Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, February 28, 2011

Bhagavad Gita Kannada Chapter-02_Shloka_39-41

ಏಷಾ ತೇSಭಿಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮ ಬಂಧಂ ಪ್ರಹಾಸ್ಯಸಿ  ೩೯

ಏಷಾ ತೇ ಅಭಿಹಿತಾ ಸಾಂಖ್ಯೇ ಬುದ್ಧಿಃ ಯೋಗೇ ತು ಇಮಾಮ್ ಶೃಣು
 ಬುದ್ಧ್ಯಾ ಯುಕ್ತಃ  ಯಯಾ ಪಾರ್ಥ ಕರ್ಮ ಬಂಧಮ್   ಪ್ರಹಾಸ್ಯಸಿ--ಈ ಆತ್ಮ ವಿಜ್ಞಾನದ ತಿಳಿನುಡಿ ನಿನಗೆ ತಿಳಿಸಿದ್ದಾಯ್ತು, ಅದನ್ನು ಗಳಿಸುವ ಬಗೆಯನ್ನು ಇದೀಗ ಕೇಳು.  ಪಾರ್ಥ, ಈ ತಿಳಿನುಡಿಯಿಂದ ನೀನು ತಿಳಿಯಾದಾಗ ಕರ್ಮದ ಕಟ್ಟನ್ನು ಕಳೆದುಕೊಳ್ಳುವೆ.

ಕೃಷ್ಣ ಹೇಳುತ್ತಾನೆ: " ಇಲ್ಲಿಯವರೆಗೆ ಸಾಂಖ್ಯದ ಬಗ್ಗೆ ಹೇಳಿದ್ದಾಯ್ತು. ಇನ್ನು ಯೋಗದ ಬಗ್ಗೆ ಹೇಳುತ್ತೇನೆ ಕೇಳು" ಎಂದು. ಇಲ್ಲಿ ಕೃಷ್ಣ ಹೇಳುತ್ತಿರುವ  ಸಾಂಖ್ಯಾ -  'ವೈದಿಕ ಸಾಂಖ್ಯ'. ವೈದಿಕ  ಸಾಂಖ್ಯವನ್ನು ಪ್ರಚಾರಕ್ಕೆ ತಂದವ ಕಪಿಲವಾಸುದೇವ.   ಸಂಖ್ಯಾ ಅಂದರೆ ಸಮ್ಯಕ್ ಖ್ಯಾತಿ ಅಥವಾ ಸರಿಯಾದ ಅರಿವು. ಇದು ಆತ್ಮದ ಅರಿವನ್ನು ಕೊಡುವ ಮೂಲತತ್ವ. ಈ ಕಾರಣದಿಂದ ಪ್ರಾಚೀನರು ಜ್ಞಾನವನ್ನು ಸಾಂಖ್ಯ ಎಂದು ಕರೆದರು. ಇಲ್ಲಿ ಸಾಂಖ್ಯ ಎಂದರೆ ಖಚಿತವಾದ ಆತ್ಮ ಜ್ಞಾನ.
ಇಲ್ಲಿ  ಹೇಳುತ್ತಿರುವ ಯೋಗ ಪತಂಜಲಿಯ ಯೋಗವಲ್ಲ, ವೈದಿಕ ಯೋಗ. ಸಾಮಾನ್ಯ ಯೋಗಕ್ಕೆ ದೇವರ ಅಸ್ತಿತ್ವದ ಧೃಡ ನಂಬಿಕೆ ಬೇಕಿಲ್ಲ. ಮನಸ್ಸನ್ನು ಯಾವುದೋ ಒಂದರ ಮೇಲೆ ನಿರಂತರ  ಏಕಾಗ್ರತೆ ಮಾಡುವುದರಿಂದ ಅನೇಕ ಪವಾಡಗಳನ್ನು ಮಾಡಬಹುದು. ಆದರೆ ಇದು ನಿಜವಾದ ಆತ್ಮ ಸಾಕ್ಷಾತ್ಕಾರವಲ್ಲ. ಹತ್ತು ವರ್ಷ ಯೋಗ ಸಾಧನೆ ಮಾಡಿ ನೀರಿನ ಮೇಲೆ ನಡೆಯಲು ಕಲಿತವನ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಈ ರೀತಿ ಯೋಗದಿಂದ ಪವಾಡಗಳನ್ನು ಕಲಿತು ಪ್ರದರ್ಶಿಸುವುದನ್ನು ವೈದಿಕ ಯೋಗ ನಿಷೇಧಿಸುತ್ತದೆ. ಎಂತಹ ಅಂತಃಶಕ್ತಿ ಪಡೆದರೂ ಅದನ್ನು ಪ್ರದರ್ಶಿಸಕೂಡದು. ನೀರಿನ ಮೇಲೆ ನಡೆಯಲು ಕಲಿತ ತಕ್ಷಣ ನಮಗೆ ಆತ್ಮ ಸಾಕ್ಷಾತ್ಕಾರವಾಗದು. ಇಂತಹ ಇಂದ್ರಜಾಲವನ್ನು ಯಾರು ಬೇಕಾದರೂ ಗಳಿಸಬಹುದು. ಇಲ್ಲಿ ಕೃಷ್ಣ ಹೇಳುತ್ತಿರುವುದು ಆತ್ಮ ತತ್ವವನ್ನು ಪಡೆಯುವುದಕ್ಕೆ ಜೀವನದಲ್ಲಿ ಮಾಡಬೇಕಾದ ಸಾಧನೆ ಏನು ಎನ್ನುವ ವಿಷಯ.
ಸಾಂಖ್ಯವನ್ನು ತಿಳಿಯುವ ಮಾತನ್ನು ಹೇಳಿದೆ, ಇನ್ನು ಜ್ಞಾನದ ದಾರಿಯಲ್ಲಿ ಸಾಗಿ ಸಿದ್ಧಿ ಪಡೆಯಬೇಕಾದರೆ ಬೇಕಾದ ಉಪಾಯವನ್ನು(ಯೋಗವನ್ನು) ಹೇಳುತ್ತೇನೆ ಕೇಳು ಎನ್ನುತ್ತಾನೆ ಕೃಷ್ಣ. ಯಾವ ಅರಿವನ್ನು ಪಡೆದರೆ ಸಾಧನೆಯ ದಾರಿಯಲ್ಲಿ ಕರ್ಮ ಬಂಧನವನ್ನು  ದಾಟಿ ಮುನ್ನೆಡೆಯಬಹುದು ಎನ್ನುವುದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ. ಅಧ್ಯಾತ್ಮದ ಸಾಧನೆ ಅಂದರೇನು, ನಮ್ಮ ಜೀವನದಲ್ಲಿ ಅಧ್ಯಾತ್ಮದ ಸಾಧನೆ ಹೇಗಿರಬೇಕು, ಅದನ್ನು ಸಾಧಿಸುವುದು ಹೇಗೆ ಎನ್ನುವುದು ನಾವು ತಿಳಿಯಬೇಕಾದ ಮುಖ್ಯವಾದ ವಿಷಯ.
ಅನೇಕ ಮಂದಿ ಹೊರಗಿನಿಂದ ಹೇಗಿರಬೇಕು ಎಂದು ಅನೇಕ ರೀತಿ ಹೇಳುತ್ತಾರೆ. ಆದರೆ ಒಳಗಿನಿಂದ ಹೇಗಿರಬೇಕು ಎನ್ನುವುದನ್ನು ಯಾರೂ ಹೇಳುವುದಿಲ್ಲ. ಇಷ್ಟು ಹೊತ್ತು ಜಪ ಮಾಡಬೇಕು, ಈ ರೀತಿ ಮಡಿಯಾಗಿರಬೇಕು, ಇಷ್ಟು ಮಂತ್ರ ಹೇಳಬೇಕು ಇತ್ಯಾದಿ ವಿಚಾರವನ್ನು ಎಲ್ಲರೂ ಹೇಳುತ್ತಾರೆ. ಆದರೆ ಅಂತರಂಗ ಹೇಗಿರಬೇಕು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಅಂತರಂಗದ ಸಾಧನೆ ಇಲ್ಲದೆ ಕೇವಲ ಬಾಹ್ಯ ವೇಷದಿಂದ, ಜಪ-ತಪದಿಂದ, ಎನನ್ನೂ ಸಾಧಿಸಲು ಸಾಧ್ಯವಿಲ್ಲ. ಯೋಗ ಸಾಧನೆ ಎಂದರೆ ನಾವು ಯಾವ ಬಟ್ಟೆ ತೊಡುತ್ತೇವೆ, ಮೈಗೆ ಏನು ಹಚ್ಚಿಕೊಳ್ಳುತ್ತೇವೆ ಎನ್ನುವುದಲ್ಲ. ಅದು ನಮ್ಮ ಅಂತರಂಗದ ನಡೆ. ಅಂತರಂಗ ಮತ್ತು ಬಹಿರಂಗ ಏಕವಾಗಿರುವ ಸ್ಥಿತಿ. ನಮ್ಮ ನಡೆ, ನಮ್ಮ ನಂಬಿಕೆ, ನಮ್ಮ ಪ್ರಾಮಾಣಿಕತೆಯೇ ನಮ್ಮ ನಿಜವಾದ ಧರ್ಮ. ಅಂತಹ ಅಂತರಂಗದ ಸಾಧನೆ ಅತಿ ಮುಖ್ಯ. ಅದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ.

ಜ್ಞಾನ   ಬೇಕು ನಿಜ, ಆದರೆ ಆತ್ಮ ಜ್ಞಾನವನ್ನು ಪಡೆಯಲು ನಮ್ಮ ಸಾಧನೆ ಏನಿರಬೇಕು, ಈ ಸಂಸಾರ ಬಂಧವನ್ನು ಕಳಚಿಕೊಳ್ಳುವ ಸಾಧನೆ ಯಾವುದು, ಎನ್ನುವುದನ್ನು  ಮುಂದಿನ ಶ್ಲೋಕಗಳಲ್ಲಿ  ಸುವಿವರವಾಗಿ ಕಾಣುತ್ತೇವೆ.

ನೇಹಾಭಿಕ್ರಮನಾಶೋSಸ್ತಿ ಪ್ರತ್ಯವಾಯೋ ನ ವಿದ್ಯತೇ
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್  ೪೦

ನ ಇಹ ಅಭಿಕ್ರಮ ನಾಶಃ ಅಸ್ತಿ ಪ್ರತ್ಯವಾಯುಃ ನ ವಿದ್ಯತೇ
ಸು ಅಲ್ಪಮ್ ಅಪಿ ಅಸ್ಯ  ಧರ್ಮಸ್ಯ ತ್ರಾಯತೇ ಮಹತಃ  ಭಯಾತ್- -ಇಲ್ಲಿ ತೊದಲು ಹೆಜ್ಜೆ ಕೂಡಾ ಹಾಳಾಗದು. ಇಲ್ಲಿ ತೊಡರುಗಳಿಲ್ಲಈ ಧರ್ಮದ ತುಣುಕು ಕೂಡಾ ದೊಡ್ಡ  ಬೆದರಿನಿಂದ ಪಾರುಮಾಡಬಲ್ಲುದು.

ಸಾಧನೆಯ ಬಗ್ಗೆ ಹೇಳುವ ಮೊದಲು ಕೃಷ್ಣ ನಮಗೆ ಬರಬಹುದಾದ ಒಂದು ಸಂಶಯವನ್ನು ಈ ಶ್ಲೋಕದಲ್ಲಿ ಪರಿಹರಿಸಿದ್ದಾನೆ. ಎಲ್ಲರನ್ನೂ  ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ, ನಮ್ಮ ಹುಟ್ಟು, ಆನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರು ಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು!  ಇದರಿಂದ ಏನು ಉಪಯೋಗ ಎಂದು. ಒಂದು ಜನ್ಮದಲ್ಲಿ ಬ್ರಹ್ಮಸಾಕ್ಷಾತ್ಕಾರವಾಗದೆ ಇದ್ದರೆ ಆ ಎಲ್ಲಾ ಸಾಧನೆ ವ್ಯರ್ಥವೇ? ಖಂಡಿತವಾಗಿ ಇಲ್ಲ ಎನ್ನುತ್ತಾನೆ ಕೃಷ್ಣ. ನಮ್ಮ ಜೀವನದಲ್ಲಿ ಗಳಿಸಿದ  ಐಹಿಕ ಸಂಪತ್ತು(ಧನ, ಒಡವೆ, ಕೀರ್ತಿ, ಆಸ್ತಿ ಇತ್ಯಾದಿ) ಸತ್ತ ನಂತರ ನಮ್ಮೊಂದಿಗೆ ಬಾರದು ನಿಜ. ಆದರೆ ಅಧ್ಯಾತ್ಮ ಸಾಧನೆ  ಹಾಗಲ್ಲ. ಒಂದು ಜನ್ಮದಲ್ಲಿ ಮಾಡಿದ ಅಧ್ಯಾತ್ಮ ಸಾಧನೆ ಎಂದೂ ನಾಶವಾಗದು. ಈ ಜನ್ಮದಲ್ಲಿ ಅಧ್ಯಾತ್ಮದ ಒಂದು ಮೆಟ್ಟಿಲನ್ನು ಹತ್ತಿದರೆ ಮುಂದಿನ ಜನ್ಮದಲ್ಲಿ ಹುಟ್ಟುವಾಗಲೇ ನಾವು ಎರಡನೇ ಮೆಟ್ಟಲಲ್ಲಿ ಇರುತ್ತೇವೆ. ಹಿಂದಿನ ಜನ್ಮದಲ್ಲಿ ಏಲ್ಲಿ ನಿಂತಿದ್ದೆವೋ ಅಲ್ಲಿಂದ ಮುಂದುವರಿಯುವ ಪರಿಸರದಲ್ಲಿ ನಮ್ಮ ಜನನವಾಗುತ್ತದೆ. ಸಾಮಾಜಿಕವಾಗಿ ನೀವು ಅಸಾಧಾರಣ ಪ್ರತಿಭೆಯುಳ್ಳ ಮಕ್ಕಳು ಜನಿಸುವುದನ್ನು, ಹಾಗು ಅತ್ಯಂತ ಕಡಿಮೆ ಸಮಯದಲ್ಲಿ ಮಹಾನ್ ಸಾಧನೆ ಮಾಡುವುದನ್ನು ಕಾಣುತ್ತೀರಿ. ಇದು ಅವರು ಹಿಂದಿನ ಜನ್ಮದಿಂದ ಪಡೆದು ಬಂದ ಜ್ಞಾನ.  ಹಿಂದಿನ ಜನ್ಮದ ಅಧ್ಯಾತ್ಮದ ಸಾಧನೆಯ ಮುಂದುವರಿದ ಭಾಗವೇ ಈ ಜನ್ಮ. ನಾವು ಆ ಜನ್ಮದಲ್ಲಿ ಎಲ್ಲಿ ನಿಲ್ಲಿಸಿದ್ದೆವೋ ಅಲ್ಲಿಂದಲೇ ಈ ಜನ್ಮದ ಸಾಧನೆ ಪ್ರಾರಂಭ.
ಒಂದು ವೇಳೆ ನಮಗೆ ಅಧ್ಯಾತ್ಮ ಸಾಧನೆ ಮಾಡಬೇಕು ಎನ್ನುವ ಅಂತರಂಗದ ತುಡಿತವಿದ್ದು, ಅದನ್ನು ಈ ಜನ್ಮದಲ್ಲಿ ಸಾಧಿಸಲಾಗದಿದ್ದಲ್ಲಿ ಮುಂದಿನ ಜನ್ಮದಲ್ಲಿ ಸಾಧನೆಗೆ ಬೇಕಾದ ವಾತಾವರಣದಲ್ಲಿ, ವಿದ್ವಾಂಸರ ಸಂಗವಿರುವ ಕಡೆ ನಮ್ಮ ಜನ್ಮವಾಗುತ್ತದೆ. ಆದ್ದರಿಂದ ನಮ್ಮ ಅಧ್ಯಾತ್ಮ ಚಿಂತನೆಯಲ್ಲಿ ನಮ್ಮ ಒಂದೊಂದು ಜನ್ಮ ಒಂದೊಂದು ತರಗತಿ ಇದ್ದಂತೆ. ಒಂದು ಗ್ರಂಥವನ್ನು ಸಂಪೂರ್ಣ ತಿಳಿಯಲು ನಾವು ಅನೇಕ  ಜನ್ಮ ಸಾಧನೆ  ಮಾಡಬೇಕು. ಈ ಕಾರಣದಿಂದ ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥವಲ್ಲ. ಇಂದು ನೀವು ನಿಮ್ಮ ಜೀವನದ ಯಾವ ಘಟ್ಟದಲ್ಲಿದ್ದರೂ ಸರಿ, ಆಧ್ಯಾತ್ಮ ಸಾಧನೆಗೆ ಇದು ಸಕಾಲ. ಇಂದೇ ನಿಮ್ಮ ಸಾಧನೆಯನ್ನು  ಆರಂಭಿಸಿ. ಅದು ನಿಮ್ಮನ್ನು  ಮೋಕ್ಷ ಮಾರ್ಗದತ್ತ ಕೊಂಡೊಯ್ಯುತ್ತದೆ ಎನ್ನುವುದು ಕಟುಸತ್ಯ. ಅಧ್ಯಾತ್ಮ ಪ್ರದರ್ಶನದ ವಸ್ತುವಲ್ಲ, ಅದು ಅಂತರಂಗದ ಸಾಧನೆ. ನಮ್ಮ ಜನ್ಮದಲ್ಲಿ ನಾವು ಅಧ್ಯಾತ್ಮದ ಕಿಂಚಿತ್ ಸಾಧನೆ ಮಾಡಿದರೂ ಕೂಡಾ, ಅದು ನಮ್ಮನ್ನು ಭಯದಿಂದ ಪಾರು ಮಾಡುತ್ತದೆ. ಭಯದಿಂದ ಅಭಯದತ್ತ ನಮ್ಮನ್ನು ಸಾಗಿಸುವ ಏಕಮಾತ್ರ ಸಾಧನ ಅಧ್ಯಾತ್ಮ.
ಸಾಧಕರಲ್ಲಿ ಮೂರು ವಿಧ. ಉತ್ತಮ ಸಾಧಕ, ಮಧ್ಯಮ ಸಾಧಕ, ಅಧಮ ಸಾಧಕ.  ಉತ್ತಮ ಸಾಧಕ ದೇವರು ಒಬ್ಬನೇ ಎಂದು ನಂಬಿರುತ್ತಾನೆ. ಇಂತಹ ಭಕ್ತರನ್ನು  ಭಾಗವತರು ಎನ್ನುತ್ತಾರೆ. ಆತನಿಗೆ ಭಗವಂತನಲ್ಲಿ ಏಕನಿಷ್ಠೆ ಇರುತ್ತದೆ. ಭಗವಂತನನ್ನು ಯಾವ ಶಬ್ದದಿಂದ ಕರೆದರೂ ಅದು ಆ ಆದಿಶಕ್ತಿಯಾದ ಪರಶಕ್ತಿಯನ್ನು ಹೇಳುತ್ತದೆ ಎನ್ನುವ ಸತ್ಯವನ್ನು ಆತ ತಿಳಿದಿರುತ್ತಾನೆ. ಈತ ನಿಜವಾದ ಸಾಧಕ, ಹಾಗು ಇದು ಸಾಧನೆಯ ನಿಜವಾದ ದಾರಿ. ಇನ್ನು ಮಧ್ಯಮ ಸಾಧಕರು: ಇವರು  ಪ್ರತಿಯೊಂದು ದೇವತೆಯನ್ನು ಪರಿ ಪರಿಯಾಗಿ ಪೂಜಿಸಿ ಕೊನೆಗೆ "ಕೃಷ್ಣಾರ್ಪಣ  ಮಸ್ತು" ಎಂದು ಭಗವಂತನಿಗೆ ಅರ್ಪಿಸುತ್ತಾರೆ. ಇವರನ್ನು ತ್ರೈವಿಧ್ಯರು ಎನ್ನುತ್ತಾರೆ.  ಇನ್ನು ಅಧಮ ಸಾಧಕ; ಈತ ದೇವರು  ನೂರಾರು ಎಂದು ನಂಬಿ ಪೂಜಿಸುತ್ತಿರುತ್ತಾನೆ. ಭಗವಂತ ಸರ್ವಾಂತರ್ಯಾಮಿ ಎನ್ನುವ ಭಾವನೆ ಈತನಿಗಿರುವುದಿಲ್ಲ. ಈತನಿಗೆ  ಅಧ್ಯಾತ್ಮದ ನಿಜವಾದ ಕಲ್ಪನೆ ಇರುವುದಿಲ್ಲ. ಆದ್ದರಿಂದ ಇದು ನಿಜವಾದ ಅಧ್ಯಾತ್ಮ ಸಾಧನೆ ಆಗದು.
ನಾವು  ಏಕನಿಷ್ಠೆಯಿಂದ ಮಾಡುವ ಸಾಧನೆ ಎಂದೂ ವ್ಯರ್ಥವಾಗದು. ಇಲ್ಲಿ ತೋರ್ಪಡಿಕೆಯ ಅಗತ್ಯವಿಲ್ಲ. ಆದರೆ  ಪ್ರಾಮಾಣಿಕ ನಿಷ್ಠೆ ಅಗತ್ಯ. ಗಣಪತಿಯನ್ನು ಪೂಜಿಸು, ವಾಯುವನ್ನು ಪೂಜಿಸು, ಸೂರ್ಯನನ್ನು ಪೂಜಿಸು, ಅಲ್ಲಾ ಎಂದು, ಯೇಸು ಎಂದು, ಶಿವನೆಂದು, ವಿಷ್ಣುವೆಂದು, ಏನೇ ಅಂದು ಪೂಜಿಸಿದರೂ ಕೂಡಾ, ಎಲ್ಲಾ ಶಬ್ದಗಳೂ ಆದಿಶಕ್ತಿಯಾದ ಪರಶಕ್ತಿ ಎನ್ನುವ ಸತ್ಯ ತಿಳಿದು, ಏಕನಿಷ್ಠೆ ಇಟ್ಟು, ಪರಿಶುದ್ಧ  ಪ್ರಾಮಾಣಿಕ ಚಿಂತನೆ ಮಾಡಿದಾಗ ಅದು ನಿಜವಾದ ಅಧ್ಯಾತ್ಮ ಸಾಧನೆಯಾಗುತ್ತದೆ ಹಾಗು ವ್ಯರ್ಥವಾಗದೆ ನಮ್ಮೊಂದಿಗೆ ಬರುತ್ತದೆ. ಇಂತಹ ಸಾಧನೆಯಲ್ಲಿ ದ್ವೇಷ, ಸ್ವಾರ್ಥ, ಅಹಂಕಾರ, ದುಃಖ ಎಂದೂ ಇರುವುದಿಲ್ಲ. ಎಲ್ಲವೂ ಭಗವಂತನ ಪ್ರಸಾದ ಎನ್ನುವ ಭಾವನೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.
ವ್ಯವಸಾಯಾತ್ಮಿಕಾ ಬುದ್ಧಿರೇಕೇಹ ಕುರುನಂದನ
ಬಹುಶಾಖಾ ಹ್ಯನನಂತಾಶ್ಚ ಬುದ್ಧಯೋSವ್ಯವಸಾಯಿನಾಮ್    ॥೪೧॥

ವ್ಯವಸಾಯ ಆತ್ಮಿಕಾ ಬುದ್ಧಿಃ ಏಕಾ ಇಹ ಕುರುನಂದನ
ಬಹುಶಾಖಾಃ ಹಿ  ಅನಂತಾಃ ಚ ಬುದ್ಧಯಃ  ಅವ್ಯವಸಾಯಿನಾಮ್--ಕುರುಕುಮಾರ, ಈ ದಾರಿಯಲ್ಲಿ ಮನನದಿಂದ ಹದಗೊಂಡ ಮಾತು ಒಂದೇ ತರ.   ಹದವಿರದವರ ತುದಿಯಿರದ ಹರಟೆಗಳಿಗೆ ಹತ್ತು ಹಲವು ಟಿಸಿಲುಗಳು.

ಏಕನಿಷ್ಠೆಯಿಂದ ನಾವು ಮಾಡುವ ಸಾಧನೆ ವ್ಯರ್ಥವಲ್ಲ ಎನ್ನುವ ವಿಷಯ ನಮಗೆ ತಿಳಿಯಿತು, ಆದರೆ ಯಾವುದು ಸರಿ ಹಾಗು ಯಾವುದು ತಪ್ಪು ಎನ್ನುವುದನ್ನು ತಿಳಿಯುವ ಬಗೆ ಹೇಗೆ?  ಕೃಷ್ಣ ಈ ಶ್ಲೋಕದಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾನೆ.
ಎಲ್ಲಾ ಕಾಲದಲ್ಲೂ  ನಿರ್ಣಾಯಕವಾದ ಮಾತು ಏಕರೂಪವಾಗಿರುತ್ತದೆ. ನಿರ್ಣಯ ಇಲ್ಲದೆ ಆಡುವ ಮಾತು ಒಂದೊಂದು ಒಂದೊಂದು ತರ. ಗೊತ್ತಿಲ್ಲದೆ ಅಜ್ಞಾನದಿಂದ ಆಡುವ ಮಾತುಗಳಿಗೆ ತಲೆಬುಡವಿಲ್ಲದ ಅನಂತ ಶಾಖೆ. ಆದರೆ ನಿಜವಾಗಿ ತಿಳಿದವರ  ನಿರ್ಣಯಾತ್ಮಕವಾದ ಮಾತು ಸದಾ ಒಂದೇ ಆಗಿರುತ್ತದೆ. ಆದ್ದರಿಂದ ಸತ್ಯವನ್ನು ಅರಿತವರ ಮಾರ್ಗದರ್ಶನದಂತೆ ನಡೆ ಎನ್ನುತ್ತಾನೆ ಕೃಷ್ಣ.

No comments:

Post a Comment