Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, February 17, 2011

Bhagavad Gita Kannada Chapter-02_Shloka-16

ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ
ಉಭಯೋರಪಿ ದೃಷ್ಟೋನ್ತಸ್ತ್ವನಯೋಸ್ತತ್ತ್ವದರ್ಶಿಭಿಃ     ೧೬

ನ ಅಸತಃ ವಿದ್ಯತೇ ಭಾವಃ ನ ಅಭಾವಃ ವಿದ್ಯತೇ ಸತಃ
ಉಭಯೋ ಅಪಿ ದೃಷ್ಟಃ ಅನ್ತಃ ತು ಅನಯೋ ತತ್ವ ದರ್ಶಿಭಿಃ -- ಪ್ರಕೃತಿಗೂ ಅಳಿವಿಲ್ಲ; ಭಗವಂತನಿಗೂ ಅಳಿವಿಲ್ಲ. [ಕೆಡುಕು ಮಾಡಿ ಒಳಿತಾಗದು, ಒಳಿತಿನಿಂದ ಕೆಡುಕಾಗದು].  ನಿಜವ ಕಂಡವರು ಈ ಎರಡರ ತೀರ್ಮಾನವನ್ನು ಬಲ್ಲರು.
ಸುಖ-ದುಃಖವನ್ನು ಮೀರಿ ನಿಲ್ಲಬಹುದು. ಅದೊಂದು ಮಾನಸಿಕ ಸ್ಥಿತಿ. ಆದರೆ ತನ್ನ ಗುರು-ಹಿರಿಯರನ್ನು ಕೊಲ್ಲುವುದು ಪಾಪವಲ್ಲವೇ? ಈ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಸತ್ತಿನಿಂದ ಅಭಾವವಿಲ್ಲ, ಅಸತ್ತಿನಲ್ಲಿ ಭಾವವಿಲ್ಲ ಅಂದರೆ ಒಳ್ಳೆಯ ಕೆಲಸ ಮಾಡುವುದರಿಂದ ಎಂದೂ ದುಃಖವಿಲ್ಲ, ಕೆಟ್ಟ ಕೆಲಸ ಮಾಡಿದರೆ ಸುಖವಿಲ್ಲ. ಕೆಲವೊಮ್ಮೆ ಕೆಟ್ಟ ಕೆಲಸ ಮಾಡುವವರು ಸುಖಪಡುತ್ತಿರುವಂತೆ ಭಾಸವಾದರೂ ಕೂಡಾ,  ಅದು ತಾತ್ಕಾಲಿಕ. ಅಧರ್ಮದ ಹಾದಿಯನ್ನು ತುಳಿದವ ಎಂದೂ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಮಹಾಭಾರತ ಯುದ್ಧವನ್ನು ವಿಶ್ಲೇಷಣೆ ಮಾಡಿದರೆ ಅಲ್ಲಿ ಯುದ್ಧಕ್ಕೆ ಕಾರಣರಾದವರು ಪಾಂಡವರಲ್ಲ. ಪಾಂಡವರು ಧರ್ಮ ರಕ್ಷಣೆಯ ಹೊಣೆಗಾರಿಕೆಯಿಂದ ಯುದ್ಧಕ್ಕೆ ಸಜ್ಜಾಗಿರುವುದು. ಇಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ: “ಒಳ್ಳೆಯ ಕೆಲಸ ಮಾಡುವಾಗ ಯಾರ ಭಯವೂ ಬೇಡ ಹಾಗು ಅದರಿಂದ ದುಃಖವಿಲ್ಲ” ಎಂದು. ಧರ್ಮ ರಕ್ಷಣೆಯ ಹಾದಿಯಲ್ಲಿ  'ನನ್ನವರು' ಎನ್ನುವುದು ಸಲ್ಲದು. ಜಗತ್ತಿನ ತತ್ವವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಕಂಡುಕೊಂಡ ಕೊನೆಯ ಸತ್ಯವಿದು.
ಮಹಾಭಾರತದ ಪ್ರತಿಯೊಂದು ಶ್ಲೋಕಕ್ಕೂ ಹತ್ತು ಅರ್ಥಗಳಿವೆಯಂತೆ. ಇನ್ನೊಂದು ಆಯಾಮದಲ್ಲಿ ಈ ಶ್ಲೋಕವನ್ನು ನೋಡಿದರೆ- "ನ ಅಸತಃ  ಅಭಾವಃ ಸತಃ ಅಭಾವಃ ನ ವಿದ್ಯತಿ" ಅಂದರೆ ಸತ್ತಿಗೂ ಅಭಾವವಿಲ್ಲ ಅಸತ್ತಿಗೂ ಅಭಾವವಿಲ್ಲ ಎಂದರ್ಥ. ಅಸತ್ ಎಂದರೆ ಸ್ಥೂಲ ಪ್ರಪಂಚಕ್ಕೆ ಕಾರಣವಾಗಿರುವ, ಸೂಕ್ಷ್ಮವಾಗಿರುವ ಮೂಲಪ್ರಕೃತಿ. ಪ್ರಕೃತಿ ಅನಾದಿನಿತ್ಯ.  ಈ ಪ್ರಕೃತಿಯನ್ನು ಸೃಷ್ಟಿಮಾಡಿದ ಭಗವಂತ(ಪುರುಷ) ಅನಾದಿನಿತ್ಯ. ಪ್ರಕೃತಿ ಮತ್ತು ಪುರುಷನಿಗೆ ಅಧೀನವಾಗಿರುವ ಜೀವ ಕೂಡಾ ಅನಾದಿನಿತ್ಯ. ಜೀವಕ್ಕೆಈ ಸ್ಥೂಲ ದೇಹ ಬರುವ ಮೊದಲೂ ಜೀವ ಇತ್ತು. ಹಾಗು ಮುಂದೆ ಕೂಡಾ ಇರುತ್ತದೆ. ಪಾಂಚಭೌತಿಕ ಶರೀರದಲ್ಲಿ ಜೀವ ಕೇವಲ ಅತಿಥಿ. ಹೀಗಿರುವಾಗ ದೇಹಾಭಿಮಾನ ಸಲ್ಲದು.

No comments:

Post a Comment