ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ ।
ಉತ್ಸಾದ್ಯನ್ತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ ॥೪೩॥
ದೋಷೈ ಏತೈಃ ಕುಲಘ್ನಾನಾಮ್ ವರ್ಣಸಂಕರ ಕಾರಕೈಃ
ಉತ್ಸಾದ್ಯನ್ತೇ ಜಾತಿಧರ್ಮಾಃ ಕುಲಧರ್ಮಾಃ ಚ ಶಾಶ್ವತಾಃ -ಸಮಾಜದ ಬಣ್ಣಗೇಡಿಗೆ ಕಾರಣರಾದ ಕುಲಗೇಡಿಗಳ ಇಂಥ ತಪ್ಪುಗಳಿಂದ ಸಹಜ ಧರ್ಮಗಳು ಮತ್ತು ಅಳಿವಿರದ ಕುಲಧರ್ಮಗಳು ನೆಲೆಗೆಡುತ್ತವೆ.
ಯುದ್ಧದಿಂದ ಸಮಾಜದ ಮೇಲೆ ಆಗುವ ನೇರ ಪರಿಣಾಮ ಎಂದರೆ, ನಾಯಕರಿಲ್ಲದ, ಯುವಕರಿಲ್ಲದ ಸಮಾಜ. ಗಂಡು-ಹೆಣ್ಣಿನ ಅನುಪಾತ ವೆತ್ಯಾಸ. ಇದು ಸರಿ ಹೊಂದಬೇಕಾದರೆ ಅದೆಷ್ಟು ವರ್ಷಗಳು ಬೇಕು? ನಾವು ಮಹಾಭಾರತ ಯುದ್ಧವನ್ನು ನೋಡಿದರೆ ಅಲ್ಲಿ ಕನಿಷ್ಠ ಐವತ್ತು ಲಕ್ಷ ಮಂದಿ ಜನ ಸತ್ತಿದ್ದಾರೆ. ಇಂತಹ ಮಹಾಯುದ್ಧದಿಂದ ಇಡೀ ಸಮಾಜ ನಾಶಮಾಡಿದ ಕುಲಕಂಟಕರು ನಾವಾಗುತ್ತೇವೆ ಎನ್ನುವುದು ಅರ್ಜುನನ ಕಳಕಳಿ. “ಸಮಾಜದ ವ್ಯವಸ್ಥೆ ನಾಶವಾಗುವುದರಿಂದ ಸ್ವಭಾವ ನಾಶವಾಗುತ್ತದೆ. ಇದರಿಂದ ಆಯಾ ಜೀವದ ಸ್ವಭಾವದ ಅಭಿವೃದ್ಧಿ ಆಗದೆ, ವ್ಯಕ್ತಿತ್ವ ವಿಕಸನ ನಾಶವಾಗುತ್ತದೆ. ಶಾಶ್ವತ ಮೌಲ್ಯದ ಸಮಾಜಧರ್ಮ ನಾಶವಾಗುತ್ತದೆ. ಅನಾದಿ ಕಾಲದಿಂದ ಸಮಾಜ ಒಪ್ಪಿಕೊಂಡು ಬಂದ ಸ್ಥಿರಧರ್ಮ ಕೊಚ್ಚಿಕೊಂಡು ಹೋಗುತ್ತದೆ” ಎಂದು ಅರ್ಜುನ ಕೃಷ್ಣನ ಮುಂದೆ ತನ್ನ ವಾದವನ್ನು ಮಂಡಿಸುತ್ತಾನೆ.
ಉತ್ಸನ್ನಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ ।
ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ ॥೪೪॥
ಉತ್ಸನ್ನ ಕುಲಧರ್ಮಾಣಾಮ್ ಮನುಷ್ಯಾಣಾಮ್ ಜನಾರ್ದನ
ನರಕೇ ನಿಯತಮ್ ವಾಸಃ ಭವತಿ ಇತಿ ಅನುಶುಶ್ರುಮ- ಓ ಜನಾರ್ಧನ, ಕುಲ ಧರ್ಮದ ನೆಲೆದಪ್ಪಿದವರಿಗೆ ನರಕವೇ ಮುಗಿಯದ ನೆಲೆ ಎಂದು ಕೇಳಿ ಬಲ್ಲೆವು.
ಇಹದಲ್ಲೂ ನರಕ, ಪರದಲ್ಲೂ ನರಕ, ಹೀಗೆ ಜನ್ಮವೆಲ್ಲಾ ನರಕದಲ್ಲಿ. ಎಂದೆಂದೂ ನರಕದಲ್ಲೇ ಕೊಳೆಯುವ ಪರಿಸ್ಥಿತಿ ಬರುತ್ತದೆ ಎಂದು ತಿಳಿದವರು ಹೇಳುವುದನ್ನು ಕೇಳಿ ತಿಳಿದಿದ್ದೇನೆ. ಹೀಗೆ ಇಹವೂ ನರಕ, ಪರವೂ ನರಕವಾಗಲು ನಾವೇ ಕಾರಣವಾಗುತ್ತೇವೆ.
ಅಹೋ ಬತ ಮಹತ್ ಪಾಪಂ ಕರ್ತುಂ ವ್ಯವಸಿತಾ ವಯಮ್ ।
ಯದ್ ರಾಜ್ಯಸುಖಲೋಭೇನ ಹಂತುಂ ಸ್ವಜನಮುದ್ಯತಾಃ ॥೪೫॥
ಅಹೋ ಬತ ಮಹತ್ ಪಾಪಮ್ ಕರ್ತುಮ್ ವ್ಯವಸಿತಾ ವಯಮ್
ಯತ್ ರಾಜ್ಯಸುಖಲೋಭೇನ ಹಂತುಮ್ ಸ್ವಜನಮ್ ಉದ್ಯತಾಃ -ಅಯ್ಯೋ....! ಎಂಥ ಹಿರಿಯ ತಪ್ಪನ್ನು ಮಾಡತೊಡಗಿದ್ದೆವು ನಾವು ! ದೊರೆತನದ ಸುಖದ ದುರಾಸೆಯಿಂದ ನಮ್ಮ ಮಂದಿಯನ್ನೇ ಕೊಲ್ಲ ಹೊರಟಿದ್ದೇವಲ್ಲ !
ಇಲ್ಲಿ ಅರ್ಜುನ ಕುಸಿದು ಬೀಳುವ ದ್ವನಿಯಲ್ಲಿ ಹೇಳುತ್ತಾನೆ- “ಅಯ್ಯೋ.. ಎಂಥ ದೊಡ್ಡ ದುರಂತ, ಎಂಥ ದೊಡ್ಡ ಪಾಪ ಕಾರ್ಯ ನಮ್ಮ ಮುಂದೆ ನಡೆಯುತ್ತಿತ್ತು? ಎಂಥ ಪ್ರಮಾದ ಆಗಿ ಹೋಗುತ್ತಿತ್ತು? ನಾವು ದೊಡ್ಡ ತಪ್ಪನ್ನು ಮಾಡಲು ಕೈ ಹಾಕುತ್ತಿದ್ದೆವು. ರಾಜ್ಯ ಸುಖದ ಲೋಭದಿಂದ ನಮ್ಮ ಜನರನ್ನೇ ನಾವು ಕೊಂದು ಇಡೀ ಜನಾಂಗವನ್ನು ಅಧಃಪಾತಕ್ಕೆ ತಳ್ಳುವ ಕೆಲಸ ನಮ್ಮಿಂದಾಗುತ್ತಿತ್ತು” ಎಂದು.
ಯದಿ ಮಾಮ್ ಅಪ್ರತೀಕಾರಮ್ ಅಶಸ್ತ್ರಮ್ ಶಸ್ತ್ರಪಾಣಯಃ ।
ಧಾರ್ತರಾಷ್ಟ್ರಾ ರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್ ॥೪೬॥
ಯದಿ ಮಾಮ್ ಅಪ್ರತೀಕಾರಮ್ ಅಶಸ್ತ್ರಮ್ ಶಸ್ತ್ರಪಾಣಯಃ
ಧಾರ್ತರಾಷ್ಟ್ರಾಃ ರಣೇ ಹನ್ಯುಃ ತತ್ ಮೇ ಕ್ಷೇಮ ತರಮ್ ಭವೇತ್-- ಒಂದೊಮ್ಮೆ ಎದುರು ನಿಂತು ಹೋರಾಡದ, ಆಯುಧ ಹಿಡಿಯದ ನನ್ನನ್ನು ಧಾರ್ತರಾಷ್ಟ್ರರು ಆಯುಧ ಹಿಡಿದು ಕೊಲ್ಲುವುದಾದರೆ ಅದು ನನ್ನ ಭಾಗ್ಯವಾದೀತು.
ನಾನು ಪ್ರತಿಕಾರ ಮಾಡುವುದೇ ಇಲ್ಲ. ಒಂದು ವೇಳೆ ಅವರು ನನ್ನನ್ನು ಹೊಡೆಯಲು ಬಂದರೆ ನಾನು ಪ್ರತಿಯಾಗಿ ಹೊಡೆಯುವುದೂ ಇಲ್ಲ. ಕತ್ತಿ ಹಿಡಿದು ನನ್ನನ್ನು ಕೊಂದರೆ ಅದು ನನ್ನ ಭಾಗ್ಯವೆಂದು ನಾನು ಸಾಯುತ್ತೇನೆ. ಏಕೆ ಇಂತಹ ದುರಂತ ನೋಡಿ ಬದುಕಬೇಕು? ಏನಾದರೂ ಸರಿ, ನನಗೆ ಯುದ್ಧ ಬೇಡ. ಎಂದು ಅರ್ಜುನ ಕೈಚಲ್ಲುತ್ತಾನೆ.
ಯುದ್ಧ ಪ್ರಾರಂಭದಲ್ಲಿ "ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಚ್ಯುತ" ಎಂದು ದರ್ಪದಿಂದ ಹೇಳಿದ ಅರ್ಜುನ- ಕ್ಷಣ ಮಾತ್ರದಲ್ಲಿ ಕರಗಿ ಹೋದ. ಇದು ಆತನ ಸುಪ್ತಪ್ರಜ್ಞೆಯಲ್ಲಿ ಅವನಿಗೆ ತಿಳಿಯದಂತೆ ಅಡಗಿ ಕುಳಿತಿದ್ದ ಭಾವನೆ. ಕೃಷ್ಣ ತನ್ನ ಮನಃಶಾಸ್ತ್ರೀಯ ಚಿಕಿತ್ಸೆ(Psychotherapy)ಯಿಂದ ಅದನ್ನು ಸಂಪೂರ್ಣ ಹೊರ ಬೀಳುವಂತೆ ಮಾಡಿದ. ಇದು ಮಾನಸಿಕ ಸಂಘರ್ಷಕ್ಕೊಳಗಾದವನಿಗೆ ಮೊದಲು ಮಾಡುವ ಚಿಕಿತ್ಸೆ. ಮನುಷ್ಯನ ಮನೋರೋಗವನ್ನು ಹೇಗೆ ಗುಣಪಡಿಸಬಹುದು ಎಂದು ಜಗತ್ತಿಗೆ ತೋರಿಸಿದ ಮೊದಲ ಮಹಾ ಮನೋವಿಜ್ಞಾನಿ ಕೃಷ್ಣ. ಒಂದು ವೇಳೆ ಕೃಷ್ಣ ಅರ್ಜುನನ ಆತ್ಮೀಯರ ಮುಂದೆ ರಥವನ್ನು ನಿಲ್ಲಿಸದೇ ಇದ್ದಿದ್ದರೆ, ಈ ಎಲ್ಲಾ ವಿಚಾರಗಳು ಆತನ ಮನಸ್ಸಿನಿಂದ ಹೊರ ಬರುತ್ತಿರಲಿಲ್ಲ. ಶ್ರೀಕೃಷ್ಣನ ಈ ಮಾನಸಿಕ ಚಿಕೆತ್ಸೆ, ತತ್ವಶಾಸ್ತ್ರದೊಂದಿಗೆ ಮನಃಶಾಸ್ತ್ರವನ್ನು ಅರಿತು ವಿಶ್ಲೇಷಿಸಿದಾಗ ಮಾತ್ರ ನಮಗೆ ಅರ್ಥವಾಗುತ್ತದೆ.
ಸಂಜಯ ಉವಾಚ ।
ಏವಮುಕ್ತ್ವಾsರ್ಜುನಃ ಸಂಖೇ ರಥೋಪಸ್ಥ ಉಪಾವಿಶತ್ ।
ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ ॥೪೭॥
ಸಂಜಯ ಉವಾಚ -ಸಂಜಯ ಹೇಳಿದನು:
ಏವಮ್ ಉಕ್ತ್ವಾ ಅರ್ಜುನಃ ಸಂಖೇ ರಥ ಉಪಸ್ಥೇ ಉಪಾವಿಶತ್
ವಿಸೃಜ್ಯ ಸಶರಮ್ ಚಾಪಮ್ ಶೋಕ ಸಂವಿಗ್ನ ಮಾನಸಃ- ಕಾಳಗದ ಕಣದಲ್ಲಿ ಅರ್ಜುನ ಬಿಲ್ಲು ಬಾಣಗಳನ್ನು ಬಿಸುಟು, ಅಳಲಿನಿಂದ ತಳಮಳಿಸುತ್ತ ತೇರ ಮಡಿಲಲ್ಲಿ ಕುಳಿತುಬಿಟ್ಟ..
ರಥದಲ್ಲೇ ನಿಂತು ಇಷ್ಟು ಮಾತನಾಡಿದ ಅರ್ಜುನ,ರಥದ ಮಧ್ಯದಲ್ಲಿ ಕುಸಿದು ಕುಳಿತುಬಿಟ್ಟ. ತನ್ನೆಲ್ಲಾ ಶಸ್ತ್ರಾಸ್ತ್ರಗಳನ್ನು ಕೆಳಗೆ ಬಿಟ್ಟು ಕೈಚಲ್ಲಿ ಕುಳಿತು ಬಿಟ್ಟ.
ಈ ಅಧ್ಯಾಯದಲ್ಲಿ ಅರ್ಜುನ ತನ್ನೆಲ್ಲ ಭಾವನೆಗಳನ್ನು ಕೃಷ್ಣನ ಮುಂದೆ ಬಿಚ್ಚಿಟ್ಟಿದ್ದಾನೆ. ಅರ್ಜುನ ಮಾತನಾಡಿದ ಪ್ರತಿಯೊಂದು ವಿಷಯ ನಮಗೆ ತಿಳಿದ ವಿಷಯ. ಆದರೆ ಮುಂದೆ ಕೃಷ್ಣ ಹೇಳುವುದು ನಮಗೆ ತಿಳಿಯದ್ದು. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಭಗವಂತನ ಉತ್ತರವನ್ನು ಮುಂದಿನ ಅಧ್ಯಾಯಗಳಲ್ಲಿ ನೋಡೋಣ.
ಮುಂದಿನ ಅಧ್ಯಾಯಕ್ಕೆ ಹೋಗುವ ಮುನ್ನ ಒಂದು ಪುಟ್ಟ ವಿಶ್ಲೇಷಣೆ. ನಮ್ಮಲ್ಲಿ ಹೆಚ್ಚಿನವರಿಗೆ ಒಂದು ಅನುಮಾನವಿದೆ. “ಯುದ್ಧ ಭೂಮಿಯಲ್ಲಿ ಶ್ರೀಕೃಷ್ಣ ಮತ್ತು ಅರ್ಜುನ ಹೇಗೆ ಈ ಏಳುನೂರು ಶ್ಲೋಕಗಳ ಸಂಭಾಷಣೆ ಮಾಡಿದರು? ಅವರಿಗೆ ಅಷ್ಟು ಸಮಯ ಇತ್ತೇ?” ಎಂದು. ಈ ಪ್ರಶ್ನೆಗೆ ಉತ್ತರ ದೊರೆಯಬೇಕಾದರೆ ಮೊದಲು ನಾವು ಮಹಾಭಾರತ ಕಾಲದ ಯುದ್ಧ ಪದ್ಧತಿಯನ್ನು ತಿಳಿದಿರಬೇಕು. ಆಗಿನ ಕಾಲದ ಯುದ್ಧ ನಿಯಮದ ಪ್ರಕಾರ ಯುದ್ಧದಲ್ಲಿ ಎದುರಾಳಿ ಸಿದ್ಧವಿಲ್ಲದಿದ್ದರೆ ಅವನ ಮೇಲೆ ಆಕ್ರಮಣ ಮಾಡುವಂತಿರಲಿಲ್ಲ. ಒಬ್ಬ ಸಜ್ಜಾಗಿ ನಿಲ್ಲದೆ ಯುದ್ಧ ಪ್ರಾರಂಭವಾಗುತ್ತಿರಲಿಲ್ಲ. ಇನ್ನು ಎಷ್ಟು ಹೊತ್ತು ಅವರ ಸಂಭಾಷಣೆ ನಡೆಯಿತು ಎನ್ನುವ ಪ್ರಶ್ನೆ. ಅರ್ಜುನ ಆ ಕಾಲದ ಮಹಾಮೇಧಾವಿಗಳಲ್ಲಿ ಒಬ್ಬ. ಇಲ್ಲಿ ಸಂಭಾಷಣೆ ನೆಡೆಯುತ್ತಿರುವುದು ಇಬ್ಬರು ಮೇಧಾವಿಗಳ ನಡುವೆ. ಆ ಮಟ್ಟದ ಜ್ಞಾನವನ್ನು ಇದು ನಾವು ಊಹಿಸುವುದೂ ಕಷ್ಟ. ಅವರ ಸಂಪೂರ್ಣ ಸಂಭಾಷಣೆ ನಡೆದಿದ್ದು ಇಂದಿನ ಈ ಏಳುನೂರು ಶ್ಲೋಕ ರೂಪದಲ್ಲಿ ಅಲ್ಲ. ವೇದವ್ಯಾಸರು ಅವರ ಸಂಭಾಷಣೆಯನ್ನು ನಮಗೆ ಅರ್ಥವಾಗುವಂತೆ ಏಳುನೂರು ಶ್ಲೋಕ ರೂಪದಲ್ಲಿ ನಮ್ಮ ಮುಂದಿಟ್ಟಿದ್ದಾರೆ ಅಷ್ಟೆ. ಇಂದು ನಮಗೆ ಈ ಶ್ಲೋಕ ಕೂಡಾ ಅರ್ಥವಾಗುವುದಿಲ್ಲ. ಅದಕ್ಕಾಗಿ ನಾವು ಗೀತೆಯ ಭಾಷ್ಯವನ್ನು ಸಾವಿರಾರು ಪುಟಗಳಲ್ಲಿ ಕಾಣುತ್ತೇವೆ. ಆದರೆ ಮಹಾ ಮೇಧಾವಿಗಳು ಇದನ್ನು ಅತೀ ಸಂಕ್ಷಿಪ್ತವಾಗಿ ಅತೀ ಕಡಿಮೆ ಸಮಯದಲ್ಲಿ ಹೇಳಬಲ್ಲರು ಹಾಗು ಅರ್ಥ ಮಾಡಿಕೊಳ್ಳಬಲ್ಲರು. ಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಸಂಭಾಷಣೆ ಕೂಡಾ ಇಂತಹ ವಿಷಯಭರಿತ ಸಂಕ್ಷಿಪ್ತ ಸಂಭಾಷಣೆ.
ಇನ್ನೊಂದು ಮುಖ್ಯ ವಿಷಯ ಎಂದರೆ ಗೀತೆಯನ್ನು ಕೃಷ್ಣ ಅರ್ಜುನನಿಗೇ ಏಕೆ ಹೇಳಿದ? ಆತನ ಅಣ್ಣ ಭೀಮನಿಗೆ ಅಥವಾ ಇತರರಿಗೆ ಏಕೆ ಹೇಳಲಿಲ್ಲ? ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಅತಿ ಸುಲಭ. ರೋಗ ಬಂದವನಿಗೆ ಮದ್ದೇ ಹೊರತು ಇತರರಿಗಲ್ಲ. ಅಲ್ಲಿ ಮಾನಸಿಕವಾಗಿ ಆಂತರಿಕ ತುಮುಲದಲ್ಲಿದ್ದವನು ಅರ್ಜುನ ಮಾತ್ರ. ಅದಕ್ಕಾಗಿ ಶ್ರೀಕೃಷ್ಣ ಅರ್ಜುನನಿಗೆ(ಆತನ ಮುಖೇನ ನಮಗೆ) ಗೀತೋಪದೇಶ ಮಾಡಿದ.
ಇತಿ ಪ್ರಥಮೋsಧ್ಯಾಯಃ
ಮೊದಲನೇ ಅಧ್ಯಾಯ ಮುಗಿಯಿತು.
*******
No comments:
Post a Comment