Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, March 17, 2011

Bhagavad Gita Kannada Chapter-02 Shloka 69-72

ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ।
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ ॥೬೯॥

ಯಾ ನಿಶಾ ಸರ್ವ ಭೂತಾನಾಂ ತಸ್ಯಾಮ್  ಜಾಗರ್ತಿ ಸಂಯಮೀ
ಯಸ್ಯಾಮ್  ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತಃ  ಮುನೇಃ -- ಯಾವುದು ಎಲ್ಲಾ ಜೀವಿಗಳಿಗೆ ಕತ್ತಲ ಕಗ್ಗಂಟೋ ಅಂಥಲ್ಲಿ ಇಂದ್ರಿಯಗಳನ್ನು ಗೆದ್ದ  ಯೋಗಿ ಎಚ್ಚರವಿರುತ್ತಾನೆ. ಎಲ್ಲಾ ಜೀವಿಗಳು ಏಲ್ಲಿ ಎಚ್ಚರವಿರುವರೋ-ಅದು ಬಲ್ಲ ಚಿಂತಕನಿಗೆ ನಟ್ಟಿರುಳು.

ಸಾಮಾನ್ಯ ಮನುಷ್ಯನಿಗೆ ಯಾವುದು ಹಗಲೋ ಅದು ಸತ್ಯದ ಸಾಕ್ಷಾತ್ಕಾರವಾದವನಿಗೆ ರಾತ್ರಿ.  ಜಗತ್ತಿನ ಎಲ್ಲಾ ಜೀವ ಜಾತಕ್ಕೆ ಯಾವುದು ರಾತ್ರಿಯೋ ಅದು ಸಾಧಕನಿಗೆ  ಹಗಲು. ಅಂದರೆ ನಿಜವಾದ ಸಾಧಕ ನಮ್ಮ ರಾತ್ರಿಯಲ್ಲಿ ಎಚ್ಚರವಿರುತ್ತಾನೆ, ಹಾಗು ಲೌಕಿಕ ವ್ಯವಹಾರವೆಂಬ ನಮ್ಮ ಹಗಲು ಅವನಿಗೆ ರಾತ್ರಿ. ಲೌಕಿಕ ಪ್ರಪಂಚದಲ್ಲಿ ಅವನಿಗೆ ಪ್ರವೃತ್ತಿಯೇ ಇರುವುದಿಲ್ಲ. ಆತ ನಮಗೆ ಒಬ್ಬ ಮುಗ್ಧನಂತೆ, ಮಗುವಂತೆ ಕಾಣಬಹುದು. ಆತನ ಜ್ಞಾನದ  ಬಗ್ಗೆ  ಅರಿವಿಲ್ಲದವನಿಗೆ ಆತನೊಬ್ಬ ಹುಚ್ಚನಂತೆ ಕಂಡರೆ ಆಶ್ಚರ್ಯವಿಲ್ಲ!  ಏಕೆಂದರೆ ಆತ ಲೌಕಿಕ ಪ್ರಪಂಚದೊಂದಿಗಿದ್ದು, ಅದರೊಂದಿಗೆ ಬೆರೆಯದೆ ತನ್ನ ಅಂತರಂಗದ ಆನಂದವನ್ನು ಸದಾ ಸವಿಯುತ್ತಿರುತ್ತಾನೆ. ಒಬ್ಬ ಜ್ಞಾನಿ ಭಗವಂತನನ್ನು ಕಂಡಾಗ ಆತನಿಗೆ ಉಳಿದಿದ್ದೆಲ್ಲಾ ಕತ್ತಲು. ಅದ್ಭುತವಾದ ಸಂಗತಿಯನ್ನು ಕಂಡ ವಿಸ್ಮಯದಲ್ಲಿ ತದೇಕಚಿತ್ತನಾಗಿ ಅದನ್ನೇ ನೋಡುತ್ತಿರುತ್ತಾನೆ. ಭಗವಂತನನ್ನು ಕಾಣಬೇಕಾದರೆ ನಾವು ಸದಾ ಶಾಸ್ತ್ರದ  ಶ್ರವಣ ಮಾಡಬೇಕು. ಕೇವಲ ಶ್ರವಣ ಮಾಡಿದರೆ ಸಾಲದು, ಶ್ರವಣದ ನಂತರ ಮನನ-ನಿದಿಧ್ಯಾಸನ ಅತಿ ಮುಖ್ಯ. ಇದನ್ನೇ "ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿದಿಧ್ಯಾಸಿತವ್ಯಃ ಚ" ಎಂದಿದ್ದಾರೆ. ಮನನ ಶೀಲನಾದವ  'ಮುನಿ' ; ಅವನೇ 'ಪಶ್ಯ' ಅಂದರೆ ಭಗವಂತನನ್ನು ಕಾಣಬಲ್ಲವ ಅಥವಾ ಕಂಡವ.

ಇಂದಿನ ಸಮಾಜದಲ್ಲಿ ಸತ್ಯದ ಸಾಕ್ಷಾತ್ಕಾರನಾದವನನ್ನು ಗುರುತಿಸುವುದು ಬಹಳ ಕಷ್ಟ. ಸಿದ್ಧ ಪುರುಷರೆಲ್ಲಾ ಸತ್ಯವನ್ನು ಕಂಡವರಲ್ಲ! ಪವಾಡ ಮಾಡುವವರು ಭಗವಂತನನ್ನು ಕಂಡವರು ಎಂದು ಹೇಳಲಾಗುವುದಿಲ್ಲ. ಏಕೆಂದರೆ ನಿಜವಾದ ಸಾಧಕ ಸಾಮಾನ್ಯವಾಗಿ ಪವಾಡ ಮಾಡುವುದಿಲ್ಲ. ತೀರಾ ಅನಿವಾರ್ಯವಾದಾಗ ಮಾತ್ರ ಆತ ಪ್ರಪಂಚದ ಒಳಿತಿಗಾಗಿ ಪವಾಡ ಮಾಡಬಹುದು. ನಿರಂತರ ಸತ್ಯದ ಬಗ್ಗೆ ಅನ್ವೇಷಣೆ ಮಾಡಿ, ಸಿದ್ಧಿ ಗಳಿಸಿದರೆ ಮಾತ್ರ ಸ್ಥಿತಪ್ರಜ್ಞರಾಗಲು ಸಾಧ್ಯ.

ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್ ।
ತದ್ವತ್ ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ ॥೭೦॥

ಆಪೂರ್ಯಮಾಣಮ್ ಅಚಲಪ್ರತಿಷ್ಠಮ್  ಸಮುದ್ರಮ್ ಅಪಃ ಪ್ರವಿಶಂತಿ ಯದ್ವತ್
ತದ್ವತ್ ಕಾಮಾಃ  ಯಮ್  ಪ್ರವಿಶಂತಿ ಸರ್ವೇ ಸಃ  ಶಾಂತಿಮ್ ಅಪ್ನೋತಿ ನ ಕಾಮಕಾಮೀ--ತುಂಬಿದರೂ ತುಳುಕದೆ ನಿಂತ ಕಡಲನ್ನು ಎಲ್ಲ ನೀರುಗಳು ಬಂದು ಸೇರುವಂತೆ, ಯಾರನ್ನು ಎಲ್ಲ ವಿಷಯಗಳು ತುಂಬಿಯೂ ತುಳುಕದಂತೆ ಬಂದು ಸೇರುವವೋ ಅವನು ಮುಕ್ತಿ ಪಡೆಯುತ್ತಾನೆ. ಹೊರತು  ಕೆಟ್ಟ ಬಯಕೆಗಳ ಬೆನ್ನು ಹತ್ತಿದವನಲ್ಲ.
ಭಗವಂತನನ್ನು ಕಂಡವನು, ಸತ್ಯದ ಸಾಕ್ಷಾತ್ಕಾರವಾದವನು. ಭಗವಂತನನ್ನು ಕಾಣುವ ಸರಿ ದಾರಿಯಲ್ಲಿ ನಡೆಯುವವನು ಹೇಗಿರುತ್ತಾನೆ ಎನ್ನುವ ವಿಷಯದ ಮೇಲೆ ಕೃಷ್ಣ ಇಲ್ಲಿ ಇನ್ನಷ್ಟು ವಿವರಣೆಯನ್ನು ಕೊಟ್ಟಿದ್ದಾನೆ: ಆತನ ಮನಸ್ಸು ಸದಾ ಆನಂದವಾಗಿರುತ್ತದೆ. ಅದು ಭಗವಂತನಲ್ಲಿ ನೆಲೆಗೊಂಡಿರುತ್ತದೆ.  ಆತ ಕಿರು ತೊರೆಗಳಂತೆ ಇರದೆ ಕಡಲಿನಂತಿರುತ್ತಾನೆ. ಸಮುದ್ರಕ್ಕೆ ಎಲ್ಲಾ ನದಿಗಳು ಬಂದು ಸೇರಿದರೂ ಅದು ಉಕ್ಕೇರುವುದಿಲ್ಲ. ಕಡಲು ಮಳೆ ಬಂದಾಗ ಉಕ್ಕಿ ಹರಿದು- ಬೇಸಿಗೆ ಬಂದಾಗ ಬತ್ತಿ ಹೋಗುವುದಿಲ್ಲ. ಅದೇ ರೀತಿ ಸಾಧಕ ಪ್ರಪಂಚದ ಎಲ್ಲಾ  ಭೋಗಗಳು ಅವನನ್ನು ಪ್ರವೇಶಿಸಿದರೂ ಕೂಡಾ, ವಿಚಲಿತನಾಗದೆ ಸುಖ-ದುಃಖವನ್ನು ಮೀರಿ ನಿಲ್ಲುತ್ತಾನೆ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಆತ ಭಗವಂತನಲ್ಲಿ ನಿಷ್ಠೆಯನ್ನಿಟ್ಟು ಮೋಕ್ಷವನ್ನು ಪಡೆಯುತ್ತಾನೆ. ಆದರೆ ಬಯಕೆಗಳ ಬೆನ್ನು ಹತ್ತಿದವನು ಅದರಿಂದ ಈಚೆ ಬಾರದೆ ಎಂದೂ ನಿಜವಾದ ಸುಖ ಕಾಣಲಾರ.

ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಸ್ಪೃಹಃ   
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ ॥೭೧॥

ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾನ್ ಚರತಿ  ನಿಸ್ಪೃಹಃ
ನಿರ್ಮಮಃ ನಿರಹಂಕಾರಃ ಸಃ  ಶಾಂತಿಮ್ ಅಧಿಗಚ್ಛತಿ--ಯಾರು ಎಲ್ಲ ವಿಷಯಗಳನ್ನು ಮನಸೋಲದೆ, ಕೆಟ್ಟ ಆಸೆಗೆ ಬಲಿ ಬೀಳದೆ, ನಾನು ನನ್ನದು ಎಂಬ ಹಮ್ಮು ತೊರೆದು ಅನುಭವಿಸುತ್ತಾನೆ-ಅವನು ಮುಕ್ತಿ ಪಡೆಯುತ್ತಾನೆ.

ಯಾರು ಭೋಗದ ಬಯಕೆಯನ್ನು ಬಿಟ್ಟು ಬಂದದ್ದನ್ನು ಸಂತೋಷವಾಗಿ ಅನುಭವಿಸುತ್ತಾರೆ, ಅವನು ನಿಜವಾದ ಸಾಧಕನೆನೆಸುತ್ತಾನೆ. ಸೀಮಿತವಾದ ಆಹಾರ, ನಿದ್ದೆ ಮತ್ತು  ಮೈಥುನವನ್ನು ಅಭ್ಯಾಸ ಮಾಡಿಕೊಂಡು, ನಿರ್ಭಯವಾಗಿ ಸಂಪೂರ್ಣ ಭಗವಂತನ ರಕ್ಷಾ ಕವಚದ ಜ್ಞಾನದಲ್ಲಿದ್ದು, ಆಸೆ ಆಕಾಂಕ್ಷೆಗಳಿಗೆ ಬಲಿ ಬೀಳದೆ, ಯಾವುದೇ ಏರು-ಪೇರುಗಳಿಗೆ ವಿಚಲಿತನಾಗದೆ ಬದುಕುತ್ತಾನೆ. ಅವನು ನಿಜವಾದ 'ಮನುಷ್ಯ'ನೆನಿಸುತ್ತಾನೆ. ಇಂತವನಿಗೆ ನಾನು-ನನ್ನದು ಎನ್ನುವ ಅಹಮ್ ಎಂದೂ ಇರುವುದಿಲ್ಲ ಹಾಗು ಆತ ಮುಕ್ತಿಯನ್ನು ಪಡೆಯುತ್ತಾನೆ.

ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತಿ   
ಸ್ಥಿತ್ವಾSಸ್ಯಾಮಂತಕಾಲೇSಪಿ ಬ್ರಹ್ಮ ನಿರ್ಬಾಣಮೃಚ್ಛತಿ ॥೭೨॥

ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನ ಏನಾಮ್  ಪ್ರಾಪ್ಯ ವಿಮುಹ್ಯತಿ
ಸ್ಥಿತ್ವಾ ಅಸ್ಯಾಮ್ ಅಂತಕಾಲೇ ಅಪಿ ಬ್ರಹ್ಮನಿರ್ಬಾಣಮ್  ಋಚ್ಛತಿ- - ಪಾರ್ಥ, ಇದು ಬ್ರಹ್ಮ ಜ್ಞಾನಿಯ ಗುರುತು. ಇದನ್ನು ಪಡೆದು ಮತ್ತೆ ಮೈಮರೆಯುವುದಿಲ್ಲ. ಕೊನೆಯ ಕಾಲದಲ್ಲೂ ಈ ನೆಲೆಯಲ್ಲಿ ನಿಂತವನು ಕಾಯದಿಂದಲು ಸಾಯದ ಪರತತ್ವವನ್ನು ಸೇರುತ್ತಾನೆ.

ಭಗವಂತನಲ್ಲಿ ನೆಲೆಗೊಳ್ಳತಕ್ಕಂತವನ ಲಕ್ಷಣ ಬ್ರಾಹ್ಮೀ ಸ್ಥಿತಿ. ಈವರೆಗೆ ಹೇಳಿರುವುದು ಒಬ್ಬ ಬ್ರಹ್ಮ ಜ್ಞಾನಿಯ ಲಕ್ಷಣ. ಬ್ರಹ್ಮನಲ್ಲಿ ಸ್ಥಿತನಾದ ಬ್ರಹ್ಮ ಪ್ರಜ್ಞೆ ಜಾಗೃತನಾದವನ ಲಕ್ಷಣ. ಇಂತಹ ಬ್ರಹ್ಮಜ್ಞಾನಿಯನ್ನು ಆತನ ಬಾಹ್ಯ ಕ್ರಿಯೆಯಿಂದಾಗಲಿ, ವೇಷ ಭೂಷಣದಿಂದಾಗಲಿ ಗುರುತಿಸಲಾಗದು. ಆತನ ಮಾನಸಿಕ ಸ್ಥಿತಿ ಆತನ ಸ್ಥಾನವನ್ನು ತಿಳಿಸುತ್ತದೆ.
ತನ್ನ ಸಾವಿನ ಕೊನೆ ಕ್ಷಣದಲ್ಲಿ ಕೂಡಾ ಭಗವಂತನ ಪ್ರಜ್ಞೆ ಜಾಗೃತವಾಗಿದ್ದರೆ ಆತ ನೇರ ಮರು ಹುಟ್ಟಿಲ್ಲದ  ಮೋಕ್ಷವನ್ನು ಸೇರುತ್ತಾನೆ.

ಇತಿ ದ್ವಿತೀಯೋSಧ್ಯಾಯಃ

ಎರಡನೆಯ ಅಧ್ಯಾಯ ಮುಗಿಯಿತು
*******

No comments:

Post a Comment