ ನಿಯಾಮಕ ಶಕ್ತಿ ಭಗವಂತ ಎನ್ನುವ ಪ್ರಜ್ಞೆ ಜಾಗೃತವಾಗುತ್ತದೆ. ಇದರಿಂದ ಎಲ್ಲ ಗೊಂದಲವೂ ಮರೆಯಾಗುತ್ತದೆ. ಸ್ವಾರ್ಥ, ದುಃಖ, ಅಸೂಹೆ, ಎಲ್ಲವೂ ಹೊರಟು ಹೋಗಿ ಸ್ಥಿತಪ್ರಜ್ಞೆ ಮೂಡುತ್ತದೆ. ಭಗವಂತ ಅಣು ಒಳಗೆ ಅಣುವಾಗಿ, ಎಲ್ಲರೊಳಗೂ ಬಿಂಬ ರೂಪನಾಗಿ ತುಂಬಿದ್ದಾನೆ ಹಾಗು ಆತ ಮಹತ್ತಿನಲ್ಲಿ ಮಹತ್ತಾಗಿರುವ ಸರ್ವಗತ.  ಅವನ ಇಚ್ಛೆಯಂತೇ ಎಲ್ಲವೂ ನಡೆಯುತ್ತದೆ ಎನ್ನುವ ಸತ್ಯ ತಿಳಿಯುತ್ತದೆ. ಭಗವಂತನಲ್ಲಿ ತನ್ನನ್ನು ತಾನು ಒಪ್ಪಿಸಿಕೊಂಡವನಿಗೆ ಜೀವನದಲ್ಲಿ ಎಂದೂ ಭಯವಿಲ್ಲ.

ಜ್ಞಾನದಿಂದ ಕರ್ಮ ಮಾಡಬೇಕು, ತತ್ವ ಜ್ಞಾನಿಗಳಿಂದ  ಜ್ಞಾನ ಪಡೆಯಬೇಕು, ಅದರಿಂದ ಮೋಕ್ಷ ಸಾಧ್ಯ ಎನ್ನುವ ವಿಚಾರ ತಿಳಿಯಿತು. ಆದರೆ ಈ ವಿಷಯ ತಿಳಿಯುವ ಮೊದಲು ಸಾಕಷ್ಟು ಪಾಪ ಕರ್ಮಗಳನ್ನು ಮಾಡಿದ ಪಾಪಿಗಳ ಗತಿ ಏನು? ಇದಕ್ಕಾಗಿ ಭಯ ಪಡಬೇಕಾಗಿಲ್ಲ ಎನ್ನುತ್ತಾನೆ ಕೃಷ್ಣ. ಈ ವಿಚಾರವಾಗಿ ಕೃಷ್ಣನ  ಭರವಸೆಯನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.                           

ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ    ।
ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ                  ॥೩೬॥

ಅಪಿ ಚೇತ್  ಅಸಿ ಪಾಪೇಭ್ಯಃ ಸರ್ವೇಭ್ಯಃ ಪಾಪ ಕೃತ್ ತಮಃ
ಸರ್ವಮ್  ಜ್ಞಾನ ಪ್ಲವೇನ ಏವ ವೃಜಿನಮ್  ಸಂತರಿಷ್ಯಸಿ-ನೀನು ಎಲ್ಲಾ ಪಾಪಿಗಳಿಗಿಂತಲೂ ಹಿರಿಯ ಪಾಪಿಯಾಗಿದ್ದರೂ ಸರಿಯೇ, ಎಲ್ಲ ಪಾತಕಗಳನ್ನೂ  ತಿಳಿವಿನ ದೋಣಿಯಿಂದ ದಾಟಬಲ್ಲೆ.

"ನೀನು ನಿನ್ನ ಕಾಲದಲ್ಲಿನ ಸರ್ವಶ್ರೇಷ್ಠ ಪಾಪಿಯಾಗಿದ್ದರೂ ಕೂಡಾ, ಒಮ್ಮೆ ನಿನಗೆ ಭಗವಂತನ ಅರಿವು ಮೂಡಿದರೆ ನೀನು ಗೆದ್ದಂತೆ" ಎನ್ನುತ್ತಾನೆ ಕೃಷ್ಣ. ಏಕೆಂದರೆ ತಿಳುವಳಿಕೆ ಬಂದ ಮೇಲೆ  ಜ್ಞಾನದ ಮಾರ್ಗದಲ್ಲಿ ಸಾಗಿದರೆ ಹಿಂದಿನ ಯಾವ ಪಾಪವೂ ನಿಲ್ಲುವುದಿಲ್ಲ. ಜ್ಞಾನವೆನ್ನುವುದು ಪಾಪದ ಕಡಲಿನಲ್ಲಿ ದೋಣಿಯಂತೆ. ಅದು  ನಮ್ಮನ್ನು ದಡ ಸೇರಿಸಬಲ್ಲದು.  ಪಾಪದ ಕಡಲನ್ನು ದಾಟಲು ಇರುವ ಒಂದೇ ಒಂದು ಸಾಧನ ಜ್ಞಾನ. ಇಂತಹ ದೊಡ್ಡ ಭರವಸೆಯನ್ನು ಕೃಷ್ಣ ಕೊಟ್ಟಿದ್ದಾನೆ. ಆದ್ದರಿಂದ ನಾವೆಲ್ಲರೂ ಇಂದೇ ಈ ಕ್ಷಣದಿಂದ ಜ್ಞಾನ ಮಾರ್ಗದಲ್ಲಿ ಸಾಗುವ ಸಂಕಲ್ಪ ತೊಟ್ಟು ಮುಂದುವರಿಯೋಣ- ಏಕೆಂದರೆ ನಾಳೆ ಎಂದರೆ ಆ ನಾಳೆ ನಮ್ಮ ಪಾಲಿಗೆ ಬಾರದೆ ಇರಬಹುದು!  Yesterday was history, tomorrow is a mystery, today is God's gift, that's why we call it 'the present' .

ಜ್ಞಾನ ಮಾರ್ಗವನ್ನು ಹಿಡಿದ ಒಬ್ಬ ಪಾಪಿಯ ಪಾಪಕರ್ಮವೇನಾಗುತ್ತದೆ ಎನ್ನುವುದಕ್ಕೆ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಣೆಯನ್ನು ಕೊಟ್ಟಿದ್ದಾನೆ.

ಯಥೈಧಾಂಸಿ ಸಮಿದ್ಧೋSಗ್ನಿರ್ಭಸ್ಮಸಾತ್  ಕುರುತೇ ಅರ್ಜುನ    ।
ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ        ॥೩೭॥

ಯಥಾ ಏಧಾಂಸಿ ಸಮಿದ್ಧಃ ಅಗ್ನಿಃ ಭಸ್ಮ ಸಾತ್  ಕುರುತೇ ಅರ್ಜುನ    ।
ಜ್ಞಾನಾಗ್ನಿಃ ಸರ್ವ ಕರ್ಮಾಣಿ ಭಸ್ಮ ಸಾತ್ ಕುರುತೇ ತಥಾ- ಅರ್ಜನ, ಉರಿಯುವ ಬೆಂಕಿ ಉರುವಲನ್ನುಸುಟ್ಟುಬಿಡುವ ಹಾಗೆ ಅರಿವಿನ ಬೆಂಕಿ ಎಲ್ಲ ಕರ್ಮಗಳನ್ನೂ ಸುಟ್ಟುಬಿಡುತ್ತದೆ.

ಜ್ಞಾನ ಎನ್ನುವುದು ಸದಾ ಪ್ರಜ್ವಲಿಸುವ ಬೆಂಕಿ. ಅದಕ್ಕಿಂತ ಹೆಚ್ಚು ಶಕ್ತಿ ಶಾಲಿಯಾದ ಬೆಂಕಿ ಇನ್ನೊಂದಿಲ್ಲ.  ಹೇಗೆ ಉರಿಯುವ ಬೆಂಕಿ ಕಟ್ಟಿಗೆಯನ್ನು ಸುಟ್ಟುಬಿಡುತ್ತದೋ, ಹಾಗೆ ಜ್ಞಾನದ ಬೆಂಕಿ ಎಲ್ಲ ಪಾಪ ಕರ್ಮವನ್ನು ಸುಟ್ಟುಬಿಡುತ್ತದೆ. ಭಾಗವತದಲ್ಲಿ ಹೇಳುವಂತೆ ಆಧ್ಯಾತ್ಮಿಕವಾಗಿ ಬೆಂಕಿ ಸತ್ವ ಗುಣದ ಪ್ರತೀಕ. ಏಕೆಂದರೆ ಅದು ಬೆಳಕು ಕೊಡುವ ಹಾಗು ಸದಾ ಊರ್ಧ್ವ ಮುಖವಾಗಿರುವ ಶಕ್ತಿ. ಅದೇ ರೀತಿ ಕಟ್ಟಿಗೆ ಸದಾ ಕೆಳಕ್ಕೆಳೆಯುವ ತಮೋಗುಣದ  ಪ್ರತೀಕ.  ಬೆಂಕಿ ಕಟ್ಟಿಗೆಯನ್ನು ಸುಟ್ಟಂತೆ ಒಬ್ಬ ಸಾಧಕನಲ್ಲಿರುವ ಜ್ಞಾನ ತಮಸ್ಸನ್ನು ಸುಟ್ಟುಬಿಡುತ್ತದೆ. ಇಲ್ಲಿ ಕೃಷ್ಣ ಅರ್ಜುನ' ಎಂದು ಸಂಬೋಧಿಸಿದ್ದಾನೆ. ಅರ್ಜುನ ಎಂದರೆ ಅರ್ಜನ ಮಾಡಿದವ, ಜ್ಞಾನವೆಂಬ ಬೆಂಕಿ ಉಳ್ಳವ.  ಈ ಸಂಬೋಧನೆಯಿಂದ ಕೃಷ್ಣ ಅರ್ಜುನನ ಜ್ಞಾನಕ್ಕೆ  ಆವರಿಸಿರುವ ಮೋಹದ ಪರದೆಯನ್ನು ಸರಿಸುತ್ತಿದ್ದಾನೆ.

ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ            ।
ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾSತ್ಮನಿ ವಿಂದತಿ     ॥೩೮॥

ನ ಹಿ ಜ್ಞಾನೇನ ಸದೃಶಮ್  ಪವಿತ್ರಮ್ ಇಹ  ವಿದ್ಯತೇ        
ತತ್ ಸ್ವಯಮ್   ಯೋಗ ಸಂಸಿದ್ಧಃ ಕಾಲೇನ ಆತ್ಮನಿ ವಿಂದತಿ- ತಿಳಿವಿಗೆ ಸಾಟಿಯಾದ ಪಾವನವಾದ ವಸ್ತು ಇಲ್ಲಿ ಇನ್ನೊಂದಿಲ್ಲ. ಸಾಧನೆಯಿಂದ ಪಳಗಿದವನು  ತಕ್ಕ ಕಾಲದಲ್ಲಿ ಅದನ್ನು ತಾನೆ ತನ್ನಲ್ಲಿ ಪಡೆಯುತ್ತಾನೆ.

ಜ್ಞಾನ ಎನ್ನುವುದು ಮಹಾಪವಿತ್ರ. ಅದಕ್ಕೆ ಸಾಟಿಯಾದ ಇನ್ನೊಂದು ವಸ್ತು ಈ ಪ್ರಪಂಚದಲ್ಲಿಲ್ಲ. ಏಕೆಂದರೆ ಜ್ಞಾನವೆಂದರೆ  ಭಗವಂತ. ಆದ್ದರಿಂದ "ಜ್ಞಾನ ಮಾರ್ಗವನ್ನು ಹಿಡಿ, ಕಾಲ ಪರಿಪಕ್ವವಾದಾಗ ನೀನು ಸಿದ್ಧಿಯನ್ನು ಪಡೆದೇ ಪಡೆಯುತ್ತಿ" ಎನ್ನುವುದು ಕೃಷ್ಣನ  ಭರವಸೆ. ಕೆಲವೊಮ್ಮೆ ಸಾಧನೆಯ ಪಥದಲ್ಲಿ ಸಿದ್ಧಿಯನ್ನು ಪಡೆಯಲು ಕೆಲವು ಜನ್ಮಗಳೇ ಬೇಕಾಗಬಹುದು. ಆದರೆ ಭಗವಂತನ ಭರವಸೆಯನ್ನು ನಂಬಿ ಆತ್ಮವಿಶ್ವಾಸದಿಂದ ಮುನ್ನೆಡೆದವನು ಸಿದ್ಧಿಯನ್ನು ಪಡೆಯುತ್ತಾನೆ.

No comments:

Post a Comment