Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, March 27, 2011

Bhagavad Gita Kannada Chapter-03 Shloka 14-16


ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ ।
ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ   ॥೧೪॥

ಅನ್ನಾತ್  ಭವಂತಿ ಭೂತಾನಿ ಪರ್ಜನ್ಯಾತ್ ಅನ್ನ ಸಂಭವಃ
ಯಜ್ಞಾತ್  ಭವತಿ ಪರ್ಜನ್ಯಃ  ಯಜ್ಞಃ  ಕರ್ಮ ಸಮುದ್ಭವಃ -ಜೀವಿಗಳ ಹುಟ್ಟು  ಆಹಾರದಿಂದ;  ಆಹಾರದ ಬೆಳೆ ಸೂರ್ಯನಿಂದ[ಮೋಡದಿಂದ]. ಸೌರಶಕ್ತಿಯ ವೃದ್ಧಿ [ಮೋಡದ ಹುಟ್ಟು]-ಯಜ್ಞದಿಂದ; ಯಜ್ಞದ ನಿರ್ವಹಣೆ-ಕರ್ಮದಿಂದ.

ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್ ।
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್  ॥೧೫॥

ಕರ್ಮ ಬ್ರಹ್ಮಉದ್ಭವಮ್  ವಿದ್ಧಿ  ಬ್ರಹ್ಮ ಅಕ್ಷರ ಸಮುದ್ಭವಮ್
ತಸ್ಮಾತ್ ಸರ್ವ ಗತಮ್  ಬ್ರಹ್ಮ ನಿತ್ಯಮ್  ಯಜ್ಞೇ ಪ್ರತಿಷ್ಠಿತಮ್ - ಕರ್ಮದ ನಿಷ್ಪತ್ತಿ ಭಗವಂತನಿಂದ; ಭಗವಂತನ ಅಭಿವ್ಯಕ್ತಿ- ವೇದಾಕ್ಷರದಿಂದ. ಆದ್ದರಿಂದ ಎಲ್ಲೆಡೆಯಿರುವ ಭಗವಂತ ಸದಾ ಯಜ್ಞದಲ್ಲಿ ನೆಲೆಸಿದ್ದಾನೆ.        

ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ।
ಅಘಾಯುರಿಂದ್ರ ಯಾರಾಮೋ ಮೋಘಂ ಪಾರ್ಥ ಸ ಜೀವತಿ ॥೧೬॥

ಏವಂ ಪ್ರವರ್ತಿತಮ್  ಚಕ್ರಮ್    ಅನುವರ್ತಯತಿ ಇಹ ಯಃ
ಅಘ ಆಯಃ  ಇಂದ್ರಿಯ ಆರಾಮಃ ಮೋಘಮ್  ಪಾರ್ಥ ಸಃ ಜೀವತಿ -ಹೀಗೆ ಜಗದ ಗಾಲಿಯನ್ನು ಮುಂದುವರಿಸದವನು ಪಾಪದ ಬದುಕು ಬದುಕುತ್ತ ಇಂದ್ರಿಯ ಸುಖದಲ್ಲೇ ಮೈಮರೆತವನು. ಓ ಪಾರ್ಥ, ಅಂಥವನ ಬದುಕು ವ್ಯರ್ಥ.

ಜೀವಜಾತದ ಹುಟ್ಟು ಆಹಾರದಿಂದ. ಆಹಾರವಿಲ್ಲದೆ ಬದುಕಿಲ್ಲ. ಈ ಆಹಾರ ಸಿಗುವುದು ಬೆಳೆಯಿಂದ. ಬೆಳೆಗೆ ಮೂಲ ಸೌರಶಕ್ತಿ  ಮತ್ತು ಮಳೆ. ಮಳೆ ಬರುವುದು ಯಜ್ಞದಿಂದ, ನಾವು ಮಾಡುವ ಪ್ರಾಮಾಣಿಕ ಬದುಕಿನಿಂದ, ಭಗವದರ್ಪಣ ಬುದ್ಧಿಯಿಂದ. ಯಜ್ಞದ ನಿರ್ವಹಣೆ ಕರ್ಮದಿಂದ, ನಮ್ಮ ಕ್ರಿಯಾಶೀಲತೆಯಿಂದ. ಕರ್ಮ ಎಂದರೆ ಕರ್ತವ್ಯ ಕರ್ಮ, ಪ್ರಾಮಾಣಿಕ ಕ್ರಿಯೆ. ಇಂತಹ ಕರ್ಮ ನಡೆಯುವುದು  ಭಗವಂತನಿಂದ. ಈ ಭಗವಂತ(ಬ್ರಹ್ಮ) ನೆಲೆಸಿರುವುದು ವೇದ(ಅಕ್ಷರ)ದಲ್ಲಿ. ವೇದ ಇರುವುದು ಜೀವ ಜಾತಗಳಲ್ಲಿ(ಮನುಷ್ಯನಲ್ಲಿ). ಆದ್ದರಿಂದ ಇದೊಂದು ಚಕ್ರ.  ಮಾನವ<->ಆಹಾರ<->ಮಳೆ<->ಯಜ್ಞ<->ಭಗವಂತ<->ವೇದ<-> ಮಾನವ. ಇಲ್ಲಿ ವೇದ ಎಂದರೆ ವೇದ ಮಂತ್ರವನ್ನು ಬಾಯಿಪಾಠ ಮಾಡುವುದಲ್ಲ. ವೈದಿಕ ವಾಙ್ಮಯದ ಎಚ್ಚರ-ಪ್ರಜ್ಞೆ. ಈ ಚಕ್ರದಲ್ಲಿ ನಾವು ನಮ್ಮ ಕರ್ಮವನ್ನು ತೊರೆಯುವಂತಿಲ್ಲ. ಕರ್ಮವನ್ನು ಸದಾ ಯಜ್ಞವಾಗಿ, ಭಗವದರ್ಪಣವಾಗಿ ಮಾಡಬೇಕು. ಭಗವಂತನ ಎಚ್ಚರ, ವೈದಿಕ ವಾಙ್ಮಯ ಪ್ರಜ್ಞೆ  ಎಲ್ಲವೂ ಸಮನಾಗಿದ್ದರೆ ಮಳೆ, ಮಳೆಯಿಂದ ಬೆಳೆ, ಬೆಳೆಯಿಂದ ಜೀವನ. ಈ ಚಕ್ರವನ್ನು ಯಾರು ಮುಂದುವರಿಸಿಕೊಂಡು ಹೋಗುವುದಿಲ್ಲವೋ ಅವನು ವಿಶ್ವ ಚಕ್ರದ ನಡೆಯನ್ನು ಮುರಿದವನು, ಸಮಾಜದ ಸಹಜ ನಡೆಗೆ ಅಡ್ಡಗಾಲು ಹಾಕಿದವನು. ಅಂತವನು ಬರಿಯ ಇಂದ್ರಿಯ ಸುಖ ಭೋಗದಲ್ಲಿ ಮೈಮರೆತು ತನ್ನ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾನೆ.

ಇಲ್ಲಿ ಹೇಳಿರುವ ಈ ವಿಶ್ವ ಚಕ್ರದ ಎಚ್ಚರ ನಮಗೆ ನಮ್ಮ ದೈನಂದಿನ ಕಾರ್ಯದಲ್ಲಿ ಇದ್ದರೆ ನಮ್ಮ ಜೀವನ ಸಾರ್ಥಕ. ನಾವು ಸದಾ ಆ ವಿಶ್ವ ಶಕ್ತಿಯ ನಡೆಯನ್ನು ಅನುಸರಿಸಿದರೆ ನಮ್ಮ ಉದ್ಧಾರ ಸದಾಸಿದ್ಧ. ಎಂದೂ ಯಾವ ವಿಚಾರವಾಗಿ ನಾವು ಭಯ ಪಡುವ ಅಗತ್ಯವಿಲ್ಲ. ನಮ್ಮ ದೈನಂದಿನ ಬದುಕನ್ನು ಒಂದು ಯಜ್ಞವಾಗಿ ಮಾಡಿಕೊಂಡು, ಭಗವಂತನ ಪ್ರಜ್ಞೆಯಲ್ಲಿ ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು. ಇದು ನಿಜವಾದ ಕರ್ಮಯೋಗ. ಇದುವೇ ಮೋಕ್ಷದ  ನಡೆ. ಇದು ಭಗವಂತನನ್ನು ಸೇರುವ ಮಾರ್ಗ.
ಈ ವಿಶ್ವದಲ್ಲಿ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡಿದೆ(Inter Dependent). ಒಂದು ಇನ್ನೊಂದರ ಸಹಾಯದಿಂದ ನಿಂತಿದೆ. ಯಾವುದೂ ಸ್ವತಂತ್ರ ಅಲ್ಲ (Inter linked not independent). ಪ್ರತಿಯೊಂದು ಪುಟ್ಟ ಕ್ರಿಯೆಯಲ್ಲಿ ಇಡೀ ವಿಶ್ವದ ಶಕ್ತಿಗಳು  ಪರೋಕ್ಷವಾಗಿ ಪಾಲ್ಗೊಳ್ಳುತ್ತವೆ. ನಾವು ಉಣ್ಣುವ ಆಹಾರದ ಹಿಂದೆ ಅನೇಕ ಋಣಗಳಿವೆ. ಅದನ್ನು ನೆನಪಿಸದೇ ಇದ್ದರೆ ವಿಶ್ವ ಶಕ್ತಿಗೆ ಕೃತಘ್ನರಾದಂತೆ.
ವಿಶ್ವದ ನಡೆಯ ಕರ್ಮಚಕ್ರ’; ಅದರಲ್ಲಿ ನಮ್ಮ ಕರ್ತವ್ಯಕರ್ಮ’; ನಮ್ಮ ಯಜ್ಞ ಯಾಗಾದಿಗಳು ಈ ಬಗ್ಗೆ ವಿವರವಾಗಿ ಕೃಷ್ಣ ಹೇಳಿದ. ಆದರೆ ಇಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಅದೇನೆಂದರೆ: ಹಿಂದೆ ಕೃಷ್ಣ  ಜ್ಞಾನವನ್ನು ಶ್ರೇಷ್ಠ ಎಂದು ಹೇಳಿದ್ದ,  ಆದರೆ ಕರ್ಮವನ್ನು ಬಿಟ್ಟಲ್ಲ ಎಂತಲೂ  ಹೇಳಿದ.  ಆದರೆ ಶಾಸ್ತ್ರದಲ್ಲಿ ಜ್ಞಾನಿಗಳಿಗೆ ಕರ್ಮ ಬೇಡ ಎಂದು ಹೇಳಿದೆ. ಏನಿದರ ಅರ್ಥ?  ಕೃಷ್ಣ ನಮ್ಮ ಈ ಪ್ರಶ್ನೆಯನ್ನು ಆತನೇ ಎತ್ತಿಕೊಂಡು ಮುಂದಿನ ಶ್ಲೋಕದಲ್ಲಿ ಉತ್ತರ ಕೊಡುತ್ತಾನೆ. ಒಬ್ಬ ಅಂತರಂಗದಲ್ಲಿ ಯಜ್ಞ ಮಾಡತಕ್ಕವನಿಗೆ ಕರ್ಮವಿದೆಯೋ? ಅವನು ಕರ್ಮ ಮಾಡದಿದ್ದರೆ ಲೋಪವಿದೆಯೋ? ಮನುಷ್ಯ ಕರ್ಮ ಬಂಧನವಿಲ್ಲದೆ ಇರುವ ಸ್ಥಿತಿ ಯಾವುದು? ಮೋಕ್ಷಕ್ಕೆ ಮೊದಲು ಸಂಸಾರಿಕ ಸ್ಥಿತಿಯಲ್ಲಿ ಕರ್ಮ ಮಾಡದೆ ಇರುವುದು ಸಾಧ್ಯವೋ? ಕರ್ಮವಿಲ್ಲದೆ ಸಂಪೂರ್ಣ ಅಂತರಂಗದ ಸ್ಥಿತಿಯಲ್ಲಿರುವುದು ಸಾಧ್ಯವೋ? ಇತ್ಯಾದಿ ಪ್ರಶ್ನೆಗಳಿಗೆ ಮುಂದೆ ಕೃಷ್ಣ ವಿವರಣೆ ಕೊಟ್ಟಿದ್ದಾನೆ.

No comments:

Post a Comment