ನತ್ವೇವಾಹಂ ಜಾತು ನಾSಸಂ ನ ತ್ವಂ ನೇಮೇ ಜನಾಧಿಪಾಃ ।
ನಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್ ॥೧೨॥
ನ ತು ಏವ ಅಹಮ್ ಜಾತು ನ ಅಸಮ್ ನ ತ್ವಮ್ ನ ಇಮೇ ಜನ ಅಧಿಪಾಃ
ನ ಚ ಏವ ನ ಭವಿಷ್ಯಾಮಃ ಸರ್ವೇ ವಯಮ್ ಅತಃ ಪರಮ್-- ನಾನು ಹಿಂದೆ ಎಂದೂ ಇರದಿದ್ದವನಲ್ಲ. ಅಲ್ಲ ನೀನೂ. ಅಲ್ಲ ಈ ಅರಸರೂ. ಇನ್ನು ಮುಂದೂ ನಾವೆಂದೂ ಇಲ್ಲವಾಗುವವರಲ್ಲ.
ಕೃಷ್ಣ ಇಲ್ಲಿ ಸಾವಿನ ಬಗ್ಗೆ ನಾವು ಏಕೆ ಚಿಂತಿಸಬೇಕಿಲ್ಲ ಎನ್ನುವ ಮಾತಿಗೆ ಪೂರಕವಾಗಿ, ಅದನ್ನು ಸಮರ್ಥಿಸುವ ಮಾತನ್ನು ಹೇಳುತ್ತಾನೆ. ಆತ ಹೇಳುತ್ತಾನೆ: "ನಾನು-ನೀನು ಈ ಎಲ್ಲಾ ರಾಜರು, ಹಿಂದೆ ಇದ್ದೆವು, ಇಂದು ಇದ್ದೇವೆ ಹಾಗು ಮುಂದೆ ಕೂಡಾ ಇರುತ್ತೇವೆ. ದೇಹ ನಾಶವಾದಾಗ ಜೀವ ನಾಶವಾಗುವುದಿಲ್ಲ. ನಾನು ಹೇಗೆ ಅನಾದಿನಿತ್ಯವೋ ಹಾಗೇ ಪ್ರತಿಯೊಂದು ಜೀವರು ಕೂಡಾ ಅನಾದಿನಿತ್ಯ. ಆತ್ಮವನ್ನು ಕೊಲ್ಲುವುದು ಅಸಾಧ್ಯ" ಎಂದು. ಅನಂತ ಜೀವದ ಹರವು ಅನಂತ ಕಾಲದ ತನಕ ನಿರಂತರವಾಗಿರುತ್ತದೆ. ಆತ್ಮ ಎಂದೆಂದಿಗೂ ಅಜರಾಮರ. ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿದೆ. ಜೀವ ಒಂದು ಬೀಜದಂತೆ. ಭಗವಂತ ಒಬ್ಬ ತೋಟಗಾರನಂತೆ. ಆತ ಈ ಪ್ರಪಂಚವೆಂಬ ತೋಟದ ಸೃಷ್ಟಿ ಮಾಡಿ, ಈ ಜೀವವನ್ನು ಆ ತೋಟದಲ್ಲಿ ಬಿತ್ತಿ ಅದಕ್ಕೊಂದು ಅಸ್ತಿತ್ವವನ್ನು ಕೊಟ್ಟ. ಪ್ರತಿಯೊಂದು ಜೀವ ಅದರ ಸ್ವಭಾವಕ್ಕನುಗುಣವಾಗಿ ಈ ಪ್ರಪಂಚದಲ್ಲಿ ಬೆಳೆಯುತ್ತವೆ. ಒಂದು ಜೀವದ ಸ್ವಭಾವ ಇನ್ನೊಂದು ಜೀವದ ಸ್ವಭಾವಕ್ಕಿಂತ ಭಿನ್ನ. ಈ ಕಾರಣದಿಂದಾಗಿ ಈ ಪ್ರಪಂಚ ಇಷ್ಟೊಂದು ವೈವಿದ್ಯಪೂರ್ಣ.
ದೇಹಿನೋSಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ।
ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ ॥೧೩॥
ದೇಹಿನಃ ಅಸ್ಮಿನ್ ಯಥಾ ದೇಹೇ ಕೌಮಾರಮ್ ಯೌವನಮ್ ಜರಾ
ತಥಾ ದೇಹಾಂತರ ಪ್ರಾಪ್ತಿ ಧೀರಃ ತತ್ರ ನ ಮುಹ್ಯತಿ—ದೇಹದಲ್ಲಿರುವ ಜೀವಕ್ಕೆ ಈ ದೇಹದಲ್ಲೆ ಎಳೆತನ, ಹರಯ, ಮುಪ್ಪು ಹೇಗೆ-ಹಾಗೇ ದೇಹದ ಬದಲಾವಣೆ ಕೂಡಾ. ಇಂಥಲ್ಲಿ ಧೀರನಾದವನು ಕಂಗೆಡುವುದಿಲ್ಲ.
ದೇಹ ನಾಶವೆಂದರೆ ಸ್ವರೂಪ ನಾಶವಲ್ಲ. ಈ ದೇಹದಲ್ಲಿರುವ ಜೀವ ಪ್ರತಿ ಕ್ಷಣದಲ್ಲಿ ತನ್ನ ದೇಹ ಪರಿವರ್ತನೆಯನ್ನು ಅನುಭವಿಸುತ್ತಿರುತ್ತದೆ. ಬಾಲ್ಯದಲ್ಲಿನ ದೇಹ ಯೌವನದಲ್ಲಿಲ್ಲ, ಯೌವನದಲ್ಲಿನ ದೇಹ ಮುಪ್ಪಿನಲ್ಲಿಲ್ಲ. ಸತ್ತ ಬಳಿಕ ಮತ್ತೆ ಮರುಹುಟ್ಟಿನೊಂದಿಗೆ ಹೊಸ ದೇಹ. ಆದರೆ ನಮಗೆ ನಾವು ಎಲ್ಲಿಂದ ಬಂದೆವು ಹಾಗು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವ ಅರಿವು ಮಾತ್ರ ಇಲ್ಲ. ನಮಗೆ ತಿಳಿದಿರುವುದು ನಮ್ಮ ಈಗಿನ ಅಸ್ತಿತ್ವ ಮಾತ್ರ. ದೇಹ ನಾಶವಾಗಿ ಹೊಸ ದೇಹ ಬರಬಹುದು. ಆದರೆ ಎಂದೂ ನಾಶವಾಗದ ಚೈತನ್ಯ ಈ 'ಜೀವ'. ಒಂದು ದಿನ ನಾಶವಾಗುವ ಈ ದೇಹದ ಬಗ್ಗೆ ಧೀರನಾದವನು ಎಂದೂ ಅಳುವುದಿಲ್ಲ ಎನ್ನುತ್ತಾನೆ ಕೃಷ್ಣ. ಇಲ್ಲಿ ಧೀರ ಎಂದರೆ ಅರಿವಿನ ಆನಂದವನ್ನು ಅನುಭವಿಸುವ ಜ್ಞಾನಿ(ಧೀ+ರಃ). ಎಲ್ಲಿ ಜ್ಞಾನವಿದೆಯೋ ಅಲ್ಲಿ ದುಃಖವಿಲ್ಲ.
No comments:
Post a Comment