Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, March 27, 2011

Bhagavad Gita Kannada Chapter-03 Shloka 10-13


ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ ।
ಅನೇನ ಪ್ರಸವಿಷ್ಯಧ್ವಮೇಷ ವೋsಸ್ತ್ವಿಷ್ಟಕಾಮಧುಕ್         ॥೧೦॥

ಸಹ ಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರಾ ಉವಾಚ ಪ್ರಜಾಪತಿಃ
ಅನೇನ ಪ್ರಸವಿಷ್ಯಧ್ವಮ್ ಏಷ ವಃ ಅಸ್ತು ಇಷ್ಟ ಕಾಮ ಧುಕ್- ಹಿಂದೆ ಪ್ರಜಾಪತಿ ಭಗವಂತನ ಪೂಜಾ ರೂಪವಾದ ಕರ್ಮದ ಜೊತೆಗೆ ಮಾನವರನ್ನು ಹುಟ್ಟಿಸಿ ಹೀಗೆ ಹೇಳಿದನು: ಇದರಿಂದ ಬೆಳವಣಿಗೆ ಹೊಂದಿ, ಇದು ನಿಮ್ಮ ಬಯಕೆಯನ್ನು ಈಡೇರಿಸಲಿ.

ಹಿಂದೆ ಚತುರ್ಮುಖ- ಚಿಂತನ ಶೀಲ ಮಾನವರನ್ನು ಸೃಷ್ಠಿ ಮಾಡಿ, ಅವರಿಗಾಗಿ ಅವರು ಆಚರಿಸಬೇಕಾದ ಯಜ್ಞವನ್ನು ಸೃಷ್ಠಿ ಮಾಡಿದ. ಹಾಗು ಹೇಳಿದ " ಈ ಪೂಜಾ ವಿಧಾನದಿಂದ ಬೇಕಾದ್ದನ್ನು ಪಡೆಯಿರಿ. ಇದು ನೀವು ಬಯಸಿದ ಅಭೀಷ್ಟವನ್ನು ಕೊಡುವ ಕಾಮದೇನು" ಎಂದು. ಹಿಂದೆ ಹೇಳಿದಂತೆ  'ಯಜ್ಞ' ಎಂದರೆ 'ದೇವರನ್ನು ಉಪಾಸನೆ ಮಾಡುವ ವಿಧಾನ'; 'ದಾನ' ಹಾಗು 'ಸಂಗತೀಕರಣ' ಕೂಡಾ ಯಜ್ಞ. ಇಲ್ಲಿ ದಾನ ಎನ್ನುವುದಕ್ಕೆ ವಿಶೇಷ ಅರ್ಥವಿದೆ. ತನ್ನಲ್ಲಿ ಬೇಕಾದಷ್ಟು ಇದ್ದು,  ತನಗೆ ಬೇಡವಾದದ್ದನ್ನು ಇನ್ನೊಬ್ಬನಿಗೆ ಕೊಡುವುದು ದಾನವಲ್ಲ. ತನ್ನಲ್ಲಿ ಎರಡು ಹೊತ್ತಿನ ಊಟವಿದ್ದು, ಇನ್ನೊಬ್ಬನಲ್ಲಿ ಒಂದು ಹೊತ್ತಿನ ಊಟ ಕೂಡಾ ಇಲ್ಲದಿದ್ದಾಗ, ಅವನಿಗೆ ತನ್ನಲ್ಲಿರುವ ಊಟವನ್ನು ಕೊಟ್ಟು ಹಂಚಿ ತಿನ್ನುವುದು ನಿಜವಾದ ದಾನ. ಇನ್ನೊಬ್ಬರ ಕಷ್ಟದಲ್ಲಿ ಕರಗುವುದು ನಿಜವಾದ ದಾನ. ಇನ್ನು ಸಂಗತೀಕರಣ ಎಂದರೆ ಜ್ಞಾನಾರ್ಜನೆಗಾಗಿ ಒಂದು ಕಡೆ ಕಲೆಯುವುದು. ಪ್ರವಚನ ಒಂದು ಸಂಗತೀಕರಣ.

ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ ।
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ          ॥೧೧॥

ದೇವಾನ್ ಭಾವಯತಾ ಅನೇನ ತೇ ದೇವಾಃ ಭಾವಯಂತು ವಃ
ಪರಸ್ಪರಮ್  ಭಾವಯಂತಃ ಶ್ರೇಯಃ ಪರಮ್ ಅವಾಪ್ಸ್ಯಥ-ಇದರಿಂದ ದೇವತೆಗಳಿಗೆ ನೆರವಾಗಿ. ಆ ದೇವತೆಗಳು ನಿಮಗೆ ನೆರವಾಗಲಿ. ಒಬ್ಬರಿಗೊಬ್ಬರು ನೆರವಾಗುತ್ತ ಹಿರಿಯ ಹಿತವನ್ನು ಪಡೆಯಿರಿ.

ಈ ರೀತಿ ಯಜ್ಞದ ಸೃಷ್ಟಿ ಮಾಡಿದ ಚತುರ್ಮುಖ ಹೇಳಿದನಂತೆ: ಯಜ್ಞಗಳ ಮೂಲಕ ನೀವು  ದೇವತೆಗಳಿಗೆ ನೇರವಾಗಿ ಹಾಗು ಅವರು ನಿಮ್ಮ ಅಭೀಷ್ಟವನ್ನು ಪೂರೈಸಲಿ" ಎಂದು.  "ಹೀಗೆ ಒಬ್ಬರಿಗೊಬ್ಬರು ನೆರವಾಗುತ್ತಾ ಹಿರಿಯ ಹಿತವನ್ನು ಪಡೆಯಿರಿ" ಎಂದನಂತೆ. ನಾವು ನಮಗೆ ಬೇಕಾದುದನ್ನು ನಾವೇ ಸೃಷ್ಟಿಸಿ ಕೊಳ್ಳುತ್ತೇವೆ ಎನ್ನುವುದು ನಮ್ಮ ಭ್ರಮೆ. ನಾವು ಬಿತ್ತಿ ಬೆಳೆಯಬೇಕು ಎಂದರೆ ಪ್ರಕೃತಿಯಲ್ಲಿ ವಾತಾವರಣ ವೈಪರಿತ್ಯ ಆಗಬಾರದು. ಇಲ್ಲದಿದ್ದರೆ ನಮಗೆ ಏನನ್ನೂ ಬೆಳೆಯಲು ಸಾಧ್ಯವಿಲ್ಲ.  ಪ್ರತಿಯೊಂದು ಕ್ರಿಯೆಯ ಹಿಂದೆ ಅನೇಕ ದೇವತಾ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ನಮ್ಮ ಪ್ರತಿಯೊಂದು ಅಂಗಾಂಗಳಿಗೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಆ ಶಕ್ತಿ ಕೆಲಸ ಮಾಡದೆ ಇದ್ದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗೆ ನಮಗೆ ಬದುಕು ಕೊಟ್ಟು, ನೋಡುವ ಕಣ್ಣು, ಕೇಳುವ ಕಿವಿ ಕೊಟ್ಟು, ಒಳ್ಳೆಯದನ್ನು ನೋಡುವ, ಒಳ್ಳೆಯದನ್ನು ಕೇಳುವ ಬುದ್ಧಿ ಕೊಟ್ಟು, ಈ ಎಲ್ಲಾ ಕಾರ್ಯವನ್ನು ಒಂದು ದೇವತೆಗಳ ಸಮೂಹ ನಿರಂತರ ನಡೆಸುವಂತೆ ಭಗವಂತನ ವ್ಯವಸ್ಥೆ ಇದೆ. ಹೀಗಿರುವಾಗ ನಾವು ಇಂತಹ ದೇವತಾ ಶಕ್ತಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಹೀಗೆ ಒಬ್ಬರಿಗೊಬ್ಬರು ನೆರವಾದಾಗ ನಾವು ಹಿತವನ್ನು ಕಾಣಲು ಸಾಧ್ಯ.
ಸಾಮಾನ್ಯವಾಗಿ ಅಗ್ನಿ ಮುಖದಲ್ಲಿ ಮಾಡುವ ಪೂಜೆಯನ್ನು ಯಜ್ಞ ಎನ್ನುವುದು ವಾಡಿಕೆ. ದೇವರ ಪೂಜೆಯಲ್ಲಿ ಅಗ್ನಿ ಅತ್ಯಂತ ಮುಖ್ಯ ಪ್ರತೀಕ. ಏಕೆಂದರೆ ಅಗ್ನಿ ಅತ್ಯಂತ ಶುದ್ಧ. ಅಗ್ನಿಗೆ ಏನನ್ನು ಹಾಕಿದರೂ ಅದು ಶುದ್ಧವಾಗುತ್ತದೆ. ಅಗ್ನಿ  ಭಗವಂತನ ಪ್ರತೀಕ. ಭಗವಂತನಿಗೆ ಆಕಾರವಿಲ್ಲ, ಆತ ಬೆಳಕಿನ ಪುಂಜ ಹಾಗು ಪವಿತ್ರ. ಇದೇ ಗುಣವನ್ನು ಅಗ್ನಿಯಲ್ಲಿ ನಾವು ಕಾಣಬಹುದು. ಇನ್ನು ನಾವು ಭಗವಂತನಿಗೆ ಏನನ್ನಾದರೂ ತಿನ್ನಿಸಬೇಕು ಎಂದರೆ ಅದು ಅಗ್ನಿ ಮುಖೇನ ಮಾತ್ರ ಸಾಧ್ಯ.  ಯಜ್ಞದಲ್ಲಿ ನಾವು ಪೂಜೆ ಮಾಡುವುದು ಬೆಂಕಿಯನ್ನಲ್ಲ, ಅಗ್ನಿ ಮುಖೇನ ಅಗ್ನಿನಾರಾಯಣನ ಪೂಜೆ-ಯಜ್ಞ. ಈ ಅರಿವಿಲ್ಲದೆ ಯಜ್ಞವನ್ನು ಮಾಡಿದರೆ ಹೊಗೆ ತಿಂದು ಸಾಯಬೇಕಾದೀತು! ನಮ್ಮ ಪೂಜೆ ಅಗ್ನಿನಾರಾಯಣನಿಂದ ಸೂರ್ಯ ನಾರಾಯಣನನ್ನು ಸೇರಿ, ಮರಳಿ ನರನಾರಾಯಣನನ್ನು ತಲುಪುತ್ತದೆ. ಇದಕ್ಕಾಗಿ ದೇವರನ್ನು ಕುರಿತು ಮಾಡುವ ಯಜ್ಞ ಯಾವಾಗಲೂ ಹಗಲು ಹೊತ್ತಿನಲ್ಲೇ ನಡೆಯುತ್ತದೆ. ಅಗ್ನಿಯ ಏಳು ಬಣ್ಣಗಳ ಮುಖೇನ ಸೂರ್ಯನ ಏಳು ಬಣ್ಣಗಳಲ್ಲಿ ವಿಲೀನವಾಗುವ ಯಜ್ಞಶಕ್ತಿ, ವಾತಾವರಣವನ್ನು ಸೇರಿ ಲೋಕಕ್ಕೆ ಮಂಗಳಮಂಗಳವನ್ನುಂಟುಮಾಡುತ್ತದೆ. ಇದನ್ನು ಇಲ್ಲಿ ಕೊಡು-ಕೊಂಡುಕೊಳ್ಳುವ ಕ್ರಿಯೆ ಎಂದಿದ್ದಾರೆ.

ಇಷ್ಟಾನ್ ಭೋಗಾನ್ ಹಿ ವೋ ದೇವಾ ದಾಸ್ಯಂತೇ ಯಜ್ಞಭಾವಿತಾಃ ।
ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ ॥೧೨॥

ಇಷ್ಟಾನ್ ಭೋಗಾನ್ ಹಿ ವಃ ದೇವಾಃ ದಾಸ್ಯಂತೇ ಯಜ್ಞ ಭಾವಿತಾಃ
ತೈಃ ದತ್ತಾನ್ ಅಪ್ರದಾಯ ಏಭ್ಯಃ  ಯಃ ಭುಂಕ್ತೇ ಸ್ತೇನಃ ಏವ ಸಃ -ಇಂಥ ಯಜ್ಞದಿಂದ ಬಲಗೊಂಡ ದೇವತೆಗಳು ನೀವು ಬಯಸಿದ ಬಯಕೆಗಳನ್ನು ಈಡೇರಿಸುತ್ತಾರೆ. ಅವರು ನೀಡಿದ್ದನ್ನು ಅವರಿಗೆ ನೀಡದೆ ತಿನ್ನುವವನು ಕಳ್ಳನೇ ಸರಿ.

ನಮಗೆ ಏನು ಬೇಕೋ ಅದನ್ನು ಈ ಪ್ರಕೃತಿ ಕೊಡುತ್ತದೆ. ಹಾಗಿರುವಾಗ ಅದನ್ನು ಉಪಯೋಗಿಸುವ ನಮಗೆ ಕೃತಜ್ಞತೆ ಬೇಕು. ಅದನ್ನು ಬಿಟ್ಟು 'ಇದು ನನ್ನದು' ಎಂದು ಅಧಿಕಾರ ಅಹಂಕಾರ ತೋರಿದರೆ ಉದ್ಧಾರವಿಲ್ಲ. ಪ್ರಕೃತಿ ಕೊಟ್ಟಿದ್ದನ್ನು ಕೃತಜ್ಞತೆ ಸಲ್ಲಿಸದೆ ಪಡೆದುಕೊಂಡು 'ಇದು ನನ್ನದು' ಎನ್ನುವವನು ಕಳ್ಳನೇ ಸರಿ!

ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ  ಸರ್ವಕಿಲ್ಬಿಷೈಃ ।
ಭುಂಜತೇ  ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್      ॥೧೩॥

ಯಜ್ಞ ಶಿಷ್ಟ ಅಶಿನಃ ಸಂತಃ  ಮುಚ್ಯಂತೇ  ಸರ್ವ ಕಿಲ್ಬಿಷೈಃ ।
ಭುಂಜತೇ  ತೇ ತು ಅಘಮ್  ಪಾಪಾಃ ಯೇ ಪಚಂತಿ ಆತ್ಮ ಕಾರಣಾತ್- ದೇವತೆಗಳಿಗೆ ಸಲ್ಲಿಸಿ ಉಳಿದಿದ್ದನ್ನು ಉಣ್ಣುವ ಸಜ್ಜನರು ಎಲ್ಲಾ ಪಾಪಗಳಿಂದ ಪಾರಾಗುತ್ತಾರೆ. ತಮಗಾಗಿ ಅನ್ನ ಬೇಯಿಸುವವರು ತಮ್ಮ ಪಾಪವನ್ನೇ ತಾವು ತಿನ್ನುತ್ತಾರೆ.

ಯಾರು ಪಡೆದಿದ್ದನ್ನು ಭಗವದರ್ಪಣೆ ಮಾಡಿ ಅದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸುತ್ತಾರೆ, ಅವರು  ಬದುಕಿನ ಎಲ್ಲಾ ಕೊಳೆಗಳಿಂದ ಬಿಡುಗಡೆಗೊಂಡು ಸ್ವಚ್ಛ  ಬದುಕನ್ನು ಬಾಳುತ್ತಾರೆ. ಯಾರ ಮನೆಯಲ್ಲಿ ತಮಗೋಸ್ಕರ ಅನ್ನ ಬೇಯುತ್ತದೋ ಅವನು ತಿನ್ನುವುದು ಅನ್ನವನ್ನಲ್ಲ ಪಾಪವನ್ನು. ನಮಗೆ ಈ ಆಹಾರವನ್ನು ಕೊಟ್ಟವನು ಆ ಭಗವಂತ. ಅವನಿಗೆ ನಾವು ಮೊದಲು ಕೃತಜ್ಞತೆಯನ್ನು ತೋರಬೇಕು. ಅದನ್ನು ಬಿಟ್ಟು ಇದು ನನ್ನ ಸಂಪಾದನೆ, ನಾನ್ಯಾಕೆ ಇದನ್ನು ಇನ್ನೊಬ್ಬರಿಗೆ ಹಂಚಬೇಕು ಎನ್ನುವ ಭಾವನೆಯನ್ನು ಬೆಳೆಸಿಕೊಂಡರೆ ನಾವು ನಮ್ಮ ಪಾಪದ ಗಂಟನ್ನು ಬೆಳೆಸಿಕೊಳ್ಳುತ್ತೇವೆ. ಸೃಷ್ಟಿಯ ಉದ್ದೇಶ(Divine Will)ದಂತೆ ನೆಡೆದುಕೊಳ್ಳದೇ ಇದ್ದರೆ ನಾವು ಗಳಿಸಿದ್ದು ಸಹ ನಮಗೆ ದಕ್ಕುವುದಿಲ್ಲ.

No comments:

Post a Comment