ಅಧರ್ಮಾಭಿಭವಾತ್ ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ ।
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ ॥೪೧॥
ಅಧರ್ಮ ಅಭಿಭವಾತ್ ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ -ಓ ವಾರ್ಷ್ಣೇಯ, ಅಧರ್ಮದ ಆಕ್ರಮಣದಿಂದ ಸಮಾಜದಲ್ಲಿ ಹೆಣ್ಣು ಮಕ್ಕಳು ದಾರಿಗೆಡುತ್ತಾರೆ. ಅದರಿಂದ ಸಮಾಜ ವರ್ಣಸಂಕರಕ್ಕೀಡಾಗುತ್ತದೆ.
ಯುದ್ಧವಾದರೆ ಅದರಿಂದ ಯುವಕರೆಲ್ಲರೂ ಸಾಯುತ್ತಾರೆ. ಅಧರ್ಮ ಸಮಾಜವನ್ನು ಆಕ್ರಮಿಸುತ್ತದೆ. ಯುವಕರಿಲ್ಲದ ಸಮಾಜ ಸೃಷ್ಟಿಯಾಗುತ್ತದೆ. ಸಾಮಾಜಿಕವಾಗಿ ಸ್ತ್ರೀಗೆ ಭಧ್ರತೆ ಇಲ್ಲದಂತಾಗುತ್ತದೆ. ಅದರ ಪರಿಣಾಮ ಆಕೆಯ ಮುಗ್ಧತೆಯ ದುರುಪಯೋಗ. ಅದರಿಂದ ಸಮಾಜದಲ್ಲಿ ವರ್ಣಸಂಕರ ಉಂಟಾಗುತ್ತದೆ ಎನ್ನುತ್ತಾನೆ ಅರ್ಜುನ.
ಇಲ್ಲಿ ವರ್ಣಸಂಕರ ಎಂದರೆ ಜೀವದ ಬಣ್ಣ ಅಥವಾ ಸ್ವಭಾವ ಹಾಳಾಗುವುದು. ಹೆಣ್ಣಿಗೆ ಬಲವಂತವಾಗಿ ಆಕೆಯ ಮನಸ್ಸಿಗೆ ವಿರುದ್ಧವಾಗಿ ಉಚ್ಚ ಶಿಕ್ಷಣ ಕೊಡಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಕಾರಣ ಅದರಿಂದ ಆಕೆಯ ಗರ್ಭಕೋಶದ ಮೇಲೆ ಪರಿಣಾಮವಾಗುತ್ತದೆ. ಅದರ ಪರಿಣಾಮ ಹುಟ್ಟುವ ಮಗುವಿನ ಮೇಲೆ ಆಗುತ್ತದೆ. ಹೆಣ್ಣು ತನಗಿಷ್ಟವಿಲ್ಲದೆ ತನ್ನನ್ನು ತೊಡಗಿಸಿಕೊಂಡಾಗ; ಅನೇಕ ಪುರುಷರ ಸಂಗ ಮಾಡುವುದರಿಂದ; ಮುಂದಿನ ಸಂತಾನದ ಮೇಲೆ ಘೋರ ಪರಿಣಾಮವುಂಟಾಗುತ್ತದೆ. ಯಾರ ಮಾತನ್ನೂ ಕೇಳದ, ಯಾರ ನಿಯಮಕ್ಕೂ ಬಗ್ಗದ ವಿಕ್ಷಿಪ್ತ ಸಂತತಿ ಹುಟ್ಟುವ ಸಾಧ್ಯತೆ ಇದೆ. ಇದು ಇಲ್ಲಿ ಅರ್ಜುನ ಹೇಳುತ್ತಿರುವ ವರ್ಣಸಂಕರ.
ಇಲ್ಲಿ ಅರ್ಜುನ ಕೃಷ್ಣನನ್ನು 'ವಾರ್ಷ್ಣೇಯ' ಎಂದು ಸಂಬೋಧಿಸಿದ್ದಾನೆ. ಯಾದವ ಮನೆತನದ ಹಿರಿಯ ರಾಜ ವೃಷ್ಣಿ. ಆ ವಂಶದಲ್ಲಿ ಅವತರಿಸಿದ ಕೃಷ್ಣ ವಾರ್ಷ್ಣೇಯ. ಈ ಹೆಸರಿನ ಬಗ್ಗೆ ವೇದದಲ್ಲಿ ಉಲ್ಲೇಖವಿದೆ. ಬಯಸಿದ ಅಭೀಷ್ಟವನ್ನು ಕೊಡುವ ಹಿರಿಯ ಶಕ್ತಿಗಳಾದ ದೇವತೆಗಳ ಒಡೆಯ ಭಗವಂತ ವಾರ್ಷ್ಣೇಯ. “ಎಲ್ಲರ ಅಭೀಷ್ಟವನ್ನು ಈಡೇರಿಸುವ, ಧರ್ಮ ಸಂಸ್ಥಾಪನೆಗಾಗಿ ಇಳಿದುಬಂದ ನೀನು, ಏಕೆ ಈ ಯುದ್ಧವನ್ನು ತಡೆಯುತ್ತಿಲ್ಲ” ಎನ್ನುವ ಧ್ವನಿ ಅರ್ಜುನನ ಈ ಸಂಬೋಧನೆಯಲ್ಲಿದೆ.
No comments:
Post a Comment